Tag: Statistics

  • ಕೋವಿಡ್ ಸಾವಿನ ಸಂಖ್ಯೆಯನ್ನು ನಿಖರವಾಗಿ ನೀಡಲಾಗಿದೆ: ಕೇಂದ್ರ

    ಕೋವಿಡ್ ಸಾವಿನ ಸಂಖ್ಯೆಯನ್ನು ನಿಖರವಾಗಿ ನೀಡಲಾಗಿದೆ: ಕೇಂದ್ರ

    ನವದೆಹಲಿ: ಕೊರೊನಾ ಸಾವಿನ ಲೆಕ್ಕವನ್ನು ಕೇಂದ್ರ ಮುಚ್ಚಿಟ್ಟಿದೆ ಎಂಬ ಗಂಭೀರ ಆರೋಪದ ಬೆನ್ನಲ್ಲೆ, ಈ ಆರೋಪದಲ್ಲಿ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.

    ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರು ಈ ಕುರಿತು ಉತ್ತರಿಸಿದ್ದು, ಕೋವಿಡ್-19 ಸಾವುಗಳನ್ನು ಮುಚ್ಚಿಡುವ ಆರೋಪಗಳನ್ನು ತಳ್ಳಿಹಾಕಿದರು. ಕೇಂದ್ರ ಸರ್ಕಾರ ರಾಜ್ಯಗಳು ಕಳುಹಿಸುವ ದತ್ತಾಂಶವನ್ನು ಸಂಗ್ರಹಿಸುತ್ತದೆ ಮತ್ತು ಪ್ರಕಟ ಮಾಡುತ್ತದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿಂದು 1,653 ಕೊರೊನಾ ಕೇಸ್- 31 ಸಾವು, 2,572 ಡಿಸ್ಚಾರ್ಜ್

    ಭಾರತದಲ್ಲಿ ಕಾನೂನಾತ್ಮಕ ಮರಣ ನೋಂದಣಿ ವ್ಯವಸ್ಥೆಯನ್ನು ಹೊಂದಿದ್ದು, ಸಾಂಕ್ರಾಮಿಕ ರೋಗ ಮತ್ತು ಅದರ ನಿರ್ವಹಣೆಯ ತತ್ವಗಳ ಪ್ರಕಾರ ಕೆಲವು ಪ್ರಕರಣಗಳು ಪತ್ತೆಯಾಗುವುದಿಲ್ಲವಾದರೂ, ಸಾವುಗಳನ್ನು ತಪ್ಪಿಸಿಕೊಳ್ಳುವುದು ಅಸಂಭವವಾಗಿದೆ. ಇದರಲ್ಲಿ ಮರಣ ದರವನ್ನು ಸಹ ನಾವು ನೋಡಬಹುದಾಗಿದ್ದು, 2020ರ ಡಿಸೆಂಬರ್ 31 ರ ವರೆಗೆ ಮರಣದರ ಶೇ.1.45 ಇತ್ತು, 2021ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅನಿರೀಕ್ಷಿತವಾಗಿ ಎರಡನೇ ಅಲೆ ಉತ್ತುಂಗಕ್ಕೆ ಏರಿಕೆಯಾಗಿದ್ದು, ಇದೀಗ ಮರಣ ದರ ಶೇ.1.34 ಇದೆ ಎಂದು ಸರ್ಕಾರ ಹೇಳಿದೆ.

    ತಳಮಟ್ಟದಿಂದಲೇ ದೈನಂದಿನ ಹೊಸ ಪ್ರಕರಣಗಳು ಮತ್ತು ಮರಣಗಳು ವರದಿಯಾಗುತ್ತಿದ್ದು, ಜಿಲ್ಲೆಗಳು ಒಟ್ಟು ಪ್ರಕರಣಗಳು ಮತ್ತು ಮರಣಗಳ ಸಂಖ್ಯೆಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಿವೆ. ಇದು ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ರವಾನೆಯಾಗುತ್ತದೆ. 2020ರ ಮೇ ಗೂ ಮೊದಲೇ ವರದಿಯಾದ ಸಾವುಗಳು ಮತ್ತು ಗೊಂದಲ ತಪ್ಪಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಭಾರತದಲ್ಲಿ ಕೋವಿಡ್-19 ಸಂಬಂಧಿತ ಸಾವುಗಳನ್ನು ಸೂಕ್ತ ರೀತಿಯಲ್ಲಿ ದಾಖಲಿಸಲು ಮಾರ್ಗಸೂಚಿ ಬಿಡುಗಡೆಮಾಡಿತ್ತು. ಎಲ್ಲಾ ಕೋವಿಡ್-19 ಮರಣಗಳನ್ನು ಸರಿಯಾಗಿ ದಾಖಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ತನ್ನ ಐಸಿಡಿ-10 ಸಂಹಿತೆಯಡಿ ಮಾಡಿರುವ ಶಿಫಾರಸ್ಸಿನನ್ವಯ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಐಸಿಎಂಆರ್ ಹೊರಡಿಸಿರುವ ಮಾರ್ಗಸೂಚಿಯನ್ನು ಭಾರತ ಅನುಸರಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.

  • ಕೊರೊನಾ ಅಂಕಿಅಂಶದಲ್ಲಿ ಚೀನಾವನ್ನೇ ಹಿಂದಿಕ್ಕಿದ ಮುಂಬೈ

    ಕೊರೊನಾ ಅಂಕಿಅಂಶದಲ್ಲಿ ಚೀನಾವನ್ನೇ ಹಿಂದಿಕ್ಕಿದ ಮುಂಬೈ

    ಮುಂಬೈ: ಕೊರೊನಾ ವೈರಸ್ ಸಾವಿನ ಸಂಖ್ಯೆ ಹಾಗೂ ಪಾಸಿಟಿವ್ ಪ್ರಕರಣಗಳಲ್ಲಿ ಮಹಾರಾಷ್ಟ್ರದ ರಾಜಧಾನಿ ಮುಂಬೈ ಕೊರೊನಾ ವೈರಸ್ ತವರು ಮನೆ ಚೀನಾವನ್ನೇ ಹಿಂದಿಕ್ಕಿದೆ.

    ಅಧಿಕೃತ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಸ್ತುತ 85,724 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಸೋಂಕಿನಿಂದ 4,938 ಸಾವುಗಳು ಸಂಭವಿಸಿವೆ. ಹಾಗೇಯೆ ಚೀನಾದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 4,634 ಸಾವನ್ನಪ್ಪಿದರೆ, ಪ್ರಸ್ತುತ ಚೀನಾದಲ್ಲಿ 83,565 ಕೊರೊನಾ ಪಾಸಿಟಿವ್ ಪ್ರಕರಣಗಳು ಇವೆ. ಈ ಮೂಲಕ ಮುಂಬೈ ಚೀನಾವನ್ನೇ ಮೀರಿಸಿದೆ.

    ಸದ್ಯ ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಚೀನಾದಲ್ಲಿ ಒಂದು ದಿನಕ್ಕೆ ಕೇವಲ ಒಂದಂಕಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಚೀನಾ ಸೋಂಕಿನಿಂದ ಬೇಗ ಗುಣಮುಖವಾಗುತ್ತಿದೆ. ಆದರೆ ಭಾರದಲ್ಲಿ ಸೋಂಕು ದಿನೇ ದಿನೇ ತನ್ನ ವ್ಯಾಪ್ತಿಯನ್ನು ವೃದ್ದಿಸಿಕೊಳ್ಳುತ್ತಿದ್ದು, ಮುಂಬೈನಲ್ಲಿ ಜುಲೈ 1ರಿಂದ ದಿನಾ ಸರಾಸರಿ 1,100 ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಸದ್ಯ ಭಾರತದಲ್ಲಿ ಮಹಾರಾಷ್ಟ್ರ ಕೊರೊನಾ ಹಬ್ ಆಗಿ ಪರಿವರ್ತನೆಗೊಂಡಿದೆ. ದೇಶದಲ್ಲಿ ಇಲ್ಲೇ ಅತೀ ಹೆಚ್ಚು ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ 2,11,987 ಪ್ರಕರಣಗಳೊಂದಿಗೆ, ಮಹಾರಾಷ್ಟ್ರ ಸೋಮವಾರ ಟರ್ಕಿ ದೇಶವನ್ನು ಮೀರಿಸಿದೆ. ಟರ್ಕಿಯಲ್ಲಿ 2,05,758 ಕೊರೊನಾ ಪ್ರಕರಣಗಳು ದಾಖಲಾಗಿದೆ. ಜೂನ್ 4ರಂದು ಮಹಾರಾಷ್ಟ್ರವು ಜರ್ಮನಿ (198,064) ಮತ್ತು ದಕ್ಷಿಣ ಆಫ್ರಿಕಾ (205,721)ವನ್ನು ಕೊರೊನಾ ಅಂಕಿ ಅಂಶದಲ್ಲಿ ಹಿಂದಿಕ್ಕಿತ್ತು.

    ಮಹಾರಾಷ್ಟ್ರದಲ್ಲಿ ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 211,987 ಆಗಿದ್ದರೆ, ಸಾವಿನ ಸಂಖ್ಯೆ 9,026 ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಶೇ.67ರಷ್ಟು ಜನ ಗುಣಮುಖರಾಗಿದ್ದಾರೆ. ಸದ್ಯ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಮುಂಬೈನಲ್ಲಿ 3,520 ಹೊಸ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಮಹಾಲಕ್ಷ್ಮಿ ಕುದುರೆ ಸವಾರಿ ಸ್ಥಳ, ದಹಿಸರ್, ಮುಲುಂಡ್ ಮತ್ತು ಬಾಂದ್ರಾ ಕುರ್ಲ ಕಾಂಪ್ಲೆಕ್ಸ್ ನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಡಲು ಮಹಾರಾಷ್ಟ್ರದ ಸರ್ಕಾರ ಮುಂದಾಗಿದೆ.

  • ದೇಶದಲ್ಲಿ ಒಂದೇ ದಿನ 1,674 ಕೊರೊನಾ ಪ್ರಕರಣ ಪತ್ತೆ

    ದೇಶದಲ್ಲಿ ಒಂದೇ ದಿನ 1,674 ಕೊರೊನಾ ಪ್ರಕರಣ ಪತ್ತೆ

    – ನೀತಿ ಆಯೋಗದ ಸಿಬ್ಬಂದಿಗೂ ಸೋಂಕು
    – ಕೊರೊನಾ ಹೊಸ ಲಕ್ಷಣ ಪತ್ತೆ

    ನವದೆಹಲಿ: ದೇಶಾದ್ಯಂತ ಕೊರೊನಾ ಮಹಾಮಾರಿ ತನ್ನ ವ್ಯಾಪ್ತಿ ವಿಸ್ತರಿಸುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,674 ಹೊಸ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿದೆ. ಸಾವಿನ ಸಂಖ್ಯೆ ಸಾವಿರದ ಗಡಿಯತ್ತ ಮುನ್ನುಗ್ಗುತ್ತಿದೆ. ಅತ್ತ ಚೀನಾದ ಬೀಜಿಂಗ್‍ನಲ್ಲಿ ಕೊರೊನಾ ಆಸ್ಪತ್ರೆಯನ್ನು ಮುಚ್ಚಲಾಗಿದೆ.

    ದೇಶದಲ್ಲಿ ಇದುವರೆಗೆ 7,000ಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಳ್ಳುವವರ ಪ್ರಮಾಣ ಶೇ.23.3ಕ್ಕೆ ಹೆಚ್ಚಳ ಆಗಿದೆ. ದೆಹಲಿಯಲ್ಲಿರುವ ನೀತಿ ಆಯೋಗದ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಆತಂಕ ಸೃಷ್ಟಿಸಿದೆ.

    ಕೊರೊನಾ ವಿರುದ್ಧ ಹೋರಾಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ 1.5 ಬಿಲಿಯನ್ ಡಾಲರ್ ಸಾಲ ನೀಡಿದೆ. ಸಿಬಿಎಸ್‍ಇ ಸಿಲೆಬಸ್‍ನ 10 ಮತ್ತು 12ನೇ ತರಗತಿಯ ಉಳಿದ ವಿಷಯಗಳ ಪರೀಕ್ಷೆಗಳನ್ನು ನಡೆಸಬೇಕೋ ಬೇಡವೋ ಎಂಬ ಸಂಧಿಗ್ಧತೆ ಎದುರಾಗಿದೆ. ಇನ್ನು 10 ದಿನಗಳಲ್ಲಿ ಪರೀಕ್ಷೆ ನಡೆಸಬೇಕೋ ಅಥವಾ ಹಾಗೇ ತೇರ್ಗಡೆ ಮಾಡಬೇಕೋ ಎಂಬುದು ನಿರ್ಧಾರ ಆಗಲಿದೆ.

    ದೇಶದಲ್ಲಿ ಪ್ಲಾಸ್ಮಾ ಥೆರಪಿ ಪ್ರಾಯೋಗಿಕ ಪರೀಕ್ಷೆಗಷ್ಟೇ ಅನುಮತಿ ನೀಡಲಾಗಿದೆ. ಎಲ್ಲ ಸೋಂಕಿತರಿಗೆ ಇದನ್ನು ಬಳಸಲು ಅವಕಾಶ ಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮಧ್ಯೆ ಸೋಂಕಿತರ ಕ್ವಾರಂಟೈನ್‍ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ಅತಿ ಕಡಿಮೆ ರೋಗ ಲಕ್ಷಣ ಉಳ್ಳ ಸೋಂಕಿತರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬಹುದು. ಆದರೆ ಇದನ್ನು ವೈದ್ಯರು ದೃಢೀಕರಿಸಬೇಕು. ಕಡಿಮೆ ರೋಗ ಲಕ್ಷಣ ಉಳ್ಳವರು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು. ತಮ್ಮ ಕುಟುಂಬಸ್ಥರನ್ನು ಕ್ವಾರಂಟೈನ್‍ನಲ್ಲಿ ಇರಿಸಬೇಕು. ಇಂಥವರನ್ನು ನೋಡಿಕೊಳ್ಳಲು ದಿನದ 24 ಗಂಟೆಯೂ ನುರಿತ ನರ್ಸ್‍ಗಳು ಲಭ್ಯ ಇರಬೇಕು. ನರ್ಸ್‍ಗಳು ವೈದ್ಯರ ಸಲಹೆ ಪಡೆದು ಹೈಡ್ರಾಕ್ಸಿ ಕ್ಲೋರೋಕ್ವಿನ್, ಪ್ರೋಫಿಲ್ಯಾಕ್ಸಿನ್ ತೆಗೆದುಕೊಳ್ಳುವುದು ಕಡ್ಡಾಯ. ಅಲ್ಲದೆ ಮೊಬೈಲ್‍ನಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆಕ್ಟೀವ್‍ನಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.

    ಕೊರೊನಾ ಹೊಸ ಲಕ್ಷಣ
    ಕೊರೊನಾ ವೈರಸ್ ಸೋಂಕಿರುವ ಮಧ್ಯ ವಯಸ್ಕರಲ್ಲಿ ಪಾಶ್ರ್ವವಾಯು ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಶ್ವಾಸಕೋಶ ಸೇರುವ ವೈರಸ್‍ನಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ನಂತರ ಇದು ರಕ್ತಚಲನೆ ಮೇಲೆ ಪರಿಣಾಮ ಬೀರಿ, ಅಂಗಾಂಗಳಿಗೆ ಸ್ಟ್ರೋಕ್ ಹೊಡೆಯುವ ಸಾಧ್ಯತೆ ಇದೆ ಎಂದು ಅಮೆರಿಕಾ ವೈದ್ಯರು ಎಚ್ಚರಿಸಿದ್ದಾರೆ. ಅಮೆರಿಕಾದ ವೈದ್ಯರ ವರದಿ ಪ್ರಕಾರ, 30ರಿಂದ 40ರ ವಯಸ್ಸಿನ ಕೊರೊನಾ ರೋಗಿಗಳು ಸೋಂಕಿಗೆ ತುತ್ತಾದ ಬಳಿಕ ಪಾಶ್ರ್ವವಾಯು ಪೀಡಿತರಾಗಿದ್ದಾರೆ. ಈ ಪೈಕಿ ಹಲವರು ಸಾವನ್ನಪ್ಪಿದ್ದಾರೆ. ಇದೇ ರೀತಿಯ ಪ್ರಕರಣಗಳು ಚೀನಾದಲ್ಲೂ ಕಂಡು ಬಂದಿದೆ. ಪಾಶ್ರ್ವವಾಯುಗೆ ತುತ್ತಾಗುವ ಪ್ರಮಾಣ ಕಡಿಮೆಯಿದ್ದರೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.

    ವಿಶ್ವದಲ್ಲಿ ಮಹಾಮಾರಿ ಕೊರೊನಾ ಆರ್ಭಟಕ್ಕೆ ಮಿತಿಯೇ ಇಲ್ಲದಂತಾಗಿದ್ದು, ಸೋಂಕಿತರ ಸಂಖ್ಯೆ 31 ಲಕ್ಷದ ಸನಿಹದಲ್ಲಿದೆ. ಇದುವರೆಗೆ ಕೊರೊನಾಗೆ 2.12 ಲಕ್ಷ ಜನ ಸಾವನ್ನಪ್ಪಿದ್ದಾರೆ. ಸುಮಾರು 9 ಲಕ್ಷದಷ್ಟು ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಚೀನಾದ ಬೀಜಿಂಗ್‍ನಲ್ಲಿ ಕೊರೊನಾ ಆಸ್ಪತ್ರೆಯನ್ನು ಮುಚ್ಚಲಾಗಿದೆ. ನೈಜೀರಿಯಾದಲ್ಲಿ ಮೇ 4ರವರೆಗೆ ಲಾಕ್‍ಡೌನ್ ವಿಸ್ತರಣೆ ಆಗಿದೆ. ಅರ್ಜೆಂಟಿನಾದಲ್ಲಿ ಸೆಪ್ಟೆಂಬರ್ 1ರವರೆಗೆ ವಿಮಾನ ಸಂಚಾರ ಬಂದ್ ಮಾಡಲಾಗಿದೆ. ಟೋಕಿಯೋ ಒಲಿಂಪಿಕ್ ಮುಂದಿನ ವರ್ಷವೂ ನಡೆಯೋದು ಅನುಮಾನ ಎನ್ನಲಾಗಿದೆ.

  • ದೇಶದಲ್ಲಿ ಒಂದೇ ದಿನ 1,400 ಮಂದಿಗೆ ಕೊರೊನಾ

    ದೇಶದಲ್ಲಿ ಒಂದೇ ದಿನ 1,400 ಮಂದಿಗೆ ಕೊರೊನಾ

    – 28 ಸಾವಿರ ದಾಟಿದ ಸೋಂಕಿತರ ಸಂಖ್ಯೆ
    – ವಿಶ್ವದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ, 2 ಲಕ್ಷ ಸಾವು

    ನವದೆಹಲಿ: ದೇಶಾದ್ಯಂತ ಕೊರೊನಾ ರಣಕೇಕೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,400 ಮಂದಿಗೆ ಸೋಂಕು ತಗುಲಿದ್ದು, ಬಾಧಿತರ ಸಂಖ್ಯೆ 28 ಸಾವಿರದ ಗಡಿ ದಾಟಿದೆ. ಇದುವರೆಗೂ 886 ಮಂದಿ ಸಾವನ್ನಪ್ಪಿದ್ದಾರೆ.

    ಕೊರೊನಾ ಸೋಂಕಿನಿಂದ ದೇಶದಲ್ಲಿ 6,573 ಮಂದಿ ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣ ಶೇ.22.17ಕ್ಕೆ ಏರಿಕೆಯಾಗಿದೆ. ಕಳೆದ 28 ದಿನಗಳಿಂದ ದೇಶದ 16 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಕಳೆದ 14 ದಿನಗಳಿಂದ 85 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೆ ಕೇರಳದಲ್ಲಿ 25 ಮಂದಿಗೆ ಸೊಂಕು ಹೇಗೆ ಹಬ್ಬಿದೆ ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಕೊರೊನಾ ಮೂರನೇ ಹಂತ ತಲುಪಿದೆಯೇ ಎಂಬ ಆತಂಕ ಕೇರಳದ ಜನತೆಗೆ ಎದುರಾಗಿದೆ.

    ಇಂದು ಸಹ ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 440 ಹೊಸ ಪ್ರಕರಣಗಳು ಕಂಡುಬಂದಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8,068ಕ್ಕೆ ಏರಿದೆ. ಒಂದೇ ದಿನ 19 ಜನ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಈ ವರೆಗೆ ಒಟ್ಟು 342 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಒಂದೇ ದಿನ 230 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 3,301ಕ್ಕೆ ಏರಿಕೆಯಾಗಿದೆ. ಒಂದೇ ಸಿನ 18 ಜನ ಸಾವನ್ನಪ್ಪಿದ್ದಾರೆ. ಒಟ್ಟು 151 ಜನ ಅಸುನೀಗಿದ್ದಾರೆ.

    ಕಳೆದ ಎರಡ್ಮೂರು ದಿನಗಳಿಂದ ನಿಯಂತ್ರಣದಲ್ಲಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಒಂದೇ ದಿನ 293 ಪ್ರಕರಣಗಳು ಪತ್ತೆಯಾಗಿವೆ. 54 ಜನ ಸಾವನ್ನಪ್ಪಿದ್ದಾರೆ. ಒಟ್ಟು 2,918 ಜನರಿಗೆ ಸೋಂಕು ತಗುಲಿದೆ.

    ವಿಶ್ವದೆಲ್ಲೆಡೆ ದಿನದಿನಕ್ಕೂ, ಕ್ಷಣಕ್ಷಣಕ್ಕೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ 30 ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಜನರನ್ನು ಈ ಹೆಮ್ಮಾರಿ ಬಲಿ ಪಡೆದಿದೆ. ಸುಮಾರು 9 ಲಕ್ಷದಷ್ಟು ಜನ ಸೋಂಕಿನಿಂದ ಗುಣಮುಖರಾಗಿದ್ದು, 19 ಲಕ್ಷ ಮಂದಿ ಈ ಕ್ರೂರ ರೋಗದಿಂದ ಬಳಲುತ್ತಿದ್ದಾರೆ. ಪ್ರಪಂಚದಾದ್ಯಂತ 3ನೇ 1ರಷ್ಟು ಸೋಂಕಿತರು ಅಮೆರಿಕದಲ್ಲೇ ಇರುವುದು ವಿಶ್ವದ ದೊಡ್ಡಣ್ಣನಿಗೆ ಭಾರಿ ಏಟು ಕೊಟ್ಟಿದೆ. ಅಮೆರಿಕಾ ಒಂದರಲ್ಲೇ 55 ಸಾವಿರಕ್ಕೂ ಹೆಚ್ಚು ಜನ ಈ ರೋಗದಿಂದ ಮೃತಪಟ್ಟಿರುವುದು ಕೊರೊನಾದ ಭೀಕರತೆಯನ್ನು ಸ್ಪಷ್ಟಪಡಿಸುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 9,90,021ಕ್ಕೆ ಏರಿದೆ. ರಷ್ಯಾ ಕೂಡ ಕೊರೊನಾ ಕಬಂಧ ಬಾಹುವಿನಲ್ಲಿ ಸಿಲುಕಿದ್ದು ಇಂದು ಒಂದೇ ದಿನ 6 ಸಾವಿರ ಜನರಲ್ಲಿ ಸೋಂಕು ಪತ್ತೆಯಾಗಿದೆ.

  • ದೇಶದಲ್ಲಿ 23 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    ದೇಶದಲ್ಲಿ 23 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    – ಅಮೆರಿಕದಲ್ಲಿ 50 ಸಾವಿರಕ್ಕೂ ಅಧಿಕ ಸಾವು

    ನವದೆಹಲಿ: ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, 723 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 23 ಸಾವಿರ ಗಡಿದಾಟಿದೆ.

    ಕಳೆದೆರಡು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಮಹಾಮಾರಿ ಕೊರೊನಾಗೆ ಕೇರಳದಲ್ಲಿ 4 ತಿಂಗಳ ಮಗು ಅಸುನೀಗಿದೆ. ದೇಶದಲ್ಲೇ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. 6,430 ಜನರಿಗೆ ಸೋಂಕು ತಗುಲಿದ್ದು, 283 ಮಂದಿ ಸಾವನಪ್ಪಿದ್ದಾರೆ. ದೆಹಲಿ ಮತ್ತು ಗುಜರಾತ್‍ನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, 3 ಸಾವಿರ ಗಡಿ ತಲುಪುತ್ತಿದೆ.

    ತಮಿಳುನಾಡಿನಲ್ಲಿ ಕೊರೊನಾ ಬಾದಿತರ ಪ್ರಮಾಣ ಗಣನೀಯವಾಗಿ ಏರುತ್ತಿದೆ. ತಮಿಳುನಾಡು ಸರ್ಕಾರ ಚೆನ್ನೈ, ಮಧುರೈ, ಕೊಯಂಬತ್ತೂರ್‍ನಲ್ಲಿ ಏಪ್ರಿಲ್ 28ರ ವರೆಗೆ ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಿಸಿದೆ. ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2 ಹೊಸ ಸಾವು ಪ್ರಕರಣ ಸೇರಿ 29 ಮಂದಿ ಬಲಿಯಾಗಿದ್ದಾರೆ.

    ಯಾವ ರಾಜ್ಯಗಳಲ್ಲಿ ಹೆಚ್ಚು?
    ಮಹಾರಾಷ್ಟ್ರದಲ್ಲಿ 6,430 ಜನರಿಗೆ ಸೋಂಕು ತಗುಲಿದ್ದು, 283 ಜನ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿ ಸೋಂಕಿತರ ಸಂಖ್ಯೆ 2,624ಕ್ಕೆ ಹೆಚ್ಚಿದರೆ 112 ಜನ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 2,376 ಜನರಿಗೆ ಸೋಂಕು ತಗುಲಿದೆ. 50 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 1,852 ಜನರಿಗೆ ಸೋಂಕು ತಗುಲಿದೆ. 83 ಜನ ಅಸು ನೀಗಿದ್ದಾರೆ.

    ವಿಶ್ವ ಮಟ್ಟದಲ್ಲಿ ಸಹ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ 2 ಲಕ್ಷದ ಗಡಿ ತಲುಪುತ್ತಿದೆ. ಸೋಂಕಿತರ ಸಂಖ್ಯೆ 27 ಲಕ್ಷದ ದಾಟಿದೆ. ಅಮೆರಿಕಾದಲ್ಲಿ ಸಾವಿನ, ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 50,849 ಮಂದಿ ಅಮೆರಿಕದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. 8,92,761 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಸ್ಪೇನ್‍ನಲ್ಲಿ 22,549 ಮಂದಿ ಬಲಿಯಾಗಿದ್ದು, 2,19,764 ಮಂದಿ ಸೋಂಕಿತರಿದ್ದಾರೆ. ಇಟಲಿಯಲ್ಲೂ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, 1,89,973 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಬೆಲ್ಜಿಯಂನಲ್ಲಿ ಕಳೆದ 24 ಗಂಟೆಗಳಲ್ಲಿ 189 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

  • ದೇಶದಲ್ಲಿ 15 ಸಾವಿರ ದಾಟಿದ ಸೋಂಕಿತರ ಸಂಖ್ಯೆ- ಅಮೆರಿಕದಲ್ಲಿ ಒಂದೇ ದಿನ 4,600 ಸಾವು

    ದೇಶದಲ್ಲಿ 15 ಸಾವಿರ ದಾಟಿದ ಸೋಂಕಿತರ ಸಂಖ್ಯೆ- ಅಮೆರಿಕದಲ್ಲಿ ಒಂದೇ ದಿನ 4,600 ಸಾವು

    ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನ 1,300ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 15,232ಕ್ಕೆ ತಲುಪಿದೆ. ಈ ಪೈಕಿ ತಬ್ಲೀಘಿಗಳ ಪಾಲು 4,200ಕ್ಕೂ ಹೆಚ್ಚು. ಅಂದರೆ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರು ತಬ್ಲಿಘಿಗಳು.

    ಕಳೆದ 24 ಗಂಟೆಗಳಲ್ಲಿ 43 ಮಂದಿ ಸಾವನ್ನಪ್ಪಿದ್ದು, ಒಟ್ಟು 505 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3,648 ದಾಟಿದ್ದು, ಇಂದು 328 ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‍ನಲ್ಲಿ ಒಂದೇ ದಿನ 277 ಮಂದಿಗೆ ಸೋಂಕು ವ್ಯಾಪಿಸಿದೆ. ಭಾರತೀಯ ನೌಕಾಪಡೆಯ 21 ಯೋಧರಿಗೆ ಸೋಂಕು ತಗುಲಿದೆ. ಉತ್ತರಾಖಂಡ್‍ನಲ್ಲಿ 9 ತಿಂಗಳ ಹಸುಗೂಸಿಗೆ ಸೋಂಕು ತಗುಲಿದೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದೇಶಿಯ ವಿಮಾನ ಹಾರಾಟ ಮೇ 4ರಿಂದ ಆರಂಭವಾಗಲಿದೆ. ಜೂನ್ 1ರಿಂದ ವಿದೇಶಿ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಇನ್ನು ಏಪ್ರಿಲ್ 20ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದೆ.

    ಜಗತ್ತಿನಾದ್ಯಂತ ಕೊರೋನಾ ಸೋಂಕು ಪ್ರಮಾಣ ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಕೊರೊನಾಗೆ ಮೃತಪಟ್ಟವರ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ. 22.70 ಲಕ್ಷ ಮಂದಿಗೆ ಸೋಂಕು ವ್ಯಾಪಿಸಿದೆ. ಅಮೆರಿಕದಲ್ಲಿ ಸ್ಥಿತಿ ದಾರುಣವಾಗಿದೆ. ನಿನ್ನೆ ಒಂದೇ ದಿನ 4,600 ಮಂದಿ ಬಲಿ ಆಗಿದ್ದು, ಮೃತರ ಸಂಖ್ಯೆ 37 ಸಾವಿರ ದಾಟಿದೆ. ನ್ಯೂಯಾರ್ಕ್ ಒಂದರಲ್ಲೇ 17 ಸಾವಿರ ಮಂದಿ ಬಲಿ ಆಗಿದ್ದಾರೆ.

    ಸೋಂಕಿತರ ಸಂಖ್ಯೆ 7.10 ಲಕ್ಷ ದಾಟಿದೆ. ಈ ಪೈಕಿ ಶೇ.30ರಷ್ಟು ಮಂದಿ ಆಫ್ರಿಕನ್ ಅಮೆರಿಕನ್ನರು. ಸ್ಪೇನ್‍ನಲ್ಲಿ ಮೃತರ ಸಂಖ್ಯೆ 20 ಸಾವಿರ ದಾಟಿದೆ. ಇಟಲಿಯಲ್ಲಿ 23 ಸಾವಿರ, ಫ್ರಾನ್ಸ್‍ನಲ್ಲಿ 19 ಸಾವಿರ, ಬ್ರಿಟನ್‍ನಲ್ಲಿ ಹದಿನಾಲ್ಕೂವರೆ ಸಾವಿರ ಮಂದಿ ಬಲಿ ಆಗಿದ್ದಾರೆ. ಬ್ರಿಟನ್‍ನಲ್ಲಿ ಮೂರು ವಾರ ಲಾಕ್‍ಡೌನ್ ವಿಸ್ತರಿಸಲಾಗಿದೆ. ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ಹೊತ್ತಿಗೆ ಆಫ್ರಿಕಾ ಖಂಡದಲ್ಲಿ ಕನಿಷ್ಠ 3 ಲಕ್ಷ ಮಂದಿ ಸಾವನ್ನಪ್ಪಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಸ್ವೀಡನ್ ರಾಜಕುಮಾರಿ ಸೋಫಿಯಾ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತರ ಸೇವೆ ಮಾಡುತ್ತಿದ್ದಾರೆ. ಕೀನ್ಯಾದ ನೈರೂಬಿಯಲ್ಲಿ ಅಗತ್ಯ ವಸ್ತುಗಳ ಜೊತೆಗೆ ಬಡವರಿಗೆ ಮದ್ಯವನ್ನು ಪೂರೈಸಲಾಗುತ್ತಿದೆ.

  • ವಿರಾಟ್ ಕಳವಳದಲ್ಲಿ ಸತ್ಯವಿದೆ- ಕೊಹ್ಲಿ ನಿವೃತ್ತಿಯ ಮಾತಿನ ಹಿಂದಿದೆ ಅಂಕಿ ಅಂಶ

    ವಿರಾಟ್ ಕಳವಳದಲ್ಲಿ ಸತ್ಯವಿದೆ- ಕೊಹ್ಲಿ ನಿವೃತ್ತಿಯ ಮಾತಿನ ಹಿಂದಿದೆ ಅಂಕಿ ಅಂಶ

    – 139 ತಿಂಗಳಲ್ಲಿ 84 ಟೆಸ್ಟ್, 248 ಏಕದಿನ, 82 ಟಿ20

    ವೆಲ್ಲಿಂಗ್ಟನ್: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅನೇಕ ಸಂದರ್ಭಗಳಲ್ಲಿ ಕ್ರಿಕೆಟ್ ಜವಾಬ್ದಾರಿ ಹೊರೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಕಳವಳದಲ್ಲಿ ಸತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಹೌದು, ವಿರಾಟ್ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಸೇರಿದಂತೆ ಪ್ರತಿವರ್ಷವೂ ಸರಾಸರಿ 36 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಪ್ರಯಾಣ ಮತ್ತು ಅಭ್ಯಾಸದ ಅವಧಿಗಳನ್ನು ಒಟ್ಟುಗೂಡಿಸಿ ಕೊಹ್ಲಿ ಪ್ರತಿ ವರ್ಷವೂ ಸುಮಾರು 300 ದಿನಗಳ ಕಾಲ ಕಾರ್ಯನಿರತವಾಗಿದೆ. ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್ ಸರಣಿಯ ಮುನ್ನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಇದನ್ನೂ ಓದಿ: ನಿವೃತ್ತಿ ಬಗ್ಗೆ ಮೊದಲ ಬಾರಿಗೆ ಕೊಹ್ಲಿ ಮಾತು 

    ವಿರಾಟ್ ಕೊಹ್ಲಿ 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಕಿಂಗ್ಸ್‍ಸ್ಟನ್‍ನಲ್ಲಿ ಚೊಚ್ಚಲ ಏಕದಿನ ಪಂದ್ಯ ಆಡಿದರು. ಅಂದಿನಿಂದ ಅವರು 139 ತಿಂಗಳಲ್ಲಿ 84 ಟೆಸ್ಟ್, 248 ಏಕದಿನ ಹಾಗೂ 82 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಕೊಹ್ಲಿ ಇಲ್ಲಿಯವರೆಗೆ ಕೇವಲ ಪಂದ್ಯಕ್ಕಾಗಿ 750 ದಿನಗಳನ್ನು ಮೈದಾನದಲ್ಲಿ ಕಳೆದಿದ್ದಾರೆ. ಆದರೆ ಪ್ರಯಾಣ, ಅಭ್ಯಾಸ ಅವಧಿ ಮತ್ತು ಅಭ್ಯಾಸ ಪಂದ್ಯಗಳನ್ನು ಕೂಡಿಸಿದರೆ ಕೊಹ್ಲಿ ಇದುವರೆಗೆ ಸುಮಾರು 4 ಸಾವಿರ ದಿನಗಳಿಂದ ಕ್ರಿಕೆಟ್‍ನಲ್ಲಿ ನಿರತರಾಗಿದ್ದಾರೆ.

    ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಜನವರಿ 23ರಂದು ಬಿಡುಗಡೆಯಾದ ವೇಳಾ ಪಟ್ಟಿಯ ವಿಚಾರವಾಗಿ ವಿರಾಟ್ ಕೊಂಚ ಅಸಮಾಧಾನ ಹೊರ ಹಾಕಿದ್ದರು. “ಆಟಗಾರರು ನೇರವಾಗಿ ಕ್ರೀಡಾಂಗಣಕ್ಕೆ ಇಳಿದು ಪಂದ್ಯವನ್ನು ಆಡುವ ದಿನ ದೂರವಿಲ್ಲ” ಎಂದು ಕೊಹ್ಲಿ ಹೇಳಿದ್ದರು. ಈ ಬೆನ್ನಲ್ಲೇ ವೆಲ್ಲಿಂಗ್ಟನ್‍ನಲ್ಲಿನ ಜವಾಬ್ದಾರಿ ಹೊರೆಯ ಮಾತನಾಡಿ, “ಇದನ್ನು ನೀವು ಯಾವುದೇ ರೀತಿಯಲ್ಲಿ ಮರೆಮಾಡಲು ಸಾಧ್ಯವಿಲ್ಲ. ನಾನು ವರ್ಷಕ್ಕೆ 300 ದಿನ ಆಡುತ್ತಿದ್ದೇನೆ. ಇದು ಪ್ರಯಾಣ ಮತ್ತು ಅಭ್ಯಾಸದ ಅವಧಿಗಳನ್ನು ಸಹ ಒಳಗೊಂಡಿದೆ. ಕೆಲಸದ ಹೊರೆ ಸಾರ್ವಕಾಲಿಕ ಒಂದೇ ಆಗಿರುತ್ತದೆ” ಎಂದು ತಿಳಿಸಿದ್ದರು.

    ಕಳೆದ ವರ್ಷ ಜೂನ್‍ನಿಂದ ಟೀಂ ಇಂಡಿಯಾ ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಯುಎಸ್‍ಎ ಮತ್ತು ಭಾರತದಲ್ಲಿ 22 ಏಕದಿನ, 20 ಟಿ20 ಹಾಗೂ 7 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಎಲ್ಲಾ ಪಂದ್ಯಗಳಲ್ಲಿ ಒಂದು ದಿನದ ಅಭ್ಯಾಸವನ್ನು ಸೇರಿಸಲಾಗುತ್ತದೆ. 9 ತಿಂಗಳಲ್ಲಿ ಭಾರತವು 132 ದಿನಗಳ ಕಾಲ ಮೈದಾನದಲ್ಲಿದೆ.

    3 ಸ್ವರೂಪಗಳಲ್ಲಿ 414 ಪಂದ್ಯ:
    ವರ್ಷದ ಪಂದ್ಯ
    2008- 5
    2009- 10
    2010- 27
    2011- 43
    2012- 40
    2013- 43
    2014- 38

    2015- 31
    2016- 37
    2017- 46
    2018- 37
    2019- 44
    2020- 13

    2017, 2018ರಲ್ಲಿ 53 ಪಂದ್ಯಗಳನ್ನಾಡಿದ ಭಾರತ:
    ಕಳೆದ 4 ವರ್ಷಗಳ ಅಂಕಿಅಂಶಗಳು ವಿರಾಟ್ ಕೊಹ್ಲಿ ಅವರ ಹೇಳಿಕೆಯನ್ನು ಸಮರ್ಥಿಸುವಂತಿವೆ. ಟೀಂ ಇಂಡಿಯಾ 2016 ಮತ್ತು 2019ರ ನಡುವೆ 12 ದೇಶಗಳಿಗೆ ಪ್ರವಾಸ ಕೈಗೊಂಡು ಮೂರು ಸ್ವರೂಪಗಳಲ್ಲಿ 204 ಪಂದ್ಯಗಳನ್ನು ಆಡಿದೆ. 2018ರಲ್ಲಿ ಭಾರತೀಯ ಕ್ರಿಕೆಟ್ ತಂಡವು ಹೆಚ್ಚು ಅಂದ್ರೆ 14 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ವರ್ಷ ಆಟಗಾರರು ಗರಿಷ್ಠ 97 ದಿನಗಳನ್ನು ಮೈದಾನದಲ್ಲಿ ಕಳೆದಿದ್ದಾರೆ. ಅಂದರೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಭಾರತೀಯ ತಂಡವು ಮೈದಾನದಲ್ಲಿ ಕಾಣಿಸಿಕೊಂಡಿದೆ.

    ಭಾರತವು ಮೂರು ಸ್ವರೂಪಗಳನ್ನು ಒಟ್ಟುಗೂಡಿಸಿ 2016ರಲ್ಲಿ 46 ಪಂದ್ಯಗಳನ್ನು ಆಡಿದೆ. ಈ ಸಮಯದಲ್ಲಿ ತಂಡವು 90 ದಿನಗಳ ಕಾಲ ಮೈದಾನದಲ್ಲಿ ಉಳಿದಿತ್ತು. ಅಂದರೆ ಸರಾಸರಿ ಭಾರತ ತಂಡವು ಪ್ರತಿ ನಾಲ್ಕನೇ ದಿನ ಪಂದ್ಯವನ್ನು ಆಡುತ್ತಿತ್ತು. ಟೀಂ ಇಂಡಿಯಾ 2017ರಲ್ಲಿ 53 ಪಂದ್ಯಗಳನ್ನು ಆಡಿದ್ದು, 75 ದಿನಗಳನ್ನು ಮೈದಾನದಲ್ಲಿ ಕಳೆದಿದೆ. ಈ ಅರ್ಥದಲ್ಲಿ ಆಟಗಾರರು ಪ್ರತಿ ಐದನೇ ದಿನ ಪಂದ್ಯವನ್ನು ಆಡುತ್ತಿದ್ದರು. 2019ರಲ್ಲಿ ಭಾರತ ತಂಡವು 52 ಪಂದ್ಯಗಳನ್ನು ಆಡಿ 79 ದಿನಗಳ ಕಾಲ ಮೈದಾನದಲ್ಲಿ ಉಳಿಯಿತು. ಅಂದರೆ ಪ್ರತಿ ಐದನೇ ದಿನ ಪಂದ್ಯಗಳನ್ನು ಆಡಿದೆ.

    ಈ ಎಲ್ಲ ಅಂಕಿ ಅಂಶಗಳನ್ನು ನೋಡಿದಾಗ ಟೀಂ ಇಂಡಿಯಾ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೊಹ್ಲಿ ಅಷ್ಟೇ ಅಲ್ಲದೆ ಕೆ.ಎಲ್.ರಾಹುಲ್ ಕೂಡ ನಿರಂತರ ಪಂದ್ಯದ ಬಗ್ಗೆ ಕೊಂಚ ಅಸಮಾಧಾನ ಹೊರ ಹಾಕಿದ್ದರು.

  • ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಮಹಿಳೆಯರಿಗಿಂತ ಗಂಡಸರೇ ಮುಂದು

    ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಮಹಿಳೆಯರಿಗಿಂತ ಗಂಡಸರೇ ಮುಂದು

    – ನೇಣಿಗೆ ಮೊದಲ ಆದ್ಯತೆ, ವಿಷಕ್ಕೆ ಎರಡನೇ ಆದ್ಯತೆ
    – ಚಿಕ್ಕಬಳ್ಳಾಪುರದಲ್ಲಿ ಮೂರು ವರ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಹೆಸರಿಗೆ ಮಾತ್ರ ಚಿಕ್ಕದಾದ್ರೂ ಆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

    ಹೌದು ಕಳೆದ ಮೂರು ವರ್ಷದಿಂದ ಹೆಚ್ಚಿನ ಮಂದಿ ಆತ್ಮಹತ್ಯೆ ಮಾಡಿಕೊಳ್ತಿದ್ದು, ಇದು ಸ್ವತಃ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೂ ಅಘಾತ ತಂದಿದೆ. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಗಂಡಸರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ, ಅತಿವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದು. ಸಿಲ್ಕ್ ಮಿಲ್ಕ್ ಹೂ ಹಣ್ಣು ತರಕಾರಿ ಬೆಳೆಗೆ ಖ್ಯಾತಿಯಾಗಿರು ಚಿಕ್ಕಬಳ್ಳಾಪುರದಲ್ಲಿ ಈಗ ಆತ್ಮಹತ್ಯೆ ವಿಚಾರಗಳಿಗೆ ಕುಖ್ಯಾತಿಯಾಗುತ್ತಿದೆ.

    ಕೇವಲ ಮೂರು ವರ್ಷಗಳಲ್ಲಿ ನೇಣು ಹಾಕಿಕೊಂಡು 287 ಮಂದಿ, ವಿಷ ಸೇವಿಸಿ 146 ಮಂದಿ, ನೀರಿನಲ್ಲಿ ಮುಳುಗಿ 19 ಮಂದಿ, ಬೆಂಕಿ ಹಚ್ಚಿಕೊಂಡು 27 ಮಂದಿ ಸೇರಿದಂತೆ ಒಟ್ಟು 489 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 489 ಮಂದಿಯಲ್ಲಿ 159 ಮಹಿಳೆಯರಾದರೆ 330 ಮಂದಿ ಪುರುಷರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ವತಃ ಪೊಲೀಸ್ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

    ಆತ್ಮಹತ್ಯಗೆ ಹಲವು ಕಾರಣಗಳು!
    ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಸ್ವತಃ ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆಗೂ ಅಘಾತ ತಂದಿದೆ. ಇದರಿಂದ ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಉತ್ತಮ ಸಂಸ್ಕೃತಿಯನ್ನು ರೂಡಿಸುವಂತೆ ಸ್ವತಃ ಚಿಕ್ಕಬಳ್ಳಾಪುರ ಎಸ್ಪಿ ಅಭಿನವ್ ಖರೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗಿ ಯುವ ಸಮುದಾಯದ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿರುವ ಹಿನ್ನಲೆ ಆತಂಕ ವ್ಯಕ್ತಪಡಿಸಿರುವ ಚಿಕ್ಕಬಳ್ಳಾಪುರದ ಖ್ಯಾತ ಮನೋರೋಗ ತಜ್ಞ ಹಾಗೂ ಸರ್ಕಾರಿ ವೈದ್ಯ ಕೀಶೋರ್ ಕುಮಾರ್, ಮಾನಸಿಕ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಸೂಕ್ತ ಚಿಕಿತ್ಸೆ ನೀಡಿದ್ರೆ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಲ್ಲ ಅಂತಾರೆ. ಆತ್ಮಹತ್ಯೆಗೆ ಶಿಕ್ಷಣದ ಕೊರತೆ, ಬಡತನ, ಹಣಕಾಸಿನ ತೊಂದರೆ, ಮಾದಕ ವಸ್ತುಗಳ ಚಟ, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ಹಲವು ಕಾರಣಗಳು ಕಂಡು ಬರುತ್ತಿದ್ದು ಆರಂಭದಲ್ಲೆ ಖಿನ್ನತೆಗೆ ಒಳಗಾದವರಿಗೆ ಕೌನ್ಸಿಲಿಂಗ್ ನೀಡಿದರೆ ಆತ್ಮಹತ್ಯೆ ಪ್ರಯತ್ನಗಳಿಂದ ದೂರ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

  • ಉಪಚುನಾವಣೆ ಅಬ್ಬರದಲ್ಲಿ ಜಪ್ತಿಯಾದ ವಸ್ತುಗಳ ಅಂಕಿಅಂಶ

    ಉಪಚುನಾವಣೆ ಅಬ್ಬರದಲ್ಲಿ ಜಪ್ತಿಯಾದ ವಸ್ತುಗಳ ಅಂಕಿಅಂಶ

    ಬೆಂಗಳೂರು: ಗುರುವಾರದ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ. ಉಪಚುನಾವಣೆ ನಡೆಯೋ 15 ಕ್ಷೇತ್ರಗಳಲ್ಲಿ ರಜೆ ಘೋಷಿಸಲಾಗಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 15 ಕ್ಷೇತ್ರಗಳ ಮತದಾರರು, ಭದ್ರತಾ ಸಿಬ್ಬಂದಿ, ಎಷ್ಟು ಕೋಟಿ ಹಣ ಸೀಜ್ ಮಾಡಲಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ.

    15 ಕ್ಷೇತ್ರದ ಅಂಕಿಅಂಶಗಳು:
    ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರದಲ್ಲಿ ಒಟ್ಟು 165 ಮಂದಿ ಸ್ಪರ್ಧೆಯಲ್ಲಿದ್ದಾರೆ. ಇದರಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿಯೇ 19 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 15 ಕ್ಷೇತ್ರಗಳಲ್ಲಿ ಒಟ್ಟು 37,82,681 ಮತದಾರರು ಇದ್ದಾರೆ. ಅದರಲ್ಲಿ 18,52,027 ಪುರುಷ ಮತದಾರರು, 19,25,529 ಮಹಿಳಾ ಮತದಾರರು ಇದ್ದಾರೆ. ಎಲ್ಲಾ ಕ್ಷೇತ್ರಗಳನ್ನು ಸೇರಿಸಿ ಒಟ್ಟು 4,185 ಮತಗಟ್ಟೆಗಳಿವೆ. ಸುಮಾರು 42,509 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಲ್ಲಿ 11,241 ಪೊಲೀಸರು, 2,511 ಸಿಆರ್‌ಪಿಎಫ್‌ ಸಿಬ್ಬಂದಿ, 900 ಸೂಕ್ಷ್ಮ ವೀಕ್ಷಕರ ನಿಯೋಜನೆ ಮಾಡಲಾಗಿದೆ.

    ಜಪ್ತಿಯಾದ ವಸ್ತು, ನಗದು ಎಷ್ಟು?
    ಎಲ್ಲಾ ಕ್ಷೇತ್ರಗಳನ್ನು ಸೇರಿಸಿ ಒಟ್ಟು 10.70 ಕೋಟಿ ರೂ. ಮೌಲ್ಯದ ಅಕ್ರಮ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರೊಂದಿಗೆ 4.16 ಕೋಟಿ ರೂ. ನಗದು, 4.58 ಕೋಟಿ ಮೌಲ್ಯದ ಮದ್ಯ, 1.96 ಕೋಟಿ ಮೌಲ್ಯದ ಇತರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹಾಗೆಯೇ ಸುಮಾರು 4,950 ರೂ. ಮೌಲ್ಯದ ಡ್ರಗ್ಸ್ ಕೂಡ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸಂಬಂಧ 197 ನೀತಿ ಸಂಹಿತೆ ಎಫ್‍ಐಆರ್ ದಾಖಲಿಸಲಾಗಿದೆ.

    ಕೆ.ಆರ್ ಪೇಟೆ, ರಾಣೇಬೆನ್ನೂರು, ಹಿರೇಕೆರೂರು, ಗೋಕಾಕ್, ವಿಜಯನಗರ, ಚಿಕ್ಕಬಳ್ಳಾಪುರ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಕೆ.ಆರ್ ಪುರಂ, ಹುಣಸೂರು, ಕಾಗವಾಡ, ಅಥಣಿ, ಯಲ್ಲಾಪುರ, ಹೊಸಕೋಟೆಯಲ್ಲಿ ಗುರುವಾರ ಈ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಡಿ. 9ಕ್ಕೆ ಫಲಿತಾಂಶ ಹೊರಬೀಳಲಿದೆ.

  • ಪರಿವರ್ತನಾ ಯಾತ್ರೆಗೆ ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಬಿಎಸ್‍ವೈ?

    ಪರಿವರ್ತನಾ ಯಾತ್ರೆಗೆ ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಬಿಎಸ್‍ವೈ?

    ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆಗೆ ವೇಳೆಯಲ್ಲಿ ಬಳಸುವ ವಾಹನದ ನಂಬರ್‍ಗಳು ಒಂದೇ ಆಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಸಂಖ್ಯಾಶಾಸ್ತ್ರದ ಮೋರೆ ಹೋಗಿದ್ದಾರ ಎನ್ನುವ ಪ್ರಶ್ನೆ ಎದ್ದಿದೆ.

    ಬಿಎಸ್‍ವೈ ಅವರ ಲಕ್ಕಿ ನಂಬರ್ 9(4+5) ಆಗಿದ್ದು, ಹೀಗಾಗಿ ಅವರ ಕಾರಿನಲ್ಲಿ 45 ನಂಬರ್ ಇರುತ್ತದೆ. ಅವರು ಸದಾ ಪ್ರಯಾಣಿಸುವ ಫಾರ್ಚುನರ್ ಕಾರ್ ನಂಬರ್ 4545 ಆಗಿದ್ದು, ಇಂದಿನಿಂದ ರಾಜ್ಯಾದ್ಯಂತ ಬಿಜೆಪಿಯು ಪರಿವರ್ತನಾ ರ್ಯಾಲಿಯನ್ನು ಹಮ್ಮಿಕೊಂಡಿರುವ ರಥದ ನಂಬರ್ ಕೆಎ 01, ಎಎಚ್ 4545 ಆಗಿದೆ. ಅಷ್ಟೆ ಅಲ್ಲದೇ ಯಾತ್ರೆಗೆ ಬಳಸುವ ಮತ್ತೊಂದು ವಾಹನದ ಸಂಖ್ಯೆಯೂ 4545 ಆಗಿದೆ. ಇದೆಲ್ಲವನ್ನೂ ನೋಡಿದಾಗ ಬಿಎಸ್‍ವೈ ಅವರು ಸಂಖ್ಯಾಶಾಸ್ತ್ರದ ಮೋರೆ ಹೋಗಿದ್ದಾರೆ ಎನ್ನಲಾಗಿದೆ.

    ಪರಿವರ್ತನಾ ಯಾತ್ರೆಯ ವಾಹನ ಬಿಎಸ್‍ವೈ ಹೆಸರಲ್ಲಿ ನೋಂದಣಿಯಾಗಿದ್ದು. ಪರಿವರ್ತನಾ ಯಾತ್ರೆ ರಥದ ಜೊತೆಗೆ ಮತ್ತೊಂದು ವಾಹನವನ್ನು ಸಿದ್ಧಮಾಡಿದ್ದಾರೆ.