Tag: taluk

  • ಹೆಸರಿಗೆ ಮಾತ್ರ ನೂತನ ತಾಲೂಕು- ಕಚೇರಿಗಳಿಗೆ ಮುರುಕಲು ಕಟ್ಟಡಗಳೇ ಗತಿ

    ಹೆಸರಿಗೆ ಮಾತ್ರ ನೂತನ ತಾಲೂಕು- ಕಚೇರಿಗಳಿಗೆ ಮುರುಕಲು ಕಟ್ಟಡಗಳೇ ಗತಿ

    – ತಾಲೂಕಾಗಿ ನಾಲ್ಕು ವರ್ಷವಾದ್ರೂ ಸೌಲಭ್ಯ ವಂಚಿತ ಸಿರವಾರ
    – ಕಟ್ಟಡವೂ ಇಲ್ಲಾ, ಅಧಿಕಾರಿಗಳು ಇಲ್ಲಾ

    ರಾಯಚೂರು: ಜಿಲ್ಲೆಯ ಸಿರವಾರ ತಾಲೂಕು ಘೋಷಣೆಯಾಗಿ ನಾಲ್ಕು ವರ್ಷವಾದರೂ ಇನ್ನೂ ಕೇವಲ ನೂತನ ತಾಲೂಕು ನಾಮಕಾವಸ್ಥೆಗೆ ಮಾತ್ರ ಸಿಮೀತವಾಗಿದೆ. ತಾಲೂಕಿಗೆ ಬೇಕಾಗಿರುವ ಸೌಲಭ್ಯಗಳು ಮಾತ್ರ ಇನ್ನೂ ಸರ್ಕಾರ ಸಮರ್ಪವಾಗಿ ಒದಗಿಸಿಲ್ಲ. ಕನಿಷ್ಠ ತಹಶೀಲ್ದಾರ್ ಕೂರಲು ಸಹ ಒಂದು ಸುಸಜ್ಜಿತ ಸ್ಥಳವಿಲ್ಲ. ಉಳಿದ ಸೌಲಭ್ಯಗಳ ಮಾತಂತೂ ಕೇಳಲೇಬಾರದ ಪರಸ್ಥಿತಿಯಿದ್ದು ಸರ್ಕಾರದಿಂದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಅಂತ ನೂತನ ತಾಲೂಕಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜನರ ಹೋರಾಟದಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿದ್ದ ಸಿರವಾರ ನಾಲ್ಕು ವರ್ಷದ ಹಿಂದೆ ಪ್ರತ್ಯೇಕ ತಾಲೂಕಾಗಿ ಘೋಷಣೆಯಾಯಿತು. ಆದರೆ ಇಂದಿಗೂ ಪ್ರತಿಯೊಂದು ಕೆಲಸ ಕಾರ್ಯಕ್ಕೂ ಮಾನ್ವಿ ತಾಲೂಕು ಕೇಂದ್ರವನ್ನೇ ಸಿರವಾರದ ಜನ ಅವಲಂಬಿಸಬೇಕಾಗಿದೆ. ತಾಲೂಕು ಕೇಂದ್ರದಲ್ಲಿ ಉತ್ತಮ ಬಸ್ ನಿಲ್ದಾಣವಿಲ್ಲ, ಆಸ್ಪತ್ರೆಯಿಲ್ಲ. ವಿವಿಧ ಇಲಾಖೆಗಳು ಹೆಸರಿಗೆ ಮಾತ್ರ ಇದ್ದು ಅಧಿಕಾರಿಗಳಿಲ್ಲ, ಅಧಿಕಾರಿಗಳು ಇದ್ದರೆ ಕಚೇರಿಯ ಕಟ್ಟಡವೇ ಇಲ್ಲದಂತಹ ಪರಿಸ್ಥಿತಿ ಇದೆ.

    ತಾಲೂಕಿಗೆ ಮುಖ್ಯವಾಗಿ ಬೇಕಾದ ತಹಶೀಲ್ದಾರ್ ಕಚೇರಿಯನ್ನು ನೋಡಿದರೆ ಎಂತಹವರು ಹೆದರಿಕೊಳ್ಳುವ ರೀತಿಯಲ್ಲಿದೆ. ಈಗಲೋ ಆಗಲೋ ಬಿಲುವ ಹಂತದಲ್ಲಿರುವ ಕಟ್ಟಡದಲ್ಲಿ ಐದಾರು ಸಿಬ್ಬಂದಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಅದೂ ಸಹ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಹಳೆಯ ವಸತಿಗೃಹವನ್ನೇ ಬಳಸಿಕೊಳ್ಳಲಾಗಿದೆ. ಹೀಗಾಗಿ ಇಇ ಗೆ ಈಗ ವಸತಿಗೃಹ ಇಲ್ಲದಂತಾಗಿದೆ. ಇನ್ನೂ ತಾಲೂಕಿಗೆ ಖಾಯಂ ಆದ ತಹಶೀಲ್ದಾರ್ ಸಹ ಇಲ್ಲಾ. ಒಬ್ಬರೇ ಅಧಿಕಾರಿ ದೇವದುರ್ಗ ಹಾಗೂ ಸಿರವಾರ ಎರಡನ್ನೂ ನಿಭಾಯಿಸುತ್ತಿದ್ದಾರೆ. ಭೂಮಿ ಕೇಂದ್ರ ಇನ್ನೂ ಮಾನ್ವಿಯಲ್ಲಿ ಉಳಿದಿರುವುದರಿಂದ ಕಂದಾಯ ದಾಖಲಾತಿಗಳಿಗೆ ಅಧಿಕಾರಿಗಳು ಸೇರಿ ಪ್ರತಿಯೊಬ್ಬರು ಮಾನ್ವಿ ಪಟ್ಟಣಕ್ಕೆ ನಿತ್ಯ ಹೋಗಿಬರಬೇಕಿದೆ. ಇದರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಹೆಸರಿಗಷ್ಟೇ ನೂತನ ತಾಲೂಕಾಗಿ ಘೋಷಣೆ ಮಾಡಲಾಗಿದೆ. ಸೌಲಭ್ಯಗಳನ್ನು ನೀಡಬೇಕು ಅಂತ ಜನ ಒತ್ತಾಯಿಸುತ್ತಿದ್ದಾರೆ.

    ಜಗದೀಶ್ ಶಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಮೊದಲ ಬಾರಿಗೆ ಸಿರವಾರನ್ನು ತಾಲೂಕಾಗಿ ಘೋಷಣೆ ಮಾಡಲಾಯಿತಾದರೂ ಅದು ಜಾರಿಗೆ ಬರಲಿಲ್ಲ. 2017 ರಲ್ಲಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಸಿರವಾರ ನೂತನ ತಾಲೂಕಾಗಿ ರೂಪಗೊಂಡಿತು. ಆದರೆ ಇದುವರೆಗೂ ಯಾವುದೇ ಸೌಲಭ್ಯಗಳು ತಾಲೂಕಿಗೆ ದೊರೆತಿಲ್ಲ. ಕಚೇರಿಗಳು, ಅಧಿಕಾರಿಗಳು ಇಲ್ಲದಿರುವುದರಿಂದ ಸಣ್ಣಪುಟ್ಟ ಕೆಲಸಗಳು ಸಹ ಆಗದೆ ಜನ ಒದ್ದಾಡುವಂತಾಗಿದೆ.

    ಮಾನ್ವಿ ತಾಲೂಕು ಇದ್ದಾಗಲೇ ಚೆನ್ನಾಗಿತ್ತು ಈಗ ನೂತನ ತಾಲೂಕಾಗಿ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಪರದಾಡಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ತಾಲೂಕಿಗಿರಬೇಕಾದ ಕನಿಷ್ಠ ಸೌಲಭ್ಯಗಳನ್ನು ಸಿರವಾರ ತಾಲೂಕಿಗೂ ಒದಗಿಸಬೇಕು ಅನ್ನೊದು ಇಲ್ಲಿನ ಜನರ ಬೇಡಿಕೆಯಾಗಿದೆ.

  • ಕೊರೊನಾ ಸೋಂಕಿತೆಯ ಸಂಪರ್ಕ, ಜನ ಕ್ವಾರಂಟೈನ್- ಜಾನುವಾರುಗಳ ಮೂಕ ರೋಧನೆ

    ಕೊರೊನಾ ಸೋಂಕಿತೆಯ ಸಂಪರ್ಕ, ಜನ ಕ್ವಾರಂಟೈನ್- ಜಾನುವಾರುಗಳ ಮೂಕ ರೋಧನೆ

    ನೆಲಮಂಗಲ: ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಕೆಲ ಗ್ರಾಮಸ್ಥರು ಮತ್ತು ಸಂಬಂಧಿಕರನ್ನು ಸೇರಿ 12 ಜನರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಅಲ್ಲಿನ ಗ್ರಾಮದ ಜಾನುವಾರುಗಳು ಆಹಾರವಿಲ್ಲದೇ ಮೂಕ ರೋಧನೆ ಅನುಭವಿಸುತ್ತಿವೆ.

    ಕ್ವಾರಂಟೈನ್ ಆದ ಮನೆಯ ಜಾನುವಾರುಗಳನ್ನು ನೋಡುವವರಿಲ್ಲದೆ ಕಂಗೆಟ್ಟ ಮೂಕಪ್ರಾಣಿಗಳ ರೋಧನೆ ಮುಗಿಲುಮುಟ್ಟಿದೆ. ಪ್ರತಿದಿನ ಸುಮಾರು 60 ಲೀಟರ್ ಹಾಲು ನೀಡುತ್ತಿದ್ದ ಗೋವುಗಳ ಹಾಲು ವ್ಯರ್ಥವಾಗುತ್ತಿದೆ. ಕೊರೊನಾ ಬರುತ್ತೆ ಎಂದು ಗ್ರಾಮಸ್ಥರು ಅವರ ಮನೆಯ ಕಡೆ ಹೋಗುತ್ತಿಲ್ಲ. ಸ್ಥಳೀಯ ಹಾಲಿನ ಡೈರಿಯಲ್ಲಿ ಹಾಲನ್ನು ಖರೀದಿಸುತ್ತಿಲ್ಲ. ಜೊತೆಗೆ ಹಾಲನ್ನು ಪಡೆಯಲು ಸಹ ಹಾಲಿನ ಡೈರಿಯವರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

    ಹೀಗಾಗಿ ಕೂಡಲೇ ತಾಲೂಕು ಆಡಳಿತ ಮೂಕ ಪ್ರಾಣಿಗಳ ನೆರವಿಗೆ ಬರುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಈ ಗ್ರಾಮದ ಸಮಸ್ಯೆ ಬಗ್ಗೆ ವಿಡಿಯೋ ಮಾಡಿದ ಅದೇ ಗ್ರಾಮದ ಭಾನುಪ್ರಕಾಶ್ ನೆಲಮಂಗಲ ತಾಲೂಕು ಆಡಳಿತಕ್ಕೆ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

  • ರೆಡ್‍ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರ: ಲಕ್ಷ್ಮಣ ಸವದಿ

    ರೆಡ್‍ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರ: ಲಕ್ಷ್ಮಣ ಸವದಿ

    ಬೆಳಗಾವಿ: ರೆಡ್ ಝೋನ್ ಅಲ್ಲದ ತಾಲೂಕುಗಳಲ್ಲಿ ಮೇ 4ರಿಂದ ಬಸ್ ಸಂಚಾರಕ್ಕೆ ಅನುಮತಿ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ತಾಲೂಕುವಾರು ಕೊರೊನಾ ಹಾಟ್‍ಸ್ಟಾಟ್‍ಗಳನ್ನು ಗುರುತಿಸಲಾಗಿದೆ. ಕೊರೊನಾ ಸೋಂಕು ಇರುವ ತಾಲೂಕುಗಳಲ್ಲಿ ಸಾರಿಗೆ ಸಂಚಾರ ಇರುವುದಿಲ್ಲ. ಅವುಗಳನ್ನು ಬಿಟ್ಟು ಉಳಿದ ತಾಲೂಕುಗಳಲ್ಲಿ ಗ್ರಾಮೀಣ ಭಾಗಕ್ಕೂ ಸೇರಿ ಸಾರಿಗೆ ವ್ಯವಸ್ಥೆಯನ್ನು ಮೇ 4ರಿಂದ ಮಾಡುತ್ತೇವೆ ಎಂದು ಹೇಳಿದರು.

    ಇದೇ ವೇಳೆ ವಲಸೆ ಕಾರ್ಮಿಕರಿಂದ ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ದುಪ್ಪಟ್ಟು ದರ ವಸೂಲಿ ವಿಚಾರವಾಗಿ ಮಾತನಾಡಿದ ಅವರು, ಇದು ತಪ್ಪು ಕಲ್ಪನೆಯಿಂದ ಆಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಸಿಂಗಲ್ ಫೇರ್ ತಗೆದುಕೊಂಡು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಸ್‍ನಲ್ಲಿ ಕಡಿಮೆ ಜನರನ್ನು ಕಳಿಸಬೇಕಾಗುತ್ತೆ. ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ವಾಪಸ್ ಬರುವಾಗ ಖಾಲಿ ಬರಬೇಕಾಗುತ್ತೆ. ಆದರೂ ಈ ಹೊರೆ ಸಹಿಸಿಕೊಂಡು ನಿಗದಿತ ದರವನ್ನು ಪಡೆಯಲಾಗುತ್ತೆ ಎಂದರು.

    ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ವಿಚಾರವಾಗಿ ಮಾತನಾಡಿದ ಸವದಿ, ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಕೊರೊನಾದಿಂದ ಇಡೀ ವಿಶ್ವಕ್ಕೆ ಕಂಟಕವಾಗಿದೆ. ಇದು ಎಲ್ಲರೂ ಕೂಡ ಹೊರಬೇಕಾಗಿರುವ ಭಾರ, ಸ್ವಲ್ಪ ಸಹಿಸಿಕೊಳ್ಳಬೇಕಾಗುತ್ತೆ ಎಂದು ಹೇಳುವ ಮೂಲಕ ಕಾರ್ಮಿಕರಿಗೆ ಉಚಿತ ಪ್ರಯಾಣ ಅಸಾಧ್ಯ ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿ ತಿಳಿಸಿದರು.

  • ತಾಲೂಕಾಗಿ ಘೋಷಣೆ ಆಯ್ತು ಮಂಚೇನಹಳ್ಳಿ – ಬಿಎಸ್‍ವೈಗೆ ಅಭಿನಂದನೆ ತಿಳಿಸಿದ ಸುಧಾಕರ್

    ತಾಲೂಕಾಗಿ ಘೋಷಣೆ ಆಯ್ತು ಮಂಚೇನಹಳ್ಳಿ – ಬಿಎಸ್‍ವೈಗೆ ಅಭಿನಂದನೆ ತಿಳಿಸಿದ ಸುಧಾಕರ್

    ಬೆಂಗಳೂರು: ಹಲವು ವರ್ಷಗಳಿಂದ ಮಂಚೇನಹಳ್ಳಿ ಗ್ರಾಮವನ್ನು ತಾಲೂಕಾಗಿ ಘೋಷಣೆ ಮಾಡಿ ಎಂದು ಹೋರಾಡುತ್ತಿದ್ದ ಗೌರಿಬಿದನೂರು ತಾಲೂಕಿನ ಜನತೆ ಇಂದು ಜಯ ಸಿಕ್ಕಿದ್ದು, ಮಂಚೇನಹಳ್ಳಿನ್ನು ಹೊಸ ತಾಲೂಕಾಗಿ ಸರ್ಕಾರ ಘೋಷಣೆ ಮಾಡಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅತೀ ದೊಡ್ಡ ಹೋಬಳಿಯಾದ ಮಂಚೇನಹಳ್ಳಿಯನ್ನು ಪ್ರತ್ಯೇಕ ಒಂದು ತಾಲೂಕಾಗಿ ಘೋಷಣೆ ಮಾಡಬೇಕು ಎಂದು ಅಲ್ಲಿನ ಜನ ಹೋರಾಟ ಮಾಡುತ್ತಲೇ ಬಂದಿದ್ದರು. ಹಲವಾರು ಬಾರಿ ಸರ್ಕಾರಕ್ಕೆ ಬಿಸಿಮುಟ್ಟಿಸಲು ಬಂದ್‍ಗಳನ್ನು ಕೂಡ ಮಾಡಿದ್ದರು. ಈಗ ಆ ಜನರ ಹೋರಾಟಕ್ಕೆ ಜಯ ಸಿಕ್ಕಿದ್ದು, ಮಂಚೇನಹಳ್ಳಿಯನ್ನು ಬಿಎಸ್‍ವೈ ಸರ್ಕಾರ ಹೊಸ ತಾಲೂಕಾಗಿ ಘೋಷಣೆ ಮಾಡಿದೆ.

    ಈಗ ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅನರ್ಹ ಶಾಸಕ ಸುಧಾಕರ್ ಅವರು, ಮಂಚೇನಹಳ್ಳಿ ಜನರ ವನವಾಸ ಇಂದಿಗೆ ಕೊನೆಯಾಗಿದೆ. ಹಲವು ವರ್ಷಗಳ ಹೋರಾಟದ ಬೆನ್ನಲ್ಲೇ ಇಂದು ಮಂಚೇನಹಳ್ಳಿ ತಾಲೂಕು ಆಗಿ ಘೋಷಣೆಯಾಗಿದೆ. ನನ್ನ ಜನರಿಗೆ ನಾನು ನೀಡಿದ ಭರವಸೆ ಈಡೇರಿಸಿರುವ ನೆಮ್ಮದಿ ಇಂದು ನನಗಿದೆ ಎಂದು ಬರೆದುಕೊಂಡಿದ್ದಾರೆ.

    ಇಂದು ನನಗೆ ದೀಪಾವಳಿ ಹಬ್ಬ, ವರ್ಷಗಳ ನಮ್ಮ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ನಮ್ಮ ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು ಹಾಗೂ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿರುವ ಯಡಿಯೂರಪ್ಪ ಹಾಗೂ ರಾಜ್ಯ ಸಚಿವ ಸಂಪುಟಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹಾಗೂ ಹೊಸ ತಾಲೂಕಿಗಾಗಿ ಸುದೀರ್ಘಾವಧಿಯ ಹೋರಾಟ ನಡೆಸಿದ ನನ್ನ ಮಂಚೇನಹಳ್ಳಿಯ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಯಾಕೆ ಪ್ರತ್ಯೇಕ ತಾಲೂಕು?
    ಮಂಚೇನಹಳ್ಳಿ ಗ್ರಾಮ ಗೌರಿಬಿದನೂರು ತಾಲೂಕಿನಲ್ಲೇ ಅತ್ಯಂತ ದೊಡ್ಡ ಹೋಬಳಿಯಾಗಿದ್ದು, 64 ಗ್ರಾಮಗಳನ್ನು ಒಳಗೊಂಡಿದೆ. ಸುಮಾರು 60 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಅಭಿವೃದ್ಧಿ ಈ ಹೋಬಳಿಯಲ್ಲಿ ಮರೀಚಿಕೆಯಾಗಿದೆ. ಹದಗೆಟ್ಟ ರಸ್ತೆಗಳು, ಒಳಚರಂಡಿ ಅವ್ಯವಸ್ಥೆ, ಶುಚಿತ್ವದ ಸಮಸ್ಯೆ, ಅವ್ಯವಸ್ಥೆ ತಾಣವಾಗಿರುವ ಬಸ್ ತಂಗುದಾಣ, ಆಸ್ಪತ್ರೆಯಲ್ಲಿ ಕನಿಷ್ಠ ಪ್ರಥಮ ಚಿಕಿತ್ಸೆಗೂ ಇಲ್ಲದ ಸೌಲಭ್ಯ. ಅತ್ತ ಗೌರಿಬಿದನೂರು ಇದ್ದರೂ ಚಿಕ್ಕಬಳ್ಳಾಪುರಕ್ಕೆ ಬರಲೇಬೇಕಾದ ಅನಿವಾರ್ಯತೆ. ಹೀಗೆ ಮಂಚೇನಹಳ್ಳಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಸದಾ ಕಾಡುವುದರಿಂದ ಇಲ್ಲಿನ ಜನ ಪ್ರತ್ಯೇಕ ತಾಲೂಕಿಗೆ ಆಗ್ರಹಿಸಿ ಸಮಿತಿ ರಚಿಸಿಕೊಂಡು ಹೋರಾಟ ಮಾಡುತ್ತಿದ್ದರು.

  • ತಾಲೂಕು ಘೋಷಿಸಿ 8 ತಿಂಗಳು ಕಳೆದಿದ್ರೂ ಹಾರೋಹಳ್ಳಿಗೆ ಸಿಕ್ಕಿಲ್ಲ ಪ್ರಗತಿ ಭಾಗ್ಯ

    ತಾಲೂಕು ಘೋಷಿಸಿ 8 ತಿಂಗಳು ಕಳೆದಿದ್ರೂ ಹಾರೋಹಳ್ಳಿಗೆ ಸಿಕ್ಕಿಲ್ಲ ಪ್ರಗತಿ ಭಾಗ್ಯ

    ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿಯವರ ತವರು ಕ್ಷೇತ್ರ ರಾಮನಗರದ ಹಾರೋಹಳ್ಳಿ ಹೋಬಳಿಯ ಅಭಿವೃದ್ದಿಗಾಗಿ ಕಳೆದ ಬಜೆಟ್‍ನಲ್ಲಿ ಗ್ರಾಮ ಪಂಚಾಯತ್ ಅನ್ನು ತಾಲೂಕಾಗಿ ಘೋಷಣೆ ಮಾಡಿದ್ದರು. ಹಾರೋಹಳ್ಳಿ ತಾಲೂಕಾಗಿ ಘೋಷಣೆಯಾಗಿ ಎಂಟು ತಿಂಗಳುಗಳೇ ಕಳೆದಿದ್ದರೂ ತಾಲೂಕು ಎಂದೆನಿಸಿಕೊಳ್ಳಲು ಪ್ರಗತಿ ಮಾತ್ರ ಶೂನ್ಯವಾಗಿದೆ. ತಾಲೂಕಿನ ಬಗ್ಗೆ ಸರ್ಕಾರ ಅಧಿಸೂಚನೆ ಸಹ ನೀಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಸಿಎಂ ಆಗಿದ್ದ ಕುಮಾರಸ್ವಾಮಿಯವರ ಬಜೆಟ್‍ನಲ್ಲಿ ರಾಮನಗರ ಜಿಲ್ಲೆಯ ಜನರಿಗೆ ಅಚ್ಚರಿ ಕಾದಿತ್ತು. ಸಾತನೂರು ಹೋಬಳಿಯನ್ನ ತಾಲೂಕಾಗಿ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಗೆ ಬದಲಾಗಿ ಅನಿರೀಕ್ಷಿತವಾಗಿ ಹಾರೋಹಳ್ಳಿ ಹೋಬಳಿಯನ್ನ ತಾಲೂಕಾಗಿ ಘೋಷಣೆ ಮಾಡಲಾಗಿತ್ತು. ಅದು ಕೂಡಾ ಗ್ರಾಮ ಪಂಚಾಯತ್‍ನ್ನ ತಾಲೂಕಾಗಿ ಘೋಷಣೆ ಮಾಡಿದ್ದು ಸಾಕಷ್ಟು ಚರ್ಚೆಗೂ ಕೂಡಾ ಗ್ರಾಸವಾಗಿತ್ತು. ಆದರೆ ತಾಲೂಕಾಗಿ ಘೋಷಣೆಯಾಗಿ 8 ತಿಂಗಳೇ ಕಳೆದಿದ್ದರೂ ಯಾವುದೇ ಪ್ರಗತಿಯ ಬೆಳವಣಿಗೆ ಮಾತ್ರ ನಡೆದಿಲ್ಲ. ಅಷ್ಟೇ ಏಕೆ ಜಿಲ್ಲಾಡಳಿತದಿಂದ ತಾಲೂಕಾಗಿ ಮೇಲ್ದರ್ಜೆಗೆ ಏರಿಸಿ ಪೂರಕವಾಗಿ ಕಚೇರಿ ಹಾಗೂ ವಾತಾವರಣ ಕಲ್ಪಿಸಲು ಸರ್ಕಾರದಿಂದ ಇಲ್ಲಿಯ ತನಕ ಯಾವುದೇ ಅಧಿಸೂಚನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿರೋದು ಹಾರೋಹಳ್ಳಿ ತಾಲೂಕು ಹೋರಾಟ ಸಮಿತಿಯ ಹೋರಾಟಗಾರರನ್ನು ಸಿಡಿದೆಬ್ಬಿಸಿದೆ.

    ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಏಷ್ಯಾದ ದೊಡ್ಡ ಕೈಗಾರಿಕಾ ಪ್ರದೇಶ ಹೊಂದಿರುವ ಹೆಗ್ಗಳಿಕೆಯನ್ನ ಹೊಂದಿದೆ. ಕಳೆದ ಬಜೆಟ್‍ನಲ್ಲಿ ಎಚ್‍ಡಿಕೆಯವರು ತಮ್ಮ ಕ್ಷೇತ್ರದ ಋಣ ತೀರಿಸಲು ಹಾರೋಹಳ್ಳಿಗೆ ಮರಳವಾಡಿ ಹಾಗೂ ಹಾರೋಹಳ್ಳಿ ಹೋಬಳಿಗಳನ್ನು ಸೇರಿಸಿ ತಾಲೂಕಾಗಿ ಘೋಷಿಸಿದ್ದರು. ಹಾರೋಹಳ್ಳಿಯಲ್ಲಿ ಒಟ್ಟು 39 ಕಂದಾಯ ಗ್ರಾಮಗಳಿದ್ದು, 63 ದಾಖಲೆ ಗ್ರಾಮಗಳಿವೆ. ಇತ್ತ ಮರಳವಾಡಿ ಹೋಬಳಿಯಲ್ಲಿ ಒಟ್ಟು 46 ಕಂದಾಯ ಗ್ರಾಮಗಳು, 118 ದಾಖಲೆ ಗ್ರಾಮಗಳಿದ್ದು, ಎರಡು ಹೋಬಳಿಗಳಿಂದ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ.

    ಈಗಾಗಲೇ ತಾಲೂಕಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ರವಾನಿಸಲಾಗಿದೆ. ಆದರೂ ಕೂಡಾ ತಾಲೂಕಿಗೆ ಬೇಕಾದ ಸವಲತ್ತು ಕಲ್ಪಿಸಲು ಸರ್ಕಾರದಿಂದ ಅಧಿಕೃತ ಅಧಿಸೂಚನೆ ಮಾತ್ರ ಸಿಕ್ಕಿಲ್ಲ. ಕುಮಾರಸ್ವಾಮಿಯವರು ಕಾಟಾಚಾರಕ್ಕೆ ತಾಲೂಕು ಎಂದು ಘೋಷಣೆ ಮಾಡಿದ್ದಾರೆ. ಪತಿ, ಪತ್ನಿ ಇಬ್ಬರಿಂದ ನಯಾಪೈಸೆಯ ಕೆಲಸವಾಗದಿದ್ದರು ರಾಮನಗರ ಜನತೆ ಜೊತೆಗೆ ನಾವಿದ್ದೇವೆ ಎನ್ನಲು ತಾಲೂಕು ಘೋಷಣೆ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕು ವ್ಯಾಪ್ತಿಗೆ ಸೇರುವ ಪರಿಮಿತಿಯನ್ನ ಈಗಾಗಲೇ ಜಿಲ್ಲಾಡಳಿತ ಗುರುತಿಸಿದ್ದು, ಸರ್ಕಾರದಿಂದ ಅಧಿಸೂಚನೆ ಬಂದ ಬಳಿಕ ಕಚೇರಿಗಳ ಸ್ಥಳಾಂತರ ಹಾಗೂ ತಾಲೂಕು ಕಚೇರಿ ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

  • ಮೂರು ದಶಕಗಳ ಹೋರಾಟಕ್ಕೆ ಮಣಿಯದ ಸರ್ಕಾರ- ಸ್ಥಳೀಯರಿಂದ ಕುಶಾಲನಗರ ಬಂದ್

    ಮೂರು ದಶಕಗಳ ಹೋರಾಟಕ್ಕೆ ಮಣಿಯದ ಸರ್ಕಾರ- ಸ್ಥಳೀಯರಿಂದ ಕುಶಾಲನಗರ ಬಂದ್

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡಬೇಕೆಂದು ಇಲ್ಲಿನ ಜನರು ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ನಮ್ಮ ಊರು ತಾಲೂಕು ಕೇಂದ್ರವಾಗುತ್ತೆ ಎಂದು ಕಂಡಿದ್ದ ಕನಸು ನನಸು ಆಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಕುಶಾಲನಗರವನ್ನು ತಾಲೂಕು ಕೇಂದ್ರ ಎಂದು ಘೋಷಿಸಬೇಕೆಂದು ಪಟ್ಟಣವನ್ನು ಬಂದ್ ಮಾಡಿ ಸ್ಥಳೀಯರು ಆಕ್ರೋಶ ಹೊರಹಾಕಿದರು.

    ಇಂದು ಕುಶಾಲನಗರ ಪಟ್ಟಣದಲ್ಲಿ ಯಾವುದೇ ವ್ಯಾಪಾರ ವಹಿವಾಟು ಇರಲಿಲ್ಲ. ವರ್ತಕರು ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಕಾವೇರಿ ತಾಲೂಕು ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗೆ ಬೆಂಬಲ ಸೂಚಿಸಿದರು. ಬೆಳಗ್ಗೆ 11.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ತಡೆದ ಹೋರಾಟಗಾರರು ಕುಶಾಲನಗರವನ್ನ ತಾಲೂಕು ಅಂತಾ ಘೋಷಣೆ ಮಾಡಬೇಕು ಅಂತಾ ಒತ್ತಾಯಿಸಿದರು. ರಸ್ತೆ ತಡೆ ನಡೆಸಿದ್ದರಿಂದ ಪಟ್ಟಣದ ಮೈಸೂರು-ಮಂಗಳೂರು ರಾ.ಹೆ 275ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

    ಕರುನಾಡ ಜೀವನದಿ ಕಾವೇರಿ ಜಿಲ್ಲೆಯಲ್ಲಿ ಹುಟ್ಟೋದ್ರಿಂದ ಕುಶಾಲನಗರವನ್ನ ಕಾವೇರಿ ಅಂತಾ ಬದಲಾವಣೆ ಮಾಡಬೇಕು. ಅಲ್ಲದೇ ಸದ್ಯ ಇರುವ ಸೋಮವಾರಪೇಟೆ ತಾಲೂಕಿನ ಕೆಲ ಹಳ್ಳಿಗಳಿಂದ ಸುಮಾರು 60-70 ಕೀಲೋ ಮೀಟರ್ ಆಗಲಿದ್ದು, ಕೇಂದ್ರ ಕಚೇರಿಗೆ ಬರಬೇಕು ಅಂದ್ರೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 1993ರಿಂದಲೂ ಜನಸಾಮಾನ್ಯರು ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಬೃಹತ್ ಹೋರಾಟವನ್ನ ಮಾಡಿದ್ದರು. ಕೊನೆಪಕ್ಷ ಈ ಬಾರಿಯ ಬಜೆಟ್ ನಲ್ಲಾದ್ರೂ ಘೋಷಣೆ ಆಗುತ್ತೆ ಅಂತಾ ಎಲ್ಲರೂ ಭಾವಿಸಿದ್ರೂ, ಕನಸು ನನಸಾಗಲೇ ಇಲ್ಲ ಎಂದು ಕಾವೇರಿ ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಸಮಾಧಾನ ಹೊರಹಾಕಿದರು.

    ನ್ಯಾಯಾಲಯ, ಪೊಲೀಸ್ ಠಾಣೆ, ವಿಶೇಷ ತಹಶೀಲ್ದಾರ್ ಕಚೇರಿ ಸೇರಿದಂತೆ ಕುಶಾಲನಗರ ತಾಲೂಕಿಗೆ ಬೇಕಾದ ಎಲ್ಲಾ ಮಾನದಂಡವನ್ನ ಹೊಂದಿದೆ. ಅಲ್ಲದೇ ಸುಮಾರು 1 ಲಕ್ಷ 20 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನ ಪಟ್ಟಣ ಹೊಂದಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಪ್ರತಿ ಬಾರಿಯೂ ತಾಲೂಕು ಪಟ್ಟ ಕುಶಾಲನಗರದ ಕೈ ತಪ್ಪುತ್ತಲೇ ಬಂದಿದೆ. ಆದರೆ ಈ ಬಾರಿ ಮಾತ್ರ ಹೋರಾಟವನ್ನ ಸವಾಲಾಗಿ ತೆಗೆದುಕೊಂಡಿರುವ ಕುಶಾಲನಗರ ಜನತೆ, ತಾಲೂಕು ಆಗಿ ಘೋಷಣೆ ಮಾಡದ ಹೊರತು, ಹೋರಾಟದಿಂದ ಹಿಂದೆ ಸರಿಯೋದಿಲ್ಲ ಅಂತಾ ಶಪಥ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋತಿ ನನ್ಮಗಾದ್ರೂ, ಕಳ್ಳ್ ನನ್ಮಗ ನಾನಲ್ಲ: ಶಾಸಕನಾಗುವ ಕನಸು ಬಿಚ್ಚಿಟ್ಟ ಪ್ರಥಮ್

    ಕೋತಿ ನನ್ಮಗಾದ್ರೂ, ಕಳ್ಳ್ ನನ್ಮಗ ನಾನಲ್ಲ: ಶಾಸಕನಾಗುವ ಕನಸು ಬಿಚ್ಚಿಟ್ಟ ಪ್ರಥಮ್

    ಧಾರವಾಡ: ಇತ್ತೀಚಿಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯದತ್ತ ಮುಖ ಮಾಡಿದ್ದಾರೆ. ಉಪೇಂದ್ರ, ಮಾಲಾಶ್ರೀ ಮತ್ತು ಸಾಧು ಕೋಕಿಲ ರಾಜಕೀಯಕ್ಕೆ ಮುಖ ಮಾಡಿದ್ದು, ಈಗ ಈ ಸಾಲಿಗೆ ಬಿಗ್‍ಬಾಸ್ ವಿಜೇತ ಪ್ರಥಮ್ ಕೂಡ ಸೇರಿದ್ದಾರೆ.

    ನಗರದ ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಪ್ರಥಮ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 3-4 ದಶಕಗಳಿಂದ ಚಾಮರಾಜನಗರ ಜಿಲ್ಲೆಯ ಹಾನೂರು ಒಂದು ತಾಲೂಕು ಆಗಬೇಕೆಂಬುದು ಎಲ್ಲರ ಆಸೆಯಾಗಿತ್ತು. ಆದರೆ ಈಗ ಸಿದ್ದರಾಮಯ್ಯನವರು ಹಾನೂರನ್ನು ತಾಲೂಕಾಗಿ ಘೋಷಣೆ ಮಾಡಿದ್ದಾರೆ. ಸಿದ್ರಾಮಣ್ಣ ಅವರ ನಾಯಕತ್ವದಲ್ಲಿ ಹಾನೂರು ತಾಲೂಕಾಗಿರೋದರಿಂದ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸಿದೆ. ಯಾರಾದರೂ ಒಳ್ಳೆ ಕೆಲಸ ಮಾಡಿದ್ದರೆ ನಾವು ಅಭಿನಂದಿಸಬೇಕು ಎಂದರು.

    ಈಗ ಹಾನೂರು ತಾಲೂಕು ಘೋಷಣೆ ಆಗಿದ್ದರಿಂದ ಈ ಹೊಸ ತಾಲೂಕಿಗೆ ನಾನು ಶಾಸಕನಾಗಬೇಕೆಂಬು ಎನ್ನುವ ಆಸೆಯಿದೆ. ಅದಕ್ಕೆ ನಾನು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕೋತಿ ನನ್ ಮಗ ಇರಬಹುದು ಆದರೆ ಕಳ್ಳ್ ನನ್ ಮಗ ನಾನಲ್ಲ. ಹಾಗಾಗಿ ನಾನು ಒಬ್ಬ ಪರಿಪೂರ್ಣ, ಪ್ರಮಾಣಿಕ ವ್ಯಕ್ತಿಯಾಗಿ ಕೆಲಸಗಳನ್ನು ಮಾಡಬೇಕು. ರಾಜಕೀಯ ನನ್ನ ಇಷ್ಟದ ಕ್ಷೇತ್ರ, ಸಿನಿಮಾ ಅಲ್ಲ. ಸಿನಿಮಾಗೆ ನಾನು ನಿರ್ದೇಶಕನಾಗಲೂ ಬಂದೆ. ಆದರೆ ಈಗ ನಿರ್ದೇಶನಕ್ಕೆ ಅವಕಾಶ ಇಲ್ಲ ಎಂದು ಪ್ರಥಮ್ ಹೇಳಿದರು.

    ನನಗಿರುವ ಮಾಹಿತಿಯ ಪ್ರಕಾರ ಮಾರ್ಚ್ 8ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಸಿಎಂ ಸರ್ ಅಲ್ಲಿ ಯಾರನ್ನೂ ನಿಲ್ಲಿಸಬೇಡಿ, ನಾನು ಅಲ್ಲಿ ಗೆದ್ದು ಬರುತ್ತೇನೆ ಎಂದು ಹೇಳಿದಾಗ ಮಾಧ್ಯಮದವರು ನೀವು ಕಾಂಗ್ರೆಸ್ ನಿಂದ ಕಣಕ್ಕೆ ಇಳಿಯುತ್ತಿದ್ದೀರಾ ಎಂದು ಕೇಳಿದರು. ಅದಕ್ಕೆ ನಾನು ಸಿದ್ದರಾಮಯ್ಯನವರಲ್ಲಿ ಟಿಕೆಟ್ ಕೇಳಲಿಲ್ಲ. ನಾನು ಯಾಕೆ ಟಿಕೆಟ್ ಕೇಳಲಿ. ಪಕ್ಷೇತರನಾಗಿಯೂ ನಿಲ್ಲಬಹುದಲ್ಲ ಅಥವಾ ಬೇರೆ ಪಕ್ಷದಿಂದಲೂ ಸ್ಪರ್ಧಿಸಬಹುದಲ್ಲವೇ ಎಂದು ಪ್ರಥಮ್ ಮರು ಪ್ರಶ್ನೆ ಹಾಕಿದರು.

    ಏನೂ ಇಲ್ಲದೆ ನಾನು ಕೆಲಸ ಮಾಡುತ್ತಿದ್ದೇನೆ. ಜನರ ಧ್ವನಿಯಾಗಲು ನಾನು ಇಷ್ಟಪಡುತ್ತೇನೆ. ಅದಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಖಂಡಿತವಾಗಿಯೂ ನಾನು ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನತ್ತ ಮಾಲಾಶ್ರೀ, ಸಾಧು ಕೋಕಿಲ ಚಿತ್ತ?

  • ಪ್ರತ್ಯೇಕ ತಾಲೂಕು ರಚನೆಗೆ ಪತ್ರ ಚಳುವಳಿ ಆರಂಭಿಸಿದ ಶಾಲಾ ಮಕ್ಕಳು

    ಪ್ರತ್ಯೇಕ ತಾಲೂಕು ರಚನೆಗೆ ಪತ್ರ ಚಳುವಳಿ ಆರಂಭಿಸಿದ ಶಾಲಾ ಮಕ್ಕಳು

    ಬಾಗಲಕೋಟೆ: ತಮ್ಮ ಗ್ರಾಮವನ್ನು ನೂತನ ತಾಲೂಕನ್ನಾಗಿ ರಚನೆ ಮಾಡುವಂತೆ ಆಗ್ರಹಿಸಿ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿಯನ್ನ ನಡೆಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳೇ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಗ್ರಾಮದಲ್ಲಿ ಭಾನುವಾರದಿಂದ ಗ್ರಾಮಸ್ಥರು ಸಾವಳಗಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಲಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳು ಸಿಎಂಗೆ ಪತ್ರ ಬರೆದಿದ್ದಾರೆ.

    ಇನ್ನು ವಿಶೇಷ ಅಂದರೆ ಡಿಸೆಂಬರ್ 19 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಹೀಗಾಗಿ ಸಿಎಂ ಗಮನ ಸೆಳೆಯುವ ಕಾರಣದಿಂದ ಸಾಮೂಹಿಕ ಪತ್ರ ಚಳುವಳಿಗೆ ಮುಂದಾಗಿದ್ದಾರೆ. ಪ್ರತಿಯೊಬ್ಬ ಮಕ್ಕಳು ಸಹ ಪತ್ರ ಬರೆದು ಸಿಎಂ ಅವರ ಬೆಂಗಳೂರ ವಿಳಾಸಕ್ಕೆ ಪೋಸ್ಟ್ ಮಾಡಿದ್ದಾರೆ. ತಮ್ಮ ಗ್ರಾಮ ನೂತನ ತಾಲೂಕಾಗಿ ರಚನೆಯಾಗಿ ಇನ್ನಷ್ಟು ಅಭಿವೃದ್ಧಿ ಕಾಣಬೇಕೆಂಬ ಉದ್ದೇಶದಿಂದ ಸಿಎಂಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ನಡೆಸಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

  • ಕುಶಾಲನಗರ ತಾಲೂಕಿಗೆ ಬೇಡಿಕೆ: 9ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

    ಕುಶಾಲನಗರ ತಾಲೂಕಿಗೆ ಬೇಡಿಕೆ: 9ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

    ಮಡಿಕೇರಿ: ಕಾವೇರಿ ತಾಲೂಕು ರಚಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟುಕೊಂಡು ಕುಶಾಲನಗರದಲ್ಲಿ ನಡೆಯುತ್ತಿರುವ ಸತ್ಯಾಗ್ರಹ 9ನೇ ದಿನಕ್ಕೆ ಕಾಲಿಟ್ಟಿದೆ.

    ಜಿಲ್ಲೆಯ ಕುಶಾಲನಗರ ಕೇಂದ್ರವಾಗಿರಿಸಿಕೊಂಡು ನಗರದ ಪ್ರಮುಖ ಕೇಂದ್ರವಾದ ಕಾರು ನಿಲ್ದಾಣದ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಸರಣಿ ಸತ್ಯಾಗ್ರಹ ನಡೆಯುತ್ತಿದ್ದು, ಪ್ರತಿಭಟನೆಯ ಅಂಗವಾಗಿ ಸೋಮವಾರ ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ವಾಹನ ಸಂಚಾರವನ್ನು ತಡೆಹಿಡಿಯಲಾಯಿತು. ಇಂದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಇದರಿಂದ ಅಡ್ಡಿ ಆಗಿತ್ತು.

    ವಾಣಿಜ್ಯೋದ್ಯಮಕ್ಕೆ ಕೊಡಗು ಜಿಲ್ಲೆಯಲ್ಲೇ ಕುಶಾಲನಗರ ಪ್ರಸಿದ್ಧ ನಗರವಾಗಿದೆ. 19 ಗ್ರಾಮ ಪಂಚಾಯತ್ ಗಳನ್ನು ಸೇರಿಸಿ ಕುಶಾಲನಗರ ಕೇಂದ್ರವಾಗಿಸಿಕೊಂಡು ತಾಲೂಕು ಮಾಡಿದರೆ ವ್ಯಾಪಾರ ಹೆಚ್ಚಾಗುತ್ತದೆ. ಇದರಿಂದಾಗಿ ವ್ಯಾಪಾರ ವಹಿವಾಟಿಗೆ ಪೂರಕವಾದ ಉದ್ದಿಮೆಗಳು ಪ್ರಾರಂಭವಾಗುತ್ತವೆ ಎನ್ನುವ ವಾದವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.

    ಅಷ್ಟೇ ಅಲ್ಲದೇ ಕಂದಾಯ, ನ್ಯಾಯಾಲಯ, ಪೊಲೀಸ್ ವ್ಯವಸ್ಥೆಗಳು ಮತ್ತಷ್ಟು ಸದೃಢಗೊಳ್ಳುತ್ತದೆ. ತಾಲೂಕು ರಚನೆಗೆ ಬೇಕಾಗುವಂತಹ ಎಲ್ಲ ಮಾನದಂಡ, ಅರ್ಹತೆ ಕುಶಾಲನಗರಕ್ಕೆ ಇದೆ. ಹೀಗಾಗಿ ಅದಷ್ಟು ಬೇಗ ಸರ್ಕಾರ ಪರಿಗಣಿಸಿ ತಾಲೂಕು ರಚಿಸಬೇಕು ಎಂದು ಪ್ರತಿಭಟನಾಕಾರರು ಅಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

  • ಕಕ್ಕೇರಾ ಪಟ್ಟಣವನ್ನು ತಾಲೂಕು ಮಾಡಿ: ಸಂಘಟನೆಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ

    ಕಕ್ಕೇರಾ ಪಟ್ಟಣವನ್ನು ತಾಲೂಕು ಮಾಡಿ: ಸಂಘಟನೆಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ

    ಯಾದಗಿರಿ: ಕಕ್ಕೇರಾ ಪಟ್ಟಣವನ್ನು ತಾಲೂಕು ಕೇಂದ್ರವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಕಕ್ಕೇರಾ ಪಟ್ಟಣವನ್ನು ಬಂದ್ ಮಾಡಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯ ಅತಿ ದೊಡ್ಡ ಪಟ್ಟಣವಾದ ಪುರಸಭೆ ಹೊಂದಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣವನ್ನು ಕೈಬಿಟ್ಟು ಹುಣಸಗಿ, ವಡಗೇರಾ ಹಾಗೂ ಗುರುಮಠಕಲ್ ಹೋಬಳಿ ಕೇಂದ್ರಗಳನ್ನು ತಾಲೂಕು ಎಂದು ಘೋಷಣೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಕಕ್ಕೇರಾವನ್ನು ತಾಲೂಕು ಮಾಡಬೇಕು ಎನ್ನುವುದು ದಶಕಗಳಿಂದ ನಾವು ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ಈ ಬಾರಿ ನಮಗೆ ನಿರಾಸೆಯಾಗಿದೆ ಎಂದು ಸರ್ಕಾರದ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದರು.

    ಬೆಳಗ್ಗೆಯಿಂದಲೇ ಕಕ್ಕೇರಾ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ವಿವಿಧ ಸಂಘಟನೆ ಕಾರ್ಯಕರ್ತರು ಹಾಗೂ ಪಟ್ಟಣದ ನಿವಾಸಿಗಳೆಲ್ಲರು ಸೇರಿ ಶಾಂತಪುರ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಬಸ್ ಹಾಗೂ ಇನ್ನಿತರ ವಾಹನಗಳು ಕಿಮೀ ಗಟ್ಟಲೆ ರಸ್ತೆಯಲ್ಲಿ ನಿಂತುಕೊಂಡಿದ್ದವು. ವಾಹನ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಮಕ್ಕಳು, ವೃದ್ಧರು, ಹಾಗೂ ದೂರದ ಊರಿಗೆ ತೆರಳುವ ಜನರಿಗೆ ಬೀಸಿಲಿನ ತಾಪ ಜೊತೆ ಪ್ರತಿಭಟನೆ ಬಿಸಿ ತಟ್ಟಿತ್ತು.

    ಸಿಎಂ ಸಿದ್ದರಾಮಯ್ಯ ಹೋರಾಟಕ್ಕೆ ಮಣಿದು ತಾಲೂಕಾ ಕೇಂದ್ರವೆಂದು ಘೋಷಣೆ ಮಾಡಬೇಕು ಇಲ್ಲದ್ದಿದ್ದರೆ ಸಿಎಂ ನಿವಾಸ ಇಲ್ಲವೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದ್ದಾರೆ. ಕಕ್ಕೇರಾ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಕೂಡ ಹೋರಾಟದಲ್ಲಿ ಭಾಗವಹಿಸಿದ್ದರು.