Tag: Terdal

  • ತೇರದಾಳದ 111 ಮಂದಿ ರೈತರಿಗೆ ವಕ್ಫ್‌ ನೋಟಿಸ್‌

    ತೇರದಾಳದ 111 ಮಂದಿ ರೈತರಿಗೆ ವಕ್ಫ್‌ ನೋಟಿಸ್‌

    ಬಾಗಲಕೋಟೆ: ವಿಜಯಪುರ, ಯಾದಗಿರಿಯ ಬೆನ್ನಲ್ಲೇ ತೇರದಾಳ (Terdal) ತಾಲೂಕು ವ್ಯಾಪ್ತಿಯಲ್ಲೂ ರೈತರಿಗೆ (Farmers) ವಕ್ಫ್‌ ಬೋರ್ಡ್‌ನಿಂದ (Waqf Board) ನೋಟಿಸ್‌ ಬಂದಿದೆ.

    2017, 2018, 2024 ರಲ್ಲಿ ಬೆಂಗಳೂರಿನ ವಕ್ಫ್ ಬೋರ್ಡ್‌ನಿಂದ ನೋಟಿಸ್‌ ಬಂದಿದ್ದು, ತೇರದಾಳ ತಾಲೂಕಿನ ‌ವಿವಿಧ ಹಳ್ಳಿಯ 420 ಎಕ್ರೆಗೆ ಸಂಬಂಧಿಸಿದಂತೆ 111 ಮಂದಿ ರೈತರಿಗೆ ನೋಟಿಸ್‌ ನೀಡಲಾಗಿದೆ.

    ತೇರದಾಳ ಜಾಮಿಯಾ ಮಸೀದಿ ಈದ್ಗಾ ಮಸೀದಿ ವ್ಯಾಪ್ತಿಯ ವಕ್ಪ್ ಆಸ್ತಿ ಒತ್ತುವರಿ ಮಾಡಿಕೊಂಡಿದ್ದೀರಿ. ಈ ಹಿನ್ನೆಲೆ‌ಯಲ್ಲಿ ವಿಚಾರಣೆಗೆ ಬೆಂಗಳೂರು ವಕ್ಪ್ ಕೋರ್ಟ್‌ಗೆ ಹಾಜರಾಗಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ನೋಟಿಸ್‌ನಿಂದಾಗಿ ಈ ಭಾಗದ ರೈತರು 2018 ರಿಂದ ನಿರಂತರವಾಗಿ ವಕ್ಪ್ ಕೋರ್ಟ್ ವಿಚಾರಣೆಗೆ ಅಲೆದಾಡುತ್ತಿದ್ದಾರೆ.

    ಈ ವಿಷಯ ತಿಳಿದು ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ (Siddu Savadi) ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್‌ ಸಚಿವರು, ಸರ್ಕಾರದ ಅಧಿಕಾರಿಗಳು ‌ನೋಟಿಸ್‌ ನೀಡಿಲ್ಲ ಎನ್ನುತ್ತಾರೆ. ಆದರೆ ನಮ್ಮಲ್ಲಿ ಇಷ್ಟು ಜನರಿಗೆ ನೋಟಿಸ್‌ ಬಂದಿದೆ. ಈ ಕಾಂಗ್ರೆಸ್ ಪಕ್ಷ ಉಗ್ರಗಾಮಿಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.

    ಈ ಕಾಂಗ್ರೆಸ್ ಸರ್ಕಾರ (Congress Government) ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ. ನಾವು ರೈತರಿಗೆ ನೋಟಿಸ್ ಕೊಟ್ಟಿಲ್ಲ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇಲ್ಲಿ ನೋಡಿದರೆ ನಮ್ಮಲ್ಲಿ ನೂರಾರು ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ತಿಂಗಳಿಗೊಮ್ಮೆ ನೂರಾರು ರೈತರು ಕೋರ್ಟಿಗೆ ಹೋಗುತ್ತಿದ್ದಾರೆ ಇದು ಕಾಂಗ್ರೆಸ್ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.

     

    ನಮ್ಮ ರೈತರ ಜಮೀನನ್ನು ವಕ್ಫ್ ಬೋರ್ಡ್ ಕಸಿದುಕೊಂಡಿದೆ. ಕೂಡಲೇ ಆ ಜಮೀನು ನಮ್ಮ ರೈತರಿಗೆ ಹಸ್ತಾಂತರ ಮಾಡಬೇಕು. ಇಲ್ಲದೇ ಇದ್ದರೆ ಇಡೀ ದೇಶದ ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರ ಹಿಂಜರಿಯುವುದಿಲ್ಲ. ವಕ್ಫ್ ಬೋರ್ಡ್ ಕಾಯ್ದೆಯನ್ನು ರದ್ದುಪಡಿಸಿದರೆ ಮಾತ್ರ ಈ ದೇಶಕ್ಕೆ ನ್ಯಾಯ ಸಿಕ್ಕಂತಾಗುತ್ತೆ ಎಂದು ಹೇಳಿದರು.

    ತೇರದಾಳ ಮತ್ತು ಜಮಖಂಡಿ ಕ್ಷೇತ್ರದಲ್ಲಿ ನೂರಾರು ಎಕರೆ ಜಮೀನನ್ನು ವಕ್ಫ್‌ ಬೋರ್ಡ್‌ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಕೇವಲ ಒಂದು ಜನಾಂಗದ ವ್ಯಕ್ತಿಗಳಿಗೆ ಸಹಕಾರ ನೀಡುತ್ತಿರುವುದು ಇದು ಸರಿಯಲ್ಲ. ನಾವು ಎಲ್ಲರೂ ಸಮಾನರು ಎಂದು ಮನೋಭಾವನೆಯನ್ನು ಕಾಂಗ್ರೆಸ್ ಸರ್ಕಾರ ಮೊದಲು ಇಟ್ಟುಕೊಳ್ಳಬೇಕಿದೆ ಎಂದರು.

     

  • ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂದು ಶಂಕಿಸಿ ವೃದ್ಧೆಯರನ್ನ ಥಳಿಸಿದ ಗ್ರಾಮಸ್ಥರು

    ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂದು ಶಂಕಿಸಿ ವೃದ್ಧೆಯರನ್ನ ಥಳಿಸಿದ ಗ್ರಾಮಸ್ಥರು

    – ಬಿಸಾಕಿದ್ದ ತರಕಾರಿ ಒಯ್ಯಲು ಬಂದಿದ್ದ ವೃದ್ಧೆಯರು

    ಬಾಲಗಕೋಟೆ: ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂಬ ಶಂಕೆ ಹಿನ್ನೆಲೆ ಮೂವರು ಅಪರಿಚಿತ ವೃದ್ಧೆಯರನ್ನು ಸ್ಥಳೀಯರು ಹಿಡಿದು ಥಳಿಸಿದ ಘಟನೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ತೇರದಾಳ ಪಟ್ಟಣದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತದೆ. ಈ ಸಂತೆಗೆ ಇಂದು ಕೈ ಚೀಲ ಹಿಡಿದು ಮೂವರು ವೃದ್ಧೆಯರು ಬಂದಿದ್ದರು. ಆದರೆ ಅವರು ಸಂತೆಯಲ್ಲಿ ಅತ್ತಿತ್ತ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿದು, ಚೀಲಗಳನ್ನು ಕಿತ್ತುಕೊಂಡು ನೋಡಿದಾಗ ಅದರಲ್ಲಿ ಏನೂ ಇರಲಿಲ್ಲ. ಆದರೂ ಕೆಲ ಯುವಕರು, ಮಹಿಳೆಯರು ವೃದ್ಧೆಯರನ್ನು ಎಳೆದಾಡಿ ಥಳಿಸಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತೇರದಾಳ ಪೊಲೀಸರು ವೃದ್ಧೆಯರನ್ನು ರಕ್ಷಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ, ನಾವು ಬಡವರು. ತರಕಾರಿ ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ. ಹೀಗಾಗಿ ಸಂತೆಯಲ್ಲಿ ವ್ಯಾಪಾರಿಗಳು ಬಿಸಾಕಿದ ತರಕಾರಿ ತೆಗೆದುಕೊಂಡು ಹೋಗಲು ಬಂದಿದ್ದೆವು. ಆದರೆ ಸಂತೆಯಲ್ಲಿ ಕೆಲವರು ನಮ್ಮ ಮೇಲೆ ಶಂಕೆ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾರೆ ಎಂದು ವೃದ್ಧೆಯರು ಅಳಲು ತೋಡಿಕೊಂಡಿದ್ದಾರೆ.

    ಯಾರೋ ದುಷ್ಕರ್ಮಿಗಳು ಪೌಡರ್ ಎರಚಿ ಪ್ರಜ್ಞೆ ತಪ್ಪಿಸಿ ಹಣ ದೋಚುತ್ತಾರೆ ಎಂಬ ವದಂತಿ ತೇರದಾಳ ಪಟ್ಟಣದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ವೃದ್ಧೆಯರ ಮೇಲೆ ಶಂಕೆ ವ್ಯಕ್ತಪಡಿಸಿ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.