Tag: Taxi driver

  • ಯುವತಿಯ ಕತ್ತು ಹಿಸುಕಿ ಕೊಲೆ – ಕಲ್ಲು ಕಟ್ಟಿ ಕಾಲುವೆಗೆ ಶವ ಎಸೆದ ಸ್ನೇಹಿತ

    ಯುವತಿಯ ಕತ್ತು ಹಿಸುಕಿ ಕೊಲೆ – ಕಲ್ಲು ಕಟ್ಟಿ ಕಾಲುವೆಗೆ ಶವ ಎಸೆದ ಸ್ನೇಹಿತ

    – ಕೊಲೆಗೈದ ಕೋಮಲ್‌ಳನ್ನು ಕಾಲುವೆಗೆ ಎಸೆದ ಆಸಿಫ್

    ನವದೆಹಲಿ: ದೇಶದಲ್ಲಿ ಕೊಲೆಯಂತಹ ಘನಘೋರ ಘಟನೆಗಳು ದಿನೇದಿನೇ ಹೆಚ್ಚುತ್ತಲೇ ಇದೆ. ಈ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಯುವತಿಯ ಸ್ನೇಹಿತನೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.

    ಸೀಮಾಪುರಿ ಸುಂದರ್ ನಗರದ ನಿವಾಸಿ ಕೋಮಲ್ ಕೊಲೆಯಾದ ಯುವತಿ. ಆಕೆಯ ಆಪ್ತ ಸ್ನೇಹಿತ ಆಸಿಫ್ ಕೊಲೆ ಮಾಡಿರುವ ಆರೋಪಿ. ಇದನ್ನೂ ಓದಿ: ಶರಣ್ಯ ಶೆಟ್ಟಿ ಹೆಸರಿನಲ್ಲಿ ಹಣ ವಂಚನೆ- ಎಚ್ಚರಿಕೆ ನೀಡಿದ ನಟಿ

    ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ ಆಸಿಫ್ ಈ ಹಿಂದೆಯೇ ಯುವತಿಗೆ ಪರಿಚಯವಾಗಿದ್ದನು. ಮಾ. 12ರಂದು ಸೀಮಾಪುರಿಯಿಂದ ಆಸಿಫ್ ಆತನ ಕಾರಿನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಆಸಿಫ್, ಯುವತಿಯನ್ನು ಕತ್ತು ಹಿಸುಕಿ ಕೊಂದಿದ್ದ. ಬಳಿಕ ಶವ ಮೇಲೆ ತೇಲಬಾರದೆಂದು ಆಕೆಯ ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಟ್ಟಿಂಗ್‌ ಆಪ್‌ ಪ್ರಚಾರ – ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್‌

    ಯುವತಿಯ ಶವ ಕೊಳೆತಿದ್ದರಿಂದ ಮಾ. 17ರಂದು ಕಾಲುವೆಯಲ್ಲಿ ತೇಲುತ್ತಿತ್ತು. ಇದನ್ನೂ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಚಾವ್ಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಗೂಗಲ್ ಪೇ, ಫೋನ್‌ಪೇ & ಪೇಟಿಎಂ ಬಳಕೆದಾರರಿಗೆ ಸೂಚನೆ – ಏ.1ರಿಂದ ಕೆಲವು ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ ಪಾವತಿ ಸಮಸ್ಯೆ

    ಯುವತಿ ನಾಪತ್ತೆಯಾದ ದಿನದಂದು ಆಕೆಯ ಮನೆಯವರು ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಆರೋಪಿ ಆಸಿಫ್‌ನನ್ನು ಬಂಧಿಸಲಾಗಿದ್ದು, ಕಾರನ್ನು ವಶಕ್ಕೆ ಪಡಿಸಿಕೊಂಡಿದ್ದೇವೆ. ಕೊಲೆಯ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಕಾರಿನಲ್ಲಿ ಕುಳಿತಿದ್ದ ನಟಿಗೆ ಸನ್ನೆ ಮಾಡಿದ ಟ್ಯಾಕ್ಸಿ ಡ್ರೈವರ್ ಅರೆಸ್ಟ್

    ಕಾರಿನಲ್ಲಿ ಕುಳಿತಿದ್ದ ನಟಿಗೆ ಸನ್ನೆ ಮಾಡಿದ ಟ್ಯಾಕ್ಸಿ ಡ್ರೈವರ್ ಅರೆಸ್ಟ್

    – ನಟಿಯ ಕಾರನ್ನ ಹಿಂದಿಕ್ಕಿ ಮತ್ತೆ ಅಸಭ್ಯ ವರ್ತನೆ

    ಕೋಲ್ಕತ್ತಾ: ಬಂಗಾಲಿ ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಜೊತೆ ಅಸಭ್ಯವಾಗಿ ವರ್ತಿಸುವ ಮೂಲಕ ಕಿರುಕುಳ ನೀಡಿದ್ದ ಟ್ಯಾಕ್ಸಿ ಚಾಲಕನನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಲಕ್ಷ್ಮಣ್ ಯಾದವ್ (32) ಎಂದು ಗುರುತಿಸಲಾಗಿದೆ. ಸಂಸದೆ ಮಿಮಿ ಚಕ್ರವರ್ತಿ ಜಿಮ್‍ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಟ್ಯಾಕ್ಸಿ ಡ್ರೈವರ್ ನನ್ನ ವಾಹನವನ್ನು ಹಿಂದಿಕ್ಕಿಲು ಪ್ರಯತ್ನಿಸುತ್ತಿದ್ದನು. ಅಲ್ಲದೇ ನನ್ನ ಜೊತೆ ಅಸಭ್ಯವಾಗಿ ಮಾತನಾಡಿದ್ದ ಎಂದು ನಟಿ ಆರೋಪಿಸಿದ್ದಾರೆ.

    ಮೊದಲಿಗೆ ಮಿಮಿ ಚಕ್ರವರ್ತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಟ್ಯಾಕ್ಸಿ ಡ್ರೈವರ್ ಮತ್ತೆ ಮತ್ತೆ ನಟಿಯ ಕಾರನ್ನು ಹಿಂದಿಕ್ಕಿ ಅಶ್ಲೀಲವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ್ದನು. ಅಲ್ಲದೇ ನಟಿಯ ವಾಹನವನ್ನೇ ಹಿಂಬಾಲಿಸಿದ್ದನು. ಹೀಗಾಗಿ ನಟಿ ಆತನ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    “ಸಿಗ್ನಲ್ ಬಳಿ ನನ್ನ ಕಾರಿನ ಪಕ್ಕದಲ್ಲಿ ಒಂದು ಟ್ಯಾಕ್ಸಿ ನಿಂತಿತ್ತು. ನಾನು ನನ್ನ ಕಾರಿನಲ್ಲಿ ಕುಳಿತಿದ್ದೆ. ಆದರೆ ಟ್ಯಾಕ್ಸಿ ಚಾಲಕ ನನ್ನ ಕಡೆಗೆ ಅಶ್ಲೀಲವಾಗಿ ಸನ್ನೆ ಮಾಡುತ್ತಿದ್ದನು. ಮೊದಲಿಗೆ ನಾನು ಅದನ್ನು ನಿರ್ಲಕ್ಷಿಸಿದೆ. ಆದರೆ ಚಾಲಕ ನನ್ನ ಕಾರನ್ನು ಹಿಂದಿಕ್ಕಿ ಮತ್ತೆ ಅದೇ ರೀತಿ ಸನ್ನೆ ಮಾಡಿದನು. ಒಂದು ವೇಳೆ ನಾನು ಈಗ ಇದನ್ನು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ಮಹಿಳೆ ಆತನ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದರೆ ಕಿರುಕುಳ ಎದುರಿಸಬೇಕಾಗುತ್ತದೆ ಎಂದು ನಾನು ಭಾವಿಸಿದೆ. ಅಲ್ಲದೇ ರಾತ್ರಿ ವೇಳೆ ಪ್ರಯಾಣಿಕರು ಆತನ ಟ್ಯಾಕ್ಸಿಯಲ್ಲಿ ಸುರಕ್ಷಿತವಾಗಿರುವುದಿಲ್ಲ” ಎಂದು ನಟಿ ಆಡಿಯೋ ಹೇಳಿಕೆ ಮೂಲಕ ಪೊಲೀಸರಿಗೆ ತಿಳಿಸಿದ್ದಾರೆ.

    ಮಿಮಿ ಚಕ್ರವರ್ತಿ ಗರಿಯಾಹತ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದನು. ಪೊಲೀಸರು ಕೂಡಲೇ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಲಕ್ಷ್ಮಣ್ ಯಾದವ್ ಎಂದು ಗುರುತಿಸಲಾಗಿದ್ದು, ಪೂರ್ವ ಮೆಟ್ರೋಪಾಲಿಟನ್ ಬೈಪಾಸ್ ಬಳಿಯ ಆನಂದಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

    ಬಂಧಿತ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಇತರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಾಲಿ ಚಿತ್ರರಂಗದಲ್ಲಿ ಪ್ರಸಿದ್ಧರಾಗಿರುವ ಮಿಮಿ ಚಕ್ರವರ್ತಿ 2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ವಿಜಯಿಯಾಗಿದ್ದಾರೆ.

  • ಮನೆಬಿಟ್ಟು ಬೆಂಗ್ಳೂರಿನಿಂದ ಮುಂಬೈಗೆ ಹೋದ ಅಪ್ರಾಪ್ತೆ – ಟ್ಯಾಕ್ಸಿಯಲ್ಲಿ ಲೈಂಗಿಕ ಕಿರುಕುಳ

    ಮನೆಬಿಟ್ಟು ಬೆಂಗ್ಳೂರಿನಿಂದ ಮುಂಬೈಗೆ ಹೋದ ಅಪ್ರಾಪ್ತೆ – ಟ್ಯಾಕ್ಸಿಯಲ್ಲಿ ಲೈಂಗಿಕ ಕಿರುಕುಳ

    – ಆಸ್ಪತ್ರೆಯಿಂದ ತಪ್ಪಿಸಿಕೊಂಡು ಕಾಮುಕರ ಕೈಗೆ ಸಿಕ್ಕ ಬಾಲಕಿ

    ಮುಂಬೈ: ಕಳೆದ ವರ್ಷ ಮನೆಯಿಂದ ಪರಾರಿಯಾಗಿದ್ದ 17 ವರ್ಷದ ಬಾಲಕಿಗೆ ಮುಂಬೈನಲ್ಲಿ ಚಲಿಸುವ ಕ್ಯಾಬ್ ಒಳಗೆ ಲೈಂಗಿಕ ಕಿರುಕುಳ ನೀಡಿದ್ದು, ಪ್ರಕರಣ ದಾಖಲಾಗಿದೆ.

    2019ರ ನವೆಂಬರ್ ನಲ್ಲಿ ಬಾಲಕಿ ಬೆಂಗಳೂರಿನಲ್ಲಿರುವ ತನ್ನ ಮನೆಯಿಂದ ಓಡಿ ಮುಂಬೈಗೆ ಬಂದಿದ್ದಳು. ಮುಂಬೈಗೆ ಬಂದ ಬಾಲಕಿ ಅಲ್ಲಿನ ಕುರ್ಲಾದ ಹೋಟೆಲ್‍ನಲ್ಲಿ ಕೆಲಸ ಸೇರಿಕೊಂಡಿದ್ದಳು. ಅಲ್ಲಿ ಅವಳಿಗೆ 18 ವರ್ಷದ ಹುಡುಗನೊಂದಿಗೆ ಸ್ನೇಹ ಬೆಳೆದಿದೆ. ಸ್ವಲ್ಪ ಸಮಯದ ನಂತರ ಇಬ್ಬರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ. ಆದರೆ ಕಳೆದ ಜೂನ್ 26ರಂದು ಆತ ಧಾರಾವಿಯ ಸೇತುವೆಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಬಾಲಕಿಯೇ ಕಾರಣ ಎಂದು ಹುಡುಗನ ಮನೆಯವರು ದೂರು ನೀಡಿದ್ದರು.

    ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು, ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮುಂದೆ ಹಾಜರುಪಡಿಸಿದ್ದಾರೆ. ಆಕೆ ಇನ್ನೂ ಅಪ್ರಾಪ್ರೆಯಾಗಿರುವ ಕಾರಣ ಮನೆಗೆ ಕಳುಹಿಸಿ ಎಂದು ಪೊಲೀಸರಿಗೆ ಸಿಡಬ್ಲ್ಯೂಸಿ ನಿರ್ದೇಶನ ನೀಡಿತ್ತು. ಸದ್ಯ ದೇಶದಲ್ಲಿ ಲಾಕ್‍ಡೌನ್ ಇದ್ದ ಕಾರಣ ಆಕೆಯನ್ನು ಪೊಲೀಸರಿಗೆ ಮನೆಗೆ ವಾಪಸ್ ಕಳುಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಆಕೆಯನ್ನು ಅಲ್ಲೇ ಮಕ್ಕಳ ಕಲ್ಯಾಣ ಸಮಿತಿ ಕಟ್ಟದಲ್ಲಿ ಇರಿಸಿದ್ದರು. ಆದರೆ ಅಲ್ಲಿ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಳು.

    ಅನಾರೋಗ್ಯಕ್ಕೆ ತುತ್ತಾದ ಬಾಲಕಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಕೆ ಜುಲೈ 11ರಂದು ಆಸ್ಪತ್ರೆಯಿಂದ ಪರಾರಿಯಾಗಿದ್ದಾಳೆ. ಈ ವೇಳೆ ಅವಳು ಟ್ಯಾಕ್ಸಿ ಬಳಸಿ ಪುಣೆಗೆ ಎಸ್ಕೇಪ್ ಆಗಲು ನೋಡಿದ್ದಾಳೆ. ಇದನ್ನೇ ಬಳಸಿಕೊಂಡ ಟ್ಯಾಕ್ಸಿ ಚಾಲಕ ಮತ್ತು ಆತನ ಸ್ನೇಹಿತರು ಆಕೆಯನ್ನು ಟ್ಯಾಕ್ಸಿಯಲ್ಲಿ ಕೂರಿಸಿಕೊಂಡು, ಚಲಿಸುತ್ತಿದ್ದ ಟ್ಯಾಕ್ಸಿಯಲ್ಲೇ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆಕೆ ಕಿರುಚಿಕೊಂಡಾಗ ಆರೋಪಿಗಳು ಅವಳನ್ನು ಮುಂಬ್ರಾಕ್ಕೆ ಕರೆದೊಕೊಂಡು ಹೋಗಿದ್ದಾರೆ.

    ಇತ್ತ ಕಾಣೆಯಾದ ಬಾಲಕಿಯನ್ನು ಹುಡುಕಲು ಮುಂದಾದ ಪೊಲೀಸರು, ಆಸ್ಪತ್ರೆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆಗ ಬಾಲಕಿ ಟ್ಯಾಕ್ಸಿ ಡ್ರೈವರ್ ಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಆಗ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಆರೋಪಿಗಳ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

  • ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದ ಪ್ರಯಾಣಿಕನ ಜೀವ ಉಳಿಸಿದ ಟ್ಯಾಕ್ಸಿ ಡ್ರೈವರ್

    ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದ ಪ್ರಯಾಣಿಕನ ಜೀವ ಉಳಿಸಿದ ಟ್ಯಾಕ್ಸಿ ಡ್ರೈವರ್

    ಆಗ್ರಾ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಕಾಲುಜಾರಿ ಚಕ್ರಕ್ಕೆ ಸಿಲುಕುತ್ತಿದ್ದ ಪ್ರಯಾಣಿಕನನ್ನು ಟ್ಯಾಕ್ಸಿ ಚಾಲಕರೊಬ್ಬರು ಕಾಪಾಡಿ ಜೀವ ಉಳಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಸುರೇಶ್(34) ಎಂಬ ಪ್ರಯಾಣಿಕರನ್ನು ರಾಜೇಶ್ ಶರ್ಮಾ ಎಂಬ ಟ್ಯಾಕ್ಸಿ ಚಾಲಕ ಬಚಾವ್ ಮಾಡಿದ್ದಾರೆ.

    ಮಂಗಳ ಲಕ್ಷದ್ವೀಪ ಎಕ್ಸ್ ಪ್ರೆಸ್ ರೈಲು ಆಗ್ರಾ ನಿಲ್ದಾಣದಿಂದ ಹೊರಟ ಸಮಯಕ್ಕೆ ಸುರೇಶ್ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿದ್ದಾರೆ. ಈ ವೇಳೆ ಹತ್ತುವ ಗಡಿಬಿಡಿಯಲ್ಲಿ ಅವರ ಕಾಲು ಜಾರಿ ಇನ್ನೇನು ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದರು. ಆದ್ರೆ ಸರಿಯಾದ ಸಮಯಕ್ಕೆ ರೈಲಿನೊಳಗಿದ್ದ ಟ್ಯಾಕ್ಸಿ ಚಾಲಕ ಸುರೇಶ್ ಅವರ ಕೈ ಹಿಡಿದು ಪ್ರಾಣ ಕಾಪಾಡಿದ್ದಾರೆ.

    ಬಳಿಕ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಸಹಾಯ ಮಾಡಿ ತಕ್ಷಣ ಸುರೇಶ್ ಅವರನ್ನು ಎಳೆದುಕೊಂಡಿದ್ದಾರೆ. ಈ ದೃಶ್ಯವನ್ನು ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟ್ಯಾಕ್ಸಿ ಚಾಲಕನ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=qloTC2fA-bw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv