Tag: thungabhadra dam

  • ಕೊಪ್ಪಳದಲ್ಲಿ ಕೆಸರು ನೀರು ಕುಡಿದು ಹಸುಗಳು ಸಾವು – ತುಂಗಭದ್ರಾ ಹಿನ್ನೀರಿನಲ್ಲಿ ಮನಕಲಕುವ ದುರಂತ

    ಕೊಪ್ಪಳದಲ್ಲಿ ಕೆಸರು ನೀರು ಕುಡಿದು ಹಸುಗಳು ಸಾವು – ತುಂಗಭದ್ರಾ ಹಿನ್ನೀರಿನಲ್ಲಿ ಮನಕಲಕುವ ದುರಂತ

    ಕೊಪ್ಪಳ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗ್ತಿದೆ. ಭೀಕರ ಬರದಿಂದ ಜಾನುವಾರುಗಳಿಗೆ ಕುಡಿಯಲು ಹನಿ ನೀರು, ಮೇವು ಸಿಗ್ತಿಲ್ಲ. ಹೆಚ್ಚಾಗ್ತಿರೋ ಬಿಸಿಲಿನ ತಾಪ ತಾಳಲಾರದೆ ಜಾನುವಾರಗಳು ಬಲಿಯಾಗ್ತಿವೆ. ಬರದ ಮಧ್ಯೆ ರೈತರ ಜಾನುವಾರುಗಳು ಕೂಡ ಬಲಿಯಾಗ್ತಿರೋದ್ರಿಂದ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

    ಗೋಶಾಲೆಯಲ್ಲಿ ಸಮರ್ಪಕವಾಗಿ ಮೇವು, ನೀರು ಪೂರೈಸ್ತಿಲ್ಲ ಅಂತ ಬುಧವಾರ ಉಪ ತಹಸೀಲ್ದಾರ್ ಕಚೇರಿ ಆವರಣಕ್ಕೆ ಜಾನುವಾರು ನುಗ್ಗಿಸಿ ರೈತರು ಪ್ರತಿಭಟನೆ ಮಾಡಿದ್ರು. ಕೊಪ್ಪಳದ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಮೇವಿನ ಸಮಸ್ಯೆ ಆಗ್ತಿದೆ ಅಂತ ಅಧಿಕಾರಿಗಳು ಒಪ್ಪಿಕೊಂಡಿದ್ರು. ಆದ್ರೆ ಇದೇ ಕೊಪ್ಪಳದಲ್ಲೀಗ ಜಾನುವಾರುಗಳ ಮರಣ ಮೃದಂಗ ಶುರುವಾಗಿದೆ.

    ಬಿಸಿಲಿನ ತಾಪಕ್ಕೆ ಕೊಪ್ಪಳ ತಾಲೂಕಿನ ಕರ್ಕಿಹಳ್ಳಿಯಲ್ಲಿ ಜಾನುವಾರುಗಳು ಸಾವನ್ನಪ್ಪಿವೆ. ತುಂಗಭದ್ರಾ ಡ್ಯಾಂನ ಹಿನ್ನೀರು ಪ್ರದೇಶದಲ್ಲಿ ಹನಿ ನೀರು ಇಲ್ದೆ ಕೆಸರು ನೀರು ಕುಡಿದು 30ಕ್ಕೂ ಹೆಚ್ಚು ಹಸುಗಳು ಅಸು ನೀಗಿವೆ.

    ಕೊಪ್ಪಳ ಜಿಲ್ಲಾಡಳಿತ ತೆರೆದಿರೋ ಗೋಶಾಲೆಯಲ್ಲೂ ಬಿಸಿಲಿನ ತಾಪ ತಾಳಲಾರದೆ ಈಚೆಗೆ ಎರಡು ಜಾನುವಾರುಗಳು ಬಲಿಯಾಗಿವೆ. ಬಳ್ಳಾರಿ, ಗದಗ, ಬಾಗಲಕೋಟೆ ಜಿಲ್ಲೆಗಳಿಂದ್ಲೂ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಜಾನುವಾರುಗಳು, ಸಾವಿರಾರು ಕುರಿಗಳು ತುಂಗಭದ್ರಾ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಬೀಡುಬಿಟ್ಟಿವೆ. ಆದ್ರೆ ಇದು ಅಂಥ್ರಾಕ್ಸ್ ರೋಗದಿಂದ ಆಗಿರೋ ದುರಂತ ಅಂತಾ ಅಧಿಕಾರಿಗಳು ಹೇಳುತ್ತಾರೆ.

    ಒಂದೆಡೆ ಅಂಥ್ರಾಕ್ಸ್ ರೋಗಕ್ಕೆ ಬಲಿಯಾದ್ರೆ ಮತ್ತೊಂದೆಡೆ ಬಿಸಿಲಿತಾಪ, ಕುಡಿಯಲು ನೀರು, ಮೇವು ಸಿಗ್ತಿಲ್ಲ. ಅಧಿಕಾರಿಗಳು ಇನ್ನಾದ್ರೂ ತುಂಗಭದ್ರಾ ಡ್ಯಾಂಗೆ ನೀರು ಬಿಟ್ರೆ ಮತ್ತಷ್ಟು ರೈತರು ಕಣ್ಣೀರು ಹಾಕೋದು ತಪ್ಪುತ್ತೆ.

  • ಕೊಪ್ಪಳದಲ್ಲಿ ಕುಡಿಯುವ ನೀರಿಗೆ ಖದೀಮರ ಕನ್ನ – ಕಾಲುವೆಗೆ ಮೋಟಾರಿಟ್ಟು ಕದೀತಾರೆ  ಜೀವಜಲ

    ಕೊಪ್ಪಳದಲ್ಲಿ ಕುಡಿಯುವ ನೀರಿಗೆ ಖದೀಮರ ಕನ್ನ – ಕಾಲುವೆಗೆ ಮೋಟಾರಿಟ್ಟು ಕದೀತಾರೆ ಜೀವಜಲ

    – ಖಾಕಿ, ನಿಷೇಧಾಜ್ಞೆ ನಡುವೆಯೂ ಪ್ರಭಾವಿಗಳದ್ದೇ ಆಟ

    ಕೊಪ್ಪಳ: ನೀರಿನ ಅಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರಿಗೆ ನೀರು ಹರಿಸುವ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯ ಮೂಲಕ ಪ್ರತಿ ದಿನ 1 ಸಾವಿರ ನೀರು ಕ್ಯೂಸೆಕ್ ಹರಿಸಲು ತುಂಗಭದ್ರಾ ಮಂಡಳಿ ತೀರ್ಮಾನಿಸಿದೆ.

    ಆದ್ರೆ ಕುಡಿಯುವ ನೀರು ಎಲ್ಲಿಗೆ ಸೇರಬೇಕಿತ್ತೋ ಅಲ್ಲಿಗೆ ಸೇರುತ್ತಿಲ್ಲ. ಕಾರಣ ಮುಖ್ಯಕಾಲುವೆಯ ಒಳಗಿನಿಂದಲೇ ಬೋಗಾ ಕೊರೆದು ಮೋಟಾರ್ ಅಳವಡಿಸಿ ನೀರು ಕದಿಯುತ್ತಿದ್ದಾರೆ. ಮೋಟಾರ್‍ಗಳನ್ನು ಕಲ್ಲು, ಗೋಣಿಚೀಲದಿಂದ ಮುಚ್ಚಿದ್ದಾರೆ. ಕಾಲುವೆಯುದ್ದಕ್ಕೂ ಕನ್ನ ಕೊರೆದು ಸಾಲಾಗಿ ಮೋಟಾರ್‍ಗಳನ್ನಿಟ್ಟು ನೀರು ದೋಚ್ತಿದ್ದಾರೆ.

    ಕುಡಿಯುವ ಉದ್ದೇಶಕ್ಕಾಗಿ ಬಿಟ್ಟಿರುವ ನೀರನ್ನು ಕೃಷಿಗೆ ಬಳಸದಂತೆ ಸರ್ಕಾರವೇ ನಿರ್ಬಂಧ ಹೇರಲಾಗಿದೆ. ಕಾಲುವೆ ಮೇಲೆ ನಿಷೇಧಾಜ್ಞೆ ವಿಧಿಸಲಾಗಿದ್ದು ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಆದರೂ ನೀರು ಕದ್ದು ಸ್ಥಳೀಯ ಪ್ರಭಾವಿಗಳು ಭತ್ತ ಬೆಳೆಯುತ್ತಿದ್ದಾರೆ. ಅಂತಾ ಪೊಲೀಸ್ ವರಿಷ್ಠಾಧಿಕಾರಿ ಡಾ.ತ್ಯಾಗರಾಜನ್ ಹೇಳಿದ್ದಾರೆ.

    ನೀರು ಬಿಟ್ರೂ ಯಾರಿಗೂ ಕೂಡ ನೀರು ಸಿಕ್ತಾ ಇಲ್ಲ. ದೊಡ್ಡ ಅಧಿಕಾರಿಗಳು ಹಾಗೂ ರೈತರು ಎಲ್ಲರು ಪೈಪ್ ಹಾಕಿ ಬೋರ್ ವೆಲ್‍ನಿಂದ ನೀರು ಕದಿಯುತ್ತಾರೆ. ಇದಕ್ಕೆ ರಾಜಕೀಯ ಮುಖಂಡರ ಕೈವಾಡವಿದೆ. ಇದರಿಂದ ರೈತರಿಗೆ ಕುಡಿಯೋದಕ್ಕೆ ನೀರು ಇಲ್ಲದೇ ತುಂಬಾ ತೊಂದರೆಯಾಗುತ್ತಿದೆ ಅಂತಾ ಕಾಲುವೆ ಕೆಳಭಾಗದ ರೈತ ಭೀಮಣ್ಣ ಹೂಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊಪ್ಪಳದ ಕೊನೆ ಭಾಗ ಮತ್ತು ರಾಯಚೂರು ಮಂದಿಗೆ ತುಂಗೆ ಮರೀಚಿಕೆಯಾಗಿದ್ದಾಳೆ. ಈಗಾಲಾದ್ರೂ ಜಿಲ್ಲಾಡಳಿತ ಮತ್ತು ಜಲಸಂಪನ್ಮೂಲ ಇಲಾಖೆಗೆ ಜ್ಞಾನೋದಯವಾಗಲಿ.