Tag: Sudamurthy

  • ಗೃಹ ಸಚಿವಾಲಯದಿಂದ ಇನ್ಫೋಸಿಸ್ ಫೌಂಡೇಶನ್ ನೋಂದಣಿ ರದ್ದು

    ಗೃಹ ಸಚಿವಾಲಯದಿಂದ ಇನ್ಫೋಸಿಸ್ ಫೌಂಡೇಶನ್ ನೋಂದಣಿ ರದ್ದು

    ನವದೆಹಲಿ: ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಇನ್ಫೋಸಿಸ್‍ನ ಸರ್ಕಾರೇತರ ಸಂಸ್ಥೆಯಾದ ಇನ್ಫೋಸಿಸ್ ಫೌಂಡೇಶನ್ ನೋಂದಣಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.

    ವಿದೇಶದಿಂದ ದೇಣಿಗೆ ಪಡೆಯುವ ವಿಚಾರದಲ್ಲಿ ಸಂಸ್ಥೆ ವಿದೇಶಿ ದೇಣಿಗೆ ನಿಯಂತ್ರಣಾ ಕಾಯ್ದೆ(ಎಫ್‌ಸಿಆರ್‌ಎ) ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಂಡಿದೆ ಎಂದು ವರದಿಯಾಗಿದೆ.

    ವಿದೇಶದಿಂದ ದೇಣಿಗೆ ಸ್ವೀಕರಿಸುತ್ತಿರುವ ದೇಶದ ಎಲ್ಲಾ ಎನ್‍ಜಿಒಗಳು ಎಫ್‌ಸಿಆರ್‌ಎ ಅಡಿ ನೋಂದಣಿ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

    ಇನ್ಫೋಸಿಸ್ ಫೌಂಡೇಶನ್ 6 ವರ್ಷದ ಹಿಂದಿನ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸದ ಕಾರಣ ಗೃಹ ಇಲಾಖೆ ಕಳೆದ ವರ್ಷವೇ ಶೋಕಾಸ್ ನೋಟಿಸ್ ಕಳುಹಿಸಿತ್ತು. ಆದರೆ ಸಂಸ್ಥೆ ಸೂಕ್ತ ದಾಖಲೆಗಳನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈಗ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿಯಮಗಳ ಅನ್ವಯ ಯಾವುದೇ ಸಂಸ್ಥೆ ವಿದೇಶಿ ದೇಣಿಗೆ ಪಡೆಯದಿದ್ದರೂ ಕೂಡ ಈ ಕುರಿತು ಮಾಹಿತಿ ನೀಡಬೇಕಿದೆ. ಇನ್ಫೋಸಿಸ್ ಮಾತ್ರವಲ್ಲದೇ ದೇಶದ ಸುಮಾರು 1,755 ಎನ್‍ಜಿಒಗಳಿಗೆ ಕೇಂದ್ರ ಸಚಿವಾಲಯ ಕಳೆದ ವರ್ಷ ನೋಟಿಸ್ ಜಾರಿ ಮಾಡಿತ್ತು.

    ಎಫ್‌ಸಿಆರ್‌ಎ ಮಾರ್ಗದರ್ಶಿ ಸೂತ್ರದ ಪ್ರಕಾರ, ಎನ್‍ಜಿಒ ಸಂಸ್ಥೆ ವಾರ್ಷಿಕ ಲೆಕ್ಕಪತ್ರವನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಖರ್ಚುಗಳ ವಿವರ ಮತ್ತು ಆದಾಯದ ಮಾಹಿತಿಯನ್ನು ಸ್ಕ್ಯಾನ್ ಮಾಡಿ ಹಣಕಾಸು ವರ್ಷ ಆರಂಭಗೊಂಡ 9 ತಿಂಗಳ ಒಳಗಡೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಕಂಪನಿ ಆ ವರ್ಷದಲ್ಲಿ ವಿದೇಶದಿಂದ ದೇಣಿಗೆ ಸ್ವೀಕರಿಸದೇ ಇದ್ದಲ್ಲಿ ಆ ವರ್ಷ ದೇಣಿಗೆ ಸ್ವೀಕರಿಸಿಲ್ಲ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ.

    ಈ ವಿಚಾರದ ಬಗ್ಗೆ ಇನ್ಫೋಸಿಸ್ ಫೌಂಡೇಶನ್ ವಕ್ತಾರರನ್ನು ಸಂಪರ್ಕಿಸಿದಾಗ, ನಮ್ಮ ಸಂಸ್ಥೆ ಎಫ್‌ಸಿಆರ್‌ಎ ಕಾಯ್ದೆಯ ಅಡಿ ಬರುವುದಿಲ್ಲ ಎಂದಿದ್ದಾರೆ.

    1966 ರಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಗೆ ಸುಧಾಮೂರ್ತಿಯವರು ಮುಖ್ಯಸ್ಥೆಯಾಗಿದ್ದು, ಭಾರತ ಹಳ್ಳಿಗಳ ಅಭಿವೃದ್ಧಿ, ಆರೋಗ್ಯ, ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು ಇನ್ಫೋಸಿಸ್ ಫೌಂಡೇಶನ್ ಪ್ರಮುಖ ಕಾರ್ಯವಾಗಿದೆ.

  • ನಾನು ನೆಮ್ಮದಿಯಿಂದ ಸಿಎಂ ಪಟ್ಟ ಅನುಭವಿಸುತ್ತಿಲ್ಲ- ಎಚ್‍ಡಿಕೆ

    ನಾನು ನೆಮ್ಮದಿಯಿಂದ ಸಿಎಂ ಪಟ್ಟ ಅನುಭವಿಸುತ್ತಿಲ್ಲ- ಎಚ್‍ಡಿಕೆ

    ಮೈಸೂರು: ನಾನು ನೆಮ್ಮದಿ, ಸಂತೋಷದಿಂದ ಸಿಎಂ ಪಟ್ಟ ಅನುಭವಿಸುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದು ಹೇಳುವ ಮೂಲಕ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

    ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮೂಲತಃ ರಾಜಕಾರಣಿಯೇ ಅಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು, ಆಕಸ್ಮಿಕವಾಗಿಯೇ ಎರಡು ಬಾರಿ ಸಿಎಂ ಆಗಿದ್ದೇನೆ. ಆದರೆ ನಿಮ್ಮ ಕಷ್ಟ ಪರಿಹರಿಸಲು ಶ್ರಮಿಸುತ್ತಿದ್ದೇನೆ. ಸರ್ಕಾರದ ಮೇಲೆ ನಂಬಿಕೆ ಇಡಿ ಎಂದು ಜನತೆಗೆ ಮನವಿ ಮಾಡಿಕೊಂಡರು.

    ಚುನಾವಣಾ ಆಯೋಗದ ನೀತಿ ಸಂಹಿತೆಯಿಂದಾಗಿ ನಾನು ವೇದಿಕೆಯಲ್ಲಿ ಭಾಷಣ ಮಾಡಲು ಆಗುತ್ತದೆಯೋ, ಇಲ್ಲವೋ ಎಂಬ ಅನುಮಾನ ಇತ್ತು ಎಂದ ಅವರು, ರೈತರೇ ಕೈ ಜೋಡಿಸಿ ಮನವಿ ಮಾಡಿಕೊಳ್ಳುತ್ತೇನೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಮ್ಮಲ್ಲಿ ಪ್ರಾಮಾಣಿಕತೆ ಇದೆ. ನಿಮ್ಮ ರಕ್ಷಣೆಗೆ ಈ ಸರ್ಕಾರ ಇರುವುದು. ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಕುಟುಂಬವನ್ನು ಅನಾಥ ಮಾಡಬೇಡಿ ಎಂದು ರೈತರಲ್ಲಿ ಕೇಳಿಕೊಂಡರು.

    ಇನ್ಫೋಸ್ಸಿಸ್ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ತಾಯಿ ಹೃದಯದ ಮಹಿಳೆ. ಅವರಿಂದ ನಾಡದೇವಿಗೆ ಪೂಜೆ ಸಲ್ಲಿಸಿದರೆ, ರಾಜ್ಯದ ಎಲ್ಲಾ ಸಮಸ್ಯೆ ಬಗೆಹರಿಯುತ್ತವೆ ಎನ್ನುವ ನಂಬಿಕೆ ನನ್ನದು. ಕರ್ನಾಟಕ ಜನ ಸುಭಿಕ್ಷವಾಗಿ ಬದುಕುವ ವಾತಾವರಣ ಕಲ್ಪಿಸು ಅಂತಾ ಅವರು ಚಾಮುಂಡಿ ದೇವಿಯಲ್ಲಿ ಬೇಡಿದ್ದಾಗಿ, ನನಗೆ ವಿವರಿಸಿದ್ದಾರೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv