ಬಿಗ್ ಬಾಸ್ ಮನೆಯ ಸಂತು ಪಂತು (Santu-Panthu) ಎಂದೇ ಖ್ಯಾತರಾದವರು ಹಾಸ್ಯ ಕಲಾವಿದ ತುಕಾಲಿ ಸಂತು ಮತ್ತು ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ (Varthuru Santhosh). ಇದೀಗ ಇವರ ಕುರಿತಂತೆ ಸಿನಿಮಾವೊಂದು(Cinema) ಮೂಡಿ ಬರಲಿದೆ ಎನ್ನುವುದು ಸ್ಯಾಂಡಲ್ ವುಡ್ ನಲ್ಲಿ ಓಡಾಡುತ್ತಿರುವ ಸುದ್ದಿ. ಚಿತ್ರಕ್ಕೆ ಸಂತು ಪಂತು ಎಂದೇ ಹೆಸರಿಡಲಾಗಿದೆಯಂತೆ.
ಈ ಕುರಿತಂತೆ ಸ್ವತಃ ತುಕಾಲಿ ಸಂತು (Tukali Santu) ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಸ್ಕ್ರಿಪ್ಟ್ ರೆಡಿಯಿದೆ. ನಿರ್ಮಾಪಕರೂ ಕೂಡ ಇದ್ದಾರೆ. ಆದರೆ, ಈ ಸಿನಿಮಾ ಯಾವಾಗ ಆಗುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ. ಈ ಮೂಲಕ ಸಿನಿಮಾ ಆಗುವುದು ಪಕ್ಕಾ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ಸದ್ಯ ತುಕಾಲಿ ಸಂತು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ವರ್ತೂರು ಸಂತೋಷ್, ಹಳ್ಳಿಕಾರ್ ಪಂದ್ಯವನ್ನು ಆಯೋಜಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಇಬ್ಬರೂ ಒಟ್ಟಾಗಿ ಬಂದು ಈ ಚಿತ್ರವನ್ನು ಮಾಡುತ್ತಾರಾ? ಅಥವಾ ಮಾತಿನಲ್ಲೇ ಸಿನಿಮಾ ಮುಗಿಸ್ತಾರೆ ಕಾದು ನೋಡಬೇಕಿದೆ.
ಯಾವುದಾದರೂ ಟಾಪಿಕ್ ಸಿಕ್ಕಾಪಟ್ಟೆ ಸದ್ದಾದಾಗ ಈ ರೀತಿಯ ಚಿತ್ರಗಳು ಹುಟ್ಟಿಕೊಂಡು, ಸುದ್ದಿ ತಣ್ಣಗಾದಾಗ ಚಿತ್ರಗಳೂ ಅಷ್ಟೇ ವೇಗದಲ್ಲಿ ಅಕಾಲಿಕ ಮರಣ ಹೊಂದಿವೆ. ಈ ಸಿನಿಮಾ ಏನಾಗತ್ತೋ ಬಿಗ್ ಬಾಸ್ ನೇ ಬಲ್ಲ.
ಬಿಗ್ ಬಾಸ್ ಮನೆಯ ಸಂತು ಪಂತು (Santu Panthu) ಎಂದೇ ಫೇಮಸ್ ಆಗಿದ್ದ ವರ್ತೂರು ಸಂತೋಷ್ (Varthur Santhosh) ಮತ್ತು ತುಕಾಲಿ ಸಂತು (Tukali Santu) ದೊಡ್ಮನೆಯಿಂದ ಆಚೆ ಬಂದ ನಂತರವೂ ತಮ್ಮ ಸ್ನೇಹವನ್ನು ಮುಂದುವರೆಸಿದ್ದಾರೆ. ನಿನ್ನೆಯಷ್ಟೇ ತಮ್ಮೊಂದಿಗೆ ಬಿಗ್ ಬಾಸ್ ಮನೆಯೊಳಗಿದ್ದ ಎಲ್ಲ ಕಂಟೆಸ್ಟೆಂಟ್ ಗಳನ್ನೂ ವರ್ತೂರು ತಮ್ಮೂರಿಗೆ ಕರೆಯಿಸಿಕೊಂಡು ಸತ್ಕರಿಸಿದ್ದಾರೆ.
ಅದರಲ್ಲೂ ತನ್ನ ನೆಚ್ಚಿನ ಸ್ನೇಹಿತ ತುಕಾಲಿ ಸಂತುಗೆ ಚಿನ್ನದಲ್ಲಿ ಮಾಡಿಸಿರುವ ಸಂತು-ಪಂತು ಹೆಸರಿನ ಲಾಕೆಟ್ ನೀಡಿದ್ದಾರೆ. ತಮ್ಮಿಬ್ಬರ ಸ್ನೇಹ ಶಾಶ್ವತವಾಗಿರಲಿ ಎನ್ನುವ ಕಾರಣಕ್ಕಾಗಿ ಈ ಪದಕವನ್ನು ನೀಡಿರುವುದಾಗಿ ವರ್ತೂರು ಹೇಳಿಕೊಂಡಿದ್ದಾರೆ. ಅದನ್ನು ಭಾವುಕವಾಗಿಯೇ ಸಂತು ಧರಿಸಿದ್ದಾರೆ.
ನನ್ನ ನೆಚ್ಚಿನ ಅಣ್ಣ ಕೊಟ್ಟಿರುವ ಈ ಗಿಫ್ಟ್ ಅನ್ನು ಯಾವಾಗಲೂ ಧರಿಸಿಕೊಂಡು ಇರುತ್ತೇನೆ. ಇದು ಅವರು ನನಗೆ ನೀಡಿರುವ ಮರೆಯಲಾರದಂತಹ ವಸ್ತು ಎಂದು ತುಕಾಲಿ ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಜೊತೆಗೆ ಸಂತೋಷ್ ನೆಡೆಸಿಕೊಡುವ ಹಳ್ಳಿಕಾರ್ ರೇಸ್ ಗೆ ತಾವೇ ನಿರೂಪಣೆ ಮಾಡುವುದಾಗಿಯೂ ತುಕಾಲಿ ಹೇಳಿದ್ದಾರೆ.
ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್ ಆಯೋಜನೆಯಲ್ಲಿ ಬ್ಯುಸಿಯಾಗಿದ್ದರೆ, ತುಕಾಲಿ ಸಂತು ಕಿಚ್ಚಿಗಿಲಿಗಿಲಿ ಶೋನಲ್ಲಿ ಪಾಲ್ಗೊಂಡಿದ್ದಾರೆ. ಪತ್ನಿ ಸಮೇತ ಅವರು ಜನರನ್ನು ನಗಿಸೋಕೆ ಹೊರಟಿದ್ದಾರೆ. ಈಗಾಗಲೇ ಮೊದಲ ವಾರದ ಕಂತುಗಳು ಪ್ರಸಾರ ಕೂಡ ಆಗಿವೆ.
ಬಿಗ್ಬಾಸ್ (Bigg Boss) ಸೀಸನ್ ಹತ್ತರ ಅಭೂತಪೂರ್ವ ಯಶಸ್ಸಿನ ನಂತರ ಕಲರ್ಸ್ ಕನ್ನಡ ಇದೀಗ ವಾರಾಂತ್ಯದ ಮನರಂಜನೆಯನ್ನು ಇನ್ನೊಂದು ಹಂತಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಎಲ್ಲೆಡೆ ಮನೆಮಾತಾಗಿರುವ, ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿ ವಿ ಶೋ “ಗಿಚ್ಚಿಗಿಲಿಗಿಲಿ” (Gichichi Giligili) ಯ ಎರಡು ಸೂಪರ್ ಹಿಟ್ ಸೀಸನ್ಗಳ ನಂತರ ಭರ್ಜರಿ ಮೂರನೇ ಸೀಸನ್ ಫೆಬ್ರವರಿ 3 ರಿಂದ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಈ ಕಾಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಈವರೆಗೆ ಈ ಶೋನ ತೀರ್ಪುಗಾರರಾಗಿದ್ದರು. ಈಗ ಇವರಿಬ್ಬರ ಜೊತೆಗೆ ಮೂರನೇ ತೀರ್ಪುಗಾರರಾಗಿ ಜನಪ್ರಿಯ ಕಾಮಿಡಿ ನಟ ಕೋಮಲ್ ಜತೆಗೂಡಿರುವುದು ಮೂರನೇ ಸೀಸನ್ನಿನ ವಿಶೇಷ ಆಕರ್ಷಣೆ.
ಹೊಸ ಸೀಸನ್ನಿನಲ್ಲಿ ಹತ್ತು ಹೊಸ ಜೋಡಿಗಳು ಭಾಗವಹಿಸಲಿದ್ದು ಗಿಚ್ಚಿಗಿಲಿಗಿಲಿಗೆ ಹೊಸ ರಂಗು ತುಂಬಲಿವೆ. “ಬಿಗ್ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಬಿಗ್ಬಾಸ್ ಅಣಕು ಪ್ರಹಸನ ಮಾಡಿ ರಂಜಿಸಿದ್ಧ ಗಿಚ್ಚಿ ಗಿಲಿಗಿಲಿ ತಂಡದ ಶೋ ಇದೀಗ ಬಿಗ್ಬಾಸ್ ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಪ್ರಸಾರವಾಗಲಿದೆ. ಕಲರ್ಸ್ ಕನ್ನಡದ ಅದ್ಭುತ ಕಾಮಿಡಿಯನ್ಗಳ ಜೊತೆಗೆ ಬಿಗ್ಬಾಸ್ನ ಈ ಸೀಸನ್ ಸೇರಿದಂತೆ ವಿವಿಧ ಸೀಸನ್ಗಳಲ್ಲಿ ಭಾಗವಹಿಸಿದ್ದ ಹಲವು ಸ್ಪರ್ಧಿಗಳು ಈ ಬಾರಿಯ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು” ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್.
ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತೀರ್ಪುಗಾರರಾದ ಶೃತಿ, ಸಾಧುಕೋಕಿಲ, ಕೋಮಲ್ ಕುಮಾರ್, ಶೋ ನ ನಿರ್ದೇಶಕ ಪ್ರಕಾಶ್, ನಿರ್ಮಾಪಕರಾದ ಶಿವಧ್ವಜ್, ಪ್ರಶಾಂತ್ ರೈ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಉಪಸ್ಥಿತರಿದ್ದರು. ನಾನು ಹಾಸ್ಯ ಕಲಾವಿದನಾಗಿ, ನಿರ್ದೇಶಕನಾಗಿ ಎಲ್ಲರಿಗೂ ಪರಿಚಯನಾಗಿದ್ದೆ. ಆದರೆ “ಕನ್ನಡ ಕೋಗಿಲೆ” ಶೋ ಮೂಲಕ ಎಲ್ಲರಿಗೂ ನಾನು ಸಂಗೀತ ನಿರ್ದೇಶಕ ಎಂದು ಗೊತ್ತಾಯಿತು. ಈಗ ಜನರು ಕಿರುತೆರೆಯನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. “ಗಿಚ್ಚಿ ಗಿಲಿಗಿಲಿ” ಈಗಾಗಲೇ ಎರಡು ಸೀಸನ್ ಯಶಸ್ವಿಯಾಗಿದೆ. ಮೂರನೇ ಸೀಸನ್ ಕೂಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು ಸಾಧುಕೋಕಿಲ.
“ಗಿಚ್ಚಿ ಗಿಲಿಗಿಲಿ” ಶೋ ನ ಮೂಲಕ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇಂತಹ ಶೋ ಆಯೋಜಿಸಿರುವ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದ. ಎರಡು ಸೀಸನ್ ಗಳಿಗೆ ನಾನು ಹಾಗೂ ಸಾಧುಕೋಕಿಲ ಅವರು ತೀರ್ಪುಗಾರರಾಗಿದ್ದೆವು. ಈಗ ನಮ್ಮೊಂದಿಗೆ ಕೋಮಲ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ನಟಿ ಶ್ರುತಿ ತಿಳಿಸಿದರು. ನಾನು ಈ ಹಿಂದೆ ಒಂದು ಕಾಮಿಡಿ ಶೋ ನ ನಿರ್ಮಾಣ ಮಾಡಿದ್ದೆ ಎಂದು ಮಾತನಾಡಿದ ನಟ ಕೋಮಲ್ ಕುಮಾರ್, ಕಲರ್ಸ್ ವಾಹಿನಿಯ ಅನುಬಂಧ ಅವರ್ಡ್ಸ್ ನಲ್ಲಿ ಸಿಕ್ಕ ಈ ಕಾರ್ಯಕ್ರಮದ ನಿರ್ಮಾಪಕರು “ಗಿಚ್ಚಿ ಗಿಲಿಗಿಲಿ” ಶೋ ಬಗ್ಗೆ ಹೇಳಿದರು. ನಾನು ಕೂಡ ಈ ಶೋ ನೋಡಿದ್ದೇನೆ. ಈಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ ಎಂದರು.
ನಾವು ಈ ಹಿಂದೆ “ಮಜಾಭಾರತ” ಎಂಬ ಶೋ ಮಾಡಿದ್ದೆವು. ಈಗ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ “ಗಿಚ್ಚಿ ಗಿಲಿಗಿಲಿ” ಯನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದೇವೆ. ಸಹಕಾರ ನೀಡುತ್ತಿರುವ ವಾಹಿನಿಯವರಿಗೆ, ತೀರ್ಪುಗಾರರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ಮಾಪಕರಾದ ಶಿವಧ್ವಜ್ ಹಾಗೂ ಪ್ರಶಾಂತ್ ರೈ. “ಬಿಗ್ ಬಾಸ್” ಸೀಸನ್ ಹತ್ತು ಯಶಸ್ವಿಯಾಗಿ ಮುಕ್ತಾಯವಾಗಿದೆ. ಈಗ ಶನಿವಾರ, ಭಾನುವಾ ಅದೇ ಸಮಯಕ್ಕೆ “ಗಿಚ್ಚಿ ಗಿಲಿಗಿಲಿ” ಪ್ರಸಾರವಾಗಲಿದೆ. ನಮ್ಮ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಪ್ರಕಾಶ್. ಗಿಚ್ಚಿ ಗಿಲಿಗಿಲಿಯ ಕಾಮಿಡಿಯನ್ಗಳು ಈಗಾಗಲೇ ರಾಜ್ಯದ ಎಲ್ಲೆಡೆ ಜನಪ್ರಿಯರು. ಇವರೊಂದಿಗೆ ಹೊಸ ಹತ್ತು ಸ್ಪರ್ಧಿಗಳೂ ಸೇರಿದ್ದು ಈ ಸೀಸನ್ನಲ್ಲಿ ಕಾಮಿಡಿಯ ಮಹಾಪೂರವೇ ಹರಿದುಬರಲಿದೆ.
ಈ ಬಾರಿಯ ಬಿಗ್ಬಾಸ್ನ ಹೈಲೈಟ್ಗಳಲ್ಲಿ ಒಬ್ಬರಾಗಿದ್ದ ಕಾಮಿಡಿಯನ್ ತುಕಾಲಿ ಸಂತೋಷ್ ತಮ್ಮ ಪತ್ನಿ ಮಾನಸ ಅವರೊಂದಿಗೆ ಸೇರಿ ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡಲಿದ್ದಾರೆ. ಇವರ ಜೊತೆಗೆ ಬಿಗ್ಬಾಸ್ ಸೀಸನ್ ಎಂಟರ ವಿಜೇತ, ಮಜಾಭಾರತ, ಕಾಮಿಡಿ ಟಾಕೀಸ್ ಮುಂತಾದ ಕಾಯಕ್ರಮಗಳ ಮೂಲಕ ಮಿಂಚಿರುವ ಮಂಜು ಪಾವಗಡ ಒಂದೆರಡು ವರ್ಷಗಳ ಬ್ರೇಕ್ನ ನಂತರ ಗಿಚ್ಚಿಗಿಲಿಗಿಲಿಗೆ ಮರಳಿದ್ದಾರೆ. ಬಿಗ್ಬಾಸ್ ಸೀಸನ್ ಒಂಬತ್ತರಲ್ಲಿ ರಂಜಿಸಿದ್ದ ಇನ್ನೊಬ್ಬ ಹೆಸರಾಂತ ಮಜಾಭಾರತ ಮತ್ತು ಗಿಚ್ಚಿಗಿಲಿ ಕಲಾವಿದ ವಿನೋದ್ ಗೊಬ್ಬರಗಾಲ ಇದ್ದೇ ಇರುತ್ತಾರೆ. ಇವರ ಜೊತೆಗೆ ಈ ಬಾರಿ ಬಿಗ್ಬಾಸ್ನಲ್ಲಿದ್ದ ದ್ರೋಣ್ ಪ್ರತಾಪ್ (Drone Pratap) ಮತ್ತು ಇಶಾನಿ ಕೂಡಾ ಕಾಮಿಡಿಯಲ್ಲಿ ಒಂದು ಕೈ ನೋಡೇ ಬಿಡೋಣ ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಬಿಗ್ಬಾಸ್ ಸೀಸನ್ ನಾಲ್ಕರಲ್ಲೇ ಜನಮನ ಗೆದ್ದಿದ್ದ ಸಂಜನಾ ಚಿದಾನಂದ್ ಕೂಡಾ ಹಾಸ್ಯದಲ್ಲಿ ತಾನೇನೂ ಕಮ್ಮಿಯಿಲ್ಲ ಎಂಬಂತೆ ಸ್ಫರ್ಧಿಸಲಿದ್ದಾರೆ.
ಉಳಿದಂತೆ ಕಲರ್ಸ್ ಕನ್ನಡದ ಜನಪ್ರಿಯ ಕಾಮಿಡಿಯನ್ಗಳಾದ ಹುಲಿ ಕಾರ್ತಿಕ್, ಶಿವು, ಚಿಲ್ಲರ್ ಮಂಜು, ಚಂದ್ರಪ್ರಭಾ, ಮಾನಸ, ಪ್ರಶಾಂತ್, ನಂದೀಶ್ ಮಡಿವಾಳ ಎಂದಿನಂತೆ ವೀಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. “ಕನ್ನಡ ಕೋಗಿಲೆ” ಸಂಗೀತ ಕಾಯಕ್ರಮದಲ್ಲಿ ಜನಪ್ರಿಯರಾಗಿದ್ದ ಹಾಡುಗಾರ ಕರಿಬಸವ, “ನನ್ನಮ್ಮ ಸೂಪರ್ಸ್ಟಾರ್” ನ ಪುನೀತಾ, “ಮಜಾ ಟಾಕೀಸ್”ನ ಮೋಹನ್, ದೀಕ್ಷಾ, ಖುಷಿ, ಮಧುಮತಿ- ಹೀಗೆ ಮಜರಂಜನೆಯ ರಸದೌತಣ ನೀಡುವಂಥಾ ತಂಡವೇ ರೆಡಿಯಾಗಿದೆ.
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ನೇಹಕ್ಕೆ ಹೆಸರಾಗಿದ್ದವರು ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು. ಇವರನ್ನು ಪ್ರೀತಿಯಿಂದಾನೇ ಬಿಗ್ ಬಾಸ್ ಕಂಟೆಸ್ಟೆಂಟ್ ಸಂತು-ಪಂತು (Santu-Panthu) ಅಂತಾನೇ ಕರೆಯುತ್ತಿದ್ದರು. ‘ಮತ್ಯಾರಲ್ಲೂ ನೋಡದ, ನಿಷ್ಕಳಂಕವಾದ ಸ್ನೇಹವನ್ನು ನಿಮ್ಮಿಬ್ಬರಲ್ಲಿ ನೋಡಿದ್ದೀನಿ’ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್ನಲ್ಲಿ ಹೀಗೆ ಹೇಳಿದ್ದು ವರ್ತೂರು ಸಂತೋಷ್ (Varthuru Santosh) ಮತ್ತು ತುಕಾಲಿ ಸಂತೋಷ್ (Tukali Santu) ಸ್ನೇಹದ ಬಗ್ಗೆ. ಎಲಿಮಿನೇಷನ್ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರು ಹೊರಗೆ ಹೋಗುತ್ತಾರೆ ಎಂಬ ಹಂತದಲ್ಲಿ ಕೂತಿದ್ದಾಗಲೂ ಅವರಿಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿಯೇ ಮಾತಾಡಿದ್ದರು.
ಸಂತು – ಪಂತು ಜೋಡಿಯಾದ ಇಬ್ಬರೂ ಆಡಿದ ಮಾತುಗಳಿಗೆ, ಆಡಿದ ಆಟಗಳಿಗೆ ಲೆಕ್ಕವೇ ಇಲ್ಲ. ಎಷ್ಟೇ ಮಾತುಗಳು ಕೇಳಿಬಂದರೂ ಅವರ ಸ್ನೇಹದಲ್ಲಿ ಬಿರುಕು ಬರಲೇ ಇಲ್ಲ. ಹಾಗೆಂದು ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಒಬ್ಬರಿಗೊಬ್ಬರು ಮಾತುಗಳಲ್ಲಿ ತಿವಿದುಕೊಂಡಿದ್ದು ಇದೆ, ಮುನಿಸಿಕೊಂಡಿದ್ದು ಇದೆ. ಆದರೆ ಮರುಕ್ಷಣದಲ್ಲಿಯೇ ಅದು ಸರಿಹೋಗಿ ಬಿಗ್ಬ್ಯಾಗ್ ಮೇಲೆ ಕೂತು ಹರಟಿದ್ದಾರೆ. ಈ ಬಿನ್ಬ್ಯಾಗ್ ಸ್ಟೋರಿ ಮನೆಯೊಳಗೂ ಹೊರಗೂ ಸಾಕಷ್ಟು ಸದ್ದು ಮಾಡಿತು. ತುಕಾಲಿ ಅವರ ತಂತ್ರಗಾರಿಕೆ ರೂಪುಗೊಳ್ಳುತ್ತಿದ್ದದ್ದೇ ಈ ಬಿನ್ಬ್ಯಾಗ್ ಮೇಲೆ.
ಸ್ಕೂಲ್ ಟಾಸ್ಕ್ನಲ್ಲಿ ಮಾಡಿದ ಮೋಡಿ
ತುಕಾಲಿ ಸಂತೋಷ್ ಅವರ ರಂಜನೀಯ ಪ್ರತಿಭೆ ಹೊರಗೆ ಬಂದಿದ್ದು ಸ್ಕೂಲ್ ಟಾಸ್ಕ್ನಲ್ಲಿ. ಉಳಿದವರು ತಮ್ಮ ಎದುರಾಳಿಗಳನ್ನು ತಿವಿಯಲು, ದೂರಲುಈ ಅವಕಾಶವನ್ನು ಬಳಸಿಕೊಂಡರೆ, ತುಕಾಲಿ ಸಂತೋಷ್ ಮಾತ್ರ ಬಾಲ್ಯದೊಳಗೆ ಹೋಗಿ ಬಂದಂತಿದ್ದರು. ‘ಹೊಡಿತೀನಿ’ ಎಂದು ಅವರು ಆಡುತ್ತಿದ್ದ ರೀತಿ ಹಲವು ವಾರಗಳ ಕಾಲ ಆಗಾಗ ಮನೆಯೊಳಗೆ ಪ್ರತಿಧ್ವನಿಸುತ್ತಲೇ ಇತ್ತು. ಅಲ್ಲದೇ ಬೃಂದಾವನ ಧಾರಾವಾಹಿ ತಂಡ ಮನೆಯೊಳಗೆ ಬಂದಾಗ ತುಕಾಲಿ ಸಂತೋಷ್, ವರ್ತೂರು ಸಂತೋಷ್, ಭಾಗ್ಯ, ತನಿಷಾ ಸೇರಿಕೊಂಡು ಮಾಡಿದ್ದ ಕಾಮಿಡಿಸ್ಕಿಟ್ ಕೂಡ ಎಲ್ಲರನ್ನೂ ನಕ್ಕುನಲಿಸಿತ್ತು. ಇದೇ ವಾರ ಅವರು ತೆಗೆದುಕೊಂಡ ಇಂಗ್ಲಿಷ್ ಕ್ಲಾಸ್ ಅಂತೂ ಮನೆಯ ಉಳಿದ ಸದಸ್ಯರಿಗೆ ಇಂಗ್ಲಿಷ್ ಕಲಿಸುವ ಬದಲು ಬರುವ ಇಂಗ್ಲಿಷ್ ಅನ್ನೂ ಮರೆಸುವಂತೆ ಮಾಡಿತ್ತು. ವಾರಾಂತ್ಯದಲ್ಲಿಯೂ ಕಿಚ್ಚ ಸುದೀಪ್ ಅವರು ತುಕಾಲಿ ಬಾಯಲ್ಲಿ ಇಂಗ್ಲಿಷ್ ಕೇಳಲು ಇಷ್ಟಪಡುತ್ತಿದ್ದರು.
ತಂತ್ರದಲ್ಲಿ ಚಾಣಕ್ಯ
ಬರೀ ನಗಿಸುವುದನ್ನೇ ನೆಚ್ಚಿಕೊಂಡಿದ್ದರೆ ತುಕಾಲಿ ಸಂತೋಷ್ ಇಷ್ಟು ದಿನಗಳ ಕಾಲ ಮನೆಯೊಳಗೆ ಇರಲು ಸಾಧ್ಯವೇ ಇರಲಿಲ್ಲವೇನೋ. ಆದರೆ ತುಕಾಲಿ ವ್ಯಕ್ತಿತ್ವ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಅವರೊಳಗೊಬ್ಬ ತಂತ್ರಗಾರನೂ ಇದ್ದ. ಗಾಸಿಪ್ ಮಾಡುತ್ತೇನೆ ಎಂದು ಹೇಳಿಕೊಂಡೇ ಅವರು ಆಡಿದ ಗಾಳಿಸುದ್ದಿಗಳು ಮನೆಯೊಳಗೆ ಬೆಂಕಿ ಹಚ್ಚಿದ್ದೂ ಇದೆ. ಅದರಲ್ಲಿಯೂ ಕಳೆದ ಕೆಲವು ವಾರಗಳಿಂದ ಅವರು ವರ್ತೂರು ಸಂತೋಷ್ ಅವರೊಂದಿಗೆ ಸೇರಿ ಮಾಡಿದ ತಂತ್ರಗಾರಿಕೆಗೆ ಉಳಿದ ಸದಸ್ಯರೆಲ್ಲ ಬೆಕ್ಕಸ ಬೆರಗಾಗಿದ್ದಂತೂ ಹೌದು.
ಇತ್ತೀಚೆಗೆ ಕೂಡ, ಫಿನಾಲೆಯಲ್ಲಿ ನಿಮ್ಮ ಜೊತೆ ಇರಬೇಕಾದ ಇನ್ನೊಂದು ಕೈ ಯಾರದು ಎಂಬಪ್ರಶ್ನೆಗೆ ತುಕಾಲಿ ಅವರು, ‘ಸಂಗೀತಾ’ ಎಂದಿದ್ದರು. ಆದರೆ ಮುಂದಿನ ವಾರವೇ ಅವರು ಸಂಗೀತಾ ವಿರುದ್ಧ ಕಾರ್ತಿಕ್ ಅವರಿಗೆ ಸಪೋರ್ಟ್ ಮಾಡಿ ಮುಂದೆ ಬಿಟ್ಟರು. ಹೀಗೆ ಕಾಲಕ್ಕೆ ತಕ್ಕ ಹಾಗೆ ತಮ್ಮ ತಂತ್ರಗಾರಿಕೆ ಬದಲಿಸುತ್ತ, ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಾತಾವರಣ ರೂಪಿಸಿಕೊಳ್ಳುವ ಚಾಣಕ್ಯ ಜಾಣತನವೇ ಅವರನ್ನು ಇಲ್ಲಿಯವರೆಗೆ ತಂದಿದೆ.
ಸವಾಲಿಗೆ ಸವಾಲ್
ಆರಂಭಿಕ ದಿನಗಳಲ್ಲಿ ವಿನಯ್ ಅವರ ಗುಂಪಿನಲ್ಲಿ ಗುರ್ತಿಸಿಕೊಂಡಿದ್ದ ತುಕಾಲಿ ಅವರು, ಹಳ್ಳಿ ಟಾಸ್ಕ್ನಲ್ಲಿ ಅವರ ತಂಡವನ್ನೇ ಸಪೋರ್ಟ್ ಮಾಡಿ ಸಂಗೀತಾ ತಂಡ ಸೋಲುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ವಿನಯ್ ತಂಡದಿಂದ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬೀಳತೊಡಗಿದರು. ಆಗ ತುಕಾಲಿ ಅವರ ತಂಡದಿಂದ ಹೊರಬಿದ್ದು ಸಂಗೀತಾ ಅವರಿಗೆ ಹತ್ತಿರವಾದರು. ಆದರೆ ಎಂಟನೇ ವಾರದಲ್ಲಿ ಸಂಗೀತಾ, ವಿನಯ್ ತಂಡವನ್ನು ಸೇರಿಕೊಂಡಾಗ ತುಕಾಲಿ ಅವರಿಗೆ ಎದುರಾಳಿಯಾದರು. ‘ನಿಮ್ಮ ತಂಡದಿಂದ ಕಾರ್ತಿಕ್ ಮತ್ತು ತುಕಾಲಿ ತಲೆ ಬೋಳಿಸಿಕೊಳ್ಳಬೇಕು’ ಎಂದು ಸಂಗೀತಾ ಸವಾಲು ಹಾಕಿದಾಗ ಕೊಂಚವೂ ಯೋಚಿಸದೆ ತಲೆಯನ್ನು ಬೋಳಿಸಿಕೊಂಡು ತಮ್ಮ ಬದ್ಧತೆಯನ್ನು ಮೆರೆದರು.
ತುಕಾಲಿ ಸಂತೋಷ್ (Tukali Santu) ಈ ಹೆಸರು ಕೇಳಿದರೆ ಸಾಕು ಒಮ್ಮೆ ಹುಬ್ಬು ಮೇಲೇರುತ್ತದೆ. ಮರುಗಳಿಗೆ ತುಟಿಗಳಲ್ಲಿ ನಗು ಮೂಡುತ್ತದೆ. ಹುಬ್ಬೇರಿಸುವ ಅಚ್ಚರಿ, ನಗುಮೂಡಿಸುವ ವೈಖರಿ ಇದು ತುಕಾಲಿ ಸಂತೋಷ್ ಬಿಗ್ಬಾಸ್ (Bigg Boss Kannada) ಸೀಸನ್ 10ನಲ್ಲಿ ಮೂಡಿಸಿರುವ ಹೆಜ್ಜೆಗುರುತಿಗೆ ಪುರಾವೆ. ಅಂತಿಮ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ತುಕಾಲಿ ಸಂತೋಷ್ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಲ್ಲಿ ಇದ್ದಷ್ಟೂ ದಿನ ಎಲ್ಲರನ್ನೂ ನಗಿಸುತ್ತಲೇ ಇದ್ದ ತುಕಾಲಿ, ನಗುನಗುತ್ತಲೇ ಹೊರಗೆ ಬಂದಿದ್ದಾರೆ. ತಮ್ಮ ಸಹಸ್ಪರ್ಧಿಗಳಿಗೆ ಶುಭಾಶಯ ಕೋರಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಮನೆಯಿಂದ ಹೊರಗೆ ಬಂದ ತುಕಾಲಿ ಸಂತೋಷ್ ಅವರ ಜರ್ನಿಯೂ ಅಷ್ಟೇ ಮನರಂಜನಾತ್ಮಕವಾಗಿತ್ತು. ಅದನ್ನು ಕಟ್ಟಿಕೊಡುವ ಪ್ರಯತ್ನವನ್ನು ಜಿಯೊಸಿನಿಮಾ ಮಾಡುತ್ತಿದೆ.
‘ಈ ಸಲ ಎಂಟರ್ಟೈನ್ಮೆಂಟ್ ಕಡಿಮೆ ಇದೆ’ ಎಂಬ ಕೆಲವರ ಗೊಣಗಾಟಕ್ಕೆ ಉತ್ತರವಾಗಿ ತುಕಾಲಿ ಸಂತೋಷ್ ಮನೆಯೊಳಗಿದ್ದರು. ಅಗ್ರೆಶನ್ನಲ್ಲಿ ಆಡಲಾಗದ, ಸ್ಪೋರ್ಟ್ಸ್ ಹಿನ್ನೆಲೆ ಇಲ್ಲದ ಅವರು ಮನೆಯೊಳಗೆ ವಾರದಿಂದ ವಾರಕ್ಕೆ ತಮ್ಮ ಜಾಗವನ್ನು ವಿಸ್ತರಿಸುತ್ತ ಬಂದಿದ್ದೊಂದು ಕುತೂಹಲಕಾರಿ ವಿದ್ಯಮಾನ. ಅದೂ ಮನೆಯೊಳಗೆ ಜನರು ಕಡಿಮೆಯಾಗುತ್ತ ಬಂದಷ್ಟೂ ತುಕಾಲಿ ಸಂತೋಷ್ ಪ್ರಭಾವ ಹೆಚ್ಚುತ್ತಲೇ ಹೋಗಿದ್ದು ಇನ್ನೊಂದು ಕುತೂಹಲಕಾರಿ ಬೆಳವಣಿಗೆ. ಎಲ್ಲರೊಳಗೆ ಒಂದಾಗುತ್ತ, ಎಲ್ಲರಿಗೂ ಪಿನ್ನು ಚುಚ್ಚುತ್ತ ತಮ್ಮ ಪಯಣವನ್ನು ಮುಂದುವರಿಸಿಕೊಂಡು ಬಂದಿರುವ ತುಕಾಲಿ ಅವರ ಜರ್ನಿಯ ಕೆಲವು ಮುಖ್ಯಘಟ್ಟಗಳ ನೆನಪು ಇಲ್ಲಿವೆ.
ಮಾತಿನಲ್ಲೇ ಮನೆಯ ಕಟ್ಟುವ ಮಲ್ಲ
ತುಕಾಲಿ ಸಂತೋಷ್ ಅವರು ಮೈಕಟ್ಟಿನಲ್ಲಂತೂ ‘ಮಲ್ಲ’ನಲ್ಲ. ಆದರೆ ಮಾತಿಗೆ ನಿಂತರೆ ಮಲ್ಲರ ಮಲ್ಲ. ನೋಡನೋಡುತ್ತಿದ್ದ ಹಾಗೆಯೇ ಮಾತಲ್ಲೇ ಮಹಡಿಮೇಲೆ ಮಹಡಿ ಕಟ್ಟಿ ಅದರ ಮೇಲಿಂದ ಕಾಗೆ ಹಾರಿಸುವ ಅವರ ಪ್ರತಿಭೆ ಆರಂಭದ ಕೆಲವು ದಿನಗಳಲ್ಲಿಯೇ ಮನೆಮಂದಿಗೆಲ್ಲ ಪರಿಚಯವಾಗಿತ್ತು. ‘ನನ್ನ ತಾಯಿ ಗರ್ಭಿಣಿಯಾಗಿದ್ದಾಗ, ನಿನ್ನ ಹೊಟ್ಟೆಯಲ್ಲಿ ಮಹಾತ್ಮ ಹುಟ್ತಾನೆ ಅಂತ ಹೇಳಿದ್ರಂತೆ ದೊಡ್ಡವರೊಬ್ಬರು. ನಾನು ಹುಟ್ಟುವಾಗ ಗುಡುಗು ಸಿಡಿಲು ಎಲ್ಲ ಇತ್ತು. ಮಳೆ ಬರ್ತಿತ್ತು. ಆಗ ನಾನು ಹುಟ್ಟಿದೆ…’ ಎಂದು ತಮ್ಮ ಜನ್ಮವೃತ್ತಾಂತವನ್ನು ಅರುಹುತ್ತ ಹೋದ ಹಾಗೆ ಮನೆಯವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಅವರು ಕಾಗೆ ಹಾರಿಸುತ್ತಿದ್ದಾರೆ ಎಂದು ಗೊತ್ತಿದ್ದೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಬಿಗ್ಬಾಸ್ ಮನೆಯ ಸದಸ್ಯರು ಕಾದು ಕೂತಿರುತ್ತಿದ್ದದ್ದು ಸುಳ್ಳಲ್ಲ.
ಆದರೆ ಆರಂಭಿಕ ಹಂತದಲ್ಲಿ ತುಕಾಲಿ ಅವರು ಮನೆಯ ಸದಸ್ಯರನ್ನು ನಗಿಸಲು ಅನುಸರಿದ ದಾರಿ ಟೀಕೆಗೂ ಒಳಗಾಗಿತ್ತು. ಅವರು ಪ್ರತಾಪ್ ಬಗ್ಗೆ ಆಡಿದ ಮಾತುಗಳು, ಮನೆಯ ಉಳಿದ ಸದಸ್ಯರ ಬಗ್ಗೆ ಆಡಿದ ಮಾತುಗಳ ಬಗ್ಗೆ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಭಾಗ್ಯಶ್ರೀ ಮತ್ತು ಸಿರಿ ಅವರನ್ನು ಮಿಮಿಕ್ ಮಾಡಿದ್ದಕ್ಕಾಗಿ ಸುದೀಪ್ ವಾರವಿಡೀ ತುಕಾಲಿ ಅವರ ಸೊಂಟಕ್ಕೆ ಹಗ್ಗ ಕಟ್ಟಿ ಅದರ ಎರಡುಬದಿಗಳಲ್ಲಿ ಸಿರಿ ಮತ್ತು ಭಾಗ್ಯಶ್ರೀ ಇರುವ ಶಿಕ್ಷೆ ಕೊಟ್ಟಿದ್ದರು. ಇಂಥ ಶಿಕ್ಷೆಯನ್ನು ತುಕಾಲಿ ಕಾಮಿಡಿ ಸೃಷ್ಟಿಗೇ ಬಳಸಿಕೊಂಡರು ಅನ್ನುವುದು ಬೇರೆ ಮಾತು.
‘ಅನ್ಯರನ್ನು ನೋಯಿಸಿ ಮತ್ಯಾರನ್ನೋ ನಗಿಸುವುದು ಹಾಸ್ಯನಟನ ಘನತೆಗೆ ತಕ್ಕುದಲ್ಲ’ ಎಂಬ ಕಿಚ್ಚನ ಮಾತುಗಳನ್ನು ತುಕಾಲಿ ಗಂಭೀರವಾಗಿಯೇ ತೆಗೆದುಕೊಂಡರು. ಆದರೆ ಮನೆಯ ಸದಸ್ಯರು ಮಾತ್ರ ‘ಅವರು ಉಳಿದವರನ್ನು ನೋಯಿಸಿ ಹಾಸ್ಯ ಮಾಡುತ್ತಾರೆ’ ಎಂದು ಆರೋಪಿಸುವುದನ್ನು ನಿಲ್ಲಿಸಲಿಲ್ಲ. ಇದರಿಂದ ತುಕಾಲಿ ಅವರು ಕೆಲಕಾಲ ಕುಗ್ಗಿದ್ದು, ಮಾತಾಡಲೇ ಹಿಂಜರಿಯುವಂತಾಗಿದ್ದು ಸುಳ್ಳಲ್ಲ.
ಕ್ಯಾಪ್ಟನ್ ಆಗುವ ಕನಸು
ಮನೆಯ ಕ್ಯಾಪ್ಟನ್ ಆಗಬೇಕು ಎಂಬುದು ಈ ಸೀಸನ್ ಉದ್ದಕ್ಕೂ ತುಕಾಲಿ ಸಂತೋಷ್ ಕಂಡಂತ ಕನಸು. ಆ ಕನಸು ಮೊಳೆತಿದ್ದು ಮೊದಲ ವಾರದಲ್ಲಿಯೇ. ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಸ್ನೇಹಿತ್ ಮತ್ತು ನಮ್ರತಾ ಅವರ ಜೊತೆಯಲ್ಲಿ ತುಕಾಲಿ ಕೂಡ ರೇಸ್ನಲ್ಲಿ ಇದ್ದರು. ತಿರುಗುವ ಚಕ್ರದ ಮೇಲೆ ಅತಿಹೆಚ್ಚು ಕಾಲ ನಿಲ್ಲುವ ಟಾಸ್ಕ್ನಲ್ಲಿ ಬರಿಗಾಲಿನಲ್ಲಿ ನಿಂತಿದ್ದ ತುಕಾಲಿ ಎಲ್ಲರಿಗಿಂತ ಮೊದಲೇ ಕೆಳಗಿಳಿದರು. ಮೊದಲ ವಾರದ ಸೋಲು ಕೊನೆಯ ಹಂತದವರೆಗೂ ಬೆನ್ನುಬಿಟ್ಟಿಲ್ಲ.
ಹಲವು ಸಲ ಅವರು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗವಹಿಸಿ ಚೆನ್ನಾಗಿ ಆಡಿ ಗೆಲುವಿನ ಹೊಸ್ತಿಲವರೆಗೂ ಹೋಗಿ ಬಂದಿದ್ದಾರೆ. ಆದರೆ ಗೆದ್ದು ಕ್ಯಾಪ್ಟನ್ ಆಗುವ ಕನಸು ಮಾತ್ರ ನನಸಾಗಿಲ್ಲ. ನಾಲ್ಕನೇ ವಾರದಲ್ಲಿ ಹಳ್ಳಿ ಮನೆ ಟಾಸ್ಕ್ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಅಂತಿಮ ಹಂತದವರೆಗೂ ತುಕಾಲಿ ಬಂದಿದ್ದರು. ಆಗ ಅವರು ಸಿರಿ ಮತ್ತು ವಿನಯ್ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾಗಿತ್ತು. ಆಗ ಅವರು ಸಿರಿ ಅವರನ್ನು ಹೊರಗಿಟ್ಟು ವಿನಯ್ ಅವರನ್ನು ಆಯ್ದುಕೊಂಡರು. ವಿನಯ್ ವಿರುದ್ಧ ಸೋತರು. ಕೊನೆಗೂ ತುಕಾಲಿ ಸಂತೋಷ್ ಕ್ಯಾಪ್ಟನ್ ಆಗಲೇ ಇಲ್ಲ. ಆದರೆ ಅವರು ತಮ್ಮ ಆಸೆ ಈಡೇರಿಸಿಕೊಳ್ಳದೇ ಬಿಡಲೂ ಇಲ್ಲ. ಕಳೆದ ವಾರ ನಡುರಾತ್ರಿ ಬಿಗ್ಬಾಸ್ ಮನೆಯ ಕ್ಯಾಪ್ಟನ್ ರೂಮ್ ಹೊಕ್ಕು ಬೆಡ್ ಮೇಲೆ ಎರಡು ನಿಮಿಷ ಮಲಗಿ ಖುಷಿಪಟ್ಟರು
ಬಿಗ್ ಬಾಸ್ (Bigg Boss Kannada) ಫಿನಾಲೆಗೆ ಇನ್ನೊಂದೇ ದಿನ ಬಾಕಿ. ಅಷ್ಟರಲ್ಲೇ ವಿಶೇಷವಾದ ಅವಕಾಶವನ್ನು ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡಿದ್ದಾರೆ. ಅದರಲ್ಲೂ ತುಕಾಲಿ ಸಂತುಗೆ ನೀಡಿದ ಅವಕಾಶ ಸಖತ್ ಫಿನ್ನಿಯಾಗಿದೆ. ಕೆಲವು ದಿನಗಳ ಹಿಂದೆ ಬಿಗ್ಬಾಸ್, ಮನೆಯಲ್ಲಿರುವ ಆರು ಸ್ಪರ್ಧಿಗಳಿಗೆ ಅವರ ಆಸೆಗಳನ್ನು ಕೇಳಿತ್ತು. ಈಗ ಅವರ ಆಸೆಗಳನ್ನೆಲ್ಲ ಒಂದೊಂದಾಗಿ ಈಡೇರಿಸುತ್ತಿದ್ದಾರೆ ಬಿಗ್ಬಾಸ್. ಆ ಸನ್ನಿವೇಶ ಹೇಗಿದೆ ಎಂಬುದು ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.
‘ತುಕಾಲಿಯವರೆ (Tukali Santu)ಕೆಲಸಮಯಕ್ಕೆ ರಾಜನಂತೆ ಬದುಕಬೇಕು’ ಎಂದು ಬಿಗ್ಬಾಸ್ ಹೇಳಿದ್ದಾರೆ. ಅದಕ್ಕೆ ಅನುಗುಣವಾಗಿ ಕೆಂಪು ಸೂಟ್ ತೊಟ್ಟುಕೊಂಡ ತುಕಾಲಿ ಮಹಾರಾಜ್, ಮರುಕ್ಷಣವೇ ಮನೆಮಂದಿಗೆ ಅಪ್ಪಣೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ.
‘ಪಿಲ್ಲೊವನ್ನು ತೆಗೆದುಕೊಂಡು ನನಗೆ ಬೀಸು’ ಎಂದು ಕಾರ್ತಿಕ್ಗೆ ಅಪ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ತುಕಾಲಿ ಮಹಾರಾಜರ ಮನಗೆಲ್ಲಲು ಬಿಗ್ಬಾಸ್ ಮನೆಯಲ್ಲಿ ಹೊಸ ರಾಜಕುಮಾರಿ ಅವತರಿಸಿದ್ದಾಳೆ. ಅಪ್ಪಣೆ ಮಾಡುವ ಮುನ್ನವೇ ತುಕಾಲಿ ಅವರಿಗೆ ಅವಸರವಸರವಾಗಿ ಮುತ್ತಿಟ್ಟು ತನ್ನ ಪ್ರೇಮವನ್ನೂ ವ್ಯಕ್ತಪಡಿಸಿದ್ದಾಳೆ. ‘ಎಷ್ಟು ಆತುರದಿಂದ ಕಾಯುತ್ತಿದ್ದೀಯಾ ಎಂದು ಈಗ ಗೊತ್ತಾಯ್ತು’ ಎಂದು ಆ ರಾಜಕುಮಾರಿಯ ಪ್ರೇಮಕ್ಕೆ ಮಹಾರಾಜರೇ ತಬ್ಬಿಬ್ಬಾಗಿದ್ದಾರೆ.
ಅಷ್ಟೇ ಅಲ್ಲ, ಪ್ರತಾಪ್ ಕಂಪನಿಯ ಡ್ರೋಣ್ ಬಿಗ್ಬಾಸ್ ಮನೆಯೊಳಗೆ ಲ್ಯಾಂಡ್ ಆಗಿದೆ. ನೀಲಿ ಬಣ್ಣದ ಈ ಡ್ರೋಣ್ ಚೆಲುವೆಯನ್ನು ನೋಡಿ ಪ್ರತಾಪ್, ಹಳೆಯ ಪ್ರೇಯಸಿಯನ್ನು ಕಂಡಷ್ಟೇ ಉತ್ಸಾಹದಿಂದ ಮುನ್ನುಗ್ಗಿ ಬಂದು ಎತ್ತಿಕೊಂಡಿದ್ದಾರೆ.
ಬಿಗ್ಬಾಸ್ನ ಈ ಸೀಸನ್ ಕೊನೆಯ ದಿನಗಳು ಭಾವುಕತೆ, ಸಾರ್ಥಕತೆ ಮತ್ತು ಭರಪೂರ ಮನರಂಜನೆಯ ನಗುವಿನಲ್ಲಿ ತುಂಬಿಹೋಗುತ್ತಿದೆ. ಮನೆಯೊಳಗಿನ ಆರು ಸ್ಪರ್ಧಿಗಳೂ ತಮ್ಮೆಲ್ಲ ಜಿದ್ದು ಮರೆತು ಈ ಕ್ಷಣದ ಖುಷಿಯಲ್ಲಿ ಕಳೆದುಹೋಗುತ್ತಿದ್ದಾರೆ. ‘ಹ್ಯಾಪಿ ಬಿಗ್ಬಾಸ್’ ಎಂಬ ಟ್ಯಾಗ್ ಲೈನ್ ಅನ್ನು ಅಕ್ಷರಶಃ ಸತ್ಯವಾಗಿಸುತ್ತಿದ್ದಾರೆ.
ಬಿಗ್ಬಾಸ್ ಸೀಸನ್ 10 ಫಿನಾಲೆ ಈ ವಾರಾಂತ್ಯದಲ್ಲಿ ನಡೆಯಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಕೋಟಿ ಜನರ ಕುತೂಹಲಕ್ಕೆ ಉತ್ತರ ಸಿಗಲಿದೆ. ಫಿನಾಲೆಯನ್ನು ಜಿಯೊಸಿನಿಮಾ ಆಪ್ನಲ್ಲಿ ಉಚಿತವಾಗಿ ಎಲ್ಲಿಬೇಕಾದರೂ ನೋಡಬಹುದಾಗಿದೆ.
ಬಿಗ್ ಬಾಸ್ (Bigg Boss Kannada) ಮನೆ ಮತ್ತೊಂದು ವಾರಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಎಂದಿನಂತೆ ನಾಮಿನೇಟ್ ಪ್ರಕ್ರಿಯೆ ಕೂಡ ಆಗಿ ಹೋಗಿದೆ. ಅಚ್ಚರಿಯ ಸಂಗತಿ ಅಂದರೆ, ಈ ವಾರ ನಾಮಿನೇಟ್ ಆದವರಲ್ಲಿ ಅಷ್ಟೂ ಜನರು ಹುಡುಗರೇ ಇದ್ದಾರೆ. ಸಂಗೀತಾ, ನಮ್ರತಾ, ತನಿಷಾ ಈ ವಾರ ಸೇಫ್ ಆಗಿದ್ದಾರೆ. ಸಹಜವಾಗಿಯೇ ವರ್ತೂರು ಸಂತೋಷ್, ಮೈಕಲ್ (Michael), ಕಾರ್ತಿಕ್, ಡ್ರೋನ್ ಪ್ರತಾಪ್ (Drone Pratap) ಮತ್ತು ತುಕಾಲಿ ಸಂತು (Tukali Santu) ನಾಮಿನೇಟ್ ಆಗಿದ್ದಾರೆ. ಸೇಫ್ ಆದವರಲ್ಲಿ ವಿನಯ್ ಪ್ರಮುಖರು.
ಪ್ರತಿ ಸಲವೂ ನಡೆಯುವ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ಐವರ ಹೆಸರು ಇದ್ದೇ ಇರುತ್ತದೆ. ಅದರಲ್ಲೂ ಕೊನೆ ಗಳಿಗೆಯಲ್ಲಿ ಹೇಗೋ ಮೈಕಲ್ ಉಳಿದುಕೊಂಡು ಬಿಡುತ್ತಾರೆ. ಆದರೆ, ಈ ವಾರ ಮೈಕಲ್ ಉಳಿದುಕೊಳ್ಳೋದು ಕಷ್ಟವೆಂದೇ ಹೇಳಲಾಗುತ್ತಿದೆ. ವರ್ತೂರು ಸಂತೋಷ್ ಈ ಬಾರಿ ಭರ್ಜರಿ ಮನರಂಜನೆ ನೀಡಿದ್ದಾರೆ. ಹಾಗಾಗಿ ಸೇಫ್ ಆಗಬಹುದು. ಡ್ರೋನ್ ಪ್ರತಾಪ್ ಮೇಲೆ ಸಾಕಷ್ಟು ಅನುಕಂಪ ಮೂಡಿದೆ. ಅವರಿಗೆ ಹೆಚ್ಚು ವೋಟು ಬರುವ ಮೂಲಕ ಸೇಫ್ ಆಗಬಹುದು. ಕಾರ್ತಿಕ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅವರಿಗೆ ಯಾವುದೇ ತೊಂದರೆ ಆಗದು. ಉಳಿದುಕೊಳ್ಳೋದು ತುಕಾಲಿ ಸಂತು. ಮೈಕಲ್ ಗೆ ಹೋಲಿಸಿದರೆ ತುಕಾಲಿ ಬೆಟರ್. ಹಾಗಾಗಿ ಅವರು ಉಳಿದುಕೊಳ್ಳಬಹುದು.
ಸದ್ಯ ಎಲಿಮಿನೇಷನ್ (Eliminate) ತೂಗು ಕತ್ತಿ ತೂಗ್ತಾ ಇರೋದು ಮೈಕಲ್ ಮೇಲೆ. ಈ ವಾರ ಮೈಕಲ್ ಉಳಿದುಕೊಂಡರು ನಿಜಕ್ಕೂ ಅಚ್ಚರಿ. ಈಗಾಗಲೇ ಎರಡು ಬಾರಿ ಅವರು ಎಲಿಮಿನೇಷನ್ ಕತ್ತಿಯಿಂದ ಬಚಾವ್ ಆಗಿದ್ದಾರೆ. ಈ ಬಾರಿ ಮರುಜೀವ ಸಿಗೋದು ಬಹುತೇಕ ಅನುಮಾನ ಎನ್ನುವ ಮಾತು ಹರಿದಾಡುತ್ತಿದೆ. ಹಾಗಂತ ಮೈಕಲ್ ಕಳಪೆ ಏನೂ ಅಲ್ಲ. ಅದ್ಭುತ ಆಟಗಳನ್ನೇ ಆಡುತ್ತಾ ಬಂದಿದ್ದಾರೆ. ಆದರೆ, ಮನೆಯಲ್ಲಿ ಉಳಿದುಕೊಳ್ಳಲು ಬೇಕಾದ ತಂತ್ರಗಳನ್ನು ಅವರು ಅರಿತುಕೊಂಡಿಲ್ಲ.
ಎಂದಿನಂತೆ ಈ ವಾರ ಒಬ್ಬರು ಮನೆಯಿಂದ ಆಚೆ ಬರುತ್ತಾರೆ. ಮತ್ತೊಬ್ಬರು ಬಿಗ್ ಬಾಸ್ ಮನೆಯಲ್ಲಿ ಮೈನಸ್ ಆಗ್ತಾರೆ. ಸಹಜವಾಗಿಯೇ ಕಂಟೆಸ್ಟೆಂಟ್ ಗಳ ಎದೆಯಲ್ಲಿ ನಡುಕ ಶುರುವಾಗತ್ತೆ. ಮತ್ತಷ್ಟು ಧೈರ್ಯ ತಂದುಕೊಂಡು ಆಡಲೇಬೇಕಾದ ಅನಿವಾರ್ಯತೆ ಇರತ್ತೆ. ಮತ್ತೆ ಜಗಳ, ಮತ್ತೊಂದು ವೀಕೆಂಡ್. ಮುಂದಿನ ವಾರ ಯಾರು ಎಲಿಮಿನೇಟ್ ಆಗ್ತಾರೆ ಅಂತ ನೋಡೋಣ.
ಬಿಗ್ಬಾಸ್ (Bigg Boss Kannada) ಮನೆಯೊಳಗೆ ಇಬ್ಬರು ಹೊಸ ಕಂಟೆಸ್ಟೆಂಟ್ಗಳು ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಅವರು ಮನೆಯೊಳಗಿನ ಸದಸ್ಯರ ಮನಸ್ಥಿತಿಯನ್ನು ಅರಿವು ಮಾಡಿಕೊಳ್ಳುತ್ತಿರುವಾಗಲೇ ಬಿಗ್ಬಾಸ್ ಟಾಸ್ಕ್ ಕೊಟ್ಟಿದ್ದಾರೆ.
ಸ್ವಿಮಿಂಗ್ ಫೂಲ್ನಲ್ಲಿರುವ ನೀರನ್ನು ಬಕೆಟ್ನಲ್ಲಿ ತೆಗೆದುಕೊಂಡು ಕೊಳವೆಯ ಒಳಗೆ ಎಸೆಯಬೇಕು. ಎದುರಾಳಿ ತಂಡದವರು ಅವರ ಗುರಿ ತಪ್ಪುವಂತೆ ಅವರನ್ನು ತಡೆಯಬೇಕು. ಇದು ಟಾಸ್ಕ್. ಆದರೆ ಈ ನೀರಾಟದ ಟಾಸ್ಕ್. ನೀರಿನಾಟದಲ್ಲಿ ಕಿಡಿಹೊತ್ತಿಕೊಂಡಿರುವುದು JioCinemaಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಬಹಿರಂಗಗೊಂಡಿದೆ.
ನೀರಿನ ಆಟ ಆಡುತ್ತಾಡುತ್ತ ಹೋರಾಟವನ್ನೇ ಶುರುಮಾಡಿದ್ದಾರೆ ಮನೆಯ ಸದಸ್ಯರು. ತುಕಾಲಿ ಸಂತೋಷ್ (Tukali Santu) ಅವರನ್ನು ಸ್ನೇಹಿತ್ ತಮ್ಮ ಗುರಾಣಿಯಿಂದ ನೂಕಿದ್ದಾರೆ. ವಿನಯ್ (Vinay) ಅವರಂತೂ ಸಂತೋಷ್ ಅವರನ್ನು ಬೀಳಿಸಿಯೇ ಬಿಟ್ಟಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಸ್ನೇಹಿತ್ ಮತ್ತು ತುಕಾಲಿ ಪರಸ್ಪರ ಡಿಕ್ಕಿ ಹೊಡೆದು ಬಿದ್ದೇ ಬಿಟ್ಟಿದ್ದಾರೆ.
ಕೊನೆಗೆ ತುಕಾಲಿ ಅವರು, ‘ಬೇಕಂತ್ಲೇ ಮಾಡ್ತಿದ್ದಾರೆ. ನಾನು ಆಟ ಆಡಲ್ಲ ಎಂದು ಹೊರಟುಹೋಗಿದ್ದಾರೆ. ವಿನಯ್, ‘ಸತ್ಯವಾಗ್ಲೂ ಬೇಕಂತ ಮಾಡಿಲ್ಲ’ ಎಂದರೂ ಅವರು ಕೇಳಿಲ್ಲ. ವಿನಯ್ ಮತ್ತು ತುಕಾಲಿ ನಡುವೆ ಹೊತ್ತಿಕೊಂಡ ಕಿಡಿ ಏರುತ್ತಲೇ ಹೋಗಿದೆ. ನೀರಿನಾಟದ ಈ ಟಾಸ್ಕ್ ನಲ್ಲಿ ಕೊನೆಗೂ ಗೆದ್ದವರು ಯಾರು? ಸೋತವರು ಯಾರು? ಇಂದು ರಾತ್ರಿ ಗೊತ್ತಾಗಲಿದೆ.
ಆರು ವಾರಗಳನ್ನು ಕಳೆದು ಏಳನೇ ವಾರದಲ್ಲಿರುವ ಬಿಗ್ಬಾಸ್ (Bigg Boss Kannada) ಮನೆಯಲ್ಲಿ ‘ಕಾಂಪಿಟೇಷನ್ ಹೀಟ್’ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಿಸಿ ಈಗ ಸ್ಪರ್ಧಿಗಳ ತಲೆಬೋಳಿಸಿಕೊಳ್ಳುವವರೆಗೂ ಮುಟ್ಟಿದೆ. JioCinema ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಅವರ ತಲೆಯಲ್ಲಿ ಬೋಳಿಸುತ್ತಿರುವ ದೃಶ್ಯ ಜಾಹೀರಾಗಿದೆ.
ಮನೆಯನ್ನು ‘ಗಜಕೇಸರಿ’ ಮತ್ತು ‘ಸಂಪತ್ತಿಗೆ ಸವಾಲ್’ ಎಂಬ ಎರಡು ತಂಡಗಳನ್ನಾಗಿ ವಿಭಾಗಿಸಲಾಗಿದೆ. ‘ಗಜಕೇಸರಿ’ ತಂಡದಲ್ಲಿ ವಿನಯ್, ನಮ್ರತಾ, ಸಂಗೀತಾ (Sangeetha), ಸ್ನೇಹಿತ್, ಸಿರಿ, ಪ್ರತಾಪ್ ಇದ್ದಾರೆ. ‘ಸಂಪತ್ತಿಗೆ ಸವಾಲ್ ತಂಡದಲ್ಲಿ, ‘ಮೈಕಲ್, ನೀತು, ತನಿಷಾ, ವರ್ತೂರು, ಕಾರ್ತಿಕ್ ಮತ್ತು ತುಕಾಲಿ ಸಂತೋಷ್ (Tukali Santu) ಇದ್ದಾರೆ.
ಈ ತಂಡಗಳಿಗೆ ಬಿಗ್ಬಾಸ್ ಎದುರಾಳಿ ತಂಡಕ್ಕೆ ಒಂದಾದ ಮೇಲೆ ಒಂದರಂತೆ ಸವಾಲ್ ಹಾಕುವ ಟಾಸ್ಕ್ ಅನ್ನು ನೀಡಿದ್ದಾರೆ. ಅದರ ಭಾಗವಾಗಿ ಸಂಗೀತಾ, ತನ್ನ ಎದುರಾಳಿ ತಂಡದಲ್ಲಿರುವ ಕಾರ್ತಿಕ್ ಮತ್ತು ತುಕಾಲಿ ಅವರು ತಲೆಯನ್ನು ಕ್ಲೀನ್ ಶೇವ್ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ನಂತರದ ದೃಶ್ಯದಲ್ಲಿ ಕಾರ್ತಿಕ್ (Karthik), ‘ಗೇಮ್ಗಾಗಿ, ತಂಡಕ್ಕಾಗಿ ಏನನ್ನಾದ್ರೂ ಮಾಡ್ತೀನಿ. ಬೋಳಿಸಿಕೊಂಡ್ರೂ ಕೂದಲು ಮತ್ತೆ ಬರತ್ತೆ’ ಎಂದು ಹೇಳಿ ತಲೆಬೋಳಿಸಿಕೊಳ್ಳು ಕೂತಿದ್ದಾರೆ.
ನಿನ್ನೆಯ ನಾಮಿನೇಷನ್ ಟಾಸ್ಕ್ನಲ್ಲಿ ಸಂಗೀತಾ, ಕಾರ್ತಿಕ್ಗೇ ನಾಮಿನೇಷನ್ ಮಾಡಲು ಅಧಿಕಾರ ಕೊಟ್ಟಿದ್ದರು. ಹಾಗೆಯೇ ಕಾರ್ತಿಕ್ ಕೂಡ ಸಂಗೀತಾಗೆ ನಾಮಿನೇಷನ್ ಅಧಿಕಾರ ಕೊಟ್ಟಿದ್ದರು. ಕಾರ್ತಿಕ್ ಜೊತೆಗೆ ಇಷ್ಟು ಸ್ನೇಹದಿಂದ ಇದ್ದ ಸಂಗೀತಾ ಅವರೇ ಕಾರ್ತಿಕ್ಗೆ ತಲೆಬೋಳಿಸಿಕೊಳ್ಳುವ ಸವಾಲ್ ಹಾಕಿದ್ದಾರೆ. ಕಾರ್ತಿಕ್ ಇದನ್ನು ಸ್ವೀಕರಿಸಿದ್ದಾರೆ ಕೂಡ.
ಇದನ್ನೆಲ್ಲ ದಿಗ್ಮೂಢರಾಗಿ ನರೇಂದ್ರ (ಬ್ರಹ್ಮಾಂಡ ಗುರೂಜಿ) ನೋಡುತ್ತ ಕೂತಿರುವುದೂ ಪ್ರೋಮೊದಲ್ಲಿ ಸೆರೆಯಾಗಿದೆ. ಹಾಗಾದ್ರೆ ಏನಾಗ್ತಿದೆ ಬಿಗ್ಬಾಸ್ ಮನೆಯಲ್ಲಿ? ಗೆಲ್ಲುವ ಹಟ ಯಾವ ಅತಿರೇಕಕ್ಕೆ ಸ್ಪರ್ಧಿಗಳನ್ನು ತೆಗೆದುಕೊಂಡು ಹೋಗುತ್ತಿದೆ? ಇದಕ್ಕೆಲ್ಲ ಕಡಿವಾಣ ಬೀಳುತ್ತದೆಯೇ? ಕಾದು ನೋಡಬೇಕಿದೆ.
ಕಳೆದ ಕೆಲವು ದಿನಗಳಿಂದ ತುಕಾಲಿ ಸಂತೋಷ್ (Tukali Santu) ಗಂಭೀರವಾಗಿಬಿಟ್ಟಿದ್ದರು. ಮೊದಲ ವಾರದಲ್ಲಿ ಅವರು ಮಾಡಿದ ಕಾಮಿಡಿಯ ಕ್ವಾಲಿಟಿ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ತರಾಟೆಗೆ ತೆಗೆದುಕೊಂಡಿದ್ದರು. ‘ನಿಮ್ಮ ಕಾಮಿಡಿ ಬೇರೆಯವರ ಮನಸ್ಸನ್ನು ನೋಯಿಸುತ್ತದೆ’ ಎಂಬ ಮಾತು ಪದೇ ಪದೇ ಮನೆಮಂದಿಯ ಬಾಯಲ್ಲಿ ಬರುತ್ತಿತ್ತು. ಇದರಿಂದ ಹಾಸ್ಯ ಮಾಡಲೇ ಹಿಂಜರಿಯುತ್ತಿದ್ದ ತುಕಾಲಿ ಅವರು ಗಂಭೀರವಾಗಿಬಿಟ್ಟಿದ್ದರು. ಮನೆಯೊಳಗಿನ ಸನ್ನಿವೇಶಗಳು, ಟಾಸ್ಕ್ಗಳು ಮತ್ತು ಜಗಳಗಳೂ ಅವರು ಗಂಭೀರವಾಗಲು ಕಾರಣವಿರಬಹುದು.
ಆದರೆ ಈವತ್ತು ಬಿಗ್ಬಾಸ್ (Bigg Boss Kannada) ಮನೆಯಲ್ಲಿ ಮತ್ತೆ ನಗೆಯ ಹೊನಲು ಹರಡಿದೆ. ಆ ನಗೆಯ ಅಲೆಯಲ್ಲಿ ಮನೆಯ ಸದಸ್ಯರು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ನಕ್ಕು ನಲಿದಿದ್ದಾರೆ. ಆ ನಗುವಿಗೆ ಕಾರಣವಾದವರು ತುಕಾಲಿ ಸಂತೋಷ್. ಈವತ್ತಿನ ಎಪಿಸೋಡ್ ಸಖತ್ ಎಂಟರ್ಟೈನಿಂಗ್ ಆಗಿರುತ್ತದೆ ಎಂಬುದರ ಸೂಚನೆ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿಯೇ ಸಿಕ್ಕಿದೆ.
‘ಬಾರೇ ರಾಜಕುಮಾರಿ’ ಎಂದು ಕಾರ್ತಿಕ್ ಅವರು ತುಕಾಲಿ ಸಂತೋಷ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದಾಗ ಇಡೀ ಮನೆಯೇ ದಂಗಾಬಿಟ್ಟಿತ್ತು. ಯಾಕೆಂದರೆ ತುಕಾಲಿ ಅವರ ವೇಷ ಬದಲಾಗಿತ್ತು. ಅವರು ‘ಚೂಡಿದಾರ ತೊಟ್ಟ ಮರಿಜಿಂಕೆ’ಯಾಗಿ ಬದಲಾಗಿದ್ದರು.
ಬಂದವರು ವರ್ತೂರ್ ಸಂತೋಷ್ ಅವರ ಹೆಗಲಿಗೆ ಕೈ ಹಾಕಿ ನುಲಿಯುತ್ತ, ‘ವರ್ತೂ… ಯಾಕೆ ನನ್ನನ್ನ ಬಿಟ್ಬಟ್ಟು ಒಬ್ನೇ ಟೊಮೆಟೊ ಮಾರೋಕೆ ಹೋಗಿದ್ದೆ’ ಎಂದು ಕೇಳಿದಾಗಲಂತೂ ಮನೆಯವರೆಲ್ಲರೂ ಬಿದ್ದು ಬಿದ್ದು ನಗುವಂತಾಯ್ತು.
‘ಇನ್ನೊಂದ್ ವಿಷ್ಯ ಗೊತ್ತಾ? ಯಾವಾಗ ನನ್ನ ತಂಗಿ ಸಿಕ್ರೂ ನಾನು ಜೋರಾಗಿ ತಬ್ಕೋತೀನಿ’ ಎಂದು ನಮ್ರತಾ (Namrata) ಕಡೆಗೆ ಹೋದರೆ, ನಮ್ರತಾಕಿರುಚುತ್ತ ಓಡಿಹೋಗಿಬಿಟ್ಟರು. ಅಷ್ಟೇ ಅಲ್ಲ, ಈ ‘ಹೊಸ ಹುಡುಗಿ’ಯಿಂದ ‘ಪಪ್ಪಿ’ ತೆಗೆದುಕೊಳ್ಳಲು ಪೈಪೋಟಿಯೇ ನಡೆದಿದೆ.