Tag: swift car

  • ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರ್- ಓರ್ವನ ದುರ್ಮರಣ

    ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರ್- ಓರ್ವನ ದುರ್ಮರಣ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಇಲ್ಲಿನ ಭಟ್ಕಳ ಪಟ್ಟಣದ ಸಾಗರ ರಸ್ತೆಯ ಕಿತ್ತರೆ ಬಸ್ ನಿಲ್ದಾಣದ ಬನೀ ಅಪಘಾತ ಸಂಭವಿಸಿದೆ. 18 ವರ್ಷದ ಸೈಫನ್ ಮೃತ ಯುವಕ. ಘಟನೆಯಲ್ಲಿ ಗಾಯಗೊಂಡವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಕಾರಿನಲ್ಲಿದ್ದವರು ಭಟ್ಕಳ ಪಟ್ಟಣದ ಮದೀನಾ ಕಾಲೋನಿ ನಿವಾಸಿಗಳಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಭಟ್ಕಳಕ್ಕೆ ಬರುವಾಗ ಅಪಘಾತ ನಡೆದಿದೆ. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಪೋಷಕರೇ, ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗುವ ಮುನ್ನ ಈ ಸುದ್ದಿ ಓದಿ

    ಪೋಷಕರೇ, ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗುವ ಮುನ್ನ ಈ ಸುದ್ದಿ ಓದಿ

    ರಾಯಚೂರು: ಒಳಗಡೆಯಿಂದ ಲಾಕ್ ಆದ ಸ್ವಿಫ್ಟ್ ಕಾರಿನಲ್ಲಿ ನಾಲ್ಕು ವರ್ಷದ ಬಾಲಕ ಸುಮಾರು ಎರಡು ಗಂಟೆ ಕಾಲ ಪರದಾಡಿದ ಘಟನೆ ರಾಯಚೂರಿನ ಮಹಾವೀರ ವೃತ್ತದಲ್ಲಿ ನಡೆದಿದೆ.

    ಕಾರಲ್ಲಿ ಏಸಿ ಹಾಕಿ ಬಟ್ಟೆ ಅಂಗಡಿಗೆ ತೆರಳಿದ ಬಾಲಕನ ಪೋಷಕರು ಬರುವುದು ತಡವಾಗಿದ್ದರಿಂದ ಹೆದರಿದ ಬಾಲಕ ಅಳಲು ಶುರು ಮಾಡಿದ್ದಾನೆ. ರೆಡ್ಡಿ ಎಂಬವರ ಮಗು ಆಟವಾಡುತ್ತ ಒಳಗಿನಿಂದಲೇ ಕಾರ್ ಲಾಕ್ ಮಾಡಿಕೊಂಡಿದ್ದಾನೆ. ಇದನ್ನ ಗಮನಿಸಿದ ಸಾರ್ವಜನಿಕರು ಕಾರಿನ ಬಾಗಿಲು ತೆರೆಯಲು ಯತ್ನಿಸಿದರು ಸಾಧ್ಯವಾಗಿಲ್ಲ.

    ಕಾರಿನ ಕೀ ಒಳಗಡೆ ಇದ್ದಿದ್ದರಿಂದ ಮರಳಿ ಬಂದ ಪೋಷಕರಿಗೂ ಕಾರಿನ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಏನೇ ಪ್ರಯತ್ನ ಮಾಡಿದರೂ ಕಾರಿನ ಬಾಗಿಲು ತೆರೆಯದಿದ್ದರಿಂದ ಕೊನೆಗೆ ಕಾರಿನ ಗಾಜನ್ನ ಹೊಡೆದು ಬಾಲಕನನ್ನು ರಕ್ಷಿಸಲಾಯಿತು. ಇದಾದ ಬಳಿಕ ಪೋಷಕರು ಅಲ್ಲಿಂದ ಬಾಲಕನನ್ನು ಕರೆದುಕೊಂಡು ಹೋದರು.

  • ಬರದ ನಡುವೆಯೂ ಜನಪ್ರತಿನಿಧಿಗಳ `ಕಾರ್’ಬಾರ್- 13 ಹೊಸ ಸ್ವಿಫ್ಟ್ ಕಾರುಗಳ ಖರೀದಿ

    ಬರದ ನಡುವೆಯೂ ಜನಪ್ರತಿನಿಧಿಗಳ `ಕಾರ್’ಬಾರ್- 13 ಹೊಸ ಸ್ವಿಫ್ಟ್ ಕಾರುಗಳ ಖರೀದಿ

    ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಇಡೀ ರಾಜ್ಯ ಬರದ ಬೇಗೆಯಲ್ಲಿ ಸುಟ್ಟು ಹೋಗಿದೆ. ಹೀಗಿದ್ರೂ, ನಮ್ಮನ್ನಾಳುವ ಜನ ಪ್ರತಿನಿಧಿಗಳ ಶೋಕಿಗೆ ಮಾತ್ರ ಬರವಿಲ್ಲ. ಬರಗಾಲದಲ್ಲಿ ಜನ ಜಾನುವಾರು ಸಾಯ್ತಿದ್ರು ವಿಧಾನ ಪರಿಷತ್ ಸದಸ್ಯರಿಗೆ ಓಡಾಡೋಕೆ ಹೊಸ ಕಾರುಗಳನ್ನ ಖರೀದಿ ಮಾಡಲಾಗಿದೆ.

    ಇತ್ತೀಚೆಗೆ ಸುಮಾರು 87 ಲಕ್ಷ ರೂ. ಹಣ ಖರ್ಚು ಮಾಡಿ 13 ಹೊಸ ಸ್ವಿಫ್ಟ್ ಡಿಸೈರ್ ಕಾರ್‍ಗಳನ್ನು ಖರೀದಿ ಮಾಡಲಾಗಿದೆ. ಸದ್ಯ ವಿಧಾನ ಪರಿಷತ್ ಸೇವೆಗೆ ಸಭಾಪತಿಗಳು, ಸಭಾ ನಾಯಕರು, ವಿಪಕ್ಷ ನಾಯಕರು, ಸಚೇತಕರ ಕಾರುಗಳನ್ನು ಹೊರತುಪಡಿಸಿ 31 ಕಾರುಗಳು ಇವೆ. ಸದ್ಯ ಅವೆಲ್ಲ ಚೆನ್ನಾಗಿಯೇ ಓಡ್ತಿವೆ. ಹೀಗಿದ್ರೂ 13 ಹೊಸ ಕಾರುಗಳನ್ನ ಖರೀದಿಸಲಾಗಿದೆ. ಖರೀದಿಯಲ್ಲೂ ಅವ್ಯವಹಾರದ ಆರೋಪ ಕೇಳಿ ಬಂದಿದ್ದು ಈ ಮಾಡೆಲ್ ಕಾರಿನ ಬೆಲೆ 6 ಲಕ್ಷದಷ್ಟು ಇದೆ. ಆದ್ರೆ ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ ಒಂದು ಕಾರಿಗೆ ಸುಮಾರು 6.70 ಲಕ್ಷ ಖರ್ಚು ಮಾಡಲಾಗಿದೆ. ಅಂದರೆ ಒಂದು ಕಾರಿನ ಮೇಲೆ 70 ಸಾವಿರದಷ್ಟು ಹೆಚ್ಚು ಹಣ ನೀಡಲಾಗಿದೆ.

    ಕಾರುಗಳು ಸರಿಯಿದ್ರೂ ಅಥವಾ ಸಣ್ಣ ಪುಟ್ಟ ರಿಪೇರಿ ಇದ್ರೂ ಅದನ್ನು ಸರಿಪಡಿಸುವ ಬದಲಾಗಿ ಹೊಸ ಕಾರು ಖರೀದಿಸೋದು ಎಷ್ಟು ಸರಿ? ಬರದ ಹೊಡೆತಕ್ಕೆ ತತ್ತರಿಸಿರೋ ಇಂತಹ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಪ್ರಜ್ಞಾವಂತ ನಾಗರಿಕರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.