Tag: Srinivas Shetty

  • ಗೆಳೆಯ ಕಿರಣ್ ಕೊಡ್ಗಿಗೆ ಗೆಲುವಿನ ಗಿಫ್ಟ್ ಕೊಡಿಸಿದ ಹಾಲಾಡಿ

    ಗೆಳೆಯ ಕಿರಣ್ ಕೊಡ್ಗಿಗೆ ಗೆಲುವಿನ ಗಿಫ್ಟ್ ಕೊಡಿಸಿದ ಹಾಲಾಡಿ

    ಉಡುಪಿ: ಬಿಜೆಪಿ (BJP) ಯಲ್ಲಿ ನಾಲ್ಕು ಹೊಸ ಮುಖಗಳನ್ನು ಪ್ರಯೋಗ ಮಾಡಿ ಪಕ್ಷ ಯಶಸ್ವಿಯಾಗಿದೆ. ನಾಲ್ಕು ಹೊಸ ಮುಖಗಳಿಗೆ ಟಿಕೆಟ್‍ಗೆ ಮುನ್ನುಡಿ ಬರೆದಿದ್ದು ಕುಂದಾಪುರದ ವಾಜಪೇಯಿ ಹಾಲಾಡಿ. ಶಾಸಕ ಶ್ರೀನಿವಾಸ ಶೆಟ್ಟಿ (Haladi Srinivas Shetty) ಚುನಾವಣಾ ಕಣದಿಂದ ಪಕ್ಕಕ್ಕೆ ಸರಿದು ತನ್ನ ಗೆಳೆಯ ಕಿರಣ್ ಕುಮಾರ್ (Kiran Kumar Kodgi) ಗೆ ಅವಕಾಶಕೊಟ್ಟದ್ದರಿಂದ ಉಡುಪಿಯಲ್ಲಿ ನಾಲ್ಕು ಬದಲಾವಣೆಗಳು ಆಗಿವೆ. ನಾಲ್ಕು ಜನವೂ ಗೆದ್ದಿದ್ದಾರೆ.

    ಕುಂದಾಪುರ ವಿಧಾನಸಭಾ ಕ್ಷೇತ್ರ (Kundapura Vidhanasabha Constituency) ದ ಬಿಜೆಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರು, 1,02,424 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 41,556 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು 60,868 ಮತಗಳನ್ನು ಪಡೆದಿದ್ದಾರೆ. 40,000ಕ್ಕೂ ಅಧಿಕ ಮತಗಳನ್ನು ಅಂತರ ಬಿಜೆಪಿ ಪಡೆಯಲು ಕಾರಣ ಹಾಲಾಡಿ ಶ್ರೀನಿವಾಸ ಶೆಟ್ಟಿ.

    ನಿರಂತರ ಐದು ಚುನಾವಣೆಗಳನ್ನು ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ, 2023ರ ಚುನಾವಣೆಯಲ್ಲಿ ಗೆಳೆಯನ ಗೆಲುವಿಗಾಗಿ ಹೋರಾಟ ಮಾಡಿದಷ್ಟು ಹಿಂದೆಂದೂ ಮಾಡಿಲ್ಲ ಎಂದು ಕುಂದಾಪುರದ ಜನ ಮಾತನಾಡುತ್ತಿದ್ದಾರೆ. ಪ್ರತಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಒಂದೊಂದು ಬಹಿರಂಗ ಸಭೆಗಳನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತೃತ್ವದಲ್ಲಿ ನಡೆದಿದೆ. ಕಿರಣ್ ಕುಮಾರ್ ಕೊಡಿ ಅವರನ್ನು ಗೆಲ್ಲಿಸಬೇಕು ಎಂದು ಈ ಬಾರಿ ಅವರು ಪಣತೊಟ್ಟಿದ್ದರು. ರಾಜ್ಯ ಬಿಜೆಪಿ ಮತ್ತು ಕೇಂದ್ರದ ಹೈಕಮಾಂಡ್ ರಾಜ್ಯದ ಟಿಕೆಟ್‍ಗಳನ್ನು ಫೈನಲ್ ಮಾಡಿದರೆ, ಕುಂದಾಪುರದ ಬಿಜೆಪಿ ಟಿಕೆಟ್ ಕಿರಣ್ ಕುಮಾರ್ ಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಹಾಲಾಡಿ.

    ತನ್ನಂತೆ ದೊಡ್ಡ ಅಂತರದಲ್ಲಿ ಗೆಳೆಯ ಕಿರಣ್ ಕೊಡ್ಗಿ ಗೆಲ್ಲಬೇಕು ಅಂತ ಕಾಲಿಗೆ ಚಕ್ರ ಕಟ್ಟಿ ಓಡಾಟ ಮಾಡಿದ್ದರು. ಪ್ರಚಾರದ ನಡುವೆ ಕುಂದಾಪುರದಲ್ಲಿ ಬಂಟರು ಮಾತ್ರ ಗೆಲ್ಲೋದು ಅಂತ ಚರ್ಚೆಗಳು ಶುರುವಾದಾಗ ಅದನ್ನು ಹಾಲಾಡಿ ಸುಳ್ಳು ಮಾಡಿ 41,556 ಅಂತರದ ಗೆಲುವು ತಂದುಕೊಟ್ಟರು. ಇನ್ನುಳಿದಂತೆ ಜೆ.ಡಿ.ಎಸ್ ಅಭ್ಯರ್ಥಿ ರಮೇಶ್ 1,053, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ 1,257 ಹಾಗೂ ಪಕ್ಷೇತರ ಅಭ್ಯರ್ಥಿ ಜಿ. ಚಂದ್ರಶೇಖರ್ 728 ಮತಗಳನ್ನು ಪಡೆದಿರುತ್ತಾರೆ. ಒಟ್ಟು 1,141 ನೋಟಾ ಮತಗಳು ಚಲಾವಣೆಯಾಗಿರುತ್ತದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ, 60,868 ಜನರ ಮತ ಪಡೆದಿದ್ದೇನೆ. ಇದು ಬರೀ ಮತ ಅಲ್ಲ, ಅಷ್ಟು ಜನರ ಪ್ರೀತಿ. ಕ್ಷೇತ್ರದ ಮತದಾರರಿಗೆ ಧನ್ಯವಾದ. ಜನಾದೇಶಕ್ಕೆ ತಲೆ ಬಾಗುತ್ತೇನೆ. ಸಾಮಾಜಿಕ ಜೀವನದ ಚಟುವಟಿಕೆಗಳನ್ನು ಮುಂದುವರೆಸುತ್ತೇನೆ. ಜನರ ಜೊತೆಗೆ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಬಿಜೆಪಿಗೆ 5ಕ್ಕೆ 5 ಗೆಲುವು

    ಕರಾವಳಿಯಲ್ಲಿ ಹಿಂದೆಂದೂ ಕಂಡರಿಯದ ಜಾತಿ ಲೆಕ್ಕಾಚಾರ, ಒಳಗೊಳಗೇ ಜಾತಿ ಅಭ್ಯರ್ಥಿ ಗೆ ಬೆಂಬಲ ಕೊಡಬೇಕೆಂಬ ಚರ್ಚೆಗಳು, ಒಳ ಏಟುಗಳು ಸಭೆಗಳು ಸಾಮಾಜಿಕ ಜಾಲತಾಣದ ವಾರ್ ಗಳು ನಡೆದಿವೆ. ಆದ್ರೆ ಕುಂದಾಪುರದ ಜನ ರಾಜಕಾರಣದಲ್ಲಿ ಜಾತಿಯಿಲ್ಲ ಜಾತ್ಯಾತೀತತೆಯನ್ನು ಗೆಲ್ಲಿಸಿದ್ದಾರೆ.

     

  • ಹಿಂದುತ್ವ ನನ್ನ ಮೊದಲ ಆಯ್ಕೆ ಆಮೇಲೆ ಸಚಿವ, ಶಾಸಕ ಸ್ಥಾನ: ಸುನೀಲ್ ಕುಮಾರ್

    ಹಿಂದುತ್ವ ನನ್ನ ಮೊದಲ ಆಯ್ಕೆ ಆಮೇಲೆ ಸಚಿವ, ಶಾಸಕ ಸ್ಥಾನ: ಸುನೀಲ್ ಕುಮಾರ್

    ಉಡುಪಿ: ಹಿಂದುತ್ವ ಮತ್ತು ಅಭಿವೃದ್ಧಿ ವಿಚಾರದಲ್ಲಿ ರಾಜಿಯೇ ಇಲ್ಲ. ಹಿಂದುತ್ವವೇ ನನ್ನ ಮೊದಲ ಆಯ್ಕೆ. ಸಚಿವ, ಶಾಸಕ ಸ್ಥಾನ ಆ ನಂತರದ ಆಯ್ಕೆ ಎಂದು ಉಡುಪಿ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

    ಹೆಜಮಾಡಿ ಮೂಲಕ ಸುನೀಲ್ ಕುಮಾರ್ ಉಡುಪಿ ಜಿಲ್ಲೆಗೆ ಆಗಮಿಸಿದರು. ಬೆಳ್ಮಣ್ ನಲ್ಲಿ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ನಾಯಕರು, ಕಾರ್ಯಕರ್ತರು ಬರಮಾಡಿಕೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ಕುಮಾರ್ ಅವರು, ಸಚಿವನಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದೇನೆ. ಉಡುಪಿಗೆ ಬರುತ್ತಿರುವುದು ಸಂತೋಷ, ಭಾವನಾತ್ಮಕ ಕ್ಷಣ. ಕಾರ್ಕಳ ಕ್ಷೇತ್ರದ ಜನ ಮೂರುಬಾರಿ ಆಯ್ಕೆ ಮಾಡಿದ್ದರಿಂದ ಸಚಿವನಾದೆ. ಆದರೆ ಯಾವುದೇ ಹಂತದಲ್ಲೂ ಹಿಂದುತ್ವ ವಿಚಾರದಲ್ಲಿ ರಾಜಿ ಮಾಡುವುದಿಲ್ಲ. ಮೊದಲ ಆಯ್ಕೆ ಹಿಂದುತ್ವ ಮತ್ತು ಅಭಿವೃದ್ಧಿ ಎಂದರು.

    ಪಕ್ಷ ದೊಡ್ಡ ಪ್ರಮಾಣದ ಹೊಣೆಗಾರಿಕೆಯನ್ನು ಹೆಗಲಿಗೇರಿಸಿದೆ. ಸಿಎಂ ಮತ್ತು ಪಕ್ಷದ ಹಿರಿಯರ ನಿರೀಕ್ಷೆಯಿಟ್ಟು ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನಗೆ ಇಷ್ಟದ ಖಾತೆ ಎಂದು ಯಾವುದು ಇಲ್ಲ ಮುಖ್ಯಮಂತ್ರಿಗಳು ಕೊಟ್ಟ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದರು. ಇದನ್ನೂ ಓದಿ: ಅಭಿನಂದಿಸಲು ಹಾರ ತುರಾಯಿ ತರಬೇಡಿ, ಪುಸ್ತಕ ತನ್ನಿ: ಸುನೀಲ್ ಕುಮಾರ್

    ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ
    ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಪಕ್ಷ ಗೌರವ ಕೊಟ್ಟಿದೆ. ಶ್ರೀನಿವಾಸ್ ಶೆಟ್ಟಿಅವರಿಗೆ ಇನ್ನಷ್ಟು ಗೌರವ ಸಿಗಬೇಕು ಎಂಬ ನಿರೀಕ್ಷೆ ಸಹಜ. ಸಚಿವನಾಗಿ ನಾನು ಮಾಡುವ ಕೆಲಸಕ್ಕೆ ಶ್ರೀನಿವಾಸ್ ಶೆಟ್ಟಿ ಬೆಂಬಲ ಬೇಕು. ಸಚಿವ ಶ್ರೀನಿವಾಸ ಪೂಜಾರಿ, ಅಂಗಾರ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ. ಬಿಜೆಪಿ ಹಾಲಾಡಿಯವರನ್ನು ಖಂಡಿತ ಗುರುತಿಸುತ್ತದೆ. ಪಕ್ಷ ಹಾಲಾಡಿಯನ್ನು ಕರೆದು ಮಾತನಾಡಿಸುತ್ತದೆ ಎಂದು ಸುನೀಲ್ ಕುಮಾರ್ ಹೇಳಿದರು.

    ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಅದನ್ನು ತೀರ್ಮಾನಿಸುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ವಿಚಾರಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡದ ಅವರು, ನಳಿನ್ ಕುಮಾರ್ ಕಟೀಲ್ ಅವರೇ ನಮ್ಮ ಅಧ್ಯಕ್ಷರು ಎಂದರು.

    ಕಾಪು ಶಾಸಕ ಲಾಲಾಜಿ ಮೆಂಡನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಶಾಸಕ ಭರತ್ ಶೆಟ್ಟಿ ಸಚಿವರ ಜೊತೆಗಿದ್ದರು.