Tag: Tourism Department

  • ಪರಿಹಾರ ಕೇಂದ್ರದಲ್ಲಿ ಆಹಾರ ದುರುಪಯೋಗವಾಗಿರುವುದು ನಿಜ: ಸಾ.ರಾ ಮಹೇಶ್

    ಪರಿಹಾರ ಕೇಂದ್ರದಲ್ಲಿ ಆಹಾರ ದುರುಪಯೋಗವಾಗಿರುವುದು ನಿಜ: ಸಾ.ರಾ ಮಹೇಶ್

    ಮಡಿಕೇರಿ: ಪರಿಹಾರ ಕೇಂದ್ರಗಳಲ್ಲಿ ಆಹಾರ ಹಾಗೂ ಇತರೆ ಪದಾರ್ಥಗಳು ದುರಪಯೋಗವಾಗುತ್ತಿರುವುದು ಸತ್ಯವೆಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.

    ರಾಜ್ಯದ ಜನತೆ ಸಂತ್ರಸ್ತರಿಗಾಗಿ ಕಳುಹಿಸಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ದುರುಪಯೋಗವಾಗುತ್ತಿರುವ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೇಕಾದವರಿಗೆ ಪದಾರ್ಥಗಳನ್ನು ಹಂಚುತ್ತಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳು ದುರಪಯೋಗವಾಗುತ್ತಿರುವುದು ಸತ್ಯವೆಂದು ಮಾಹಿತಿ ನೀಡಿದ್ದಾರೆ.

    ಈ ಕುರಿತು ಜಿಲ್ಲಾಧಿಕಾರಿಗಳಿಗೆ ಜೊತೆ ಈಗಾಗಲೇ ಚರ್ಚಿಸಿದ್ದು, ಸಂತ್ರಸ್ತರಿಗೆ ತಲುಪಬೇಕಾದ ಯಾವುದೇ ವಸ್ತುಗಳು ದುರಪಯೋಗವಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದೇನೆ. ಅಲ್ಲದೇ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದ್ದೇನೆ. ರಾಜ್ಯದ ಜನತೆ ತಮ್ಮ ಸಹಾಯಹಸ್ತ ಚಾಚಿ ಸಂತ್ರಸ್ತರಿಗೆ ಕಳುಹಿಸಿರುವ ಪರಿಹಾರ ಸಾಮಗ್ರಿಗಳು ಉಳ್ಳವರ ಪಾಲಾಗದಂತೆ ಎಚ್ಚರವಹಿಸುತ್ತೇನೆಂದು ಭರವಸೆ ನೀಡಿದ್ದಾರೆ.

    ಪ್ರವಾಹದಿಂದಾಗಿ ಜಿಲ್ಲೆ ಸಂಪೂರ್ಣವಾಗಿ ನಾಶಹೊಂದಿದ್ದು, ಕೊಡಗನ್ನು ಪುನಃ ಸಹಜ ಸ್ಥಿತಿಗೆ ಮರಳಿಸಲು ಯತ್ನಿಸುತ್ತೇವೆ. ಇದಕ್ಕಾಗಿ ಸುಮಾರು 2 ಸಾವಿರ ಕೋಟಿ ರೂಪಾಯಿ ಖರ್ಚಾದರೂ ತೊಂದರೆಯಿಲ್ಲ. ನಾನು ಸಹ ನನ್ನ ಒಂದು ತಿಂಗಳ ಸಂಬಳವನ್ನು ಮಡಿಕೇರಿ ನಿರಾಶ್ರಿರಿಗಾಗಿ ನೀಡಿದ್ದೇನೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂರು ವರ್ಷದ ಬಳಿಕ ಕರ್ನಾಟಕದ ನಯಾಗರ ಫಾಲ್ಸ್‌ನಲ್ಲಿ ಜಲಪಾತೋತ್ಸವ

    ಮೂರು ವರ್ಷದ ಬಳಿಕ ಕರ್ನಾಟಕದ ನಯಾಗರ ಫಾಲ್ಸ್‌ನಲ್ಲಿ ಜಲಪಾತೋತ್ಸವ

    ಚಾಮರಾಜನಗರ: ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರು ವಾಸಿಯಾಗಿರುವ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಹಿನ್ನೆಲೆಯಲ್ಲಿ  ಮೂರು ವರ್ಷದ ಬಳಿಕ ಜಲಪಾತೋತ್ಸವ ನಡೆಸಲು ಸರ್ಕಾರ ಮುಂದಾಗಿದೆ.

    ಇಂದು ಗಗನಚುಕ್ಕಿ-ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಜಲಪಾತೋತ್ಸವದ ದಿನಾಂಕವನ್ನು ನಿಗದಿ ಮಾಡಿದ್ದಾರೆ.

    ಆಗಸ್ಟ್ ತಿಂಗಳ 18 ಮತ್ತು 19 ರಂದು ಜಲಪಾತೋತ್ಸವ ನಡೆಯಲಿದೆ. ಜಲಪಾತದಲ್ಲಿ ನೀರಿಲ್ಲದ ಕಾರಣ ಮೂರು ವರ್ಷಗಳ ಕಾಲ ಜಲಪಾತೋತ್ಸವ ನಿಂತು ಹೋಗಿತ್ತು. ಆದರೆ ಈ ಬಾರಿ ಕಾವೇರಿ ಮತ್ತು ಕಬಿನಿ ನದಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಜಲಪಾತಗಳಲ್ಲಿ ಭೋರ್ಗರೆದು ನೀರು ಧುಮುಕುತ್ತಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಈ ಬಾರಿ ಜಲಪಾತೋತ್ಸವ ನಡೆಸಬೇಕೆಂದು ಒತ್ತಾಯ ಮಾಡಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಸಾ.ರಾ. ಮಹೇಶ್ ತಿಳಿಸಿದರು. ಇದನ್ನೂ ಓದಿ: ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಈ ಹಿಂದಿನ ಜಲಪಾತೋತ್ಸವದ ವೇಳೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಖಾದ್ಯಗಳು ಸ್ಥಳದಲ್ಲೇ ತಯಾರಾಗುತ್ತಿದ್ದವು. ಪ್ರವಾಸಿಗರು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಇನ್ನೂ ಸ್ಟಾರ್ ನಟರು ಹಾಗೂ ಕಲಾವಿದರನ್ನು ಆಹ್ವಾನಿಸಿ ಪ್ರತಿ ನಿತ್ಯ ರಾತ್ರಿ ಅದ್ಧೂರಿ ಕಾರ್ಯಕ್ರಮಗಳು ನಡೆಯುತಿತ್ತು.

    ಪ್ರವಾಸಿಗರು ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದರು. ಭರಚುಕ್ಕಿ ಜಲಪಾತೋತ್ಸವ ಪ್ರವಾಸಿಗರಿಗೆ ಅಕ್ಷರಶಃ ಸ್ವರ್ಗವೇ ಆಗಿತ್ತು. ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದಿದ್ದ ಕಾರ್ಯಕ್ರಮವನ್ನು ಈ ವರ್ಷವೂ ಆಯೋಜಿಸಿ ಎಂದು ಪ್ರವಾಸಿಗರು ಹಾಗೂ ಜನ ಕಳೆದ ವರ್ಷ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಜಲಪಾತೋತ್ಸವನ್ನು ಆಯೋಜಿಸಿರಲಿಲ್ಲ.

  • ಯುವಕ-ಯುವತಿಯರೇ ಗೈಡ್‍ಗಳಾಗಿ: ಟೂರಿಸಂ ಅಭಿವೃದ್ಧಿಗೆ ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    ಯುವಕ-ಯುವತಿಯರೇ ಗೈಡ್‍ಗಳಾಗಿ: ಟೂರಿಸಂ ಅಭಿವೃದ್ಧಿಗೆ ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಕ ಉದ್ಯೋಗ ಸೃಷ್ಟಿ ಮಾಡಲು ವಿಫುಲವಾದ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಪ್ರವಾಸೋದ್ಯಮ ವ್ಯವಸ್ಥೆಯಲ್ಲಿ ಕೆಲವು ಅಂಶಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಅನೇಕ ಪ್ರವಾಸಿ ಸ್ಥಳಗಳಿಗಲ್ಲಿ ಪ್ರವಾಸಿಗರಿಗೆ ಸ್ಥಳದ ವಿವರಣೆಯನ್ನು ನೀಡುವ ಮಾರ್ಗದರ್ಶಿಗಳು ಇರುವುದಿಲ್ಲ. ಕೆಲೆವೆಡೆ ಇರುವ ಪ್ರವಾಸಿ ಮಾರ್ಗದರ್ಶಿಗಳು ಕನ್ನಡ ಹೊರತುಪಡಿಸಿ ಇತರೆ ಭಾರತೀಯ ಭಾಷೆಗಳಲ್ಲಿ ಪ್ರವಾಸಿ ಸ್ಥಳಗಳ ಬಗ್ಗೆ ವಿವರಿಸುವ ಸಾಮಥ್ರ್ಯ ಹೊಂದಿರುವುದಿಲ್ಲ. ವಿದೇಶಿ ಪ್ರವಾಸಿಗಳಿಗೆ ಅವರ ಭಾಷೆಯಲ್ಲಿ ವಿವರಗಳನ್ನು ತಿಳಿಸಲು ಆಯಾ ಭಾಷೆಗಳಲ್ಲಿ ಪಾಂಡಿತ್ಯವಿರುವ ಮಾರ್ಗದರ್ಶಿಗಳು ಲಭ್ಯವಿಲ್ಲ. ಅನೇಕ ಪ್ರವಾಸಿ ಸ್ಥಳಗಳಲ್ಲಿ ಸಂಜೆಯಾದ ನಂತರ ನೋಡುವಂತಹ ಹಾಗೂ ನಮ್ಮ ಸ್ಕೃತಿ ಸಂಸ್ಕೃತಿಯನ್ನು ಬಿಂಬಿಸುವಂತಹ ಯಾವುದೇ ಸಾಂಸ್ಕೃತಿಕ ಪ್ರದರ್ಶನಗಳು ಸಹ ಇರುವುದಿಲ್ಲ. ರಾಜ್ಯದ ಹಲವಾರು ಪ್ರವಾಸಿ ತಾಣಗಳಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಹೊಟೇಲ್ ಒದಗಿಸುವ ಅವಕಾಶವಿದೆ ಎಂದು ಭಾಷಣದಲ್ಲಿ ತಿಳಿಸಿದರು.

    ನಮ್ಮ ಸರ್ಕಾರವು ಈ ವರ್ಷ ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ವಿವಿಧ ಭಾಷೆಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳಾಗಿ ಕೆಲಸ ಮಾಡಲು ಮುಂದೆ ಬರುವ ಯುವಕ-ಯುವತಿಯರಿಗೆ ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಕ್ರಮ ಕೈಗೊಳ್ಳಲಿದೆ. ಎರಡು ವರ್ಷದ ಡಿಪ್ಲೆಮೋ ತರಬೇತಿ ನೀಡಲು ಈ ಮೂರು ಸ್ಥಳಗಳಲ್ಲಿ ಮುಂದೆ ಬರುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ತಲಾ 60 ಲಕ್ಷ ರೂಪಾಯಿಗಳನ್ನು ಷೇರು ಬಂಡಾವಾಳದ ರೂಪದಲ್ಲಿ ನೀಡಲಾಗುವುದು.

    ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತಹ ವಿಷಯಗಳಲ್ಲಿ ಎರಡು ವರ್ಷಗಳ ಡಿಪ್ಲೊಮಾವನ್ನು ಆರಂಭಿಸಲು ಉದ್ದೇಶಿಸಿದೆ. ಈ ಮೇಲೆ ಹೇಳಿದ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡುವ ಸಲುವಾಗಿ ಅಗತ್ಯ ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ ನೆರವಾಗಲು 20 ಕೋಟಿ ರೂಪಾಯಿಗಳನ್ನು ನಿಗಧಿಪಡಿಸಲಾಗಿದೆ.

    500 ಕೊಠಡಿಗಳ ಸೌಲಭ್ಯವಿರುವ `3 ಸ್ಟಾರ್ ಹೋಟೆಲ್’ಗಳನ್ನು ತೆರೆಯಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ 3 ಕೋಟಿ ರೂಪಾಯಿಗಳ ಷೇರು ಬಂಡವಾಳವನ್ನು ಕೊಡಲಾಗುವುದು. ಸರ್ವಿಸ್ ಅಪಾರ್ಟ್‍ಮೆಂಟ್ ಗಳನ್ನು ಕಟ್ಟಲು ಮುಂದೆ ಬಂದಲ್ಲಿ ಆ ಸಂಸ್ಥೆಗಳಿಗೆ ಶೇ.30ರಷ್ಟು ಷೇರು ಬಂಡವಾಳವನ್ನು ಟೆರ್ಮ್ ಶೀಟ್ ಆಧಾರದ ಮೇಲೆ ನೀಡಲಾಗುವುದು.

    `ಅಮ್ಯೂಸ್‍ಮೆಂಟ್ ಪಾರ್ಕ್’, `ಜಲಕ್ರೀಡೆ’ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ಶೇ. 30ರಷ್ಟು ಷೇರು ಬಂಡವಾಳ ಹೂಡಲಾಗುವುದು. ಪ್ರವಾಸಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಈ ವರ್ಷ 80 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಹೂಡಿಕೆಗಳನ್ನು 4 ವರ್ಷದ ನಂತರ ಹಿಂತೆಗೆದುಕೊಂಡು ಮತ್ತೆ ಸರ್ಕಾರಕ್ಕೆ ಜಮಾ ಮಾಡಲಾಗುತ್ತದೆ.

    ಈ ಪ್ರದೇಶದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಹೂಡಿಕೆ ಮಾಡಲು ಮುಂದರೆ ಬರುವ ಉದ್ದಿಮೆದಾರರು ಸ್ಥಳೀಯ ಕಾನೂನುಗಳು ಹಾಗೂ ಎಲ್ಲಾ ಪ್ರಾಧಿಕಾರಿಗಳ ಅನುಮೋದನೆ ಪಡೆಯುವುದು ಅವಶ್ಯಕ. ಕರ್ನಾಟಕ ಸರ್ಕಾರವು ಈಗಾಗಲೇ (KITVEN) ಫಂಡ್ ಮ್ಯಾನೇಜರ್ ಗಳನ್ನು ಹೂಡಿಕೆಗೆ ನೆರವು ನೀಡಲು ನೇಮಕಾತಿ ಮಾಡಿರುವುದರಿಂದ ಅವುಗಳನ್ನು ಹೂಡಿಕೆದಾರರು ಉಪಯೋಗಿಸಿಕೊಳ್ಳಬಹುದು. ಹಾಗೆಯೇ ಕೆ.ಎಸ್.ಟಿ.ಡಿ.ಸಿ. ಸಂಸ್ಥೆಗೆ ಹೋಟೆಲ್ ಸೌಲಭ್ಯ ಕಲ್ಪಿಸಲು 80 ಕೋಟಿ ರೂಪಾಯಿ ನೀಡಲು ಆಯೋಜಿಸಿದೆ.

    ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರು ವಿಶ್ರಾಂತಿ ಪಡೆದು ಊಟ ತಿಂಡಿ ಮಾಡಿಕೊಂಡು ಪ್ರಯಾಣ ಮುಂದುವರೆಸಲು ಅನುಕೂಲವಾಗುವ ರೀತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮೂರು ಮಾದರಿ ರಸ್ತೆ ಬದಿ ಸೌಲಭ್ಯಗಳನ್ನು (Model way side facilities) ನಿರ್ಮಿಸಲು ಉದ್ದೇಶಿದೆ.

    ಪ್ರವಾಸೋದ್ಯಮ ವಲಯದ ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗವಕಾಶಗಳನ್ನು ಸೃಜಿಸಲು ಕೌಶಲ್ಯಾಭಿವೃದ್ಧಿ, ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ಹಾಗೂ ಪ್ರವಾಸಿ ಟ್ಯಾಕ್ಸಿ ಚಾಲಕರಿಗೆ `ರಿಫ್ರೆಷರ್ ಕೋರ್ಸ್’ಗಳ ಮೂಲಕ ತರಬೇತಿ ನೀಡಲು ಉದ್ದೇಶಿಸಿದೆ.

    ಚಾಮರಾಜನಗರ ಜಿಲ್ಲೆಯಲ್ಲಿರುವ ಭರಚುಕ್ಕಿ ಜಲಪಾತ ಮತ್ತು ಮಂಡ್ಯ ಜಿಲ್ಲೆಯಲ್ಲಿರುವ ಗಗನಚುಕ್ಕಿ ಜಲಪಾತಗಳು ಪ್ರವಾಸಿಗರ ಆಕರ್ಷಣೀಯ ತಾಣಗಳಾಗಿರುತ್ತವೆ. ಈ ತಾಣಗಳಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವರು. ಆದ್ದರಿಂದ ಪ್ರವಾಸಿಗರಿಗೆ ಅನುಕೂಲವಾಗುವ ಹೆಚ್ಚುವರಿ ಪ್ರವಾಸಿ ಸೌಲಭ್ಯಗಳನ್ನು ಗಗನಚುಕ್ಕಿ ಮತ್ತು ಭರಚುಕ್ಕಿ ಪ್ರದೇಶಗಳಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಯೋಜನೆ ಸಿದ್ದಪಡಿಸಿದೆ.

    ರಾಮನಗರ ಜಿಲ್ಲೆಯಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಮತ್ತಷ್ಟು ಸಧೃಢಗೊಳಿಸಲು ರಾಮನಗರದ ಬಳಿ `ಆಟ್ಸ್ ಅಂಡ್ ಕ್ರಾಫ್ಟ್ ವಿಲೇಜ್’ ಅನ್ನು ಮತ್ತು ಕಣ್ವ ಜಲಾಶಯದ ಪ್ರದೇಶದಲ್ಲಿ `ಚಿಲ್ಡ್ರನ್ಸ್ ವಲ್ರ್ಡ್’ ಯೋಜನೆಯನ್ನು ಖಾಸಗೀ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶೀಸಲಾಗಿದೆ.

  • ಉಡುಪಿಯಲ್ಲಿ ಶುರುವಾಯ್ತು ಹೆಲಿ ಟೂರಿಸಂ: 1 ಟಿಕೆಟ್ ಬೆಲೆ ಎಷ್ಟು ಗೊತ್ತೆ?

    ಉಡುಪಿಯಲ್ಲಿ ಶುರುವಾಯ್ತು ಹೆಲಿ ಟೂರಿಸಂ: 1 ಟಿಕೆಟ್ ಬೆಲೆ ಎಷ್ಟು ಗೊತ್ತೆ?

    ಉಡುಪಿ: ಧಾರ್ಮಿಕ ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕರಾವಳಿಗೆ ಅಗ್ರಸ್ಥಾನವಿದೆ. ಪ್ರಮುಖ ಪ್ರವಾಸಿ ತಾಣಗಳು ಕೂಡಾ ಕರಾವಳಿಲ್ಲಿಯೇ ಇದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆದು ಲಾಭಗಳಿಸುವುದರಲ್ಲಿ ಉಡುಪಿ ಜಿಲ್ಲೆ ಹಿನ್ನಡೆ ಅನುಭವಿಸಿರುವ ಕಾರಣ ಕರಾವಳಿಗೆ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಉಡುಪಿಯಲ್ಲಿ ಹೆಲಿ ಟೂರಿಸಂ ಆರಂಭವಾಗಿದೆ.

    ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮಹತ್ವಕಾಂಕ್ಷಿ ದೃಷ್ಟಿಯಿಂದ ಯೋಜನೆಯನ್ನು ಆರಂಭಿಸಿದ್ದು, 2500 ರೂ. ಪಾವತಿಸಿ 6 ಮತ್ತು 8 ನಿಮಿಷದ ಎರಡು ಪ್ಯಾಕೇಜ್ ಮೂಲಕ ಆಕಾಶ ಮಾರ್ಗವಾಗಿ ಉಡುಪಿಯ ಪ್ರಾಕೃತಿಕ ಸೌಂದರ್ಯವನ್ನು ಹೆಲಿಕಾಪ್ಟರ್ ನಲ್ಲಿ ಸವಿಯಬಹುದು.

    ಅದರಲ್ಲೂ ಸಮುದ್ರದ ಮೇಲೆ ಕಾಪ್ಟರ್ ಹಾರುವ ದೃಶ್ಯವಂತೂ ನಿಜಕ್ಕೂ ರೋಮಾಂಚನ ಎನಿಸುತ್ತದೆ. ನದಿ, ಸಮುದ್ರ, ಬೆಟ್ಟಗುಡ್ಡ, ಮಣಿಪಾಲದ ಗಗನಚುಂಬಿ ಕಟ್ಟಡಗಳನ್ನು ಮೇಲಿಂದ ನೋಡೋ ಅವಕಾಶ ಸಿಕ್ಕಿದೆ. ಉಡುಪಿಗೆ ಬರುವ ಜನರಿಗೆ ಸುಮಾರು 10 ದಿನಗಳ ಹೆಲಿಕಾಪ್ಟರ್ ಸೇವೆ ಲಭ್ಯವಿರಲಿದೆ.

    ಸಚಿವ ಪ್ರಮೋದ್ ಮಧ್ವರಾಜ್ ಪ್ರಥಮ ಬಾರಿಗೆ ಉಡುಪಿಯನ್ನು ಹೆಲಿಕಾಪ್ಟರ್ ನಲ್ಲಿ ನೋಡಿದ ಅನುಭವ ಹಂಚಿಕೊಂಡರು. ಅತ್ಯಂತ ಸುಂದರ ಉಡುಪಿಯನ್ನು ಹೆಲಿಕಾಪ್ಟರ್ ನಲ್ಲಿ ಸುತ್ತವ ಮೂಲಕ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಗೆ ಉಡುಪಿಗೆ ಬರುವ ಜನರಿಗೆ ಹೆಲಿಕಾಪ್ಟರ್ ನಲ್ಲಿ ಹಾರುವ ಅವಕಾಶ ಸಿಕ್ಕಿದೆ.