Tag: subbareddy

  • ಕೊರೊನಾ ವೈರಸ್- ಮನೆಮನೆಗೆ ಭೇಟಿ ನೀಡಿ ಶಾಸಕರಿಂದ ಧೈರ್ಯ ತುಂಬೋ ಕೆಲಸ

    ಕೊರೊನಾ ವೈರಸ್- ಮನೆಮನೆಗೆ ಭೇಟಿ ನೀಡಿ ಶಾಸಕರಿಂದ ಧೈರ್ಯ ತುಂಬೋ ಕೆಲಸ

    ಚಿಕ್ಕಬಳ್ಳಾಪುರ: ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡ್ತಾರೆ. ಆದರೆ ಈಗ ಯಾವುದೇ ಚುನಾವಣೆ ಇಲ್ಲದಿದ್ರೂ ಕೊರೊನಾ ಭಯದಿಂದ ಮನೆಯಿಂದಲೇ ಹೊರಬಾರದೆ ಇದ್ದ ಜನರಿಗೆ ಮನೆ ಮನೆಗೆ ಹೋಗಿ ಕೈ ಶಾಸಕರೊಬ್ಬರು ಧೈರ್ಯ ತುಂಬೋ ಕಾಯಕ ಮಾಡ್ತಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಕೊರೊನಾವನ್ನ ದಿಟ್ಟತನದಿಂದ ಎದುರಿಸುವಂತೆ ಸೋಂಕಿತರಿರುವ ಹೊಸಹುಡ್ಯ ಗ್ರಾಮದಲ್ಲಿ ಮನೆಮನೆಗೆ ಭೇಟಿ ನೀಡಿ ಧೈರ್ಯ ತುಂಬೋ ಕೆಲಸ ಮಾಡಿದರು. ಜನರೊಂದಿಗೆ ಬೆರೆತು ಪಂಕ್ತಿ ಭೋಜನ ಸವಿದ ಸುಬ್ಬಾರೆಡ್ಡಿ ಗ್ರಾಮದಲ್ಲೇ ಇಡೀ ದಿನ ಓಡಾಡಿ ಜನರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ರು.

    ಎಲೆಕ್ಷನ್ ಸಮಯದಲ್ಲಿ ರಾಜಕಾರಣಿಗಳು ಬರ್ತಾರೆ ಅನ್ನೋ ಮಾತಿಗೆ ಅಪವಾದವೆಂಬಂತೆ ಶಾಸಕರು ಕೊರೊನಾ ಸೋಂಕಿತರ ಹೊಸಹುಡ್ಯ ಗ್ರಾಮಕ್ಕೆ ಭೇಟಿ ನೀಡಿ ಜನರ ಜೊತೆ ಬೆರೆತು ಕೊರೊನಾ ಕುರಿತು ಜನರಿಗಿದ್ದ ಭಯವನ್ನ ಹೋಗಲಾಡಿಸೋ ಕೆಲಸ ಮಾಡಿದರು. ಈಗ ಎಲ್ಲಿ ನೋಡಿದರೂ ಕೊರೊನಾದೇ ಸುದ್ದಿ. ಹೀಗಿರುವಾಗ ಯಾರಿಗಾದರೂ ಕೊರೊನಾ ಬಂದ್ರೆ, ಅವರನ್ನ ನೋಡೋ ದೃಷ್ಟಿನೇ ಬೇರೆ. ಇನ್ನೂ ಏರಿಯಾ, ಊರುಗಳಲ್ಲಿ ಕಾಣಿಸಿಕೊಂಡರೆ ಮುಗಿತು ಅನ್ನೋ ಮಟ್ಟಿಗೆ ಜನ ವರ್ತಿಸುತ್ತಾರೆ. ಅದರಲ್ಲೂ ಈ ಹೊಸಹುಡ್ಯ ಗ್ರಾಮದಲ್ಲಿ 08 ಮಂದಿಗೆ ಸೋಂಕು ತಗುಲಿದ್ದು, ಒಬ್ರು ಮೃತಪಟ್ಟಿದ್ರು.

    ಮೃತಪಟ್ಟ ವ್ಯಕ್ತಿ ಅಂತ್ಯಕ್ರಿಯೆ ನಡೆಸುವ ವೇಳೆ ಕನಿಷ್ಠ ಗುಣಿ ಅಗೆಯೋಕೆ ಗ್ರಾಮದಲ್ಲಿನ ಜೆಸಿಬಿ ಮಾಲೀಕನೂ ಸಹ ಮುಂದೆ ಬಂದಿಲ್ಲವಂತೆ. ಇದರಿಂದ ಕೊರೊನಾ ಭಯದಿಂದ ಜನ ಮನೆಯಿಂದ ಹೊರಬರೋಕೆ ಹೆದರುತ್ತಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಜೊತೆಗೂಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಸುಬ್ಬಾರೆಡ್ಡಿ ಧೈರ್ಯ ತುಂಬುವ ಕಾಯಕ ಮಾಡಿದ್ರು.

    ಕೇವಲ ಹೊಸಹುಡ್ಯ ಗ್ರಾಮವಷ್ಟೇ ಅಲ್ಲದೇ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಶಾಸಕ ಸುಬ್ಬಾರೆಡ್ಡಿ, ಕೊರೊನಾ ಕುರಿತು ಜಾಗೃತವಾಗಿರುವಂತೆ ಅರಿವು ಮೂಡಿಸುವುದರ ಜೊತೆಗೆ ಮಾಸ್ಕ್ ವಿತರಣೆ ಮಾಡಿ ಕೊರೊನಾ ವಾರಿಯರ್ಸ್ ಜೊತೆ ಗಲಾಟೆ ಮಾಡಿಕೊಳ್ಳದೇ ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಕಿವಿ ಮಾತು ಹೇಳ್ತಿದ್ದಾರೆ.

    ಶಾಸಕರಿಗೆ ಆರೋಗ್ಯ ಇಲಾಖಾಧಿಕಾರಿಗಳು ಸಾಥ್ ನೀಡಿದ್ದು, ಅಗತ್ಯ ಔಷಧಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಅಂತ ಹೆದರಿಕೊಳ್ಳುವ ಈ ದಿನಗಳಲ್ಲಿ ಖುದ್ದು ಶಾಸಕರೇ ಕೊರೊನಾ ಸೋಂಕಿತರ ಗ್ರಾಮಗಳಿಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬೋ ಕೆಲಸ ಮಾಡ್ತಿರೋದು ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದು ಜನ ಮೆಚ್ಚುಗೆಗೂ ಪಾತ್ರರಗಿದ್ದಾರೆ.

  • ಕೆಲಸಕ್ಕೆ ಬಾರದ ನಿಗಮ ಮಂಡಳಿ ನನಗೆ ಬೇಡ, ಪುಲ್ವಾಮಾ ಫಿಲಂನಿಂದ ಬಿಜೆಪಿಗೆ ಮತ – ಎಸ್.ಎನ್ ಸುಬ್ಬಾರೆಡ್ಡಿ

    ಕೆಲಸಕ್ಕೆ ಬಾರದ ನಿಗಮ ಮಂಡಳಿ ನನಗೆ ಬೇಡ, ಪುಲ್ವಾಮಾ ಫಿಲಂನಿಂದ ಬಿಜೆಪಿಗೆ ಮತ – ಎಸ್.ಎನ್ ಸುಬ್ಬಾರೆಡ್ಡಿ

    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ವಿರುದ್ಧ ಮತ್ತೋರ್ವ ಕಾಂಗ್ರೆಸ್ ಶಾಸಕ ಸಿಡಿದೆದ್ದಿದ್ದು ಕೆಲಸಕ್ಕೆ ಬಾರದ ನಿಗಮ ಮಂಡಳಿ ಬೇಡವೇ ಬೇಡ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹೇಳಿದ್ದಾರೆ.

    ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು ನಿಜ. ನನಗೆ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮ ಮಂಡಳಿ ಕೊಟ್ಟಿದ್ರು. ಆದರೆ ನನಗೆ ಆ ನಿಗಮ ಮಂಡಳಿ ಬೇಡ ಎಂದು ಅಂದೇ ಹೇಳಿದ್ದೆ. ಬಲವಂತವಾಗಿ ಕೊಟ್ಟರೂ ನಾನು ಇದುವರೆಗೂ ನಿಗಮ ಮಂಡಳಿಯ ಕಾರ್ಯಭಾರವನ್ನೇ ತೆಗೆದುಕೊಂಡಿಲ್ಲ. ಹೀಗಾಗಿ ಕೆಲಸಕ್ಕೆ ಬಾರದ ನಿಗಮ ಮಂಡಳಿ ನನಗೆ ಬೇಡ ಎಂದು ಹೇಳಿದ್ದಾರೆ.

    ಪಕ್ಷದಲ್ಲಿ ಬೇರೆ ಯಾರಾದರು ಇದ್ದರೆ ಅವರಿಗೆ ಆ ನಿಗಮ ಮಂಡಳಿ ಕೊಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗೂಂಡೂರಾವ್ ಹಾಗೂ ಸಿಎಂ ಕುಮಾರಸ್ವಾಮಿ ತಿಳಿಸಿರುವುದಾಗಿ ಹೇಳಿದರು.

    ಸಣ್ಣ ಕೈಗಾರಿಕಾ ಇಲಾಖೆಯ ಸಚಿವರಾಗಿ ಜೆಡಿಎಸ್ ನ ಸಾರಾ ಮಹೇಶ್ ಅವರು ಇದ್ದಾರೆ. ಹೀಗಾಗಿ ನಮಗೂ ಅವರಿಗೂ ಹೊಂದಾಣಿಕೆ ಕಷ್ಟಸಾಧ್ಯ. ಹೀಗಾಗಿ ತುಂಬಾ ರಿಸ್ಕ್ ತೆಗೆದುಕೊಳ್ಳೋದು ಬೇಡ ಎಂದು ನಿಗಮ ಮಂಡಳಿ ಬೇಡ ಎಂದಿದ್ದೇನೆ. ಕೊಡುವುದಾದರೆ ಯಾವುದಾದರೂ ತಮ್ಮ ಕ್ಷೇತ್ರದ ಜನರ ಅಭಿವೃದ್ಧಿಗೆ ಉಪಯೋಗವಾಗುವಂತಹ ಗ್ರಾಮೀಣಾಭಿವೃದ್ಧಿ ನಿಗಮ ಕೊಡಲಿ ಎಂದಿದ್ದಾರೆ.

    ಪುಲ್ವಾಮಾ ಫಿಲಂ ನೋಡಿ ಬಿಜೆಪಿಗೆ ಮತ:
    ಪುಲ್ವಾಮಾ ಫಿಲಂ ನೋಡಿ ದೇಶದಲ್ಲೆಲ್ಲಾ ಬಿಜೆಪಿಗೆ ಮತ ನೀಡಲಾಗಿದೆ. ಬಿಜೆಪಿ ಫಿಲ್ಮ್ ನೋಡಿ ವೋಟು ಹಾಕಿದ್ದಾರೆಯೇ ಹೊರತು ಬೇರೇನೂ ಇಲ್ಲ. ಅಭಿನಂದನ್ ಹೀರೋ ತರ ಕರೆ ತಂದಿದ್ದು ನೋಡಿ ಬಿಜೆಪಿಗೆ ಮತ ಹಾಕಿದ್ದಾರೆ. ನಾನು ಅದನ್ನ ನೋಡಿ ಸಿನಿಮಾ ರೀತಿ ಭಾಸವಾಯಿತು. ಪುಲ್ವಾಮಾ ದಾಳಿಯಿಂದ ಬಿಜೆಪಿ ಸಾಕಷ್ಟು ಪ್ರಚಾರ ಪಡೆಯಿತು. ಮಾಧ್ಯಮಗಳು ಕೂಡ ಅದನ್ನ ಸಾಕಷ್ಟು ಪ್ರಚಾರ ಮಾಡಿದವು. ಆದ್ದರಿಂದಲೇ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಹಿನ್ನೆಡೆಗೆ ಮೈತ್ರಿಯೂ ಒಂದು ಕಾರಣ ಎಂದು ಅವರು ತಿಳಿಸಿದರು.