Tag: Srikrishna

  • ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ –  ಹ್ಯಾಕರ್‌ ಶ್ರೀಕಿ

    ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ – ಹ್ಯಾಕರ್‌ ಶ್ರೀಕಿ

    – ಭಗವದ್ಗೀತೆ ಪುಸ್ತಕದೊಂದಿಗೆ ಸಿಸಿಬಿ ಕಚೇರಿಗೆ ಆಗಮನ
    – ಮುಂದೆ ಚೀನಿ ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತೇನೆ

    ಬೆಂಗಳೂರು: “ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ. ಭಗವದ್ಗೀತೆಯಿಂದ ಮನಸ್ಸು ಏಕಾಗ್ರತೆಗೊಳ್ಳುತ್ತದೆ. ಬಳಿಕ ನಾನು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತೇನೆ” ಇದು ಡ್ರಗ್ಸ್‌ ಪ್ರಕರಣದಲ್ಲಿ ಬಂಧನಗೊಂಡಿರುವ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಪೊಲೀಸ್‌ ವಿಚಾರಣೆಯ ವೇಳೆ ತಿಳಿಸಿದ ತನ್ನ ಏಕಾಗ್ರತೆಯ ರಹಸ್ಯ.

    ನ.17 ರಂದು ಬೆಂಗಳೂರಿನ ಜಯನಗರದ ನಿವಾಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ 25 ವರ್ಷದ ಶ್ರೀಕೃಷ್ಣ ಆಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ಜಾಸ್ತಿ ಮಾತನಾಡಿದ್ದಾನೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ಭಗವದ್ಗೀತೆ ಬೇಕೇಬೇಕು:
    ಸದ್ಯ ಪೊಲೀಸ್‌ ಕಸ್ಟಡಿಯಲ್ಲಿ ಇರುವ ಶ್ರೀಕೃಷ್ಣ ಠಾಣೆಯಲ್ಲೂ ಪ್ರತಿ ದಿನ ತಪ್ಪದೇ ಭಗವದ್ಗೀತೆಯನ್ನು ಓದುತ್ತಿದ್ದಾನೆ. ರಾತ್ರಿ ಭಗವದ್ಗೀತೆ ಪುಸ್ತಕ ಓದುವುದರ ಜೊತೆಗೆ ಇಂದು ಸಿಸಿಬಿ ಪೊಲೀಸರ ಕಚೇರಿಗೆ ವಿಚಾರಣೆಗೆ ಹಾಜರಾಗಲು ಕರೆ ತಂದಾಗಲೂ ಕೈಯಲ್ಲಿ ಭಗವದ್ಗೀತೆ ಪುಸ್ತಕವನ್ನು ಹಿಡಿದುಕೊಂಡೇ ಬಂದಿದ್ದ.

    ಭಗವದ್ಗೀತೆ ಪುಸ್ತಕವನ್ನು ಯಾಕೆ ಓದುತ್ತಿದ್ದಿ ಎಂದು ಪ್ರಶ್ನಿದ್ದಕ್ಕೆ, ಹ್ಯಾಕಿಂಗ್‌ ಮಾಡಲು ಮನಸ್ಸಿಗೆ ಏಕಾಗ್ರತೆ ಬೇಕು. ಭಗದ್ಗೀತೆ ಓದಿದ ಬಳಿಕ ಏಕಾಗ್ರತೆ ಸಿಕ್ಕಿ ನಾನು ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ. ಭಗವದ್ಗೀತೆ ಅಲ್ಲದೇ ಸ್ವಾಮಿ ವಿವೇಕಾನಂದ, ಓಶೋ ಸೇರಿದಂತೆ ಆಧ್ಯಾತ್ಮ ಚಿಂತಕರ ಜೀವನ ಚರಿತ್ರೆಯ ಪುಸ್ತಕವನ್ನು ಶ್ರೀಕೃಷ್ಣ ಓದಿದ್ದಾನೆ.

    ಆಧ್ಯಾತ್ಮದ ಬಗ್ಗೆ ಎಷ್ಟು ಒಲವು ಹೊಂದಿದ್ದಾನೆ ಎಂದರೆ ಪ್ರತಿ ಗಂಟೆಗೆ ಭಗವದ್ಗೀತೆ ಓದಿ ಬಳಿಕ ಧ್ಯಾನ ಮಾಡುತ್ತಿದ್ದಾನೆ. ವಿಚಾರಣೆಯ ಸಂದರ್ಭದಲ್ಲೂ ಶ್ರೀಕಿ ಭಗವದ್ಗೀತೆಯಲ್ಲಿ ಬರುವ ಕೃಷ್ಣನ  ಉಪದೇಶವನ್ನು ಹೇಳುತ್ತಿದ್ದಾನೆ. ಇದನ್ನೂ ಓದಿ: ಪೋಕರ್ ವೆಬ್‍ಸೈಟ್‌, ಸರ್ಕಾರಿ ಟೆಂಡರ್‌ ವೆಬ್‌ಸೈಟ್‌ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅರೆಸ್ಟ್

    ಹ್ಯಾಕಿಂಗ್‌ ನಿಲ್ಲಿಸಲ್ಲ:
    ಸದ್ಯ ಉದ್ಯೋಗ ಇಲ್ಲ ಮುಂದೇನು ಎಂದು ಅಧಿಕಾರಿಗಳು ಪ್ರಶ್ನಿದ್ದಕ್ಕೆ, ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ ಹ್ಯಾಕಿಂಗ್‌ ಮಾಡುವುದನ್ನು ನಿಲ್ಲಿಸಲ್ಲ. ನಾನು ಯಾವುದೇ ಉದ್ಯೋಗ ಮಾಡುವುದಿಲ್ಲ. ಸ್ಥಳೀಯ ವೆಬ್ ಸೈಟ್‌ಗಳನ್ನು ಇನ್ನು ಮುಂದೆ ಹ್ಯಾಕ್ ಮಾಡುವುದಿಲ್ಲ. ಬದಲಾಗಿ ಚೀನಾ ಮತ್ತು ವಿದೇಶದ ಆನ್ ಲೈನ್ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತೇನೆ. ಈ ಕೆಲಸ ಬಿಟ್ಟು ನನಗೆ ಬೇರೆ ಏನೂ ಬರುವುದಿಲ್ಲ ಎಂದು ನೇರವಾಗಿಯೇ ಉತ್ತರ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

    ಹ್ಯಾಕಿಂಗ್‌ ಹೇಗೆ?
    ಹ್ಯಾಕರ್ ಶ್ರೀಕಿ ವೆಬ್‌ಸೈಟ್‌ ಹ್ಯಾಕ್‌ ಮಾಡಲು Hak5 WIFI pineapple ಡಿವೈಸ್‌ ಬಳಸುತ್ತಿದ್ದ. ಈ ಸಾಧನದ ಮೂಲಕ ವೆಬ್‌ಸೈಟ್‌ ಕೋಡ್‌ನಲ್ಲಿ ಬಗ್‌ ಪತ್ತೆ ಮಾಡಿ ಸರ್ವರ್‌ ಹ್ಯಾಕ್‌ ಮಾಡುತ್ತಿದ್ದ. ನಂತರ ವೆಬ್‌ಸೈಟ್‌ ಅನ್ನು ತನಗೆ ಹೇಗೇ ಬೇಕೋ ಹಾಗೆ ಕೆಲಸ ಮಾಡುವಂತೆ ಬದಲಾವಣೆ ಮಾಡುತ್ತಿದ್ದ. ಈ ಮಾದರಿಯಲ್ಲಿ ಪೋಕರ್‌ ವೆಬ್‌ಸೈಟ್‌ ಅನ್ನು ಶ್ರೀಕಿ ಹ್ಯಾಕ್‌ ಮಾಡಿದ್ದ.

  • ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

    ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

    ಉಡುಪಿ: ಗುರುವಾಯೂರಿನ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆಯ ಹಾಡನ್ನು ಬಿಯರ್ ಬಾಟಲಿ ಹಿಡ್ಕೊಂಡು ಟಿಕ್ ಟಾಕ್ ಮಾಡಿದ ಯುವಕರ ಚಳಿ ಬಿಡಿಸಲಾಗಿದೆ.

    ಮೊಸರು ಕುಡಿಕೆಯ ಉತ್ಸವದಲ್ಲಿ ಕುಣಿದ ಕೇರಳದ ಯುವತಿಯ ವೀಡಿಯೋ ಅಷ್ಟಮಿ ಸಂದರ್ಭ ಸಿಕ್ಕಾಪಟ್ಟೆ ವೈರಲಾಗಿತ್ತು. ಆ ನಂತರ ಬಂದ ವೈಷ್ಣವಿಯ ಫೋಟೋಗಳು ಭಾರೀ ಜನಮನ್ನಣೆ ಪಡೆದಿತ್ತು. ಫೇಸ್ ಬುಕ್, ವಾಟ್ಸಾಪ್ ನಲ್ಲಿ ಗುರುವಾಯೂರು ಕೃಷ್ಣೆ ಆವರಿಸಿದ್ದಳು.

    ಇದನ್ನು ಟಿಕ್ ಟಾಕ್ ಕಿಡಿಗೇಡಿಗಳು ಅದೇ ಹಾಡಿಗೆ ವೈಷ್ಣವಿಯನ್ನು ಹೋಲುತ್ತಾ ಕುಣಿದಿದ್ದರು. ಮೊಸರು ಕುಡಿಕೆಯ ಬದಲು ಬಿಯರ್ ಬಾಟಲಿ ನೇತು ಹಾಕಿದ್ದರು. ಚಿಕ್ಕಮಗಳೂರಿನ ಈ ಯುವಕರಿಗೆ ಉಡುಪಿ ಜಿಲ್ಲೆ ಕಾರ್ಕಳದ ಹಿಂದೂ ಸಂಘಟನೆಯವರು ಚಳಿ ಬಿಡಿಸಿದ್ದಾರೆ. ಕಾರ್ಕಳ ತಾಲೂಕು ಬಜರಂಗದಳದ ಕಾರ್ಯಕರ್ತರು ಟಿಕ್ ಟಾಕ್ ಶೂರರ ವಿಳಾಸ ಪತ್ತೆ ಮಾಡಿದ್ದಾರೆ. ಇದನ್ನು ಓದಿ:ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

    ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಇದರಿಂದ ಭಯಗೊಂಡ ಮೂರು ಟಿಕ್ ಟಾಕ್ ಕಲಾವಿದರು ಕ್ಷಮೆ ಕೇಳಿದ್ದಾರೆ. ವೀಡಿಯೋ ಮಾಡಿ ತಮ್ಮ ತಪ್ಪಾಗಿದೆ ಎಂದು ಕೇಳಿಕೊಂಡಿದ್ದಾರೆ.

    ಭಜರಂಗದಳದ ನಾಯಕ ಮಹೇಶ್ ಶೆಣೈ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಟಿಕ್ ಟಾಕ್ ಅವಾಂತರ ಮಿತಿ ಮೀರಿದೆ. ಅದರಲ್ಲೂ ದೇವರ ವಿಚಾರದಲ್ಲಿ ಟಿಕ್ ಟಾಕ್ ಮಾಡಿದ್ದು ನೋವಿನ ಸಂಗತಿ. ಕಲೆ, ಸಂಸ್ಕೃತಿ, ನಂಬಿಕೆ ವಿಚಾರವನ್ನು ವಿಡಂಬನೆ ಮಾಡುವುದು ಎಷ್ಟು ಸರಿ? ಯುವಕರನ್ನು ಫೋನ್  ಮೂಲಕ ಪತ್ತೆಹಚ್ಚಿ ಕ್ಷಮೆ ಕೇಳಿಸಿದ್ದೇವೆ. ಇನ್ನು ಈ ತರಹ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ಘಟನೆ ಮುಂದುವರೆಯಬಾರದು ಎಂದು ಹೇಳಿದರು.