ಮಂಗಳೂರು: ಎಳನಿರು ಕುಡಿದು ಸುಮಾರು 15 ಮಂದಿ ಸಾರ್ವಜನಿಕರು ಅಸ್ವಸ್ಥಗೊಂಡ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
ಅಡ್ಯಾರ್ನಲ್ಲಿರುವ ಎಳನೀರು (Tender Coconut) ಮತ್ತು ಐಸ್ ಕ್ರೀಮ್ ಮಾರಾಟ ಸಂಸ್ಥೆಯಿಂದ ಒಂದಷ್ಟು ಮಂದಿ ಎಳನೀರು ಖರೀದಿಸಿದ್ದರು. ಈ ಎಳನೀರು ಕುಡಿದ ಬಳಿಕ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಪರಿಸರದ ನಿವಾಸಿಗಳು ವಾಂತಿ ಮತ್ತು ಭೇದಿಯಿಂದ ಬಳಲಿದ್ದಾರೆ.
ಸದ್ಯ ಅಸ್ವಸ್ಥಗೊಂಡ ಮೂವರಿಗೆ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ 12 ಮಂದಿ ಹೊರರೋಗಿಗಳಾಗಿ ಔಷಧಿ ಪಡೆದಿದ್ದಾರೆ. ಘಟನೆ ಬಳಿಕ ಆಸ್ಪತ್ರೆ ಹಾಗೂ ಫ್ಯಾಕ್ಟರಿಗೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರವಾರ: ಉತ್ತರ ಕನ್ನಡ (UttaraKannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಬಿಸಿಲ ವಾತಾವರಣ ಪ್ರಾರಂಭವಾಗುವ ಮುಂಚೆಯೇ ಎಳನೀರು (Tender Coconut) ಅಬ್ಬರದ ಬೆಲೆ ಏರಿಕೆ ಕಂಡಿದೆ.
ಕರಾವಳಿ ಭಾಗದಲ್ಲಿ ಬಿಸಿಲು ಹೆಚ್ಚಿರುವುದರಿಂದ ಎಳನೀರು, ತಂಪು-ಪಾನಿಯಗಳು ಎಥೇಚ್ಛವಾಗಿ ಮಾರಾಟವಾಗುತ್ತದೆ. ಹೀಗಾಗಿ ತಂಪು ಪಾನಿಯಗಳಿಗಿಂತ ಎಳನೀರು ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು ಕಾರವಾರದಲ್ಲಿ ಒಂದು ಎಳನೀರಿಗೆ 50 ರೂ. ದಾಟಿದೆ. ಡಿಸೆಂಬರ್ ಅಂತ್ಯದಲ್ಲಿ 80 ರಿಂದ ನೂರು ರುಪಾಯಿ ಏರುವ ಸಾಧ್ಯತೆಗಳಿವೆ ಎಂದು ಎಳನೀರು ಮಾರಾಟಗಾರರು ಹೇಳುತ್ತಾರೆ.
ಕರಾವಳಿಯಲ್ಲಿ ಹೆಚ್ಚು ದರ ಏಕೆ?: ಉತ್ತರ ಕನ್ನಡ ಜಿಲ್ಲೆಗೆ ಶಿವಮೊಗ್ಗ, ತರಿಕೆರೆ, ತುಮಕೂರು ಭಾಗದಿಂದ ಎಳನೀರು ಸರಬರಾಜಾಗುತ್ತದೆ. ಇಲ್ಲಿನ ಸಾಗಾಟ ದರ ಹೆಚ್ಚಾದ್ದರಿಂದ ಗುತ್ತಿಗೆ ಪಡೆದ ವ್ಯಾಪಾರಿಗಳು ಪ್ರತಿ ಎಳನೀರಿನ ದರ 25 ರಿಂದ 28 ವಿಧಿಸುತ್ತಾರೆ. ಆದ್ರೆ ಸ್ಥಳೀಯ ಮಾರಾಟಗಾರರು ಪ್ರತಿ ಎಳನೀರಿಗೆ 50 ರಿಂದ 60 ರಂತೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗಾಗಿ ಕರಾವಳಿ ಭಾಗದಲ್ಲಿ ಎಳನೀರಿನ ದರ ಹೆಚ್ಚಾಗಿದೆ. ಇನ್ನು ಬಿರುಬೇಸಿಗೆ ಬಂತೆಂದರೆ 80 ರೂ.ವರೆಗೂ ಕಾರವಾರದಲ್ಲಿ ಒಂದು ಎಳನೀರು ಮಾರಾಟವಾಗುತ್ತದೆ. ಈ ಬಾರಿ ಹೆಚ್ಚು ಬೇಡಿಕೆ ಇರುವುದರಿಂದ ಜನವರಿ ಅಂತ್ಯದಲ್ಲಿ 80 ರಿಂದ ನೂರರವರೆಗೆ ದರ ಏರುವ ಸಾಧ್ಯತೆಗಳಿವೆ.
ನೀರಾಕ್ಕೂ ಹೆಚ್ಚಿದ ಬೇಡಿಕೆ: ಜಿಲ್ಲೆಯಲ್ಲಿ ತೆಂಗಿನ ಮರದಿಂದ ತೆಗೆದ ನೀರಾಕ್ಕೂ ಹೆಚ್ಚು ಬೇಡಿಕೆ ಇದ್ದು 250 ಮಿಲಿಗೆ 65 ರೂ ಇದೆ. ಮೊದಲು ಕುಮಟಾ ಭಾಗದಲ್ಲಿ ದೊರಕುತಿದ್ದ ನೀರಾ ಈಗ ಗೋವಾ ಭಾಗದಿಂದ ಜಿಲ್ಲೆಗೆ ಸರಬರಾಜಾಗುತಿದ್ದು ಪ್ರವಾಸಿಗರ ಮೆಚ್ಚಿನ ತಾಣವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಳನೀರು ಗ್ರಾಹಕ ಹೊಟ್ಟೆ ತಂಪು ಮಾಡುವ ಬದಲು ಸುಡುತ್ತಿದೆ.
ಮಂಡ್ಯ: ಎಳನೀರು ಸಾಗಿಸುವ ವಾಹನ ಡಿಕ್ಕಿ ಹೊಡೆದು ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಗ್ರಾಮದ ವರದರಾಜು ಮತ್ತು ಸುಮಿತ್ರ ದಂಪತಿಯ ಪುತ್ರ ಜೀವನ್ ಮೃತ ದುರ್ದೈವಿ. ಬಾಲಕ ಜೀವನ್ ತನ್ನ ಮನೆ ಬಳಿ ಆಟವಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ತಮ್ಮ ಐದು ವರ್ಷದ ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ: ಗಡಿನಾಡು ಬಳ್ಳಾರಿ ಅಂದ್ರೆ ಸಾಕು ಸುಡುಬಿಸಿಲು ನೆನಪಾಗೋದು ಸಹಜ. ಈ ಬಾರಿಯ ಬಿಸಿಲಿನ ರುದ್ರನರ್ತನಕ್ಕೆ ಜನರು ಸುಸ್ತಾಗಿ ಹೋಗಿದ್ದಾರೆ. ಬೇಸಿಗೆಯ ಆರಂಭದ ದಿನಗಳಲ್ಲೇ ಗಣಿ ನಾಡಿನ ತಾಪಮಾನ 42 ಡಿಗ್ರಿ ತಲುಪಿದೆ. ಹೀಗಾಗಿ ಪ್ರಾಣಿ ಪಕ್ಷಿಗಳ ಸ್ಥಿತಿ ಹೇಳತೀರದಾಗಿದೆ. ಆದ್ರೆ ಬಳ್ಳಾರಿ ಪೊಲೀಸ್ ಇಲಾಖೆ ತಾಪಮಾನ ಹೆಚ್ಚಾಗುತ್ತಿದ್ದಂತೆ ಇಲಾಖೆಯ ಶ್ವಾನಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿಯಲ್ಲೀಗ ಉಷ್ಣಾಂಶ 42 ಡಿಗ್ರಿಯಿಂದ 45 ಡಿಗ್ರಿ ತಲುಪುತ್ತಿದ್ದಂತೆ ಜನರು, ಪ್ರಾಣಿಗಳು ಬಿರುಬಿಸಿಲಿನ ತಾಪಕ್ಕೆ ಸುಸ್ತಾಗಿ ಹೋಗುತ್ತಿವೆ. ಹೀಗಾಗಿ ಬಳ್ಳಾರಿಯ ಪೊಲೀಸ್ ಇಲಾಖೆಯ ಶ್ವಾನಗಳಿಗೆ ಇದೀಗ ಎಸಿ, ಏರ್ಕೂಲರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಎಳನೀರು, ಹೆಚ್ಚುವರಿ ತಣ್ಣೀರು ಹಾಗೂ ದ್ರವರೂಪದ ಆಹಾರ ನೀಡಲಾಗ್ತಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿ ಪೊಲೀಸರ ಕರ್ತವ್ಯದ ಜೊತೆ ಕೈ ಜೋಡಿಸಿ ಕೆಲಸ ಮಾಡುವ ಶ್ವಾನಗಳಿಗೆ ಬೇಸಿಗೆಯ ಬಿಸಿಲಿನ ತಾಪ ತಟ್ಟದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೆನಡಾ, ಜರ್ಮನ್ ಮೂಲದ ತಳಿಯ 5 ಶ್ವಾನಗಳ ರೂಂಗಳಿಗೆ ಕೂಲರ್ ಅಳವಡಿಸಿ, ದಿನದ 24 ಗಂಟೆಯ ಕಾಲ ತಂಪಾದ ವ್ಯವಸ್ಥೆ ಮಾಡಲಾಗಿದೆ.