Tag: Sumangala

  • ಸೋಮವಾರ ಬಂದ್ ಇದ್ದರೂ SSLC ಪೂರಕ ಪರೀಕ್ಷೆ

    ಸೋಮವಾರ ಬಂದ್ ಇದ್ದರೂ SSLC ಪೂರಕ ಪರೀಕ್ಷೆ

    ಬೆಂಗಳೂರು: ಸೆಪ್ಟೆಂಬರ್ 27ರಂದು ಸೋಮವಾರ ರೈತರು ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಮಾಡಲು ಸಜ್ಜಾಗಿ ಭಾರತ್ ಬಂದ್‍ಗೆ ಕರೆ ನೀಡಿದ್ದಾರೆ. ಈ ಮಧ್ಯೆ ಸೋಮವಾರ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ನಿರ್ದೇಶಕಿ ಸುಮಂಗಲ ಹೇಳಿದ್ದಾರೆ.

    ಸೋಮವಾರ ಬಂದ್ ಹಿನ್ನೆಲೆ ರಾಜ್ಯದ ನಾನಾ ರೈತ ಸಂಘಟನೆಗಳು ಹಾಗೂ ಹತ್ತು ಹಲವು ಸಂಘ ಸಂಸ್ಥೆಗಳು ಕರ್ನಾಟಕ ಬಂದ್ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ ಸೋಮವಾರದಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಶುರುವಾಗಲಿದೆ. ಹಾಗಾಗಿ ಬಂದ್‍ನಿಂದ ಪರೀಕ್ಷೆ ಇರುತ್ತೋ? ಇಲ್ವೋ? ಎಂದು ಪೂರಕ ಪರೀಕ್ಷೆಗೆ ಸಿದ್ದರಾಗಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಗೊಂದಲದಲ್ಲಿದ್ದಾರೆ. ಇದನ್ನೂ ಓದಿ: ಚಿಪ್ಪು ಹಂದಿ ಅಕ್ರಮ ಸಾಗಾಟ- ಮಾಲು ಸಮೇತ ಅರೋಪಿಗಳು ಪೊಲೀಸರ ವಶಕ್ಕೆ

    ಈ ಗೊಂದಲಕ್ಕೆ ಎಸ್‍ಎಸ್‍ಎಲ್‍ಸಿ ಬೋರ್ಡ್ ತೆರೆ ಎಳೆದಿದೆ. ಸೋಮವಾರ ಪರೀಕ್ಷೆ ನಡೆಯಲಿದೆ. ಯಾವುದೇ ಆತಂಕ ಬೇಡ ಎಂದು ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ನಿರ್ದೇಶಕಿ ಸುಮಂಗಲ ತಿಳಿಸಿದ್ದಾರೆ. ಅಲ್ಲದೇ ಸೋಮವಾರದ ಬಂದ್ ದಿನ ಬಿಎಂಟಿಸಿ ಕೆಎಸ್‍ಆರ್‍ಟಿಸಿ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಜೊತೆಗೆ ತಮ್ಮ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಬಸ್‍ನಲ್ಲಿ ಸಂಚಾರ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ. ಬಂದ್ ಇದ್ದರೂ ಪರೀಕ್ಷೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಸೋಮವಾರ ನಡೆಯುವ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಒಟ್ಟು 53,041 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ. ಕೋವಿಡ್ ನಿಯಮಗಳ ಪ್ರಕಾರವೇ ಪರೀಕ್ಷೆ ನಡೆಯಲಿದೆ. ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಧಕ ಬಾಧಕ ಚರ್ಚಿಸದೆ ಕೃಷಿ ಬಿಲ್ ವಿರೋಧಿಸಬೇಡಿ: ಶೋಭಾ ಕರಂದ್ಲಾಜೆ