Tag: Trupti Desai

  • ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ- ತೃಪ್ತಿ ದೇಸಾಯಿ

    ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ- ತೃಪ್ತಿ ದೇಸಾಯಿ

    ಮುಂಬೈ: ಕೇರಳ ಸರ್ಕಾರದಿಂದ ರಕ್ಷಣೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನವೆಂಬರ್ 20ರ ನಂತರ ಶಬರಿಮಲೆ ದೇವಸ್ಥಾನಕ್ಕೆ ತೆರಳುವುದಾಗಿ ಬಲಪಂಥೀಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.

    ನವೆಂಬರ್ 20ರ ನಂತರ ನಾನು ಶಬರಿಮಲೆಗೆ ಹೋಗುತ್ತೇನೆ. ನಾವು ಕೇರಳ ಸರ್ಕಾರದಿಂದ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದೇವೆ. ನಮಗೆ ರಕ್ಷಣೆ ನೀಡುವುದು ಬಿಡುವುದು ಅವರಿಗೆ ಬಿಟ್ಟದ್ದು. ರಕ್ಷಣೆ ಒದಗಿಸದಿದ್ದರೂ ನಾನು ದರ್ಶನಕ್ಕಾಗಿ ಶಬರಿಮಲೆಗೆ ಭೇಟಿಯೇ ನೀಡುತ್ತೇನೆ ಎಂದು ತೃಪ್ತಿ ಹೇಳಿದ್ದಾರೆ.

    ಶಬರಿಮಲೆ ದೇವಸ್ಥಾನವನ್ನು ತೆರೆಯುವ ಮುನ್ನ ಕೇರಳ ದೇವಸ್ವಂ ಮಂಡಳಿ ಸಚಿವ ಕೆ.ಸುರೇಂದ್ರನ್ ಈ ಕುರಿತು ಪ್ರತಿಕ್ರಿಯಿಸಿ, ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಾಜ್ಯ ಸರ್ಕಾರ ರಕ್ಷಣೆ ನೀಡುವುದಿಲ್ಲ. ರಕ್ಷಣೆ ಅಗತ್ಯವಿರುವವರು ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು ಎಂದು ತಿಳಿಸಿದರು.

    ತೃಪ್ತಿ ದೇಸಾಯಿ ಅವರಂಥ ಕಾರ್ಯಕರ್ತರು ತಮ್ಮ ಬಲ ತೋರಿಸುವ ಸ್ಥಳವನ್ನಾಗಿ ದೇವಸ್ಥಾನವನ್ನು ನೋಡಬಾರದು. ರಾಜ್ಯ ಸರ್ಕಾರವು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಕ್ಷಣೆ ನೀಡುವುದಿಲ್ಲ. ಅವರಿಗೆ ಪೊಲೀಸ್ ರಕ್ಷಣೆ ಬೇಕಾದರೆ ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.

    ತನ್ನ ಆದೇಶವನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠವು ನ.14ರಂದು ತೀರ್ಪು ನೀಡಿದೆ. ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬೇಕೇ ಬೇಡವೇ ಎಂಬುದರ ಕುರಿತು 3:2 ಅನುಪಾತದಲ್ಲಿ ತೀರ್ಪು ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಏಳು ಸದಸ್ಯರಿರುವ ಪೀಠಕ್ಕೆ ವರ್ಗಾಯಿಸಲಾಗಿದೆ. ಈ ಎಲ್ಲದರ ಮಧ್ಯೆ ಸಚಿವರು ಈ ಹೇಳಿಕೆ ನೀಡಿದ್ದಾರೆ.

    ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠವು ಸೆಪ್ಟೆಂಬರ್ 2018ರಂದು ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ನಂತರ ತೀರ್ಪನ್ನು ಮರು ಪರಿಶೀಲಿಸುವಂತೆ ಹಲವು ಅರ್ಜಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ 7 ಸದಸ್ಯರ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.

    ಮರು ಪರಿಶೀಲನಾ ಅರ್ಜಿಯಲ್ಲಿ ಜನರ ನಂಬಿಕೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿರುವ ಅಧಿಕಾರದ ಕುರಿತು ಪ್ರಶ್ನಿಸಲಾಗಿದೆ. ಅಲ್ಲದೆ ದೇವಾಲಯದ ದೇವತೆ ಬ್ರಹ್ಮಚಾರಿ ಹಾಗೂ ಮುಟ್ಟಾದ ಮಹಿಳಾ ಆರಾಧಕರ ಪ್ರವೇಶದಿಂದ ಶತಮಾನಗಳಷ್ಟು ಹಳೆಯ ನಂಬಿಕೆಗೆ ಧಕ್ಕೆಯಾಗಲಿದೆ ಎಂದು ವಾದಿಸಲಾಗಿದೆ.

  • ಶಬರಿಮಲೆ ಭಕ್ತರಿಗೆ ಜಯ: ತೃಪ್ತಿ ದೇಸಾಯಿಂದ ಪುಣೆಗೆ ರಿಟರ್ನ್ ಟಿಕೆಟ್ ಬುಕ್

    ಶಬರಿಮಲೆ ಭಕ್ತರಿಗೆ ಜಯ: ತೃಪ್ತಿ ದೇಸಾಯಿಂದ ಪುಣೆಗೆ ರಿಟರ್ನ್ ಟಿಕೆಟ್ ಬುಕ್

    ಕೊಚ್ಚಿ: ಶಬರಿಮಲೆ ದೇವಾಲಯವನ್ನು ಪ್ರವೇಶಿಸಿಯೇ ಸಿದ್ಧ ಎಂದು ಹಠ ಹಿಡಿದಿದ್ದ ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ಭಕ್ತರ ಪ್ರತಿಭಟನೆಗೆ ಮಣಿದು ಪುಣೆಗೆ ಮರಳುವುದಾಗಿ ಹೇಳಿದ್ದಾರೆ. ಈ ಮೂಲಕ ಸತತ 18 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದ ಭಕ್ತರಿಗೆ ಜಯ ಸಿಕ್ಕಿದೆ.

    ಎಷ್ಟು ದಿನವಾದರೂ ಪರವಾಗಿಲ್ಲ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿಯೇ ನೀಡುತ್ತೇನೆ. ಅದಕ್ಕಾಗಿ ಮರಳಿ ಟಿಕೆಟ್ ಬುಕ್ ಮಾಡಿಲ್ಲ ಎಂದು ಹೇಳಿದ್ದ ತೃಪ್ತಿ ದೇಸಾಯಿ ಶುಕ್ರವಾರ ಬೆಳಗ್ಗೆ 4.30ಕ್ಕೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

    ತೃಪ್ತಿ ಬರುತ್ತಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿಯೇ ಕೊಚ್ಚಿ ವಿಮಾನ ನಿಲ್ದಾಣದ ಹೊರ ಆವರಣದಲ್ಲಿ ಶಬರಿಮಲೆಯ ಭಕ್ತರು, ಬಿಜೆಪಿ, ಆರ್‍ಎಸ್‍ಎಸ್, ಹಿಂದೂಪರ ಸಂಘಟನೆಯ ಸದಸ್ಯರು ಹೊರ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ್ದರು.

    ಯಾವುದೇ ಕಾರಣಕ್ಕೆ ನಾವು ತೃಪ್ತಿ ದೇಸಾಯಿ ಅವರನ್ನು ನಿಲ್ದಾಣದಿಂದ ಹೊರ ಬರಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ದಿಗ್ಭಂದನ ಹಾಕಿದ್ದರು. ಈ ಸಮಯದಲ್ಲಿ ತೃಪ್ತಿ ಅವರು ಶಬರಿಮಲೆಗೆ ತೆರಳಲು ಟ್ಯಾಕ್ಸಿ ಬುಕ್ ಮಾಡಿದ್ದರೂ ಟ್ಯಾಕ್ಸಿ ಚಾಲಕರು ಸಹ ಶಬರಿಮಲೆಗೆ ಬರುವುದಿಲ್ಲ ಎಂದು ಹೇಳಿದ್ದರು.

    ನಾವು ತೃಪ್ತಿ ದೇಸಾಯಿ ಅವರನ್ನು ಕರೆದುಕೊಂಡು ಹೋಗುವುದಿಲ್ಲ. ಬೇಕಾದರೆ ಪೊಲೀಸ್ ಭದ್ರತೆಯಲ್ಲಿ ಅಥವಾ ಸ್ವಂತ ವಾಹನದಲ್ಲಿ ಹೋಗಲಿ ಎಂದು ತಿಳಿಸಿದ್ದರು. ಈ ನಡುವೆ ಕೊಚ್ಚಿ ತಹಶೀಲ್ದಾರ್ ಅವರು ತೃಪ್ತಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರೂ ಅದು ಫಲ ನೀಡಲಿಲ್ಲ.

    ಭಕ್ತರ ಪ್ರತಿಭಟನೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ತೃಪ್ತಿ ಮತ್ತು ಅವರ ತಂಡ ಕಾನೂನು ತಜ್ಞರ ಜೊತೆ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಮಾಡಲು ಮುಂದಾದರೆ ಹೇಗೆ ಎಂದು ಚರ್ಚಿಸಿದರು. ತೃಪ್ತಿ ವಿಮಾನ ನಿಲ್ದಾಣದಿಂದ ತೆರಳುವವರೆಗೂ ನಾವು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತ ಕಾರಣ ಅನಿವಾರ್ಯವಾಗಿ ಸಿಐಎಸ್‍ಎಫ್(ಕೇಂದ್ರ ಗೃಹ ಕೈಗಾರಿಕಾ ಭದ್ರತಾ ಪಡೆ) ಅಧಿಕಾರಿಗಳು ಮಧ್ಯಪ್ರವೇಶಿಸಿದ್ದರು.

    ವಿಮಾನ ನಿಲ್ದಾಣದ ಆವರಣದಲ್ಲಿ ಕಳೆದ 13 ಗಂಟೆಯಿಂದ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ಇಲ್ಲಿಗೆ ಆಗಮಿಸುವ ಮತ್ತು ಇಲ್ಲಿಂದ ತೆರಳುವ ಪ್ರಯಾಣಿಕರಿಗೆ ಭಾರೀ ತೊಂದರೆಯಾಗುತ್ತಿದೆ. ಹೀಗಾಗಿ ಶಬರಿಮಲೆಗೆ ತೆರಳುವ ತಮ್ಮ ನಿರ್ಧಾರವನ್ನು ಪರಿಶೀಲಿಸುವುದು ಉತ್ತಮ ಎಂದು ಸಿಐಎಸ್‍ಎಫ್ ಅಧಿಕಾರಿಗಳು ಸಲಹೆ ನೀಡಿದ್ದರು. ಕೊನೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದ ತೃಪ್ತಿ ಮರಳಿ ಪುಣೆಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದಾರೆ. ಇಂದು ರಾತ್ರಿ 9.25ರ ಏರ್ ಇಂಡಿಯಾ 055 ವಿಮಾನದಲ್ಲಿ ತೃಪ್ತಿ ಮತ್ತು ಅವರ ತಂಡ ಪುಣೆಗೆ ಹೋಗಲು ಟಿಕೆಟ್ ಬುಕ್ ಆಗಿದೆ.

    ಪುಣೆ ಮೂಲದ ಭೂ ಮಾತಾ ಬ್ರಿಗೇಡ್ ಸಂಘಟನೆ ನಡೆಸುತ್ತಿರುವ ತೃಪ್ತಿ ದೇಸಾಯಿ ಮಹಿಳಾ ಹಕ್ಕುಗಳ ಪರ ಹೋರಾಟ ನಡೆಸುತ್ತಿದ್ದಾರೆ. ಅಹಮದ್ ನಗರ ಜಿಲ್ಲೆಯ ಶನಿ ಶಿಂಘ್ನಪುರ ದೇವಾಲಯ, ಕೊಲ್ಲಾಪುರ ಜಿಲ್ಲೆಯ ಮಹಾಲಕ್ಷ್ಮೀ ದೇವಾಲಯ ಮತ್ತು ನಾಸಿಕ್ ಜಿಲ್ಲೆಯ ತ್ರಿಯಂಬಕ್ ಶಿವಾ ದೇವಾಲಯ ಮತ್ತಿತರ ಕಡೆಗಳಲ್ಲಿ ಮಹಿಳೆಯರ ವಿರುದ್ಧ ತಾರಾತಮ್ಯ ವಿರುದ್ಧ ಹೋರಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews