Tag: Sukumar Shetty

  • ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ : ಶಾಸಕ ಸುಕುಮಾರ ಶೆಟ್ಟಿ

    ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ : ಶಾಸಕ ಸುಕುಮಾರ ಶೆಟ್ಟಿ

    ಉಡುಪಿ: ನನ್ನ ಮನಸ್ಸಿಗೆ ಆಗಿರುವ ನೋವು, ಆಘಾತ ಇನ್ನೂ ಕಡಿಮೆಯಾಗಿಲ್ಲ‌. ನಾನು ಈ ಕ್ಷಣದವರೆಗೆ ತಟಸ್ಥವಾಗಿದ್ದೇನೆ. ನಾಡಿದ್ದು ಹೋಗಿ ಬಿಜೆಪಿಗೆ (BJP) ಮತ ಹಾಕುತ್ತೇನೆ ಎಂದು ಉಡುಪಿ ಜಿಲ್ಲೆಯ ಬೈಂದೂರು (Baindur) ಶಾಸಕ ಸುಕುಮಾರ ಶೆಟ್ಟಿ (Sukumar Shetty) ತಿಳಿಸಿದರು.

    ‌ಟಿಕೆಟ್ ತಪ್ಪಿದ ಶಾಸಕರು ಒಂದೋ ಪಕ್ಷಾಂತರ ಮಾಡಿದ್ದಾರೆ. ಇಲ್ಲ ಪಕ್ಷದ ನಿಯಮವನ್ನು ಒಪ್ಪಿ ಅಭ್ಯರ್ಥಿಗಳ ಜೊತೆ ಗೆಲುವಿಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಕರಾವಳಿ ಜಿಲ್ಲೆಯ ಪೈಕಿ ಸುಕುಮಾರ ಶೆಟ್ಟಿ ಮಾತ್ರ ವಿಭಿನ್ನ ನಿಲುವನ್ನ ತಳೆದಿದ್ದಾರೆ. ಬೇಸರವನ್ನು ಇನ್ನು ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಸುಕುಮಾರಶೆಟ್ಟಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಮಾಡುವ ಸಣ್ಣ ಮನುಷ್ಯ ನಾನಲ್ಲ. ಎದುರಾಳಿ ಪಕ್ಷದ ಜೊತೆ ಕೈಜೋಡಿಸಿದ್ದೇನೆ ಎಂದು ಆರೋಪಿಸುವವರು ಕೀಳು ಮನಸ್ಸಿನವರು. ಪಕ್ಷಾಂತರ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಹೇಳಿದರು.

    ಹಿರಿಯ ನಾಯಕರ ಮೇಲೆ ಗೌರವ ಇದೆ. ಆದರೆ ಪಕ್ಷಕ್ಕೆ ನನ್ನ ಅಭ್ಯರ್ಥಿತನ ಬೇಡವಾಗಿದೆ. ಹಾಗಾಗಿ ನಾನು ಯಾವುದೇ ಪ್ರಚಾರ ಸಭೆ, ರಾಲಿಗಳಲ್ಲಿ ಭಾಗಿ ಆಗಿಲ್ಲ ಯಾವ ಕಾರಣಕ್ಕೆ ನನಗೆ ಟಿಕೆಟ್ ಕೊಡಲಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮೋದಿ, ಶಾ, ನಡ್ಡಾ, ಸಿಎಂ ಬಂದ್ರು ಸುಕುಮಾರ್ ಶೆಟ್ಟಿ ಬಂದಿಲ್ಲ: ಕರಾವಳಿ ಜಿಲ್ಲೆ ಉಡುಪಿಯ (Udupi) ಚುನಾವಣಾ (Election) ಕದನ ಕುತೂಹಲ ಕೆರಳಿಸಿದೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಪೈಕಿ 4 ಕಡೆ ಈ ಬಾರಿ ಹೊಸ ಅಭ್ಯರ್ಥಿಗಳು ನಾಲ್ವರು ಹಾಲಿ ಶಾಸಕರ ಪೈಕಿ ಬೈಂದೂರು ಶಾಸಕರು ತಟಸ್ಥವಾಗಿದ್ದಾರೆ. ಟಿಕೆಟ್ ತಪ್ಪಿದ ಬೇಸರದಿಂದ ಸುಕುಮಾರಶೆಟ್ಟಿ ಇನ್ನೂ ಹೊರ ಬಂದಿಲ್ಲ. ಚುನಾವಣಾ ಪ್ರಚಾರ ನಡೆಸುತ್ತಿಲ್ಲ ಯಾವುದೇ ಸಭೆಗೂ ಶಾಸಕ ಸುಕುಮಾರ ಶೆಟ್ಟಿ ಬರುತ್ತಿಲ್ಲ.

    ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಎಲ್ಲಾ ಶಾಸಕರು, ಅಭ್ಯರ್ಥಿಗಳು ಭಾಗವಹಿಸಬೇಕಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸುಕುಮಾರಶೆಟ್ಟಿ ಗೈರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವತಃ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರಕ್ಕೆ ಬಂದು ಅಭ್ಯರ್ಥಿ ಗುರುರಾಜ್ ಗಂಟೆ ಹೊಳೆ ಪರ ಮತಯಾಚನೆ ಮಾಡಿದ್ದಾರೆ. ಈ ರೋಡ್ ಶೋದಲ್ಲೂ ಶಾಸಕ ಸುಕುಮಾರ ಶೆಟ್ಟಿ ಭಾಗಿಯಾಗಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಯಾವ ಸಮಯದಲ್ಲಿ ಎಲ್ಲಿ? ಯಾವ ರಸ್ತೆಯಲ್ಲಿ ಸಂಚಾರ?

    ಸುಮಾರು 20,000 ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಜಮಾಯಿಸಿದ್ದರು. ಈ ಕಾರ್ಯಕ್ರಮದಿಂದಲೂ ಶಾಸಕ ಶೆಟ್ಟಿ ದೂರ ಉಳಿದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಂದಾಗಲೂ ಕರೆ ಮಾಡಿದ್ದರು. ಅದಕ್ಕೂ ಸುಕುಮಾರ್ ಶೆಟ್ಟಿ ಪೂರಕವಾಗಿ ಸ್ಪಂದನೆ ಮಾಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಡುವ ಸಂದರ್ಭವು ಸುಕುಮಾರಶೆಟ್ಟಿ ಭೇಟಿಯಾಗದೆ ಸಬೂಬು ಹೇಳಿದ್ದರು.

    ರಾಜ್ಯದ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ 4 ಬಾರಿ ಫೋನ್ ಕರೆ ಮಾಡಿ ಚುನಾವಣಾ ಓಡಾಟದಲ್ಲಿ ಭಾಗಿ ಆಗುವಂತೆ ಅಭ್ಯರ್ಥಿ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೂ ಸುಕುಮಾರ ಶೆಟ್ಟಿ ಒಪ್ಪಿಲ್ಲ. ಬಿ.ವೈ ರಾಘವೇಂದ್ರ ರಾಜ್ಯದ ಸಚಿವರು ಆರ್ ಎಸ್ ಎಸ್, ಸಂಘ ಪರಿವಾರದ ಮುಖಂಡರು ಮನವೊಲಿಸಿದರು ಸುಕುಮಾರಶೆಟ್ಟಿ ಕರಗಿಲ್ಲ. ಇದನ್ನೂ ಓದಿ: ರೋಡ್‌ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್‌ ಅಳವಡಿಕೆ

  • ಮೈತ್ರಿ ನಾಯಕರು ಅತೃಪ್ತರನ್ನು ಏನು ಬೇಕಾದರೂ ಮಾಡಲಿ, ನಮ್ಮ ಬಳಿ ಸಂಖ್ಯಾಬಲವಿದೆ- ಸುಕುಮಾರ್ ಶೆಟ್ಟಿ

    ಮೈತ್ರಿ ನಾಯಕರು ಅತೃಪ್ತರನ್ನು ಏನು ಬೇಕಾದರೂ ಮಾಡಲಿ, ನಮ್ಮ ಬಳಿ ಸಂಖ್ಯಾಬಲವಿದೆ- ಸುಕುಮಾರ್ ಶೆಟ್ಟಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೇಡ ಎಂಬುದು ಜನರ ಆದೇಶ. ಅಲ್ಲದೆ ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಬೇಸತ್ತು ಅವರ ಶಾಸಕರೇ ರಾಜೀನಾಮೆ ಕೊಟ್ಟಿದ್ದಾರೆ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

    ಯಡಿಯೂರಪ್ಪನವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿರುವ ಶಾಸಕ ಸುಕುಮಾರ್ ಶೆಟ್ಟಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ಜೊತೆ ಮಾತನಾಡಿದರು.

    ನಮ್ಮಲ್ಲಿ 105 ಶಾಸಕರಿದ್ದು, ಮೈತ್ರಿ ಸರ್ಕಾರದ 20 ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸಂಖ್ಯಾ ಬಲ ನಮ್ಮ ಪರವಾಗಿದೆ. ಮೈತ್ರಿ ನಾಯಕರು ಅವರ ಶಾಸಕರನ್ನು ಏನು ಬೇಕಾದರೂ ಮಾಡಲಿ ಎಂದು ಹೇಳುವ ಮೂಲಕ ಶಾಸಕರ ಅನರ್ಹ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

    ಬಿ.ಎಸ್.ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ರಾಜ್ಯ ಸುಭೀಕ್ಷೆಯಿಂದರಲಿ ಎಂದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದೇನೆ. ಕಾಂಗ್ರೆಸ್‍ನವರು ಅವರ ಶಾಸಕರನ್ನು ಏನು ಬೇಕಾದರೂ ಮಾಡಿಕೊಳ್ಳಲಿ, ನಮ್ಮ ಬಳಿ ಸಂಖ್ಯಾಬಲವಿದೆ. ಅಲ್ಲದೆ, ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೆ ಮುಂಬೈನಲ್ಲಿರುವ ಶಾಸಕರಿಗೂ ಕಾಂಗ್ರೆಸ್‍ಗೂ ಸಂಬಂಧವಿದೆ ಎಂದು ಗುಡುಗಿದ್ದಾರೆ.

    ಕ್ಷೇತ್ರದ ಜನತೆ ಸರ್ಕಾರ ರಚನೆ ಮಾಡಿಯೇ ಕ್ಷೇತ್ರಕ್ಕೆ ಬರಬೇಕೆಂದು ಹೇಳಿ ಕಳುಹಿಸಿದ್ದಾರೆ. ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ, ನಾಲ್ಕು ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು. ಬಿಎಸ್‍ವೈ ಪ್ರಮಾಣವಚನ ಸ್ವಿಕಾರ ಸಮಾರಂಭ ಹಿನ್ನೆಲೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬೆಂಗಳೂರಿಗೆ ಆಗಮಿಸಿದ್ದಾರೆ.

  • ಒಂದು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗ್ತಾರೆ: ಶಾಸಕ ಸುಕುಮಾರ ಶೆಟ್ಟಿ ಭವಿಷ್ಯ

    ಒಂದು ತಿಂಗಳಲ್ಲಿ ಯಡಿಯೂರಪ್ಪ ಸಿಎಂ ಆಗ್ತಾರೆ: ಶಾಸಕ ಸುಕುಮಾರ ಶೆಟ್ಟಿ ಭವಿಷ್ಯ

    – ಮೋಜು-ಮಸ್ತಿ ಮಾಡಿಲ್ಲ, ನಡುಗುವ ಚಳಿಯಲ್ಲಿ ಗಂಗಾಸ್ನಾನ ಮಾಡಿದೆ

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇನ್ನೊಂದು ತಿಂಗಳಲ್ಲಿ ಸಿಎಂ ಆಗುತ್ತಾರೆ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಭವಿಷ್ಯ ನುಡಿದಿದ್ದಾರೆ.

    ಗುರುಗ್ರಾಮದ ರೆಸಾರ್ಟ್ ನಿಂದ ಉಡುಪಿಗೆ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಆಶ್ಚರ್ಯಕರ, ಚಮತ್ಕಾರದ ರೀತಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಬರುತ್ತಾರೆ. ಅದ್ಯಾವ ಮ್ಯಾಜಿಕ್ ಮಾಡಿ ಹೇಗೆ ಸಿಎಂ ಆಗ್ತಾರೆ ಅಂತ ನಾನು ಈಗ ಹೇಳಲ್ಲ. ನೀವೇ ನೋಡಿ. ಯಡಿಯೂರಪ್ಪ ಈ ತಿಂಗಳು ಕಳೆಯುವ ಒಳಗೆ ಮುಖ್ಯಮಂತ್ರಿ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು.

    ದೆಹಲಿ, ಹರಿಯಾಣದಲ್ಲಿ ನಾನು ಮೋಜು ಮಸ್ತಿ ಮಾಡಿಲ್ಲ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡೆ. ಅದನ್ನು ಮುಗಿಸಿ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆ ನಡೆಯಿತು. ಅಲ್ಲಿಂದ ಹರಿದ್ವಾರಕ್ಕೆ ಹೋಗಿದ್ದೆ. ನಡುಗುವ ಚಳಿಯಲ್ಲಿ ಗಂಗಾಸ್ನಾನ ಮಾಡಿದ್ದೇನೆ. ಮೂರು ಸಾರಿ ಮುಳುಗಿ ಎದ್ದೆ. ನಾನು ನನ್ನ ಕ್ಷೇತ್ರ ಮರೆಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರ, ರಾಜ್ಯ ಮತ್ತು ದೇಶದ ಜನಕ್ಕಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ಶಾಸಕರನ್ನು ಕೂಡಿ ಹಾಕಿದ್ದಾರೆ ಎಂದು ಪ್ರಸಾರವಾಗುತ್ತಿತ್ತು. ಕೂಡಿ ಹಾಕಲು ನಾನು ಮಗು ಅಲ್ಲ ಅಂತ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದರು.

    ಸನ್ಯಾಸಿಗೆ ಕೋಟಿ ಯಾಕೆ?
    ನಾನೊಬ್ಬ ಸನ್ಯಾಸಿಯಂತೆ ಬದುಕುವ ವ್ಯಕ್ತಿ. ನನಗೆ ಅಧಿಕಾರವೂ ಬೇಡ, ಕೋಟಿಯೂ ಬೇಡ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಅಂತ ಅಂದರು. ಬಿಜೆಪಿ ತೊರೆಯುವ ವಿಚಾರ ಒಂದು ಮಾಧ್ಯಮದಲ್ಲಿ ಪ್ರಸಾರವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಅಪಪ್ರಚಾರವಾಗಿದೆ. ನಾನೊಬ್ಬ ಪ್ರಖರ ಹಿಂದುತ್ವವಾದಿ. ನಾನು ಬಿಜೆಪಿ ಬಿಡಲ್ಲ. ಸನ್ಯಾಸಿ ಜೀವನ ನಡೆಸುವವನಿಗೆ ಹಣ, ಅಧಿಕಾರ ಆಮಿಷದ ಅಗತ್ಯವಿಲ್ಲ. ಗಂಜಿ ಊಟ ಮಾಡುವವನಿಗೆ ಕೋಟಿ ಯಾಕೆ ಬೇಕು ಎಂದು ಪ್ರಶ್ನಿಸಿದರು.

    ಇಷ್ಟಕ್ಕೂ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರನ್ನು ನೋಡಿ 18 ವರ್ಷ ಆಗಿದೆ. ತಿಂಗಳ ಹಿಂದೆ ಯು.ಟಿ ಖಾದರ್ ಪರಿಚಯ ಆಗಿದೆ. ಕಾಂಗ್ರೆಸಿಗರು ನನ್ನನ್ನು ಈವರೆಗೆ ಸಂಪರ್ಕ ಮಾಡಿಯೇ ಇಲ್ಲ. ನಾನು ಯಡಿಯೂರಪ್ಪನವರ ಅತೀ ಹತ್ತಿರದ ವ್ಯಕ್ತಿ. ಜನ ಬಿಜೆಪಿಯಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅಪಪ್ರಚಾರ ಮಾಡಿದವರ ವಿರುದ್ಧ ಮೊಕದ್ದಮೆ ಹೂಡುತ್ತೇನೆ ಎಂದು ಬಿಜೆಪಿ ಶಾಸಕ ಸುಕುಮರ ಶೆಟ್ಟಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮುದ್ರಸ್ನಾನದ ವೇಳೆ ಅಲೆಯ ಹೊಡೆತಕ್ಕೆ ಸಿಕ್ಕಿ ಎಸೆಯಲ್ಪಟ್ಟ ಬೈಂದೂರು ಶಾಸಕ!

    ಸಮುದ್ರಸ್ನಾನದ ವೇಳೆ ಅಲೆಯ ಹೊಡೆತಕ್ಕೆ ಸಿಕ್ಕಿ ಎಸೆಯಲ್ಪಟ್ಟ ಬೈಂದೂರು ಶಾಸಕ!

    ಉಡುಪಿ: ಮಹಾಲಯ ಸಮುದ್ರ ಸ್ನಾನದ ವೇಳೆ ಅರಬ್ಬಿ ಸಮುದ್ರದ ದೊಡ್ಡ ಅಲೆಗೆ ಸಿಕ್ಕಿ ಬೈಂದೂರು ಶಾಸಕ ಜಾರಿ ಬಿದ್ದಿದ್ದಾರೆ. ಉಡುಪಿಯಲ್ಲಿ ಇಂದು ಮಧ್ಯಾಹ್ನ ಸಮುದ್ರ ಪ್ರಕ್ಷುಬ್ಧವಾಗಿರುವಾಗಲೇ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಸಮುದ್ರಕ್ಕೆ ಇಳಿದಿದ್ದರಿಂದ ಈ ಘಟನೆ ನಡೆದಿದೆ.

    ಇವತ್ತು ಮಹಾಲಯ ಅಮವಾಸ್ಯೆ. ಮಹಾಲಯ ಅಮವಾಸ್ಯೆಯಂದು ಸಮುದ್ರ ಸ್ನಾನ ಮಾಡಬೇಕು ಎಂಬ ನಂಬಿಕೆ ಕರಾವಳಿ ಭಾಗದಲ್ಲಿದೆ. ಸಾವಿರಾರು ಜನ ಬೆಳಗ್ಗೆಯಿಂದ ಸಾಗರತೀರದಲ್ಲಿ ಸಮುದ್ರಸ್ನಾನ ಮಾಡಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಕೂಡಾ ಸಮುದ್ರಕ್ಕಿಳಿದಿದ್ದಾರೆ. ಜನರೆಲ್ಲಾ ಬೆಳಗ್ಗೆಯೇ ಸಮುದ್ರಸ್ನಾನ ಮುಗಿಸಿದ್ದರು. ಆದರೆ ಶಾಸಕರು ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ತ್ರಾಸಿ ಎಂಬಲ್ಲಿನ ಬೀಚ್ ಗೆ ಮಧ್ಯಾಹ್ನ ಬಂದಿದ್ದರು.

    ಬಿಜೆಪಿ ಶಾಸಕರ ಜೊತೆಗಿದ್ದವರು ಸಮುದ್ರಕ್ಕೆ ಇಳಿದು ಹೋಗಬೇಡಿ. ಮಧ್ಯಾಹ್ನ 12 ಗಂಟೆ ನಂತರ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ. ದಡದಲ್ಲೇ ಮುಳುಗುಹಾಕಿ ಅಂತ ಮನವಿ ಮಾಡಿಕೊಂಡರೂ ಶಾಸಕರು ಯಾರ ಮಾತನ್ನು ಲೆಕ್ಕಿಸದೇ, ಪುಣ್ಯಸ್ನಾನಕ್ಕೆ ಇಳಿದಿದ್ದರು. ಪರಿಣಾಮ ಅರಬ್ಬಿ ಸಮುದ್ರದ ಭಾರೀ ಅಲೆ ಸುಕುಮಾರ ಶೆಟ್ಟಿ ಅವರನ್ನು ಪಲ್ಟಿ ಹೊಡೆಸಿದೆ.

    ಕೂಡಲೇ ಜೊತೆಗಿದ್ದವರ ಸಹಾಯದಿಂದ ಶಾಸಕರು ಸುರಕ್ಷಿತವಾಗಿ ವಾಪಾಸ್ಸಾಗಿದ್ದಾರೆ. ಪ್ರತಿ ವರ್ಷ ಸುಕುಮಾರ ಶೆಟ್ಟಿ ಸಮುದ್ರಸ್ನಾನ ಮಾಡುತ್ತಾ ಬಂದಿದ್ದು, ಈ ಬಾರಿ ಮೊದಲ ಸಲ ಶಾಸಕನಾಗಿ ಸಮುದ್ರಸ್ನಾನ ಮಾಡಿದ್ದಾರೆ. ಸುತ್ತಮುತ್ತಲಿನ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ, ಸಮುದ್ರಕ್ಕೆ ಇಳಿದವರು ಅಲೆಯ ಹೊಡೆತಕ್ಕೋ ಅಥವಾ ಕಾಲ ಬುಡದಲ್ಲಿರುವ ಮರಳು ಜಾರಿದಾಗ ಬೀಳಲೇಬೇಕು. ಕಾಲು ಜಾರಿದರೆ ಆನೆಯೇ ಬೀಳುತ್ತೆ ಸ್ವಾಮಿ. ನಾನೊಬ್ಬ ಸಾಮಾನ್ಯ ಮನುಷ್ಯ. ನನಗೇ ಟೆನ್ಶನ್ ಇಲ್ಲ. ನಿಮಗೆ ಯಾಕೆ ಸ್ವಾಮಿ ಇಷ್ಟೊಂದು ಟೆನ್ಶನ್ ಅಂತ ಹೇಳಿದರು. 20 ವರ್ಷದಿಂದ ಸಮುದ್ರದಲ್ಲಿ- ಕೆರೆಯಲ್ಲಿ ಸ್ನಾನ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಶಿವನಿಗೆ ಪ್ರತಿದಿನ ಪೂಜೆ- ಅಭಿಷೇಕ ಮಾಡುವದರಿಂದ ದೇವರ ಆಶೀರ್ವಾದ ನನ್ನ ಜೊತೆಗಿದೆ. ಜನಸೇವೆ ಬಹಳ ಮಾಡುವುದಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/e7Tv2PnnOig