Tag: Tourist

  • ಸೈಂಟ್ ಮೇರೀಸ್‍ನಲ್ಲೇ ರಾತ್ರಿ ಕಳೆದ ತಂಡ- ನಾಲ್ವರ ಹೇಳಿಕೆಗಳಿಂದ ಹುಟ್ಟಿದೆ ಅನುಮಾನ

    ಸೈಂಟ್ ಮೇರೀಸ್‍ನಲ್ಲೇ ರಾತ್ರಿ ಕಳೆದ ತಂಡ- ನಾಲ್ವರ ಹೇಳಿಕೆಗಳಿಂದ ಹುಟ್ಟಿದೆ ಅನುಮಾನ

    ಉಡುಪಿ: ಜಿಲ್ಲೆಯ ಮಲ್ಪೆ ಸಮೀಪದ ಸೈಂಟ್ ಮೇರೀಸ್ ಐಲ್ಯಾಂಡ್‍ಗೆ ಪ್ರವಾಸಕ್ಕೆ ತೆರಳಿದ್ದ ಗೆಳೆಯರ ತಂಡ ರಾತ್ರಿ ಅಲ್ಲೇ ಕಳೆದು ಬೆಳಗ್ಗೆ ವಾಪಾಸ್ಸಾದ ಘಟನೆ ನಡೆದಿದೆ.

    ಸೈಂಟ್ ಮೇರೀಸ್‍ಗೆ ಪ್ರವಾಸ ಹೋದವರು ಸಂಜೆ ವಾಪಾಸ್ ಬರಬೇಕು ಎಂಬೂದು ನಿಯಮ. ಆದರೆ ಕೇರಳದ ಶೀಜಾ, ಜೋಸ್, ಹರೀಶ್ ಮತ್ತು ಜಸ್ಟಿನ್ ಅಲ್ಲೇ ಉಳಿದುಕೊಂಡು ಭಾನುವಾರ  ವಾಪಾಸ್ಸಾಗಿದ್ದಾರೆ.

    ವಾಪಾಸ್ ಬರುತ್ತಿದ್ದಂತೆ ನಮ್ಮನ್ನು ಕರೆದುಕೊಂಡು ಹೋದ ಬೋಟ್ ಬಿಟ್ಟು ಬಂದಿದೆ. ವಾಪಾಸ್ ಕರೆದುಕೊಂಡು ಬಂದಿಲ್ಲ. ರಾತ್ರಿಯಿಡೀ ಬೋಟ್ ಗಾಗಿ ಕಾದರೂ ಬೋಟ್ ಗಳು ಬಂದಿಲ್ಲ ಎಂದು ದೂರಿದ್ದಾರೆ. ಇತ್ತ ಬೋಟ್ ಮಾಲೀಕರು, ಬೋಟ್ ಬರುವ ಸಂದರ್ಭದಲ್ಲಿ ಈ ನಾಲ್ವರು ಕಾಣಿಸಿಕೊಂಡಿಲ್ಲ. ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ ಎಂದು ದೂರಿದ್ದಾರೆ.

    ಸೈಂಟ್ ಮೇರೀಸ್‍ನಲ್ಲಿ ವಾಸ್ತವ್ಯ ಹೂಡುವಂತಿಲ್ಲ. ನಾಲ್ವರ ಹೇಳಿಕೆಗಳನ್ನು ಗಮನಿಸಿದಾಗ ಹೇಳಿಕೆಗಳು ತದ್ವಿರುದ್ಧವಾಗಿದೆ. ಬೋಟ್ ವಾಪಾಸ್ ಬರುವ ಸಂದರ್ಭ ಅಲ್ಲೇ ರಾತ್ರಿ ಕಳೆಯುವ ಉದ್ದೇಶ ಅವರದ್ದಾಗಿತ್ತು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಸೈಂಟ್ ಮೇರೀಸ್ ದ್ವೀಪದಲ್ಲಿ ಕೂಡ ಸೆಕ್ಯೂರಿಟಿ ನೇಮಿಸಲಾಗುವುದು ಎಂದು ಪ್ರವಾಸೋದ್ಯಮ ಸಮಿತಿ ಹೇಳಿದೆ.

    ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

  • ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ಚಿಕ್ಕಮಗಳೂರು: ಚಳಿಗಾಲ ಆರಂಭವಾಗಿದ್ದು, ಕಾಫಿನಾಡಿನ ಫಾಲ್ಸ್‌ಗಳಿಗೆ ಜೀವಕಳೆ ಬಂದು ಗಿರಿಯ ಪ್ರಕೃತಿ ವಿಸ್ಮಯವನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಚಳಿಯ ಗಾಳಿಯೊಂದಿಗಿನ ಮಂಜಿನಾಟ ನೋಡುಗರಿಗೆ ರಸದೌತಣ. ಇಲ್ಲಿನ ಮನಮೋಹಕ ತಾಣಗಳಿಗೆ ಫಿದಾ ಆಗಿರುವ ಪ್ರವಾಸಿಗರಿಗೆ ಕಾಫಿನಾಡೆಂದರೆ ಪುಣ್ಯಭೂಮಿ. ಅದರಲ್ಲೂ ಈ ಬಾರಿ ನವೆಂಬರ್ ನ ಚಳಿಯಲ್ಲೂ ಕಾಫಿನಾಡಿನ ಫಾಲ್ಸ್‌ಗಳು ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

    ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತಗಳು ನವೆಂಬರ್-ಡಿಸೆಂಬರ್ ವೇಳೆಗೆ ಶಾಂತವಾಗಿರುತ್ತವೆ. ಆದರೆ ಈ ಬಾರಿ ಗಿರಿಯಲ್ಲಿನ ನಿರಂತರ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರಿನ ಹೊನ್ನಮ್ಮನ ಹಳ್ಳ, ಕಲ್ಲತ್ತಿಗರಿ, ಝರಿ ಫಾಲ್ಸ್‌ಗಳು ನವೆಂಬರ್ ನ ಚಳಿಯಲ್ಲೂ ನೋಡುಗರಿಗೆ ಸಿಕ್ಕಾಪಟ್ಟೆ ಕಿಕ್ ಕೊಡುತ್ತಿವೆ.

    ಕಾಫಿನಾಡಿನ ಗಿರಿಭಾಗದ ಯಾವುದೇ ಸ್ಥಳಕ್ಕೆ ಹೋಗಬೇಕೆಂದರೂ ಈ ಝರಿಯೇ ಜಂಕ್ಷನ್, ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವ ಪ್ರವಾಸಿಗರೆಲ್ಲ ಈ ಮಿನಿ ಜಲಪಾತದಲ್ಲಿ ಮಿಂದೇಳದೆ ಮುಂದೆ ಹೋಗಲ್ಲ. ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರತಿಯೊಬ್ಬರೂ ಇಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ನೀರಲ್ಲಿ ಆಡಿ, ಫೋಟೋ ಶೂಟ್ ಮಾಡಿಸಿಕೊಂಡೇ ಮುಂದೆ ಹೋಗುತ್ತಾರೆ.

    ಚಿಕ್ಕಮಗಳೂರಿನ ಕೈ ಮರದಿಂದ ಹೊರಟರೆ, ಹಾವು ಬಳುಕಿನ ಮೈಕಟ್ಟಿನ ರಸ್ತೆಯುದ್ದಕ್ಕೂ ಎಂಜಾಯ್ ಮಾಡುತ್ತಲೇ ಸಾಗುವ ಪ್ರವಾಸಿಗರು ಗಿರಿಭಾಗಕ್ಕೆ ಎಂಟ್ರಿ ಕೊಟ್ಟ ಕೂಡಲೇ ಹೆಜ್ಜೆ-ಹೆಜ್ಜೆಗೂ ಮಲೆನಾಡನ್ನ ಸುಖಿಸುತ್ತಾರೆ. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ನೋಡ-ನೋಡುತ್ತಿದ್ದಂತೆಯೇ ಮೋಡ ದಾರಿಯೇ ಕಾಣದಂತೆ ಕವಿದರೆ, ಕ್ಷಣಾರ್ಧದಲ್ಲಿ ತಣ್ಣಗೆ ಬೀಸುವ ಗಾಳಿ ಪ್ರವಾಸಿಗರ ಅನುಕೂಲಕ್ಕೆಂದೇ ಇದೆ ಏನೋ ಎಂದು ಅನ್ನಿಸುತ್ತೆ.

    ಇಲ್ಲಿನ ಗಾಳಿ ಹಾಗೂ ಮೋಡದ ನಡುವಿನ ಚೆಲ್ಲಾಟ ನೋಡುಗರಿಗೆ ಇನ್ನಷ್ಟು ಖುಷಿ ನೀಡುತ್ತಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳ ಮೇಲೆ ನಿಂತು ಪ್ರಕೃತಿ ಸೌಂದರ್ಯ ಸವಿಯುವುದೇ ಪ್ರವಾಸಿಗರಿಗೆ ಬಲು ಪ್ರೀತಿ. ಇಂತಹ ಸಂಪದ್ಭರಿತ ನಾಡಿಗೆ ವರ್ಷಕ್ಕೆ ಮೂರ್ನಾಲ್ಕು ಬಾರಿಯಾದರೂ ಬರಬೇಕು ಎನ್ನುವುದು ಅದೆಷ್ಟೋ ಪ್ರವಾಸಿಗರ ಆಸೆಯಾಗಿದೆ. ಕಾಫಿನಾಡಲ್ಲಿ ಇಂತಹ ಅದೆಷ್ಟೋ ನೈಸರ್ಗಿಕ ತಾಣಗಳಿವೆ. ಅವುಗಳಲ್ಲಿ ಬೆಳಕಿಗೆ ಬಂದಿರುವುದು ಒಂದೆರೆಡಾದರೆ, ಬಾರದಿರೋದು ಹತ್ತಾರು ಇವೆ.

  • ರಸ್ತೆಯ ಬದಿಯಲ್ಲಿರೋ ತೆಂಗಿನ ಮರಗಳ ಜೊತೆ ಸೆಲ್ಫಿ ತೆಗೆದ್ರೆ 500 ರೂ. ಚಾರ್ಜ್

    ರಸ್ತೆಯ ಬದಿಯಲ್ಲಿರೋ ತೆಂಗಿನ ಮರಗಳ ಜೊತೆ ಸೆಲ್ಫಿ ತೆಗೆದ್ರೆ 500 ರೂ. ಚಾರ್ಜ್

    ಪಣಜಿ: ರಸ್ತೆಯ ಬದಿಯಲ್ಲಿರುವ ಮರಗಳ ಫೋಟೋವನ್ನು ನೀವು ತೆಗೆದಿರಬಹುದು. ಆದರೆ ಗೋವಾದ ಗ್ರಾಮವೊಂದರಲ್ಲಿ ರಸ್ತೆ ಬದಿಯಲ್ಲಿರುವ ತೆಂಗಿನ ಮರಗಳ ಫೋಟೋ ಕ್ಲಿಕ್ಕಿಸಬೇಕಾದರೆ 500 ರೂ. ಶುಲ್ಕ ನೀಡಬೇಕು.

    ಪ್ರವಾಸಕ್ಕೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಇದು ಏನು ಎಂದು ಕೇಳಬಹುದು. ಆದರೆ ಇದು ನಿಜ. ಉತ್ತರ ಗೋವಾದಲ್ಲಿ ಒಂದು ಗ್ರಾಮವಿದೆ. ಇದು ಸ್ವಚ್ಛತೆ ಹಾಗೂ ರಸ್ತೆ ಬದಿಯಲ್ಲಿ ಸಾಲಗಿ ನೆಟ್ಟಿರುವ ತೆಂಗಿನ ಮರಗಳ ಸೌಂದರ್ಯಕ್ಕೆ ಭಾರತದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿ ಬರುವ ಪ್ರವಾಸಿಗರು ಈ ತೆಂಗಿನ ಮರಗಳ 1 ಫೋಟೋ ತೆಗೆದುಕೊಂಡರೆ 100 ರಿಂದ 500 ರೂ.ವರೆಗೆ ಶುಲ್ಕ ಕಟ್ಟಬೇಕು.

    ಹೌದು. ಮಾಜಿ ರಕ್ಷಣಾ ಮಂತ್ರಿ, ದಿವಂಗತ ಮನೋಹರ್ ಪರಿಕ್ಕರ್ ಅವರ ಪೂರ್ವಜರ ಹಳ್ಳಿಯಾದ ಪರ್ರಾ ಗ್ರಾಮದಲ್ಲಿ ಫೋಟೋ ತೆಗೆದರೂ ಶುಲ್ಕ ಕಟ್ಟಬೇಕು. ಪರ್ರಾ ಗ್ರಾಮದ ರಸ್ತೆ ಅಕ್ಕಪಕ್ಕದಲ್ಲಿ ಸಾಲಾಗಿ ತೆಂಗಿನ ಮರಗಳು ಇವೆ. ಜೊತೆಗೆ ಈ ಗ್ರಾಮ ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಗೋವಾದ ಪ್ರಮುಖ ಪ್ರವಾಸಿತಾಣಗಳಲ್ಲಿ ಈ ಗ್ರಾಮವು ಒಂದಾಗಿದೆ.

    ಪರ್ರಾ ಗ್ರಾಮದ ಸುಂದರ ನೋಟಕ್ಕೆ ಮನಸೋಲದವರೇ ಇಲ್ಲ. ಹಲವು ಬಾಲಿವುಡ್, ಹಾಲಿವುಡ್ ಚಿತ್ರಗಳು ಕೂಡ ಪರ್ರಾ ಗ್ರಾಮದಲ್ಲಿ ಚಿತ್ರೀಕರಣಗೊಂಡಿದೆ. ಹೀಗಾಗಿ ಪರ್ರಾ ಗ್ರಾಮ ಪಂಚಾಯ್ತಿ ಇಲ್ಲಿಗೆ ಬರುವ ಪ್ರವಾಸಿಗರಿಂದ ಸ್ವಚ್ಛತಾ ತೆರಿಗೆಯನ್ನು ಸಂಗ್ರಹಿಸುತ್ತದೆ. ಈ ಗ್ರಾಮದಲ್ಲಿ ಪ್ರವಾಸಿಗರು 1 ಫೋಟೋ ತೆಗೆದುಕೊಂಡರೆ 500 ರೂ.ವರೆಗೂ ಗ್ರಾಮ ಪಂಚಾಯ್ತಿ ಶುಲ್ಕ ನಿಗದಿಗೊಳಿಸಿದೆ.

    ಜೊತೆಗೆ ಶುಲ್ಕ ಕಟ್ಟಿದ ಪ್ರವಾಸಿಗರಿಗೆ ರಶೀದಿಯನ್ನು ಕೊಡಲಾಗುತ್ತದೆ. ಅಲ್ಲದೆ ಪ್ರವಾಸಿಗರಿಗೆ ಬೇರೆ ಶುಲ್ಕ, ವಾಣಿಜ್ಯ ಚಿತ್ರೀಕರಣಕ್ಕೆ ಬೇರೆ ಶುಲ್ಕವನ್ನು ಪಂಚಾಯ್ತಿ ನಿಗದಿಗೊಳಿಸಿದೆ. ಆದರೆ ಪರ್ರಾದ ಗ್ರಾಮ ಪಂಚಾಯ್ತಿಯ ಈ ಕ್ರಮಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸೌಂದರ್ಯ ಕಣ್ತುಂಬಿಕೊಂಡು, ಆ ಕ್ಷಣವನ್ನು ಸೆರೆಹಿಡಿದುಕೊಳ್ಳಲು ಪ್ರವಾಸಿಗರು ಬಯಸುತ್ತಾರೆ. ಆದರೆ 1 ಫೋಟೋ ತೆಗೆದುಕೊಳ್ಳಲು ಇಷ್ಟೆಲ್ಲಾ ಶುಲ್ಕ ನಿಗದಿಗೊಳಿಸಿರುವುದು ಸರಿಯಲ್ಲ. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ ಎಂದು ವಿರೋಧಿಸಿದ್ದಾರೆ.

    ಹಾಗೆಯೇ ಈ ಬಗ್ಗೆ ಪ್ರವಾಸಿಗರೊಬ್ಬರು ತಮ್ಮ ಸ್ನೇಹಿರೊಬ್ಬರಿಗೆ ಪರ್ರಾದಲ್ಲಿ ಫೋಟೋ ತೆಗೆದುಕೊಂಡಿದ್ದಕ್ಕೆ ಶುಲ್ಕ ವಿಧಿಸಿ, ರಶೀದಿ ಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರು ಪರ್ರಾದ ಸುಂದರ ರಸ್ತೆಯಲ್ಲಿ ಒಂದೇ ಒಂದು ಫೋಟೋ ತೆಗೆದುಕೊಂಡಿದಕ್ಕೆ ಅವರಿಂದ ಅಲ್ಲಿನ ಪಂಚಾಯ್ತಿ 500 ರೂ. ಶುಲ್ಕ ಪಡೆದಿದೆ. ಇದು ನಿಜಕ್ಕೂ ಗಂಭೀರವಾದ ವಿಚಾರ. ಈ ಕ್ರಮದಿಂದ ಪ್ರವಾಸಿಗರು ಗೋವಾಕ್ಕೆ ಬರಲು ಹಿಂದೇಟು ಹಾಕುವಂತ ಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದಾರೆ.

    ಈ ಬಗ್ಗೆ ಗೋವಾದ ಪ್ರವಾಸ ಮತ್ತು ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸ್ಯಾವಿಯೋ ಅವರು ಪ್ರತಿಕ್ರಿಯಿಸಿ, ಇದು ಪರ್ರಾ ಪಂಚಾಯ್ತಿ ಪ್ರವಾಸಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಹೀಗೆ 1 ಫೋಟೋಗೆ 500 ರೂ. ಶುಲ್ಕ ನಿಗಧಿಗೊಳಿಸಿರುವುದು ತಪ್ಪು. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ. ಈ ರೀತಿ ಶುಲ್ಕವನ್ನು ಪರ್ರಾದಲ್ಲಿ ಚಿತ್ರೀಕರಣ ಅಥವಾ ಖಾಸಗಿ ಫೋಟೋಶೂಟ್ ಮಾಡಿಸುವವರ ಬಳಿ ಪಡೆಯಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪ್ರವಾಸಿಗರ ಬಳಿ ಈ ರೀತಿ ಹಣ ಪಡೆಯುವುದು ಸುಲಿಗೆ ಮಾಡಿದ ಸಮಾನವಾಗುತ್ತೆ ಎಂದು ಕಿಡಿಕಾರಿದ್ದಾರೆ.

    ಪ್ರವಾಸಿಗರ ವಿರೋಧಗಳಿಗೆ ಪರ್ರಾ ಸರ್ಪಂಚ್ ಲೋಬೋ ಅವರು ಪ್ರತಿಕ್ರಿಯಿಸಿ, ನಾವು ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದೇವೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ರಸ್ತೆಗಳಲ್ಲಿ ಕಸಗಳನ್ನು ಎಸೆಯುತ್ತಾರೆ. ಸೀನರಿ ಸುಂದರವಾಗಿದೆ ಎಂದು ರಸ್ತೆ ಮಧ್ಯೆ ವಾಹನ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಇದರಿಂದ ಟ್ರಾಫಿಕ್ ಜ್ಯಾಮ್ ಆಗುತ್ತದೆ. ಈ ಬಗ್ಗೆ ಯಾರೂ ಯೋಚನೆ ಮಾಡಲ್ಲ. ನಾವು ಶುಲ್ಕ ನಿಗಧಿಗೊಳಿಸಿರುವುದನ್ನ ವಿರೋಧಿಸುತ್ತಾರೆ. ಆದರೆ ಪ್ರವಾಸಿಗರು ಗ್ರಾಮಕ್ಕೆ ಭೇಟಿನೀಡಿ ಮಾಡುವ ತೊಂದರೆ ಬಗ್ಗೆ ಯಾರು ಮಾತನಾಡಲ್ಲ. ಅವರ ಹಾವಳಿ ನಿಯಂತ್ರಿಸಲು ನಾವು ಶುಲ್ಕ ನಿಗದಿಗೊಳಿಸಿದ್ದೇವೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

  • ಬರದ ನಾಡಿನಲ್ಲಿ ಕಣ್ಮನ ತಣಿಸುವ ಹುಚ್ಚಯ್ಯನಕಟ್ಟೆ ವೈಭವ

    ಬರದ ನಾಡಿನಲ್ಲಿ ಕಣ್ಮನ ತಣಿಸುವ ಹುಚ್ಚಯ್ಯನಕಟ್ಟೆ ವೈಭವ

    ಚಾಮರಾಜನಗರ: ಕ್ಯಾರ್ ಚಂಡ ಮಾರುತದ ಎಫೆಕ್ಟ್ ಬರದನಾಡಿನ ಕರೆ ಕಟ್ಟೆಗಳು ಧುಮ್ಮಿಕುವಂತೆ ಮಾಡಿದೆ. ಹಸಿರು ಕಾನನದ ನಡುವೆ ಹಾಲ್ನೊರೆಯಂತಹ ಝುಳು ಝಳು ನಾದದೊಂದಿಗೆ ಧುಮ್ಮಿಕುತ್ತಿರುವ ಜಲರಾಶಿಗೆ ಪ್ರವಾಸಿಗರು ಮೈಯೊಡ್ಡಿ ಪುಳಕಗೊಳ್ಳುತ್ತಿದ್ದಾರೆ. ತಣ್ಣನೆಯ ನೀರು ದೇಹಕ್ಕೆ ತಂಪು ನೀಡಿದರೆ, ಅಚ್ಚ ಹಸಿರಾದ ಪ್ರಕೃತಿಯ ಸೌಂದರ್ಯ ಕಣ್ಣಿಗೆ ಕಂಪು ನೀಡುತ್ತಿದೆ. ಕಿರು ಜಲಾಶಯದ ವೈಭವಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.

    ಹಸಿರಾದ ಪ್ರಕೃತಿ ಸೌಂದರ್ಯದ ಮಧ್ಯೆ ಮೈದುಂಬಿ ಹರಿಯುತ್ತಿರುವ ಕಿರು ಜಲಾಶಯ ಎಲ್ಲರ ಗಮನ ಸೆಳೆಯುತ್ತಿದೆ. ಈ ಸುಂದರ ದೃಶ್ಯ ಕಾಣಸಿಗುತ್ತಿರುವುದು ಯಾವುದೋ ಖಾಸಗಿ ರೆಸಾರ್ಟ್ ಆಗಲಿ, ದುಬಾರಿಯಾದ ಖಾಸಗಿ ಮನೋರಂಜನೆಯ ಪಾರ್ಕ್ ಗಳಲ್ಲಿಯಾಗಲಿ ಅಲ್ಲ, ಬದಲಿಗೆ ಬಿರು ಬಿಸಿಲಿಗೆ ಹೆಸರಾದ ಗಡಿನಾಡು ಚಾಮರಾಜನಗರದಲ್ಲಿ. ಹೌದು. ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ಕೇವಲ 15 ಕಿಲೋ ಮೀಟರ್ ದೂರದ ಲಕ್ಷ್ಮಿಪುರ ಬಳಿ ಇರುವ ಹುಚ್ಚಪ್ಪನಕಟ್ಟೆ ಕಿರು ಜಲಾಶಯ ಈಗ ಪ್ರವಾಸಿಗರ ಅಚ್ಚು ಮೆಚ್ಚಿನ ಹಾಟ್ ಸ್ಪಾಟ್ ಆಗಿದೆ. ಸುಮಾರು 20 ಅಡಿ ಎತ್ತರದಿಂದ ಝುಳು ಝಳು ನಾದದೊಂದಿಗೆ ಧುಮ್ಮುಕ್ಕುತ್ತಿರುವ ಹಾಲ್ನೋರೆಯಂತ, ತಣ್ಣನೆಯ ಸ್ವಚ್ಚ ನೀರಿಗೆ ಮೈಯೊಡ್ಡಿ ವಯಸ್ಸಿನ ಹಂಗಿಲ್ಲದೆ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.

    ಅಚ್ಚರಿ ಎನಿಸಿದರೂ ಇದು ಸತ್ಯ. ಗಡಿನಾಡು ಚಾಮರಾಜನಗರದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೂ ಕೂಡ ಚಾಮರಾಜನಗರ ತಾಲೂಕಿನ ಲಕ್ಷ್ಮಿಪುರ ಬಳಿಯ ಹುಚ್ಟಯ್ಯನ ಕಟ್ಟೆಯ ಕಿರು ಜಲಾಶಯ ಮಾತ್ರ ಮೈದುಂಬಿ ಹರಿಯುತ್ತಿದೆ. ಪ್ರಕೃತಿ ಸೌಂದರ್ಯ ಮಧ್ಯೆ ಇರುವ ಹುಚ್ಚಯ್ಯನ ಕಟ್ಟೆಗೆ ಬ್ರಿಟಿಷರು ಕಿರು ಅಣೆಕಟ್ಟು ಕಟ್ಟಿದ್ದರು. ನಂತರದ ದಿನಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದಂತೆ ಜಲಾಶಯದ ಅಂದ ಕಡಿಮೆಯಾಗಿತ್ತು.

    ಆದರೆ ಕಳೆದ 2 ವಾರದಿಂದ ಹುಚ್ಚಯ್ಯನಕಟ್ಟೆ ಜಲಾಶಯಕ್ಕೆ ಮರುಜೀವ ಬಂದಿದೆ. ಜಲಾಶಯಕ್ಕೆ ಮರುಜೀವ ಬರಲು ಕಾರಣ ಮಹಾ ಮಳೆಯ ಎಫೆಕ್ಟ್ ಮತ್ತು ರಾಜ್ಯ ಸರ್ಕಾರದ ಕರೆಗೆ ನೀರು ತುಂಬಿಸುವ ಮಹತ್ವಪೂರ್ಣ ಯೋಜನೆ. ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ತಂದಿತ್ತು. ಇದರ ಫಲವಾಗಿ ಹಲವು ವರ್ಷಗಳ ನಂತರ ಜಲಾಶಯಕ್ಕೆ ಜೀವಕಳೆ ಬಂದಿದೆ. ಜೊತೆಗೆ ಮಹಾ ಮಳೆಯಿಂದಾಗಿ ಎಡ ಬಿಡದೇ ನೀರು ಹರಿದು ಬರುತ್ತಿದ್ದು, ಹುಚ್ಚಯ್ಯನಕಟ್ಟೆ ಕಿರು ಜಲಾಶಯದ ಸೌಂದರ್ಯವನ್ನ ಹೆಚ್ಚಿಸಿದೆ.

    ಈ ಸುಂದರ ಜಲರಾಶಿಯ ರಮಣೀಯತೆ ಬಗ್ಗೆ ಬಾಯಿಂದ ಬಾಯಿಗೆ ಹರಡಿ ದೂರದ ಊರುಗಳಿಂದಲೂ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಅಚ್ಚ ಹಸಿರಾದ ಪ್ರಕೃತಿ ಸೌಂದರ್ಯದ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಧಾರೆಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ಝುಳು ಝುಳು ನಾದಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ತಣ್ಣನೆಯ ನೀರಿಗೆ ಮೈಯೊಡ್ಡಿ ಪುಳಕಗೊಳ್ಳುತ್ತಿದ್ದಾರೆ. ಇದು ಹೆಸರಾಂತ ಜಲಾಶಯವಾಗಿಲ್ಲದೇ ಇದ್ದರೂ ಪ್ರವಾಸಿಗರು ಮಾತ್ರ ಪ್ರಕೃತಿಯ ರಮಣೀಯತೆಗೆ ಮನಸೋತಿದ್ದಾರೆ.

    ಹುಚ್ಚಯ್ಯನಕಟ್ಟೆ ತುಂಬಿ ಧುಮ್ಮಿಕ್ಕುತ್ತಿರುವುದರಿಂದ ಇಲ್ಲಿ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ಮೈದುಂಬಿ ಧುಮ್ಮಿಕುತ್ತಿರುವ ಹುಚ್ಚಪ್ಪನಕಟ್ಟೆಯಂತು ತನ್ನಲ್ಲಿಗೆ ಭೇಟಿ ನೀಡಿದವರಿಗೆ ಹುಚ್ಚು ಹಿಡಿಸುತ್ತಿದೆ. ಸರ್ಕಾರ ಜಲಾಶಯಕ್ಕೆ ಬರಲು ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಭದ್ರತೆ ನೀಡಿ ಪ್ರವಾಸಿ ತಾಣವಾಗಿ ಮಾರ್ಪಡಿಸಿದರೆ, ಮತ್ತೊಂದು ಮಿನಿ ಜಲಪಾತವಾಗಿ ಹುಚ್ಚಯ್ಯನಕಟ್ಟೆ ಜಲಾಶಯ ಪ್ರಸಿದ್ಧಿ ಪಡೆಯಲಿದೆ. ಹೀಗಾಗಿ ಜಲಾಶಯದ ಅಭಿವೃದ್ಧಿಗೆ ಸರ್ಕಾರ ಮುತುವರ್ಜಿ ವಹಿಸಬೇಕಿದೆ.

  • ಪ್ರವಾಸಿಗರಿಗೆ ಧಮ್ಕಿ ಹಾಕಿ ಹಣ ವಸೂಲಿ – ಪಬ್ಲಿಕ್ ಟಿವಿ ಸ್ಟಿಂಗ್‌ನಲ್ಲಿ ಬಯಲು

    ಪ್ರವಾಸಿಗರಿಗೆ ಧಮ್ಕಿ ಹಾಕಿ ಹಣ ವಸೂಲಿ – ಪಬ್ಲಿಕ್ ಟಿವಿ ಸ್ಟಿಂಗ್‌ನಲ್ಲಿ ಬಯಲು

    ಗದಗ: ಉತ್ತರ ಕರ್ನಾಟಕದ ಖ್ಯಾತ ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಧಮ್ಕಿ ಹಾಕಿ ಹಣ ವಸೂಲಿ ಮಾಡುವ ದಂಧೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈ ಕುರಿತು ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಕೂಡ ಬಯಲಾಗಿದೆ.

    ಗದಗ ಜಿಲ್ಲೆಯ ಬಿಂಕದಕಟ್ಟಿ ಮಕ್ಕಳ ಉದ್ಯಾನವನ ಹಾಗೂ ಪ್ರಾಣಿ ಸಂಗ್ರಹಾಲಯ ಉತ್ತರ ಕರ್ನಾಟಕ ಭಾಗದ ಫೇಮಸ್ ಮೃಗಾಲಯ. ನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಸುಲಿಗೆಕೋರರು ಜನರಿಗೆ ಹಾಗೂ ಸರ್ಕಾರಕ್ಕೆ ಪಂಗನಾಮ ಹಾಕುತ್ತಿದ್ದಾರೆ.

    ಪ್ರವೀಣ್ ಮೃಗಾಲಯದಲ್ಲಿ ಹಣ ವಸೂಲಿ ಮಾಡುತ್ತಿರುವ ವ್ಯಕ್ತಿ. 2018-19ನೇ ಸಾಲಿನಲ್ಲಿ ಹರೀಶ್ ಜೋಗಣ್ಣವರ್ ಎಂಬವರಿಗೆ ಪಾರ್ಕಿಂಗ್ ಟೆಂಡರ್ ಆಗಿತ್ತು. ಆದರೆ ಮಾರ್ಚ್ 2019ಕ್ಕೆ ಟೆಂಡರ್ ಮುಗಿದಿದೆ. ಇಲ್ಲಿಯವರೆಗೆ ಮರುಟೆಂಡರ್ ಆಗಿಲ್ಲ. ಹಳೆ ಟೆಂಡರ್ ಹರೀಶ್ ಅವರ ಬೆಂಬಲಿಗರ ಹವಾ ಇಲ್ಲಿಯವರೆಗೂ ಜೋರಾಗಿ ನಡೆಯುತ್ತಿದೆ. ಪಾರ್ಕಿಂಗ್ ಟಿಕೆಟ್ ಕೊಡಿ ಎಂದು ಕೇಳಿದರೆ, ಟಿಕೆಟ್ ಇಲ್ಲ, ಅಂಗಡಿಯಲ್ಲಿದೆ. ಅಂಗಡಿ ಇವತ್ತಿಲ್ಲ ಎಂದು ಪ್ರತಿನಿತ್ಯ ಹೇಳಿದ್ದನ್ನೇ ಹೇಳುತ್ತಾರೆ.

    ಟಿಕೆಟ್ ಕೊಡಿ ನಾವು ಹಣ ಕೊಡುತ್ತೇವೆ ಎಂದು ಹೇಳಿದ್ದರೆ, ಟಿಕೆಟ್-ಗಿಕೆಟ್ ಏನಿಲ್ಲ, ಹಣ ಕೊಡಿ ಇಲ್ಲ ಗಾಡಿ ತಗೊಂಡು ಹೊರಗೆ ನಡಿ ಎಂದು ಪ್ರವೀಣ್ ಧಮ್ಕಿ ಹಾಕುತ್ತಾನೆ. ಅಷ್ಟಕ್ಕೂ ಪ್ರವೀಣ್ ಮೂಲ ಗುತ್ತಿಗೆದಾರನಲ್ಲ. ಯಾರೋ ಗುತ್ತಿಗೆ ಪಡೆದು ಇನ್ಯಾರೋ ಮೂರನೇ ವ್ಯಕ್ತಿಗೆ ಲೀಸ್ ನೀಡಿ ಹಣ ವಸೂಲಿಗೆ ಮುಂದಾಗಿದ್ದಾರೆ. ಈ ಬಗ್ಗೆ ಹಣ ಪಡೆಯುವ ವ್ಯಕ್ತಿ ಕೇಳಿದರೆ ನನ್ನ ಬಿಟ್ಟುಬಿಡಿ, ನನಗೆ ಯಾವ ಅಧಿಕಾರಿಯೂ ಗೊತ್ತಿಲ್ಲ. ಟೆಂಡರ್‌ದಾರರೇ ಬೇರೆ, ನಾನೇ ಬೇರೆ ಎಂದು ಹೇಳಿದ್ದಾನೆ.

    ಪಾರ್ಕಿಂಗ್ ಶುಲ್ಕ ಎಂದು ಬೈಕಿಗೆ 10 ರೂ., ಕಾರ್ ಹಾಗೂ ಆಟೋಗೆ 20 ರೂ., ಟೆಂಪೋ, ಟ್ರಕ್ ಹಾಗೂ ಬಸ್ಸಿಗೆ 50 ರೂ., ಯಂತೆ ನಿತ್ಯ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ. ಪ್ರವಾಸಿಗರಿಗೆ ಟಿಕೆಟ್ ನೀಡದೆ ಧಮ್ಕಿ ಹಾಕಿ ತಿಂಗಳಿಂದ ಹಣ ಪಡೆದು, ಸರ್ಕಾರಕ್ಕೆ ಪಂಗನಾಮ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ವರ್ಷಕ್ಕೆ ಹತ್ತಾರು ಲಕ್ಷ ರೂ. ಪಾರ್ಕಿಂಗ್ ಹಣ ಸಂಗ್ರಹವಾಗುತ್ತದೆ. ಆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸೇರಿ ಕೇವಲ 1 ಲಕ್ಷ 1 ಸಾವಿರ ಮಾತ್ರ ಟೆಂಡರ್ ಮಾಡುತ್ತಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರಿಂದ ಹಗಲು ದರೋಡೆ ಮಾಡುವುದನ್ನ ನಿಲ್ಲಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

  • ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

    ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

    ಚಿಕ್ಕಮಗಳೂರು: ಎಲ್ಲಾ ಸೌಂದರ್ಯವನ್ನೂ ನಾಚಿಸುವಂತಹ ಅಮೋಘ ರೂಪರಾಶಿಯನ್ನು ತನ್ನಲ್ಲಿಯೇ ಇಟ್ಟುಕೊಂಡ ರಾಜ್ಯದ ಎತ್ತರದ ಶಿಖರದಲ್ಲಿ ಒಂದಕ್ಕೊಂದು ಅಂಟಿಕೊಂಡಿರೋ 9 ಗುಡ್ಡಗಳು ಇವೆ. ಈ ಗುಡ್ಡಗಳ ಮಧ್ಯೆ ಇರುವ ರೋಮಾಂಚಕಾರಿ ಅಡ್ವೆಂಚರಸ್ ಟ್ರಕ್ಕಿಂಗ್ ಸ್ಪಾಟ್‍ಗೆ ಪ್ರವಾಸಿಗರು ಬರದೇ ಇರುವ ದಿನವಿಲ್ಲ. ಅಪರೂಪದ ಸೌಂದರ್ಯ ಬಣ್ಣಿಸೋಕೆ ಪದಪುಂಜವೇ ಸಾಲದಂತಹ ಪ್ರವಾಸಿ ತಾಣವೊಂದು ಕಾಫಿನಾಡಿನಲ್ಲಿದೆ.

    ಹೌದು. ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ಅಕ್ಷಯಪಾತ್ರೆ ಇದ್ದಂತೆ. ಇಲ್ಲಿನ ನಿಸರ್ಗ ವೈಭವ ನೋಡುಗರ ಕಣ್ಮನ ತಣಿಸುತ್ತದೆ. ಭೂಲೋಕದ ಸ್ವರ್ಗವೆನಿಸಿರೋ ಈ ನೆಲದಲ್ಲಿ ಮೂಡಿಗೆರೆಯ ಶಿಶಿಲಗುಡ್ಡ ಕೂಡ ಒಂದು. ದೂರದಿಂದ ನೋಡಿದರೆ ಇದು ಎತ್ತಿನಭುಜದಂತೆ ಕಾಣುತ್ತೆ, ಹೀಗಾಗಿ ಈ ಗುಡ್ಡವನ್ನು ಎತ್ತಿನಭುಜ ಅಂತ ಕರೀತಾರೆ. ಬೈರಾಪುರದಿಂದ 4 ಕಿ.ಮೀ ದೂರದಲ್ಲಿರೋ ಈ ಬೆಟ್ಟವನ್ನು ನಡೆದೇ ಏರಬೇಕು. ಕಡಿದಾದ ರಸ್ತೆಯಲ್ಲಿ ಕಲ್ಲು-ಮಣ್ಣು ಎನ್ನದೇ ಗುಡ್ಡ ಹತ್ತಬೇಕು. ಸಿಕ್ಕಾಪಟ್ಟೆ ಕಷ್ಟಪಟ್ಟು ಬೆಟ್ಟ ಏರಿದರೆ ಅಪರೂಪದ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

    9 ಗುಡ್ಡಗಳ ಮಧ್ಯೆ ಇರೋ ಎತ್ತಿನಭುಜದ ಬೆಟ್ಟದ ಮಧ್ಯೆ ನಿಂತರೆ ಯಾವುದೋ ದ್ವೀಪದಲ್ಲಿ ನಿಂತ ಹಾಗೆ ಆಗುತ್ತೆ. ಈ ಗುಡ್ಡವನ್ನ ಹತ್ತಿ ಇಳಿಯುವುದೇ ಪ್ರವಾಸಿಗರಿಗೆ ಒಂದು ರೀತಿ ಖುಷಿಕೊಡುತ್ತದೆ. ಬೆಟ್ಟ ಹತ್ತುವಾಗ ಬೀಸೋ ತಣ್ಣನೆಯ ಗಾಳಿ ಎಂತಹ ಆಯಾಸವನ್ನೂ ಇಲ್ಲವಾಗಿಸುತ್ತದೆ. ಹಾಗೆಯೇ ಬೆಟ್ಟ ಹತ್ತಿ ನಿಂತರೆ ಆಕಾಶಕ್ಕೆ ಮೂರೇ ಗೇಣು ಅನ್ನೋ ಅನುಭವ ಇಲ್ಲಿ ಬರುವ ಪ್ರಕೃತಿ ಪ್ರೇಮಿಗಳಿಗೆ ಆಗುತ್ತದೆ.

    ಎತ್ತಿನಭುಜದ ಮೇಲೆ ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತಗೊಂಡರೆ ಇಲ್ಲಿ ಭೇಟಿ ಕೊಟ್ಟು ಎಂಜಾಯ್ ಮಾಡಿದ ನೆನಪು ಸದಾ ಹಸಿರಾಗಿರುತ್ತದೆ. ಬಿಸಿಲಿದ್ದಾಗ ಬೆಟ್ಟದ ವಿಹಂಗಮ ನೋಟ, ಪ್ರಕೃತಿ ತುಂಬೆಲ್ಲಾ ಹರಡೋ ಮಂಜಿನ ಮಧ್ಯೆ ನಿಂತಾಗ ಪ್ರವಾಸಿಗರಿಗೆ ಆಕಾಶದಲ್ಲೇ ತೇಲಿದ ಅನುಭವ ಆಗುತ್ತದೆ. ಬಿಡುವಿದ್ದಾಗ ಈ ಅಪರೂಪದ ಪ್ರವಾಸಿಗರ ಹಾಟ್-ಫೇವರಿಟ್ ಆಗಿರೋ ಎತ್ತಿನಭುಜ ಬೆಟ್ಟಕ್ಕೆ ನೀವೂ ಭೇಟಿ ಕೊಟ್ಟು ಸೌಂದರ್ಯವನ್ನ ಕಣ್ತುಂಬಿಕೊಳ್ಳಿ.

  • ಜಂಬೂ ಸವಾರಿ ದಿನ ಮೈಸೂರಿಗೆ 1 ಲಕ್ಷಕ್ಕೂ ಅಧಿಕ ಜನರ ಭೇಟಿ

    ಜಂಬೂ ಸವಾರಿ ದಿನ ಮೈಸೂರಿಗೆ 1 ಲಕ್ಷಕ್ಕೂ ಅಧಿಕ ಜನರ ಭೇಟಿ

    ಮೈಸೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಒಂದೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಮೈಸೂರಿಗೆ ಭೇಟಿ ನೀಡಿದ್ದಾರೆ.

    ದಸರಾ ದಿನದಂದು ಮೈಸೂರು ರೈಲ್ವೆ ನಿಲ್ದಾಣದಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಹೆಚ್ಚುವರಿ ಜನ ಸಂದಣಿಯನ್ನು ಸುಲಭವಾಗಿ ನಿರ್ವಹಿಸಲಾಗಿದೆ. ಸಾಮಾನ್ಯವಾಗಿ ಪ್ರತಿದಿನ ಈ ರೈಲ್ವೆ ನಿಲ್ದಾಣದಲ್ಲಿ 55ರಿಂದ 60 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈಗ ಈ ಸಂಖ್ಯೆ ಡಬಲ್ ಆಗುವ ಮೂಲಕ ಜನರು ವಿಶ್ವಪ್ರಸಿದ್ಧ ದಸರಾ ಮೆರವಣಿಗೆಗೆ ಸಾಕ್ಷಿ ಆಗಿದ್ದಾರೆ. ಮೈಸೂರು ವಿಭಾಗದ ಅಧಿಕಾರಿಗಳು ಇದನ್ನು ಸುಲಭವಾಗಿ ನಿಭಾಯಿಸಿದ್ದಾರೆ.

    ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ:
    * ಪ್ರತಿದಿನ 7 ಟಿಕೆಟ್ ಕೌಂಟರ್ ಕಾರ್ಯ ನಿರ್ವಹಿಸುತ್ತಿತ್ತು. ಮಂಗಳವಾರ ಪ್ರಯಾಣಿಕರ ಅನಕೂಲಕ್ಕಾಗಿ 16 ಟಿಕೆಟ್ ಕೌಂಟರ್ ತೆರೆಯಲಾಗಿತ್ತು.
    * 15 ಸಿಬ್ಬಂದಿಗಳ ಜೊತೆ 80 ಹೆಚ್ಚುವರಿ ಆರ್ ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
    * ಪ್ರತಿದಿನ 200 ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು, 800 ಹೆಚ್ಚುವರಿ ವಾಹನಗಳನ್ನು ನಿರ್ವಹಿಸಲಾಗಿದೆ.
    * ಭದ್ರತೆಗಾಗಿ 75 ಹೆಚ್ಚುವರಿ ಸಿಸಿಟವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
    * ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿಯನ್ನು ಒದಗಿಸಲಾಗಿದೆ.
    * ಎಲ್ಲಾ ಪ್ರಯಾಣಿಕ ರೈಲುಗಳಲ್ಲಿ ಎರಡು ಸಾಮಾನ್ಯ ಬೋಗಿಗಳ ಹೆಚ್ಚುವರಿ ಜೋಡಣೆ ಮಾಡಲಾಗಿತ್ತು.
    * ನಿಲ್ದಾಣದಲ್ಲಿ ಹೊಸ ಲುಕ್ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ನೋಡಿ ಪ್ರಯಾಣಿಕರು ಹೆಚ್ಚು ಆಕರ್ಷಿತರಾದರು.
    * ನಿಗದಿಪಡಿಸಿದ ಪಿಕಪ್ ಮತ್ತು ಡ್ರಾಪ್ ಸ್ಥಳದಲ್ಲಿ ಸುಗಮ ಸಂಚಾರ ನಿರ್ವಹಣೆ ಆಗಿದೆ.
    * ಟ್ರೆಂಡಿಂಗ್‍ನಲ್ಲಿ ಇರುವ “ಐ ಲವ್ ಮೈಸೂರು” ಸೆಲ್ಫಿ ಸ್ಪಾಟ್‍ನಲ್ಲಿ ಎಲ್ಲಾ ಪ್ರಯಾಣಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
    * ನವೀಕರಿಸಿದ ನಿಲ್ದಾಣದ ಕಟ್ಟಡ ಮತ್ತು ತೆರೆದ ಸ್ಥಳವನ್ನು ನೋಡಿ ಸೆಲ್ಫಿ ಕ್ಲಿಕ್ ಮಾಡದೇ ಯಾವೊಬ್ಬ ಪ್ರಯಾಣಿಕರು ನಿಲ್ದಾಣದಿಂದ ಹೊರಹೋಗಲಿಲ್ಲ. ಮೈಸೂರು ನಿಲ್ದಾಣವು ಪ್ರಯಾಣಿಕರ ಮನಸ್ಸಿನಲ್ಲಿ ಕೆತ್ತಲಾಗಿದೆ ಮತ್ತು ಕೆಲವು ಪ್ರಯಾಣಿಕರು ವಿವರಿಸಿದಂತೆ ನೆನಪಿನಲ್ಲಿಟ್ಟುಕೊಳ್ಳುವ ಅವರ ನೆನಪುಗಳ ಒಂದು ಭಾಗವಾಗಲಿದೆ.

  • ರಾಜಾಸೀಟ್‍ಗೆ ಮತ್ತಷ್ಟು ಕಳೆ ತಂದ ಪ್ರವಾಸೋದ್ಯಮ ಇಲಾಖೆ

    ರಾಜಾಸೀಟ್‍ಗೆ ಮತ್ತಷ್ಟು ಕಳೆ ತಂದ ಪ್ರವಾಸೋದ್ಯಮ ಇಲಾಖೆ

    ಮಡಿಕೇರಿ: ಪ್ರವಾಸಿಗರ ಸ್ವರ್ಗ ಕೊಡಗು. ಇಲ್ಲಿನ ಒಂದೊಂದು ತಾಣವೂ ಮನಮೋಹಕ. ಮಡಿಕೇರಿಯ ಪ್ರವಾಸಿ ತಾಣಗಳ ಮುಕುಟ ರಾಜಾಸೀಟ್. ಸಂಜೆ ಆಗುತ್ತಲೇ ಸೂರ್ಯಾಸ್ತದ ವಿಹಂಗಮ ನೋಟ ಪ್ರಕೃತಿಯ ನೈಜ ಸೌಂದರ್ಯವನ್ನು ಅನಾವರಣಗೊಳಿಸುತ್ತೆ. ಇಂತಹ ರಾಜಾಸೀಟ್‍ಗೆ ಮತ್ತಷ್ಟು ಕಳೆ ತರುವುದ್ದಕ್ಕೆ ಪ್ರವಾಸೋದ್ಯಮ ದಿನಚಾರಣೆ ಅಂಗವಾಗಿ ಪ್ರವಾಸಿಗರಿಗೆ ಕೊಡವ ಸಂಸ್ಕೃತಿ ರಾಜ್ಯದ ವಿವಿಧ ಭಾಷೆಯ ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಬಂದ ಪ್ರವಾಸಿಗರು ಸಾಂಸ್ಕೃತಿಕ ಕಾರ್ಯಕ್ರಮ ಕಂಡು ಖುಷಿಪಟ್ಟರು.

    ರಾಜಾಸೀಟ್ ವೀಕೆಂಡ್ ಎಂದರೆ ಸಾಕು ಮಂಜಿನ ನಗರಿ ಮಡಿಕೇರಿ ಪ್ರವಾಸಿಗರಿಂದ ತುಂಬಿ ಹೋಗುತ್ತೆ. ದೇಶದ ವಿವಿಧ ರಾಜ್ಯಗಳಿಂದ ಕೊಡಗಿನತ್ತ ಲಗ್ಗೆಯಿಡುವ ಪ್ರಕೃತಿ ಪ್ರೇಮಿಗಳು ಜಿಲ್ಲೆ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರಮುಖ ಆಕರ್ಷಣೆ ಮಡಿಕೇರಿಯ ರಾಜಾಸೀಟ್ ಬೆಳಗ್ಗೆಯಿಂದ ಜಗತ್ತನ್ನು ಬೆಳಗಿ ಸಂಜೆ ಆಗುತ್ತಲೇ ಇಲ್ಲಿನ ಬೆಟ್ಟಗುಡ್ಡಗಳ ನಡುವೆ ಮುಳುಗುವ ಸೂರ್ಯನನ್ನು ನೋಡುವುದೇ ಒಂದು ವಿಸ್ಮಯ. ಆದರೆ ಮಳೆಗಾಲ ಬಂದರೆ ನಿರಂತರ ಸುರಿಯುವ ಮಳೆ ಮುಂಜು ಮುಸುಕಿನ ವಾತಾವರಣದಿಂದಾಗಿ ಸೂರ್ಯಾಸ್ತವನ್ನು ನೋಡಲು ಸಾಧ್ಯವಾಗಲ್ಲ. ಈ ನಿಟ್ಟಿನಲ್ಲಿ ಇಂದು ಪ್ರವಾಸೋದ್ಯಮ ಇಲಾಖೆಯಿಂದ ಕೊಡವ ಸಂಸ್ಕೃತಿ ದೇಶದ ವಿವಿಧ ಭಾಷೆಗಳ ನೃತ್ಯ ಕಾರ್ಯಕ್ರಮ ಆಯೋಜಿಲಾಗಿತ್ತು.

    ಸಾಂಪ್ರದಾಯಿಕ ಉಡುಗೆ ತೊಟ್ಟು ಯುವಕರು ನಲಿದಾಡಿದ್ದಾರೆ, ಯುವತಿಯರು ಬಣ್ಣ ಬಣ್ಣದ ಸೀರೆಯುಟ್ಟು ಲಯಬದ್ದ ನಾದಕ್ಕೆ ಹಾಡಿ ಕುಣಿದಿದ್ದಾರೆ. ಪ್ರವಾಸೋದ್ಯಮ ದಿನಚಾರಣೆ ಅಂಗವಾಗಿ ಪ್ರವಾಸಿಗರಿಗೆ ಕೊಡವ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ರಾಜಾಸೀಟ್ ವ್ಯೂ ಪಾಯಿಂಟ್‍ನ ಸ್ಥಳದಲ್ಲಿ ಆಯೋಜಿಸಲಾಗಿತ್ತು. ಕೊಡಗಿನ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೊಡಗಿನ ಮಡಿಕೇರಿ ಹಾಗೂ ವಿರಾಜಪೇಟೆ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ಸಂಸ್ಕೃತಿ ಬಿಂಬಿಸುವ ಉಮ್ಮತಾಟ್ ಕೋಲಾಟ್, ಜಾನಪದ ಕಲೆ ಹಾಗೂ ವಿವಿಧ ಭಾಷೆಗಳ ನೃತ್ಯಗಳನ್ನು ಪ್ರದರ್ಶಿಸಲಾಯಿತ್ತು. ಕೊಡಗಿನ ಸಂಸ್ಕ್ರತಿ ಯಾವ ದೇಶಕ್ಕೂ ಕಡಿಮೆಯಿಲ್ಲ ಎನ್ನುವಂತೆ ಕುಣಿದು ನಲಿದ ವಿದ್ಯಾರ್ಥಿಗಳು ಪ್ರವಾಸಿಗರ ಮೆಚ್ಚುಗೆ ಗಳಿಸಿದರು. ಅಷ್ಟೇ ಅಲ್ಲದೇ ಕೊಡವ ವಾಲಗಕ್ಕೆ ಪ್ರವಾಸಿಗರು ಹೆಜ್ಜೆ ಹಾಕಿದು ವಿಶೇಷವಾಗಿತ್ತು.

  • ಮುಂಗಾರಿನ ಅಭಿಷೇಕಕ್ಕೆ ಹಸಿರು ಹೊದಿಕೆಹೊತ್ತ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ

    ಮುಂಗಾರಿನ ಅಭಿಷೇಕಕ್ಕೆ ಹಸಿರು ಹೊದಿಕೆಹೊತ್ತ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ

    ಚಾಮರಾಜನಗರ: ಅದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವೆ. ಬಿಳಿ ಬಣ್ಣದಂತೆ ಕಾಣುವ ಈ ಬೆಟ್ಟವನ್ನ ಶ್ವೇತಾದ್ರಿ ಎನ್ನುತ್ತಾರೆ. ಈ ಬೆಟ್ಟ ಮುಂಗಾರಿನ ಅಭಿಷೇಕಕ್ಕೆ ಹಸಿರು ಸೀರೆಯುಟ್ಟ ನಾರಿಯಂತೆ ಕಾಣುತ್ತಿದ್ದು, ಅಚ್ಚಹಸಿರಾದ ಬೆಟ್ಟ, ಬೆಟ್ಟಕ್ಕೆ ತಾಕೋ ಮೋಡಗಳು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದ್ದು, ಈ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

    ಹೌದು. ಇಂತದೊಂದು ಅಪರೂಪವಾದ, ರಮ್ಯ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಇರೋದು ಚಾಮರಾಜನಗರ ಜಿಲ್ಲೆಯಲ್ಲಿ. ಪ್ರಕೃತಿ ಸೊಬಗನ್ನ ಹೊದ್ದು ಮಲಗಿದಂತೆ ಕಾಣುವ ಈ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟವೇ ಈಗ ಸ್ವರ್ಗದಂತೆ ಕಾಣುತ್ತಿದೆ. ಕರ್ನಾಟಕದ ತಿರುಪತಿ, ಶ್ವೇತಾದ್ರಿ ಪರ್ವತ ಎಂದೆಲ್ಲಾ ಭಕ್ತರಿಂದ ಕರೆಯಲ್ಪಡುವ ಬಿಳಿಗಿರಿ ರಂಗನಾಥ ಸ್ವಾಮಿ ಸೋಲಿಗರ ಆರಾದ್ಯ ದೈವ. ವರ್ಷದ ಬಹುತೇಕ ದಿನಗಳು ಮದುವಣಗಿತ್ತಿಯಂತೆ ಹಸಿರು ಸೀರೆಯುಟ್ಟು ಶೃಂಗಾರಗೊಂಡ ನಾರಿಯಂತೆ ಕಾಣುವ ಈ ಅಚ್ಚ ಹಸಿರಾದ ಬೆಟ್ಟದ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಇದನ್ನೂ ಓದಿ:ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಪ್ರವಾಹದಂತೆ ಹರಿಯುತ್ತಿದ್ದ ಕಲ್ಲತ್ತಿಗಿರಿ ಜಲಪಾತ

    ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ. ದೂರಕ್ಕೆ ಹಾಲಿನ ನೊರೆಯಂತೆ ಕಾಣುವ ಈ ಬೆಟ್ಟವನ್ನ ಶ್ವೇತಾದ್ರಿ ಬೆಟ್ಟ ಎಂದು ಕರೆಯುತ್ತಾರೆ. ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿರುವ ಬಿಳಿಗಿರಿ ರಂಗನಾಥ ಬೆಟ್ಟ ನಗರವಾಸಿಗಳ ಸ್ವರ್ಗ. ಇದು ಯಾವಾಗಲೂ ಅಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿನ ವಾತಾವರಣ, ತಣ್ಣಗೆ ಬೀಸುವ ತಂಗಾಳಿ ಪ್ರತಿಯೊಬ್ಬರ ಮೈಸೋಕಿ ಉಲ್ಲಾಸಗೊಳಿಸುತ್ತದೆ. ಇಲ್ಲಿ ಕನಿಷ್ಠ ಎಂದರೆ 7 ರಿಂದ 8 ಡಿಗ್ರಿವರೆಗೆ ತಾಪಮಾನ ಇರುತ್ತದೆ. ಇದನ್ನೂ ಓದಿ:ಇಬ್ಬನಿಯ ಆಟ, ಮೋಡಗಳ ಮೈಮಾಟ ಪ್ರವಾಸಿಗರಿಗೆ ರಸದೂಟ

    ಕಡು ಬೇಸಿಗೆಯಲ್ಲಿ ಇಲ್ಲಿನ ತಪಾಮಾನ 28 ರಿಂದ 30 ಡಿಗ್ರಿ ಸೆಲ್ಸಿಯಸ್ ಮಾತ್ರ ಇರುತ್ತದೆ. ಹೀಗಾಗಿಯೇ ಇಲ್ಲಿನ ವಾತಾರಣವನ್ನ ಎಸಿಯ ಮನೆ ಎಂದು ಪ್ರವಾಸಿಗರು ಕರೆಯುತ್ತಾರೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟವರು ಪದೇ ಪದೇ ಇಲ್ಲಿಗೆ ಬಂದು ಪ್ರಕೃತಿಯ ಸವಿ ಸವಿಯುತ್ತಾರೆ. ಶ್ವೇತಾದ್ರಿ ಪರ್ವತ ಎಂದು ಕರೆಯಲ್ಪಡುವ ಬಿಳಿಗಿರಿ ರಂಗನಾಥ ಬೆಟ್ಟ ಮುಂಗಾರಿನ ಅಭಿಷೇಕಕ್ಕೆ ಹರಿಸಿನಿಂದ ಕಂಗೊಳಿಸುತ್ತಿದೆ. ಆಗಾಗ ಸುರಿಯುವ ತುಂತುರು ಮಳೆ ಪ್ರವಾಸಿಗರ ಮನಸಿಗೆ ಮುದ ನೀಡುತ್ತಿದೆ.

    ಬಿಳಿಗಿರಿ ರಂಗನಾಥ ಬೆಟ್ಟಕ್ಕೆ ಎರಡು ಕಡೆಯಿಂದ ಪ್ರವೇಶ ಪಡೆಯಬಹುದು. ಒಂದು ಯಳಂದೂರು ಮಾರ್ಗದಿಂದ ಮತ್ತೊಂದು ಚಾಮರಾಜನಗರ ಭಾಗದಿಂದ ಹೋಗಲು ಹೊಂಡರಬಾಳು ಬಳಿ ಪ್ರವೇಶ ದ್ವಾರಗಳಿವೆ. ಈ ಎರಡು ಪ್ರವೇಶದ್ವಾರಗಳು ಪ್ರವಾಸಿಗರನ್ನ ಆಕರ್ಷಿಸದೇ ಬಿಡಲಾರವು. ಬರುವ ಪ್ರವಾಸಿಗರನ್ನ ಆನೆ, ಹುಲಿ, ಚಿರತೆ, ಕಾಡಮ್ಮೆಯಂತಹ ವನ್ಯಜೀವಿಗಳೇ ಸ್ವಾಗತ ಕೋರುತ್ತವೆ. ಹೌದು. ನೋಡುವುದಕ್ಕೆ ವನ್ಯಜೀವಿಗಳೇ ಎದ್ದು ಬರುತ್ತಿರುವ ಹಾಗೆ ಕಾಣುವಂತೆ ದ್ವಾರದಲ್ಲಿ ಚಿತ್ರಿಸಲಾಗಿದೆ.

    ನಗರ ಪ್ರದೇಶಗಳಿಂದ ಬರುವ ಜನರು ಇವುಗಳನ್ನ ನೋಡಿ ಖುಷಿಪಟ್ಟು, ನಂತರ ನಿಧಾನವಾಗಿ ಇಳಿದು ಚಿತ್ರಿಸಿದ ವನ್ಯಪ್ರಾಣಿಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳದೇ ಹೋಗುವುದಿಲ್ಲ. ಎರಡು ಕಡೆಯಿಂದ ಬರುವ ಪ್ರವಾಸಿಗರಿಗೆ ವನ್ಯಜೀವಿಗಳ ದರ್ಶನ ಮಾತ್ರ ಉಚಿತ. ಕಾಡೆಮ್ಮೆ, ಆನೆ, ಜಿಂಕೆ, ಕಡವೆ ಸೇರಿದಂತೆ ಹಲವು ಪ್ರಾಣಿಗಳ ದರ್ಶನ ಪ್ರವಾಸಿಗರ ಮನಸಿಗೆ ಮುದ ನೀಡುತ್ತದೆ.

    ಅದೇನೆ ಇರಲಿ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಿಂದಲೇ ಖ್ಯಾತಿಗಳಿಸಿದ್ದ ಬಿಆರ್‌ಟಿ ಈಗ ಹುಲಿ ಸಂರಕ್ಷಿತ ಪ್ರದೇಶವಾಗಿ ಖ್ಯಾತಿಗಳಿಸಿದೆ. ಈ ಮಧ್ಯೆ ಈ ಮೋಡ ಕವಿದ ವಾತಾವರಣವು ಎಂಥವರನ್ನು ಮಂತ್ರ ಮುಗ್ಧಗೊಳಿಸಿರೋದಂತೂ ಸುಳ್ಳಲ್ಲ.

  • ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಪ್ರವಾಹದಂತೆ ಹರಿಯುತ್ತಿದ್ದ ಕಲ್ಲತ್ತಿಗಿರಿ ಜಲಪಾತ

    ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಪ್ರವಾಹದಂತೆ ಹರಿಯುತ್ತಿದ್ದ ಕಲ್ಲತ್ತಿಗಿರಿ ಜಲಪಾತ

    ಚಿಕ್ಕಮಗಳೂರು: ತಿಂಗಳ ಹಿಂದೆ ಬರಬೇಡಿ ಎಂದು ಹೇಳುತ್ತಿದ್ದ ಈ ಸುಂದರ ತಾಣ ಈಗ ಪ್ರವಾಸಿಗರನ್ನು ಬನ್ನಿ ಎಂದು ಕೈಬೀಸಿ ಕರೆಯುತ್ತಿದೆ. ವರ್ಷಪೂರ್ತಿ ಧಾರಾಕಾರವಾಗಿ ಹರಿಯುವ ಆ ನೀರು ಎಲ್ಲಿಂದ ಬರುತ್ತೆ ಎನ್ನುವುದೇ ನಿಗೂಢ. ಆನೆಯ ಆಕಾರದಲ್ಲಿ ಧುಮ್ಮಿಕ್ಕುವ ಆ ಜಲಧಾರೆಗೆ ಧಾರ್ಮಿಕ ನಂಬಿಕೆಯೂ ಉಂಟು. ತಿಂಗಳ ಹಿಂದೆ ಪ್ರವಾಹದಂತೆ ಹರಿಯುತ್ತಿದ್ದ ಆ ಸುಂದರ ತಾಣವೀಗ ನಯನ ಮನೋಹರ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಜಲಪಾತವೀಗ ಪ್ರಕೃತಿಯ ಮಾನಸ ಪುತ್ರಿಯಂತಾಗಿದೆ. ಗುಡ್ಡದ ತುದಿಯಿಂದ ಹರಿಯುವ ಈ ಹಾಲ್ನೋರೆಯ ಜಲಕ್ಕೆ ಕಲ್ಲತ್ತಿಗರಿ ಜಲಪಾತ ಎಂಬ ಹೆಸರಿದೆ. ಈ ಜಲಪಾತ ಇತಿಹಾಸದಲ್ಲಿ ಬತ್ತಿದ ಉದಾಹರಣೆ ಇಲ್ಲ. ಬೆಟ್ಟ-ಗುಡ್ಡಗಳ ಔಷಧಿ ಶಕ್ತಿಯುಳ್ಳ ಮರ-ಗಿಡಗಳ ನಡುವೆ ಹರಿಯುವ ಈ ನೀರಲ್ಲಿ ಸ್ನಾನ ಮಾಡಿದರೆ ಕೆಲವು ಕಾಯಿಲೆಗಳು ದೂರವಾಗುತ್ತೆ ಎಂಬುದು ಜನರ ನಂಬಿಕೆ. ಆನೆ ಆಕಾರದಲ್ಲಿರುವ ಈ ಜಲಪಾತಕ್ಕೆ ಧಾರ್ಮಿಕ ಇತಿಹಾಸವೂ ಇದೆ. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಶಾಲಾ ಮಕ್ಕಳೇ ಹೆಚ್ಚು. ಈ ತಾಣ ಇಡೀ ರಾಜ್ಯಕ್ಕೆ ಗೊತ್ತು. ಈಗ ಮಕ್ಕಳಷ್ಟೇ ಅಲ್ಲದೆ ಕುಟುಂಬ ಸಮೇತರಾಗಿ ಬಂದು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ.

    ಶತಮಾನಗಳಿಂದ ಹೀಗೆ ನಿರಂತರವಾಗಿ ಹರಿಯುತ್ತಿರುವ ಈ ಜಲಪಾತದ ಬಳಿ ದತ್ತಾತ್ರೇಯ, ಈಶ್ವರ-ಪಾರ್ವತಿ, ಗಣಪತಿ, ಬೇಲೂರು ಚನ್ನಕೇಶವನ ಜೊತೆ ಶಿಲಾಬಾಲಿಕೆಯರ ಉದ್ಭವ ಮೂರ್ತಿಗಳಿವೆ. ಪುರಾಣದ ಪ್ರಕಾರ ನರ ಮನುಷ್ಯರು ಇಲ್ಲಿಗೆ ಬಂದು ಈ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಇಲ್ಲಿನ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿದರೆ ಅವರ ಪಾಪ-ಕರ್ಮಗಳೆಲ್ಲಾ ಪರಿಹಾರವಾಗುತ್ತೆ ಎನ್ನುವುದು ಸ್ಥಳೀಯರ ನಂಬಿಕೆ.

    ಪವಿತ್ರ ಗಂಗೆಯಾಗಿರುವ ಈ ಕ್ಷೇತ್ರದಲ್ಲಿ ಕಲ್ಲಿನ ಗುಹೆಯೊಳಗೆ ವೀರಭದ್ರಸ್ವಾಮಿ ಮೂರ್ತಿ ಕೂಡ ಉದ್ಭವವಾಗಿದೆ. ಇಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿದರೆ ಜನರ ಮೈಮೇಲೆ ಬರುವ ದುಷ್ಟಶಕ್ತಿಗಳನ್ನು ವೀರಭದ್ರಸ್ವಾಮಿ ನಾಶ ಮಾಡುತ್ತಾನೆ ಎಂದು ಸ್ಥಳೀಯರು ಹೇಳುತ್ತಾರೆ. ಆದ್ದರಿಂದ, ಪ್ರತಿದಿನ ಹತ್ತಾರು ಜನ ಈ ಕ್ಷೇತ್ರಕ್ಕೆ ದೇವರುಗಳನ್ನು ಕರೆ ತಂದು ಪೂಜಾ-ಕೈಂಕರ್ಯ ಕೈಗೊಳ್ಳುತ್ತಾರೆ. ಪೂಜೆಯ ಬಳಿಕ ಇಲ್ಲಿನ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯ ಕಂಡು ಪುಳಕಿತರಾಗುತ್ತಾರೆ.

    ಕಲ್ಲತ್ತಿಗಿರಿ ಕ್ಷೇತ್ರದ ಜಲಪಾತ ಹತ್ತಾರು ಆಶ್ಚರ್ಯಗಳಿಗೆ ಸಾಕ್ಷಿಯಾಗಿದೆ. ಮೂಲವೇ ಗೊತ್ತಿಲ್ಲದ ಗಂಗೆಯ ಉಗಮ ಸ್ಥಾನ ಒಂದೆಡೆಯಾದರೆ, ದುಷ್ಟಶಕ್ತಿಗಳನ್ನು ದೂರ ಮಾಡುವ ದೈವಶಕ್ತಿಗೆ ಈ ಕ್ಷೇತ್ರ ಹೆಸರುವಾಸಿ. ಪ್ರವಾಸಕ್ಕೂ ಸೈ, ಧಾರ್ಮಿಕ ನಂಬಿಕೆಗೂ ಸೈ ಎನ್ನುವ ಈ ಕ್ಷೇತ್ರ ಕಾಫಿನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿ ಎಂದರು ತಪ್ಪಿಲ್ಲ. ಆದರೆ ಇಲ್ಲಿನ ಮೂಲಭೂತ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸುತ್ತಿದ್ದಾರೆ.