Tag: Telugu cinema comedian

  • ಚಿಕ್ಕಬಳ್ಳಾಪುರದಲ್ಲಿ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರದಲ್ಲಿ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಪ್ರಚಾರಕ್ಕಾಗಿ ಚಂದನವನದ ನಟ ನಟಿಯರು ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಸ್ಯಾಂಡಲ್‍ವುಡ್ ನಟ ನಟಿಯರ ಜೊತೆಗೆ ಟಾಲಿವುಡ್‍ನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಸಹ ಸಾಥ್ ನೀಡಲಿದ್ದು, ಕ್ಷೇತ್ರದಲ್ಲಿ ಸುಧಾಕರ್ ಪರ ಶನಿವಾರ ಮತಯಾಚನೆ ಮಾಡಲಿದ್ದಾರೆ.

    ಟಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರ ನಟನೆಗೆ ಅಭಿಮಾನಿಗಳು ನಕ್ಕು ನಕ್ಕು ಸುಸ್ತಾಗುತ್ತಾರೆ. ಬ್ರಹ್ಮಾನಂದಂ ಅವರ ಹಾಸ್ಯ ನಟನೆಗೆ ಮನಸೋಲದವರೇ ಇಲ್ಲ. ಇಂತಹ ಖ್ಯಾತ ನಟ ಹಾಸ್ಯ ಕಲಾವಿದ ಬ್ರಹ್ಮಾನಂದಂ ನಾಳೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಬ್ರಹ್ಮಾನಂದಂ ಅವರು ಶನಿವಾರ ಬೆಳಗ್ಗೆ 9 ಗಂಟೆಗೆ ಸುಧಾಕರ್ ಸ್ವಗ್ರಾಮ ಪೇರೇಸಂದ್ರ ಕ್ರಾಸ್‍ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಳಿಕ 9 ಗಂಟೆ 45 ನಿಮಿಷಕ್ಕೆ ಕಮ್ಮಗುಟ್ಟಹಳ್ಳಿ ಕ್ರಾಸ್, 10 ಗಂಟೆ 30 ನಿಮಿಷಕ್ಕೆ ಮಂಡಿಕಲ್ ಗ್ರಾಮ ಸೇರಿದಂತೆ 11 ಗಂಟೆಗೆ ಚಿಕ್ಕಪೈಲಗುರ್ಕಿಯ ಸುಧಾಕರ್ ಅವರ ಮನೆ ದೇವರು ಚನ್ನಕೇಶವಸ್ವಾಮಿ ದೇವಾಲಯದ ಬಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    ಸ್ಯಾಂಡಲ್‍ವುಡ್ ನಟಿ-ನಟಿಯರಾದ ಹರಿಪ್ರಿಯಾ, ಹರ್ಷಿಕಾ ಪೂಣಚ್ಚ, ನಟರಾದ ದಿಗಂತ್ ಹಾಗೂ ಭುವನ್ ಅವರು ಕಳೆದ ಒಂದು ವಾರದಿಂದ ಸುಧಾಕರ್ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಮನೆ ಮೆನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈಗ ಸ್ಯಾಂಡಲ್‍ವುಡ್ ನಟ-ನಟಿಯರಿಗೆ ಬ್ರಹ್ಮಾನಂದಂ ಸಹ ಸಾಥ್ ನೀಡುತ್ತಿದ್ದಾರೆ.

    ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು. ಹೀಗಾಗಿ ಈ ಬಾರಿಯೂ ತೆಲುಗು ಭಾಷಿಕ ಮತದಾರರ ಮನಸೆಳೆಯುವುದಕ್ಕೆ ಸುಧಾಕರ್ ಅವರು ಮುಂದಾಗಿದ್ದಾರೆ.

    ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.