ಬೆಂಗಳೂರು: ಜಾರಿ ನಿರ್ದೇಶಾಲಯ ಸಚಿವ ಡಿ.ಕೆ. ಶಿವಕುಮಾರ್ ಅವರ ಎಫ್ಐಆರ್ ಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಡಿ.ಕೆ ಸುರೇಶ್ ತಡರಾತ್ರಿ ಅಣ್ಣನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಶನಿವಾರ ತಡರಾತ್ರಿ ಸುಮಾರು 11.30 ಗಂಟೆಗೆ ಶಿವಕುಮಾರ್ ಮನೆಗೆ ಸುರೇಶ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಸುರೇಶ್ ಅವರು ಶುಕ್ರವಾರ ಬೆಳಗ್ಗೆ ದೆಹಲಿಗೆ ಹೋಗಬೇಕಿತ್ತು. ಆದರೆ ಮಾಧ್ಯಮಗಳಲ್ಲಿ ವದಂತಿ ಬಂದ ಹಿನ್ನೆಲೆಯಲ್ಲಿ ಇಲ್ಲಿಯೇ ಉಳಿದುಕೊಂಡಿದ್ದಾರೆ ಅಂತ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮತಾನಾಡುತ್ತಾ ತಿಳಿಸಿದ್ದಾರೆ.
ನಮ್ಮ ಮನೆಗೆ ನಾನು ಭೇಟಿ ಕೊಡುವುದಕ್ಕೆ ಯಾರದ್ದಾದರೂ ಒಪ್ಪಿಗೆ ತೆಗೆದುಕೊಳ್ಳಬೇಕಾ. ನಮ್ಮ ಮನೆಗೆ ನಾನು ಬರುವುದಕ್ಕೆ, ನಮ್ಮ ಅಣ್ಣನ ಜೊತೆ ನಾನು ಮಾತನಾಡುವುದಕ್ಕೆ ಯಾರಿಗಾದರೂ ಹೇಳಿ ಬರಬೇಕಾ ಎಂದು ಪ್ರಶ್ನಿಸಿದ್ದಾರೆ. ಅವರು ಸಿಗುವುದೇ ರಾತ್ರಿ ಹೊತ್ತು. ಹಾಗಾಗಿ ಭೇಟಿ ಮಾಡಿದ್ದೇನೆ. ನನಗೆ ಏನು ವಿಚಾರಗಳು ಗೊತ್ತಿದಿಯೋ ಆ ವಿಚಾರಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ನಾವು ಏನೂ ತಪ್ಪು ಮಾಡಿಲ್ಲ. ಉಹಾ ಪೋಹಗಳು ನಡೆಯುತ್ತಿವೆ. ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರ ಪಡೆಯಲು ಮುಂದಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡಿ ಅವರು ಎಫ್ಐಆರ್ ಮಾಡಿದರೆ ನಾವು ಉತ್ತರ ಕೊಡುತ್ತೇವೆ. ಅರೆಸ್ಟ್ ಮಾಡುತ್ತಾರೋ ಮಾಡಲಿ. ನಾನಾಗಲಿ, ಡಿಕೆ ಶಿವಕುಮಾರ್ ಆಗಲಿ ಭಯ ಪಡುವ ಪ್ರಮೇಯವೇ ಇಲ್ಲ. ಸರ್ಕಾರ ಹಾಗೂ ನಾವು ಇದನ್ನು ಎದುರಿಸುತ್ತೇವೆ ಅಂತ ಸಂಸದ ಡಿಕೆ ಸುರೇಶ್ ಖಡಕ್ಕಾಗಿ ಹೇಳಿದ್ದಾರೆ.
ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಎಫ್ಐಆರ್ ದಾಖಲಿಸುವ ಪ್ರಯತ್ನ ನಡೆಸುತ್ತಿದ್ದ ಬೆನ್ನಲ್ಲೇ ಸಹೋದರ ಸಂಸದ ಡಿ.ಕೆ. ಸುರೇಶ್ ಅವರು ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನಾವು ಈಗಾಗಲೇ ಹಿರಿಯ ಅಧಿಕಾರಿಗಳನ್ನ ಮತ್ತು ವಕೀಲರನ್ನು ಭೇಟಿ ಮಾಡಿ ಸತ್ಯಾಸತ್ಯತೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಬಳಿ ಇರುವ ಎಲ್ಲ ಲೆಕ್ಕಗಳಿಗೆ ಐಟಿಗೆ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದರು.
ಸದ್ಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ. ಕಾನೂನು, ಸಂವಿಧಾನದ ಮೇಲೆ ಗೌರವವಿದೆ. ಭಯದಿಂದ ಈ ಸುದ್ದಿಗೋಷ್ಠಿ ಮಾಡುತ್ತಿಲ್ಲ. ಬಿಜೆಪಿ ಅವರ ದುರಾಡಳಿತ, ಅವರು ಯಾವ ರೀತಿ ವಿರೋಧ ಪಕ್ಷದ ಮೇಲೆ ಗದಾಪ್ರಹಾರ ಮತ್ತು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಈ ರಾಜ್ಯದ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದರು.
ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಹೀಗೆ ದೇಶದ ಎಲ್ಲ ನಾಯಕರ ಮೇಲೂ ಕೇಸು ಹಾಕಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಯತ್ನ ಮಾಡುತ್ತಿದ್ದಾರೆ. ಗುಜರಾತ್ ರಾಜ್ಯಸಭಾ ಚುನಾವಣೆ ನಂತರ ಈ ಸೇಡಿನ ರಾಜಕಾರಣ ಜಾಸ್ತಿಯಾಗಿದೆ. ಡಿ.ಕೆ ಶಿವಕುಮಾರ್ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಸರ್ಕಾರವನ್ನು ಅಸ್ಥಿರ ಮಾಡಲು, ಅಧಿಕಾರವನ್ನು ಪಡೆಯಲು ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಡಿ.ಕೆ ಶಿವಕುಮಾರ್ ಅವರನ್ನು ಅರೆಸ್ಟ್ ಮಾಡಿಸುತ್ತೇವೆ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ ಎಂದು ಆರೋಪಿಸಿದರು.
ದ್ವೇಷದ ರಾಜಕಾರಣ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೆಳೆದಿದೆ. ಅದರಲ್ಲೂ ಕೂಡ ಕರ್ನಾಟಕ ಬಿಜೆಪಿಯ ಟಾರ್ಗೆಟ್ ಆಗಿದೆ. ಇಲ್ಲಿ ಬಿಜೆಪಿಗೆ ಸಡ್ಡು ಹೊಡೆದು ಸಮ್ಮಿಶ್ರ ಸರ್ಕಾರ ರಚನೆ ಆಗಿದೆ. ಈ ಸಂದರ್ಭದಲ್ಲಿ ಕೆಲವೊಂದು ವಿದ್ಯಮಾನಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಐಟಿ, ಇಡಿ, ಸಿಬಿಐಯನ್ನ ಬಳಸಿಕೊಂಡು ರಾಜ್ಯ ಸರ್ಕಾರಕ್ಕೆ ಬೆಂಬಲವಾಗಿರುವವರನ್ನ ಬಂಧಿಸುವ ಪ್ರಯತ್ನವನ್ನು ಬಿಜೆಪಿಯ ರಾಜ್ಯ, ರಾಷ್ಟ್ರ ನಾಯಕರು ಮಾಡುತ್ತಿದ್ದಾರೆ ಎಂದರು.
ಕಳೆದು ಒಂದು ವರ್ಷದ ಹಿಂದೆ ನನ್ನ ಸಹೋದರರ ಮನೆ, ಕಚೇರಿ, ಸಂಬಂಧಿಕರ ಮೇಲೆ ಸುಮಾರು 68 ಕಡೆ ಐಟಿ ದಾಳಿ ನಡೆಸಿತ್ತು. ಅದು ಮುಂದುವರಿದು 80 ಕಡೆ ದಾಳಿ ನಡೆದಿತ್ತು. ಈಗಾಗಲೇ ಐಟಿ ಅಧಿಕಾರಿಗಳು ಪ್ರಾಷಿಕ್ಯೂಷನ್ ಕೇಸ್ ಅನ್ನು ಡಿ.ಕೆ ಶಿವಕುಮಾರ್ ಮೇಲೆ ಹಾಕಿದ್ದಾರೆ. ಆದರೆ ಕೇಸ್ ಹಾಕಿದ್ದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೊತ್ತಾದ ಮೇಲೆ ಮತ್ತೊಂದು ಪ್ರಯತ್ನವನ್ನು ಹಿಂಬಾಗಿಲಿನಿಂದ ಶಿವಕುಮಾರ್ ಮೇಲೆ ಒತ್ತಡ ತರಬೇಕು ಎಂದು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಧಾನಿ ಮಂತ್ರಿ ಅವರಿಗೆ ಇದರ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಪ್ರಧಾನಿ ಮಂತ್ರಿಯ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಅದೀನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವ ಈ ವಿಚಾರ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಹಾಗಾಗಿ ಪ್ರಧಾನಿ ಮೋದಿ ಅವರು ಮಧ್ಯೆ ವಹಿಸಬೇಕು ಎಂದು ಒತ್ತಾಯಿಸುತ್ತೇನೆ. ಇದರ ಬಗ್ಗೆ ಮಾತನಾಡಲು ಅವರನ್ನು ಖುದ್ದಾಗಿ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಅಪರಾಧ ಎಸಗಿದರೆ ಮಾತ್ರ ಜಾರಿ ನಿರ್ದೇಶನಾಲಯಕ್ಕೆ ರೆಫರ್ ಮಾಡಲು ಅವಕಾಶ ಇರುತ್ತದೆ. ಆದರೆ ಇದು ಸಿಬಿಐ ಅಲ್ಲಾ ಸಿಬಿಐ ಮೋರ್ಚಾ, ಐಟಿ ಮೋರ್ಚಾ ಮತ್ತು ಇಡಿ ಮೋರ್ಚಾವಾಗಿ ಕೆಲಸ ಮಾಡುತ್ತಿದೆ. ಇದಕ್ಕೆಲ್ಲಾ ಕಾರಣ ಬಿಜೆಪಿ ನಾಯಕರ ಒತ್ತಡವಾಗಿದೆ. 1 ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಅಂತ ಎಲ್ಲ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅದರ ಅರ್ಥ ಏನು ಅಂತ ಎಲ್ಲರಿಗು ಗೊತ್ತಾಗಿದೆ. ಬಿಜೆಪಿಯವರು ಹೀಗೆ ಒತ್ತಡ ಹೇರುವ ಮೂಲಕ ಸರ್ಕಾರ ಬೀಳಿಸುವ ಯತ್ನ ನಡೆಸುತ್ತಿದ್ದಾರೆ ಎಂದರು.
ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಅನ್ನದಾತರ ದನ-ಕರುಗಳಿಗೆ ಒಣ ಮೇವು ಸಿಗೋದೇ ಕಷ್ಟ. ಇಂತಹ ಸಂದರ್ಭದಲ್ಲಿ ಪ್ರತಿ ನಿತ್ಯ ಜಾನುವಾರುಗಳಿಗೆ ವಿಭಿನ್ನ ರೀತಿಯಲ್ಲಿ ಹಸಿರು ಹುಲ್ಲು ನೀಡ್ತಾರೆ. ಅದೂ ಪೌಷ್ಠಿಕಾಂಶಯುಕ್ತ ಹುಲ್ಲು ಹಾಕ್ತಾರೆ ಚಿತ್ರದುರ್ಗದ ನಮ್ಮ ಪಬ್ಲಿಕ್ ಹೀರೋ.
ಹೌದು. ಜಾನುವಾರುಗಳನ್ನ ಮಾರಾಟ ಮಾಡ್ತಾ ಇರೋ ರೈತರ ನಡುವೆ ಸ್ವಯಂ ಆವಿಸ್ಕರಿಸಿದ ಮೇವಿನಿಂದ ಹೈನು ಕೃಷಿಯಲ್ಲಿ ಗುರುತಿಸಿಕೊಂಡಿದ್ದಾರೆ ಚಿತ್ರದುರ್ಗದ ಸುರೇಶ್. ಜಿಲ್ಲೆ ಇದೀಗ ರಣಮಳೆಗೆ ಸಾಕ್ಷಿಯಾಗಿದೆ. ಮೊದಲೇ ಬರದ ನಾಡು. ಬೇಸಿಗೆಯಲ್ಲಿ ಇಲ್ಲಿ ಜಾನುವಾರುಗಳಿಗೆ ಹಸಿಮೇವು ಸಿಗೋದು ಕಷ್ಟ. ಹೀಗಾಗಿ ಚಳ್ಳಕೆರೆ ತಾಲೂಕಿನ ಗೊರ್ಲಕಟ್ಟೆಯ ಸುರೇಶ್ ಹೊಸ ದಾರಿ ಕಂಡ್ಕೊಂಡಿದ್ದಾರೆ.
ಇವರು ಟ್ರೇಗಳಲ್ಲಿ ಮೇವು ಬೆಳೆಯುತ್ತಿದ್ದಾರೆ. ಮೊಳಕೆಯೊಡೆಸಿದ ಮೆಕ್ಕೆಜೋಳವನ್ನು ಟ್ರೇನಲ್ಲಿಟ್ಟು ಹೈಡ್ರೋಪೋನಿಕ್ಸ್ ಘಟಕದಲ್ಲಿ ಪೋಷಣೆ ಮಾಡಲಾಗುತ್ತದೆ. ಈ ವಿಧಾನದಲ್ಲಿ ನೀರು ಕಡಿಮೆ ಬೇಕಾಗುತ್ತದೆ. ಕೇವಲ 10 ದಿನಗಳಲ್ಲಿ ಹಸಿ ಮೇವು ಕೈಗೆ ಸಿಗುತ್ತದೆ. ಒಂದು ಟ್ರೇಯಿಂದ ಐದಾರು ಕೇಜಿ ಮೇವು ಉತ್ಪತ್ತಿಯಾಗುತ್ತದೆ. ಇದನ್ನ ಬೇರು ಸಮೇತ ಜಾನುವಾರುಗಳಿಗೆ ಹಾಕುತ್ತಾರೆ.
ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ 16 ಯೂನಿಟ್ ಮಾಡಿ 1075 ಟ್ರೇಗಳಲ್ಲಿ ಹಸಿ ಮೇವು ಬೆಳೆಯುತ್ತಿರುವ ಸುರೇಶ್, ನೂರಕ್ಕೂ ಹೆಚ್ಚು ಹಸುಗಳಿಗೆ ಇದೇ ಮೇವನ್ನು ನೀಡ್ತಿದ್ದಾರೆ. ಹೈನುಗಾರಿಕೆಯಲ್ಲಿ ಯಶೋಮಾರ್ಗ ಹಿಡಿದಿದ್ದಾರೆ.
ಒಟ್ಟಿನಲ್ಲಿ ಸುರೇಶ್ ಕೇವಲ ಕೃಷಿಯಲ್ಲದೆ ಹೈನುಗಾರಿಕೆಯಿಂದಲೂ ಬರದ ನಾಡಿನಲ್ಲಿ ಉತ್ತಮ ಆದಾಯ ಪಡೀಬಹುದು ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ. ಇವರ ಮೇವು ಕೃಷಿ ಮೆಚ್ಚಲೆಬೇಕು ಎಂದು ಸ್ಥಳೀಯರು ಆಶೀಸುತ್ತಿದ್ದಾರೆ.
ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ ಪ್ರತಿವರ್ಷ ನಾವು ತೆರಿಗೆ ಕಟ್ಟಿಕೊಂಡು ಬಂದಿದ್ದೇನೆ. ನಾನು ಮೋಸ ಮಾಡಿದ್ದರೆ ಯಾರೂ ಬೇಕಾದರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು ಎಂದು ಗುತ್ತಿಗೆಗೆದಾರರಾಗಿರುವ ಸುರೇಶ್ ಅವರು ತಿಳಿಸಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಫೋಟೋಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕಳೆದ 10 ವರ್ಷಗಳಿಂದ ನಾವು ವರಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದೇವೆ. ಪ್ರತಿ ವರ್ಷವೂ ನಾವು ಈ ರೀತಿ ಹಣವನ್ನು ಇರಿಸಿ ಪೂಜೆ ಮಾಡುತ್ತೇವೆ. ಈ ವಿಚಾರ ನನ್ನ ಸ್ನೇಹಿತರು, ಸಂಬಂಧಿಗಳಿಗೆ ತಿಳಿದಿದೆ ಎಂದು ಹೇಳಿದರು.
ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಬಗ್ಗೆ ಪತ್ರ ತೋರಿಸಿದ ಅವರು, 2 ಲಕ್ಷ ರೂ. ನಗದು ಹಣವನ್ನು ವಹಿವಾಟು ಮಾಡಬಾರದು ಎಂದು ಸರ್ಕಾರ ಹೇಳಿದೆ ಹೊರತು ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಬಾರದು ಎಂದು ಹೇಳಿಲ್ಲ. ನಾವು ನ್ಯಾಯಬದ್ಧವಾಗಿ ಸಂಪಾದಿಸಿದ ಹಣ. ಲಕ್ಷಿ ವಿಲಾಸ್ ಬ್ಯಾಂಕ್ ನಿಂದ 83 ಲಕ್ಷ ರೂ. ಹಣವನ್ನು ಡ್ರಾ ಮಾಡಿದ್ದೇನೆ ಎಂದು ಸುರೇಶ್ ತಿಳಿಸಿದರು.
ಇಷ್ಟೊಂದು ಹಣವನ್ನು ಸಂಪಾದಿಸಿದ್ದು ಹೇಗೆ ಎಂದು ಕೇಳಿದ್ದಕ್ಕೆ 2002ರಲ್ಲಿ ನಮ್ಮದೊಂದು ಜಾಗ ಇತ್ತು. ಆ ಜಾಗವನ್ನು ಮಾರಾಟ ಮಾಡಿದ ಬಳಿಕ ಎಚ್ಎಸ್ಆರ್ ಲೇಔಟ್ ನಲ್ಲಿ ನಾವು ಮೂರು ಅಂತಸ್ತಿನ ಕಟ್ಟಡವನ್ನು 4.5 ಲಕ್ಷ ರೂ. ಖರ್ಚು ಮಾಡಿ ಕಟ್ಟಿದ್ವಿ. ಬಳಿಕ ಅದನ್ನು 9 ಲಕ್ಷ ರೂ. ಮಾರಾಟ ಮಾಡಿದ್ವಿ. ಇದಾದ ಬಳಿಕ ನಾವು ಕಟ್ಟಡ ಕಟ್ಟಲು ಆರಂಭಿಸಿದ್ವಿ. ನಾನು ಡಿಪ್ಲೊಮ ಓದುವ ಸಮಯದಲ್ಲಿ ಬೆಳಗ್ಗೆ 4.30ಕ್ಕೆ ಎದ್ದ ಕಟ್ಟಡದ ಬಳಿ ಹೋಗುತ್ತಿದ್ದೆ. ನಮ್ಮ ತಂದೆ, ತಾಯಿ, ಅಕ್ಕಂದಿರು ಇಟ್ಟಿಗೆಯನ್ನು ಹೊತ್ತಿದ್ದಾರೆ. ಅಲ್ಲಿಂದ ನಮ್ಮ ಬ್ಯುಸಿನೆಸ್ ಬದಲಾಯ್ತು ಎಂದು ಅವರು ವಿವರಿಸಿದರು.
ಇದೇ ವೇಳೆ ಪಾರ್ಕ್ ಗೆ ಅಂತ ಮೀಸಲಿಟ್ಟಿದ್ದ ಜಾಗದಲ್ಲಿ ನಕಲಿ ಪತ್ರ ಸೃಷ್ಟಿಸಿ ಸೈಟ್ಗಳಾಗಿ ಕನ್ವರ್ಟ್ ಮಾಡಿದ್ದೀರಿ ಎನ್ನುವ ಆರೋಪ ನಿಮ್ಮ ಮೇಲೆ ಇದೆ ಅಲ್ಲವೇ ಎಂದು ಕೇಳಿದ್ದಕ್ಕೆ, ಈ ಆರೋಪ ಶುದ್ಧ ಸುಳ್ಳು. ಬಿಬಿಎಂಪಿ ಅವರು ನನಗೆ ಜಾಗ ನೀಡಿ ಬಳಿಕ ಅದು ಪಾರ್ಕ್ ಗೆ ಸೇರಿದ ಜಾಗ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ನಾನು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದೇನೆ ಎಂದರು.
ನ್ಯಾಯಬದ್ಧವಾಗಿ ಸಂಪಾದನೆ ಮಾಡಿದ್ದೇವೆ. ಯಾವುದೇ ಅಕ್ರಮವನ್ನೂ ಎಸಗಿಲ್ಲ. ಸಂಪಾದನೆಯಾದ ಹಣದಲ್ಲಿ ಮೋಜು ಮಸ್ತಿ ಮಾಡಿಲ್ಲ. ಎಲ್ಲದಕ್ಕೂ ಲೆಕ್ಕ ಇದೆ. ಈ ಹಿಂದೆ ಆರ್ಕ್ಯೂಟ್ ನೆಟ್ ವರ್ಕ್ ಇದ್ದಾಗ ನಾನೇ ಪೂಜೆಯ ಫೋಟೋಗಳನ್ನು ಹಾಕಿದ್ದೆ. ಧೈರ್ಯ ಇರುವ ಕಾರಣಕ್ಕೆ ನಾವು ಈ ರೀತಿಯ ಪೂಜೆ ಮಾಡಿದ್ದೇವೆ ಎಂದು ಅವರು ಪಬ್ಲಿಕ್ ಟಿವಿಗೆ ವಿವರಿಸಿದರು.
ಬೆಂಗಳೂರು: ಸ್ಯಾಂಡಲ್ವುಡ್ನ ನಿರ್ಮಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ರಂಗಿತರಂಗ ಫೇಮ್ ಚಿತ್ರನಟಿ ಅವಂತಿಕಾ ಶೆಟ್ಟಿ ಸ್ಯಾಂಡಲ್ವುಡ್ ನಿರ್ಮಾಪಕ ಸುರೇಶ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಮೂಲಕ ಕಣ್ಣೀರಿಟ್ಟು ತನಗಾದ ದೌರ್ಜನ್ಯವನ್ನ ಅವಂತಿಕಾ ಶೆಟ್ಟಿ ಹೊರಹಾಕಿದ್ದಾರೆ.
ರಂಗಿತರಂಗ, ಕಲ್ಪನಾ-2 ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರೋ ಅವಂತಿಕಾ ಶೆಟ್ಟಿ ಚಿತ್ರೀಕರಣಕ್ಕೆ ಸರಿಯಾಗಿ ಬರ್ತಿಲ್ಲ ಎಂಬ ಕಾರಣಕ್ಕೆ ರಾಜು ಕನ್ನಡ ಮೀಡಿಯಂ ಚಿತ್ರದಿಂದ ಹೊರಬಿದ್ದಿದ್ದರು. ಸಿನಿಮಾದಿಂದ ಹೊರಬಿದ್ದ ಬೆನ್ನಲ್ಲೇ ಚಿತ್ರ ನಿರ್ಮಾಪಕ ಸುರೇಶ್ ಹಾಗೂ ಲೈಟ್ಬಾಯ್ಸ್ ಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲೈಟ್ ಬಾಯ್ ಮೈ ಕೈ ಮುಟ್ಟಿ ಮಾತನಾಡಿಸಿದ್ರು. ಇದಕ್ಕೆ ಚಿತ್ರತಂಡ ಸಾರಿ ಕೇಳಿಸಿ ಸುಮ್ಮನಾಯ್ತು ಎಂದು ಆವಂತಿಕಾ ಹೇಳಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ ಆವಂತಿಕಾ, ಇಲ್ಲಿಯವರೆಗೂ ನಾನು ಎಲ್ಲೂ ಈ ಬಗ್ಗೆ ಹೇಳಿರಲಿಲ್ಲ. ಆದ್ರೆ ಚೆಕ್ಬೌನ್ಸ್ ಬಗ್ಗೆ ಕೋರ್ಟ್ ಮೆಟ್ಟಿಲೇರಿದಾಗ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ಸುಳ್ಳು ಸ್ಟೋರಿ ಸೃಷ್ಟಿಸಿದ್ದಾರೆ. ನನಗೆ ಸೆಟ್ನಲ್ಲಿ ತುಂಬಾ ತೊಂದರೆ ಆಗ್ತಿತ್ತು. ಎಲ್ಲವನ್ನೂ ಸಹಿಸಿಕೊಂಡೆ. ಬ್ಯಾಂಕಾಕ್ ಚಿತ್ರೀಕರಣ ಬಾಕಿ ಉಳಿದಿತ್ತು. ಅದನ್ನು ಮುಗಿಸಿ ಹೊರಟುಬಿಡೋಣ ಅಂತ ಸುಮ್ಮನಿದ್ದೆ. ಒಂದು ದಿನ ನನ್ನ ಜೊತೆ ಮಾತಾಡ್ಬೇಕು ಅಂದ್ರು. ಡೇಟ್ ಸಮಸ್ಯೆ ಬಗ್ಗೆ ಕೇಳೋದಿರಬಹುದು ಅಂದುಕೊಂಡೆ. ಆದ್ರೆ ಅವರು ನಿಮಗೆ ನನ್ನ ಜೊತೆ ಏನಾದ್ರೂ ಪ್ರಬ್ಲಮ್ ಇದ್ಯಾ ಅಂದ್ರು. ಇಲ್ಲ, ಇನ್ನೆರಡು ಮೂರು ದಿನ ಚಿತ್ರೀಕರಣ ಅಲ್ವಾ, ಮುಗಿಸೋಣ ಅಂದೆ. ಆದ್ರೆ ಅವರು ನೀನು ನಮ್ಮ ಜೊತೆ ಫ್ರೆಂಡ್ಲಿ ಇಲ್ಲ ಅಂದ್ರು. ನಾನು ಫ್ರೆಂಡ್ಲಿ ಇಲ್ಲ ಅನ್ನೋದು ಅವರ ಪ್ರಾಬ್ಲಮ್ ಆಗಿತ್ತು. ಫ್ರೆಂಡ್ಲಿ ಅಂದ್ರೆ ಏನು ಅಂತ ಕೇಳಿದ್ದಕ್ಕೆ ಜೋರಾಗಿ ಕಿರುಚಾಡಲು ಶುರು ಮಾಡಿದ್ರು. ನಾನು ಅಳುತ್ತಾ ಅಲ್ಲಿಂದ ಹೊರಟುಬಿಟ್ಟೆ.
ಚಿತ್ರದ ಮೊದಲನೇ ಶೆಡ್ಯೂಲ್ ನಂತರ ಎರಡನೇ ಶೆಡ್ಯೂಲ್ಗೆ ದೀರ್ಘವಾದ ಗ್ಯಾಪ್ ಇತ್ತು. ಈ ವೇಳೆ ಡೇಟ್ಸ್ ತೊಂದರೆಯಾಗಬಾರದು ಅಂತ ತುಂಬಾ ಸಲ ಮೆಸೇಜ್ ಮಾಡಿದ್ದೇನೆ. ಆದ್ರೆ ಯಾವುದಕ್ಕೂ ರಿಪ್ಲೈ ಬಂದಿಲ್ಲ. ನಂತರ ಫಿಲಂ ಚೇಂಬರ್ಗೆ ಹೋಗೋಣ ಅಲ್ಲಿ ಏನು ಹೇಳ್ತಾರೋ ಹಾಗೆ ಮಾಡ್ತೀನಿ ಅಂದ್ರು. ಎರಡು ದಿನಗಳ ನಂತರ ಅವರ ಮ್ಯಾನೇಜರ್ ಬಂದು ನಿಮ್ಮ ಟಿಕೆಟ್ ರೆಡಿ ಇದೆ. ನೀವು ಹೋಗ್ಬೆಕು ಅಂದ್ರು. ಅವರೇ ಕಳಿಸಿದ್ದು, ನಾನು ಚಿತ್ರದಿಂದ ಹೊರಹೋಗಿಲ್ಲ. ಈ ಬಗ್ಗೆ ವಿವರಿಸಿ ಫಿಲಂ ಚೇಂಬರ್ಗೂ ಪತ್ರ ಬರೆದಿದ್ದೇನೆ. ಆದ್ರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅದಕ್ಕಾಗಿ ಕೋರ್ಟ್ನಲ್ಲಿ ಕೇಸ್ ಹಾಕಬೇಕಾಯ್ತು ಅಂದ್ರು. ಕೇಸ್ನಲ್ಲಿ ಕೂಡ ನನಗಾದ ತೊಂದರೆ ಬಗ್ಗೆ ಹೇಳಿಲ್ಲ. ಚಿತ್ರ ರಿಲೀಸ್ ಆದ್ರೆ ನಾನೇ ಡಬ್ ಮಾಡ್ಬೇಕು ಎಂದಷ್ಟೇ ಹೇಳಿದ್ದೇನೆ ಅಂದ್ರು.
https://www.youtube.com/watch?v=mrPva5qVTHE
ನನಗಾದ ಅನ್ಯಾಯ ಇನ್ನೊಬ್ಬ ಹುಡುಗಿಗೆ ಆಗದಿರಲಿ ಎಂದು ಅವಂತಿಕಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಆದ್ರೆ ನಟಿ ಅವಂತಿಕಾ ಶೆಟ್ಟಿಯ ಆರೋಪವನ್ನ ನಿರ್ಮಾಪಕ ಸುರೇಶ್ ತಳ್ಳಿಹಾಕಿದ್ದಾರೆ. ನಾನು ಆ ರೀತಿ ಅಲ್ಲ. ಬೇಕಿದ್ರೆ ಸೆಟ್ನಲ್ಲಿದ್ದವರನ್ನು ಕೇಳಿ. ಅವಂತಿಕಾ ಸೆಟ್ಗೆ ಲೇಟ್ ಆಗಿ ಬರ್ತಿದ್ರು. ಚಿತ್ರೀಕರಣ ತಡವಾಗ್ತಿತ್ತು. ರಾತ್ರಿ ನಿದ್ದೆ ಮಾಡದೇ ಸೆಟ್ಗೆ ಬರ್ತಿದ್ರು. ಕೇಳಿದ್ರೆ ಪ್ರಾಕ್ಟೀಸ್ ಮಾಡ್ತಿದ್ದೆ ಅಂತಿದ್ರು. ರಾತ್ರಿಯೆಲ್ಲಾ ಪ್ರಾಕ್ಟೀಸ್ ಮಾಡಲು ಇದೇನು ಪೌರಾಣಿಕ ಚಿತ್ರನಾ. ನಿದ್ರೆ ಮಾಡದಿದ್ರೆ ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣಲ್ಲ ಎಂದಿದ್ದೇವೆ ಅಷ್ಟೆ ಅಂತ ಸುರೇಶ್ ಹೇಳಿದ್ರು.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಪದೇ ಪದೇ ನಟಿಯರ ಮೇಲೆ ನಡೆಯುತ್ತಿರೋ ದೌರ್ಜನ್ಯವನ್ನ ಸಹಿಸಲು ಸಾಧ್ಯವಿಲ್ಲ. ಯಾರೇ ತಪ್ಪು ಮಾಡಿದ್ರೂ ತಪ್ಪೇ. ಅದ್ರಲ್ಲೂ ಒಂದು ಹೆಣ್ಣಿಗೆ ನೋವಾದ್ರೆ ಸುಮ್ಮನಿರಲ್ಲ ಅಂದ್ರು
ನಟಿ ಅವಂತಿಕಾ ಶೆಟ್ಟಿಗೆ ನಿರ್ಮಾಪಕರು ಲೈಂಗಿಕ ಕಿರುಕುಳ ಕೊಟ್ಟಿದ್ರೆ ಕ್ರಮ ನಿಶ್ಚಿತ. ಅವಂತಿಕಾ, ನಿರ್ಮಾಪಕ ಸುರೇಶ್, ನಿರ್ದೇಶಕ ನರೇಶ್ರನ್ನ ಕರೆಸಿ ಮಾತನಾಡುತ್ತೇನೆ. ನಟಿ ಅವಂತಿಕಾ ಕೊಟ್ಟ ದೂರನ್ನ ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಅಂತ ಹೇಳಿದ್ರು.