Tag: Sujeet

  • ಇದು ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಚಿತ್ರಕಥಾ!

    ಇದು ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಚಿತ್ರಕಥಾ!

    ಹೊಸಬರ ತಂಡದ ಮೇಲೆ ಕನ್ನಡ ಪ್ರೇಕ್ಷಕರಲ್ಲಿರೋ ನಂಬಿಕೆ ಮತ್ತೊಮ್ಮೆ ನಿಜವಾಗಿದೆ. ಇದೀಗ ಬಿಡುಗಡೆಯಾಗಿರೋ ಚಿತ್ರಕಥಾ ಹೊಸಾ ತಂಡವೊಂದು ರೂಪಿಸಿರೋ ಚಿತ್ರ. ಆದರೆ ಆರಂಭ ಕಾಲದಿಂದಲೂ ಈ ಸಿನಿಮಾ ಪೋಸ್ಟರ್ ಮುಂತಾದ ಕ್ರಿಯೇಟಿವ್ ಅಂಶಗಳೊಂದಿಗೆ ಪ್ರೇಕ್ಷಕರನ್ನು ಆಕರ್ಶಿಸುತ್ತಲೇ ಸಾಗಿ ಬಂದಿತ್ತು. ಅದೇ ಬಿಸಿಯಲ್ಲಿ ಬಿಡುಗಡೆಯಾಗಿರೋ ಚಿತ್ರಕಥಾ ಕಡೇಯವರೆಗೂ ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಮೂಲಕ ಪ್ರೇಕ್ಷಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿದೆ.

    ಇದು ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಚಿತ್ರವೆಂದು ಬಿಂಬಿಸಲ್ಪಡುತ್ತಲೇ ಅದರಲ್ಲಿಯೂ ವಿಶೇಷವಾದುದೇನನ್ನೋ ಬಚ್ಚಿಟ್ಟುಕೊಂಡಿರುವಂಥಾ ಸೂಚನೆ ರವಾನಿಸುತ್ತಾ ಬಂದಿದ್ದ ಚಿತ್ರ. ಚಿತ್ರತಂಡ ಜಾಹೀರು ಮಾಡಿದ್ದ ಒಂದೊಂದು ಸಣ್ಣ ಸಣ್ಣ ಸುಳಿವುಗಳೂ ಸಹ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದವು. ಒಂದು ಸಶಕ್ತ ತಾರಾಗಣದೊಂದಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೊಸತನದ ಸುಳಿವಿನೊಂದಿಗೆ ಸಾಗಿ ಬಂದಿದ್ದ ಚಿತ್ರಕಥಾದ ನವೀನ ಶೈಲಿಯ ಕಥೆ, ನಿರೂಪಣಾ ಶೈಲಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇಡೀ ಚಿತ್ರ ಮೂಡಿ ಬಂದಿರೋ ರೀತಿಯೇ ಅದಕ್ಕೆ ತಕ್ಕುದಾಗಿದೆ.

    ಇದು ಓರ್ವ ಕಲಾವಿದ ಮತ್ತು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಕಟ್ಟಿಕೊಂಡಿರೋ ಹುಡುಗನೊಬ್ಬನ ಸುತ್ತಾ ಸುತ್ತುವ ಕಥಾಹಂದರ ಹೊಂದಿರುವ ಚಿತ್ರ. ಇಲ್ಲಿ ಸುಜಿತ್ ರಾಥೋಡ್ ರಾಣಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಣಾ ಚಿತ್ರರಂಗದ ಬಗ್ಗೆ ಬಣ್ಣದ ಕನಸುಗಳನ್ನು ತುಂಬಿಕೊಂಡು ನಿರ್ದೇಶಕನಾಗೋ ಆಸೆಯಿಂದ ಜೀವಿಸೋ ಹುಡುಗ. ಆದರೆ ಈ ಹಾದಿಯಲ್ಲಿ ಎಲ್ಲ ಪ್ರಯತ್ನಗಳಾಚೆಗೂ ನಿರಾಸೆಗಳೇ ಆತನ ಕೈ ಹಿಡಿಯುತ್ತವೆ. ತಾನು ನಿರ್ದೇಶಕನಾಗಲು ಕಾಲ ಕೂಡಿ ಬಂದಿಲ್ಲವಲ್ಲಾ ಎಂಬ ಚಿಂತೆಯಲ್ಲಿರುವಾಗಲೇ ಪ್ರೀತಿಯ ಹುಡುಗಿಯೂ ಕೈಬಿಟ್ಟು ನಡೆದು ಹೋಗುತ್ತಾಳೆ. ಆ ಕ್ಷಣಗಳಲ್ಲಿ ರಾಣಾನನ್ನು ಇಡಿಯಾಗಿ ತಬ್ಬಿ ನಿಲ್ಲೋದು ಗಾಢವಾದ ಹತಾಶೆ ಮಾತ್ರ.

    ಇಂಥಾ ಸ್ಟೇಜಿನಲ್ಲಿರೋ ಹುಡುಗರಿಗೆ ಬಾರಿನ ಸ್ಟೆಪ್ಪುಗಳೇ ಮೊದಲನೆಯದಾಗಿ ಸ್ವಾಗತಿಸುತ್ತವೆ. ರಾಣಾ ಕೂಡಾ ಹತಾಶೆಯ ಮಡುವಿಗೆ ಬಿದ್ದು ಬಾರು ಸೇರಿಕೊಳ್ಳುತ್ತಾನೆ. ಇಂಥಾ ಘಳಿಗೆಯಲ್ಲಿಯೇ ಕಲಾವಿದನೊಬ್ಬ ಬಿಡಿಸಿದ ಚಿತ್ರ ಅಘೋರಿಯ ರೂಪದಲ್ಲಿ ಆತನನ್ನು ಕಾಡಲು ಶುರುವಿಡುತ್ತದೆ. ಇದು ಭ್ರಮೆಯಾ ವಾಸ್ತವವಾ ಎಂಬ ಸತ್ಯವನ್ನು ನಶೆಯಲ್ಲಿ ತಡಕಾಡುತ್ತಿರುವಾಗಲೇ ಸಾಕ್ಷಾತ್ತು ಅಘೋರಿಯೇ ರಾಣಾನೆದುರು ಪ್ರತ್ಯಕ್ಷವಾಗುತ್ತಾನೆ. ಕೊಲ್ಲಲೂ ಮುಂದಾಗುತ್ತಾನೆ. ನಂತರ ರಾಣಾ ಹೋದಲ್ಲಿ ಬಂದಲ್ಲಿ ಕೊಲ್ಲಲು ಹವಣಿಸೋ ಅಘೋರಿಯದ್ದೇ ಕಾಟ. ರಾಣಾನನ್ನು ಕಾಡುತ್ತಿರೋ ಅಘೋರಿಯ ಮೂಲ ಹುಡುಕುತ್ತಾ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಸುಧಾರಾಣಿ ಎಂಟ್ರಿ ಕೊಡುತ್ತಾರೆ. ಆ ನಂತರದ್ದು ನಿಜಕ್ಕೂ ರೋಚಕ ಜರ್ನಿ.

    ಹಾಗಾದರೆ ಈ ಅಘೋರಿಯ ಚಿತ್ರ ಬಿಡಿಸಿದ ಕಲಾವಿದನ್ಯಾರು, ಆ ಕಲಾವಿದನಿಗೂ ರಾಣಾಗೂ ಇರುವ ನಂಟ್ಯಾವುದು, ಯಾಕೆ ಆ ಅಘೋರಿ ನಾಯಕನ ಬೆಂಬಿದ್ದು ಕೊಲ್ಲಲು ಹವಣಿಸುತ್ತಾನೆಂಬ ಪ್ರಶ್ನೆಗಳಿಗೆ ಕ್ಲೈಮ್ಯಾಕ್ಸ್ ವರೆಗೂ ಕುತೂಹಲ ಬಿಗಿಯಾಗಿಟ್ಟುಕೊಳ್ಳುವ ಉತ್ತರವೊಂದು ಚಿತ್ರಕಥಾದಲ್ಲಿದೆ. ಮತ್ತದು ಮಜವಾದ ಅನುಭವಗಳನ್ನೇ ನೋಡುಗರೆಲ್ಲರಿಗೂ ಕಡೆಯವರೆಗೂ ಕಟ್ಟಿ ಕೊಡುತ್ತದೆ. ಆ ಅನುಭವ ಕೂಡಾ ಸಾಮಾನ್ಯ ಸೈಕಾಲಾಜಿಕಲ್ ಥ್ರಿಲ್ಲರ್ ಕಥನಗಳಿಗಿಂತ ಭಿನ್ನವಾಗಿದೆ ಎಂಬುದೇ ಚಿತ್ರಕಥಾ ಆಪ್ತವಾಗೋದರ ಹಿಂದಿರುವ ಅಸಲೀ ಗುಟ್ಟು.

    ಇದು ಯಶಸ್ವಿ ಬಾಲಾದಿತ್ಯ ನಿರ್ದೇಶನದ ಮೊದಲ ಚಿತ್ರ. ಆದರೆ ಅವರು ಇಡೀ ಚಿತ್ರವನ್ನು ಪಳಗಿದ ನಿರ್ದೇಶಕನಂತೆ ನಿಭಾಯಿಸಿದ ರೀತಿ ಇಷ್ಟವಾಗುವಂತಿದೆ. ಇಲ್ಲಿ ಒಂದು ಹಂತದಲ್ಲಿ ಪಾತ್ರಗಳೇ ವಿಹ್ವಲಗೊಳ್ಳುತ್ತವೆ. ಗೊಂದಲಕ್ಕೆ ಬೀಳುತ್ತವೆ. ಚೂರೇ ಚೂರು ಆಚೀಚೆಯಾದರೂ ಅದು ಪ್ರೇಕ್ಷಕರಿಗೂ ದಾಟಿಕೊಳ್ಳುವ ಅಪಾಯವೂ ಇದ್ದೇ ಇತ್ತು. ಆದರೆ ಅದನ್ನೂ ಕೂಡಾ ಕುತೂಹಲವಾಗಿ ಮಾರ್ಪಾಟು ಮಾಡಿರೋದು ಯಶಸ್ವಿ ಬಾಲಾದಿತ್ಯರ ಟ್ಯಾಲೆಂಟಿಗೆ ಸಾಕ್ಷಿಯಂತಿದೆ. ಸುಧಾರಾಣಿ, ಬಿ. ಜಯಶ್ರೀ, ದಿಲೀಪ್ ರಾಜ್, ತಬಲಾ ನಾಣಿ, ಅನುಷಾ ರಾವ್ ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ಪರಿಣಾಮಕಾರಿಯಾಗಿಸಿದ್ದಾರೆ. ಸುಜಿತ್ ರಾಥೋಡ್ ಕೂಡಾ ಇದು ಮೊದಲ ಚಿತ್ರವೆಂಬುದನ್ನೇ ಮರೆಮಾಚುವಂಥಾ ಮಾಗಿದ ನಟನೆ ಕೊಟ್ಟಿದ್ದಾರೆ.

    ಅಂತೂ ಚಿತ್ರಕಥಾ ಪ್ರತೀ ಪ್ರೇಕ್ಷಕರಲ್ಲಿಯೂ ವಿಭಿನ್ನ ಅನುಭೂತಿಯೊಂದನ್ನು ಮೂಡಿಸಿಸುತ್ತಲೆ. ಖುದ್ದು ನೋಡುಗರೇ ಭ್ರಮ ಮತ್ತು ವಾಸ್ತವದ ನಡುವಿನ ತೊಳಲಾಟದಲ್ಲಿ ಅರೆಕ್ಷಣ ಕಂಗಾಲಾಗುವಂತೆ ಮಾಡುವಷ್ಟು ಸಶಕ್ತವಾಗಿ ಇಲ್ಲಿನ ದೃಶ್ಯಗಳು ಮೂಡಿ ಬಂದಿವೆ. ಈ ಸಿನಿಮಾವನ್ನು ನೋಡುವ ಮೂಲಕ ಅಂಥಾ ವಿಶಿಷ್ಟ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

    ರೇಟಿಂಗ್: 3.5/5

  • ಚಿತ್ರಕಥಾ: ಸಿವಿಲ್ ಎಂಜಿನಿಯರ್ ಆಗಬೇಕಿದ್ದ ಸುಜಿತ್‍ರ ಕಲಾ ಕಾಮಗಾರಿ!

    ಚಿತ್ರಕಥಾ: ಸಿವಿಲ್ ಎಂಜಿನಿಯರ್ ಆಗಬೇಕಿದ್ದ ಸುಜಿತ್‍ರ ಕಲಾ ಕಾಮಗಾರಿ!

    ಬೆಂಗಳೂರು: ಕೈಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ, ಆದರೆ ಮೈ ಮನಸುಗಳ ತುಂಬೆಲ್ಲ ನಟನಾಗೋ ಕನಸು. ಇಂಥಾ ತೋಯ್ದಾಟದಲ್ಲಿಯೇ ಕನಸು ಮುಖ್ಯವಾ, ತಕ್ಷಣಕ್ಕೆ ಬದುಕು ರೂಪಿಸಿಕೊಳ್ಳೋದು ಮುಖ್ಯವಾ ಎಂಬ ಆಪ್ಷನ್‍ಗಳಲ್ಲಿ ಕನಸಿಗೇ ಆದ್ಯತೆ ಕೊಟ್ಟು ಮುನ್ನಡೆದವರು ಸುಜಿತ್ ರಾಥೋಡ್. ಇವರು ಈ ವಾರ ಬಿಡುಗಡೆಯಾಗುತ್ತಿರೋ ಚಿತ್ರಕಥಾ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಮೂಲಕ ವರ್ಷಾಂತರಗಳ ಹಿಂದೆ ಆಯ್ಕೆ ಮಾಡಿಕೊಂಡಿದ್ದ ಆಪ್ಷನನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.

    ಚಿತ್ರಕಥಾ ನೋಡ ನೋಡುತ್ತಲೇ ಬಹುನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಯಶಸ್ವಿ ಬಾಲಾದಿತ್ಯ ಚೊಚ್ಚಲ ನಿರ್ದೇಶನದ ಈ ಚಿತ್ರ ವಿಭಿನ್ನ ಪೋಸ್ಟರ್, ಟ್ರೈಲರ್ ಗಳ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದೆ. ಎಲ್ಲ ವರ್ಗದ ಪ್ರೇಕ್ಷಕರೂ ಚಿತ್ರಕಥಾ ಬಿಡುಗಡೆಗಾಗಿ ಕಾತರರಾಗಿದ್ದಾರೆ. ಇಂಥದ್ದೊಂದು ಒಳ್ಳೆ ಕಥೆಯ ಮೂಲಕ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದ್ದರ ಬಗ್ಗೆ ಸುಜಿತ್ ಅವರಲ್ಲಿಯೂ ಸಾರ್ಥಕ ಭಾವವಿದೆ. ಇದನ್ನೂ ಓದಿ : ಚಿತ್ರಕಥಾ: ಓದು ಅರ್ಧಕ್ಕೇ ಬಿಟ್ಟು ಕಲೆಯ ಕರೆಗೆ ಓಗೊಟ್ಟ ಯಶಸ್ವಿ!

    2016ರಲ್ಲಿ ವಿದೇಶದಲ್ಲಿ ಮಾಸ್ಟರ್ಸ್ ಮುಗಿಸಿಕೊಂಡು ಭಾರತಕ್ಕೆ ಮರಳಿದ ಸುಜಿತ್ ಅವರಿಗೆ ಈ ಚಿತ್ರದಲ್ಲಿ ನಾಯಕನಾಗೋ ಅವಕಾಶ ಕೂಡಿ ಬಂದಿತ್ತು. ಅಷ್ಟು ವರ್ಷಗಳ ಕನಸು ನನಸಾದ ಸಂತಸದಲ್ಲಿದ್ದ ಅವರ ಪಾಲಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿತ್ತು. ಈ ನಿರಾಸೆಯಲ್ಲಿಯೇ ಒಂದು ವರ್ಷ ಕಳೆದು 2017ರಲ್ಲಿಯೇ ನಿರ್ದೇಶಕ ಬಾಲಾದಿತ್ಯರ ಕಥೆಗೆ ಸುಜಿತ್ ಕಮಿಟ್ ಆಗಿದ್ದರು. ಅದಾಗಿ ಮಾರನೇ ವರ್ಷವೇ ಈ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಅದರಲ್ಲಿ ನಾನಾ ಶೇಡುಗಳಿರೋ ಅದ್ಭುತ ಪಾತ್ರವೂ ಅವರದ್ದಾಗಿತ್ತು. ಇದನ್ನೂ ಓದಿ : ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

    ಹುಬ್ಬಳ್ಳಿಯವರಾದ ಸುಜಿತ್‍ರ ತಂದೆ ಸರ್ಕಾರಿ ಅಧಿಕಾರಿಯಾಗಿದ್ದವರು. ಈ ಕಾರಣದಿಂದಲೇ ಇಡೀ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬದುಕುವ, ಅಲ್ಲಿಯೇ ಓದುವ ಅವಕಾಶವೂ ಅವರಿಗೆ ಸಿಕ್ಕಿತ್ತು. ಆದ್ದರಿಂದಲೇ ಹುಬ್ಬಳ್ಳಿ, ಕಾರವಾರ, ದಾಂಡೇಲಿ, ಶಿವಮೊಗ್ಗ ಮುಂತಾದೆಡೆಗಳಲ್ಲಿ ಅವರ ವಿದ್ಯಾಭ್ಯಾಸ ನಡೆದಿತ್ತು. ನಂತರ ಎಂಜಿನಿಯರಿಂಗ್‍ಗಾಗಿ ಬೆಂಗಳೂರಿಗೆ ಬಂದ ಸುಜಿತ್‍ರ ಮುಂದಿದ್ದದ್ದು ನಟನಾಗೋ ಗುರಿ. ಆದರೆ ಅನಿವಾರ್ಯವಾಗಿ ತಮ್ಮ ಆಸಕ್ತಿಗೆ ವಿರುದ್ಧವಾದ ದಿಕ್ಕಿನಲ್ಲಿಯೂ ಸಾಗಬೇಕಾಗಿ ಬಂತಾದರೂ ಅವರು ಕಡೆಗೂ ಗುರಿಯತ್ತ ಮೊದಲ ಹೆಜ್ಜೆಯಿಟ್ಟಿದ್ದಾರೆ. ಇದನ್ನೂ ಓದಿ : ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

    ಇದಕ್ಕೆ ಸ್ನೇಹಿತ ಪ್ರಜ್ವಲ್ ಎಂ ರಾಜ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಪ್ರಜ್ವಲ್ ಮತ್ತು ಸುಜಿತ್ ಕಾಲೇಜು ಗೆಳೆಯರು. ಪ್ರಜ್ವಲ್ ಅವರಿಗೆ ಆ ಕಾಲಕ್ಕೇ ನಿರ್ಮಾಪಕನಾಗೋ ಕನಸಿತ್ತು. ಅದನ್ನು ಮನಗಂಡಿದ್ದ ಸುಜಿತ್ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಹೇಳಿದ ಕಥೆಯನ್ನು ಪ್ರಜ್ವಲ್‍ಗೆ ಒಪ್ಪಿಸಿದಾಗ ಅವರೂ ಥ್ರಿಲ್ ಆಗಿ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಹೀಗೆ ಒಂದಕ್ಕೊಂದು ಪೂರಕ ಸನ್ನಿವೇಶಗಳಿಂದಲೇ ಚಿತ್ರಕಥಾ ಸಿದ್ಧಗೊಂಡಿದೆ. ಎತ್ತ ನೋಡಿದರೂ ಈ ಚಿತ್ರದೆಡೆಗೆ ಕುತೂಹಲವೇ ಕಾಣಿಸುತ್ತಿದೆ. ಅದರ ಅಲೆಯಲ್ಲಿಯೇ ಈ ಚಿತ್ರ ಇದೇ 12ರಂದು ಬಿಡುಗಡೆಯಾಗುತ್ತಿದೆ.