Tag: Swarna River

  • ಸ್ವರ್ಣ ನದಿಗೆ ಬಾಗಿನ ಅರ್ಪಿಸಿದ ಸುನಿಲ್ ಕುಮಾರ್

    ಸ್ವರ್ಣ ನದಿಗೆ ಬಾಗಿನ ಅರ್ಪಿಸಿದ ಸುನಿಲ್ ಕುಮಾರ್

    ಉಡುಪಿ: ನಗರದ ಜೀವನದಿ ಸ್ವರ್ಣೆಗೆ ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ದಂಪತಿ ಬಾಗಿನ ಅರ್ಪಿಸಿದರು. ಬಳಿಕ ಶೀಂಬ್ರ ಸಿದ್ಧಿವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಸಮೃದ್ಧಿಗಾಗಿ ಪ್ರಾರ್ಥಿಸಿದರು.

    ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟಿ ಉಡುಪಿ ನಗರದ ಜನರ ಜೀವನಾಡಿಯಾಗಿರುವ ಸ್ವರ್ಣ ನದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಕೆ ಮಾಡಿದರು. ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಹ ಏರ್ಪಡಿಸಲಾಗಿತ್ತು. ಸಚಿವ ಸುನಿಲ್ ಕುಮಾರ್ ಪತ್ನಿ ಪ್ರಿಯಾಂಕಾ ಜೊತೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸ್ವರ್ಣ ನದಿ ತಟದಲ್ಲಿ ಸುನಿಲ್ ಕುಮಾರ್ ದಂಪತಿ ಹಾಗೂ ಶಾಸಕ ರಘುಪತಿ ಭಟ್ ದಂಪತಿ ದೇವರಿಗೆ ಅರಶಿಣ, ಕುಂಕುಮ ಮಾಂಗಲ್ಯ ಸೀರೆ ಗಳನ್ನು ಅರ್ಪಣೆ ಮಾಡಿ ಆರತಿ ಎತ್ತಿ ಪೂಜಿಸಿದರು. ಇದನ್ನೂ ಓದಿ: ಜಾಲಿ ಮೂಡ್‍ನಲ್ಲಿ ಸಿದ್ದರಾಮಯ್ಯ- ದೆಹಲಿಯಲ್ಲಿ ಫುಲ್ ಶಾಪಿಂಗ್

    ಈ ಬಾರಿ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಜನರಿಗೆ ಕುಡಿಯುವ ನೀರಿನ ಅಭಾವ ಬರುವುದಿಲ್ಲ. ಮುಂದಿನ ವರ್ಷದೊಳಗೆ ಭಕ್ತರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಮಾಡುತ್ತದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸ್ನಾನ ಘಟ್ಟವನ್ನು ನಿರ್ಮಾಣ ಮಾಡುತ್ತೇವೆ ಎಂದರು.

    ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ಭಾರತೀಯ ಸಂಪ್ರದಾಯ. ನದಿ, ಬೆಟ್ಟ ಪ್ರಕೃತಿಯ ಬಗ್ಗೆ ನಮಗೆ ಪೂಜನೀಯ ಭಾವನೆ ಇದೆ. ನದಿಗಳು ವರ್ಷ ಪೂರ್ತಿ ಹರಿಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಕುಡಿಯಲು ಮತ್ತು ಕೃಷಿ ಚಟುವಟಿಕೆಗಳು ನಡೆಯಲು ಹಾಗೂ ಜಲಚರಗಳಿಗೆ ವರ್ಷಪೂರ್ತಿ ನದಿ ತುಂಬಿ ಹರಿಯಲಿ. ಸಮೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಡಿಸಿ ಕೂರ್ಮಾರಾವ್, ಎಸ್.ಪಿ ವಿಷ್ಣುವರ್ಧನ್, ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ತುಂಬಿ ಹರಿಯುತ್ತಿರೋ ಸ್ವರ್ಣಾ ನದಿ- 35 ಮಂದಿ ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್

    ತುಂಬಿ ಹರಿಯುತ್ತಿರೋ ಸ್ವರ್ಣಾ ನದಿ- 35 ಮಂದಿ ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್

    ಉಡುಪಿ: ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಉಡುಪಿ ಜಿಲ್ಲೆಯ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ತಟದ 35 ನಿವಾಸಿಗಳನ್ನು ಶಿಫ್ಟ್ ಮಾಡಲಾಗಿದೆ.

    ಸ್ವರ್ಣಾ ನದಿ ಬದಿಯಲ್ಲಿ ಬರುವ ಬಲ್ಲೆಕುದ್ರು, ಪಾಸ್ಕುದ್ರು, ಕೊಡಿಪಟ್ಲ, ಮೆಲ್ ಕೊಡಿಪಟ್ಲದಲ್ಲಿ ನಡುಗಡ್ಡೆಯ ವಾತಾವರಣ ಸೃಷ್ಟಿಯಾಗಿದೆ. ಕೆಲ ಮನೆಗಳಿಗೆ ನೀರು ನುಗ್ಗಿದೆ. ಸುವರ್ಣ ತಟದಲ್ಲಿ ಸ್ಥಳಗಳಲ್ಲಿ ಸಿಲುಕಿದ್ದ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು. ಆತಂಕದಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೊಟ್ ಮುಖಾಂತರ ರಕ್ಷಿಸಿ ದಡಕ್ಕೆ ತರಲಾಗಿದೆ.

    ಉಡುಪಿಯ ತಹಶೀಲ್ದಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಬಲೇಕುದ್ರು ಎಂಬಲ್ಲಿ ಒಂದೇ ಕುಟುಂಬದ ಎಂಟು ಮಂದಿಯನ್ನು ರಕ್ಷಣೆ ಮಾಡಲಾಯಿತು. 80 ವರ್ಷದ ಅಜ್ಜಿ 8 ತಿಂಗಳ ಹಸುಗೂಸು ಸೇರಿದಂತೆ ಎತ್ತರ ಪ್ರದೇಶಕ್ಕೆ ಕುಟುಂಬವನ್ನು ಅಗ್ನಿಶಾಮಕ ಇಲಾಖಾ ಸಿಬ್ಬಂದಿ ಮೂಲಕ ಶಿಫ್ಟ್ ಮಾಡಲಾಗಿದೆ.

    ಚಿಕ್ಕಮಗಳೂರು ಶಿವಮೊಗ್ಗದ ಗಡಿಭಾಗದಲ್ಲಿ, ಪಶ್ಚಿಮಘಟ್ಟದ ತಪ್ಪಲಿನಲ್ಲಿ ಭಾರೀ ಮಳೆ ಬಿದ್ದಿದ್ದರಿಂದ ನೀರಿನ ಮಟ್ಟ ಉಡುಪಿ ಜಿಲ್ಲೆಯ ನದಿಗಳಲ್ಲಿ ಏರಿಕೆಯಾಗಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ.

  • ಸ್ವರ್ಣ ನದಿಯ ಹೂಳೆತ್ತುವ ನೆಪದಲ್ಲಿ ಕೋಟ್ಯಂತರ ಮೌಲ್ಯದ ಮರಳು ಲೂಟಿ- ಕಾಂಗ್ರೆಸ್ ಆರೋಪ

    ಸ್ವರ್ಣ ನದಿಯ ಹೂಳೆತ್ತುವ ನೆಪದಲ್ಲಿ ಕೋಟ್ಯಂತರ ಮೌಲ್ಯದ ಮರಳು ಲೂಟಿ- ಕಾಂಗ್ರೆಸ್ ಆರೋಪ

    ಉಡುಪಿ: ಹೂಳೆತ್ತುವ ಯೋಜನೆಯನ್ನು ಬಳಸಿಕೊಂಡು ಸ್ವರ್ಣ ನದಿಯಿಂದ ಕೋಟ್ಯಂತರ ಮೌಲ್ಯದ ಮರಳು ದೋಚಲಾಗಿದೆ. ಅಪರ ಜಿಲ್ಲಾಧಿಕಾರಿ ನೇತೃತ್ವದ 14 ಜನರ ಸಮಿತಿ ಅಕ್ರಮ ಮಾಡಿದೆ ಅಂತ ಉಡುಪಿ ಜಿಲ್ಲಾ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

    ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮುಖಂಡರು, ಗುತ್ತಿಗೆಯನ್ನು ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಯೋಜಕ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಹೂಳು ತೆಗೆಯುವ ಎಲ್ಲಾ ನಿಯಮ ಗಾಳಿಗೆ ತೂರಲಾಗಿದೆ. ಹಿರಿಯಡ್ಕ ವ್ಯಾಪ್ತಿಯ ಕಾಡುಗಳಲ್ಲಿ ಅಕ್ರಮ ದಾಸ್ತಾನು ಮಾಡಲಾಗಿದೆ. ಬಹುಕೋಟಿ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ರಘುಪತಿ ಭಟ್, ಮರಳು ದಾಸ್ತಾನು ಮಾಡಿದ ಏರಿಯಾದ ಶಾಸಕ ಲಾಲಾಜಿ ಮೆಂಡನ್ ಉತ್ತರಿಸಬೇಕು ಎಂದು ಒತ್ತಾಯಿಸಿದರು.

    ಶಾಮೀಲಾದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಎಸಿಬಿ, ಲೋಕಾಯುಕ್ತಕ್ಕೆ ಕಾಂಗ್ರೆಸ್ ದೂರು ನೀಡಿದೆ. ಕೊರೊನಾ ಪರಿಸ್ಥಿತಿ ಬಳಸಿ ದೇಶದ ಸಂಪತ್ತು ಕೊಳ್ಳೆ ಹೊಡೆಯಲಾಗಿದೆ ಎಂದು ಈ ಹಿಂದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವೀಟ್ ಮಾಡಿದ್ದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಮಾತನಾಡಿ, ಆರಂಭದಲ್ಲಿ ಗೋಕುಲ್ ದಾಸ್ ಶೆಟ್ಟಿ ಎಂಬವರಿಗೆ ಟೆಂಡರ್ ಆಗಿತ್ತು. ಕಾನೂನು ಬಾಹಿರವಾಗಿ ಅದನ್ನು ರದ್ದು ಮಾಡಿ ಮಂಗಳೂರಿನ ಯೋಜಕ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ನಿಯಮಾವಳಿಯಂತೆ ಸ್ಥಳದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಇದ್ದು ಸಿಸಿಟಿವಿ ಅಳವಡಿಸಿ ಭದ್ರತಾ ಸಿಬ್ಬಂದಿ ನೇಮಿಸಬೇಕಿತ್ತು. ಮಣ್ಣು ಮತ್ತು ಮರಳನ್ನು ಬೇರ್ಪಡಿಸಿ ನಂತರ ಗಣಿ ಇಲಾಖೆಯ ಮೂಲಕ ಅದನ್ನು ಮಾರಾಟ ಮಾಡಬೇಕು ಎಂಬುದು ನಿಯಮ. ಆದರೆ ನಿಯಮವನ್ನು ಗಾಳಿಗೆ ತೂರಲಾಗಿದೆ. ಹೂಳು ತುಂಬಿದ ಪ್ರದೇಶವನ್ನು ಬಿಟ್ಟು ಅಣೆಕಟ್ಟಿನಿಂದ ದೂರ ಇರುವ ಶೀರೂರು, ಮಾಣೈ ಈ ಭಾಗದಲ್ಲೂ ಮರಳು ಕಳ್ಳತನ ಮಾಡಲಾಗಿದೆ ಎಂದರು.

    ನಗರಸಭೆ ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ಕೊರೊನಾ ವೈರಸ್ ನ ಲಾಕ್ ಡೌನ್ ನ ದುರ್ಲಾಭವನ್ನು ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜಿಲ್ಲೆಯ ಎಲ್ಲ ವಿಚಾರಗಳಿಗೆ ತಕ್ಷಣ ಸ್ಪಂದಿಸುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಕ್ಷೇತ್ರದ ಸಮಸ್ಯೆಗಳನ್ನು ಕಂಡು ಓಡೋಡಿ ಬರುವ ಶಾಸಕ ರಘುಪತಿ ಭಟ್ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಎಸಿಬಿ ಲೋಕಾಯುಕ್ತ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

  • ತುಂಬಿದ ಉಡುಪಿಯ ಸ್ವರ್ಣ ನದಿ – ನಗರಕ್ಕೆ 24 ಗಂಟೆ ವಾಟರ್ ಸಪ್ಲೈ

    ತುಂಬಿದ ಉಡುಪಿಯ ಸ್ವರ್ಣ ನದಿ – ನಗರಕ್ಕೆ 24 ಗಂಟೆ ವಾಟರ್ ಸಪ್ಲೈ

    ಉಡುಪಿ: ಜೂನ್ ತಿಂಗಳಲ್ಲಿ ಮುಂಗಾರು ಮಳೆ ಅಬ್ಬರ ಕಡಿಮೆಯಾದರೂ ಉಡುಪಿಯ ಸ್ವರ್ಣ ನದಿ ತುಂಬಿಕೊಂಡಿದೆ.

    ಮೇ ತಿಂಗಳಲ್ಲಿ ಉಡುಪಿ ನಗರವಾಸಿಗಳ ಕುಡಿಯುವ ನೀರಿನ ಆಸರೆಯಾಗಿದ್ದ ಸ್ವರ್ಣ ನದಿ ಸಂಪೂರ್ಣ ಬತ್ತಿತ್ತು. ಈ ಹಿನ್ನೆಲೆಯಲ್ಲಿ 10 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿತ್ತು. ಅಲ್ಲದೆ ಟ್ಯಾಂಕರ್ ಮೂಲಕ ಜನರಿಗೆ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಆದರೆ ಇದೀಗ ಮುಂಗಾರು ದುರ್ಬಲವಾದರೂ ಸ್ವರ್ಣ ನದಿ ತುಂಬಿಕೊಂಡಿದೆ.

    ಡ್ಯಾಂ ಕಡೆ ನಿರಂತರ ಹರಿವು ಇರುವುದರಿಂದ ನಗರಕ್ಕೆ 24 ಗಂಟೆ ನೀರು ಕೊಡಲು ನಗರಸಭೆ ನಿರ್ಧರಿಸಿದೆ. ಕಾರ್ಕಳ ತಾಲೂಕು ಮತ್ತು ಹೆಬ್ರಿ ತಾಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿರುವುದರಿಂದ ಸ್ವರ್ಣ ನದಿಗೆ ಎಲ್ಲಾ ಭಾಗದಿಂದ ನೀರು ಹರಿದುಬರುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಅರ್ಧದಷ್ಟೂ ಮಳೆ ಬಿದ್ದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

    ಉಡುಪಿನಲ್ಲಿ ಭಾಗೀರಥಿ ಜಯಂತಿ ದಿನದಂದು ಮಠದಲ್ಲಿ ಗಂಗಾರತಿ ಆಗುತ್ತಿದ್ದಂತೆ ಪವಾಡ ಎಂಬಂತೆ ಧೋ ಎಂದು ಮಳೆ ಸುರಿದಿತ್ತು. ಭಾಗೀರಥಿ ಜಯಂತಿ ಹಿನ್ನೆಲೆಯಲ್ಲಿ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಗಂಗೆಗೆ ಆರತಿಯೆತ್ತಿ, ವಿಶೇಷ ಪೂಜೆ ಸಲ್ಲಿಸಿದ್ದರು. ಬರ ನೀಗಿ- ವರ್ಷಧಾರೆಯಾಗಿ ರೈತರರು ಬೆಳೆದ ಬೆಳೆಗಳು ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದ್ದರು. ಅಷ್ಟಾಗುತ್ತಲೇ ಉಡುಪಿಯಲ್ಲಿ ಧೋ ಅಂತ ಮಳೆ ಸುರಿದಿತ್ತು.

  • ಸ್ವರ್ಣೆಯ ಒಡಲಲ್ಲಿ ಚಟಪಟ ಸದ್ದು – ಉಡುಪಿಯಲ್ಲಿ ಕೃಷ್ಣಾಂಗಾರಕ ಚತುರ್ದಶಿ ಪವಾಡ

    ಸ್ವರ್ಣೆಯ ಒಡಲಲ್ಲಿ ಚಟಪಟ ಸದ್ದು – ಉಡುಪಿಯಲ್ಲಿ ಕೃಷ್ಣಾಂಗಾರಕ ಚತುರ್ದಶಿ ಪವಾಡ

    ಉಡುಪಿ: ಕೃಷ್ಣಂಗಾರಕ ಚತುರ್ಥಿಯಂದು ಗಂಗಾಸ್ನಾನ ಮಾಡಿದ್ರೆ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಆದ್ರೆ ಪಾಪ ಕಳೆದುಕೊಳ್ಳಲು ಗಂಗಾನದಿಯ ತಟಕ್ಕೆ ಹೋಗುವುದು ಎಲ್ಲರಿಗೂ ಕಷ್ಟಸಾಧ್ಯ. ಹೀಗಾಗಿ ಗಂಗೆ ಉದ್ಭವವಾದ ಉಡುಪಿಯ ಸ್ವರ್ಣೆಯಲ್ಲೇ ಮಿಂದು ನೂರಾರು ಮಂದಿ ಭಕ್ತರು ಇಂದು ಪುನೀತರಾದರು.

    ಗಂಗಾಸ್ನಾನ ತುಂಗಾ ಪಾನ ಎಂಬ ಮಾತಿದೆ. ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ನಿವಾರಣೆ ಎಂಬ ನಂಬಿಕೆ ಭಕ್ತಕೋಟಿಯದ್ದು. ಈ ಹಿನ್ನೆಲೆಯಲ್ಲಿ ಮುರಳೀಲೋಲನ ನಗರಿ ಉಡುಪಿಯ ಸ್ವರ್ಣ ನದಿಯಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದರು. ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗಂಗಾಪೂಜೆ ಮಾಡಿದರು. ಸ್ವರ್ಣಗೆ ಬಾಗಿನ ಅರ್ಪಿಸಿದರು. ಉತ್ತರಾಧಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ನೂರಾರು ಭಕ್ತರೊಂದಿಗೆ ಪ್ರಾತಃಕಾಲದ ಪೂಜೆಯನ್ನು ಸ್ವರ್ಣೆಯ ನದಿ ತಟದಲ್ಲಿ ನೆರವೇರಿಸಿದರು.

    ಬಳಿಕ ಮಾತನಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕೃಷ್ಣಪಕ್ಷ ಚತುರ್ದಶಿ ತಿಥಿ ಮಂಗಳವಾರ ಬಂದ್ರೆ ಅಂದು ಕೃಷ್ಣಾಂಗಾರಕ ಚತುರ್ದಶಿ ಎಂದು ಅರ್ಥ. ಇಂದು ಪವಿತ್ರ ನದಿಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಆಗ್ತದೆ. ಈ ಭಾಗದಲ್ಲಿ ನೀರಲ್ಲಿ ಮುಳುಗು ಹಾಕುವಾಗ ನೀರಲ್ಲಿ ಟಣ್ ಟಣ್ ಸದ್ದು ಬರುತ್ತದೆ. ಪಾಪ ಸುಡುವ ಶಬ್ಧ ಅಂತ ವಾದಿರಾಜ ಸ್ವಾಮಿಗಳೇ ಬಣ್ಣಿಸಿದ್ದರು. ಕಾಡು, ನದಿ, ಬೆಟ್ಟ ಪರ್ವತ ಉಳಿದಷ್ಟು ಕಾಲ ಮನುಷ್ಯ ಸಂತತಿ ಭೂಮಿ ಯ ಮೇಲೆ ಉಳಿಯುತ್ತದೆ. ಹಾಗಾಗಿ ಪರಿಸರದ ರಕ್ಷಣೆ ಎಂದರೆ ನಮ್ಮನ್ನು ನಾವು ರಕ್ಷಿಸಿದಂತೆ. ಇಂತಹ ಆಚರಣೆಯಿಂದ ಪ್ರಾಕೃತಿಕ ಸಂಪತ್ತಿನ ಮೇಲೆ ಒಲವು ಮೂಡಿಸಲು ಸಾಧ್ಯವಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಇಂತಹ ಕಲ್ಪನೆ ಬರಬೇಕು ಎಂದು ಹೇಳಿದರು.

    ಕೃಷ್ಣಂಗಾರಕ ಚತುರ್ಥಿಯ ಹಿನ್ನೆಲೆಯಲ್ಲ ನೂರಾರು ಭಕ್ತರು ನದಿಯಲ್ಲಿ ತೀರ್ಥಸ್ನಾನ ಮಾಡಿದರು. ತೀರ್ಥಸ್ನಾನದ ನಂತರ ಪೇಜಾವರಶ್ರೀ ಶೀಂಬ್ರ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ವರ್ಣ ನದಿಯಲ್ಲಿ ಕರಾವಳಿಯ ಭಕ್ತರಿಗಿಂತ ಜಾಸ್ತಿ ರಾಜ್ಯದ ವಿವಿಧ ಭಾಗದ ಮಂದಿಯೇ ಪಾಲ್ಗೊಂಡರು. ಸ್ವರ್ಣ ನದಿಯಲ್ಲಿ ಮುಳುಗು ಹಾಕುವಾಗ ಚಟಪಟ ಎಂಬ ಸದ್ದು ಹೇಳಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಚಟಪಟ ಸದ್ದು ಕೇಳಿದ್ರೆ ಪಾಪಗಳೆಲ್ಲಾ ನಾಶವಾಯ್ತು ಎಂಬ ನಂಬಿಕೆಯಿದೆ. ಇದರ ಹಿಂದಿನ ಗುಟ್ಟು ವಿಜ್ಞಾನಿಗಳಿಂದ ಕಂಡುಹಿಡಿಯಲು ಸಾಧ್ಯವಾಗಿಲ್ಲ.

    ಬೆಂಗಳೂರಿನಿಂದ ತೀರ್ಥಸ್ನಾನ ಮಾಡಲು ಬಂದ ಭಕ್ತೆ ಸಾಕ್ಷಿ ಮಾತನಾಡಿ, ಮೊದಲ ಬಾರಿ ಬಂದು ತೀರ್ಥಸ್ನಾನ ಮಾಡಿದ್ದೇನೆ. ಮನಸ್ಸಿಗೆ ನೆಮ್ಮದಿ ಅನಿಸುತ್ತದೆ. ಪ್ರತೀ ವರ್ಷ ಬರುವ ಆಲೋಚನೆ ಇದೆ. ಪೇಜಾವರ ಕಿರಿಯ ಶ್ರೀಗಳ ಜೊತೆ ತೀರ್ಥಸ್ನಾನ ಮಾಡಿದ್ದು ಪುಣ್ಯದ ಫಲ ಎಂದರು.

    ಒಟ್ಟಿನಲ್ಲಿ ವಿಶೇಷ ದಿನಗಳಲ್ಲಿ ಶೀಂಬ್ರ ಕ್ಷೇತ್ರಕ್ಕೆ ನೂರಾರು ಭಕ್ತರು ಬರುತ್ತಾರೆ. ಆದ್ರೆ ನದಿಸ್ನಾನಕ್ಕೆ ಬರುವ ಭಕ್ತರಿಗೆ ಸ್ನಾನಘಟ್ಟದ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ಮಾಡಿದ್ರೆ ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೀಘ್ರವೇ ಮಳೆಯಾಗಿ, ಬತ್ತಿದ ಸ್ವರ್ಣೆ ತುಂಬಿ ಹರಿಯಲಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ನಮಾಜ್

    ಶೀಘ್ರವೇ ಮಳೆಯಾಗಿ, ಬತ್ತಿದ ಸ್ವರ್ಣೆ ತುಂಬಿ ಹರಿಯಲಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದಿಂದ ಸಾಮೂಹಿಕ ನಮಾಜ್

    ಉಡುಪಿ: ಈ ಬಾರಿ ರಾಜ್ಯ ಬರದಿಂದ ತತ್ತರಿಸಿ ಹೋಗಿದೆ. ಅತೀ ಹೆಚ್ಚು ಮಳೆ ಬೀಳುವ ಉಡುಪಿ ಜಿಲ್ಲೆಯೂ ಬರ ಪೀಡಿತ ಅಂತ ಘೋಷಣೆಯಾಗಿದೆ. ಕಳೆದೊಂದು ತಿಂಗಳಿಂದ ಸ್ವರ್ಣಾ ನದಿ ಬತ್ತಿ ಹೋಗಿದ್ದು, ಉಡುಪಿ ನಗರವಾಸಿಗಳಿಗೆ ಕುಡಿಯಲು ನೀರಿಲ್ಲ. ಪರಮಾತ್ಮ ಕರುಣೆ ತೋರು ಅಂತ ಉಡುಪಿಯ ಬ್ರಹ್ಮಗಿರಿ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಲಾಯ್ತು.

    ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತ ಮಳೆಗಾಗಿ ಕಾದು ಕಾದು ಸುಸ್ತಾದ ಜನ ದೇವರ ಮೊರೆ ಹೋಗಿದ್ದಾರೆ. ಉಡುಪಿಯ ಬ್ರಹ್ಮಗಿರಿಯಲ್ಲಿರುವ ಹಾಶೀಮಾ ಮಸೀದಿಯಲ್ಲಿ ಭಕ್ತರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 15 ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿರುತ್ತದೆ. ಆದ್ರೆ ಗಾಳಿ ಮೋಡವನ್ನೆಲ್ಲಾ ಹೊತ್ತುಕೊಂಡು ಸಾಗುತ್ತಿದೆ.

    ಈ ಸಂದರ್ಭದಲ್ಲಿ ಮಸೀದಿಯ ಮೌಲ್ವಿ ಹಶೀಂ ಉಮ್ರಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ದೇವರು ಮಳೆಯನ್ನು ಹಿಡಿದಿಟ್ಟುಕೊಂಡಿದ್ದಾನೆ. ಭೂಮಿ ಮೇಲಿರುವ ಜನಗಳು ಮಾಡಿರುವ ಪಾಪದಿಂದ ಈ ಸಮಸ್ಯೆಯಾಗಿದೆ. ಪಾಪ ಪರಿಹರಿಸಿ ಮಳೆ ಅನುಗ್ರಹಿಸಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಅಲ್ಲಾಹ್ ಕರುಣೆ ತೋರುತ್ತಾನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

    ನಮಾಜ್ ಹಾಲ್‍ನಲ್ಲಿ ಜಮಾಯಿಸಿ ಅಲ್ಲಾಹ್‍ನಲ್ಲಿ ಕಷ್ಟ ಪರಿಹರಿಸು ಅಂತ ಬೇಡಿಕೊಂಡರು. ಬರದ ಪರಿಸ್ಥಿತಿಯಲ್ಲಿ ಮಹಮ್ಮದ್ ಪೈಗಂಬರ್ ಅಂದು ಮಾಡಿದ ಪ್ರಾರ್ಥನಾ ಸಾಲುಗಳು ಖುರಾನ್‍ನಲ್ಲಿ ಉಲ್ಲೇಖವಾಗಿತ್ತು. ಅದೇ ಸಾಲುಗಳನ್ನು ಮಸೀದಿಯಲ್ಲಿ ಪಠಿಸಲಾಯ್ತು. ಉಡುಪಿಯ ಜೀವನದಿ ಸ್ವರ್ಣಾ ಹರಿವು ನಿಲ್ಲಿಸಿ ತಿಂಗಳು ಕಳೆದಿದೆ. ಹಳ್ಳಕೊಳ್ಳಗಳ ನೀರನ್ನು ಪಂಪ್ ಮಾಡಿ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತಿದೆ. ಭಗವಂತ ಕರುಣೆ ತೋರಿದ್ರೆ ಸಮಸ್ಯೆಯೆಲ್ಲಾ ಪರಿಹಾರವಾಗುತ್ತದೆ. ಪರಿಸರದ ಬಗ್ಗೆ ಜನರು ಕಾಳಜಿಯನ್ನು ಕಳೆದುಕೊಂಡಿದ್ದಾರೆ. ಮರ ಕಡಿಯಲಾಗುತ್ತಿದ್ದು, ಕಾಡು ನಾಶವಾಗಿದೆ. ಈಗಿನಿಂದಲೇ ಎಚ್ಚೆತ್ತುಕೊಳ್ಳದಿದ್ದರೆ ಈ ಸಮಸ್ಯೆ ದ್ವಿಗುಣವಾಗಲಿದೆ ಎಂದು ನಮಾಜ್ ಸಲ್ಲಿಸಿದ ಇಕ್ಬಾಲ್ ನಾಯರ್‍ಕೆರೆ ಆತಂಕ ವ್ಯಕ್ತಪಡಿಸಿದರು.