Tag: Terror Attack On Hindu

  • ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!

    ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ದಲ್ಲಿ (Pahalgam) ಭಯೋತ್ಪಾದಕರ ದಾಳಿಗೆ 26 ಅಮಾಯಕ ಹಿಂದೂಗಳು ಜೀವ ತೆತ್ತಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ (Indian Army) ಪ್ರತೀಕಾರ ಪ್ರಾರಂಭಿಸಿದೆ. ಉಗ್ರರ ಸದೆಬಡಿಯುವ ಶಪಥಗೈಯ್ದಿರುವ ಭಾರತೀಯ ಸೇನೆ ಮೊದಲ ದಿಟ್ಟ ಹೆಜ್ಜೆ ಇರಿಸಿದೆ. ಪಹಲ್ಗಾಮ್‌ನ ದಾಳಿಯಲ್ಲಿ ಭಾಗಿ ಆಗಿದ್ದಾನೆ ಎನ್ನಲಾದ ಲಷ್ಕರ್-ಇ-ತೈಬಾ ಉಗ್ರ ಆಸೀಫ್ ಶೇಖ್ ಮತ್ತು ಆದಿಲ್ ಮನೆಗಳನ್ನು ಸೇನೆ ಉಡಾಯಿಸಿದೆ.

    ಬಿಹಾರದಲ್ಲಿ (Bihar) ಪ್ರಧಾನಿ ನರೇಂದ್ರ ಮೋದಿ (PM Narendra Modi), ಅಮಾಯಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳೋದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇವತ್ತು ಸೇನೆ ಅಖಾಡಕ್ಕೆ ಇಳಿದಿದೆ. ಕಾಶ್ಮೀರದ (Kashmir)  ಟ್ರಾಲ್‌ನಲ್ಲಿರುವ ಎಲ್‌ಇಟಿ ಭಯೋತ್ಪಾದಕ ಆಸಿಫ್ ಶೇಖ್‌ನ ಮನೆ, ಅನಂತ್‌ನಾಗ್ ಜಿಲ್ಲೆಯಲ್ಲಿರುವ ಆದಿಲ್ ಮನೆಯನ್ನು ಸ್ಫೋಟಿಸಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಶೇಖ್ ಭಾಗಿಯಾಗಿದ್ದಾನೆಂದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳು ಶೇಖ್ ಮನೆ-ಆಸ್ತಿಯನ್ನು ನಾಶಪಡಿಸಿದ್ದಾರೆ. ಟ್ರಾಲ್ ಮತ್ತು ಅನಂತ್‌ನಾಗ್ ಜಿಲ್ಲೆಯಲ್ಲಿ ಇಬ್ಬರು ಉಗ್ರರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.ಇದನ್ನೂ ಓದಿ: ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ

    ಪಹಲ್ಗಾಮ್‌ನಲ್ಲಿ ಗುಂಡಿನ ಸುರಿಮಳೆ ಸುರಿಸಿ ಹಿಂದೂಗಳ ಹತ್ಯೆಗೈಯ್ದ ಉಗ್ರರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ. 5 ರಿಂದ 7 ಭಯೋತ್ಪಾದಕರು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಪೈಕಿ ಇಬ್ಬರು ಸ್ಥಳೀಯ ಉಗ್ರರೇ ಆಗಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈಗಾಗಲೇ ಇಬ್ಬರು ಉಗ್ರರ ಮನೆಗಳನ್ನು ಧ್ವಂಸ ಮಾಡಿರುವ ಸೇನೆ ಭಯೋತ್ಪಾದಕರ ಜಾಲ ಭೇದಿಸಲು ಕಾರ್ಯಾಚರಣೆ ಶುರು ಮಾಡಿದೆ.

    ಅಮಾಯಕ 26 ಮಂದಿ ಹಿಂದೂಗಳ ಕಗ್ಗೊಲೆ ಮಾಡಿದ ಕಡುಪಾಪಿಗಳ ಹುಟ್ಟಡಗಿಸಲು ಭಾರತೀಯ ಸೇನೆ ಶಪಥ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಎನ್‌ಕೌಂಟರ್ ಆರಂಭಿಸಲಾಗಿದೆ. ಅಡಗಿ ಕುಳಿತಿರುವ ಉಗ್ರರು ಹಾಗೂ ಭಾರತೀಯ ಸೇನಾಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಾಚರಣೆ ವೇಳೆ ಲಷ್ಕರ್-ಎ ತೊಯ್ಬಾ ಸಂಘಟನೆಯ ಕಮಾಂಡರ್ ಅಲ್ತಫಾ ಲಲ್ಲಿಯನ್ನು ಫಿನಿಶ್ ಮಾಡಲಾಗಿದೆ.

    ಬಂಡಿಪೋರಾ ಜಿಲ್ಲೆಯ ಬಾಜಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆ ಭದ್ರತಾ ಪಡೆಗಳು ಕೂಂಬಿAಗ್ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಇಬ್ಬರು ಭದ್ರತಾಪಡೆ ಸಿಬ್ಬಂದಿಗೆ ಗಾಯಗಳಾಗಿವೆ. ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರೆದಿರುವ ಸೇನಾಪಡೆ ಕಾರ್ಯಾಚರಣೆಯನ್ನು ಎನ್‌ಕೌಂಟರ್ ಆಗಿ ಬದಲಿಸಿದ್ದು, ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

    ಒಟ್ಟಿನಲ್ಲಿ ಭಾರತ ಪಾಕಿಸ್ತಾನದ ಮಧ್ಯೆ ಆತಂಕದ ವಾತಾವರಣವಿದ್ದು, ಇದು ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ.ಇದನ್ನೂ ಓದಿ: ಉಗ್ರರ ದಾಳಿ ನಡೆದ ಪಹಲ್ಗಾಮ್‌ನಲ್ಲಿ ನಿಮ್ಮ ʻPublic TVʼ; ಬೈಸರನ್ ವ್ಯಾಲಿಯಿಂದ ಕನ್ನಡದ ಏಕೈಕ ಚಾನಲ್ ಪ್ರತ್ಯಕ್ಷ ವರದಿ..!

  • `ಪ್ರೇಮ ಕಾಶ್ಮೀರ’ದಲ್ಲಿ ರಕ್ತದೋಕುಳಿ – ಭೀಕರ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

    `ಪ್ರೇಮ ಕಾಶ್ಮೀರ’ದಲ್ಲಿ ರಕ್ತದೋಕುಳಿ – ಭೀಕರ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

    ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನ (Pahalgam) ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭೀಕರ ದಾಳಿಯ ಬಗ್ಗೆ ಅಲ್ಲಿನ ಪ್ರತ್ಯಕ್ಷದರ್ಶಿಗಳು ದುರಂತ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

    ಏಪ್ರಿಲ್ 22ರ ಮಧ್ಯಾಹ್ನ 1:50ರ ಸುಮಾರಿಗೆ ನಡೆದ ಪೈಶಾಚಿಕ ಕೃತ್ಯದಲ್ಲಿ 26 ಪ್ರವಾಸಿಗರು ಬಲಿಯಾಗಿದ್ದಾರೆ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಮತ್ತಷ್ಟು ಮಾಹಿತಿ ನೀಡಿದ್ದು, ಕರಾಳ ಘಟನೆ ಕಣ್ಮುಂದೆ ಕಟ್ಟಿದಂತಾಗಿದೆ.ಇದನ್ನೂ ಓದಿ: Pahalgam Terror Attack | ಪಾಕಿಸ್ತಾನ ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕ ಅರೆಸ್ಟ್‌

    ಪ್ರತ್ಯಕ್ಷದರ್ಶಿಗಳು ಹೇಳೋದೇನು?
    * ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವಾಗ ಹುಲ್ಲುಗಾವಲಿನ ಪೈನ್ ಮರಗಳ ಮಧ್ಯದಿಂದ 5 ಉಗ್ರರು ಬಂದರು.
    * ಯಾವ ಕಡೆಯಲ್ಲಿ ಹೆಚ್ಚು ಪ್ರವಾಸಿಗರಿದ್ದರೋ ಆ ಕಡೆ 3 ತಂಡಗಳಾಗಿ ತೆರಳಿದರು.
    * ಉಗ್ರರು ಬಂದೂಕಗಳ ಜೊತೆಗೆ ತಮ್ಮ ಕಡೆ ಬಾಡಿ ಕ್ಯಾಮೆರಾವನ್ನು ಇಟ್ಟುಕೊಂಡಿದ್ದರು.
    * ತಮ್ಮ ಕುಟುಂಬದ ಜೊತೆಗಿದ್ದವರು ಬಂದೂಕುಧಾರಿಗಳನ್ನು ನೋಡಿ, ಇರ‍್ಯಾಕೆ ನಮ್ಮ ಹತ್ತಿರ ಬರುತ್ತಿದ್ದಾರೆ ಎಂದುಕೊಳ್ಳುತ್ತಿದ್ದರು.
    * ಹತ್ತಿರ ಬಂದಿದ್ದೇ ಉಗ್ರರು ಧರ್ಮ ಯಾವುದು, ಇಸ್ಲಾಂ ಶ್ಲೋಕ ಹೇಳಿ ಎಂದು ಕೇಳಿದರು.
    * ಆ ದಿನ ಉಗ್ರರು ಮೊದಲ ಗುಂಡು ಹಾರಿಸಿದ್ದು ಮ.1:50ರ ಸುಮಾರಿಗೆ, ಆದರೆ 10 ನಿಮಿಷಗಳಲ್ಲೇ 26 ಜನರನ್ನು ಕೊಂದು ಕಾಡಿನಲ್ಲಿ ಅದೃಶ್ಯರಾದರು.
    * ಪ್ರವಾಸಿಗರನ್ನು ಗುರಿಯಾಗಿಸಿ ತಲೆಗೆ ಗುಂಡಿಟ್ಟು ಕೊಂದ ಅರ್ಧಗಂಟೆ ಬಳಿಕ ಪೊಲೀಸರಿಗೆ ಸಂದೇಶ ರವಾನೆಯಾಗಿದೆ.
    * ದುರ್ಗಮ ಪ್ರದೇಶವಾಗಿರುವ ಕಾರಣ ಮ.3 ಗಂಟೆ ಬಳಿಕ ಅಲ್ಲಿದ್ದವರಿಗೆ ಸಹಾಯ ಸಿಕ್ಕಿದೆ, ಒಂದು ವೇಳೆ ಗಾಯಗೊಂಡವರಿಗೆ ಬೇಗ ಚಿಕಿತ್ಸೆ ಸಿಕ್ಕಿದ್ದರೆ, ಹಲವು ಜನ ಬದುಕುವ ಅವಕಾಶ ಇತ್ತು ಎಂದು ಘಟನೆ ಬಗ್ಗೆ ತಿಳಿಸಿದ್ದಾರೆ.ಇದನ್ನೂ ಓದಿ: Pahalgam Attack | ಕೇಂದ್ರ ಯಾವ್ದೇ ಕ್ರಮ ತೆಗೆದುಕೊಂಡ್ರೂ‌ ಪೂರ್ಣ ಬೆಂಬಲ ಇದೆ: ರಾಹುಲ್‌ ಗಾಂಧಿ

     

  • ಏ.27ರೊಳಗೆ ಭಾರತ ಬಿಟ್ಟು ತೊಲಗಿ – ಪಾಕ್ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್

    ಏ.27ರೊಳಗೆ ಭಾರತ ಬಿಟ್ಟು ತೊಲಗಿ – ಪಾಕ್ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್

    -ಮೆಡಿಕಲ್ ವೀಸಾಗಳಿಗೆ ಏ.29ರವರೆಗೆ ಅವಕಾಶ

    ನವದೆಹಲಿ: ಜಮ್ಮು ಕಾಶ್ಮೀರದ (Jammu Kashmir) ಪಹಗ್ಲಾಮ್ (Pahalgam) ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್ ನೀಡಿದೆ. ಈ ಮೂಲಕ ಪಾಕ್ ಪ್ರಜೆಗಳ ಎಲ್ಲಾ ರೀತಿಯ ವೀಸಾಗಳನ್ನು ಸರ್ಕಾರ ಗುರುವಾರ ಸ್ಥಗಿತಗೊಳಿಸಿದ್ದು, ಮೆಡಿಕಲ್ ವೀಸಾಗಳಿಗೆ (Medical Visa) ಏ.29ರವೆಗೆ ಅವಕಾಶ ನೀಡಿದೆ.

    ಎಲ್ಲಾ ರೀತಿಯ ವೀಸಾಗಳನ್ನು ಗುರುವಾರ ಸ್ಥಗಿತಗೊಳಿಸಿದ್ದು, ಏ.27ರೊಳಗೆ ಭಾರತ ತೊರೆಯುವಂತೆ ಸೂಚಿಸಿದೆ. ವೈದ್ಯಕೀಯ ವೀಸಾಗಳು ಏ.29ರವರೆಗೆ ಮಾನ್ಯವಾಗಿರಲಿದ್ದು, ಬಳಿಕ ರದ್ದಾಗಲಿವೆ ಎಂದು ತಿಳಿಸಿದೆ.ಇದನ್ನೂ ಓದಿ: ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್‌

    ವಿದೇಶಾಂಗ ಸಚಿವಾಲಯದ (Ministry of External Affairs) ಮಾಹಿತಿ ಪ್ರಕಾರ, ಏ.22 ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯ ಬಳಿಕ ಸಚಿವ ಸಂಪುಟ ಹಲವು ಭದ್ರತೆಯ ಕುರಿತಾದ ನಿರ್ಧಾರಗಳನ್ನು ಕೈಗೊಂಡಿದೆ. ಈ ನಿರ್ಧಾರದ ಮುಂದುವರಿದ ಭಾಗವಾಗಿ ಭಾರತ ಸರ್ಕಾರ (Indian Government) ತಕ್ಷಣವೇ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.

    ಜೊತೆಗೆ ಪಾಕಿಸ್ತಾನದಲ್ಲಿರುವ ಎಲ್ಲ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ಸಚಿವಾಲಯ ಸೂಚಿಸಿದೆ ಹಾಗೂ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ವೀಸಾ ಅವಧಿ ಮುಗಿಯುವ ಮೊದಲು ಭಾರತವನ್ನು ತೊರೆಯಬೇಕು ಎಂದು ಸೂಚಿಸಿದೆ.

    ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ (Vikram Misri) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಿಸಿಎಸ್ ಸಭೆಯ ನಂತರ, ಸರ್ಕಾರ ಪಾಕಿಸ್ತಾನಿ ಪ್ರಜೆಗಳ ಸಾರ್ಕ್ ವೀಸಾಗಳನ್ನು ಸ್ಥಗಿತಗೊಳಿಸಿತ್ತು. ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ಪಾಕ್ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸಲು ಅವಕಾಶವಿರುವುದಿಲ್ಲ ಮತ್ತು ಈ ಹಿಂದೆ ನೀಡಿದ್ದ ಎಲ್ಲಾ ಎಸ್‌ಪಿಇಎಸ್ ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿತ್ತು. ಪ್ರಸ್ತುತ ಎಸ್‌ಪಿಇಎಸ್ ವೀಸಾದಡಿಯಲ್ಲಿ ಭಾರತದಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯೊಳಗೆ ಭಾರತವನ್ನು ತೊರೆಯಲು ಕಾಲಾವಕಾಶವಿದೆ ಎಂದು ತಿಳಿಸಿದರು.ಇದನ್ನೂ ಓದಿ: ಪಹಲ್ಗಾಮ್ ದಾಳಿ | ಕೂಡಲೇ ಪಾಕ್‌ ತೊರೆಯಿರಿ ಭಾರತೀಯರಿಗೆ ಕೇಂದ್ರ ಸೂಚನೆ

  • ರಾಜ್ಯದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಎಚ್ಚರಿಕೆ ವಹಿಸಲು ಗೃಹ ಇಲಾಖೆಗೆ ಸೂಚನೆ – ಸಿಎಂ

    ರಾಜ್ಯದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಎಚ್ಚರಿಕೆ ವಹಿಸಲು ಗೃಹ ಇಲಾಖೆಗೆ ಸೂಚನೆ – ಸಿಎಂ

    ಚಾಮರಾಜನಗರ: ಕರ್ನಾಟಕದಲ್ಲಿ (Karnataka) ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಗೃಹ ಇಲಾಖೆಗೆ ಸೂಚನೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ತಿಳಿಸಿದರು.

    ಮಲೆ ಮಹದೇಶ್ವರ (Male Mahadeshwar) ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೆಲೆಸಿರುವ ವಿದೇಶಿಗಳ ಬಗ್ಗೆ ಕಣ್ಗಾವಲು ಇರಿಸಲು ಕೇಂದ್ರ ಗೃಹ ಸಚಿವರು ಸೂಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಉಗ್ರರು ಯಾವುದೇ ರಾಜ್ಯದಲ್ಲಿರಲಿ ಅವರನ್ನು ಮಟ್ಟಹಾಕಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.ಇದನ್ನೂ ಓದಿ: ನನ್ನನ್ನೂ ಶೂಟ್ ಮಾಡು ಅಂದೆ, ಅವ್ನು ಹೋಗಿ ಮೋದಿಗೆ ಹೇಳು ಅಂದ: ಮಂಜುನಾಥ್ ಪುತ್ರ

    ಉಗ್ರರ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಪಹಲ್ಗಾಮ್ (Pahalgam) ಘಟನೆ ಅತ್ಯಂತ ಖಂಡನೀಯವಾದ ಹಾಗೂ ಅಮಾನುಷವಾದ ಘಟನೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಪುಲ್ವಾಮಾ ಘಟನೆಯೂ ಇದೇ ಜಿಲ್ಲೆಯಲ್ಲಿ ನಡೆದಿದ್ದರಿಂದ ಎಚ್ಚರಿಕೆಯಿಂದ ಇರಬೇಕಾಗಿತ್ತು. ಬಂದೋಬಸ್ತ್ ಸಡಿಲಗೊಳಿಸಬಾರದಿತ್ತು. ಇಲ್ಲಿ ಗುಪ್ತಚರ ವ್ಯವಸ್ಥೆಯ ವೈಫಲ್ಯವಾಗಿದೆ ಎಂದರು.

    ಉಗ್ರರನ್ನು ಮಟ್ಟ ಹಾಕಲು ಎಲ್ಲ ಸಹಕಾರ:
    ಘಟನೆ ನಡೆದ ಬಳಿಕ ಕ್ರಮ ತೆಗೆದುಕೊಳ್ಳುವುದು ಬೇರೆ. ಘಟನೆಯಾಗದಂತೆ ತೆಗೆದುಕೊಳ್ಳುವ ಕ್ರಮಗಳು ಬೇರೆ. ಅದನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಪ್ರಾಣತೆತ್ತರು. ಈ ಘಟನೆಯಲ್ಲಿ 28 ಜನ ನಾಗರಿಕರು ಮೃತರಾಗಿದ್ದಾರೆ. ಇದನ್ನು ತಪ್ಪಿಸಲು ಕ್ರಮ ವಹಿಸಬೇಕಿತ್ತು. ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಉಗ್ರರು ಯಾವುದೇ ಧರ್ಮಕ್ಕೆ ಸೇರಿರಲಿ ಅವರೆಲ್ಲರನ್ನೂ ಮಟ್ಟ ಹಾಕಬೇಕಿರುವುದು ಸರ್ಕಾರದ ಜವಾಬ್ದಾರಿ. ಅದಕ್ಕೆ ಬೇಕಾಗಿರುವ ಎಲ್ಲಾ ಸಹಕಾರ, ಬೆಂಬಲವನ್ನು ನಾವು, ನಮ್ಮ ಸರ್ಕಾರ ಹಾಗೂ ಪಕ್ಷ ಕೊಡುತ್ತದೆ ಎಂದರು.

    10 ಲಕ್ಷ ರೂ. ಪರಿಹಾರ:
    ಉಗ್ರರ ದಾಳಿಯಲ್ಲಿ ಮೃತಪಟ್ಟ ರಾಜ್ಯದ ಮೂವರು ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಪೊಲೀಸ್ ಗೌರವದಿಂದ ಅಂತ್ಯಕ್ರಿಯೆ ನಡೆಯಲಿದೆ ಎಂದರು.

    ಕೇಂದ್ರ ಸರ್ಕಾರದ ರಾಜಕೀಯ ದ್ವೇಷ:
    ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದರೆ ತಕ್ಷಣವೇ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಬಗ್ಗೆ ಪ್ರಧಾನಿ, ಗೃಹ ಸಚಿವರನ್ನು ಭೇಟಿ ಮಾಡಿದ್ದರೂ ಏನು ಪ್ರಯೋಜನ ಆಗಿಲ್ಲ. ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಅನುದಾನವನ್ನು ಕೊಡುತ್ತಿಲ್ಲ. 2023-24ರಲ್ಲಿ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5,300 ಕೋಟಿ ರೂ. ಅನುದಾನವನ್ನು ಈವರೆಗೆ ಕೊಟ್ಟಿಲ್ಲ. ಇದು ರಾಜಕೀಯ ದ್ವೇಷದಂತೆ ಕಾಣುತ್ತದೆ ಎಂದರು.

    ಪ್ರಮುಖ ಯೋಜನೆಗಳ ಬಗ್ಗೆ ಸಂಪುಟದಲ್ಲಿ ಚರ್ಚೆ:
    ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಅನುದಾನ ಘೋಷಣೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಹಾಗೂ ಚಾಮರಾಜನಗರ ಜಿಲ್ಲೆಗೆ ಅಗತ್ಯವಿರುವ ಪ್ರಮುಖ ಯೋಜನೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗುವುದು ಎಂದರು.ಇದನ್ನೂ ಓದಿ: SRH Vs MI – ಇಶಾನ್ ಕಿಶನ್ ವಿವಾದಿತ `ಔಟ್’ – ಮ್ಯಾಚ್ ಫಿಕ್ಸಿಂಗ್ ಚರ್ಚೆ!

  • ಕಾಶ್ಮೀರಕ್ಕೆ ತೆರಳಿದ್ದ 180 ಕನ್ನಡಿಗರು ಸೇಫ್ – ಸ್ವಂತ ಹಣದಲ್ಲೇ ಎಲ್ಲರನ್ನು ಕರೆತರುತ್ತಿರೋ ಸಂತೋಷ್ ಲಾಡ್

    ಕಾಶ್ಮೀರಕ್ಕೆ ತೆರಳಿದ್ದ 180 ಕನ್ನಡಿಗರು ಸೇಫ್ – ಸ್ವಂತ ಹಣದಲ್ಲೇ ಎಲ್ಲರನ್ನು ಕರೆತರುತ್ತಿರೋ ಸಂತೋಷ್ ಲಾಡ್

    ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಭಯೋತ್ಪಾದಕರ ದಾಳಿಯಲ್ಲಿ ಬಲಿಯಾದ ಮೂವರು ಕನ್ನಡಿಗರ ಹೊರತಾಗಿ 180 ಕನ್ನಡಿಗರು ಸುರಕ್ಷಿತರಾಗಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.

    ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 180 ಮಂದಿ ಕನ್ನಡಿಗರು ಸುರಕ್ಷಿತವಾಗಿದ್ದು, ಶ್ರೀನಗರದ ವಿವಿಧ ಹೋಟೆಲ್‌ಗಳಲ್ಲಿ ತಂಗಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಮಾನ ವ್ಯವಸ್ಥೆಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೇಲುಸ್ತುವಾರಿ ಮೂಲಕ ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆ ಮಾಡುತ್ತಿದೆ.ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – 65 ಸಾವಿರಕ್ಕೇರಿಸಿದ್ದ ಪ್ರಯಾಣ ದರ 15,000ಕ್ಕೆ ಇಳಿಕೆ

    ಶ್ರೀನಗರದಿಂದ 180 ಜನರ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಬೆಳಿಗ್ಗೆ 7.30ಕ್ಕೆ ಶ್ರೀನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸ್ವಂತ ದುಡ್ಡಿನಲ್ಲೇ 180 ಜನರನ್ನ ಕರೆತರುತ್ತಿದ್ದು, ಸ್ವತಃ ಎಲ್ಲರಿಗೂ ಕರೆ ಮಾಡಿ ಬೆಂಗಳೂರಿಗೆ ತಲುಪಿಸುವುದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಶ್ರೀನಗರದಲ್ಲಿರುವ ಕನ್ನಡಿಗರು ನಿಟ್ಟುಸಿರು ಬಿಟ್ಟಿದ್ದಾರೆ.

    ಇನ್ನೂ, ಘಟನೆ ನಡೆದ ಸ್ಥಳದಲ್ಲೇ ಇದ್ದ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಪ್ರಭಾಕರ್ ಕುಟುಂಬ ಕೇವಲ 100 ಮೀಟರ್ ದೂರದಲ್ಲಿ ಪಾರಾದೆವು ಎಂದಿದ್ದಾರೆ. ಹಾನಗಲ್ ಪಟ್ಟಣದ 32 ಜನ, ಕೊಪ್ಪಳದ 4 ಕುಟುಂಬಗಳ 20 ಜನರು ಸೇಫ್ ಆಗಿದ್ದು, ಶ್ರೀನಗರದ ಹೋಟೆಲ್‌ನಲ್ಲಿ ತಂಗಿದ್ದಾರೆ. ಉಡುಪಿಯ ಬ್ರಹ್ಮಾವರ, ಕುಂದಾಪುರದ 20 ಮಂದಿಯ ತಂಡ ಸುರಕ್ಷಿತವಾಗಿದೆ. ಚಿಕ್ಕಮಗಳೂರು ನಗರದ ರಾಮೇಶ್ವರ ನಗರದ ಚಂದ್ರಶೇಖರ್ ಫ್ಯಾಮಿಲಿಯ ಐವರು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿಗಳಾದ ನಾಲ್ವರು ನಿವಾಸಿಗಳು ಸೇಫ್ ಆಗಿದ್ದಾರೆ. ತುಮಕೂರಿನ ರೂಪೇಶ್ ಕೃಷ್ಣಯ್ಯ ಕುಟುಂಬ ಅರ್ಧಗಂಟೆ ಅಂತರದಲ್ಲಿ ಹಾಗೂ ಕಲಬುರಗಿಯ ಬ್ರಂಗಿಮಠ್ ಕುಟುಂಬದ 9 ಜನರು 1 ಗಂಟೆ ಮುಂಚಿತವಾಗಿ ಸ್ಥಳದಿಂದ ವಾಪಸ್ ಆಗಿದ್ದರಿಂದ ಬಚಾವ್ ಆಗಿದ್ದಾರೆ. ಹಾವೇರಿಯ ವಿರೇಶ್ ದಂಪತಿ, ಶಿಗ್ಗಾಂವಿಯ ನಾಗರಾಜ್ ದಂಪತಿ ಸುರಕ್ಷಿತರಾಗಿದ್ದಾರೆ. ಬಾಗಲಕೋಟೆಯ ಮಾರವಾಡಿ ಗಲ್ಲಿಯ 13 ಜನರು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಇನ್ನೇನು ಪಹಲ್ಗಾಮ್‌ಗೆ ತೆರಳಬೇಕಿತ್ತು. ಅಷ್ಟರಲ್ಲಿ ಮನೆಯವರು ಕರೆ ಮಾಡಿ ಘಟನೆ ಬಗ್ಗೆ ಹೇಳಿದ್ದಾರೆ. ತಕ್ಷಣವೇ ಎಲ್ಲರೂ ಜಮ್ಮು ತಲುಪಿದ್ದಾರೆ.ಇದನ್ನೂ ಓದಿ: 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್‌ ಪ್ರಜೆಗಳಿಗೆ ಭಾರತ ವಾರ್ನಿಂಗ್‌ – ಪಾಕ್‌ ಸಂಬಂಧಕ್ಕೆ ಎಳ್ಳುನೀರು

  • ಪಹಲ್ಗಾಮ್ ಉಗ್ರರ ದಾಳಿ – 65 ಸಾವಿರಕ್ಕೇರಿಸಿದ್ದ ಪ್ರಯಾಣ ದರ 15,000ಕ್ಕೆ ಇಳಿಕೆ

    ಪಹಲ್ಗಾಮ್ ಉಗ್ರರ ದಾಳಿ – 65 ಸಾವಿರಕ್ಕೇರಿಸಿದ್ದ ಪ್ರಯಾಣ ದರ 15,000ಕ್ಕೆ ಇಳಿಕೆ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಭಯೋತ್ಪಾದಕ ದಾಳಿಯಿಂದಾಗಿ ವಿಮಾನಗಳ ದರಗಳನ್ನು ನಿಯಮಿತ ಮಟ್ಟದಲ್ಲಿ ಹಾಗೂ ಪ್ರಯಾಣಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದ ಬೆನ್ನಲ್ಲೇ 65,000ಕ್ಕೆ ಏರಿಸಿದ್ದ ವಿಮಾನಗಳ ಟಿಕೆಟ್ ದರಗಳಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿದೆ.

    ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ಬೆನ್ನಲ್ಲೇ ಪ್ರವಾಸಿಗರು ಕಾಶ್ಮೀರ ತೊರೆಯಲು ಮುಂದಾಗಿದ್ದಾರೆ. ಈಗಾಗಲೇ ಸುಮಾರು 15 ಸಾವಿರ ಜನರು ಟಿಕೆಟ್ ಕ್ಯಾನ್ಸಲ್ ಮಾಡಿದ್ದು, ರೀಶೆಡ್ಯೂಲ್‌ಗೆ ಮನವಿ ಮಾಡಿದ್ದಾರೆ. ಅಲ್ಲದೇ, ಇದೀಗ ಶ್ರೀನಗರದಿಂದ ಹೊರಡುವ ವಿಮಾನಗಳಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಹೀಗಾಗಿ, ವಿಮಾನ ದರದಲ್ಲಿ ಏರಿಕೆ ಮಾಡದಂತೆ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.ಇದನ್ನೂ ಓದಿ: 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್‌ ಪ್ರಜೆಗಳಿಗೆ ಭಾರತ ವಾರ್ನಿಂಗ್‌ – ಪಾಕ್‌ ಸಂಬಂಧಕ್ಕೆ ಎಳ್ಳುನೀರು

    ದಾಳಿಯಿಂದಾಗಿ ಕಾಶ್ಮೀರ, ಪಹಲ್ಗಾಮ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿದ್ದ ಪ್ರವಾಸಿಗರು ತಮ್ಮ ಸ್ವಸ್ಥಾನಗಳಿಗೆ ಮರಳುತ್ತಿದ್ದು, ಹೀಗಾಗಿ ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ.

    ಟಿಕೆಟ್ ದರ 14,000 ರೂ.ಗೆ ಇಳಿಕೆ:
    ನಾಗರಿಕ ವಿಮಾನಯಾನ ಸಚಿವಾಲಯದ ಸೂಚನೆಯ ನಂತರ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು 14,000 ರೂ.ಗೆ ಇಳಿಸಿದೆ. ಸದ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಇಂಡಿಗೋ ಕಾರ್ಯನಿರ್ವಹಿಸುತ್ತಿದೆ. ಆದರೆ ದಾಳಿಯ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಬಗ್ಗೆ ತಿಳಿದ ವಿಮಾನಯಾನ ಸಂಸ್ಥೆಗಳು ದರವನ್ನು ಹೆಚ್ಚಿಸಿದ್ದವು. ಶ್ರೀನಗರದಿಂದ ದೆಹಲಿಗೆ ಒಂದು ಮಾರ್ಗದ ದರ 65,000 ರೂ.ಗೆ ನಿಗದಿಪಡಿಸಲಾಗಿತ್ತು. ಶ್ರೀನಗರದಲ್ಲಿ ಸಿಲುಕಿಕೊಂಡಿದ್ದ ಹಾಗೂ ಹಿಂತಿರುಗಲು ಬಯಸಿದ್ದ ಹಲವಾರು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಟಿಕೆಟ್ ಬೆಲೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊAಡಿದ್ದರು.

    ಇದಕ್ಕೂ ಮುನ್ನ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮಾತನಾಡಿ, ಶ್ರೀನಗರ ವಿಮಾನ ದರವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ನಗರದಲ್ಲಿರುವ ಪ್ರವಾಸಿಗರ ಪ್ರಯಾಣಕ್ಕಾಗಿ ಬುಧವಾರ ಇನ್ನೂ ಮೂರು ಹೆಚ್ಚುವರಿ ವಿಮಾನಗಳು ಸಂಚರಿಸುತ್ತವೆ ಎಂದು ಹೇಳಿದ್ದರು.

    ಈಗಾಗಲೇ ಏರ್ ಇಂಡಿಯಾ ಮತ್ತು ಇಂಡಿಗೋ, ಶ್ರೀನಗರದಿಂದ ದೆಹಲಿ ಮತ್ತು ಮುಂಬೈಗೆ ಒಟ್ಟು ನಾಲ್ಕು ಹೆಚ್ಚುವರಿ ವಿಮಾನಗಳ ಸೇವೆ ಆರಂಭಿಸಿದೆ. ಟಿಕೆಟ್ ಮರುಹೊಂದಾಣಿಕೆ ಮತ್ತು ರದ್ದತಿ ಶುಲ್ಕಗಳನ್ನು ಸಹ ಮನ್ನಾ ಮಾಡಿವೆ. ಏ.22ರಂದು ಅಥವಾ ಅದಕ್ಕೂ ಮೊದಲು ಮಾಡಿದ ಬುಕಿಂಗ್‌ಗಳಿಗೆ ಅನ್ವಯವಾಗುವ ಪ್ರಯಾಣಕ್ಕಾಗಿ ಮರುಹೊಂದಿಸುವಿಕೆ ಅಥವಾ ರದ್ದತಿಗೆ ಏ.30 ರವರೆಗೆ ವಿನಾಯಿತಿ ನೀಡಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಇನ್ನೂ, ಶ್ರೀನಗರದಿಂದ ವಿವಿಧ ಕಡೆಗೆ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ

  • ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ

    ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ

    ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahaglam) ನಡೆದ ಭಯೋತ್ಪಾದಕರ ಹಿಂದೂಗಳ ನರಮೇಧದಲ್ಲಿ ಮೂವರು ಕನ್ನಡಿಗರು ಸೇರಿ ಒಟ್ಟು 26 ಜನರು ಬಲಿಯಾಗಿದ್ದು, ಆ 26 ಮಂದಿ ಯಾರು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

    ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಅಮೆರಿಕ ಮೂಲದ ಟಿಸಿಎಸ್ ಟೆಕ್ಕಿ ಬಿತನ್, ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಐಎಎಫ್ ಅಧಿಕಾರಿ ತೇಜ್ ಹೈಲ್ಯಾಂಗ್ ಸೇರಿದಂತೆ ಒಟ್ಟು 26 ಜನರ ಹೆಸರನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ.

    ದಾಳಿಯಲ್ಲಿ 26 ಜನರು ಸಾವನ್ನಪ್ಪಿರುವ ಕುರಿತು ಅಧಿಕಾರಿಗಳು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಅಮೆರಿಕ ಮೂಲದ ಕೋಲ್ಕತ್ತಾದ ಟೆಕ್ಕಿ, ಬಿಹಾರದ ಅಬಕಾರಿ ಇನ್ಸ್ಪೆಕ್ಟರ್, ಕರ್ನಾಟಕದ ರಿಯಲ್ ಎಸ್ಟೇಟ್ ಏಜೆಂಟ್, ಒಡಿಶಾದ ಅಕೌಂಟೆಂಟ್, ನೌಕಾಪಡೆಯ ಅಧಿಕಾರಿಯೊಬ್ಬರು ತಮ್ಮ ಕುಟುಂಬಗಳೊಂದಿಗೆ ಪಹಗ್ಲಾಮ್‌ನ ಸುಂದರ ದೃಶ್ಯವನ್ನು ಆನಂದಿಸುತ್ತಿದ್ದಾಗ ಪೈಶಾಚಿಕ ದಾಳಿಗೆ ಬಲಿಯಾಗಿದ್ದಾರೆ.

    ಮೃತರ ಪೈಕಿ ಮಹಾರಾಷ್ಟ್ರದ ಅತುಲ್, ಸಂಜಯ್, ಸಂತೋಷ್, ಕೌಸ್ತುಭ, ಮುಂಬೈನ ಹೆಮಂತ್‌ಮ ದಿಲೀಪ್, ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬಿತಾನ್, ಸಮೀರ್, ಉತ್ತರಾಖಂಡದ ನೀರಜ್, ಹರಿಯಾಣದ ವಿನಯ್ ನಾರ್ವೆಲ್, ಉತ್ತರ ಪ್ರದೇಶದ ಶುಭಂ, ಬಿಹಾರದ ಮನೀಶ್, ಪಂಜಾಬ್‌ನ ದಿನೇಶ್, ಕೇರಳದ ರಾಮಚಂದ್ರ, ಗುಜರಾತ್‌ನ ಸುಮೀತ್, ಯತೀಶ್, ಶೈಲೇಶ್‌ಬಾಯ್, ಕರ್ನಾಟಕದ ಭರತ್ ಭೂಷಣ್, ಮಧುಸೂದನ್, ಮಂಜುನಾಥ್ ರಾವ್, ಒಡಿಶಾದ ಪ್ರಶಾಂತ್, ಪಹಲ್ಗಾಮ್‌ನ ಸೈಯದ್ ಆದಿಲ್ ಹಸೇನ್, ನೇಪಾಳದ ಸುದೀಪ್, ಆಂಧ್ರಪ್ರದೇಶ ವಿಶಾಖಪಟ್ಟಂನ ಸಚಂದ್ರ, ಅರುಣಾಚಲ ಪ್ರದೇಶದ ತೇಜ್ ಹೈಲ್ಯಾಂಗ್, ಮಧ್ಯಪ್ರದೇಶ ಇಂದೋರ್‌ನ ಸುಶೀಲ್ ಸಾವನ್ನಪ್ಪಿದ್ದಾರೆ.

    ಹರಿಯಾಣದ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್:
    ಮೃತರಲ್ಲಿ ಹರಿಯಾಣದ ಕರ್ನಾಲ್‌ನ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಸಾವನ್ನಪ್ಪಿದ್ದಾರೆ. ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಅವರು ತಮ್ಮ ಪತ್ನಿಯೊಂದಿಗೆ ಹನಿಮೂನ್‌ಗೆ ಹೋಗಿದ್ದಾಗ ಈ ದುರಂತ ನಡೆದಿದೆ. ಈ ಕುರಿತು ವಿನಯ್ ಪತ್ನಿ ಹಿಮಾಂಶಿ ಮಾತನಾಡಿ, ನಾವು ಭೇಲ್ಪುರಿ ತಿನ್ನುತ್ತಿದ್ದೆವು, ಆ ಸಮಯದಲ್ಲಿ ಬಂದೂಕುಧಾರಿಯೊಬ್ಬರು ಬಂದು, ನನ್ನ ಗಂಡ ಮುಸ್ಲಿಂ ಅಲ್ಲ ಎಂದು ತಿಳಿಯುತ್ತಿದ್ದಂತೆಯೇ ಅವರ ಮೇಲೆ ಗುಂಡು ಹಾರಿಸಿದರು ಎಂದು ಹೇಳಿದರು.

    ಗುಪ್ತಚರ ಬ್ಯೂರೋ ಅಧಿಕಾರಿ ಮನೀಶ್ ರಂಜನ್:
    ದಾಳಿಯಲ್ಲಿ ಐಎಎಫ್ ಅಧಿಕಾರಿ ತೇಜ್ ಹೈಲ್ಯಾಂಗ್ ಮತ್ತು ಬಂಗಾಳದ ಪುರುಲಿಯಾ ಜಿಲ್ಲೆಯ ಗುಪ್ತಚರ ಬ್ಯೂರೋ ಅಧಿಕಾರಿ ಮನೀಶ್ ರಂಜನ್ ಸಾವನ್ನಪ್ಪಿದ್ದಾರೆ. ಪ್ರಸ್ತುತ ಹೈದರಾಬಾದ್‌ಗೆ ನಿಯೋಜನೆಗೊಂಡಿರುವ ರಂಜನ್, ಕುಟುಂಬ ಸಮೇತ ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ ಕಳೆಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

    ಕರ್ನಾಟಕದ ಮೂವರು:
    ಬೆಂಗಳೂರು ಮೂಲದ ಟೆಕ್ಕಿ ಭರತ್ ಭೂಷಣ್ ಕೂಡ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿ, ಉಗ್ರರ ಅಟ್ಟಹಾಸಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಂಗಳೂರಿನಿಂದ ವೆಕೆಷನ್‌ಗಾಗಿ ಭರತ್ ಭೂಷಣ್, ಪತ್ನಿ, ಹಾಗೂ ಮೂರು ವರ್ಷದ ಮಗ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ನಾಲ್ಕೈದು ದಿನಕ್ಕೆ ಪ್ರವಾಸಕ್ಕೆ ತೆರಳಿದ್ದ ಕುಟುಂಬ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ ಮಂಗಳವಾರ ನಡೆದ ಉಗ್ರರ ಗುಂಡಿನ ದಾಳಿಯಿಂದ ಭರತ್ ಭೂಷಣ್ ಪ್ರಾಣಪಕ್ಷಿ ಹಾರಿಹೋಗಿದೆ.

    ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಉಗ್ರರು ನಡೆಸಿದ ನಡೆದ ಹಿಂದೂಗಳ ನರಮೇಧದಲ್ಲಿ ಬೆಂಗಳೂರಿನ ಮಧುಸೂದನ್ ಬಲಿಯಾಗಿದ್ದಾರೆ. ಮೂಲತಃ ಆಂಧ್ರದ ನೆಲ್ಲೂರಿನವರಾದ ಮಧುಸೂದನ್ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದರು. ಎರಡು ದಿನದ ಹಿಂದೆ ಕಾಶ್ಮೀರಕ್ಕೆ ಕುಟುಂಬ ತೆರಳಿತ್ತು.

    ಮಂಜುನಾಥ್ ರಾವ್ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದವರು. ಅವರ ತಂದೆ ಶಿವಮೊಗ್ಗದ ಮ್ಯಾಮ್ ಕೋಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದರು. ಮೂರು ದಿನಗಳ ಹಿಂದೆ ಮಂಜುನಾಥ್ ರಾವ್ ಪತ್ನಿ, ಮಗನನ್ನು ಕರೆದುಕೊಂಡು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಮಗನ ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ 6 ದಿನಗಳ ಪ್ಯಾಕೇಜ್ ಪ್ರವಾಸ ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ಸಂಬಂಧಿ ಅಶೋಕ್‌ಗೆ ಕರೆ ಮಾಡಿದ್ದ ಮಂಜುನಾಥ್ ಏ.24ರಂದು ವಾಪಸ್ ಬರುವುದಾಗಿ ಹೇಳಿದ್ದರು. ಆದ್ರೆ ದುರದೃಷ್ಟವಶಾತ್ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

    ಮಹಾರಾಷ್ಟ್ರದ ಸಂತೋಷ್ ಜಗದಾಳೆ & ಕೌಸ್ತುಭ್ ಗನ್ಬೋಟೆ:
    ಮಹಾರಾಷ್ಟ್ರದ ಪುಣೆಯ ಉದ್ಯಮಿಗಳಾದ ಸಂತೋಷ್ ಜಗದಾಳೆ ಮತ್ತು ಕೌಸ್ತುಭ್ ಗನ್ಬೋಟೆ ಕುಟುಂಬ ಸಮೇತ ಮಂಗಳವಾರ ಪಹಲ್ಗಾಮ್‌ಗೆ ತೆರಳಿದ್ದರು. ಅದೇ ದಿನ ವಿಧಿ ಅವರಿಬ್ಬರನ್ನು ಗುಂಡಿನ ದಾಳಿಯಲ್ಲಿ ಬಲಿ ಪಡೆದುಕೊಂಡಿದೆ.

    ಈ ಕುರಿತು ಸಂತೋಷ್ ಮಗಳು ಮಾತನಾಡಿ, ನಮ್ಮ ಸುತ್ತಲೂ ಹಲವಾರು ಪ್ರವಾಸಿಗರಿದ್ದರು. ಆದರೆ ಭಯೋತ್ಪಾದಕರು ಹಿಂದೂ ಅಥವಾ ಮುಸ್ಲಿಂ ಎಂದು ಕೇಳಿದ ನಂತರ ಪುರುಷನ್ನು ಗುರಿಯಾಗಿಸಿಕೊಂಡು ಬಲಿ ಪಡೆದಿದ್ದಾರೆ ಎಂದರು.

    ಒಡಿಶಾದ ಪ್ರಶಾಂತ್ ಸತ್ಪತಿ:
    ಒಡಿಶಾದ ಬಾಲಸೋರ್‌ನ ಮೂಲದವರಾದ ಪ್ರಶಾಂತ್ ಸತ್ಪತಿ ಎಂಬುವವರು ತಮ್ಮ ಪತ್ನಿ ಮತ್ತು ಎಂಟು ವರ್ಷದ ಮಗನೊಂದಿಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದರು. ಈ ವೇಳೆ ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ. ಈ ಕುರಿತು ಮೃತನ ಸಹೋದರ ಮಾತನಾಡಿ. ನಾವು ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿದಾಗ, ಅವರು ನನ್ನ ಸಹೋದರ ಸಾವಿನ್ನಪ್ಪಿರುವ ಕುರಿತು ಮಾಹಿತಿ ನೀಡಿದರು. ಸದ್ಯ ನನ್ನ ಸಹೋದರ ಪತ್ನಿ ಹಾಗೂ ಮಗನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

    ಪಶ್ಚಿಮ ಬಂಗಾಳದ ಇಬ್ಬರು
    ಅಮೆರಿಕ ಮೂಲದ ಕೋಲ್ಕತ್ತಾದ ಬೈಷ್ಣಬ್ಘಾಟಾ ನಿವಾಸಿಯಾಗಿರುವ ಟಿಸಿಎಸ್ ಟೆಕ್ಕಿ ಬಿತನ್ ಅಧಿಕಾರಿ ತಮ್ಮ ಅಮೆರಿಕದಿಂದ ಹಿಂದಿರುಗಿ ತಮ್ಮ ಪತ್ನಿ ಸೋಹಿನಿ ಅಧಿಕಾರಿ (37) ಮತ್ತು ಅವರ ಮೂರುವರೆ ವರ್ಷದ ಮಗ ಹೃದಾನ್ ಅಧಿಕಾರಿಯೊಂದಿಗೆ ಪಹಲ್ಗಾಮ್ ತೆರಳಿದ್ದರು. ಈ ವೇಳೆ ದಾಳಿಯಲ್ಲಿ ಪ್ರಾಣ ಕಳೆದುಕೊಂಡರು. ಏ.16 ರಿಂದ ಏ.24ರವರೆಗೆ ಕಾಶ್ಮೀರ ಪ್ರವಾಸದ ಯೋಜನೆ ಹಾಕಿಕೊಂಡಿದ್ದರು.

    ಈ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಿತನ್ ಅಧಿಕಾರಿ ಪಶ್ಚಿಮ ಬಂಗಾಳದವರು. ನಾನು ಅವರ ಪತ್ನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರ ಪಾರ್ಥಿವ ಶರೀರವನ್ನು ಕೋಲ್ಕತ್ತಾಕ್ಕೆ ತರಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

    ಕೋಲ್ಕತ್ತಾ ನಿವಾಸಿ ಸಮೀರ್ ಗುಹಾ ಅವರು ಕೇಂದ್ರದ ಅಂಕಿಅಂಶ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಪತ್ನಿ ಮತ್ತು ಮಗಳೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡಿದಾಗ ಈ ದಾಳಿ ನಡೆದಿದೆ.

    ಉತ್ತರ ಪ್ರದೇಶದ ಶುಭಂ ದ್ವಿವೇದಿ:
    ಪಹಲ್ಗಾಮ್ ದಾಳಿಗೂ ಮುಂಚೆ ಶುಭಂ ಮತ್ತು ಅವರ ಪತ್ನಿ ಮ್ಯಾಗಿ ತಿನ್ನುತ್ತಿದ್ದರು. ಈ ವೇಳೆ ಸಮವಸ್ತ್ರದಲ್ಲಿದ್ದ ಇಬ್ಬರು ಪುರುಷರು ಅವರ ಬಳಿಗೆ ಬಂದು, ನೀವು ಮುಸ್ಲಿಮರಾ ಎಂದು ಕೇಳಿದರು. ಬಳಿಕ ಇಸ್ಲಾಮಿಕ್ ನಂಬಿಕೆಯ ಘೋಷಣೆಯಾದ ಕಲೀಮಾವನ್ನು ಪಠಿಸುವಂತೆ ಒತ್ತಾಯಿಸಿದರು. ಈ ಕುರಿತು ಶುಭಂ ತಂದೆ ಮಾತನಾಡಿ, ಎರಡು ತಿಂಗಳ ಹಿಂದೆ ಶುಭಂ ಮದುವೆಯಾಗಿತ್ತು. ಮಗ ಮತ್ತು ಸೊಸೆ ಕಾಶ್ಮೀರಕ್ಕೆ ಹೋಗಿದ್ದರು. ಇಂದು ವಾಪಸ್ಸಾಗಬೇಕಿತ್ತು. ಆದರೆ ಈ ಘೋರ ದುರಂತ ನಡೆದಿದೆ ಎಂದರು.

    ಗುಜರಾತ್‌ನ ಮೂವರು:
    ಭಯೋತ್ಪಾದಕ ದಾಳಿಯಲ್ಲಿ ಗುಜರಾತ್‌ನ ಭಾವನಗರದ ಯತೀಶ್‌ಭಾಯ್ ಮತ್ತು ಅವರ ಮಗ ಸ್ಮಿತ್ ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡಿರುವುದಾಗಿ ಗುಜರಾತ್ ಸರ್ಕಾರ ತಿಳಿಸಿದ್ದು, ಶೀಘ್ರವೇ ಗಾಯಾಳುವನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಗುಜರಾತ್‌ನ ಸೂರತ್‌ನವರಾದ ಶೈಲೇಶ್ ಕಲ್ಥಿಯಾ ಅವರು ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಕಾಶ್ಮೀರಕ್ಕೆ ತೆರಳಿದ್ದರು. ಕುದುರೆ ಸವಾರಿಮಾಡುತ್ತಿದ್ದಾಗ ಕುಟುಂಬದ ಮುಂದೆಯೇ ದಾಳಿಗೀಡಾದರು.

    ನೇಪಾಳದ ಸುದೀಪ್:
    ಪಹಲ್ಗಾಮ್ ದಾಳಿಯಲ್ಲಿ ನೇಪಾಳ ಮೂಲದ ಸುದೀಪ್ ಎಂಬುವವರು ಸಾವನ್ನಪ್ಪಿದ್ದಾರೆ. ಈ ಕುರಿತು ಸುದೀಪ್ ಅವರ ಚಿಕ್ಕಪ್ಪ ದಾಧಿರಾಮ್ ನ್ಯೌಪಾನೆ ದೂರವಾಣಿ ಮೂಲಕ ಮಾತನಾಡಿ, ಸುದೀಪ್ (27) ಕುಟುಂಬದಲ್ಲಿ ಒಬ್ಬನೇ ಮಗ. ಬುತ್ವಾಲ್‌ನಲ್ಲಿರುವ ಮಾಡರ್ನ್ ಸೊಸೈಟಿ ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

    ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಒಂದು ಅಂಗವಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಭಯೋತ್ಪಾದಕರು ಪ್ರವಾಸಿಗರ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಮುಸ್ಲಿಮೇತರರೆಂದು ಗುರುತಿಸಿ ಬಳಿಕ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

     

  • ಸಾಲಾಗಿ ನಿಲ್ಲಿಸಿ ಹಿಂದೂನಾ ಅಂತ ಕೇಳಿ ಗುಂಡಿಟ್ಟು ಕೊಂದಿದ್ದಾರೆ – ಮೃತ ಭರತ್ ಭೂಷಣ್ ಸಂಬಂಧಿ

    ಸಾಲಾಗಿ ನಿಲ್ಲಿಸಿ ಹಿಂದೂನಾ ಅಂತ ಕೇಳಿ ಗುಂಡಿಟ್ಟು ಕೊಂದಿದ್ದಾರೆ – ಮೃತ ಭರತ್ ಭೂಷಣ್ ಸಂಬಂಧಿ

    ಬೆಂಗಳೂರು: ಪಹಲ್ಗಾಮ್‌ನಲ್ಲಿ (Palagham) ಸಾಲಾಗಿ ನಿಲ್ಲಿಸಿ ಹಿಂದೂನಾ ಅಂತ ಕೇಳಿ ಗುಂಡಿಟ್ಟು ಕೊಂದಿದ್ದಾರೆ ಎಂದು ದಾಳಿಯಲ್ಲಿ ಮೃತಪಟ್ಟ ಭರತ್ ಭೂಷಣ್ ಅವರ ಅತ್ತೆ ನಿರ್ಮಲಾ ಕಣ್ಣೀರಿಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಅವರು, ಕಾಶ್ಮೀರಕ್ಕೆ (Jammu Kashmir) ಏ.18ಕ್ಕೆ ಹೋಗಿದ್ದರು, ಇಂದು ಬೆಳಗ್ಗೆ 7 ಗಂಟೆಗೆ ಶ್ರೀನಗರದಿಂದ ಬೆಂಗಳೂರಿಗೆ (Bengaluru) ಬರಬೇಕಿತ್ತು. ಮದ್ವೆಯಾಗಿ 4 ವರ್ಷ ಆಗಿತ್ತು, ಮೂರು ವರ್ಷದ ಮಗು ಇತ್ತು. ಹಿಂದೂನಾ ಅಂತ ಕೇಳಿ ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಂದಿದ್ದಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ

    ಇವತ್ತು ಬೆಂಗಳೂರಿಗೆ ಬರಬೇಕಿತ್ತು. ಆದರೆ ನಿನ್ನೆ ಈ ರೀತಿಯಾಗಿದೆ. ಘಟನೆಯಾದಾಗ ಬಳಿಕ ಮಗಳು ಕರೆ ಮಾಡಿ ವಿಷಯ ತಿಳಿಸಿದಳು. ನಾವೆಲ್ಲ ನಿಂತಾಗ ಸಡನ್ ಆಗಿ ಬಂದು ಹಿಂದೂನಾ? ಮುಸ್ಲಿಮಾ? ಅಂತ ಕೇಳಿ ಗುಂಡು ಹಾರಿಸಿದ್ದಾರೆ. ಶೂಟ್ ಮಾಡಿದ ತಕ್ಷಣ ನನ್ನ ಮಗಳು ಭರತ್ ಪ್ಯಾಂಟ್‌ನಿಂದ ಮೊಬೈಲ್, ಆಧಾರ್ ಸೇರಿ ಇನ್ನಿತರ ಡಾಕ್ಯುಮೆಂಟ್‌ಗಳನ್ನು ಎತ್ತಿಕೊಂಡು ಮಗುವನ್ನು ಕರೆದುಕೊಂಡು ಕುದುರೆಯಲ್ಲಿ ಸ್ಥಳದಿಂದ ಬೇರೆ ಕಡೆಗೆ ಹೋಗಿದ್ದಾಳೆ. ಬಳಿಕ ಭರತ್ ಶವವನ್ನು ಶ್ರೀನಗರಕ್ಕೆ ಕೊಂಡೊಯ್ಯದಿದ್ದಾರೆ ಎಂದು ಮಾಹಿತಿ ನೀಡಿದರು.

    ಭಯೋತ್ಪಾದಕರು ಒಬ್ಬರ ನಂತರ ಇನ್ನೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಒಬ್ಬೊಬ್ಬರ ಮೇಲೆ ಐದು ನಿಮಿಷಗಳ ಕಾಲ ಗುಂಡು ಹಾರಿಸಿದ್ದು, ಎಲ್ಲರ ತಲೆಗೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಿದರು.

    ಇನ್ನೂ ಈ ಕುರಿತು ಭೂಷಣ್ ಸೋದರ ಮಾವ ಮಾತನಾಡಿ, ಇಂದು ರಾತ್ರಿ 10:45ಕ್ಕೆ ಸುಂದರ ನಗರದ ನಿವಾಸಕ್ಕೆ ಪಾರ್ಥಿವ ಶರೀರ ಬರಲಿದೆ. ಗುಂಡು ಹಾರಿಸಿ ನಂತರ ಕೆಳಗೆ ಬಿದ್ದ ಗಂಡನನ್ನ ಹೆಂಡತಿ ಪರಿಶೀಲಿಸಿದ್ದಾರೆ. ಆಗ ಉಸಿರು ನಿಂತಿತ್ತು. ಕೂಡಲೇ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾಳೆ. ನಾಳೆ ಹೆಬ್ಬಾಳ (Hebbal) ಚಿತಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

  • ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ – ಪ್ರಹ್ಲಾದ್ ಜೋಶಿ

    ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ – ಪ್ರಹ್ಲಾದ್ ಜೋಶಿ

    -ಇನ್ನೆರೆಡು ದಿನದಲ್ಲಿ ಪ್ರವಾಸಿಗರು ಸ್ವಸ್ಥಾನಕ್ಕೆ ಮರಳಲಿದ್ದಾರೆ ಎಂದ ಕೇಂದ್ರ ಸಚಿವ

    ಹುಬ್ಬಳ್ಳಿ: ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆ ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಅವರವರ ಊರುಗಳಿಗೆ ತಲುಪಿಸಲು ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದರು.

    ದೆಹಲಿಯಲ್ಲಿ (Delhi) ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ರಾತ್ರಿಯಿಂದಲೇ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಕನ್ನಡಿಗರೆಲ್ಲರನ್ನೂ ಅವರ ಊರುಗಳಿಗೆ ಸುರಕ್ಷಿತವಾಗಿ ತಲುಪಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಪಾಕಿಸ್ತಾನ ಅವನತಿ ಆರಂಭವಾಗಿದೆ – ಜಗದೀಶ್ ಶೆಟ್ಟರ್ ಎಚ್ಚರಿಕೆ

    ಕನ್ನಡಿಗರು ಸ್ವಸ್ಥಾನಕ್ಕೆ ಮರಳಲು ವ್ಯವಸ್ಥೆ:
    ಮಂಗಳವಾರ ರಾತ್ರಿಯೇ ರಾಮ್ ಮೋಹನ್ ನಾಯ್ಡು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ವಿಮಾನ ವ್ಯವಸ್ಥೆ ಸಹ ಮಾಡಲಾಗಿದೆ. ಸದ್ಯಕ್ಕೆ ಮುಂಬೈ ಮತ್ತು ದೆಹಲಿಗೆ ಪ್ರವಾಸಿಗರನ್ನು ರವಾನಿಸಲು ಸರ್ಕಾರ ವಿಮಾನ ವ್ಯವಸ್ಥೆ ಮಾಡಿದೆ. ಇನ್ನೆರೆಡು ದಿನಗಳಲ್ಲಿ ಎಲ್ಲ ಪ್ರವಾಸಿಗರನ್ನೂ ಅವರವರ ಸ್ವಸ್ಥಾನಗಳಿಗೆ ಸುರಕ್ಷಿತವಾಗಿ ಮರಳಿಸಲಾಗುತ್ತದೆ ಎಂದು ತಿಳಿಸಿದರು.

    ಮೂವರು ಕನ್ನಡಿಗರ ಪಾರ್ಥಿವ ಶರೀರ ಸಾಗಿಸಲು ಕ್ರಮ:
    ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯಿದೆ. ಮೃತರ ಪಾರ್ಥಿವ ಶರೀರ, ಗಾಯಾಳುಗಳು, ಕುಟುಂಬಸ್ಥರು ಹಾಗೂ ಪ್ರವಾಸಿಗರನ್ನು ಸ್ವಂತ ಊರು-ಮನೆಗಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ವಿಮಾನ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.

    ಕರ್ನಾಟಕದ ಅನೇಕರು ಪಹಲ್ಗಾಮ್ ಪ್ರವಾಸಿ ತಾಣದಲ್ಲಿದ್ದು, ರಾಜ್ಯಕ್ಕೆ ಮರಳಲು ಬಯಸಿದ್ದರಿಂದ ಅವರೆಲ್ಲರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಗ್ರಾಹಕ ವ್ಯವಹಾರಗಳ ಸಚಿವನಾಗಿ ವಿಮಾನಯಾನ ಕಂಪನಿಗಳು ಹೆಚ್ಚಿನ ಟಿಕೆಟ್ ದರ ಕಲ್ಪಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    ಜಮ್ಮು-ಕಾಶ್ಮೀರದ ಶಾಂತಿ ಕೆಡಿಸಲು ಷಡ್ಯಂತ್ರ:
    ಜಮ್ಮು-ಕಾಶ್ಮೀರ ಭಾರತದ ಮುಕುಟದಂತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಬಹು ದೊಡ್ಡ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದೆ. ಸ್ವಿಡ್ಜರ್‌ಲ್ಯಾಂಡ್‌ಗಿಂತಲೂ ಸುಂದರವಾಗಿದೆ ಎಂಬ ಭಾವನೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದರು. ಇದನ್ನು ಸಹಿಸದೇ ಅಲ್ಲಿ ಅಶಾಂತಿ ಸೃಷ್ಟಿಸಿ, ಪ್ರವಾಸೋದ್ಯಕ್ಕೆ ಪೆಟ್ಟು ನೀಡಲು ಭಯೋತ್ಪಾದಕ ಚಟುವಟಿಕೆ ನಡೆಸಲಾಗಿದೆ ಎಂದು ಅಭಿಪ್ರಾಯಪಟ್ಟರು.

    ಕಳೆದ ಐದಾರು ವರ್ಷಗಳಲ್ಲಿ ಜಮ್ಮು-ಕಾಶ್ಮೀರದ ಪ್ರವಾಸೋದ್ಯಮ ಅಭೂತಪೂರ್ವವಾಗಿ ಬೆಳೆದಿದೆ. ಇಲ್ಲಿನವರಿಗೆ ಪ್ರವಾಸೋದ್ಯಮದಿಂದ ಅತಿ ಹೆಚ್ಚು ಆದಾಯ ಬಂದಿದೆ. ಅಲ್ಲದೇ, ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಹ ಅತ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿ ನಡೆದಿವೆ. ಜೊತೆಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸೇರಿ ಎಲ್ಲವೂ ಭಯೋತ್ಪಾದಕರ ಕಣ್ಣು ಕುಕ್ಕಿವೆ. ಅದರ ಪರಿಣಾಮವೇ ಭಯೋತ್ಪಾದನಾ ಕೃತ್ಯ ಎಂದು ಹೇಳಿದರು.

    ಭಯೋತ್ಪಾದನೆ ನಿಗ್ರಹಕ್ಕೆ ಇನ್ನಷ್ಟು ಕಠಿಣ ಕ್ರಮ:
    ಕಣಿವೆ ರಾಜ್ಯ ಸೇರಿದಂತೆ ದೇಶದ ಎಲ್ಲೆಡೆಯೂ ಭಯೋತ್ಪಾದನೆ ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಆದ್ದರಿಂದಲೇ ದೇಶದಲ್ಲಿ 2019ರಿಂದ ಈಚೆಗೆ ಭಯೋತ್ಪಾದಕ ಚಟುವಟಿಕೆ ಇಲ್ಲವಾಗಿತ್ತು. ಪಹಲ್ಗಾಮ್ ಭಯೋತ್ಪಾದಕರ ದಾಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಇದರ ವಿರುದ್ಧ ಹೋರಾಡಲಿದೆ. ಭಾರತವನ್ನು ಶೂನ್ಯ ಭಯೋತ್ಪಾದನೆಯತ್ತ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನೂ ಓದಿ: ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ

  • ಪಾಕಿಸ್ತಾನ ಅವನತಿ ಆರಂಭವಾಗಿದೆ – ಜಗದೀಶ್ ಶೆಟ್ಟರ್ ಎಚ್ಚರಿಕೆ

    ಪಾಕಿಸ್ತಾನ ಅವನತಿ ಆರಂಭವಾಗಿದೆ – ಜಗದೀಶ್ ಶೆಟ್ಟರ್ ಎಚ್ಚರಿಕೆ

    ಹುಬ್ಬಳ್ಳಿ: ಪಾಕಿಸ್ತಾನ (Pakistan) ಪ್ರೋತ್ಸಾಹಿತ ಉಗ್ರಗಾಮಿಗಳು ಕಾಶ್ಮೀರದಲ್ಲಿನ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ (Jagadish Shettar) ಆಕ್ರೋಶ ಹೊರಹಾಕಿದ್ದಾರೆ.

    ಪಹಲ್ಗಾಮ್ ದಾಳಿಯ (Pahalgam Attack) ಕುರಿತು ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ದಿನದಲ್ಲಿ ಶಾಂತಿ ನೆಲೆಸಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಅವರು ಕೈಗೊಂಡ ಕ್ರಮಗಳಿಂದ ಶಾಂತಿ ನೆಲೆಸಿತ್ತು. ಹೀಗಾಗಿ ಹೆಚ್ಚಿನ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಆರಂಭ ಮಾಡಿದ್ದರು ಎಂದಿದ್ದಾರೆ. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ದೇಶದ ಜನತೆ ಕಾಶ್ಮೀರದಲ್ಲಿ (Kashmir) ಶಾಂತಿ ನೆಲೆಸಬೇಕು ಅನ್ನೋ ಇಚ್ಛೆ ಹೊಂದಿದ್ದಾರೆ. ಮೃತ ಕುಟುಂಬದ ಜೊತೆಗೆ ದೇಶ, ಭಾರತ ಸರ್ಕಾರವಿದೆ. ಉಗ್ರಗಾಮಿಗಳ ಹತ್ಯೆಯಾಗುತ್ತದೆ. ಭಾರತ ದೇಶ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಅದನ್ನು ಸಹಿಸಲು ಪಾಕಿಸ್ತಾನಕ್ಕೆ ಆಗುತ್ತಿಲ್ಲ. ಪಾಕಿಸ್ತಾನ ಅವನತಿ ಆರಂಭವಾಗಿದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಮೋದಿ ಅವರು ಬಲಾಢ್ಯ ರಾಷ್ಟ್ರ ಕಟ್ಟುತ್ತಿದ್ದಾರೆ. ಮೋದಿ ಅವರು ಆದಷ್ಟು ಬೇಗ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    ಭದ್ರತಾ ವ್ಯವಸ್ಥೆ ಸರಿಯಿದೆ ಎಂದು ಪ್ರವಾಸಿಗರೇ ಹೇಳಿದ್ದಾರೆ. ಆದರೂ ಈ ಘಟನೆ ನಡೆದಿದೆ. ಯಾವ ಸರ್ಕಾರ ಬಂದಾಗ ಕೂಡಾ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಇರಲಿಲ್ಲ. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅಲ್ಲಿ ಶಾಂತಿ ನೆಲೆಸಿತ್ತು. ಉಗ್ರಗಾಮಿಗಳನ್ನು ನಾಶ ಮಾಡಬೇಕು. ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಯನ್ನು ನಾಶ ಮಾಡಬೇಕು ಎಂದು ಕಿಡಿಕಾರಿದ್ದಾರೆ.