Tag: Sushil Kumar

  • ರಿಷಭ್ ಪಂತ್ ತಾಯಿಗೆ ಕರೆ ಮಾಡಿ ಅಭಯ ನೀಡಿದ ಮೋದಿ

    ರಿಷಭ್ ಪಂತ್ ತಾಯಿಗೆ ಕರೆ ಮಾಡಿ ಅಭಯ ನೀಡಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ತಾಯಿ ಹೀರಾಬೆನ್ ಕಳೆದುಕೊಂಡ ದುಃಖದಲ್ಲಿದ್ದರೂ ರಿಷಭ್ ಪಂತ್ (Rishabh Pant) ಅವರ ಆರೋಗ್ಯದ ಬಗ್ಗೆ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ಟ್ವೀಟ್ ಮೂಲಕ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ್ದ ಮೋದಿ ಅವರಿಂದು ಪಂತ್ ಅವರ ಕುಟುಂಬಕ್ಕೆ ಕರೆ ಮಾಡಿ ಅಭಯ ನೀಡಿದ್ದಾರೆ.

    ಇಂದು ಬೆಳಗ್ಗೆ ಪಂತ್ ಅವರ ತಾಯಿಗೆ ಕರೆ ಮಾಡಿ, ರಿಷಭ್ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ರಿಷಭ್ ಅವರು ಶೀಘ್ರವೇ ಗುಣಮುಖರಾಗಿ ಬರಲಿದ್ದಾರೆ. ಅದಕ್ಕೆ ಅಗತ್ಯ ರೀತಿಯ ಎಲ್ಲ ಸಹಕಾರಗಳನ್ನು ನೀಡಲಾಗುವುದು ಎಂದು ಅಭಯ ನೀಡಿದ್ದಾರೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    `ಖ್ಯಾತ ಕ್ರಿಕೆಟಿಗ ಪಂತ್ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿರುವುದನ್ನು ಅರಿತು ಪಂತ್‌ಗೆ ಅಪಘಾತವಾಗಿರುವ ಸುದ್ದಿ ಕೇಳಿ ದುಃಖವಾಗಿದೆ. ಆದಷ್ಟು ಬೇಗ ಆರೋಗ್ಯ ಸುಧಾರಿಸಲಿ, ಚೇತರಿಕೆ ಕಾಣಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ನಿನ್ನೆಯಷ್ಟೇ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ

    ಕ್ರಿಕೆಟ್ ನೋಡಬೇಡಿ: ರಿಷಭ್ ಪಂತ್ ಅವರನ್ನು ಅಪಘಾತ ಸ್ಥಳದಿಂದ ರಕ್ಷಿಸಿದ ಬಸ್ ಡ್ರೈವರ್ ಸುಶೀಲ್ ಕುಮಾರ್ ಘಟನೆಯ ಸನ್ನಿವೇಶವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಅವರನ್ನು ಗುರುತಿಸದಿದ್ದ ಮೇಲೆ ಕ್ರಿಕೆಟ್ ನೋಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

    ರಿಷಭ್ ಪಂತ್ ಅವರನ್ನು ನೋಡಿದಾಗ ಮುಖವೆಲ್ಲಾ ರಕ್ತದ ಮಡುವಿನಲ್ಲಿತ್ತು. ಬಟ್ಟೆ ಚಿಂದಿಯಾಗಿ ಅವರ ಬೆನ್ನೆಲ್ಲಾ ತರಚಿದ ಗಾಯಗಳಾಗಿತ್ತು. ಅತೀವ ನೋವಿನಿಂದ ಬಳಲಿದ್ದ ಅವರು ಕುಂಟುತ್ತಿದ್ದರು, ಎಂದು ಸುಶೀಲ್ ಕುಮಾರ್ ಸಂದರ್ಶನದಲ್ಲಿ ಘಟನೆಯ ವಿವರಗಳನ್ನು ತೆರೆದಿಟ್ಟಿದ್ದಾರೆ. ನಾವು ಸಹಾಯಕ್ಕಾಗಿ ಕೂಗಿದರೂ ಯಾರೊಬ್ಬರೂ ಬರಲಿಲ್ಲ. ರಾಷ್ಟ್ರೀಯ ಹೈದಾರಿ ಸಹಾಯವಾಣಿಗೆ ಕರೆ ಮಾಡಿದೆವು. ಯಾವ ಅಧಿಕಾರಿಗಳಿಂದಲೂ ಸ್ಪಂದನೆ ಸಿಗಲಿಲ್ಲ. ಬಳಿಕ ನಾನು ಪೊಲೀಸ್‌ಗೆ ಮಾಹಿತಿ ನೀಡಿದೆ. ಬಸ್ ಕಂಡಕ್ಟರ್ ಅಂಬುಲೆನ್ಸ್ಗೆ ಕರೆ ಮಾಡಿದರು. ಅವರ ಸ್ಥಿತಿ ಬಗ್ಗೆ ನಾವು ಕೇಳುತ್ತಲೇ ಇದ್ದೆವು. ನೀರು ಕೂಡ ಕೊಟ್ಟೆವು. ಕೊಂಚ ಸುಧಾರಿಸಿದ ಬಳಿಕ ಅವರೇ `ನಾನು ರಿಷಭ್ ಪಂತ್’ ಎಂದು ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.

    ಪಂತ್ ಉತ್ತರಾಖಂಡದಿಂದ ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಕೆಲ ಕ್ಷಣಗಳಲ್ಲೇ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದು ಗ್ರೇಟ್ ಎಸ್ಕೇಪ್ ಆಗಿದ್ದರು. ಸದ್ಯ ರಿಷಭ್ ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡಬೇಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    ನಾವು ಕೂಗಾಡಿದ್ರೂ ಸಹಾಯಕ್ಕೆ ಯಾರೊಬ್ಬರೂ ಬರಲಿಲ್ಲ- ಪಂತ್ ರಕ್ಷಿಸಿದ ಬಸ್ ಡ್ರೈವರ್‌ ಬಿಚ್ಚಿಟ್ಟ ಸತ್ಯ

    ಡೆಹ್ರಾಡೂನ್: ಅತ್ಯಂತ ಭೀಕರ ರಸ್ತೆ ಅಪಘಾತದಲ್ಲಿ (Road Accident) ಟೀಂ ಇಂಡಿಯಾ (Team India) ಸ್ಟಾರ್ ಆಟಗಾರ ರಿಷಭ್ ಪಂತ್ (Rishabh Pant) ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಪಂತ್ ಅವರ ರಕ್ಷಣೆಗೆ ಧಾವಿಸಿದ ಬಸ್ ಡ್ರೈವರ್‌ (Bus Driver) ಆ ಕ್ಷಣದ ರೋಚಕತೆಯನ್ನು ವಿವರಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ಪಂತ್ ಅವರನ್ನು ಘಟನಾ ಸ್ಥಳದಲ್ಲಿದ್ದವರು ರಕ್ಷಿಸಿದ್ದಾರೆ. ಅದರಲ್ಲೂ ಪಂತ್‌ಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬಸ್‌ನ ಡ್ರೈವರ್‌ ಸುಶೀಲ್ ಕುಮಾರ್ ( ಸಹಾಯಕ್ಕೆ ಮೊದಲಿಗರಾಗಿ ಧಾವಿಸಿದ್ದಾರೆ ಎಂಬುದು ಗೊತ್ತಾಗಿದೆ. ಬಳಿಕ ರಕ್ಷಣೆಗೆ ಧಾವಿಸಿದ ಬಸ್ ಡ್ರೈವರ್‌ ಸುಶೀಲ್ ಕುಮಾರ್ (Sushil Kumar) ಹಾಗೂ ಕಂಡಕ್ಟರ್ ಪರಮ್ ಜೀತ್‌ನನ್ನು (Paramjit) ಹರಿಯಾಣ ಸಾರಿಗೆ ಇಲಾಖೆ  ಉನ್ನತಾಧಿಕಾರಿಗಳು ಅಭಿನಂದಿಸಿದ್ದಾರೆ. ಸ್ಮರಣಿಕೆ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    ಅಪಘಾತಕ್ಕೀಡಾಗಿದ್ದ ವ್ಯಕ್ತಿ ಯಾರೆಂದು ತಿಳಿಯುವ ಮೊದಲೇ ಸಹಾಯಕ್ಕೆ ಧಾವಿಸಿದ್ದ ಸುಶೀಲ್ ಕುಮಾರ್ ಹೇಳಿರುವ ಪ್ರಕಾರ, ರಿಷಭ್ ಅವರ ಕಾರಲ್ಲಿದ್ದ ವಸ್ತುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಸುಶೀಲ್ ಕುಮಾರ್ ಅವೆಲ್ಲವನ್ನೂ ಸಂಗ್ರಹಿಸಿ ಪಂತ್‌ಗೆ ಹಿಂದಿರುಗಿಸಿದ್ದಾಗಿ ಹೇಳಿದ್ದಾರೆ. ಇದನ್ನೂ ಓದಿ: ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ

    ಪ್ರಾಥಮಿಕ ವರದಿಯ ಪ್ರಕಾರ, ಸ್ಥಳೀಯರು ಪಂತ್ ಅವರ ಸಾಮಗ್ರಿಗಳನ್ನು ಲೂಟಿ ಮಾಡಿದ್ದರು ಎಂಬುದು ವಾಸ್ತವಕ್ಕೆ ದೂರದ ಸಂಗತಿಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಆದರೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಅಧಿಕಾರಿಗಳು ಕೂಡ, ಯಾರೊಬ್ಬರೂ ಏನನ್ನೂ ಲೂಟಿ ಮಾಡಿಲ್ಲ ಎಂಬ ಸಂಗತಿಯನ್ನು ಖಾತ್ರಿ ಪಡಿಸಿದ್ದಾರೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಮೈ ಜುಮ್ಮೆನ್ನಿಸುವಂತಿತ್ತು ಆ ರೋಚಕ ಕ್ಷಣ?: ರಿಷಭ್ ಪಂತ್ ಅವರನ್ನು ನೋಡಿದಾಗ ಮುಖವೆಲ್ಲಾ ರಕ್ತದ ಮಡುವಿನಲ್ಲಿತ್ತು. ಬಟ್ಟೆ ಚಿಂದಿಯಾಗಿ ಅವರ ಬೆನ್ನೆಲ್ಲಾ ತರಚಿದ ಗಾಯಗಳಾಗಿತ್ತು. ಅತೀವ ನೋವಿನಿಂದ ಬಳಲಿದ್ದ ಅವರು ಕುಂಟುತ್ತಿದ್ದರು, ಎಂದು ಸುಶೀಲ್ ಕುಮಾರ್ ಸಂದರ್ಶನದಲ್ಲಿ ಘಟನೆಯ ವಿವರಗಳನ್ನು ತೆರೆದಿಟ್ಟಿದ್ದಾರೆ. ನಾವು ಸಹಾಯಕ್ಕಾಗಿ ಕೂಗಿದರೂ ಯಾರೊಬ್ಬರೂ ಬರಲಿಲ್ಲ. ರಾಷ್ಟ್ರೀಯ ಹೈದಾರಿ ಸಹಾಯವಾಣಿಗೆ ಕರೆ ಮಾಡಿದೆವು. ಯಾವ ಅಧಿಕಾರಿಗಳಿಂದಲೂ ಸ್ಪಂದನೆ ಸಿಗಲಿಲ್ಲ. ಬಳಿಕ ನಾನು ಪೊಲೀಸ್‌ಗೆ ಮಾಹಿತಿ ನೀಡಿದೆ. ಬಸ್ ಕಂಡಕ್ಟರ್ ಅಂಬುಲೆನ್ಸ್ಗೆ ಕರೆ ಮಾಡಿದರು. ಅವರ ಸ್ಥಿತಿ ಬಗ್ಗೆ ನಾವು ಕೇಳುತ್ತಲೇ ಇದ್ದೆವು. ನೀರು ಕೂಡ ಕೊಟ್ಟೆವು. ಕೊಂಚ ಸುಧಾರಿಸಿದ ಬಳಿಕ ಅವರೇ `ನಾನು ರಿಷಭ್ ಪಂತ್’ ಎಂದು ಹೇಳಿಕೊಂಡರು ಎಂದು ಆ ಕ್ಷಣದ ರೋಚಕತೆಯನ್ನು ವಿವರಿಸಿದ್ದಾರೆ.

    ನಾವು ರಕ್ಷಣೆಗೆ ಧಾವಿಸಿದಾಗ ರಿಷಭ್ ಪಂತ್ ನಮಗೆ ಅವರ ತಾಯಿಯ ನಂಬರ್ ಕೊಟ್ಟರು. ಆ ಸಂಖ್ಯೆಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಬಂದಿತು. 15 ನಿಮಿಷಗಳ ನಂತರ ಅಂಬುಲೆನ್ಸ್ ಬಂದಿತ್ತು. ರಸ್ತೆಯಲ್ಲಿ ಬಿದ್ದಿದ್ದ ಅವರ ಹಣವನ್ನು ಒಗ್ಗೂಡಿಸಿಕೊಟ್ಟೆವು. ಕಾರಿನಲ್ಲಿ ಬೇರೆ ಯಾರಾದ್ರೂ ಇದ್ದಾರೆಯೇ ಎಂದೆಲ್ಲಾ ವಿಚಾರಿಸಿದೆವು. ಕಾರಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಅವರು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸಾಗರ್ ರಾಣಾ ಹತ್ಯೆ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಸುಶೀಲ್ ಕುಮಾರ್

    ಸಾಗರ್ ರಾಣಾ ಹತ್ಯೆ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಸುಶೀಲ್ ಕುಮಾರ್

    ನವದೆಹಲಿ: ರೆಸ್ಲರ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್ ದೆಹಲಿಯ ರೋಹಿಣಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

    ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4ರಂದು ಸಾಗರ್ ರಾಣಾ ಕೊಲೆಯಾಗಿದ್ದರು. ಬಳಿಕ ಸುಶೀಲ್ ಹಾಗೂ ಸಾಗರ್ ರಾಣಾ ನಡುವಣ ಘರ್ಷಣೆಯಲ್ಲಿ ಸಾಗರ್ ಹತ್ಯೆಗೀಡಾಗಿದ್ದರು ಎಂದು ವರದಿಯಾಗಿತ್ತು. ನಂತರ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಸುಶೀಲ್ ಕುಮಾರ್ ಮತ್ತು ಅವರ ಸ್ನೇಹಿತನನ್ನು ಮೇ 23ರಂದು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ಇದನ್ನೂ ಓದಿ: ಕುಸ್ತಿಪಟು ಸುಶೀಲ್ ಕುಮಾರ್​ಗೆ 14 ದಿನ ನ್ಯಾಯಾಂಗ ಬಂಧನ

    ದೆಹಲಿ ನ್ಯಾಯಾಲಯ ಸುಶೀಲ್ ಕುಮಾರ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿತ್ತು. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸುಶೀಲ್ ಕುಮಾರ್ ಜಾಮೀನು ಕೋರಿ ಅರ್ಜಿಸಲ್ಲಿಸಿದ್ದಾರೆ. ಇದನ್ನೂ ಓದಿ: ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

     

  • ಕುಸ್ತಿಪಟು ಸುಶೀಲ್ ಕುಮಾರ್​ಗೆ 14 ದಿನ ನ್ಯಾಯಾಂಗ ಬಂಧನ

    ಕುಸ್ತಿಪಟು ಸುಶೀಲ್ ಕುಮಾರ್​ಗೆ 14 ದಿನ ನ್ಯಾಯಾಂಗ ಬಂಧನ

    ನವದೆಹಲಿ: ರೆಸ್ಲರ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಬಂಧನವಾಗಿರುವ ಕುಸ್ತಿಪಟು ಸುಶೀಲ್ ಕುಮಾರ್​ಗೆ 14ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ದೆಹಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ಸುಶೀಲ್ ಕುಮಾರ್ ಅವರನ್ನು 4 ದಿನ ಪೊಲೀಸ್ ಕಸ್ಟಡಿ ನೀಡಬೇಕೆಂದು ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸುಶೀಲ್ ಕುಮಾರ್ ಬಂಧನ

    ಏನಿದು ಪ್ರಕರಣ
    ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4ರಂದು ಸಾಗರ್ ರಾಣಾ ಕೊಲೆಯಾಗಿದ್ದರು. ಬಳಿಕ ಸುಶೀಲ್ ಹಾಗೂ ಸಾಗರ್ ರಾಣಾ ನಡುವಣ ಘರ್ಷಣೆಯಲ್ಲಿ ಸಾಗರ್ ಹತ್ಯೆಗೀಡಾಗಿದ್ದರು ಎಂದು ವರದಿಯಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ರನ್ನು ಬಂಧಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದರು. ನಂತರ ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಪೊಲೀಸರು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ, ಆತನ ಸಹಚರ ಅಜಯ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ ಬಹುಮಾನ ಕೂಡ ಘೋಷಿಸಿದ್ದರು.

    ಇದಾದ ಬಳಿಕ ಮೇ 18ರಂದು ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ರೋಹಿಣಿ ನ್ಯಾಯಾಲಯ ವಜಾಗೊಳಿಸಿತ್ತು. ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಸುಶೀಲ್ ಕುಮಾರ್ ಮತ್ತು ಅವರ ಸ್ನೇಹಿತನನ್ನು ಮೇ 23ರಂದು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ಇದನ್ನೂ ಓದಿ: ಸುಶೀಲ್ ಕುಮಾರ್​ಗೆ ಶಾಕ್‍ಕೊಟ್ಟ ರೈಲ್ವೇ ಇಲಾಖೆ

    ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಮತ್ತು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜಯಿಯಾಗಿದ್ದರು.

  • ಸುಶೀಲ್ ಕುಮಾರ್​ಗೆ ಶಾಕ್‍ಕೊಟ್ಟ ರೈಲ್ವೇ ಇಲಾಖೆ

    ಸುಶೀಲ್ ಕುಮಾರ್​ಗೆ ಶಾಕ್‍ಕೊಟ್ಟ ರೈಲ್ವೇ ಇಲಾಖೆ

    ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಕಸ್ಟಡಿಯಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಉತ್ತರ ರೈಲ್ವೇ ಇಲಾಖೆ ಸರ್ಕಾರಿ ಹುದ್ದೆಯಿಂದ ಅಮಾನತು ಮಾಡಿದೆ.

    ಕುಸ್ತಿಪಟು ಸಾಗರ್ ಧನ್ಕರ್ ಅವರ ಹತ್ಯೆ ಪ್ರಕರಣದಲ್ಲಿ ದೆಹಲಿಯ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಬಂಧಿತ ಸುಶೀಲ್ ಕುಮಾರ್ ಹಾಗೂ ಆತನ ಸಹಚರರು ಪೊಲೀಸರ ವಶದಲ್ಲಿದ್ದಾರೆ.

    2015ರಲ್ಲಿ ಸುಶೀಲ್ ಕುಮಾರ್ ಉತ್ತರ ರೈಲ್ವೇ ಇಲಾಖೆಯ ಸೀನಿಯರ್ ಕಮರ್ಷಿಯಲ್ ಮ್ಯಾನೇಜರ್ ಆಗಿದ್ದರು. ಅಲ್ಲದೇ ಶಾಲಾ ಮಟ್ಟದ ಕ್ರೀಡೆಗಳ ಅಭಿವೃದ್ಧಿಯ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ನೇಮಕಗೊಂಡಿದ್ದರು.

    ಸರ್ಕಾರಿ ನೌಕರನ ಮೇಲೆ ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ. ತನಿಖೆ ಮುಗಿಯುವವರೆಗೂ ಸುಶೀಲ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಮುಂದಿನ ಆದೇಶದವರೆಗೆ ಈ ಹುದ್ದೆಯನ್ನು ಅಮಾನತು ಮಾಡಿಡಲಾಗಿದೆ ಎಂದು ಉತ್ತರ ರೈಲ್ವೇ ತಿಳಿಸಿದೆ.

  • ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸುಶೀಲ್ ಕುಮಾರ್ ಬಂಧನ

    ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸುಶೀಲ್ ಕುಮಾರ್ ಬಂಧನ

    ನವದೆಹಲಿ: ರೆಸ್ಲರ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಭಾರತದ ಪರ ಎರಡು ಬಾರಿ ಪದಕ ಗೆದ್ದಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿದೆ.

    ಕಳೆದ 20ದಿನಗಳಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಅವರನ್ನು ಇಂದು ದೆಹಲಿ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಈ ಕುರಿತು ಅಧಿಕೃತವಾಗಿ ತಿಳಿಸಿರುವ ದೆಹಲಿ ಪೊಲೀಸರು, ಸುಶೀಲ್ ಕುಮಾರ್ ಮತ್ತು ಸಹಚರನನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4 ರಂದು ಸಾಗರ್ ರಾಣಾ ಕೊಲೆಯಾಗಿದ್ದರು. ಬಳಿಕ ಸುಶೀಲ್ ಹಾಗೂ ಸಾಗರ್ ರಾಣಾ ನಡುವಣ ಘರ್ಷಣೆಯಲ್ಲಿ ಸಾಗರ್ ಹತ್ಯೆಗೀಡಾಗಿದ್ದರು ಎಂದು ವರದಿಯಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ರನ್ನು ಬಂಧಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದರು. ನಂತರ ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಪೊಲೀಸರು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ, ಆತನ ಸಹಚರ ಅಜಯ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ ಬಹುಮಾನ ಕೂಡ ಘೋಷಿಸಿದ್ದರು.

    ಇದಾದ ಬಳಿಕ ಮೇ 18ರಂದು ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ರೋಹಿಣಿ ನ್ಯಾಯಾಲಯ ವಜಾಗೊಳಿಸಿತ್ತು. ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಸುಶೀಲ್ ಕುಮಾರ್ ಮತ್ತು ಅವರ ಸ್ನೇಹಿತನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಮತ್ತು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜಯಿಯಾಗಿದ್ದರು.

  • ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂದ್ಕೊಂಡಿದ್ದೆ: ವಿಜಿ ಕಂಬನಿ

    ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂದ್ಕೊಂಡಿದ್ದೆ: ವಿಜಿ ಕಂಬನಿ

    – ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅನಿಸ್ತಿಲ್ಲ

    ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಸಹ ನಟ ಸುಶೀಲ್ ಕುಮಾರ್ ಸಾವಿಗೆ ‘ಸಲಗ’ ಚಿತ್ರತಂಡ ಕಂಬನಿ ಮಿಡಿದಿದೆ.

    ಸುಶೀಲ್ ಕುಮಾರ್ ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದು, ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಜಿಮ್ ತೆರೆದಿರಲಿಲ್ಲ. ಹೀಗಾಗಿ ಮೂರು ತಿಂಗಳ ಹಿಂದೆ ಮಂಡ್ಯಗೆ ಬಂದು ನೆಲೆಸಿದ್ದರು. ಆದರೆ ಸುಶೀಲ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅವರ ಕಷ್ಟ ಏನಾದರೂ ಹೇಳಿಕೊಂಡಿದ್ದರೆ. ನಾವಾದರೂ ಸಹಾಯ ಮಾಡುತ್ತಿದ್ವಿ. ಆದರೆ ಸುಶೀಲ್ ಯಾರಿಗೂ ತಮ್ಮ ಕಷ್ಟ ಹೇಳಿಕೊಳ್ಳದೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ನಟ ದುನಿಯಾ ವಿಜಿ ಕೂಡ ಸುಶೀಲ್ ಸಾವಿಗೆ ಕಂಬನಿ ಮಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುಶೀಲ್ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡುತ್ತಿದ್ದರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂತ ಮನಸ್ಸಲ್ಲೇ ಅಂದುಕೊಂಡಿದ್ದೆ. ಆದರೆ ಅದೇನಾಯ್ತೋ ಗೊತ್ತಿಲ್ಲ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಗೊತ್ತಾಯ್ತು. ನನಗೆ ಈಗಲೂ ನಂಬಲು ಆಗುತ್ತಿಲ್ಲ. ಇಂಡಸ್ಟ್ರೀನಲ್ಲಿ ಬೆಳೆಯಬೇಕು ಅಂತ ಬರೋರು ಸಿನಿಮಾದಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕಮೇಲೂ ಚಿತ್ರ ಬಿಡುಗಡೆಗೂ ಕಾಯದೆ ಆತ್ಮಹತ್ಯೆ ಮಾಡಿಕೊಳ್ಳುವುದು ಅಂದರೆ ಏನು? ನಿಮ್ಮ ಸಮಸ್ಯೆ ಎಷ್ಟೇ ದೊಡ್ಡದಿರಬಹುದು. ಆದರೆ ಸಾವು ಅದಕ್ಕೆ ಪರಿಹಾರವಾಗುತ್ತಾ? ಸಮಸ್ಯೆಗೆಲ್ಲ ಸಾವಲ್ಲೇ ಉತ್ತರ ಕಾಣೋದಾದರೆ ಬಹುಶಃ ಭೂಮಿಯಲ್ಲಿ ಯಾರೊಬ್ಬರೂ ಉಳಿದಿರಲ್ಲ ಅನ್ಸುತ್ತೆ” ಎಂದು ಬೇರಸರಿಂದ ಹೇಳಿದ್ದಾರೆ.

    ಸುಶೀಲ್ ವಯಸ್ಸು ಮೂವತ್ತರ ಆಸುಪಾಸು ಇರಬಹುದು. ನಮ್ಮ ಜೊತೆ ಶೂಟಿಂಗಲ್ಲಿದ್ದಿದ್ದು ಬೆರಳೆಣಿಕೆ ದಿನಗಳಷ್ಟೇ. ಅಷ್ಟಕ್ಕೇನೇ ನಮಗಿಷ್ಟೊಂದು ನೋವಾಗುತ್ತಿದೆ. ಹಾಗಾದರೆ ಈ ಮೂವತ್ತು ವರ್ಷಗಳ ಕಾಲ ಜತೆಗಿದ್ದ ಮನೆಯವರಿಗೆ ಹೇಗಾಗಬೇಡ. ಸತ್ತ ಮೇಲೆ ಮಾತನಾಡಿ ಉಪಯೋಗವಿಲ್ಲ ನಿಜ. ಆದರೆ ನನಗೇನೋ ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅಂತ ಅನಿಸುತ್ತಿಲ್ಲ. ಯಾಕೆಂದರೆ ಪರಿಸ್ಥಿತಿ ಆ ರೀತಿ ಇದೆ. ಜನ ಕೊರೊನಾ ರೋಗಕ್ಕಷ್ಟೇ ಭಯಪಡುತ್ತಿಲ್ಲ. ಕೆಲಸ ಇರದೆ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.

     

    ಹಾಗಾಗಿ ನನ್ನ ಮನವಿ ಅಂಥವರಿಗೂ ಕೂಡ ಆಗಿದೆ. ನಾವೆಲ್ಲ ರಾಮ ಸೀತೆ ಕಥೆ ಕೇಳಿಯೇ ಬೆಳೆದಿರುತ್ತೇವೆ. ದೇವರಾಗಿದ್ದರೂ ಮನುಷ್ಯ ರೂಪದಲ್ಲಿ ಎಷ್ಟೊಂದು ಕಷ್ಟ ಅನಿಭವಿಸಬೇಕಾಗಿತ್ತೆ ಅನ್ನೋದು ಅದರ ತಾತ್ಪರ್ಯ. ಅಂಥ ಕಷ್ಟ ನಮಗೆಲ್ಲ ಬಂದೇ ಇರುವುದಿಲ್ಲ. ಆದರೂ ಬದುಕು ಸಾಕಾಗಿ ಬಿಡುತ್ತದೆ ಅನ್ನೋದೇ ವಿಪರ್ಯಾಸ. ನಮ್ಮ ಧರ್ಮ ಓದಿ ಕೈ ಮುಗಿಯೋಕಷ್ಟೇ ಇರೋದಲ್ಲ. ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲಿ ಸ್ಟಾರಾಗಿರೋ ಪ್ರತಿಯೊಬ್ಬರೂ ಒಂದಲ್ಲ ಒಮ್ಮೆ ಪಾತಾಳದಷ್ಟು ಕಷ್ಟ ಕಂಡೇ ಇರುತ್ತಾರೆ. ಅಭಿಮನ್ಯು ತರಹ ಒಳಗೆ ಬರುವ ಕಥೆ ಮಾತ್ರ ತಿಳಿದು ಮುನ್ನುಗ್ಗಿ ಬಂದು ಕೈ ಚೆಲ್ಲಿದರೆ ಅದು ಸಾಧನೆ ಅಲ್ಲ, ವೇದನೆ” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.

    “ನೀವೇನೂ ಸತ್ತು ಹೋಗುತ್ತೀರಿ, ನಿಮಗೆ ಬೆಂಕಿ ಇಡಬೇಕಾದರೆ ಅಲ್ಲಿ ಜೀವ ಇರುವುದಿಲ್ಲ. ಆದರೆ ಜೊತೆಗಿರುವ ತಾಯಿ, ತಂದೆ, ಮಡದಿ ಜೀವನಪೂರ್ತಿ ಬೆಂಕಿಯಲ್ಲಿದ್ದಂಥ ಬದುಕು ಕೊಡುತ್ತೀರಲ್ಲ? ಇದೇನು ನ್ಯಾಯ? ಆತ್ಮಹತ್ಯೆ ಖಂಡಿತವಾಗಿ ತಪ್ಪು ಎಂದು ಪ್ರಶ್ನೆ ಮಾಡಿದರು. ಸುಶೀಲ್ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ ಮುಂದೆ ಯಾವ ತಂದೆ ತಾಯಿಗೂ ಇಂತಹ ದುಃಖ ಎದುರಿಸುವ ಸಂದರ್ಭ ಬಾರದಿರಲಿ” ಎಂದು ದುನಿಯಾ ವಿಜಯ್ ಸುಶೀಲ್ ಸಾವಿಗೆ ಕಂಬನಿ ಮಿಡಿದಿದ್ದಾರೆ.