Tag: Sugar cane Farmers

  • ಮೈಶುಗರ್ ಆರಂಭಕ್ಕೆ ಆಸಕ್ತಿ ತೋರಿಸದ ಸರ್ಕಾರದ ವಿರುದ್ಧ ಆಕ್ರೋಶ

    ಮೈಶುಗರ್ ಆರಂಭಕ್ಕೆ ಆಸಕ್ತಿ ತೋರಿಸದ ಸರ್ಕಾರದ ವಿರುದ್ಧ ಆಕ್ರೋಶ

    ಮಂಡ್ಯ: ರಾಜ್ಯ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ನೀಡಿ ವ್ಯರ್ಥ ಮಾಡುತ್ತಿದೆ. ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ ಮೈಶುಗರ್ ಕಾರ್ಖಾನೆ. ಕಾರ್ಖಾನೆ ಆರಂಭಿಸಲು ಕೇವಲ 14 ಕೋಟಿ ರೂಪಾಯಿ ಕೊಡಲು ಸಾಧ್ಯವಾಗಲಿಲ್ಲ ಎಂದು ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಮೈಶುಗರ್ ಆಸ್ತಿ ಪಾರಂಪರಿಕವಾದುದು, ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಆಗಿದೆ. ಆದರೆ ಮೈಶುಗರ್ ಕಾರ್ಖಾನೆಯನ್ನು 40 ವರ್ಷಕ್ಕೆ ಗುತ್ತಿಗೆ ನೀಡಿ ಮಾರಾಟ ಮಾಡಲು ನಿಂತಿರುವ ಸರ್ಕಾರದ ಕ್ರಮ ಸರಿ ಇಲ್ಲ. ಬಳ್ಳಾರಿ ಜಿಂದಾಲ್ ಫ್ಯಾಕ್ಟರಿಯನ್ನು ಮಾರಾಟ ಮಾಡಲು ಹೋಗಿ ರೈತರು ಮತ್ತು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿ ಮಾರಾಟದ ವಿಷಯ ಕೈಬಿಟ್ಟರು. ಆದರೆ ಮೈಶುಗರ್ ಮಾರಾಟ ಮಾಡಲು ಮುಂದಾದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಮೈಸೂರು ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಕಬ್ಬನ್ನು ಜಿಲ್ಲೆಯ ಇತರೆ ಕಾರ್ಖಾನೆಳಿಗೆ ಹಾಗೂ ಹೊರ ಜಿಲ್ಲೆಯ ಕಾರ್ಖಾನಗಳಿಗೆ ಸಾಗಣಿಕೆ ಮಾಡುತ್ತಿರುವುದರಿಂದ ಮಂಡ್ಯ ಸಕ್ಕರೆ ಕಂಪನಿಗೆ ತೆಗೆದುಕೊಳ್ಳುವಷ್ಟೇ ಸಾಗಾಣಿಕೆ ವೆಚ್ಚವನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಸಾಕಾಣಿಕೆ ವೆಚ್ಚವನ್ನು ಆಯಾಯ ಕಾರ್ಖಾನೆಯವರೇ ಭರಸಿಕೊಳ್ಳಬೇಕು. ಇದರ ಹೊರೆಯನ್ನು ಕಬ್ಬು ಬೆಳೆಗಾರರಿಗೆ ಹೊರೆಸಬಾರದು. ಇದಕ್ಕೆ ಸರ್ಕಾರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

  • 10 ದಿನಗಳಲ್ಲಿ ರೈತರಿಗೆ 565 ಕೋಟಿ ರೂಪಾಯಿ ಕಬ್ಬಿನ ಬಾಕಿ ಪಾವತಿ

    10 ದಿನಗಳಲ್ಲಿ ರೈತರಿಗೆ 565 ಕೋಟಿ ರೂಪಾಯಿ ಕಬ್ಬಿನ ಬಾಕಿ ಪಾವತಿ

    – ಸಚಿವ ಎಂಟಿಬಿ ಎಚ್ಚರಿಕೆಗೆ ಮಣಿದ ಕಾರ್ಖಾನೆಗಳು

    ಬೆಂಗಳೂರು: ರೈತರು ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿರುವ ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡುವಂತೆ ಸಕ್ಕರೆ ಹಾಗೂ ಪೌರಾಡಳಿತ ಖಾತೆ ಸಚಿವ ಎಂಟಿಬಿ ನಾಗರಾಜ್ ಅವರು ನೀಡಿದ ಎಚ್ಚರಿಕೆ ಫಲ ನೀಡಿದ್ದು ಕೇವಲ ಹತ್ತು ದಿನಗಳಲ್ಲಿ 565 ಕೋಟಿ ರೂಪಾಯಿ ಬಾಕಿ ಹಣ ರೈತರಿಗೆ ಪಾವತಿಯಾಗಿದೆ.

    ರಾಜ್ಯದಲ್ಲಿ 2020-21 ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ 1324.49 ಕೋಟಿ ರೂಪಾಯಿಗಳನ್ನು ಬಾಕಿ ಇರಿಸಿಕೊಂಡಿದ್ದು, ಅದನ್ನು ಕೂಡಲೇ ಪಾವತಿಸುವಂತೆ ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಅವರು ಈ ತಿಂಗಳ 18 ರಂದು ಎಚ್ಚರಿಕೆ ನೀಡಿದ್ದರು.

    ಇದರಿಂದ ಎಚ್ಚೆತ್ತ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಳೆದ 10 ದಿನಗಳಲ್ಲಿ ಕಬ್ಬು ಬೆಳೆಗಾರರ 565 ಕೋಟಿ ರೂಪಾಯಿಗಳ ಬಾಕಿಯನ್ನು ಪಾವತಿ ಮಾಡಿದ್ದಾರೆ. ಇದರಿಂದಾಗಿ ಕಬ್ಬು ಬೆಳೆಗಾರರಿಗೆ ಪಾವತಿಸಬೇಕಿದ್ದ ಒಟ್ಟು ಬಿಲ್ಲಿನ ಮೊತ್ತವಾದ 13348.10 ಕೋಟಿ ರೂಪಾಯಿಗಳಲ್ಲಿ ಶೇಕಡಾ 95 ರಷ್ಟು ಅಂದರೆ 12669.01 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದಂತಾಗಿದೆ. ಇನ್ನು ಉಳಿದ ಬಾಕಿ ಹಣ ಶೇಕಡಾ ಐದರಷ್ಟಿರುವ 759.74 ಕೋಟಿ ರೂಪಾಯಿಗಳನ್ನು ಕೂಡಲೇ ಪಾವತಿಸದಿದ್ದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

    ಹಾಗೆಯೇ, ಸ್ಥಗಿತಗೊಂಡಿರುವ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ ಹಳೆಯ ಬಾಕಿ ರೂ 28.38 ಕೋಟಿ ಇದ್ದು, ಈ ಕಾರ್ಖಾನೆಗಳಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿ ವಸೂಲಾತಿ ಕ್ರಮ ಜರುಗಿಸಲು ಈಗಾಗಲೇ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಡಳಿತವು ಕೋವಿಡ್-19 ಕಾರ್ಯದಲ್ಲಿ ನಿರತವಾಗಿರುವುದರಿಂದ ಹರಾಜು ಪ್ರಕ್ರಿಯೆ ತಡವಾಗಿದ್ದು, ಕೋವಿಡ್ ನಂತರ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿ ಕಬ್ಬು ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ರೈತರು ಯಾವುದೇ ಕಾರಣಕ್ಕೂ ದೃತಿಗೆಡುವುದು ಬೇಡ, ರೈತರ ಹಿತ ಕಾಪಾಡುವುದಕ್ಕೆ ಸದಾ ನಮ್ಮ ಸರ್ಕಾರ ಬದ್ದವಾಗಿದೆ. ಬಾಕಿ ಹಣ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಸಚಿವರು ತಿಳಿಸಿದ್ದಾರೆ.