Tag: Tejasvi Surya

  • ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೊರಕೆ ಪ್ರತಿಭಟನೆ

    ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೊರಕೆ ಪ್ರತಿಭಟನೆ

    ಹುಬ್ಬಳ್ಳಿ: ಎದೆ ಸೀಳಿದ್ರೆ ಎರಡು ಅಕ್ಷರಗಳು ಇಲ್ಲದವರು ಪಂಚರ್ ಹಾಕುವವರು ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹುಬ್ಬಳ್ಳಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

    ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರು ಹಾಗೂ ನೌಕರ ಸಂಘದ ವತಿಯಿಂದ ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೊರಕೆ ಹಿಡಿದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಟಯರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

    ಸಂಸದ ತೇಜಸ್ವಿ ಸೂರ್ಯ ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ಗ್ಯಾರೇಜ್ ಕೆಲಸಗಾರರ ವಿರುದ್ಧ ಕೀಳಾಗಿ ಮಾತನಾಡಿರುವುದು ಖಂಡನೀಯವೆಂದು ಪ್ರತಿಭಟನಾಕಾರರು ತೇಜಸ್ವಿ ಸೂರ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಬಾಬಾಜಾನ ಮುಧೋಳ, ನರಸಿಂಹ ಪಾಲವಾಯಿ, ಶೋಭಾ ಕಮತರ, ಕಾಂಗ್ರೆಸ್ ಮುಖಂಡ ಮೋಹನ್ ಹಿರೇಮನಿ, ವಿಜಯ ಗುಂಟ್ರಾಳ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

  • ಭಾರತದ ಮುಸ್ಲಿಮರ ಪೌರತ್ವ ಕಸಿಯುವ ಕಾನೂನು ಇದಲ್ಲ – ತೇಜಸ್ವಿ ಸೂರ್ಯ

    ಭಾರತದ ಮುಸ್ಲಿಮರ ಪೌರತ್ವ ಕಸಿಯುವ ಕಾನೂನು ಇದಲ್ಲ – ತೇಜಸ್ವಿ ಸೂರ್ಯ

    ಬೆಂಗಳೂರು: ಭಾರತದಲ್ಲಿನ ಮುಸ್ಲಿಮರ ಪೌರತ್ವ ಕಸಿಯುವ ಕಾನೂನು ಇದಲ್ಲ. ಮೂರು ದೇಶಗಳ ಅಲ್ಪ ಸಂಖ್ಯಾತರಿಗೆ ಪೌರತ್ವ ಕೊಡುವ ಕಾನೂನು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇನ್ನೊಂದು ಕಡೆ ಕೆಲವರು ಪೌರತ್ವ ಕಾಯ್ದೆಯ ಬಗ್ಗೆ ಮಾಹಿತಿ ಇಲ್ಲದೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ಅಡ್ವಕೇಟ್ಸ್ ಫರ್ ನೇಷನ್ಸ್ ವತಿಯಿಂದ ಕಾಯ್ದೆ ಬಗ್ಗೆ ಇಂದು ವಿಚಾರ ಸಂಕೀರಣ ಆಯೋಜನೆ ಮಾಡಿದ್ದರು.

    ಬೆಂಗಳೂರಿನ ಯವನಿಕ ಆಡಿಟೋರಿಯಂನಲ್ಲಿ ನಡೆದ ವಿಚಾರ ಸಂಕೀರಣದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ, ಸಂಸದ ತೇಜಸ್ವಿ ಸೂರ್ಯ, ಹಿರಿಯ ವಕೀಲ ಬಿವಿ ಆಚಾರ್ಯ, ಉಪ ಲೋಕಾಯುಕ್ತ ಸುಭಾಷ್ ಅಡಿ ಸೇರಿದಂತೆ ನೂರಾರು ಸಾರ್ವಜನಿಕರು ಭಾಗಿಯಾಗಿದ್ದರು. ಈ ವೇಳೆ ತೇಜಸ್ವಿ ಸೂರ್ಯ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಈ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

    2014ರ ಹಿಂದೆ ಭಾರತಕ್ಕೆ ಬಂದಿರುವ ಯಾರಿಗೂ ಈ ಕಾಯ್ದೆಯಿಂದ ತೊಂದರೆಯಾಗುವುದಿಲ್ಲ. ಭಾರತದ ಈ ಸಹಸ್ರಾರು ವರ್ಷಗಳ ನಾಗರೀಕ ಸಂಪ್ರದಾಯಗಳನ್ನಾ ಕಾಪಾಡಲು ಈ ಕಾಯ್ದೆಯನ್ನು ತರಲಾಗುತ್ತಿದೆ. ಪೌರತ್ವ ಕಾಯ್ದೆಯನ್ನು ಜಾರಿಗೆ ತರುವಂತೆ ಮನಮಹೋನ್ ಸಿಂಗ್ ರಾಜ್ಯಸಭಾದಲ್ಲಿ ಭಾಷಣ ಮಾಡಿದ್ದರು. ಆದರೆ ಈಗ ಬಿಜೆಪಿ ಅದೇ ಕಾಯ್ದೆಯನ್ನಾ ಜಾರಿಗೆ ತಂದ್ರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಪೌರತ್ವ ಕಾನೂನಿನ ಬಗ್ಗೆ ಸರಿಯಾಗಿ ಮಾಹಿತಿಯಿಲ್ಲದೇ ವಿದ್ಯಾರ್ಥಿಗಳನ್ನ ದಾರಿ ತಪ್ಪಿಸಲಾಗುತ್ತಿದೆ. ಕಾನೂನನ್ನು ಸರಿಯಾಗಿ ಓದದೆ ಈ ರೀತಿ ಗಲಭೆಗಳಿಗೆ ಕಾರಣರಾಗುತ್ತಿದ್ದಾರೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ತಿಳಿಸಿದರು.

  • ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ ಸಂಸದ ತೇಜಸ್ವಿ ಸೂರ್ಯ

    ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ ಸಂಸದ ತೇಜಸ್ವಿ ಸೂರ್ಯ

    ಚಿಕ್ಕಮಗಳೂರು: ರಾಜಕೀಯ ಜಂಜಾಟವನ್ನೆಲ್ಲಾ ಬದಿಗೊತ್ತಿ ಸಂಸದ ತೇಜಸ್ವಿ ಸೂರ್ಯ ಹುಡುಗರ ಜೊತೆ ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ್ದಾರೆ.

    ಬೆಂಗಳೂರಿನಲ್ಲಿ ವಾಸವಿರುವ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಗಸೆ ಮೂಲದ ಮಾಲತೇಶ್ ಸಂಸದ ತೇಜಸ್ವಿ ಸೂರ್ಯ ಸ್ನೇಹಿತ. ಇತ್ತೀಚಿಗೆ ಅವರ ಮನೆಯ ಗೃಹ ಪ್ರವೇಶ ನಡೆದಿತ್ತು. ಆದರೆ ಗೃಹಪ್ರವೇಶಕ್ಕೆ ತೇಜಸ್ವಿ ಸೂರ್ಯ ಬಂದಿರಲಿಲ್ಲ. ಅದಕ್ಕಾಗಿ ಸಂಸದರು ತಮ್ಮ ಸುಮಾರು 12 ಜನ ಸ್ನೇಹಿತರೊಂದಿಗೆ ಬಾಳೆಹೊನ್ನೂರಿಗೆ ಬಂದಿದ್ದರು. ಇದೇ ವೇಳೆ, ಸ್ನೇಹಿತನ ಮನೆ ಮುಂಭಾಗ ಭತ್ತದ ಕಣದಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದನ್ನ ಗಮನಿಸಿ ತೇಜಸ್ವಿ ಸೂರ್ಯ ಅವರು ತಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿ ಭತ್ತದ ಕಣದಲ್ಲೇ ಸುಮಾರು ಒಂದು ಗಂಟೆಗಳ ಕಾಲ ಕ್ರಿಕೆಟ್ ಆಡಿದ್ದಾರೆ.

    ಕ್ರಿಕೆಟ್ ಆಡಿದ ಬಳಿಕ ತನ್ನ ಸ್ನೇಹಿತರೊಂದಿಗೆ ಬಾಳೆಹೊನ್ನೂರಿನ ಭದ್ರಾ ನದಿ, ಕಾಫಿ ತೋಟ, ಹೊಲಗದ್ದೆಗಳನ್ನು ಸುತ್ತು ಹೊಡೆದು, ಮಲೆನಾಡಿನ ಸೌಂದರ್ಯವನ್ನ ಸವೆದಿದ್ದಾರೆ. ಸಂಸದರೊಂದಿಗೆ ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಪುಣ್ಯಪಾಲ್, ನಾಗರಾಜ್ ಭಟ್, ಶಶಾಂಕ್, ಮಂಜುನಾಥ್ ಕ್ರಿಕೆಟ್ ಆಡಿ ಸೆಲ್ಫಿ ಹೊಡೆದುಕೊಂಡು ಖುಷಿ ಪಟ್ಟಿದ್ದಾರೆ.

    ಕ್ರಿಕೆಟ್ ಆಡುವಾಗ ಸಂಸದ ತೇಜಸ್ವಿ ಸೂರ್ಯ ಅವರು ಎಲ್ಲರೊಂದಿಗೆ ತಾವೂ ಕೂಡ ಒಬ್ಬನೆಂಬಂತೆ ಮಿಂಗಲ್ ಆಗಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡಿ ಉತ್ತಮ ಕ್ರಿಕೆಟ್ ಆಟಗಾರ ಎಂಬುದನ್ನು ತೋರಿಸಿದ್ದಾರೆ. ಬಾಳೆಹೊನ್ನೂರು ಹುಡುಗರು ಕೂಡ ಸಂಸದರ ಜೊತೆ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದಾರೆ.

  • ಬೆಂಗ್ಳೂರಿಗರಿಗೆ ಸಿಹಿ ಸುದ್ದಿ: ಸಬ್ ಅರ್ಬನ್ ರೈಲು ಯೋಜನೆಗೆ ನೀತಿ ಆಯೋಗದಿಂದ ಗ್ರೀನ್‌ಸಿಗ್ನಲ್

    ಬೆಂಗ್ಳೂರಿಗರಿಗೆ ಸಿಹಿ ಸುದ್ದಿ: ಸಬ್ ಅರ್ಬನ್ ರೈಲು ಯೋಜನೆಗೆ ನೀತಿ ಆಯೋಗದಿಂದ ಗ್ರೀನ್‌ಸಿಗ್ನಲ್

    ಬೆಂಗಳೂರು: ಬೆಂಗಳೂರಿಗೆ ಉಪನಗರ ರೈಲು ಯೋಜನೆಗೆ ಕೇಂದ್ರ ನೀತಿ ಆಯೋಗ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಮೂಲಕ ದೀಪಾವಳಿ ಬಳಿಕ ಬೆಂಗಳೂರಿಗರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಸಬ್ ಅರ್ಬನ್ ರೈಲಿಗೆ ಇದ್ದ ತೊಡಕುಗಳು ನಿವಾರಣೆಯಾಗಿವೆ. ಬೆಂಗಳೂರಿಗೆ ಸಬ್ ಅರ್ಬನ್ ರೈಲು ಎರಡು ದಶಕಗಳ ಬೇಡಿಕೆಯಾಗಿತ್ತು. ಸೋಮವಾರ ರೈಲ್ವೇ ಚೇರ್ ಮೆನ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಆರ್ಥಿಕ ಇಲಾಖೆ ಮುಖ್ಯಸ್ಥರು ಹಾಗೂ ನೀತಿ ಆಯೋಗದ ಮುಖ್ಯಸ್ಥರ ಜೊತೆ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲಿಗೆ ಅನುಮತಿ ಸಿಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ

    ಈ ಹಿಂದೆ ಇದ್ದ ಕಾನೂನು ತೊಡಕುಗಳು ನಿವಾರಣೆಯಾಗಿವೆ. ಆದಷ್ಟು ಬೇಗ ಕೇಂದ್ರ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸಿಗಬೇಕಿದೆ. ನಮ್ಮ ರಾಜ್ಯದ ಎಲ್ಲಾ ಸಚಿವರು, ಶಾಸಕರು, ಸಂಸದರು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ. ದಿವಂಗತ, ಮಾಜಿ ಸಚಿವ ಅನಂತ್‌ಕುಮಾರ್ ಸೇರಿದಂತೆ ಸಾಕಷ್ಟು ನಾಯಕರು ಸಬ್ ಅರ್ಬನ್ ರೈಲಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

    ಸಿಲಿಕಾನ್ ಸಿಟಿಗೆ ಸಬ್ ಅರ್ಬನ್ ರೈಲು ಸೇವೆ ಒದಗಿಸಲು ಕೇಂದ್ರ ಸರ್ಕಾರ 2018ರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ಮೀಸಲಿಡಲಾಗಿದ್ದು, ಅದರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ನೀಡಲಾಗುತ್ತಿದೆ ಎಂದು ಪ್ರಕಟಿಸಿದ್ದರು.

    ಸಬ್ ಅರ್ಬನ್ ರೈಲಿನಿಂದ ನಗರ ಮತ್ತು ಸುತ್ತಮುತ್ತಲಿನ ಉಪನಗರಗಳಿಗೆ ರೈಲು ಸಂಪರ್ಕ ಏರ್ಪಡಲಿದೆ. ರಾಮನಗರ-ಬೆಂಗಳೂರು, ಬೆಂಗಳೂರು-ಮಂಡ್ಯ, ಕೇಂದ್ರ ರೈಲ್ವೇ ನಿಲ್ದಾಣ-ಯಶವಂತಪುರ, ಯಶವಂತಪುರ- ತುಮಕೂರು, ಯಲಹಂಕ-ಬೈಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ ನಡುವೆ ಬೆಂಗಳೂರು ಸಬ್ ಅರ್ಬನ್ ರೈಲು ಸೇವೆ ಆರಂಭವಾಗಲಿದೆ.

    ನಗರದ ಜನದಟ್ಟಣೆ ಕಡಿಮೆ ಮಾಡಲು ಮತ್ತು ವಿಮಾನ ನಿಲ್ದಾಣಕ್ಕೆ ನೇರಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಬರಬೇಕು ಎಂಬ ಪ್ರಸ್ತಾಪವನ್ನು 1996ರಿಂದಲೇ ಅನಂತ್ ಕುಮಾರ್ ಅವರು ಸರ್ಕಾರಗಳನ್ನು ಒತ್ತಾಯಿದ್ದರು. ಇದೀಗ ಅವರ ಸಿಲಿಕಾನ್ ಸಿಟಿಯ ಕನಸು ಈಡೇರಿದೆ. ಒಟ್ಟಿನಲ್ಲಿ ಲಕ್ಷಾಂತರ ಜನರಿಗೆ ಅನುಕೂಲವಾಗುವ ಈ ಯೋಜನೆಯಿಂದ ಟ್ರಾಫಿಕ್ ಜಾಮ್ ತಪ್ಪಲಿದೆ.

  • ನಾನು ಬ್ಲ್ಯಾಕ್ ಬೆಲ್ಟ್ ಹೊಂದಿದ್ರೆ ನೀವು ಇಂದು ಶ್ರೀಮಂತರಾಗಬಹುದಾಗಿತ್ತು- ಕೆಬಿಸಿ ಸ್ಪರ್ಧಿಗೆ ಸೂರ್ಯ ಟ್ವೀಟ್

    ನಾನು ಬ್ಲ್ಯಾಕ್ ಬೆಲ್ಟ್ ಹೊಂದಿದ್ರೆ ನೀವು ಇಂದು ಶ್ರೀಮಂತರಾಗಬಹುದಾಗಿತ್ತು- ಕೆಬಿಸಿ ಸ್ಪರ್ಧಿಗೆ ಸೂರ್ಯ ಟ್ವೀಟ್

    ಬೆಂಗಳೂರು: ಬಿಜೆಪಿಯ ಯುವ ನಾಯಕ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ‘ಕೌನ್ ಬನೇಗಾ ಕರೋಡ್‌ಪತಿ ಶೋ’ನ ಫೋಟೋವನ್ನು ಟ್ವೀಟ್ ಮಾಡಿದ್ದು, ತಮ್ಮ ಹೆಸರನ್ನು ಆಯ್ಕೆ ಮಾಡಿ ತಪ್ಪು ಉತ್ತರ ನೀಡಿದ ವ್ಯಕ್ತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ವಾಹಿನಿಯ ಜನಪ್ರಿಯ ಶೋ ಆಗಿರುವ ‘ಕೌನ್ ಬನೇಗಾ ಕರೋಡ್‌ಪತಿ’ (ಕೆಬಿಸಿ) ಕಾರ್ಯಕ್ರಮದ ಸ್ಪರ್ಧಿಗೆ ೧೭ನೇ ಲೋಕಸಭಾ ಸದನದ ಸದಸ್ಯರ ಕುರಿತ ಪ್ರಶ್ನೆಯನ್ನು ಕೇಳಲಾಗಿತ್ತು. ಆದರೆ ಈ ಪ್ರಶ್ನೆಗೆ ಸ್ಪರ್ಧಿ, ತೇಜಸ್ವಿ ಸೂರ್ಯ ಅವರ ಹೆಸರನ್ನು ಆಯ್ಕೆ ಮಾಡಿ ಸ್ಪರ್ಧಿ ತಪ್ಪು ಉತ್ತರ ನೀಡಿದ್ದರು.

    ಉತ್ತರ ಪ್ರದೇಶ ಮಥುರಾದಿಂದ ಶೋಗೆ ಆಗಮಿಸಿದ್ದ ನರೇಂದ್ರ ಕುಮಾರ್ ಅವರು ೧೧ನೇ ಆವೃತ್ತಿಯ ಕೆಬಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ೧೦ನೇ ಪ್ರಶ್ನೆವರೆಗೂ ಸರಿ ಉತ್ತರಿಸಿದ್ದ ನರೇಂದ್ರ ಕುಮಾರ್ ೩.೨೦ ಲಕ್ಷ ರೂ.ಗಳನ್ನು ಗೆದ್ದಿದ್ದರು. ಆದರೆ ೧೧ನೇ ಪ್ರಶ್ನೆಗೆ ತಪ್ಪು ಉತ್ತರ ನೀಡಿ ೬.೪೦ ಲಕ್ಷ ರೂ. ಗೆಲ್ಲುವ ಅವಕಾಶದಿಂದ ವಂಚಿತರಾಗಿ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು.

    ೧೭ನೇ ಲೋಕಸಭಾ ಸದನದ ಸದಸ್ಯರಾದ ಕೆಳಗಿನ ೪ ನಾಲ್ಕು ಸದಸ್ಯರಲ್ಲಿ ಯಾರಿಗೆ ಐಕಿಡೋ (ಮಾರ್ಷಲ್ ಆರ್ಟ್ಸ್)ದಲ್ಲಿ ಬ್ಲ್ಯಾಕ್ ಬೆಲ್ಟ್ ಲಭಿಸಿದೆ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಎ) ಗೌತಮ್ ಗಂಭೀರ್, ಬಿ) ರಾಹುಲ್ ಗಾಂಧಿ, ಸಿ) ಅನುರಾಗ್ ಠಾಕೂರ್, ಡಿ) ತೇಜಸ್ವಿ ಸೂರ್ಯ ಆಯ್ಕೆಗಳನ್ನು ನೀಡಲಾಗಿತ್ತು. ಈ ಪ್ರಶ್ನೆಗೆ ನರೇಂದ್ರ ಅವರು ತೇಜಸ್ವಿ ಸೂರ್ಯ ಅವರ ಹೆಸರನ್ನು ಆಯ್ಕೆ ಮಾಡಿದ್ದರು. ಇದನ್ನು ಓದಿ: ಜಪಾನಿನ ಐಕಿಡೋ ಮಾರ್ಷಲ್ ಆರ್ಟ್ ನಲ್ಲಿ ರಾಹುಲ್ ಗಾಂಧಿ ‘ಬ್ಲ್ಯಾಕ್ ಬೆಲ್ಟ್’-ಫೋಟೋ ನೋಡಿ

    ಕಾರ್ಯಕ್ರಮದ ಈ ಪ್ರಶ್ನೆಯನ್ನು ಗಮನಿಸಿದ ತೇಜಸ್ವಿ ಸೂರ್ಯ ಅವರು ಫೋಟೋವನ್ನು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ನಿಜಕ್ಕೂ ಐಕಿಡೊದಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದರೆ ಇಂದು ನೀವು ಶ್ರೀಮಂತ ವ್ಯಕ್ತಿಯಾಗುತ್ತಿದ್ದೀರಿ ಎಂದು ತಿಳಿಸಿದ್ದಾರೆ.

    ಅಂದಹಾಗೇ ೨೦೧೭ ರಲ್ಲಿ ರಾಹುಲ್ ಗಾಂಧಿ ಅವರು ಐಕಿಡೊ ತರಬೇತಿ ಪಡೆಯುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸದ್ಯ ತೇಜಸ್ವಿ ಅವರ ಟ್ವೀಟ್‌ಗೆ ಭಾರೀ ಪ್ರತಿಕ್ರಿಯೆ ಲಭಿಸಿದ್ದು, ಇದುವರೆಗೂ ೩೧ ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ.

  • ನೆರೆ ಪರಿಹಾರದ ಬಗ್ಗೆ ಮಾತನಾಡಲ್ಲ – ತೇಜಸ್ವಿ ಸೂರ್ಯ ಪಲಾಯನ

    ನೆರೆ ಪರಿಹಾರದ ಬಗ್ಗೆ ಮಾತನಾಡಲ್ಲ – ತೇಜಸ್ವಿ ಸೂರ್ಯ ಪಲಾಯನ

    ಬೆಂಗಳೂರು: ಬಿಜೆಪಿ ಸಂಸದರಿಗೆ ನೆರೆ ಪರಿಹಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಕಷ್ಟವಾಗುತ್ತಿದೆ. ನೆರೆ ಪರಿಹಾರದ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಪಲಾಯನವಾದ ಮಾಡಿದ್ದಾರೆ.

    ಜಯನಗರದಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮುಂದಾದ ಅವರು, ನಾನು ನೆರೆ ಪರಿಹಾರದ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಜೊತೆ ಫೋನಿನಲ್ಲಿ ಮಾತಾಡಿದ್ದೇವೆ. ಮತ್ತೆ ಅ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಜಾರಿಕೊಂಡರು.

    ಇದೇ ವೇಳೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟೀಕೆಗೂ ಉತ್ತರಿಸಿದ ತೇಜಸ್ವಿ, ಅವರು ನಮ್ಮ ಹಿರಿಯರು. ಅವರ ಅಭಿಪ್ರಾಯ ಹೇಳಿದ್ದಾರೆ. ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಗಾಂಧಿ ಜಯಂತಿ ಅಂಗವಾಗಿ ಜಯನಗರದಲ್ಲಿ ಇಂದು ಗಾಂಧಿ ಸಂಕಲ್ಪ ಪಾದಯಾತ್ರೆ ನಡೆಸಲಾಯ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪಾದಯಾತ್ರೆಗೆ ಚಾಲನೆ ನೀಡಿದರು. ಮೂರು ಬಿಬಿಎಂಪಿ ವಾರ್ಡ್ ಗಳಲ್ಲಿ ನಡೆದ ಅಭಿಯಾನದಲ್ಲಿ ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಸಂಕಲ್ಪ ಮಾಡಲಾಯ್ತು. ಜಯನಗರದ ಜೈನ್ ಕಾಲೇಜಿನಿಂದ ಆರಂಭವಾದ ಪಾದಯಾತ್ರೆಯಲ್ಲಿ ಸಂಸದರು ಸೇರಿದಂತೆ ನೂರಾರು ಯುವಕರು, ಬಿಜೆಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದರು.

    ಪಟ್ಟಾಭಿರಾಮ ನಗರ, ಭೈರಸಂದ್ರ ವಾರ್ಡಿನಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಲಾಯ್ತು. ಬಳಿಕ ಮಾತಾನಾಡಿದ ಸಂಸದ ತೇಜಸ್ವಿ ಸೂರ್ಯ, ಪ್ಲಾಸ್ಟಿಕ್ ಮುಕ್ತ ದೇಶ ಮಾಡಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಜನರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

  • ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸುಮ್ಮನಿರಲ್ಲ – ತೇಜಸ್ವಿ ಸೂರ್ಯ ವಿರುದ್ಧ ಯತ್ನಾಳ್ ಕಿಡಿ

    ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸುಮ್ಮನಿರಲ್ಲ – ತೇಜಸ್ವಿ ಸೂರ್ಯ ವಿರುದ್ಧ ಯತ್ನಾಳ್ ಕಿಡಿ

    – ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ
    – ಕೇಂದ್ರದಿಂದ ನಾವು ಭಿಕ್ಷೆ ಕೇಳುತ್ತಿಲ್ಲ

    ವಿಜಯಪುರ: ಕರ್ನಾಟಕದಲ್ಲಿ ಹಣವಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದರೆ ನಾನು ಸುಮ್ಮನೆ ಕೂರುವುದಿಲ್ಲ. ಬೇಜವಾಬ್ದಾರಿಯುತ ಹೇಳಿಕೆಗೆ ಉತ್ತರ ಕರ್ನಾಟಕ ಕಣ್ಣು ಮುಚ್ಚಿ ಕೂರುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಕೇಂದ್ರದಿಂದ ಭಿಕ್ಷೆ ಕೇಳುತ್ತಿಲ್ಲ. ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಬೇಜವಾಬ್ದಾರಿಯುತ ಹೇಳಿಕೆ ನೀಡುವವರು ಸ್ಥಳಕ್ಕೆ ಬಂದು ಜನರ ಕಷ್ಟ ನೋಡಲಿ ಎಂದು ಸ್ವಪಕ್ಷೀಯ ಸಂಸದನ ವಿರುದ್ಧವೇ ಯತ್ನಾಳ್ ಹರಿಹಾಯ್ದರು.

    ಉತ್ತರ ಕರ್ನಾಟಕದ ಬಗ್ಗೆ ಕೀಳುಮಟ್ಟದ ಮಾತು ಕೇಳಲು ಇಲ್ಲಿನ ಜನಪ್ರತಿನಿಧಿಗಳು ಸತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಬಂದಿಲ್ಲ. ಉತ್ತರ ಕರ್ನಾಟಕದ ಜನರ ಜೀವನ ಅಸ್ತವ್ಯಸ್ತವಾಗಿದೆ. ತಕ್ಷಣ 5 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

    ಇದಕ್ಕಾಗಿ ಎಲ್ಲ ಸಂಸದರು ಹಾಗೂ ಸಚಿವರು ಪ್ರಧಾನಿ ಮೋದಿ ಬಳಿ ನಿಯೋಗ ತೆಗೆದುಕೊಂಡು ಹೋಗಬೇಕು. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಕೇಂದ್ರ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಆದಿಚುಂಚನಗಿರಿ ಶ್ರೀಗಳ ಫೋನ್ ಕೂಡ ಟ್ಯಾಪಿಂಗ್ ಮಾಡಿರುವುದು ಆಶ್ಚರ್ಯ ಹಾಗೂ ನೋವು ತಂದಿದೆ. ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿದ್ದು ಕೀಳುಮಟ್ಟದ ರಾಜಕೀಯ. ಅಲ್ಲದೆ ಫೋನ್ ಟ್ಯಾಪಿಂಗ್ ಮಾಡುವವರಿಗೆ ಶಿಕ್ಷೆ ಆಗಬೇಕು. ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿರುವುದು ಹಿಂದೂ ಸಮಾಜಕ್ಕೆ ಅಪಮಾನ. ಶ್ರೀಗಳೇನು ದೇಶದ್ರೋಹಿ ಕೆಲಸ ಮಾಡಲ್ಲ, ಇದು ಶೋಭೆ ತರುವ ಕೆಲಸ ಅಲ್ಲ. ಫೋನ್ ಟ್ಯಾಪಿಂಗ್ ರಾಜಕೀಯ ವ್ಯಭಿಚಾರ ಎಂದು ಕಿಡಿಕಾರಿದರು.

    ರಾಮ ಮಂದಿರ ಯಾಕೆ ಕಟ್ಟುತ್ತಾರೆ ಎಂದು ಪ್ರಶ್ನಿಸಿದ್ಧ ಸಾಹಿತಿ ಭಗವಾನ್ ಹೇಳಿಕೆ ಕುರಿತು ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದ್ದು, ಭಗವಾನ್ ಸಲಹೆ, ಮಾರ್ಗದರ್ಶನ ಈ ದೇಶಕ್ಕೆ ಅವಶ್ಯತೆ ಇಲ್ಲ. ಭಗವಾನ್ ನಕಲಿ ಬುದ್ಧಿ ಜೀವಿ. ದೇಶದಲ್ಲಿ ಭಗವಾನ್ ನಂತಹ ನಕಲಿ ಬುದ್ಧಿ ಜೀವಿಗಳ ಕೆಲಸ ಏನು ಇಲ್ಲ. ಅವ ಬಾಗ್ವಾನ್ ಅದಾನೋ, ಭಗವಾನ್ ಅದಾನೋ ನನಗೆ ಗೊತ್ತಿಲ್ಲ. ಪ್ರಧಾನಿ ಮೇಲೆ ವಿಶ್ವಾಸವಿಟ್ಟು ಜನ ಆಶೀರ್ವಾದ ಮಾಡಿದ್ದಾರೆ. ನಾವು ರಾಮಮಂದಿರ, ಬೌದ್ಧ ಸ್ತೂಪ, ಮಹಾವೀರ ಬಸದಿ ಕಟ್ಟುತ್ತೇವೆ. ಡಾ.ಅಂಬೇಡ್ಕರ್ ಅವರ ಸ್ಮೃತಿ ಭವನವನ್ನೂ ಪ್ರಧಾನಿ ಕಟ್ಟಿದ್ದಾರೆ ಎಂದು ಹೇಳಿ ಭಗವಾನ್ ವಿರುದ್ಧ ಹರಿಹಾಯ್ದರು.

  • ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸ್ತಿದ್ದಾನೆ: ಈಶ್ವರ್ ಖಂಡ್ರೆ

    ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸ್ತಿದ್ದಾನೆ: ಈಶ್ವರ್ ಖಂಡ್ರೆ

    ಬೆಳಗಾವಿ: ಸಂಸದ ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

    ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ 14 ನೇಯ ಹಣಕಾಸು ಯೋಜನೆಯಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೆ ನೆರವು ನೀಡಲೇಬೆಕು ಎಂದು ಹೇಳಿದರು.

    ಮಾನವೀಯತೆಯ ಆಧಾರದ ಮೇಲೆ ಪ್ರಧಾನಿ ಮೋದಿ ರಷ್ಯಾಕ್ಕೆ ಹಣ ನೀಡುತ್ತಾರೆ. ಆದರೆ ನಮ್ಮ ರಾಜ್ಯ ಕರ್ನಾಟಕಕ್ಕೆ ಯಾಕೆ ಪರಿಹಾರ ನೀಡುತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ನಾವು ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಹಿಂಬದಿಯಿಂದ ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದರು. ಆದರೆ ನೆರೆ ಬಂದು 50 ದಿನ ಕಳೆದರೂ ಪರಿಹಾರ ಬಂದಿಲ್ಲ. ರಾಜ್ಯ ಬಿಜೆಪಿ ನಾಯಕರು ಎಲ್ಲಿದ್ದೀರಪ್ಪ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ತೇಜಸ್ವಿ ಸೂರ್ಯ ತಕ್ಷಣ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು: ಹೆಚ್‍ಕೆ ಪಾಟೀಲ್

    ಕೇಂದ್ರ ಸಚಿವರು, ನಮ್ಮ ಸಿಎಂ ಯಡಿಯೂರಪ್ಪ ಅವರಿಗೆ ಭೇಟಿಯಾಗಲೂ ಸಮಯ ನೀಡುತ್ತಿಲ್ಲ. ಈ ಅಭಿವೃದ್ಧಿ ಮಾಡಲು 25 ಸಂಸದರು ಬೇರೆ ಕೇಡು. ಇವತ್ತಿನ ಪ್ರತಿಭಟನೆಯನ್ನು ನೋಡಿ ಮೋದಿ ಸರ್ಕಾರ ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡಿದರು.

  • ತೇಜಸ್ವಿ ಸೂರ್ಯ ತಕ್ಷಣ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು: ಹೆಚ್‍ಕೆ ಪಾಟೀಲ್

    ತೇಜಸ್ವಿ ಸೂರ್ಯ ತಕ್ಷಣ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು: ಹೆಚ್‍ಕೆ ಪಾಟೀಲ್

    ವಿಯಯಪುರ: ತಕ್ಷಣವೇ ಸಂಸದ ತೇಜಸ್ವಿ ಸೂರ್ಯ ಸಂತ್ರಸ್ತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಅನುದಾನ ಬೇಕಿಲ್ಲ ಎಂದಿದ್ದ ತೇಜಸ್ವಿ ಸೂರ್ಯ ಸಂತ್ರಸ್ತರ ಬಳಿ  ಕ್ಷಮೆ ಕೇಳದಿದ್ದರೆ ಅವರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದರು.

    ಸಂತ್ರಸ್ತರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿ ಕನ್ನಡಿಗರಿಗೆ ಅಗೌರವ ಮಾಡಿದ್ದಾರೆ. ಕರ್ನಾಟಕದ ಬಗ್ಗೆ ಸಂಸದ ತೇಜಸ್ವಿ ಸೂರ್ಯಗೆ ಎಷ್ಟು ಕಾಳಜಿ ಇಟ್ಟುಕೊಂಡಿದ್ದಾರೆ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ. ಬೆಳಗಾವಿಯಲ್ಲಿ ಕುಳಿತು ಹೀಗೆ ಹೇಳುತ್ತಾರೆ. ದೆಹಲಿಯಲ್ಲಿ ಹೇಗೆ ಹೇಳಿರಬೇಡ. ಪ್ರಧಾನಿ ಮೋದಿ ಎದುರು ಏನು ಹೇಳಿರಬೇಕು. ಮೋದಿ ರಾಜ್ಯಕ್ಕೆ ಭೇಟಿ ಕೊಡದೆ ಇರೋದಕ್ಕೆ ತೇಜಸ್ವಿ ಸೂರ್ಯ ಕಾರಣ ಎಂದು ಪ್ರಶ್ನೆಗಳ ಸುರಿಮಳೆಗೈದರು. ತೇಜಸ್ವಿ ಸೂರ್ಯ ಮೋದಿಗೆ ಮಿಸ್ ಗೈಡ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಅನರ್ಹ ಶಾಸಕರ ಮುಂದಿನ ನಡೆಯ ಬಗ್ಗೆ ಗೊತ್ತಾಗುತ್ತಿಲ್ಲ. ಅನರ್ಹ ಶಾಸಕರು ಪಕ್ಷ ದ್ರೋಹ ಮಾಡಿದ್ದಾರೆ. ಅನರ್ಹ ಶಾಸಕರು ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ರಾಜ್ಯ ದ್ರೋಹ ಹಾಗೂ ಪ್ರಜಾಪ್ರಭುತ್ವದ ವಿರೋಧ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು. ಅಲ್ಲದೆ ಅವರಿಗೆ ತಕ್ಕ ಪಾಠ ಆಗಬೇಕು. ಸುಪ್ರಿಂ ಕೋರ್ಟ್ ಸ್ಪೀಕರ್ ಆದೇಶ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದರು.

  • ಜನತೆಯ ಕಷ್ಟದ ಬದಲಾಗಿ ಬಿಎಸ್‍ವೈಗೆ ಕುರ್ಚಿ ಚಿಂತೆ- ಎಚ್‍ಡಿಡಿ

    ಜನತೆಯ ಕಷ್ಟದ ಬದಲಾಗಿ ಬಿಎಸ್‍ವೈಗೆ ಕುರ್ಚಿ ಚಿಂತೆ- ಎಚ್‍ಡಿಡಿ

    -ತೇಜಸ್ವಿ ಸೂರ್ಯ ಉದಯೋನ್ಮುಖ ನಾಯಕ

    ಬೆಂಗಳೂರು: ಕುರ್ಚಿ ಮುಖ್ಯ ಆದಾಗ ರಾಜ್ಯದ ಜನತೆ ಮುಖ್ಯ ಆಗುವುದಿಲ್ಲ. ಈಗ ಸಿಎಂ ಯಡಿಯೂರಪ್ಪರಿಗೆ ಕುರ್ಚಿ ಅನಿವಾರ್ಯವಾಗಿದ್ದರಿಂದ ದೆಹಲಿಗೆ ಹೋಗಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಇಂತಹ ಕೆಟ್ಟ ದುಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಜನರು ನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇದು ಏನ್ರೀ, ಯಡಿಯೂರಪ್ಪ ಹೇಗೆ ಕುರ್ಚಿ ಉಳಿಸಿಕೊಳ್ಳಬೇಕು ಎಂಬ ಹಿಂಸೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರು ದೆಹಲಿಗೆ ಹೋಗಿದ್ದಾರೆ ಎಂದು ಹರಿಹಾಯ್ದರು.

    ಸಂಸದ ತೇಜಸ್ವಿ ಸೂರ್ಯರನ್ನು ಹೊಗಳುವ ಮೂಲಕ ಯಡಿಯೂರಪ್ಪರನ್ನು ತೆಗಳಿದ ಅವರು, ತೇಜಸ್ವಿ ಸೂರ್ಯ ಅವರ ಬದ್ಧತೆ ನನಗೆ ಇಷ್ಟ ಆಯ್ತು. ರಾಜ್ಯದ ಜನರ ಬಗ್ಗೆ ಇರುವ ಅವರ ಕಾಳಜಿ ನನಗೆ ಇಷ್ಟ ಆಯಿತು. ನನ್ನಿಂದ ಅವರಿಗೆ ಪ್ರಮಾಣ ಪತ್ರ ಕೊಡುವ ಅಗತ್ಯತೆ ಇಲ್ಲ. ರಾಜ್ಯದ ಜನತೆ ನನಗೆ ಮುಖ್ಯ, ತೀವ್ರ ತರವಾದ ಆಕ್ರೋಶ ಅವರ ಮಾತಿನಲ್ಲಿತ್ತು. ಉದಯೋನ್ಮುಖ ನಾಯಕರಿಗೆ ಇಂತಹ ಭಾವನೆ ಇರಬೇಕಾಗಿರುವುದು ಅಗತ್ಯ. ಪಕ್ಷ ಯಾವುದಾದರೂ ಇರಲಿ. ಅವರ ಬದ್ಧತೆ ನನಗೆ ಇಷ್ಟ ಆಯಿತು. ಆದರೆ ಯಡಿಯೂರಪ್ಪನವರಿಗೆ ರಾಜ್ಯದ ಜನರ ಪರವಾಗಿ ಬದ್ಧತೆ ಇಲ್ಲ. ಕುರ್ಚಿ ಮೇಲೆ ಚಿಂತೆ ಇದೆ ಎಂದು ವಾಗ್ದಾಳಿ ನಡೆಸಿದರು.

    ಹೈ ಕೋರ್ಟ್ ಆದೇಶ ಇದ್ದರು ಕಾಂಗ್ರೆಸ್ ಸ್ನೇಹಿತರ ತೃಪ್ತಿಗೋಸ್ಕರ ಒಬ್ಬರನ್ನು ಘನ ಸರ್ಕಾರ ಅಮಾನತು ಮಾಡಿದೆ. ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಬಿಜೆಪಿಗೆ ಹೋಗುವವರು ಮಂಡ್ಯದಲ್ಲಿ ತುಂಬಾ ಜನ ಇದ್ದಾರೆ. ಅವರಿಗೆ ತೃಪ್ತಿ ಮಾಡಲು ದೆಹಲಿಗೆ ಹೋಗುವ ಮುನ್ನ ಅಮಾನತು ಮಾಡಿ ಹೋಗಿದ್ದಾರೆ. ಯಡಿಯೂರಪ್ಪನವರಿಗೆ ಧನ್ಯವಾದ ಎಂದು ದೇವೇಗೌಡರು ಕಿಡಿಕಾರಿದರು. ಅಲ್ಲದೆ, ಹೆಸರು ಹೇಳದೆ ನಾರಾಯಣಗೌಡ ಮತ್ತು ಚೆಲುವರಾಯಸ್ವಾಮಿ ವಿರುದ್ಧ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.