Tag: Srisailam Left Bank Canal

  • ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ

    ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ

    – ಇನ್ನೂ ಪತ್ತೆಯಾಗಬೇಕಿವೆ 6 ಮೃತದೇಹಗಳು
    – 700 ಸಿಬ್ಬಂದಿಯಿಂದ ಕಾರ್ಯಾಚರಣೆ

    ಹೈದರಾಬಾದ್: ಫೆ.22 ರಂದು ಕುಸಿದಿದ್ದ ನಾಗರ್ಕರ್ನೂಲ್‌ನ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದಲ್ಲಿ (Srisailam Left Bank Canal) ರಕ್ಷಣಾ ತಂಡಗಳು ಮತ್ತೊಬ್ಬ ಕಾರ್ಮಿಕನ ಶವವನ್ನು ಪತ್ತೆಹಚ್ಚಿದ್ದಾರೆ. ಈ ದುರಂತದಲ್ಲಿ 8 ಕಾರ್ಮಿಕರು ಸಿಲುಕಿಕೊಂಡಿದ್ದರು.

    ಮಂಗಳವಾರ ಮುಂಜಾನೆ ರಕ್ಷಣಾ ತಂಡಗಳು ಮತ್ತೊಂದು ಮೃತದೇಹ ಸಿಲುಕಿಕೊಂಡಿರುವುದನ್ನು ಪತ್ತೆಹಚ್ಚಿವೆ. ಅದನ್ನು ಹೊರತೆಗೆಯಲು ಕೆಲಸ ನಡೆಯುತ್ತಿದೆ. ಇನ್ನೂ 6 ಮೃತದೇಹಗಳು ಪತ್ತೆಯಾಗಬೇಕಿವೆ. ಗುರುಪ್ರೀತ್ ಸಿಂಗ್‌ ಎಂಬ ಕಾರ್ಮಿಕನ ಮೃತದೇಹವನ್ನು ಮಾ.9 ರಂದು ಹೊರತೆಗೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಿಭಾಗಗಳು ಹಾಗೂ ಖಾಸಗಿ ಸಂಸ್ಥೆಗಳು ಸೇರಿದಂತೆ 25 ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ರಕ್ಷಣಾ ತಂಡಗಳು ಕುಸಿದ ಬಂಡೆಗಳ ಅವಶೇಷಗಳು, ಸುರಂಗದ ಒಳಗಿನಿಂದ ಮಣ್ಣು, ಹೂಳು ಮತ್ತು ನೀರನ್ನು ತೆಗೆಯುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 700 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

    ಸುರಂಗದ 14 ಕಿಲೋಮೀಟರ್ ದೂರದಲ್ಲಿ ಅವಘಡ ಸಂಭವಿಸಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ. ಅವಘಡ ನಡೆದ ಪ್ರದೇಶದ 30 ಮೀಟರ್‌ಗಳನ್ನು ಅತ್ಯಂತ ಅಪಾಯಕಾರಿ ವಲಯವೆಂದು ಗುರುತಿಸಲಾಗಿದೆ.

    ಎಸ್‌ಎಲ್‌ಬಿಸಿ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy ) ಸೋಮವಾರ ಸಭೆ ನಡೆಸಿ ಪರಿಶೀಲಿಸಿದರು. ಮೃತರ ಸಂಬಂಧಿಕರಿಗೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ. ಇದನ್ನೂ ಓದಿ: ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – 8 ಮಂದಿ ಸಿಲುಕಿರುವ ಶಂಕೆ, 48 ಕಾರ್ಮಿಕರ ರಕ್ಷಣೆ

  • ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ

    ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ

    -ಮೃತರ ಕುಟುಂಬಸ್ಥರಿಗೆ ತೆಲಂಗಾಣ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ

    ಹೈದರಬಾದ್: ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (Srisailam Left Bank Canal) ನಿರ್ಮಾಣ ಹಂತದಲ್ಲಿದ್ದ ಸುರಂಗದ ಮೇಲ್ಛಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಇನ್ನೂ 7 ಕಾರ್ಮಿಕರನ್ನು ಪತ್ತೆಹಚ್ಚಬೇಕಿದೆ.

    ಮೃತ ಕಾರ್ಮಿಕನನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಮೃತದೇಹ ಯಂತ್ರದೊಳಗೆ ಸಿಲುಕಿಕೊಂಡಾಗ ಪತ್ತೆಯಾಗಿದೆ. ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಹಾಗೂ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್‌ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ

    ದೋಮಲಪೆಂಟಾ ಬಳಿಯ ಶ್ರೀಶೈಲಂ ಆಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ 56 ಕಾರ್ಮಿಕರು ಒಳಗೆ ಸಿಲುಕಿದ್ದರು. ಈ ಪೈಕಿ 48 ಜನರನ್ನು ಆರಂಭದಲ್ಲಿಯೇ ರಕ್ಷಿಸಲಾಗಿದ್ದು, 8 ಕಾರ್ಮಿಕರು ಸಿಲುಕಿಕೊಂಡಿದ್ದರು. ಕಾರ್ಮಿಕರನ್ನು ಪತ್ತೆಹಚ್ಚಲು ಕಳೆದ 17 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಭಾನುವಾರ ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ.

    ಫೆ.22 ರಂದು ಸುರಂಗ ಕುಸಿತದ ಬಳಿಕ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಉತ್ತರಾಖಂಡದ ರ‍್ಯಾಟ್ ಮೈನರ್, ಸ್ನಿಫರ್ ನಾಯಿ ಸೇರಿದಂತೆ 300ಕ್ಕೂ ಅಧಿಕ ಸಿಬ್ಬಂದಿ ಜೊತೆಗೂಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ 17 ದಿನಗಳಿಂದ ಹಗಲು, ರಾತ್ರಿ ಕಾರ್ಯಾಚರಣೆ ನಡೆಯುತ್ತಿದೆ.

    ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಓರ್ವನ ಮೃತದೇಹ ಪತ್ತೆಯಾದ ಬಳಿಕ ಇನ್ನುಳಿದವರ ರಕ್ಷಣೆಗಾಗಿ ರೋಬೋಟ್ ಬಳಸಲು ರಾಜ್ಯ ಸರ್ಕಾರ ಯೋಜಿಸಿದ್ದು, 4 ಕೋಟಿ ರೂ. ಖರ್ಚು ಮಾಡಲಿದೆ.

    ಇನ್ನೂ ಘಟನಾ ಸ್ಥಳಕ್ಕೆ ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಮಾ.2 ರಂದು ಭೇಟಿ ನೀಡಿದ್ದರು. ಇದೀಗ ಮಾ.11 ರಂದು ಘಟನಾ ಸ್ಥಳಕ್ಕೆ ಇನ್ನೊಮ್ಮೆ ಭೇಟಿ ನೀಡುವ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಘಟನೆ ಏನು?
    ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದು 8 ಮಂದಿ ಕಾರ್ಮಿಕರು ಸಿಲುಕಿದ್ದು, ಸುರಂಗ ನಿರ್ಮಾಣ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಸುರಂಗದಲ್ಲಿ 12-13 ಕಿ.ಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿತ್ತು.ಇದನ್ನೂ ಓದಿ: ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಿದ್ರೆ ನೇಣು ಶಿಕ್ಷೆ ಕಾಯ್ದೆ ತರ್ತೀವಿ: ಮ.ಪ್ರದೇಶ ಸಿಎಂ

  • ತೆಲಂಗಾಣ ಸುರಂಗ ಕುಸಿತ – 10 ದಿನ ಕಳೆದ್ರೂ ಸಂಪರ್ಕಕ್ಕೆ ಸಿಗದ 8 ಕಾರ್ಮಿಕರು

    ತೆಲಂಗಾಣ ಸುರಂಗ ಕುಸಿತ – 10 ದಿನ ಕಳೆದ್ರೂ ಸಂಪರ್ಕಕ್ಕೆ ಸಿಗದ 8 ಕಾರ್ಮಿಕರು

    ಹೈದರಾಬಾದ್: ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (Srisailam Left Bank Canal) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿ 10 ದಿನ ಕಳೆದರೂ 8 ಕಾರ್ಮಿಕರು ಪತ್ತೆಯಾಗಿಲ್ಲ.

    ದೋಮಲಪೆಂಟಾ ಬಳಿಯ ಶ್ರೀಶೈಲಂ ಆಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ ಕುಸಿತದಲ್ಲಿ 8 ಮಂದಿ ಕಾರ್ಮಿಕರು ಸಿಲುಕಿದ್ದರು. ಈಗಾಗಲೇ 48 ಕಾರ್ಮಿಕರನ್ನು ರಕ್ಷಿಸಲಾಗಿದೆ.ಇದನ್ನೂ ಓದಿ:  ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ: ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ

    ಈ ಕುರಿತು ಎನ್‌ಡಿಆರ್‌ಎಫ್ ಕಮಾಂಡೆಂಟ್ ವಿವಿಎನ್ ಪ್ರಸನ್ನ ಕುಮಾರ್ ಮಾತನಾಡಿ, ಸುರಂಗ ಕುಸಿತದ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಸೇರಿದಂತೆ ಉತ್ತರಾಖಂಡದ ರ‍್ಯಾಟ್ ಮೈನರ್, 300 ಸಿಬ್ಬಂದಿ ಜೊತೆಗೂಡಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಕಳೆದ 10 ದಿನಗಳಿಂದ ಹಗಲು, ರಾತ್ರಿ ಕಾರ್ಯಾಚರಣೆ ನಡೆದಿದ್ದು, ಇಲ್ಲಿಯವರೆಗೂ ಯಾವುದೇ ಕಾರ್ಮಿಕರು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

    ಸದ್ಯ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಇನ್ನೂ ಹೈದರಾಬಾದ್‌ನ ರಾಷ್ಟ್ರೀಯ ಭೂಭೌತ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಸುರಂಗದೊಳಗೆ ನೆಲಕ್ಕೆ ನುಗ್ಗುವ ರಾಡಾರ್ ಸಮೀಕ್ಷೆಯನ್ನು ನಡೆಸಿದ್ದಾರೆ. ಸಮೀಕ್ಷೆ ಬಳಿಕ ಗುರುತಿಸಿದ ಸ್ಥಳಗಳನ್ನು ರಕ್ಷಣಾ ತಂಡಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಇನ್ನೂ ಘಟನಾ ಸ್ಥಳಕ್ಕೆ ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಭಾನುವಾರ ಭೇಟಿ ನೀಡಿ, ಸಿಲುಕಿಕೊಂಡಿರುವ ಕಾರ್ಮಿಕರ ಮಾಹಿತಿ ಪಡೆದುಕೊಂಡರು ಮತ್ತು ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಬೆಂಬಲ ನೀಡುವ ಕುರಿತು ತಿಳಿಸಿದರು.

    ಘಟನೆ ಏನು?
    ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದು 8 ಮಂದಿ ಕಾರ್ಮಿಕರು ಸಿಲುಕಿದ್ದು, ಘಟನೆಯಲ್ಲಿ 48 ಕಾರ್ಮಿಕರನ್ನು ರಕ್ಷಿಸಿದ್ದಾರೆ. ಸುರಂಗ ನಿರ್ಮಾಣ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಸುರಂಗದಲ್ಲಿ 12-13 ಕಿಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿತ್ತು.ಇದನ್ನೂ ಓದಿ: ಹಕ್ಕಿ ಜ್ವರ ಭೀತಿ – ಬಾಗಲಕೋಟೆ ಜಿಲ್ಲಾಡಳಿತದಿಂದ ಸಭೆ