Tag: teacher

  • ಉಡುಪಿ ಸರ್ಕಾರಿ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ವಿವಿಎಸ್ ಲಕ್ಷ್ಮಣ್

    ಉಡುಪಿ ಸರ್ಕಾರಿ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ವಿವಿಎಸ್ ಲಕ್ಷ್ಮಣ್

    ಹೈದರಾಬಾದ್/ಉಡುಪಿ: ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ತಾವೇ ಬಸ್ ಚಾಲಕರಾಗಿರುವ ಫೋಟೋ ಟ್ವೀಟ್ ಮಾಡಿ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಾಳಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು 6 ಕಿ.ಮೀ. ನಡೆದು ಹೋಗುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯಿಂದ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಶಾಲೆಯ ಶಿಕ್ಷಕ ರಾಜರಾಮ್ ತಾವೇ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

    ಬಸ್ ಖರೀದಿಗೆ ಯೋಚನೆ ಮಾಡಿದ್ದ ರಾಜರಾಮ್ ಅವರು ತಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳ, ಶಿಕ್ಷಕರ ಸಹಾಯ ಪಡೆದು ಖರೀದಿ ಮಾಡಿದ್ದಾರೆ. ಖರೀದಿ ಏನೋ ಆಯ್ತು ಚಾಲಕನನನ್ನು ನೇಮಿಸಬೇಕಾದರೆ ಪ್ರತಿ ತಿಂಗಳು 7 ಸಾವಿರ ರೂ. ಸಂಬಳ ನೀಡಬೇಕಿತ್ತು. ಸದ್ಯದ ಆರ್ಥಿಕ ಸಂಪನ್ಮೂಲದಲ್ಲಿ ಇದು ಕಷ್ಟವಾದ ಕಾರಣ ರಾಜರಾಮ್ ಅವರೇ ಚಾಲಕರಾಗಿದ್ದಾರೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರು ಒಳಗೊಂಡಂತೆ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

    ಶಾಲೆಯ ಅವಧಿ ಮುಕ್ತಾಯವಾಗುತ್ತಿದ್ದಂತೆ ರಾಜರಾಮ್ ತಾವೇ ಶಾಲಾ ಬಸ್ಸನ್ನು ಚಲಾಯಿಸಿಕೊಂಡು ಪ್ರತಿ ವಿದ್ಯಾರ್ಥಿಯನ್ನು ಮನೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಶಾಲೆಯ ಬಸ್ಸಿನ ಇಂಧನ ಹಾಗೂ ಇತರೇ ಖರ್ಚುಗಳನ್ನು ಅವರೇ ಭರಿಸುತ್ತಿದ್ದಾರೆ.

    ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ಪಾಠ ಮಾಡುವುದರೊಂದಿಗೆ ದೈಹಿಕ ಶಿಕ್ಷಕರು ಸಹ ಆಗಿದ್ದಾರೆ. ಬೆಳಗ್ಗೆ 5.30ಕ್ಕೆ ಕಾರ್ಯ ಪ್ರವೃತ್ತರಾಗುವ ರಾಜರಾಮ್ 6 ಗಂಟೆಯಿಂದ ವಿದ್ಯಾರ್ಥಿಗಳಿಗೆ ಹೈಜಂಪ್, ಬ್ಯಾಡ್ಮಿಂಟನ್ ತರಬೇತಿ ನೀಡುತ್ತಾರೆ. ಬಳಿಕ 7.30ಕ್ಕೆ ಸಿದ್ಧರಾಗಿ 8 ಗಂಟೆಗೆ ಬಸ್ಸಿನ ಚಾಲಕನ ಸೀಟ್‍ನಲ್ಲಿ ಕೂತರೇ ಮತ್ತೆ ಮನೆಗೆ ಹಿಂದಿರುಗುವುದು ಸಂಜೆ 5.30ಕ್ಕೆ. ಶಾಲೆಗೆ ಸುತ್ತಲಿನ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಗ್ರಾಮಗಳಿಂದ ತಾವೇ ವಿದ್ಯಾರ್ಥಿಗಳನ್ನು ಕರೆತರುತ್ತಾರೆ.

    ಶಾಲಾ ವಾಹನ ಚಾಲನೆ ಮಾಡಲು ಶಿಕ್ಷಕರು ಪರವಾನಗಿ ಸಹ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಮುಂದಾದ ಬಳಿಕ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದು, ಶಾಲೆಯಲ್ಲಿ 90 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

  • 10 ವರ್ಷದಿಂದ ಡಾ. ರಾಜ್ ಕುಮಾರ್ ಗಾಗಿ ಕಾದಿದ್ದ ಶಿಕ್ಷಕಿಯ ಆಸೆಯನ್ನು ನೆರವೇರಿಸಿದ್ರು ಪುನೀತ್!

    10 ವರ್ಷದಿಂದ ಡಾ. ರಾಜ್ ಕುಮಾರ್ ಗಾಗಿ ಕಾದಿದ್ದ ಶಿಕ್ಷಕಿಯ ಆಸೆಯನ್ನು ನೆರವೇರಿಸಿದ್ರು ಪುನೀತ್!

    ಹುಬ್ಬಳ್ಳಿ: ಕಳೆದ ಹತ್ತು ಹದಿನೈದು ವರ್ಷಗಳಿಂದ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರನ್ನು ನೋಡಲೇಬೇಕು ಎಂಬ ಆಸೆಯಿಂದ ಕಾಯುತ್ತಿದ್ದ ನಿವೃತ್ತ ಶಿಕ್ಷಕಿಯ ಆಸೆಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೊನೆಗೂ ಈಡೇರಿಸಿದ್ದಾರೆ.

    ಹುಬ್ಬಳ್ಳಿಯ ಗೋಕುಲ್ ರೋಡ್‍ನ ಅಕ್ಷಯ ಪಾರ್ಕ್ ನ ನಿವಾಸಿಯಾದ ಸುನಂದಾ ವೆರ್ಣೆಕರ್ ರಾಜ್ ಕುಮಾರ್ ಅವರ ಹುಚ್ಚು ಅಭಿಮಾನಿ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಕಳೆದ 6 ವರ್ಷಗಳ ಹಿಂದೆ ವೃತ್ತಿಯಿಂದ ನಿವೃತ್ತಿ ಹೊಂದಿದ ಇವರು ಜೀವನದಲ್ಲಿ ಒಮ್ಮೆಯಾದ್ರೂ ಡಾ. ರಾಜ್ ಕುಮಾರ್ ಅವರನ್ನು ನೋಡಲೇಬೇಕು ಎಂಬ ಮಹದಾಶೆಯನ್ನು ಹೊತ್ತು ಕಾಯುತ್ತಿದ್ದರು. ಆದರೆ ನಟಸಾರ್ವಭೌಮ ಅವರನ್ನು ನೋಡುವ ಭಾಗ್ಯ ಶಿಕ್ಷಕಿಗೆ ಸಿಗಲಿಲ್ಲ.

    ಆದ್ರೆ ಇದೀಗ ಶಿಕ್ಷಕಿಯ ಆಸೆಯನ್ನು ರಾಜ್ ಕುಮಾರ್ ಅವರ ಮಗ ಪುನೀತ್ ರಾಜ್ ಕುಮಾರ್ ಈಡೇರಿಸಿದ್ದಾರೆ. ಸುನಂದಾ ವೆರ್ಣೆಕರ್ ಅವರ ಮಗ ರಾಮ್, ತನ್ನ ತಾಯಿಗೆ ಪುನೀತ್ ರಾಜ್ ಕುಮಾರ್ ಅವರನ್ನು ಹೇಗಾದರೂ ಭೇಟಿ ಮಾಡಿಸಿ ತಾಯಿಯ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಕಳೆದ ಮೂರನಾಲ್ಕು ವರ್ಷಗಳಿಂದ ಪುನೀತ್ ಅವರ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದ್ದರು. ಕೊನೆಗೂ ಬಾಗಲಕೋಟೆ ಜಿಲ್ಲೆಯ ಮಹಕೂಟದಲ್ಲಿ ನಡೆಯುತ್ತಿರುವ ನಟಸಾರ್ವಭೌಮ ಚಿತ್ರಿಕರಣಕ್ಕೆ ಬಂದ ಸಂದರ್ಭದಲ್ಲಿ, ತನ್ನ ತಾಯಿಯನ್ನು ಭೇಟಿ ಮಾಡಿಸಿ ತನ್ನ ಅಮ್ಮನ ಆಸೆಯನ್ನು ನೆರವೇರಿಸಿದ್ದಾರೆ.

  • 66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

    66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

    ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದನೆಯ ಉಗುರುಗಳನ್ನ ಕತ್ತರಿಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲಾಗಿದ್ದಾರೆ.

    ಶ್ರೀಧರ್ ಚಿಲ್ಲಾಸ್ 82 ವರ್ಷದವರಾಗಿದ್ದು, ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರುಗಳನ್ನ ಬೆಳೆಸಿಕೊಂಡು ವಿಶ್ವ ದಾಖಲೆ(ಗಿನ್ನಿಸ್ ದಾಖಲೆ) ಮಾಡಿದ್ದರು. ಚಿಲ್ಲಾಸ್ 1985 ರಿಂದ ತಮ್ಮ ಉಗುರುಗಳನ್ನ ಬೆಳೆಸಲು ಆರಂಭಿಸಿದ ಇವರು ಸುಮಾರು 31 ಅಡಿ ಉದ್ದದಷ್ಟು ಉಗುರುಗಳನ್ನ ಬೆಳೆಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.

    ಚಿಲ್ಲಾಸ್ ಒಂದು ಬಾರಿ ತಮ್ಮ ತರಗತಿಯಲ್ಲಿ ಆಕಸ್ಮಿಕವಾಗಿ ಶಿಕ್ಷಕರ ಉದ್ದನೆಯ ಉಗುರನ್ನ ಮುರಿದು ಬಿಟ್ಟಿದ್ದರು. ಆ ಕಾರಣ “ನೀನು ಏನು ಮಾಡಿದ್ದೀಯ ಎಂಬುದು ನಿನಗೆ ಗೊತ್ತಿಲ್ಲ ಅದರ ಮಹತ್ವ ಏನು ಎನ್ನುವುದು ನಿನಗೆ ಎಂದು ಅರ್ಥವಾಗುವುದಿಲ್ಲ ಎಂದು ತರಗತಿಯಲ್ಲೇ ಬೈದಿದ್ದರು. ಅಂದಿನಿಂದ “ನಾನು ಅದನ್ನು ಒಂದು ಸವಾಲಾಗಿ ತೆಗೆದುಕೊಂಡೆ” ಎಂದು ಚಿಲ್ಲಾಸ್ ತಿಳಿಸಿದ್ದಾರೆ. ಇದನ್ನೂ ಓದಿ: 66 ವರ್ಷಗಳ ಬಳಿಕ ವಿಶ್ವದ ಅತ್ಯಂತ ಉದ್ದನೆಯ ಉಗುರು ಕಟ್: ವಿಡಿಯೋ ನೋಡಿ

    ಅಂದಿನಿಂದ ಕೇವಲ ತಮ್ಮ ಎಡಗೈ ಬೆರಳುಗಳ ಉಗುರುಗಳನ್ನ ಬೆಳೆಸಲು ಆರಂಭಿಸಿದ ಚಿಲ್ಲಾಸ್ ಸುಮಾರು 66 ವರ್ಷಗಳವರೆಗೆ ಮುಂದುವರಿಸಿದರು. ಅವರ ಉಗುರು ಸುಮಾರು 909.6 ಸೆ.ಮಿ ಉದ್ದವಿದ್ದು ಅದರ ತೂಕದಿಂದಾಗಿ ಅವರ ಎಡಗೈ ಶಾಶ್ವತವಾಗಿ ಹ್ಯಾಂಡಿಕ್ಯಾಪ್ ಆಗಿದೆ. ಮುಚ್ಚಿದ ಸ್ಥಿತಿಯಲ್ಲಿದ್ದ ಕೈ ಬಿಚ್ಚಲು ಸಾಧ್ಯವಾಗದೇ ಬೆರಳುಗಳನ್ನ ಸಹ ತಳ್ಳಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

    ಚಿಲ್ಲರ್ ಅವರ ಈ ಅಸಾಮಾನ್ಯ ಆಯ್ಕೆಯು ಅವರ ಸಾಮಾನ್ಯ ಜೀವನದಲ್ಲಿ ಯಾವುದೇ ಅಡಚಣೆಯನ್ನ ಉಂಟು ಮಾಡಲಿಲ್ಲ. ಅವರ ಪತ್ನಿ ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳ ಜೊತೆ ಖುಷಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಚಿಲ್ಲರ್ ಅವರಿಗೆ ವಯಸ್ಸಾದಂತೆ ಅವರ ಉದ್ದನೆಯ ಉಗುರು ಅವರ ಸಾಮಾನ್ಯ ಜೀವನ ಶೈಲಿ ನಡೆಸಲು ಒಂದು ಸವಾಲಾಗಿ ಪರಿಣಮಿಸಿತು. ರಾತ್ರಿ ಮಲಗುವಾಗ ತುಂಬ ಕಷ್ಟವಾಗುತ್ತಿತ್ತು. ಹಾಗಾಗಿ ತಮ್ಮ ಉಗುರುಗಳನ್ನ ಕಟ್ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಇದೀಗ ಶ್ರೀಧರ್ ಚಿಲ್ಲಾಸ್ ಅವರ ವಿಶ್ವದ ಅತೀ ಉದ್ದನೆಯ ಉಗುರುಗಳನ್ನ ಟೈಮ್ಸ್ ಸ್ಕ್ವೇರ್ ರಿಪ್ಲೇ ನ ಬ್ಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಹೊರತು ಪಡಿಸಿ ಪ್ರಪಂಚದಾದ್ಯಂತ ಸುಮಾರು 20 ಗ್ಯಾಲರೀಸ್ ಹಾಗೂ 500 ಕ್ಕು ಹೆಚ್ಚು ಕಲಾಕೃತಿಯನ್ನ ಈ ಮ್ಯೂಸಿಯಂ ಹೊಂದಿದೆ.

  • 1ನೇ ತರಗತಿಯ ಬಾಲಕ ಶಿಕ್ಷಕನ ಮುಂದೆ ಮಾತನಾಡಿದ ವಿಡಿಯೋ ವೈರಲ್- ನೀವು ನೋಡಿ

    1ನೇ ತರಗತಿಯ ಬಾಲಕ ಶಿಕ್ಷಕನ ಮುಂದೆ ಮಾತನಾಡಿದ ವಿಡಿಯೋ ವೈರಲ್- ನೀವು ನೋಡಿ

    ಬಾಗಲಕೋಟೆ: ಪುಟಾಣಿ ಬಾಲಕನೊಬ್ಬ ಶಿಕ್ಷಕನ ಮುಂದೆ ಮಾತನಾಡಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಬಸವೇಶ್ವರ ಖಾಸಗಿ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಸ್ವರೂಪ್ ಎಂಬ ಬಾಲಕನ ವಿಡಿಯೋ ಇದಾಗಿದ್ದು, ಪುಸ್ತಕ ಹರಿದ ವಿಚಾರಕ್ಕೆ ಎಂ.ಎಸ್ ತೇಲಿ ಎಂಬ ಶಿಕ್ಷಕರು ಬೆದರಿಸಲು ಮುಂದಾಗಿದ್ದಾರೆ.

    ವಿಡಿಯೋದಲ್ಲೇನಿದೆ?:
    ಕೈಯಲ್ಲಿ ಸ್ಟೆಪ್ಲರ್ ಹಿಡಿದು ಪುಸ್ತಕ ಹರಿಯುತ್ತಿಯಾ? ಹಲ್ಲು ಕೀಳಬೇಕೇನು ಎಂದು ಶಿಕ್ಷಕ ಬೆದರಿಸಿದ್ದಾರೆ. ಈ ವೇಳೆ ಬಾಲಕ ಉತ್ತರ ಕರ್ನಾಟಕ ಶೈಲಿಯಲ್ಲಿ ತೊದಲುತ್ತಾ ಅಳು ಮಿಶ್ರಿತವಾಗಿ ಮಾತಾಡಿದ್ದು, ಎಲ್ಲರಿಗೂ ಇಷ್ಟವಾಗಿದೆ. ಇಲ್ರಿ ಇನ್ನು ಮೇಲೆ ಪುಸ್ತಕ ಹರಿಯಂಗಿಲ್ರಿ, ಚೆಂದಗಿ ಬರಿತಿನ್ರಿ, ಇನ್ನೊಮ್ಮೆ ಹರಿಯಂಗಿಲ್ರಿ ಅಂತ ಅಳುತ್ತಾ ಉತ್ತರಿಸಿದ್ದಾನೆ. ಆದರೂ ಶಿಕ್ಷಕರು ಇಲ್ಲ ನಿನ್ನ ಎರಡು ಹಲ್ಲು ಕೀಳುತ್ತೇನೆ ಎಂದು ಬೆದರಿಸಿದ್ದಾರೆ.

    ಇದೇ ವೇಳೆ ನಿನ್ನ ಹೆಸರೇನು ಎಂದು ಕೇಳಿದಾಗ ಸ್ವರೂಪ್, ತಂದೆ ಹೆಸರು ಉಮೇಶ್, ಮನೆ ಹೆಸರು ಮೊಸಳಿ ಎಂದು ಅಳುತ್ತಲೇ ಉತ್ತರಿಸಿದ್ದಾನೆ. ಊರು ಬನಹಟ್ಟಿ, ತಾಲೂಕು ಜಮಖಂಡಿ, ಜಿಲ್ಲೆ ಬಾಗಲಕೋಟೆ ಅಂತಾನೂ ಹೇಳಿದ್ದಾನೆ. ಆದರೆ ರಾಜ್ಯ ಅಂದಾಗ ಕರ್ನಾಟಕ ಅನ್ನುವ ಬದಲು ಕರ್ನಾಟಕ ಮುಖ್ಯಮಂತ್ರಿ ಎಂದು ತಗಲಾಕಿಕೊಂಡಿದ್ದಾನೆ.

    ಈ ಸಂದರ್ಭದಲ್ಲಿ ಶಿಕ್ಷಕರು ಕರ್ನಾಟಕ ಮುಖ್ಯಮಂತ್ರಿ ಯಾರು ಅಂದಾಗ ಬಾಲಕ ಸಿದ್ದರಾಮಯ್ಯ ಎಂದು ಉತ್ತರಿಸಿದ್ದಾನೆ. ಆಗ ಶಿಕ್ಷಕರು ಸಿದ್ದರಾಮಯ್ಯ ಮನೆಗೆ ಹೋಗಿದ್ದಾನೆ ಅಂತಾರೆ. ಅಲ್ಲಂದ್ರ ಮೋದಿ ಅಂತಾನೆ ಬಾಲಕ. ಶಿಕ್ಷಕರು ನರೇಂದ್ರ ಮೋದಿ ಭಾರತದ ಪ್ರಧಾನಿ ಅಂತಾರೆ. ಆದರೂ ಬಾಲಕ ಕರ್ನಾಟಕ ಮುಖ್ಯಮಂತ್ರಿ ಮೋದಿ ಎನ್ನುತ್ತಾನೆ. ಬಳಿಕ ನನಗೆ ಗೊತ್ತಿಲ್ರಿ, ಸಿದ್ದರಾಮಯ್ಯ ಗೊತ್ತಿಲ್ಲ ಎಂದಿದ್ದಾನೆ.

    ಶಿಕ್ಷಕರು ಯಾಕೆ ಸಿದ್ದರಾಮಯ್ಯ ನಿಮ್ಮ ಮನೆಗೆ ಬಂದಿಲ್ಲೇನು ಅಂತ ಕೇಳಿದಾಗ ಬಾಲಕ ಹೇಳಿದ ಉತ್ತರ ಸಾಕಷ್ಟು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಸಿದ್ದರಾಮಯ್ಯ ನಮ್ಮ ಮನೆಗೆ ಬಂದಿದ್ದ, ಬಂದು ಊಟ ತಿಂದು ಹೋಗ್ಯಾನರಿ. ಮೋದಿನೂ ನಮ್ಮ ಮನೆಗೆ ಬಂದಿದ್ದರು. ಮೊನ್ನೆ ಜಾತ್ರಿ ಇದ್ದಾಗ ನಮ್ಮ ಮನಿಗೆ ಬಂದಿದ್ದರು. ಇಷ್ಟೇ ಅಲ್ಲದೆ ಮೊನ್ನೆ ನಾನು ಸಿದ್ದರಾಮಯ್ಯ ಮತ್ತು ಮೋದಿ ಮನೆಗೆ ಹೋಗಿದ್ದೆ. ನನಗೆ ಕೇಕ್ ಅನ್ನ(ಮಮ್ಮು) ಸಾರು, ರೊಟ್ಟಿ ಎಲ್ಲಾ ಕೊಟ್ರು ಅಂತಾನೆ. ನೀ ಏನು ಕೊಟ್ಟೆ ಅಂದಾಗ ರೊಟ್ಟಿ ಸಾರು ಮಮ್ಮು(ಅನ್ನ) ಕೊಟ್ಟೆ ಎಂದಿದ್ದಾನೆ. ನಂತರ ಇನ್ನೊಮ್ಮೆ ಹುಡುಗರನ್ನು ಬಡಿಯಂಗಿಲ್ಲ, ಇನ್ನೊಮ್ಮೆ ತಪ್ಪು ಮಾಡಂಗಿಲ್ಲ ಎಂದು ಹೇಳಿದ್ದಾನೆ.

    ಬಾಲಕನ ಈ ವಿಡಿಯೋ ಈಗ ಎಲ್ಲರ ಮೊಬೈಲ್ ನಲ್ಲಿ ಹರಿದಾಡುತ್ತಿದೆ. ಆತನ ತೊದಲುನುಡಿ ಉತ್ತರ ಕರ್ನಾಟಕ ಶೈಲಿ ಮಾತುಗಳು ಸಾಕಷ್ಟು ಇಷ್ಟವಾಗಿದ್ದು, ನೋಡುಗರು ನಕ್ಕು ನಲಿಯುವಂತೆ ಮಾಡಿವೆ. ಆದರೆ ಕೆಲವರು ಶಿಕ್ಷಕನ ವರ್ತನೆ ಬಗ್ಗೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಕನಿಗೆ ಸ್ಟೆಪ್ಲರ್ ಹಿಡಿದು ಬೆದರಿಸಿದ್ದು, ಹಲ್ಲು ಕೀಳುತ್ತೇನೆ ಎಂದು ಗದರಿಸೋದು ಸರಿಯಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಬಾಲಕನ ವಿಡಿಯೋ ಮಾತ್ರ ಈಗ ಸಾಕಷ್ಟು ವೈರಲ್ ಆಗಿ ಮನರಂಜನೆ ನೀಡುತ್ತಿರೋದಂತು ಸತ್ಯ.

    https://www.youtube.com/watch?v=jltWstnr1nk

  • ಶಿಕ್ಷಕನ ಪರ ನಿಂತು ಪ್ರಿನ್ಸಿಪಾಲರನ್ನು ತರಾಟೆಗೆ ತೆಗೆದುಕೊಂಡ ಪೋಷಕರು!

    ಶಿಕ್ಷಕನ ಪರ ನಿಂತು ಪ್ರಿನ್ಸಿಪಾಲರನ್ನು ತರಾಟೆಗೆ ತೆಗೆದುಕೊಂಡ ಪೋಷಕರು!

    ಕೊಪ್ಪಳ: ಶಾಲೆಯಲ್ಲಿ ಗುಂಪುಗಾರಿಕೆ ನಡೆಸುತ್ತಿರುವ ಪ್ರಿನ್ಸಿಪಾಲರು ಮತ್ತು ಸಿಬ್ಬಂದಿಯನ್ನು ಪೋಷಕರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ನಡೆದಿದೆ.

    ತಳಕಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕರ ನಡುವೆ ಗುಂಪುಗಾರಿಕೆಗೆ ರೋಸಿ ಹೋದ ಪೋಷಕರು ಇಂದು ಶಾಲೆಗೆ ಮುತ್ತಿಗೆ ಹಾಕಿದ್ದಾರೆ.

    ಶಾಲೆಯ ಇಂಗ್ಲೀಷ್ ಶಿಕ್ಷಕ ಚಕ್ರಪಾಣಿಯವರಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಶಾಲೆಯ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾನಸಿಕವಾಗಿ ನೊಂದ ಶಿಕ್ಷಕ ಚಕ್ರಪಾಣಿ ನೆರವಿಗೆ ಪೋಷಕರು ನಿಂತಿದ್ದು, ಶಾಲೆಯಲ್ಲಿ ಗುಂಪುಗಾರಿಕೆಗೆ ಬೆಂಬಲಿಸುತ್ತಿರುವ ಶಾಲಾ ಪ್ರಿನ್ಸಿಪಾಲರನ್ನು ತೆಗೆದು ಹಾಕುವಂತೆ ಪೋಷಕರು ಆಗ್ರಹಿಸಿದರು. ಗುಂಪುಗಾರಿಕೆ ನಡೆಸುತ್ತಿದ್ದ ಶಾಲಾ ಸಿಬ್ಬಂದಿಗಳ ವಿರುದ್ಧವು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಸಿಬ್ಬಂದಿಗಳ ವರ್ತನೆಯಿಂದ ರೋಸಿಹೋದ ಶಿಕ್ಷಕ ಚಕ್ರಪಾಣಿ ಶಾಲೆಯಲ್ಲೇ ಕಣ್ಣೀರು ಹಾಕಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿಗಳು ಸಹ ಕಣ್ಣೀರು ಹಾಕಿದರು.

  • ಬ್ಲೇಡ್ ನಿಂದ ಕತ್ತು ಕೊಯ್ದು ಹಲ್ಲೆ: ಅಂಗನವಾಡಿ ಶಿಕ್ಷಕಿಯಿಂದ ಪೈಶಾಚಿಕ ಕೃತ್ಯ

    ಬ್ಲೇಡ್ ನಿಂದ ಕತ್ತು ಕೊಯ್ದು ಹಲ್ಲೆ: ಅಂಗನವಾಡಿ ಶಿಕ್ಷಕಿಯಿಂದ ಪೈಶಾಚಿಕ ಕೃತ್ಯ

    ಬೆಂಗಳೂರು: ತನ್ನ ಮೊಮ್ಮಗನೊಂದಿಗೆ ಜಗಳವಾಡಿ ಗಾಯಗೊಳಿಸಿದ್ದಾನೆ ಎನ್ನುವ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬರು 7 ವರ್ಷದ ಬಾಲಕನಿಗೆ ಬ್ಲೇಡ್ ನಿಂದ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಸಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಸಘಟ್ಟ ಗ್ರಾಮದ ನಿವಾಸಿಗಳಾದ ಮುನಿರತ್ನ ಮತ್ತು ಅಂಜನ್ ಕುಮಾರ್ ದಂಪತಿ ಮಗು ಪೃಥ್ವಿರಾಜ್(7) ಹಲ್ಲೆಗೊಳಗಾದ ಬಾಲಕ.

    ಈ ಮೊದಲು ಬಾಲಕ ಪೃಥ್ವಿರಾಜ್ ಮುನಿಯಮ್ಮಳ ಮೊಮ್ಮಗನ ಜೊತೆ ಆಟವಾಡುವಾಗ ಆಕಸ್ಮಿಕವಾಗಿ ಬ್ಲೇಡು ತಾಗಿಸಿ ಗಾಯಗೊಳಿಸಿದ್ದ. ಇದರಿಂದ ಸಿಟ್ಟಾದ ಮುನಿಯಮ್ಮ ನನ್ನ ಮೊಮ್ಮಗನಿಗಾದ ಗತಿ ನಿನಗೂ ಆಗಲಿ ಎಂದು ಈ ರೀತಿ ಪೃಥ್ವಿರಾಜ್ ಮೇಲೆ ಹಲ್ಲೆ ನಡೆಸಿದ್ದಾಳೆ.

    ಬ್ಲೇಡ್ ಹರಿತವಾದ್ದರಿಂದ ಬಾಲಕನ ಮೈ ಮೇಲೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ಬಾಲಕನನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪೃಥ್ವಿರಾಜ್ ಪಾಲಕರು ಮುನಿಯಮ್ಮ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಶಿಕ್ಷಕಿಯನ್ನ ಕೊಲೆ ಮಾಡಿ, ತಲೆಯನ್ನ ಹಿಡಿದುಕೊಂಡೇ 2ಗಂಟೆ, 5ಕಿ.ಮೀ ಓಡಿದ!

    ಶಿಕ್ಷಕಿಯನ್ನ ಕೊಲೆ ಮಾಡಿ, ತಲೆಯನ್ನ ಹಿಡಿದುಕೊಂಡೇ 2ಗಂಟೆ, 5ಕಿ.ಮೀ ಓಡಿದ!

    ರಾಂಚಿ: ಮಾನಸಿಕ ಅಸ್ವಸ್ಥನೊಬ್ಬ ಶಿಕ್ಷಕಿಯನ್ನು ಕೊಲೆ ಮಾಡಿ, ಪೊಲೀಸರು ಹಾಗೂ ಜನರಿಂದ ತಪ್ಪಿಸಿಕೊಳ್ಳಲು ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ಸುಮಾರು 5 ಕಿ.ಮೀ. ಓಡಿರುವ ಘಟನೆ ಜಾರ್ಖಂಡ್ ನ ಸೆರೈಕೆಲಾ- ಖಾರ್ಸ್ವಾನ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು 26 ವರ್ಷದ ಹರಿ ಹೆಂಬ್ರಾಮ್ ಎಂದು ಗುರುತಿಸಲಾಗಿದೆ. 30 ವರ್ಷದ ಸುಕ್ರ ಹೆಸಾ ಮೃತ ಶಿಕ್ಷಕಿ. ಸುಕ್ರ ಹೆಸಾ ಅವರು ಖಪ್ರಸಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ನಡೆದಿದ್ದೇನು?:
    ಆರೋಪಿ ಹರಿ ಶಾಲೆಯ ಹತ್ತಿರದಲ್ಲಿ ಒಬ್ಬನೇ ವಾಸವಾಗಿದ್ದನು. ಮಂಗಳವಾರ ಮಧ್ಯಾಹ್ನ ಊಟದ ಸಮಯದಲ್ಲಿ ಶಿಕ್ಷಕಿಯು ವಿದ್ಯಾರ್ಥಿಗಳಿಗೆ ಊಟ ಬಡಿಸುವ ವೇಳೆ ಹರಿ ಏಕಾಏಕಿ ದಾಳಿ ಮಾಡಿ ಕತ್ತಿಯಿಂದ ಅವರ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ. ನಂತರ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಶಿಕ್ಷಕಿಯ ತಲೆ ಹಿಡಿದುಕೊಂಡು ಕಾಡಿನೊಳಗೆ ಓಡಿಹೋಗಿದ್ದ ಎಂದು ಸೆರೈಕೆಲಾ ಉಪ-ವಿಭಾಗಿಯ ಪೊಲೀಸ್ ಅಧಿಕಾರಿ (ಎಸ್‍ಡಿಪಿಓ) ಅವಿನಾಶ್ ಕುಮಾರ್ ಹೇಳಿದ್ದಾರೆ.

    ಆರೋಪಿಯನ್ನು ಪೊಲೀಸರು ಬೆನ್ನೆಟ್ಟಿ ಹೋಗಿದ್ದು, ಸತತ ಎರಡು ಗಂಟೆಗಳ ಕಾಲ ಕಾಡಿನಲ್ಲಿ ಹುಡುಕಾಡಿದ ನಂತರ ಆರೋಪಿ ಹರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಸ್ಥಳೀಯರು ಹರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜನರಿಂದ ಆತನನ್ನು ಕಾಪಾಡಿ ಬಂಧಿಸುವ ಸಂದರ್ಭದಲ್ಲಿ ಸೆರೈಕೆಲಾ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ಸೇರಿ ನಾಲ್ಕು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ ಎಂದು ಎಸ್‍ಡಿಪಿಓ ಹೇಳಿದ್ದಾರೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸ್ಥಳದಲ್ಲಿ ಆರೋಪಿಯು ಶಿಕ್ಷಕಿಯನ್ನು ಕೊಲೆ ಮಾಡಿ, ಮೃತದೇಹದ ತಲೆಯನ್ನು ಕೈಯಲ್ಲಿ ಹಿಡಿದು ಕುಳಿತ್ತಿದ್ದನು. ಅವನ ಸುತ್ತ ಸ್ಥಳೀಯರು ನಿಂತಿದ್ದರು. ಆದರೆ ಆರೋಪಿ ಬಳಿ 2 ಕತ್ತಿ ಇದ್ದಿದ್ದರಿಂದ ಯಾರು ಕೂಡ ಆರೋಪಿಯ ಬಳಿ ಹೋಗಲು ಪ್ರಯತ್ನಿಸಲಿಲ್ಲ. ಪೊಲೀಸರು ಹರಿಯನ್ನು ಘಟನಾ ಸ್ಥಳದಲ್ಲೇ ಬಂಧಿಸಲು ಪ್ರಯತ್ನಿಸಿದರೂ ಸ್ಥಳದಲ್ಲಿ ಬಹಳ ಜನರು ನೆರೆದಿದ್ದ ಕಾರಣಕ್ಕೆ ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಆಧಿಕಾರಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.

    ಸ್ಥಳೀಯರು ಹರಿಯನ್ನು ಕಲ್ಲಿನಿಂದ ಹೊಡೆಯಲು ಆರಂಭಿಸಿದಾಗ ಆತ ಶಾಲೆಯಿಂದ ಸುಮಾರು 5 ಕಿ.ಮೀ ದೂರದ ಹೆಸೆಲ್ ಎಂಬ ಹಳ್ಳಿಯ ಕಾಡಿಗೆ ತಪ್ಪಿಸಿಕೊಂಡು ಓಡಿಹೋಗಿದ್ದ. ನಂತರ ಪೊಲೀಸರು ಕಷ್ಟಪಟ್ಟು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ಸಿಂಗ್ ಅವರು ತಿಳಿಸಿದರು.

    ಈ ಘಟನೆಯಿಂದ ಆರೋಪಿ ಹರಿ ಗಾಯಗೊಂಡಿದ್ದು, ಆತನನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಜೆಮೆಶೆಡ್‍ಪುರ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲೆಯ ಆಡಳಿತ ಸಿಬ್ಬಂದಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಭುವನೇಶ್ವರ್: ಖಾಸಗಿ ಕೋಚಿಂಗ್ ಕ್ಲಾಸಿನ ಇಂಗ್ಲಿಷ್ ಶಿಕ್ಷಕರೊಬ್ಬರು ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಅವರಿಗೆ ಬೂಟ್ ಹಾರ ಹಾಕಿ ಅವಮಾನ ಮಾಡಿದ ಘಟನೆ ಓಡಿಶಾದ ನಯಾಗರ್ ಜಿಲ್ಲೆಯಲ್ಲಿ ನಡೆದಿದೆ.

    ಮಾಯಾಧರ್ ಮೋಹಪಾತ್ರ ಎಂಬವರು ಖಾಸಗಿ ಕೋಚಿಂಗ್ ಸಂಸ್ಥೆ ಸತ್ಯಸಾಯಿ ಟ್ಯುಟೋರಿಯಲ್ ನಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ಕ್ಲಾಸಿನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ಹಾಗಾಗಿ ತಮ್ಮ ತಿಂಗಳ ಸಂಬಳ ಕೊಡಿ ಎಂದು ಕೇಳಿದ್ದಕ್ಕೆ ಸಿಟ್ಟಾದ ಮಾಲೀಕ ತಪನ್ ಪಾತ್ರ ಶಿಕ್ಷಕ ಮಾಯಾಧರ್ ರವರಿಗೆ ಬೂಟಿನ ಹಾರ ಹಾಕಿ ಅವಮಾನ ಮಾಡಿದ್ದಾರೆ.

    ಮಹಾಪಾತ್ರ ರವರು ಹೇಳುವಂತೆ ಕೋಚಿಂಗ್ ಕ್ಲಾಸ್ ನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ತಮ್ಮ ಸಂಬಳವನ್ನು ನೀಡುವಂತೆ ಪದೇ ಪದೇ ಮಾಲೀಕನಿಗೆ ಕೇಳಿಕೊಂಡಿದ್ದರೂ, ಇದಕ್ಕೆ ತಪನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮಾಲೀಕ ತಪನ್ ಶಿಕ್ಷಕ ಮಾಯಾಧರ್ ರವರಿಗೆ ನೌಕರಿಯನ್ನೇ ಬಿಟ್ಟು ಹೋಗುವಂತೆ ಕೇಳಿದ್ದಾರೆ. ಅಲ್ಲದೇ ಕೋಪಗೊಂಡ ತಪನ್ ತಮ್ಮ ಇಬ್ಬರು ಸಹಾಯಕರೊಂದಿಗೆ ಶಿಕ್ಷಕ ಮಾಯಾಧರ್ ರವರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿಹಾಕಿದ್ದಾರೆ. ನಿಷ್ಕಾರುಣವಾಗಿ ಶಿಕ್ಷಕ ಮಹಾಪಾತ್ರ ರನ್ನು ಥಳಿಸಿ, ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.

  • ಅಮ್ಮನ ಕಣ್ಣೀರೊರೆಸುವ ಸ್ಪೆಷಲ್ ಗಿಫ್ಟ್ ಕೊಟ್ಟ ಉಡುಪಿಯ ನಿಟ್ಟೂರು ಶಾಲೆ!

    ಅಮ್ಮನ ಕಣ್ಣೀರೊರೆಸುವ ಸ್ಪೆಷಲ್ ಗಿಫ್ಟ್ ಕೊಟ್ಟ ಉಡುಪಿಯ ನಿಟ್ಟೂರು ಶಾಲೆ!

    ಉಡುಪಿ: ಶಾಲೆಯಲ್ಲಿ ಪುಸ್ತಕ, ಯೂನಿಫಾರ್ಮ್, ಶೂ, ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಕೆಲ ಶಾಲೆಗಳಲ್ಲಿ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಆದರೆ ಉಡುಪಿಯ ನಿಟ್ಟೂರಲ್ಲೊಂದು ಶಾಲೆಯಿದೆ. ಶಾಲೆ ಆರಂಭವಾದ ಒಂದು ತಿಂಗಳ ಒಳಗೆ ಕಡು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪೆಷಲ್ ಗಿಫ್ಟೊಂದನ್ನು ಶಾಲೆ ಕೊಟ್ಟಿದೆ. ಇದರ ಹಿಂದೆ ನಮ್ಮ ಪಬ್ಲಿಕ್ ಹೀರೋ ಇದ್ದಾರೆ ಎಂಬುದು ಮತ್ತೊಂದು ವಿಶೇಷ.

    ಶಾಲೆಯಲ್ಲಿ ಮಕ್ಕಳು ಬ್ಯಾಗ್ ಹೊತ್ತು ಮನೆಗೆ ಹೋಗೋದನ್ನು ನೋಡಿರುತ್ತೇವೆ. ಬ್ಯಾಗ್ ಜೊತೆ ಬ್ಯಾಟು- ಬಾಲು ತೆಗೆದುಕೊಂಡು ಹೋಗೋದನ್ನು ನೋಡಿದ್ದೇವೆ. ಆದರೆ ಉಡುಪಿ ಜಿಲ್ಲೆಯ ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಮನೆಗೆ ಹೋಗುವಾಗ ಎಲ್ಪಿಜಿ ಸಿಲಿಂಡರ್, ಗ್ಯಾಸ್ ಸ್ಟವ್, ರೆಗ್ಯೂಲೇಟರ್ ಹಿಡಿದುಕೊಂಡು ಖುಷಿ ಖುಷಿಯಿಂದ ಹೊರಟಿದ್ದರು. ವಿಷಯ ಏನಪ್ಪಾ ಅಂದರೆ ನಿಟ್ಟೂರು ಪ್ರೌಢಶಾಲೆಯ ಕಡುಬಡವ ವಿದ್ಯಾರ್ಥಿಗಳಿಗೆ ಸ್ಪೆಷಲ್ ಗಿಫ್ಟನ್ನು ಈ ಶಾಲೆ ನೀಡಿದೆ. ನಾಲ್ಕಾರು ದಾನಿಗಳನ್ನು, ಹಳೇ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿ, ಧನ ಸಹಾಯ ಪಡೆದು 28 ವಿದ್ಯಾರ್ಥಿಗಳ ಮನೆಗೆ ಗ್ಯಾಸ್ ಸಿಲಿಂಡರ್- ರೆಗ್ಯೂಲೇಟರ್, ಸ್ಟವ್ ಅನ್ನು ಶಾಲೆಯ ಶಿಕ್ಷಕರು ಕೊಟ್ಟಿದ್ದಾರೆ. ಈ ಸ್ಪೆಷಲ್ ಗಿಫ್ಟಿನಿಂದ ಮಕ್ಕಳು ಖುಷಿಯಾಗಿದ್ದಾರೆ.

    ನಾವು ಗುಡಿಸಲಿನಲ್ಲಿ ಜೀವನ ಮಾಡುವುದು. ಒಂದೇ ಕೋಣೆಯೊಳಗೆ ಅಡುಗೆ, ಊಟ, ನಿದ್ದೆ ಮಾಡಬೇಕು. ಬೇಸಿಗೆಯಲ್ಲಿ ಹೊರಗಡೆ ಅಡುಗೆ ಮಾಡುತ್ತಿದ್ದೆವು. ಮಳೆಗಾಲದಲ್ಲಿ ಕಟ್ಟಿಗೆ ಹೊಂದಿಸುವುದು ಕಷ್ಟ. ಈಗ ಶಾಲೆಯಲ್ಲೇ ಗ್ಯಾಸ್ ಕೊಟ್ಟಿದ್ದಾರೆ. ಇದರಿಂದ ನಮ್ಮ ಅರ್ಧ ಕಷ್ಟ ಕಮ್ಮಿಯಾಗುತ್ತದೆ. ಮುರಳಿ ಸರ್ ಮತ್ತು ದಾನಿಗಳಿಗೆ ಥ್ಯಾಂಕ್ಸ್ ಅಂತ ವಿದ್ಯಾರ್ಥಿನಿ ರಶ್ಮೀ ಹೇಳಿದ್ದಾಳೆ.

    ಉಡುಪಿಯ ಪಬ್ಲಿಕ್ ಹೀರೋ ಮುರಲಿ ಕಡೆಕಾರು ಈ ಯೋಜನೆಯ ಹಿಂದಿರುವ ವ್ಯಕ್ತಿ. ಎಲ್ಲಾ ಮನೆಗಳನ್ನು ಸಂಪರ್ಕ ಮಾಡಿ, ವಿಚಾರಿಸಿ- ಗ್ಯಾಸ್ ಉಪಯೋಗಿಸುವುದನ್ನು ಕಲಿಸಿ ಇದೀಗ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ವನ್ನು ಕೊಟ್ಟಿದ್ದಾರೆ.

    ನಾಲ್ಕು ಗೋಡೆಯೊಳಗೆ ಮಕ್ಕಳಿಗೆ ಪಾಠ ಹೇಳುವುದು ಮಾತ್ರ ಶಿಕ್ಷಕನ ಕೆಲಸ ಅಲ್ಲ. ತಮ್ಮ ವಿದ್ಯಾರ್ಥಿಗಳ ಕುಟುಂಬದ ಕಷ್ಟಕ್ಕೆ ಸ್ಪಂದಿಸುವುದೂ ಶಿಕ್ಷಕರಾದ ನಮ್ಮ ಕರ್ತವ್ಯ. ಸಂಚಯಿಕ ಬ್ಯಾಂಕ್, ಬಿಸಿಯೂಟ, ವಾಹನ ವ್ಯವಸ್ಥೆ ಹೀಗೆ ಎಲ್ಲಾ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಿದ್ದೇವೆ. ಮಕ್ಕಳ ಕುಟುಂಬಸ್ಥರು ಅನಾರೋಗ್ಯ ಪೀಡಿತರಾದರೂ ಅವರಿಗೆ ಚಿಕಿತ್ಸೆಯ ವೆಚ್ಚ ಶಾಲೆ ಭರಿಸುತ್ತದೆ. ಒಂದು ರುಪಾಯಿಯನ್ನು ಪಡೆಯದೆ ಮಕ್ಕಳ ಶಿಕ್ಷಣ ಕೊಡುತ್ತಿದ್ದೇವೆ ಎಂದು ಮುರಳಿ ಕಡೆಕಾರು ಹೇಳಿದರು.

    ಶಾಲೆಯಲ್ಲಿರುವ 171 ವಿದ್ಯಾರ್ಥಿಗಳ ಮನೆಯಲ್ಲೂ ಅಡುಗೆ ಮಾಡುವಾಗ ಅಮ್ಮಂದಿರು ಕಣ್ಣೀರು ಇಡುವುದನ್ನು ನಿಟ್ಟೂರು ಶಾಲೆ ತಪ್ಪಿಸಿದೆ. ಎಲ್ಲಾ ಸರಕಾರಿ ಶಾಲೆಗಳಲ್ಲೂ ಇಂತಹ ಕೆಲಸ ಆದರತೆ ಬಡವರ ಕಷ್ಟ ದೂರವಾಗುತ್ತದೆ. ಶಿಕ್ಷಕರು ಇಂತಹ ಸಾರ್ಥಕ್ಯ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

  • ಸರ್, ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ- ಮಕ್ಕಳಿಂದ ಶಿಕ್ಷಕನಿಗೆ ಮುತ್ತಿಗೆ

    ಸರ್, ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ- ಮಕ್ಕಳಿಂದ ಶಿಕ್ಷಕನಿಗೆ ಮುತ್ತಿಗೆ

    ಚೆನ್ನೈ: ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ವರ್ಗಾವಣೆಗೊಂಡು ಬೇರೆ ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳು ಸರ್, ಪ್ಲೀಸ್ ನಮ್ಮನ್ನು ಬಿಟ್ಟು ಹೋಗ್ಬೇಡಿ ಅಂತಾ ಮುತ್ತಿಗೆ ಹಾಕಿದ್ದಾರೆ.

    ತಮಿಳುನಾಡು ರಾಜ್ಯದ ತಿರುವಳ್ಳರ್ ಇಲಾಖೆಯ ವೇಲಿಯಾ ಗ್ರಾಮದ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ.ಭಗವಾನ್ (28) ಅವರಿಗೆ ಬೇರೆ ಊರಿಗೆ ವರ್ಗಾವಣೆ ಆಗಿತ್ತು. ಬುಧವಾರ ವೇಲಿಯಾ ಗ್ರಾಮದ ಶಾಲೆಯಲ್ಲಿ ಕೊನೆಯ ದಿನದ ಡ್ಯುಟಿ ಮುಗಿಸಿ ವರ್ಗಾವಣೆ ಪತ್ರ ಪಡೆದು ಹೋಗುತ್ತಿದ್ದರು.

    ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯಾಗುತ್ತಿರುವ ಸುದ್ದಿ ಕೇಳಿದ ಮಕ್ಕಳು ನಮ್ಮನ್ನು ಬಿಟ್ಟು ಹೋಗಬೇಡಿ ಅಂತಾ ಭಗವಾನ್ ಅವರಿಗೆ ಮುತ್ತಿಗೆ ಹಾಕಿ ಕಣ್ಣೀರು ಹಾಕಿದ್ದಾರೆ. ಭಗವಾನ್ ಶಾಲೆಯಲ್ಲಿ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಮಕ್ಕಳ ವಿರೋಧದ ಕಾರಣ ಭಗವಾನ್ ಅವರ ವರ್ಗಾವಣೆಯ ಆದೇಶವನ್ನು 10 ದಿನಗಳವರೆಗೆ ಮುಖ್ಯಶಿಕ್ಷಕ ಅರವಿಂದನ್ ತಡೆಹಿಡಿದಿದ್ದಾರೆ.

    ಬುಧವಾರ ನಾನು 10 ಗಂಟೆಗೆ ಹೊಸ ಶಾಲೆಗೆ ಹಾಜರಾಗಬೇಕಿತ್ತು. ಹೋಗುವ ವೇಳೆ ಬಂದ ಮಕ್ಕಳು ನನಗೆ ಮುತ್ತಿಗೆ ಹಾಕಿ ತಡೆದಿದಲ್ಲದೇ, ನನ್ನ ಬೈಕ್ ಕೀ ಮತ್ತು ಬ್ಯಾಗ್ ಕಸಿದುಕೊಂಡರು. ಮಕ್ಕಳನ್ನು ನೋಡಿದಾಗ ನನ್ನ ಸೇವೆಗೆ ಹಣಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಪಡೆದಿದ್ದೇನೆ ಎಂಬುವುದು ಮನವರಿಕೆ ಆಯಿತು ಎಂದು ಶಿಕ್ಷಕ ಭಗವಾನ್ ಒಂದು ಕ್ಷಣ ಭಾವುಕರಾದ್ರು.

    ಭಗವಾನ್ ಶಿಕ್ಷಕರೇ ಶಾಲೆಯಲ್ಲಿ ಇಂಗ್ಲಿಷ್ ಬೋಧನೆ ಮಾಡಬೇಕೆಂದು ಮಕ್ಕಳು ಹಾಗು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಭಗವಾನ್ ತಮ್ಮ ಸರಳ ವ್ಯಕ್ತಿತ್ವದಿಂದ ಮಕ್ಕಳಿಗೆ ತುಂಬಾ ಹತ್ತಿರವಾಗಿದ್ದರು. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಕ್ಕಳಿಗೆ ಉತ್ಸಾಹದಿಂದ ಪಾಠ ಮಾಡುತ್ತಿದ್ದರು. ಮಕ್ಕಳ ಮನವಿಯ ಮೇರೆಗೆ 10 ದಿನಗಳವರೆಗೆ ಭಗವಾನ್ ಅವರ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ ಎಂದು ಮುಖ್ಯ ಶಿಕ್ಷಕ ಅರವಿಂದನ್ ಸ್ಪಷ್ಟಪಡಿಸಿದ್ದಾರೆ.