Tag: Udupi-Chikkamagalur

  • Lok Sabha 2024: ಉಡುಪಿ-ಚಿಕ್ಕಮಗಳೂರು ಟಿಕೆಟ್‌ ಗಿಟ್ಟಿಸಿ ಹ್ಯಾಟ್ರಿಕ್‌ ನಗೆ ಬೀರ್ತಾರಾ ಕರಂದ್ಲಾಜೆ?

    Lok Sabha 2024: ಉಡುಪಿ-ಚಿಕ್ಕಮಗಳೂರು ಟಿಕೆಟ್‌ ಗಿಟ್ಟಿಸಿ ಹ್ಯಾಟ್ರಿಕ್‌ ನಗೆ ಬೀರ್ತಾರಾ ಕರಂದ್ಲಾಜೆ?

    – ಚುನಾವಣೆ ಹೊತ್ತಲ್ಲೇ ಕೇಂದ್ರ ಸಚಿವೆ ವಿರುದ್ಧ ‘ಗೋ ಬ್ಯಾಕ್’‌ ಅಭಿಯಾನ
    – ಸಿಎಂ ಅಂಗಳದಲ್ಲಿ ‘ಕೈ’ ನಾಯಕರ ಟಿಕೆಟ್‌ ಗುದ್ದಾಟ

    ಬಿಜೆಪಿ ಭದ್ರಕೋಟೆ ಉಡುಪಿ-ಚಿಕ್ಕಮಗಳೂರು (Udupi – Chikkamagaluru) ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ (Lok Sabha Elections 2024) ರಂಗೇರಿದೆ. ಈ ಬಾರಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದಾರೆ. ಸ್ಥಳೀಯವಾಗಿ ಕಾರ್ಯಕರ್ತರಿಂದ ಶೋಭಾ ವಿರುದ್ಧ ಒಂದಷ್ಟು ಅಸಮಾಧಾನ ಇದೆ. ಆದರೂ ಅವರಿಗೇ ಟಿಕೆಟ್ ಎಂಬುದನ್ನು ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಕ್ಷೇತ್ರದಲ್ಲಿ ಕಮಲಕ್ಕೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ. ಹಾಗಾದ್ರೆ, ಕಾಫಿನಾಡ ಲೋಕಸಭಾ ಕ್ಷೇತ್ರದ ಚುನಾವಣಾ ರಾಜಕೀಯ ಸ್ಥಿತಿ-ಗತಿ ಹೇಗಿದೆ?

    ಕ್ಷೇತ್ರ ಪರಿಚಯ
    2002 ರಲ್ಲಿ ಡಿಲಿಮಿಟೇಶನ್ ಕಮಿಷನ್ ಆಫ್ ಇಂಡಿಯಾದ ಶಿಫಾರಸಿನ ಆಧಾರದ ಮೇಲೆ 2008 ರಲ್ಲಿ ಕ್ಷೇತ್ರ ರಚನೆಯಾಯಿತು. 2009 ರಲ್ಲಿ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆಯಿತು. ಅದರ ಮೊದಲ ಸದಸ್ಯರಾಗಿ ಬಿಜೆಪಿ ಡಿ.ವಿ.ಸದಾನಂದ ಗೌಡ (D.V.Sadananda Gowda) ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಇದನ್ನೂ ಓದಿ: Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ

    ಶೋಭಾಗೆ ಹ್ಯಾಟ್ರಿಕ್ ಗೆಲುವು?
    2019ರಲ್ಲಿ ಅಖಾಡಕ್ಕಿಳಿದಿದ್ದ ಶೋಭಾ ಕರಂದ್ಲಾಜೆ (Shobha Karandlaje) ಮೋದಿ ಹೆಸರಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬೀಗಿದ್ರು. ಈ ಬಾರಿ ಮತ್ತೊಮ್ಮೆ ಅದೇ ಮೋದಿ ಹೆಸರಲ್ಲಿ ಅದೃಷ್ಟ ಪರೀಕ್ಷೆಗೆ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಕಳೆದ ಬಾರಿ ಜೆಡಿಎಸ್ (JDS) ಜೊತೆ ಮೈತ್ರಿಯಾಗಿ ಉಡುಪಿಯ ಪ್ರಮೋದ್ ಮಧ್ವರಾಜ್ ಮೈತ್ರಿ ಅಭ್ಯರ್ಥಿಯಾಗಿದ್ದರು. ಮೋದಿ ಅಲೆ ಮುಂದೆ ಕೊಚ್ಚಿ ಹೋಗಿದ್ದರು. ಆದರೆ, ಈ ಬಾರಿ ಚಿಕ್ಕಮಗಳೂರಿನಲ್ಲಿ ಐದಕ್ಕೆ ಐದು ಕಾಂಗ್ರೆಸ್ ಗೆದ್ದಿರೋದ್ರಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳ್ಳಿ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಆರತಿ ಕೃಷ್ಣ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಅದೇ ರೀತಿ ಬಿಜೆಪಿಯಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರೋ ಸಿ.ಟಿ.ರವಿ ಕೂಡ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮಾಜಿ ಸಚಿವ ಡಿ.ಎನ್.ಜೀವರಾಜ್, ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಉಡುಪಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಾರಿ ಬಿಜೆಪಿಯಲ್ಲಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಶೋಭಾ ಕರಂದ್ಲಾಜೆ ಅಥವಾ ಸಿ.ಟಿ.ರವಿಗೆ (C.T.Ravi) ಟಿಕೆಟ್ ಸಿಗುವ ಲಕ್ಷಣಗಳು ದಟ್ಟವಾಗಿದೆ. ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಹೋದ್ರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಮಲದ ಅಭ್ಯರ್ಥಿ ಸಿ.ಟಿ.ರವಿ ಅಥವಾ ಡಿ.ಎನ್.ಜೀವರಾಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.

    ಉಡುಪಿ-ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳೆಷ್ಟು?
    ಎರಡು ಜಿಲ್ಲೆಯಿಂದ ಒಟ್ಟು 8 ತಾಲೂಕುಗಳು ಈ ಜಂಟಿ ಕ್ಷೇತ್ರಕ್ಕೆ ಸೇರಿದೆ. ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಕಾಪು ಕ್ಷೇತ್ರಗಳು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕಡೂರು ಕ್ಷೇತ್ರಗಳು. ಉಡುಪಿಯ ಐದು ಕ್ಷೇತ್ರದಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಚಿಕ್ಕಮಗಳೂರಿನ ಐದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆದ್ದಿದೆ. ಇದನ್ನೂ ಓದಿ: ವಯಸ್ಸು, ಆರೋಗ್ಯ ಕಾರಣದಿಂದ ಕೆಲವರ ಬದಲಾವಣೆ ಆಗುತ್ತೆ: ಆರ್.ಅಶೋಕ್

    ಇಂದಿರಾ ಗಾಂಧಿಗೆ ಪುನರ್ಜನ್ಮ ಕ್ಷೇತ್ರ
    2009 ರ ವರೆಗೂ ಚಿಕ್ಕಮಗಳೂರು ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಬಿಜೆಪಿಯ ಭದ್ರಕೋಟೆಯಾಗಿತ್ತು. ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ಎಂಬ ಹೆಗ್ಗಳಿಕೆ ಪಾತ್ರವಾದ ಚಿಕ್ಕಮಗಳೂರು ಇಂದಿರಾಗಾಂಧಿ ಸೇರಿ, ಡಿ.ಕೆ.ತಾರಾದೇವಿ, ಡಿ.ಬಿ.ಚಂದ್ರೇಗೌಡರಂತಹ ಘಟಾನುಘಟಿ ಕಾಂಗ್ರೆಸ್ ನಾಯಕರನ್ನ ದೆಹಲಿಗೆ ಕಳಿಸಿದ್ರು. ಆದ್ರೆ, 1990 ರ ಬಳಿಕ ಚಿಕ್ಕಮಗಳೂರು ಸಂಪೂರ್ಣ ಬಿಜೆಪಿಯ ಭದ್ರಕೋಟೆಯಾಗಿದೆ. 2012ರಲ್ಲಿ ಸದಾನಂದಗೌಡರು ಸಿಎಂ ಆದ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಡ್ಗೆ ಎರಡು ವರ್ಷ ಸಂಸದರಾಗಿ ಇದ್ದದ್ದು ಬಿಟ್ಟರೆ ಕಳೆದ 25 ವರ್ಷಗಳಿಂದ ಕಾಫಿನಾಡು ಬಿಜೆಪಿಯ ಭದ್ರಕೋಟೆಯಾಗಿದೆ. 2009ರಲ್ಲಿ ಕ್ಷೇತ್ರ ವಿಂಗಡಣೆಯ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿದರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ-ಮೂಡಿಗೆರೆ ಜೊತೆ ಉಡುಪಿಯ ಕುಂದಾಪುರ, ಉಡುಪಿ, ಕಾರ್ಕಳ, ಕಾಪು ಕ್ಷೇತ್ರಗಳು ಸೇರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿ ಹೊರಹೊಮ್ಮಿದೆ. ಅಂದಿನದಿಂದಲೂ 2 ವರ್ಷ ಬಿಟ್ಟರೆ ಜಂಟಿ ಕ್ಷೇತ್ರ ಬಿಜೆಯ ಭದ್ರಕೋಟೆಯೆ.

    ಈ ಬಾರಿ ವಿಭಿನ್ನ ಕ್ಷೇತ್ರ
    2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದು ಕಾಂಗ್ರೆಸ್ (Congress) ಗೆದ್ದಿದೆ. ಉಡುಪಿ ಜಿಲ್ಲೆಯಲ್ಲಿ ಐದಕ್ಕೆ ಐದು ಬಿಜೆಪಿ ಗೆದ್ದಿದೆ. ಹಾಗಾಗಿ, ಕಾಂಗ್ರೆಸ್ಸಿಗೆ ಪಂಚ ಗ್ಯಾರಂಟಿಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಐದು ಕಾಂಗ್ರೆಸ್ ಹಿಡಿತದಲ್ಲಿರುವುದರಿಂದ ಉಡುಪಿಯ ಸಾಂಪ್ರದಾಯಿಕ ಕಾಂಗ್ರೆಸ್ ಮತಗಳಿಂದ ನಾವು ಗೆಲ್ಲುತ್ತೇವೆ ಎಂದು ಚುನಾವಣೆಗೆ ಅಣಿಯಾಗುತ್ತಿದ್ದಾರೆ. ಆದರೆ, ಚಿಕ್ಕಮಗಳೂರು-ಉಡುಪಿ ಅಪ್ಪಟ ಮಲೆನಾಡು. ಹಿಂದೂತ್ವದ ಭದ್ರಕೋಟೆ. ಚಿಕ್ಕಮಗಳೂರಲ್ಲಿ ಬಿಜೆಪಿ ಸೋತಿದ್ದರು ಕೂಡ ಸೋಲಿನ ಅಂತರ 100, 700, 5,000 ಮತಗಳಷ್ಟೆ. ಹಾಗಾಗಿ ಬಿಜೆಪಿ ಕೂಡ ಅಯೋಧ್ಯೆ, ಜ್ಞಾನವಾಪಿ, ಪ್ರತ್ಯೇಕ ರಾಷ್ಟ್ರದ ಹೇಳಿಕೆ, ಧರ್ಮ ದಂಗಲ್ ಜೊತೆ ಮೋದಿ ಎಂಬ ಸಮುದ್ರದ ಅಲೆಯಲ್ಲಿ ಯಾರು ನಿಲ್ಲಲ್ಲ ಅಂತ ಬಿಜೆಪಿ (BJP) ಕೂಡ ಗೆಲುವಿನ ನಗೆ ಬೀರಲು ಮುಂದಾಗಿದೆ. ಆದ್ರೆ, ರಾಜ್ಯದ ಚುನಾವಣೆ ಬೇರೆ-ದೇಶದ ಚುನಾವಣೆ ಬೇರೆ ಅನ್ನೋದು ಮತದಾರರಿಗೆ ಚೆನ್ನಾಗಿ ಗೊತ್ತು ಎರಡು ಪಕ್ಷದವರಿಗೂ ಚೆನ್ನಾಗಿ ಗೊತ್ತು.

    ಮೈತ್ರಿ ಬಿಜೆಪಿಗೆ ಪ್ಲಸ್?
    ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಲಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಐದರಲ್ಲೂ ಸೋತಿದೆ. ಆದ್ರೆ ನಾಲ್ಕರಲ್ಲಿ ಸೋಲಿಸಿದ್ದು ಇದೇ ಜೆಡಿಎಸ್. ಅದರಲ್ಲಿ ಕಡೂರು ಹಾಸನ ಲೋಕಸಭಾ ಕ್ಷೇತ್ರ ಸೇರಲಿದೆ. ಅದನ್ನ ಬಿಟ್ಟರೆ, ಚಿಕ್ಕಮಗಳೂರಲ್ಲಿ ಜೆಡಿಎಸ್ ಭೋಜೇಗೌಡ ಜೆಡಿಎಸ್ ಬಿಟ್ಟು ನೇರವಾಗಿ ಸಿ.ಟಿ.ರವಿ ಸೋಲಿಸಲು ಮುಂದಾದ ಪರಿಣಾಮ ಸಿ.ಟಿ.ರವಿ 5 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಮೂಡಿಗೆರೆಯಲ್ಲಿ ಬಿಜೆಪಿಯ ಕುಮಾರಸ್ವಾಮಿ ಜೆಡಿಎಸ್‌ನಿಂದ ನಿಂತು 19 ಸಾವಿರ ಮತ ಪಡೆದು ಬಿಜೆಪಿಯ ಅಭ್ಯರ್ಥಿಯನ್ನ 700 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಶೃಂಗೇರಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ 17 ಸಾವಿರ ಮತ ಪಡೆದು ಬಿಜೆಪಿ ಡಿ.ಎನ್.ಜೀವರಾಜ್‌ರನ್ನ 100 ಮತಗಳ ಅಂತರದಿಂದ ಸೋಲಿಸದ್ದಾರೆ. ಹಾಗಾಗಿ, ಉಡುಪಿ ಕೇಳೋದೇ ಬೇಡ. ಬಿಜೆಪಿಯ ಭದ್ರಕೋಟೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಐದು ಕ್ಷೇತ್ರ ಸೋತಿದ್ದರೂ ಕೂಡ ಬಿಜೆಪಿ ಹಾಗೂ ಹಿಂದುತ್ವದ ಬೆಲ್ಟ್. ಬಿಜೆಪಿಗೆ ಅದೇ ಪ್ಲಸ್. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

    ಕ್ಷೇತ್ರದ ಒಟ್ಟು ಮತದಾರರೆಷ್ಟು?
    ಒಟ್ಟು ಮತದಾರರು: 15,56,117
    ಪುರುಷರು: 7,56,951
    ಮಹಿಳೆಯರು: 7,99,127
    ಇತರೆ: 6,158

    ಆಕಾಂಕ್ಷಿಗಳು ಯಾರ‍್ಯಾರು?
    ಕಾಂಗ್ರೆಸ್: ಜಯಪ್ರಕಾಶ್ ಹೆಗ್ಡೆ (99% ಇವರೇ ಅಭ್ಯರ್ಥಿ), ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕರ್ನಾಟಕದ ಅನಿವಾಸಿ ಭಾರತೀಯ ಉಪಾಧ್ಯಕ್ಷರು ಡಾ. ಆರತಿ ಕೃಷ್ಣ, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ.
    ಬಿಜೆಪಿ: ಸಿ.ಟಿ.ರವಿ, ಶೋಭಾ ಕರಂದ್ಲಾಜೆ (99% ಇವರೇ ಅಭ್ಯರ್ಥಿ), ಡಿ.ಎನ್.ಜೀವರಾಜ್, ಪ್ರಮೋದ್ ಮಧ್ವರಾಜ್

    ಕ್ಷೇತ್ರದ ಜಾತಿವಾರು ಬಲ
    ಮೊಗವೀರ-ಮೀನುಗಾರ: 1,14,000
    ಬಿಲ್ಲವ-ಈಡಿಗ: 1,90,000
    ಲಿಂಗಾಯತರು: 1,02,000
    ಬಂಟರು-ಶೆಟ್ಟಿ-ಒಕ್ಕಲಿಗ: 1,80,324
    ಬ್ರಾಹ್ಮಣ: 1,18,454
    ಮುಸ್ಲಿಂ: 1,45,245
    ಕ್ರಿಶ್ಚಿಯನ್: 80,500
    ಪರಿಶಿಷ್ಟ ಜಾತಿ: 2,10,576
    ಪರಿಶಿಷ್ಟ ಪಂಗಡ: 55,067
    ಜೈನ: 9,650
    ಕೊಂಕಣಿ-ಜಿಎಸ್‌ಬಿ, ಆರ್‌ಎಸ್‌ಬಿ: 10,240
    ದೇವಾಡಿಗ: 28,000
    ಗಾಣಿಗ: 14,576
    ಕೊಂಕಣ ಖಾರ್ವಿ: 11,000
    ಒಕ್ಕಲಿಗರು: 1‌,02,788
    ಕುರುಬರು: 67,345
    ಇತರೆ: 68,719

  • ಜೆಡಿಎಸ್ ಚಿಹ್ನೆಯ ಅಡಿ ಸ್ಪರ್ಧೆಗೆ ಸಿದ್ಧ: ಪ್ರಮೋದ್ ಮಧ್ವರಾಜ್

    ಜೆಡಿಎಸ್ ಚಿಹ್ನೆಯ ಅಡಿ ಸ್ಪರ್ಧೆಗೆ ಸಿದ್ಧ: ಪ್ರಮೋದ್ ಮಧ್ವರಾಜ್

    ಬೆಂಗಳೂರು: ಉಭಯ ಪಕ್ಷಗಳು ಒಪ್ಪಿದರೆ ಜೆಡಿಎಸ್ ಚಿಹ್ನೆಯ ಅಡಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ ಎಂದು ಕಾಂಗ್ರೆಸ್‍ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

    ನಗರದ ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರಮೋದ್ ಮಧ್ವರಾಜ್ ಅವರು, ದೇವೇಗೌಡರ ಜೊತೆಗೆ ಟಿಕೆಟ್ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಹಜವಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಬಯಸಿದ್ದೆ. ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಬಂದಿದೆ. ಇದು ಮತ್ತೆ ಕೈ ಪಾಲಿಗೆ ಬರಬೇಕಿದ್ದರೆ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ಆಗಬೇಕು. ಒಂದು ವೇಳೆ ಮಾತುಕತೆ ಸಾಧ್ಯವಾಗದಿದ್ದರೆ, ಜೆಡಿಎಸ್ ಚಿಹ್ನೆಯ ಅಡಿ ಸ್ಪರ್ಧೆ ಮಾಡಲು ಸಿದ್ಧ ಎಂದು ಹೇಳಿದರು.

    ಉಡುಪಿ-ಚಿಕ್ಕಮಗಳೂರಿನಿಂದ ಪ್ರಮೋದ್ ಮಧ್ವರಾಜ್ ಸ್ಪರ್ಧೆ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಪ್ರಮೋದ್ ಮಧ್ವರಾಜ್ ಅವರನ್ನೇ ಕಣಕ್ಕಿಳಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮನಸ್ಸು ಮಾಡಿದ್ದಾರೆ. ಹೀಗಾಗಿ ಸ್ಪರ್ಧೆ ಕುರಿತು ಪ್ರಮೋದ್ ಮಧ್ವರಾಜ್ ಹಾಗೂ ಎಚ್.ಡಿ.ದೇವೇಗೌಡರ ಮಧ್ಯೆ ಇದೇ ವಿಚಾರವಾಗಿ ಇಂದು ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.

    ಇದಕ್ಕೂ ಮುನ್ನ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಕಾಂಗ್ರೆಸ್‍ನ ಸಂಸದ ಡಿ.ಕೆ.ಸುರೇಶ್, ಕೆ.ಸಿ.ಕೊಂಡಯ್ಯ ಮತ್ತು ಯು.ಬಿ.ವೆಂಕಟೇಶ್ ಸೇರಿದಂತೆ ಅನೇಕ ನಾಯಕರು ಭೇಟಿ ಮಾತುಕತೆ ನಡೆಸಿದರು. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಹಾಗೂ ಪ್ರಚಾರಕ್ಕೆ ಬರುವಂತೆ ಮನವಿ ಸಲ್ಲಿಸಿದ್ದಾರೆ.

    ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಅವರು ಕೂಡ ದೇವೇಗೌಡರನ್ನು ಇಂದು ಮಧ್ಯಾಹ್ನ ಭೇಟಿಯಾಗಿದ್ದಾರೆ. ಮಾತುಕತೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಎಚ್.ಡಿ.ದೇವೇಗೌಡರಿಗೆ ಮನವಿ ಮಾಡಿಕೊಂಡಿದ್ದೇನೆ. ಅವರ ಪರವಾಗಿ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಪ್ರಚಾರ ಮಾಡುತ್ತಾರೆ. ಇದರಿಂದ ಬೆಂಗಳೂರು ದಕ್ಷಿಣ ಮತ್ತು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

  • ಕರಾವಳಿಯಲ್ಲಿ ಮ್ಯಾಜಿಕ್ ಮಾಡುವ ಕನಸಲ್ಲಿ ಜೆಡಿಎಸ್

    ಕರಾವಳಿಯಲ್ಲಿ ಮ್ಯಾಜಿಕ್ ಮಾಡುವ ಕನಸಲ್ಲಿ ಜೆಡಿಎಸ್

    -ಒಂದು ಕಾಲದ ಭದ್ರಕೋಟೆಯನ್ನೇ ಜೆಡಿಎಸ್ ಗೆ ಬಿಟ್ಟುಕೊಟ್ಟ ಕಾಂಗ್ರೆಸ್

    ಉಡುಪಿ: ಅಸ್ತಿತ್ವವೇ ಇಲ್ಲದ ಕರಾವಳಿಯಲ್ಲೂ ಜೆಡಿಎಸ್ ಮ್ಯಾಜಿಕ್ ಮಾಡುವ ಕನಸಿನಲ್ಲಿದೆ. ಕಾಂಗ್ರೆಸ್ ನ ಜನಪ್ರಿಯ ರಾಜಕಾರಣಿ ಪ್ರಮೋದ್ ಮಧ್ವರಾಜ್ ರನ್ನು ಸೆಳೆಯಲು ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಮಧ್ವರಾಜರನ್ನು ಫೀಲ್ಡಿಗೆ ಇಳಿಸಲು ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

    2019ರ ಲೋಕಸಭಾ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಮೈತ್ರಿಧರ್ಮ ಪಾಲನೆಗೆ ಮುಂದಾದ ಕಾಂಗ್ರೆಸ್ ತನ್ನ ಒಂದು ಕಾಲದ ಭದ್ರಕೋಟೆಯನ್ನೇ ಜೆಡಿಎಸ್ ಗೆ ಒತ್ತೆ ಇಟ್ಟಿದೆ. ಬಿಜೆಪಿ ನಾಯಕ ಜಯಪ್ರಕಾಶ್ ಹೆಗ್ಡೆ ಜೆಡಿಎಸ್ ಗೆ ಬರಬಹುದು ಅನ್ನೋ ನಿರೀಕ್ಷೆ ಸುಳ್ಳಾಗಿದೆ.

    ವೈಎಸ್ ವಿ ದತ್ತಾ, ಬೋಜೇಗೌಡ ಹೆಸರುಗಳ ನಡುವೆ ಗಟ್ಟಿ ಅಭ್ಯರ್ಥಿಗಾಗಿ ತಡಕಾಡಿದ ಜೆಡಿಎಸ್, ಕೊನೆಗೂ ಯಶಸ್ವಿಯಾದ ಲಕ್ಷಣಗಳು ಗೋಚರಿಸುತ್ತಿವೆ. ಉಡುಪಿಯ ಪ್ರಭಾವಿ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಜೆಡಿಎಸ್ ನಿಂದ ಕಣಕ್ಕಿಳಿಯುವುದು ಬಹುತೇಖ ಖಚಿತವಾಗಿದೆ. ಕಳೆದ ಎರಡು ದಿನಗಳಿಂದ ಪ್ರಮೋದ್ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದಾರೆ. ಜೆಡಿಎಸ್ ವರಿಷ್ಠರು ಪ್ರಮೋದ್ ಗೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಫರ್ ಕೊಟ್ಟಿದ್ದಾರೆ. ಕಾಂಗ್ರೆಸ್ ನಾಯಕರ ಮನವೊಲಿಸಿ ಜೆಡಿಎಸ್ ಚಿಹ್ನೆಯಿಂದ ಕಣಕ್ಕಿಳಿಯಲು ಪ್ರಮೋದ್ ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಉಡುಪಿಯ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯನ್ನು ಕಣಕ್ಕಿಳಿಸುವುದು ಪಕ್ಕಾ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರ ಬಿಟ್ಟು ಎಲ್ಲಾ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಾಗಾಗಿ ಪ್ರಮೋದ್ ಮಧ್ವರಾಜ್ ರನ್ನ ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಸಡ್ಡು ಹೊಡೆಯುವ ಯೋಜನೆ ಹಾಕಿಕೊಂಡಿದೆ. ಪ್ರಮೋದ್ ನಿರ್ಧಾರಕ್ಕೆ ಕಾಂಗ್ರೆಸ್ ನ ಹಿರಿಯ ನಾಯಕರ ಸಮ್ಮತಿಯೂ ಇದೆ ಎನ್ನಲಾಗುತ್ತಿದೆ. ಆದ್ರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಮೋದ್ ಅವರನ್ನು ಜೆಡಿಎಸ್ ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ. ಕೈ ಚಿಹ್ನೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರ ಒತ್ತಾಯಿಸಿದ್ದಾರೆ.

    ವಿಧಾನಸಭಾ ಚುನಾವಣೆಯ ವೇಳೆ ಪ್ರಮೋದ್ ಬಿಜೆಪಿ ಸೇರ್ಪಡೆಯಾಗ್ತಾರೆ ಎಂದು ಸುದ್ದಿ ಹಬ್ಬಿತ್ತು. ಕಾಂಗ್ರೆಸ್ ಪಕ್ಷದಲ್ಲಿ ನಂಬರ್ ಒನ್ ಶಾಸಕ ಎಂಬ ಹೆಸರಿದ್ದರೂ ಪ್ರಮೋದ್ ಹೀನಾಯ ಸೋಲು ಕಂಡಿದ್ದರು. ಈಗ ಜೆಡಿಎಸ್ ಮನೆ ಬಾಗಿಲಲ್ಲಿದ್ದಾರೆ. ಉಡುಪಿ ಚಿಕ್ಕಮಗಳೂರು ಬಿಜೆಪಿಯ ಭದ್ರ ಕೋಟೆಯಾಗಿದ್ದು ಗೆಲುವು ಸುಲಭ ಅಲ್ಲ ಅನ್ನೋದು ರಾಜಕೀಯ ನಾಯಕರ ಲೆಕ್ಕಾಚಾರವಾಗಿದೆ. ಇಷ್ಟಿದ್ದರೂ ಕರಾವಳಿಯಲ್ಲಿ ಅಸ್ತಿತ್ವವೇ ಇಲ್ಲದ ಜೆಡಿಎಸ್ ನಿಂದ ಮಧ್ವರಾಜ್ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ ಎಂಬುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.