Tag: Udupi Hotel Entrepreneur

  • ಮಹಾರಾಷ್ಟ್ರದಿಂದ ಉಡುಪಿ ಹೋಟೆಲ್ ಉದ್ಯಮಿಗಳನ್ನು ಹೊರಹಾಕಬೇಕು – ಬೆಳಗಾವಿಯಲ್ಲಿ ಎಂಇಎಸ್, ಶೀವಸೇನೆ ಮುಖಂಡರ ಉದ್ಧಟತನ

    ಮಹಾರಾಷ್ಟ್ರದಿಂದ ಉಡುಪಿ ಹೋಟೆಲ್ ಉದ್ಯಮಿಗಳನ್ನು ಹೊರಹಾಕಬೇಕು – ಬೆಳಗಾವಿಯಲ್ಲಿ ಎಂಇಎಸ್, ಶೀವಸೇನೆ ಮುಖಂಡರ ಉದ್ಧಟತನ

    ಬೆಳಗಾವಿ: ಎಂಇಎಸ್ ಪಕ್ಷ ಬೆಳಗಾವಿ ಅಧಿವೇಶನಕ್ಕೆ ವಿರೋಧ ವ್ಯಕ್ತಪಡಿಸಿ ಆಯೋಜಿಸಿದ್ದ ಮಹಾಮೇಳಾವ ಸಭೆಯಲ್ಲಿ ಮಹಾರಾಷ್ಟ್ರದಲ್ಲಿರುವ ಹೋಟೆಲ್ ಉದ್ಯಮಿಗಳನ್ನು ಹೊರಹಾಕಬೇಕು ಎಂದು ಕೊಲ್ಲಾಪುರ ಜಿಲ್ಲಾ ಶಿವಸೇನಾ ಅಧ್ಯಕ್ಷ ವಿಜಯ ದೇವನೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.

    ನಗರದ ವ್ಯಾಕ್ಸಿನ್ ಡಿಪೋದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕೊಲ್ಲಾಪುರ ಜಿಲ್ಲಾ ಶಿವಸೇನಾ ಅಧ್ಯಕ್ಷ ವಿಜಯ ದೇವನೆ, ಮಹಾರಾಷ್ಟ್ರದಲ್ಲಿನ ಉಡುಪಿ ಹೋಟೆಲ್ ಉದ್ಯಮಿಗಳನ್ನ ಮಹಾರಾಷ್ಟ್ರದಿಂದ ಹೊರಗೆ ಕಳಿಸಬೇಕು. ಆಗ ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಬರುತ್ತೆ. ಒಂದು ದಿನ ಇಂತಹ ಕ್ರಾಂತಿ ಆಗುತ್ತೆ, ಆಗ ಮರಾಠಿ ಯುವಕರು ಕನ್ನಡಿಗರನ್ನ ಮನೆಗೆ ಹೋಗಿ ಹೊಡೆಯುತ್ತಾರೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೈ ನಾಯಕ, ಮಹಾರಾಷ್ಟ್ರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಧನಂಜಯ ಮುಂಡೆ, ನನ್ನ ಪ್ರಾಣ ಹೋದರೂ ಪರವಾಗಿಲ್ಲ ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನ ಕಾನೂನು ಬಾಹಿರವಾಗಿದ್ದು, ಅದನ್ನ ನಿಷೇಧಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಎಂಇಎಸ್ ಶಾಸಕ ಅರವಿಂದ ಪಾಟೀಲ, ಬೆಳಗಾವಿ ಪಾಲಿಕೆ ಉಪ ಮೇಯರ್ ಮಧುಶ್ರೀ ಪೂಜೇರಿ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

    ಕಾರ್ಯಕ್ರಮಕ್ಕೆ ಜನರೇ ಇಲ್ಲ: ಅಧಿವೇಶನ ವಿರೋಧಿಸಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನವಾದರೂ ಜನರು ಬಾರದೇ ಇದ್ದ ಪರಿಣಾಮ ನಿಗದಿತ ಸಮಯಕ್ಕಿಂತ 3 ಗಂಟೆಗಳ ಕಾಲ ತಡವಾಗಿ ಆರಂಭವಾಯಿತು. ಅಲ್ಲದೇ ಈ ವೇಳೆ ಮಾತನಾಡಿದ ಎಂಇಎಸ್ ಮುಖಂಡರು ಕನ್ನಡ ನಾಡಿ ವೀರ ಮಹಿಳೆ ರಾಣಿ ಚನ್ನಮ್ಮಳ ಜಪ ಮಾಡಿದರು. ರಾಣಿ ಚನ್ನಮ್ಮ ತಮ್ಮ ಆಡಳಿತದಲ್ಲಿ ಮರಾಠಿ ಭಾಷೆಯಲ್ಲೇ ಪತ್ರ ವ್ಯವಹಾರ ನಡೆಸುತ್ತಿದ್ದರು. ಬ್ರಿಟಿಷ್ ಆಡಳಿತದಲ್ಲಿ ರಾಣಿ ಚನ್ನಮ್ಮ ಬ್ರಿಟಿಷರಿಗೆ ಮರಾಠಿ ಭಾಷೆಯಲ್ಲಿ ಪತ್ರ ಬರೆದಿದ್ದರೂ ಎಂದು ಎಂಇಎಸ್ ಮುಖಂಡ ಮಾಲೋಜಿ ಅಷ್ಟೇಕರ ಚನ್ನಮ್ಮರ ಬಗ್ಗೆ ವಿತ್ತಂಡವಾದ ಮಂಡಿಸಿದರು. ಇತ್ತ ಕನ್ನಡಿಗರ ಬಗ್ಗೆ ಹಾಗೂ ಪೊಲೀಸ ಕುರಿತು ಕಾರ್ಯಕ್ರಮದಲ್ಲಿ ಭಾಷಣ ಮಾಡಿದರೂ ಪೊಲೀಸರು ಮಾತ್ರ ಕೈ ಕಟ್ಟಿ ನಿಂತ ದೃಶ್ಯ ಕಂಡು ಬಂತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv