Tag: sydney

  • ಆಕ್ಸಿಜನ್ ಪೂರೈಕೆಗೆ 41 ಲಕ್ಷ ರೂ. ಭಾರತಕ್ಕೆ ದೇಣಿಗೆ ನೀಡಿದ ಬ್ರೆಟ್ ಲೀ

    ಆಕ್ಸಿಜನ್ ಪೂರೈಕೆಗೆ 41 ಲಕ್ಷ ರೂ. ಭಾರತಕ್ಕೆ ದೇಣಿಗೆ ನೀಡಿದ ಬ್ರೆಟ್ ಲೀ

    ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ವೇಗಿ, ಐಪಿಎಲ್ ವೀಕ್ಷಕ ವಿವರಣೆಗಾರ ಬ್ರೆಟ್ ಲೀ ಭಾರತದಲ್ಲಿ ಆಕ್ಸಿಜನ್ ಪೂರೈಕೆಗೆ 1 ಬಿಟ್ ಕಾಯಿನ್(ಅಂದಾಜು 40 ಲಕ್ಷ) ರೂಪಾಯಿ ದೇಣಿಗೆ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಭಾರತ ನನ್ನ 2ನೇ ಮನೆಯಿದ್ದಂತೆ. ಸದ್ಯ ಎದುರಾಗಿರುವ ಪರಿಸ್ಥಿತಿ ನೋಡಿ ಬಹಳ ಸಂಕಟವಾಗುತ್ತಿದೆ ಎಂದು ಲೀ ಹೇಳಿದ್ದಾರೆ. ಕ್ರಿಫ್ಟೋ ರಿಲೀಫ್ ಮೂಲಕ ದೇಣಿಗೆ ಹಣ ಭಾರತಕ್ಕೆ ತಲುಪುವಂತೆ ಮಾಡಲು ನಿರ್ಧರಿಸಿದ್ದಾರೆ. ಕೊರೊನಾದಿಂದ ಬಳಲುತ್ತಿರುವ ಭಾರತಕ್ಕೆ ಮಿಡಿದ ಬ್ರೆಟ್ ಲೀ ಅವರು ಹಣದ ಸಹಾಯವನ್ನು ಮಾಡಿದ್ದಾರೆ.

    ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ಸಹಾಯ ನಿಧಿಗೆ 50,000 ಅಮೆರಿಕನ್ ಡಾಲರ್ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್‍ರಿಂದ ಸ್ಫೂರ್ತಿ ಪಡೆದು ಲೀ ಹಣ ಸಹಾಯ ಮಾಡಿದ್ದಾರೆ. ಬ್ರೆಟ್ ಲೀ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಆಸ್ಟ್ರೇಲಿಯಾದಲ್ಲಿ ಪ್ರವಾಹ – ಮನೆಯಿಂದ ಹೊರ ಬರದಂತೆ ಎಚ್ಚರಿಕೆ

    ಆಸ್ಟ್ರೇಲಿಯಾದಲ್ಲಿ ಪ್ರವಾಹ – ಮನೆಯಿಂದ ಹೊರ ಬರದಂತೆ ಎಚ್ಚರಿಕೆ

    ಸಿಡ್ನಿ: ಧಾರಾಕಾರ ಮಳೆಯಿಂದ ಆಸ್ಟ್ರೇಲಿಯಾದ ಪೂರ್ವ ಕರಾವಳಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಅಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ನ್ಯೂ ಸೌತ್ ವೇಲ್ಸ್ ರಾಜ್ಯವಾದ ಸಿಡ್ನಿಯ ಉತ್ತರ ಪ್ರದೇಶಕ್ಕೆ ನೂರಾರು ಜನರನ್ನು ಸ್ಥಳಾಂತರಿಸಲಾಗಿದ್ದು, ದಕ್ಷಿಣ ಕರಾವಳಿಯತ್ತ ಮಳೆ ಸಾಗುತ್ತಿರುವುದರಿಂದ ಇನ್ನೂ ಹಲವರಿಗೆ ಆಶ್ರಯ ಕಲ್ಪಿಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    2013ರಲ್ಲಿ ಕಾಣಿಸಿಕೊಂಡಿದ್ದ ಪ್ರವಾಹದ ಮಟ್ಟಕ್ಕಿಂತ, ಇದೀಗ ಸಿಡ್ನಿ ಉತ್ತರದ 400 ಕಿಮೀ(240) ಮೈಲಿ ದೂರದಲ್ಲಿರುವ ಪೋರ್ಟ್ ಮ್ಯಾಕ್ಟರಿಯ ಬಳಿಯ ಹೇಸ್ಟಿಂಗ್ಸ್ ನದಿಯಲ್ಲಿ ಪ್ರವಾಹ ಮಟ್ಟ ಹೆಚ್ಚಾಗಿದೆ. ಅಲ್ಲದೆ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಈ ಮಳೆಯು ಇಂದು ಕೂಡ ಮುಂದುವರಿಯಲಿದ್ದು, ಸಿಡ್ನಿ ದಕ್ಷಿಣದ ಪೋರ್ಟ್ ಮ್ಯಾಕ್ಟರಿಯ 500ಕಿ.ಮೀ(300 ಮೈಲಿ)ವರೆಗೂ ಮಳೆ ಆಗಲಿದ್ದು, ಪ್ರವಾಹದ ತೀವ್ರತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜನರು ಹೊರಗೆ ಬರದೇ ಮನೆಯೊಳಗೆ ಇರುವಂತೆ ಎಚ್ಚರಿಕೆ ನೀಡಲಾಗಿದೆ.

    ಇಲ್ಲಿಯವರೆಗೂ ತುರ್ತು ಸೇವೆಯ ಸಹಾಯಕ್ಕಾಗಿ 500 ಕರೆ ಬಂದಿದ್ದು, ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 180 ಮಂದಿಯನ್ನು ರಕ್ಷಿಸಲಾಗಿದೆ.

  • ಪಂತ್ ಉತ್ತಮ ಆಟ – ಭಾರತವನ್ನು ಕಾಪಾಡಿದ ಅಶ್ವಿನ್, ವಿಹಾರಿ

    ಪಂತ್ ಉತ್ತಮ ಆಟ – ಭಾರತವನ್ನು ಕಾಪಾಡಿದ ಅಶ್ವಿನ್, ವಿಹಾರಿ

    – ಡ್ರಾದಲ್ಲಿ ಮೂರನೇ ಟೆಸ್ಟ್ ಪಂದ್ಯ ಅಂತ್ಯ

    ಸಿಡ್ನಿ: ರಿಷಬ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ಹನುಮ ವಿಹಾರಿಯ ತಾಳ್ಮೆಯುತ ಇನ್ನಿಂಗ್ಸ್ ಆರ್ ಅಶ್ವಿನ್ ಸಾಥ್ ನಿಂದಾಗಿ ಬಾರ್ಡರ್ ಗಾವಸ್ಕಾರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಡ್ರಾ ಮೂಲಕ ಅಂತ್ಯವಾಗಿದೆ.

    88.2 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 272 ರನ್‍ಗಳಿಸಿ ಸಂಕಷ್ಟದಲ್ಲಿದ್ದಾಗ ಜೊತೆಯಾದ ಅಶ್ವಿನ್ ಮುರಿಯದ 7ನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. 407 ರನ್‍ಗಳ ಗುರಿಯನ್ನು ಬೆನ್ನೆಟ್ಟಿದ ಭಾರತ 131 ಓವರ್‍ಗಳಲ್ಲಿ 334 ರನ್‍ಗಳಿಗೆ 5 ವಿಕೆಟ್ ಕಳೆದೆÀಕೊಂಡಿದ್ದಾಗ ಡ್ರಾ ತೀರ್ಮಾನಕ್ಕೆ ಬರಲಾಯಿತು.

    ಭಾರತಕ್ಕೆ ಐದನೇ ದಿನದಾಟ ಅಕ್ಷರಶಃ ಕಬ್ಬಿಣದ ಕಡಲೆಯಾಗಿತ್ತು. 9 ರನ್ ಹೊಡೆದ ಚೇತೇಶ್ವರ ಪೂಜಾರ ಮತ್ತು 4 ರನ್ ಹೊಡೆದಿದ್ದ ರಹಾನೆ ಐದನೇ ದಿನ ಬ್ಯಾಟಿಂಗ್ ಇಳಿದರು. ಆದರೆ ರಹಾನೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಇತ್ತ ಪೂಜಾರ ಮಾತ್ರ ಮತ್ತೆ ತಾನೂ ಟೆಸ್ಟ್ ಸ್ಪೆಷಲಿಸ್ಟ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

    ರಹಾನೆ ಔಟ್ ಆದ ಬಳಿಕ ಬ್ಯಾಟಿಂಗ್ ಬಡ್ತಿ ಪಡೆದು ಬಂದ ರಿಷಬ್ ಪಂತ್ ಏಕದಿನ ಪಂದ್ಯಾಟದ ರೀತಿಯಲ್ಲಿ ಬ್ಯಾಟ್ ಬೀಸಿ 97 ರನ್ (118 ಎಸೆತ 12 ಬೌಡಂರಿ 3 ಸಿಕ್ಸರ್) ಸಿಡಿಸಿ ಪೂಜಾರ ಜೊತೆ 4 ನೇ ವಿಕೆಟ್ 148 ರನ್‍ಗಳ ಜೊತೆಯಾಟವಾಡಿದರು. ಪೂಜಾರ 77ರನ್ (205 ಎಸೆತ 12 ಬೌಡಂರಿ,) ಹೊಡೆದು ಭಾರತಕ್ಕೆ ಆಧಾರವಾದರೂ. ಶತಕದ ಹೊಸ್ತಿಲಿನಲ್ಲಿದ್ದ ಪಂತ್ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರೆ, ಅವರ ಬೆನ್ನಲ್ಲೇ ಪೂಜಾರ ಹ್ಯಾಝಲ್‍ವುಡ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರೂ ನಂತರ ಬಂದ ಅನುಮ ವಿಹಾರಿ 23 ರನ್ (161 ಎಸೆತ 4 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 39 ರನ್ (128 ಎಸೆತ 7 ಬೌಂಡರಿ) ಹೊಡೆದು ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದರು.

  • ಬುಮ್ರಾ, ಸಿರಾಜ್‍ಗೆ ಆಸ್ಟ್ರೇಲಿಯಾ ಅಭಿಮಾನಿಯಿಂದ ಜನಾಂಗೀಯ ನಿಂದನೆ

    ಬುಮ್ರಾ, ಸಿರಾಜ್‍ಗೆ ಆಸ್ಟ್ರೇಲಿಯಾ ಅಭಿಮಾನಿಯಿಂದ ಜನಾಂಗೀಯ ನಿಂದನೆ

    – ಐಸಿಸಿಗೆ ಬಿಸಿಸಿಐನಿಂದ ದೂರು

    ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯಾಟದ ಮೂರನೇ ದಿನದಾಟದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರು ಆಟಗಾರರಿಗೆ ಪಂದ್ಯ ವಿಕ್ಷೀಸುತ್ತಿದ್ದ ಪ್ರೇಕ್ಷಕನೋರ್ವ ಹೀಯ್ಯಾಳಿಸಿದ್ದಾನೆ. ಇದನ್ನು ಖಂಡಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಅಂತಾರಾಷ್ಟ್ರೀಯಾ ಕ್ರಿಕೆಟ್ ಮಂಡಳಿಗೆ ದೂರು ನೀಡಿದೆ.

    ಬಿಸಿಸಿಐ ಪ್ರಕಾರ ಫೀಲ್ಡಿಂಗ್ ಮಾಡುತ್ತಿದ್ದ ಭಾರತೀಯ ಆಟಗಾರರನ್ನು ಕೆಲ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ದೂರು ದಾಖಲಿಸಿತ್ತು. ಐಸಿಸಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಎರಡು ವಾರಗಳಲ್ಲಿ ಈ ಪ್ರಕರಣವನ್ನು ಸರಿಪಡಿಸುವಂತೆ ಸೂಚಿಸಿದೆ.

    ಮದ್ಯದ ಅಮಲಿನಲ್ಲಿದ್ದ ಆಸ್ಟ್ರೇಲಿಯಾದ ಬೆಂಬಲಿಗನೊಬ್ಬ ಫೈನ್ ಲೆಗ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಬುಮ್ರಾ ಮತ್ತು ಸಿರಾಜ್ ಅವರನ್ನು ಹೀಯ್ಯಾಳಿಸಿದ್ದಾನೆ. ಇದಕ್ಕೆ ಟೀಂ ಇಂಡಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ದಿನದಾಟದ ಕೊನೆಯಲ್ಲಿ ಅಂಪೈರ್ ಜೊತೆ ಈ ಕುರಿತು ಮಾತಾನಾಡುತ್ತಿದ್ದಂತೆ ಬಿಸಿಸಿಐ ಮಧ್ಯ ಪ್ರವೇಶಿಸಿ ಪ್ರಕರಣವನ್ನು ಐಸಿಸಿ ಮುಂದಿಟ್ಟಿದೆ.

    ಮೊದಲ ಇನ್ನಿಂಗ್ಸ್‍ನಲ್ಲಿ 244 ರನ್‍ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡ ಭಾರತ ತಂಡ ಆಸೀಸ್‍ಗೆ 94 ರನ್‍ಗಳ ಮುನ್ನಡೆ ಬಿಟ್ಟುಕೊಟ್ಟಿತ್ತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 103 ರನ್ ಗಳಿಸಿ 197 ರನ್‍ಗಳ ಮುನ್ನಡೆ ಪಡೆದುಕೊಂಡಿದೆ. 47(69) ರನ್ ಗಳಿಸಿರುವ ಲಬುಶೇನ್ ಮತ್ತು 29(63) ಗಳಿಸಿರುವ ಸ್ಟೀವನ್ ಸ್ಮಿತ್ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • ಸಿಡ್ನಿಯಲ್ಲಿ ಹೊಸ ವರ್ಷದ ಸಂಭ್ರಮ – ನ್ಯೂಜಿಲೆಂಡ್‍ನಲ್ಲಿ ಯಾವುದೇ ನಿಬಂಧನೆಗಳಿಲ್ಲದೇ ಸೆಲೆಬ್ರೇಷನ್

    ಸಿಡ್ನಿಯಲ್ಲಿ ಹೊಸ ವರ್ಷದ ಸಂಭ್ರಮ – ನ್ಯೂಜಿಲೆಂಡ್‍ನಲ್ಲಿ ಯಾವುದೇ ನಿಬಂಧನೆಗಳಿಲ್ಲದೇ ಸೆಲೆಬ್ರೇಷನ್

    ನವದೆಹಲಿ: ನ್ಯೂಜಿಲೆಂಡ್ ಮತ್ತು ಆಸ್ಟೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಆರಂಭಗೊಂಡಿದ್ದು, ಬಣ್ಣ ಬಣ್ಣದ ಪಟಾಕಿ, ಲೈಟ್ ಗಳಿಂದ 2021ನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಭಾರತದಲ್ಲಿ ಹೊಸ ವರ್ಷದ ಆಗಮನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ.

    ಆಕಾಲೆಂಡ್ ಜನತೆ ಯಾವುದೇ ನಿಬಂಧನೆ, ಷರತ್ತುಗಳಿಲ್ಲದೇ ಹೊಸ ವರ್ಷ ಆಚರಿಸಿದ್ದಾರೆ. ಸಿಡ್ನಿಯ ಹಾರ್ಬರ್ ಬ್ರಿಡ್ಜ್ ಅತ್ಯಂತ ವೈಭೋಗದಿಂದ ಅಲಂಕರಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ 31ರ ಮಧ್ಯಾಹ್ನದಿಂದಲೇ ಹೊಸ ವರ್ಷಕ್ಕೆ ಸಿದ್ಧತೆ ನಡೆಸಿಕೊಂಡಿತ್ತು. ಗಲ್ಲಿ ಗಲ್ಲಿಗಳಲ್ಲಿ ಮ್ಯೂಸಿಕಲ್ ಇವೆಂಟ್ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಮಧ್ಯಾಹ್ನದಿಂದಲೇ ಆರಂಭಗೊಂಡಿವೆ. ಆದ್ರೆ ಕೊರೊನಾದಿಂದಾಗಿ ಜನರು ಒಟ್ಟಾಗಿ ಸೇರುವುದನ್ನ ನಿಷೇಧಿಸಲಾಗಿತ್ತು. ಎಲ್ಲ ಕಾರ್ಯಕ್ರಮಗಳ ನೇರಪ್ರಸಾರ ಮಾಡಲಾಗುತ್ತಿದೆ. ಬ್ರಿಡ್ಜ್ ಬಳಿ ಸೇರಿದ ಕೆಲ ಜನ ಕುಣಿದು ಕುಪ್ಪಳಿಸಿ 2020ಕ್ಕೆ ವಿದಾಯ ಹೇಳಿದರು.

    ಭಾರತದಲ್ಲಿ ಸಂಜೆ 4.30 ಆದಾಗ ನ್ಯೂಜಿಲೆಂಡ್ ನಲ್ಲಿ ರಾತ್ರಿ 12ರ ಗಂಟೆ ಬಾರಿಸಿತ್ತು. ಆಕಾಲೆಂಡ್ ನಲ್ಲಿ ಹೊಸ ವರ್ಷದ ಆಚರಣೆಗಾಗಿ ದೊಡ್ಡ ಇವೆಂಟ್ ಆಯೋಜಿಸಲಾಗಿತ್ತು. ಇಲ್ಲಿಯ ಸ್ಕೈ ಟವರ್ ಬಳಿ ಐದು ನಿಮಿಷ ಝಗಮಗಿಸುವ, ಬಣ್ಣದ ಚಿತ್ತಾರಗಳಿಂದ ಹೊಸ ವರ್ಷವನ್ನ ಸ್ವಾಗತಿಸಿಕೊಳ್ಳಲಾಯ್ತು.

    ದುಬೈನ ಬುರ್ಜ್ ಖಲೀಫಾದಲ್ಲಿ ಲೈಟ್, ಲೇಸರ್ ಶೋ ಮಾಡಲಾಯ್ತು. ಕೊರೊನಾ ಹಿನ್ನೆಲೆ ಸರ್ಕಾರ ಕಠಿಣ ನಿಯಮಗಳನ್ನ ಹೇರಿದೆ. ಇನ್ನುಳಿದಂತೆ ಸಿಂಗಪುರ, ಪ್ಯಾರೀಸ್ , ಲಂಡನ್, ಮಾಸ್ಕೋ, ಬರ್ಲಿನ್, ಪಟಾಯ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.

  • 22 ಬಾಲಿಗೆ 42 ರನ್ – ಪಾಂಡ್ಯ ಸ್ಫೋಟಕ ಆಟ,  ಭಾರತಕ್ಕೆ ಸರಣಿ

    22 ಬಾಲಿಗೆ 42 ರನ್ – ಪಾಂಡ್ಯ ಸ್ಫೋಟಕ ಆಟ, ಭಾರತಕ್ಕೆ ಸರಣಿ

    – 6 ವಿಕೆಟ್‍ಗಳಿಂದ ಎರಡನೇ ಪಂದ್ಯ ಗೆದ್ದು ಬೀಗಿದ ಇಂಡಿಯಾ

    ಸಿಡ್ನಿ: ಇಂದು ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಭಾರತ ತಂಡ 6 ವಿಕೆಟ್‍ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.

    ಇಂದು ಸಿಡ್ನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಾಯಕ ಮ್ಯಾಥ್ಯೂ ವೇಡ್ ಮತ್ತು ಸ್ಟೀವ್ ಸ್ಮಿತ್ ಅವರು ಭರ್ಜರಿ ಬ್ಯಾಟಿಂಗ್‍ನಿಂದ ನಿಗಧಿತ 20 ಓವರಿನಲ್ಲಿ ಭರ್ಜರಿ 194 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ತಂಡ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್‍ನಿಂದ ಇನ್ನೂ ಎರಡು ಬಾಲ್ ಉಳಿದಂತೆ 195 ರನ್ ಹೊಡೆದು ಜಯ ಸಾಧಿಸಿತು.

    ಪಾಂಡ್ಯ ಸ್ಫೋಟಕ
    ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸೂಪರ್ ಆಗಿ ಬ್ಯಾಟ್ ಬೀಸಿದರು. ಕೊಹ್ಲಿ ಔಟ್ ಆದ ಬಳಿಕ ಬ್ಯಾಟಿಂಗ್ ಬಂದ ಪಾಂಡ್ಯ, 22 ಬಾಲಿನಲ್ಲಿ 3 ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿದರು. ಕೊನೆಯ ಓವರಿನಲ್ಲಿ 14 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಭಾರತಕ್ಕೆ ಗೆಲುವನ್ನು ತಂದಿಟ್ಟರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು.

    ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಈ ವೇಳೆ ಐದನೇ ಓವರ್ ಎರಡನೇ ಬಾಲಿಗೆ 22 ಬಾಲಿಗೆ 30 ರನ್ ಸಿಡಿಸಿದ್ದ ಕೆಎಲ್ ರಾಹುಲ್ ಅವರು ಆಂಡ್ರ್ಯೂ ಟೈ ಅವರಿಗೆ ಔಟ್ ಅದರು. ಈ ವೇಳೆ 9 ಓವರಿಗೆ ಇಂಡಿಯಾ ಒಂದು ವಿಕೆಟ್ ಕಳೆದುಕೊಂಡು 81 ರನ್ ಗಳಸಿತ್ತು.

    ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ಅರ್ಧಶತಕ ಸಿಡಿಸಿ ಮುನ್ನುಗುತ್ತಿದ್ದ ಶಿಖರ್ ಧವನ್ ಅವರು 36 ಬಾಲಿಗೆ 52 ರನ್ ಸಿಡಿಸಿ ಔಟ್ ಅದರು. ಶಿಖರ್ ಧವನ್ ನಂತರ ಬಂದು ಭರ್ಜರಿಯಾಗಿ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ 10 ಬಾಲಿಗೆ 15 ರನ್ ಹೊಡೆದು ಔಟ್ ಅದರು. ನಂತರ ವಿರಾಟ್ ಕೊಹ್ಲಿಯವರು ಕೂಡ 24 ಬಾಲಿಗೆ 40 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

    ಆ ನಂತರ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ತಾಳ್ಮೆಯ ಆಟಕ್ಕೆ ಮುಂದಾಗಿ ಭಾರತವನ್ನು ಗೆಲುವಿನ ಹಂತಕ್ಕೆ ತಂದರು. ಕೊನೆಯ ಎರಡು ಓವರಿನಲ್ಲಿ 26 ರನ್‍ಗಳ ಅವಶ್ಯಕತೆ ಇತ್ತು. ಆಗ ಹಾರ್ದಿಕ್ ಪಾಂಡ್ಯ ಎರಡು ಬೌಂಡರಿ ಸಿಡಿಸಿ 19ನೇ ಓವರಿನಲ್ಲಿ 12 ರನ್ ಬಂದಿತ್ತು. ಕೊನೆಯ ಓವರಿನಲ್ಲಿ 14 ರನ್ ಬೇಕಿತ್ತು. ಆ ಓವರಿನಲ್ಲಿ ಎರಡು ಸಿಕ್ಸರ್ ಸಿಡಿಸಿದ ಪಾಂಡ್ಯ ಇನ್ನೂ ಎರಡು ಬಾಲ್ ಉಳಿದಂತೆ ಭಾರತಕ್ಕೆ ಗೆಲುವು ತಂದಿತ್ತರು.

  • ಅಸೀಸ್ ವಿರುದ್ಧ ಟಿ-20 ಸರಣಿ ವಶಪಡಿಸಿಕೊಳ್ಳಲು ಭಾರತಕ್ಕೆ 195ರನ್‍ಗಳ ಗುರಿ

    ಅಸೀಸ್ ವಿರುದ್ಧ ಟಿ-20 ಸರಣಿ ವಶಪಡಿಸಿಕೊಳ್ಳಲು ಭಾರತಕ್ಕೆ 195ರನ್‍ಗಳ ಗುರಿ

    ಸಿಡ್ನಿ: ಇಂದು ನಡೆಯುತ್ತಿರುವ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇಂಡಿಯಾಗೆ 195ರನ್‍ಗಳ ಟಾರ್ಗೆಟ್ ನೀಡಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಮ್ಯಾಥ್ಯೂ ವೇಡ್ ಮತ್ತು ಡಿ ಆರ್ಸಿ ಶಾರ್ಟ್ ಉತ್ತಮ ಆರಂಭ ನೀಡಿದರು. ಆದರೆ 9 ರನ್ ಗಳಸಿದ್ದ ಡಿ ಆರ್ಸಿ ಶಾರ್ಟ್ ಟಿ ನಟರಾಜನ್ ಅವರ ಬೌಲಿಂಗ್‍ನಲ್ಲಿ ಐಯ್ಯರ್ ಗೆ ಕ್ಯಾಚ್ ನೀಡಿ ಹೊರನಡೆದರು. ಇದಾದ ನಂತರ ಭರ್ಜರಿಯಾಗಿ ಬ್ಯಾಟ್ ಬೀಸಿದ ವೇಡ್ 25 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ಕ್ಯಾಚ್ ಬಿಟ್ಟು ಕೊಹ್ಲಿ ಹೊಡೆದ ರನ್ ಔಟ್‍ಗೆ ವೇಡ್ 58 ರನ್‍ ಗಳಸಿ ಔಟ್ ಆದರು.

    ನಂತರ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅಬ್ಬರ ಆಟಕ್ಕೆ ಮುಂದಾದರು. ಫೋರ್ ಸಿಕ್ಸರ್ ಗಳ ಸುರಿಮಳೆಗೈಯುತ್ತಿದ್ದ ಈ ಜೋಡಿಗೆ 12ನೇ ಓವರ್ ನಾಲ್ಕನೇ ಬಾಲಿನಲ್ಲಿ ಶಾರ್ದೂಲ್ ಠಾಕೂರ್ ಶಾಕ್ ನೀಡಿದರು. 13 ಬಾಲಿಗೆ 22 ರನ್ ಗಳಸಿದ್ದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಮ್ಯಾಕ್ಸ್ ವೆಲ್ ಅವರನ್ನು ಔಟ್ ಮಾಡಿದರು. ಈ ನಂತರ 38 ಬಾಲಿಗೆ 46 ರನ್ ಸಿಡಿಸಿದ್ದ ಸ್ಟೀವನ್ ಸ್ಮಿತ್ ಚಹಲ್ ಅವರ ಬೌಲಿಂಗ್‍ನಲ್ಲಿ ಪಾಂಡ್ಯಗೆ ಕ್ಯಾಚ್ ಕೊಟ್ಟು ಹೊರನಡೆದರು.

    18ನೇ ಓವರಿನಲ್ಲಿ ದಾಳಿಗೆ ಬಂದ ನಟರಾಜನ್ ಅವರು ಮೂರನೇ ಬಾಲಿನಲ್ಲಿ 18 ಬಾಲಿಗೆ 26 ರನ್ ಗಳಿಸಿದ್ದ ಮೊಯಿಸಸ್ ಹೆನ್ರಿಕ್ಸ್ ಅವರನ್ನು ಬಲಿ ಪಡೆದುಕೊಂಡರು. ಆ ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಲಿಲ್ಲ. ಹೀಗಾಗಿ ಒಂದು ಹಂತದಲ್ಲಿ 200 ರನ್ ಗಡಿ ದಾಟುವ ಸನಿಹದಲ್ಲಿದ್ದ ಆಸೀಸ್ ಭಾರತ ಬಿಗಿ ಬೌಲಿಂಗ್ ದಾಳಿಯಿಂದ 194 ರನ್ ಗಳಸಿತು.

  • ಪಾಕ್ ಆಟಗಾರರೊಂದಿಗೆ ಭೋಜನ ಸವಿದ ಭಾರತೀಯ ಕ್ಯಾಬ್ ಡ್ರೈವರ್

    ಪಾಕ್ ಆಟಗಾರರೊಂದಿಗೆ ಭೋಜನ ಸವಿದ ಭಾರತೀಯ ಕ್ಯಾಬ್ ಡ್ರೈವರ್

    ಸಿಡ್ನಿ: ಕಾರಿನಲ್ಲಿ ಡ್ರಾಪ್ ಮಾಡಿ ಹಣ ಪಡೆಯಲು ಒಪ್ಪದ ಭಾರತೀಯ ಕ್ಯಾಬ್ ಡ್ರೈವರ್ ಅನ್ನು ಪಾಕಿಸ್ತಾನಿ ಆಟಗಾರರು ತಮ್ಮ ಜೊತೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಆಟಗಾರರು ಶಾಹೀನ್ ಶಾ ಅಫ್ರಿದಿ, ಯಾಸಿರ್ ಷಾ ಮತ್ತು ನಸೀಮ್ ಷಾ ಅವರು ಬ್ರಿಸ್ಬೇನ್‍ನಲ್ಲಿ ಊಟಕ್ಕೆ ಹೋಟೆಲ್ ಗೆ ಹೋಗಿದ್ದರು. ಆಟಗಾರರನ್ನು ಹೋಟೆಲಿಗೆ ಕರೆತಂದಿದ್ದ ಭಾರತೀಯ ಕ್ಯಾಬ್ ಚಾಲಕ ಹಣ ಪಡೆದಿರಲಿಲ್ಲ. ಹೀಗಾಗಿ ಆಟಗಾರರೆಲ್ಲರೂ ಚಾಲಕನನ್ನು ತಮ್ಮ ಜೊತೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಪಾಕಿಸ್ತಾನಿ ಕ್ರಿಕೆಟ್ ಆಟಗಾರರು ಭಾರತೀಯ ಕಾರು ಚಾಲಕನಿಗೆ ಊಟ ಕೊಡಿಸಿರುವ ಕಥೆಯನ್ನು ಟೆಸ್ಟ್ ಪಂದ್ಯದ ಕಾಮೆಂಟ್ರಿ ಮಾಡುವ ವೇಳೆ ಎಬಿಸಿ ರೇಡಿಯೊ ನಿರೂಪಕಿ ಅಲಿಸನ್ ಮಿಚೆಲ್ ಅವರು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್‍ಗೆ ಹೇಳಿದ್ದಾರೆ. ಕ್ರಿಕೆಟ್ ಆಟಗಾರರ ಜೊತೆ ಊಟ ಮಾಡುವ ಅವಕಾಶ ಸಿಕ್ಕ ನಂತರ ಕ್ಯಾಬ್ ಚಾಲಕ ಎಷ್ಟು ಉತ್ಸುಕನಾಗಿದ್ದ ಎಂಬುದನ್ನು ಅಲಿಸನ್ ಮಿಚೆಲ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    https://twitter.com/abcgrandstand/status/1198442285509357570

    ಈ ವಿಡಿಯೋದಲ್ಲಿ ನಿರೂಪಕಿ ಅಲಿಸನ್ ಮಿಚೆಲ್ ಅವರು ಇಂದು ನಾನು ನಿಮಗೆ ಒಂದು ಕಥೆಯನ್ನು ಹೇಳುತ್ತೇನೆ. ಆ ಮೂಲಕ ಇಂದಿನ ದಿನವನ್ನು ಆರಂಭ ಮಾಡೋಣ. ಆಗ ಮಿಚೆಲ್ ಪಾಕಿಸ್ತಾನಿ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕಾಗಿ ಬ್ರಿಸ್ಬೇನ್ ಬಂದಿದ್ದ ಪಾಕಿಸ್ತಾನಿ ಆಟಗಾರರು ಊಟಕ್ಕೆಂದು ಹೋಟೆಲ್ ಗೆ ಹೋಗಲು ಕ್ಯಾಬ್ ಬುಕ್ ಮಾಡುತ್ತಾರೆ.

    ಆಗ ಅಲ್ಲಿಗೆ ಬಂದ ಕ್ಯಾಬ್ ಚಾಲಕ ಒಬ್ಬ ಭಾರತೀಯ, ಅದೂ ಅಲ್ಲದೇ ಆತ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿರುತ್ತಾನೆ. ಪಾಕಿಸ್ತಾನ ಆಟಗಾರನ್ನು ಹತ್ತಿಸಿಕೊಂಡ ಆತ ಹೋಟೆಲ್ ಗೆ ಡ್ರಾಪ್ ಮಾಡುತ್ತಾನೆ. ನಂತರ ಆಟಗಾರರು ಅವನಿಗೆ ಹಣ ಕೊಡಲು ಹೋದಾಗ ಆತ ತೆಗೆದುಕೊಳ್ಳುವುದಿಲ್ಲ. ಆಗ ಪಾಕ್ ಆಟಗಾರರು ಆತನನ್ನು ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ ಊಟ ಕೊಡಿಸಿದ್ದಾರೆ ಎಂದು ಮಿಚೆಲ್ ಜಾನ್ಸನ್‍ಗೆ ಹೇಳಿದ್ದಾರೆ.

    ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಲವಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಭಾನುವಾರ ಬ್ರಿಸ್ಬೇನ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 5 ರನ್‍ಗಳಿಂದ ಸೋಲಿಸಿ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

  • ಮುದ್ದು ಮಗಳನ್ನು ಅನುಕರಣೆ ಮಾಡಿದ ತಂದೆ- ವಿಡಿಯೋ ಫುಲ್ ವೈರಲ್

    ಮುದ್ದು ಮಗಳನ್ನು ಅನುಕರಣೆ ಮಾಡಿದ ತಂದೆ- ವಿಡಿಯೋ ಫುಲ್ ವೈರಲ್

    ಕ್ಯಾನ್ಬೆರಾ: ದಂಪತಿಗೆ ಮಗು ಹುಟ್ಟಿದರೆ ಜವಾಬ್ದಾರಿ ಜಾಸ್ತಿ ಇರುತ್ತದೆ. ಅಲ್ಲದೆ ಅತ್ಯಂತ ಖುಷಿ ಹಾಗೂ ಪ್ರೀತಿಯಿಂದ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಬ್ಯುಸಿಯಾಗಿರುತ್ತಾರೆ. ಮಗುವಿನ ಜೊತೆ ತಾವೂ ಮಗುವಾಗಿ ಬಿಡುತ್ತಾರೆ. ಅಂತೆಯೇ ತಂದೆ ಹಾಗೂ ಮಗಳ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಹೌದು. ಆಸ್ಟ್ರೇಲಿಯಾದ ಸಿಡ್ನಿಯ ಕಾಮಿಡಿಯನ್ ಜೋಶ್ ಹಾವ್ಕಿನ್ಸ್ ಅವರು ಇತ್ತೀಚೆಗಷ್ಟೇ ಹೆಣ್ಣು ಮಗುವಿನ ತಂದೆಯಾದರು. ಆ ಬಳಿಕ ಅವರು ತಮ್ಮ ಹೆಚ್ಚಿನ ಸಮಯವನ್ನು ಮಗಳ ಆರೈಕೆಗೆಂದು ಮೀಸಲಿಟ್ಟಿದ್ದರು. ಹೀಗೆ ತಮ್ಮ ಮಗಳೊಂದಿಗೆ ಸಮಯ ಕಳೆಯುತ್ತಿರುವ ಕಾಮಿಡಿಯನ್ನು ಆಕೆಯ ಚಲನಚಲನವನ್ನು ಅನುಕರಿಸಲು ಪ್ರಾರಂಭಿಸಿದರು. ಅಲ್ಲದೆ ಅದನ್ನು ವಿಡಿಯೋ ಕೂಡ ಮಾಡಿಕೊಂಡರು.

    ವಿಡಿಯೋದಲ್ಲಿ ಮಗಳ ನಗು, ಅಚ್ಚರಿಯ ನೋಟ, ಕಣ್ಣುಗಳ ಚಲನೆ, ಆಕಳಿಗೆ, ಬೆರಳು ಚೀಪುವುದು.. ಹೀಗೆ ಆಕೆಯನ್ನು ಅನುಕರಣೆ ಮಾಡುವುದನ್ನು ಕಾಣಬಹುದಾಗಿದೆ. ಈ ವಿಡಿಯೋಗೆ ಹಾಲು ಕುಡಿಯುತ್ತಿರೋ ನನ್ನ ಮುದ್ದು ಮಗಳ ಮುಖವನ್ನು ಅನುಕರಿಸೋದು ಇದೀಗ ನನ್ನ ಹೊಸ ಫುಲ್ ಟೈಂ ಕೆಲಸವಾಗಿದೆ ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.

    ಸದ್ಯ ಈ ವಿಡಿಯೋ 4.9 ಕೋಟಿಗೂ ಹೆಚ್ಚು ವ್ಯೂವ್ಸ್ ಬಂದಿದ್ದು, ಸರಿಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಇದರೊಂದಿಗೆ ಕಾಮಿಡಿಯನ್ ಮುಖಭಾವ ನೋಡಿ ಜನ ನಗ್ತಿದ್ದಾರೆ. ಅಲ್ಲದೆ ಆಕೆಯನ್ನು ಅನುಕರಣೆ ಮಾಡಲು ಎಷ್ಟು ಸಮಯ ತೆಗೆದುಕೊಂಡಿರುವುದಾಗಿ ಪ್ರಶ್ನಿಸಿದ್ದಾರೆ.

  • ಬ್ಯಾಟ್ ಬೀಸಿ ನಾನು ಕೊಹ್ಲಿ ಎಂದ ಆಸಿಸ್ ಆಟಗಾರನ ಪುತ್ರಿ: ವಿಡಿಯೋ

    ಬ್ಯಾಟ್ ಬೀಸಿ ನಾನು ಕೊಹ್ಲಿ ಎಂದ ಆಸಿಸ್ ಆಟಗಾರನ ಪುತ್ರಿ: ವಿಡಿಯೋ

    ಸಿಡ್ನಿ: ಭಾರತ ನಾಯಕ ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಭಾರತದ ರನ್ ಮೆಷಿನ್ ವಿರಾಟ್‍ಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರ ಪುತ್ರಿ ಕೂಡ ಅಭಿಮಾನಿಯಾಗಿದ್ದಾಳೆ.

    ಐಪಿಎಲ್‍ನಲ್ಲಿ ಮಿಂಚುತ್ತಿರುವ ಡೇವಿಡ್ ವಾರ್ನರ್ ಬ್ಯಾಟಿಂಗ್ ವೈಖರಿಗೆ ಭಾರತದಲ್ಲೂ ಅಭಿಮಾನಿಗಳಿದ್ದಾರೆ. ಆದರೆ ಸ್ವತಃ ಅವರ ಮಗಳು ಐವಿ ಮಾ ಈಗ ಕೊಹ್ಲಿ ಅವರ ಅಭಿಮಾನಿಯಾಗಿದ್ದಾಳೆ. ಇದಕ್ಕೆ ಸಾಕ್ಷಿ ಎಂಬಂತೆ ಐವಿ ನಾನು ವಿರಾಟ್ ಕೊಹ್ಲಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಡೇವಿಡ್ ವಾರ್ನರ್ ಅವರ ಪತ್ನಿ ಕ್ಯಾಂಡಿಸ್ ವಾರ್ನರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದು, ಈ ಪುಟ್ಟ ಹುಡುಗಿ ಭಾರತದಲ್ಲಿ ತುಂಬಾ ಸಮಯವನ್ನು ಕಳೆದಿದ್ದಾಳೆ. ಆದರೆ ಅವಳು ವಿರಾಟ್ ಕೊಹ್ಲಿ ಜೊತೆ ಸಮಯ ಕಳೆಯಲು ಬಯಸುತ್ತಾಳೆ ಎಂದು ಬರೆದು ವಿರಾಟ್ ಕೊಹ್ಲಿಗೆ ಟ್ಯಾಗ್ ಮಾಡಿದ್ದಾರೆ.

    ವಾರ್ನರ್ ಪತ್ನಿ ಕ್ಯಾಂಡಿಸ್ ಸೆರೆಹಿಡಿದಿರುವ ಈ ವಿಡಿಯೋದಲ್ಲಿ, ವಾರ್ನರ್ ಜೊತೆ ಕ್ರಿಕೆಟ್ ಆಡುತ್ತಿರುವ ಐವಿ ನಾನು ವಿರಾಟ್ ಕೊಹ್ಲಿ ಎಂದು ಹಲವಾರು ಬಾರಿ ಹೇಳಿದ್ದಾಳೆ. ಜೊತೆಗೆ ಬ್ಯಾಟ್ ಬೀಸಿ ನಾನು ವಿರಾಟ್ ಕೊಹ್ಲಿ ಎಂದು ಹೇಳಿ ಬಾಲ್ ಅನ್ನು ಹೊಡೆದಿದ್ದಾಳೆ. ಸ್ಟಾರ್ ಬ್ಯಾಟ್ಸ್ ಮ್ಯಾನ್ ವಾರ್ನರ್ ಪುತ್ರಿಯೇ ನಾನು ವಿರಾಟ್ ಕೊಹ್ಲಿ ಆಗಬೇಕು ಎಂದು ಹೇಳಿರುವುದು ಇಲ್ಲಿ ವಿಶೇಷವಾಗಿದೆ.

    ವಿರಾಟ್ ಕೊಹ್ಲಿ ಐಪಿಎಲ್‍ನಲ್ಲಿ ಒಟ್ಟಾರೆ ಅತೀ ಹೆಚ್ಚು ರನ್ ಹೊಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಒಟ್ಟು 177 ಪಂದ್ಯಗಳಲ್ಲಿ 37.84 ಸರಾಸರಿಯಲ್ಲಿ 5,412 ರನ್ ಗಳಿಸಿದ್ದಾರೆ. ಐಪಿಎಲ್‍ನಲ್ಲಿ ಸಾರ್ವಕಾಲಿಕ ಅಗ್ರ ರನ್ ಗಳಿಸುವವರ ಪಟ್ಟಿಯಲ್ಲಿ ವಾರ್ನರ್ ನಾಲ್ಕನೇ ಸ್ಥಾನದಲ್ಲಿದ್ದು, 126 ಪಂದ್ಯಗಳಲ್ಲಿ 43.17 ರ ಸರಾಸರಿಯಲ್ಲಿ 4,706 ರನ್ ಗಳಿಸಿದ್ದಾರೆ.