Tag: Sri Lanka

  • ಸಿಎಎ ಪ್ರತಿಭಟನೆಗಳ ಕುರಿತು ಕೊಹ್ಲಿ ಪ್ರತಿಕ್ರಿಯೆ

    ಸಿಎಎ ಪ್ರತಿಭಟನೆಗಳ ಕುರಿತು ಕೊಹ್ಲಿ ಪ್ರತಿಕ್ರಿಯೆ

    ಗುವಾಹಟಿ: ದೇಶದಲ್ಲಿ ಪೌರತ್ವ ಕಾಯ್ದೆಯ ಪರ ಹಾಗೂ ವಿರೋಧಿ ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದೆ. ಇದೇ ವೇಳೆ ಪೌರತ್ವ ಕಾಯ್ದೆಯ ಕುರಿತು ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಶ್ರೀಲಂಕಾ ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯ ಹಿನ್ನೆಲೆಯಲ್ಲಿ ಇಂದು ನಾಯಕ ಕೊಹ್ಲಿ ಮಾಧ್ಯಮಗಳ ಎದುರು ಹಾಜರಾಗಿದ್ದರು. ಈ ವೇಳೆ ಕೊಹ್ಲಿ ಅವರಿಗೆ ಸಿಎಎ ಕಾಯ್ದೆಯ ಕುರಿತ ಪ್ರಶ್ನೆ ಎದುರಾಗಿತ್ತು. ಇದಕ್ಕೂತ್ತರಿಸಿ ಮಾತನಾಡಿದ ಕೊಹ್ಲಿ, ಸಿಎಎ ವಿಚಾರದಲ್ಲಿ ನಾನು ಬೇಜವಾಬ್ದಾರಿಯಾಗಿ ಮಾತನಾಡಲು ಬಯಸುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದ ಸಂದರ್ಭದಲ್ಲಿ ಮಾತ್ರ ನಾವು ಬಹಿರಂಗವಾಗಿ ಮಾತನಾಡಬೇಕು. ಸಿಸಿಎ ಬಗ್ಗೆ ನಾನು ಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ಆ ಬಳಿಕವೇ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

    2016 ರಲ್ಲಿ ಮೋದಿ ಸರ್ಕಾರ ನೋಟು ರದ್ದು ಮಾಡಿ ಆದೇಶ ನೀಡಿತ್ತು. ಆ ವೇಳೆ ಪ್ರತಿಕ್ರಿಯೆ ನೀಡಿದ್ದ ಕೊಹ್ಲಿ, ಭಾರತೀಯ ರಾಜಕೀಯ ಇತಿಹಾಸದಲ್ಲಿ ಇದು ಶ್ರೇಷ್ಠ ನಡೆ ಎಂದಿದ್ದರು. ಅಸ್ಸಾಂನಲ್ಲಿ ಸಿಸಿಎ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಕೊಹ್ಲಿಗೆ ಈ ಪ್ರಶ್ನೆಯನ್ನು ಕೇಳಲಾಗಿತ್ತು.

    ಇದೇ ವೇಳೆ ಕೊಹ್ಲಿ ಗುವಾಹಟಿ ಪಂದ್ಯಕ್ಕೆ ನೀಡಲಾಗಿರುವ ಭದ್ರತೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಈ ನಗರ ಅತ್ಯಂತ ಸುರಕ್ಷಿತ ಎಂದು ಹೇಳಿದ್ದಾರೆ.

    ಅಸ್ಸಾಂ ಕ್ರಿಕೆಟ್ ಮಂಡಳಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯವನ್ನು ಮುಂದಿನ ಐಪಿಎಲ್ ಆವೃತ್ತಿಗೆ ‘ಕರ್ಟೆನ್ ರೈಸರ್’ ಆಗಿ ಬಳಕೆ ಮಾಡಿಕೊಳ್ಳುತ್ತಿದೆ. 2020ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗುವಾಹಟಿ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗುವಾಹಟಿ ಪಂದ್ಯಕ್ಕೆ ಕರವಸ್ತ್ರ ಹಾಗೂ ಟವೆಲ್ ತರುವುದಕ್ಕೆ ನಿಷೇಧ ಹೇರಲಾಗಿದೆ. ಅಸ್ಸಾಂ ಸಂಪ್ರದಾಯವಾದಿಗಳು ಕರವಸ್ತ್ರ ಹಾಗೂ ಟವೆಲ್ ಗಳನ್ನು ಸಿಎಎ ವಿರುದ್ಧದ ಪ್ರತಿಭಟನೆಗಳಲ್ಲಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

  • ಯುವಿಯನ್ನು ಹಿಂದಿಕ್ಕಲು ರಾಹುಲ್‍ಗೆ ಬೇಕಿದೆ 40 ರನ್- 1 ರನ್ ಹೊಡೆದ್ರೆ ಕೊಹ್ಲಿ ಮತ್ತೆ ನಂ.1

    ಯುವಿಯನ್ನು ಹಿಂದಿಕ್ಕಲು ರಾಹುಲ್‍ಗೆ ಬೇಕಿದೆ 40 ರನ್- 1 ರನ್ ಹೊಡೆದ್ರೆ ಕೊಹ್ಲಿ ಮತ್ತೆ ನಂ.1

    ಬೆಂಗಳೂರು: ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2020 ವರ್ಷಾರಂಭದಲ್ಲಿ ಅತಿಥಿ ಶ್ರೀಲಂಕಾ ತಂಡವನ್ನು ಮಣಿಸಲು ಸಿದ್ಧತೆ ನಡೆಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಾಖಲೆ ಬರೆಯುವ ಸಾಧ್ಯತೆಯಿದೆ.

    ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಲಭ್ಯವಿಲ್ಲ. ಆಯ್ಕೆ ಸಮಿತಿಯು ಅವರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಿದೆ. ಹೀಗಾಗಿ ರನ್ ಮೆಷಿನ್ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್‍ಗಳಿಸಿದ ದಾಖಲೆಯನ್ನು ಬರೆಯಲು ಸಿದ್ಧರಾಗಿದ್ದಾರೆ. ಈ ಇಬ್ಬರು ಆಟಗಾರರು ಅಂತರಾಷ್ಟ್ರೀಯ ಟಿ20ಯಲ್ಲಿ ಭಾರತದ ಪರ ತಲಾ 2,633 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

    ಶ್ರೀಲಂಕಾ ವಿರುದ್ಧ ಜನವರಿ 5ರಂದು ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಒಂದು ರನ್ ಗಳಿಸಿದರೆ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20 ಅತಿ ಹೆಚ್ಚು ರನ್‍ಗಳಿಸಿ ದಾಖಲೆ ಬರೆಯಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ 19 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ರೋಹಿತ್ ದಾಖಲೆಯನ್ನು ಹಿಂದಿಕ್ಕಿದ್ದರು. ಆದರೆ 3ನೇ ಹಾಗೂ ಕೊನೆಯ ಪಂದ್ಯದಲ್ಲಿ 71 ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ವಿರಾಟ್ 70 ರನ್ ಗಳಿಸಿ ರೋಹಿತ್‍ರನ್ನು ಸರಿಗಟ್ಟಿದ್ದರು.

    ರೋಹಿತ್ ಶರ್ಮಾ 96 ಇನ್ನಿಂಗ್ಸ್ ಗಳಲ್ಲಿ 2,633 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 70 ಇನ್ನಿಂಗ್ಸ್ ಗಳಲ್ಲಿ ಈ ದಾಖಲೆ ಮಾಡಿದ್ದಾರೆ. ರೋಹಿತ್ ಶರ್ಮಾ 234 ಬೌಂಡರಿ, 120 ಸಿಕ್ಸರ್ ಸಿಡಿಸಿದರೆ, ವಿರಾಟ್ 247 ಬೌಂಡರಿ, 71 ಸಿಕ್ಸರ್ ದಾಖಲಿಸಿದ್ದಾರೆ.

    ಯುವಿಯನ್ನು ಹಿಂದಿಕ್ಕಲಿರುವ ರಾಹುಲ್:
    ಅಂತರರಾಷ್ಟ್ರೀಯ ಟಿ20ಯಲ್ಲಿ 8 ಅರ್ಧ ಶತಕ ಸಿಡಿಸುವ ಮೂಲಕ ಕೆ.ಎಲ್.ರಾಹುಲ್ ಈಗಾಗಲೇ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಈಗ ಯುವಿ ಒಟ್ಟು ರನ್ ಹಿಂದಿಕ್ಕಲು ರಾಹುಲ್ ಸಿದ್ಧರಾಗಿದ್ದಾರೆ. ಈ ಸಾಧನೆ ಮಾಡಲು ರಾಹುಲ್‍ಗೆ 40 ರನ್ ಅಗತ್ಯವಿದೆ.

    ಯುವಿ 51 ಇನ್ನಿಂಗ್ಸ್ ಗಳಲ್ಲಿ 8 ಅರ್ಧಶತಕಗಳ ಸಾಧನೆ ಮಾಡಿದರೆ, ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದಾರೆ. ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ 51 ಇನ್ನಿಂಗ್ಸ್ ಗಳಲ್ಲಿ 1,177 ರನ್ ಗಳಿಸಿದರೆ, ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ 1,138 ರನ್ ಪೇರಿಸಿದ್ದಾರೆ.

    ಭಾರತವೇ ಫೇವರೇಟ್:
    2017ರಿಂದ ಈವರೆಗೆ ಟೀಂ ಇಂಡಿಯಾ ಹಾಗೂ ಶ್ರೀಲಂಕಾ ತಂಡದ ಮಧ್ಯೆ ಐದು ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ 4 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. 2017ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಟೀಂ ಇಂಡಿಯಾ ವಿರುದ್ಧ ಆಡಿದ್ದ ಮೂರು ಟಿ20 ಸರಣಿಯಲ್ಲಿ 3-0 ಅಂತರದಿಂದ ಸೋತಿತ್ತು. ಬಳಿಕ 2018ರಲ್ಲಿ ನಡೆದ ನಿದಾಸ್ ಟ್ರೋಫಿಯಲ್ಲಿ ಸರಣಿಯಲ್ಲಿ ಭಾರತ ಮತ್ತು ಲಂಕಾ ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಮೂಲಕ 2018ರ ನಿದಾಸ್ ಟ್ರೋಫಿಯ ಫೈನಲ್ ಪ್ರವೇಶಿಸಿದ್ದ ಭಾರತ ತಂಡವು ದಿನೇಶ್ ಕಾರ್ತಿಕ್ ಅವರ ಸ್ಫೋಟಕ ಬ್ಯಾಟಿಂಗ್ ನಿಂದಾಗಿ(ಔಟಾಗದೇ 29 ರನ್, 8 ಎಸೆತ, 2 ಬೌಂಡರಿ, 3 ಸಿಕ್ಸರ್) ಬಾಂಗ್ಲಾದೇಶವನ್ನು ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

    ಸರಣಿ ವೇಳಾಪಟ್ಟಿ:
    ಮೊದಲ ಟಿ20: ಜನವರಿ 5, ಗುವಾಹಟಿ
    ದ್ವಿತೀಯ ಟಿ20: ಜನವರಿ 7, ಇಂದೋರ್
    ಅಂತಿಮ ಟಿ20: ಜನವರಿ 10, ಪುಣೆ

    ಭಾರತ ತಂಡ:
    ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‍ಕೀಪರ್), ರವೀಂದ್ರ ಜಡೇಜಾ, ಶಿವಂ ದುಬೇ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.

    ಶ್ರೀಲಂಕಾ ತಂಡ:
    ಲಸಿತ್ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜಲೊ ಮ್ಯಾಥ್ಯೂಸ್, ದಸುನ್ ಶನಕ, ಕುಸಲ್ ಪೆರೆರಾ, ನಿರೋಶನ್ ಡಿಕ್ವೆಲ್ಲಾ, ಧನಂಜಯ ಡಿ’ಸಿಲ್ವಾ, ಇಸುರು ಉದನಾ, ಭಾನುಕ ರಾಜಪಕ್ಷ, ಒಶಾದ ಫರ್ನಾಂಡೊ, ವಾನಿಂದು ಹಸರಂಗ, ಲಾಹಿರು ಕುಮಾರ, ಕುಶಲ್ ಮೆಂಡಿಸ್, ಲಕ್ಷಣ್ ಸಂದಕನ್, ಕಸುನ್ ರಜಿತ.

  • ಶ್ರೀಲಂಕಾದಲ್ಲಿ ಕರಾಟೆ ಸ್ಪರ್ಧೆ – ಬಂಗಾರದ ಪದಕ ಗೆದ್ದ ಚನ್ನಪಟ್ಟಣದ ವಿದ್ಯಾರ್ಥಿಗಳು

    ಶ್ರೀಲಂಕಾದಲ್ಲಿ ಕರಾಟೆ ಸ್ಪರ್ಧೆ – ಬಂಗಾರದ ಪದಕ ಗೆದ್ದ ಚನ್ನಪಟ್ಟಣದ ವಿದ್ಯಾರ್ಥಿಗಳು

    ರಾಮನಗರ: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ಬಂಗಾರದ ಪದಕಕ್ಕೆ ಕೊರಳೊಡ್ಡುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೊಂಡಾಪುರ ಗ್ರಾಮದ ಪೂರ್ಣಿಮಾ ಹಾಗೂ ಪಟ್ಟಣದ ಕೇಂಬ್ರಿಡ್ಜ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಣ್ಣಘಟ್ಟ ಗ್ರಾಮದ ನಿಖಿಲ್ ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಕಳೆದ 28 ರಂದು ಶ್ರೀಲಂಕಾದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರಾಟೆ ಶಿಕ್ಷಕ ಆನಂದ್ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಹ ಕರಾಟೆಯ ತರಬೇತಿ ಪಡೆದು ಶ್ರೀಲಂಕಾಗೆ ಪಯಣಿಸಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ತಂದಿದ್ದಾರೆ.

    ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ. ಅಲ್ಲದೇ ಬಡಕುಟುಂಬದ ಹೆಣ್ಣು ಮಗಳೊಬ್ಬಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕರಾಟೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವುದು ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡುವಂತಾಗಿದೆ.

    ಬಡತನ ಮೆಟ್ಟಿ ನಿಂತ ಕರಾಟೆ ಪಟು
    ಆರ್ಥಿಕ ಸಂಕಷ್ಟದಲ್ಲಿದ್ದ ಕರಾಟೆಪಟು ಪೂರ್ಣಿಮಾಗೆ ಶ್ರೀಲಂಕಾದಲ್ಲಿ ನಡೆಯಲಿದ್ದ ಚಾಂಪಿಯನ್ ಶಿಪ್‍ನಲ್ಲಿ ಪಾಲ್ಗೊಳ್ಳಲು ಹಣದ ಸಮಸ್ಯೆ ಎದುರಾಗಿತ್ತು. ಪ್ರಯಾಣದ ಖರ್ಚನ್ನು ಬರಿಸುವುದಿಲ್ಲ ಎಂದು ರಾಜ್ಯದ ಕರಾಟೆ ಸಂಸ್ಥೆ ತಿಳಿಸಿದ್ದರಿಂದ ಪೂರ್ಣಿಮಾ ಸಾಕಷ್ಟು ಆತಂಕ್ಕೆ ಒಳಗಾಗಿದ್ದರು. ಅಲ್ಲದೇ ಈಗಾಗಲೇ ಸಾಕಷ್ಟು ಸಾಲ ಮಾಡಿ ಮಗಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಿದ್ದ ತಂದೆ-ತಾಯಿ ಸಹ ಹಣವಿಲ್ಲದೇ ಮಗಳನ್ನು ಶ್ರೀಲಂಕಾಗೆ ಕಳುಹಿಸಲು ಹಿಂದೇಟು ಹಾಕಿದ್ದರು.

    ಇದೇ ವೇಳೆ ಜಿಲ್ಲೆಯ ಹಲವು ದಾನಿಗಳು ಪೂರ್ಣಿಮಾಳ ನೆರವಿಗೆ ನಿಂತು ಧನ ಸಹಾಯ ಮಾಡಿದ್ರು. ರಾಮನಗರ ಜಿಲ್ಲಾ ವಾರ್ತಾಧಿಕಾರಿ ಎಸ್ ಶಂಕರಪ್ಪ ತಮ್ಮ ಕಚೇರಿಗೆ ಪೂರ್ಣಿಮಾಳ ಕುಟುಂಬದವರನ್ನು ಕರೆಸಿಕೊಂಡು ತಮ್ಮ ವೇತನದ ಹಣದಲ್ಲಿ ಪ್ರಯಾಣಕ್ಕೆ ನೆರವಾಗಿದ್ರು. ಇದೇ ವೇಳೆ ವಾರ್ತಾಧಿಕಾರಿಗಳನ್ನು ಭೇಟಿಯಾಗಲು ಬಂದಿದ್ದ ಕ್ರೀಡಾಸಕ್ತರೋರ್ವರು ಕೂಡ ವೈಯಕ್ತಿಕವಾಗಿ 10 ಸಾವಿರ ರೂಪಾಯಿಗಳನ್ನು ನೀಡಿ ಪೂರ್ಣಿಮಾಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ನೆರವಾಗಿದ್ರು.

    ಬಂಗಾರದ ಪದಕ ಗೆದ್ದ ಖುಷಿಯಲ್ಲಿರುವ ಪೂರ್ಣಿಮಾ ತನ್ನ ಆಸೆಗೆ ನೀರೆರೆಯುವ ಮೂಲಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ನೆರವಾದ ಪ್ರತಿಯೊಬ್ಬರಿಗೂ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ಮುಂದೆ ದೇಶಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆದ್ದು ತ್ರಿವರ್ಣ ಧ್ವಜವನ್ನ ಹಿಡಿಯಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾಳೆ.

  • ಬುಮ್ರಾ, ಧವನ್ ಬ್ಯಾಕ್, ರೋಹಿತ್‍ಗೆ ವಿಶ್ರಾಂತಿ – ಲಂಕಾ, ಆಸಿಸ್ ಸರಣಿಗೆ ಭಾರತ ಆಟಗಾರ ಪಟ್ಟಿ ಬಿಡುಗಡೆ

    ಬುಮ್ರಾ, ಧವನ್ ಬ್ಯಾಕ್, ರೋಹಿತ್‍ಗೆ ವಿಶ್ರಾಂತಿ – ಲಂಕಾ, ಆಸಿಸ್ ಸರಣಿಗೆ ಭಾರತ ಆಟಗಾರ ಪಟ್ಟಿ ಬಿಡುಗಡೆ

    ನವದೆಹಲಿ: ಮುಂಬರುವ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ-20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಇಂದು ಆಯ್ಕೆ ಮಾಡಿದ್ದು, ಕಳೆದ ನಾಲ್ಕು ತಿಂಗಳಿಂದ ತಂಡದಿಂದ ಹೊರಗಡೆಯಿದ್ದ ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಭಾರತದ ತಂಡಕ್ಕೆ ವಾಪಸ್ ಆಗಿದ್ದಾರೆ.

    ಬುಮ್ರಾ ಅವರ ಜೊತೆಗೆ ಕಳೆದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಟಿ-20 ಮತ್ತು ಏಕದಿನ ಎರಡು ತಂಡಗಳಿಗೆ ಮರಳಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಸಿಡಿಸಿರುವ ರೋಹಿತ್ ಶರ್ಮಾ ಅವರಿಗೆ ಶ್ರೀಲಂಕಾ ವಿರುದ್ಧದ ಟಿ-20 ಸರಣಿಗೆ ರೆಸ್ಟ್ ನೀಡಲಾಗಿದೆ. ಇವರ ಜೊತೆಗೆ ವೇಗಿ ಮೊಹಮ್ಮದ್ ಶಮಿ ಅವರಿಗೂ ರೆಸ್ಟ್ ನೀಡಲಾಗಿದೆ.

    ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರಚಿಕೆತ್ಸೆಗೆ ಒಳಗಾಗಿದ್ದ ಬುಮ್ರಾ ಅವರು ನಾಲ್ಕು ತಿಂಗಳ ನಂತರ ಭಾರತ ತಂಡಕ್ಕೆ ವಪಾಸ್ ಆಗಿದ್ದಾರೆ. ಅವರು ಕಳೆದ ಆಗಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದಾದ ನಂತರ ವಿಶಾಖಪಟ್ಟಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನೆಟ್‍ನಲ್ಲಿ ಬೌಲಿಂಗ್ ಮಾಡಿ ತಮ್ಮ ಫಿಟ್ನೆಸ್ ಸಾಬೀತು ಮಾಡಿದ್ದರು.

    ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದ ಶಿಖರ್ ಧವನ್ ಅವರು ಮತ್ತೆ ತಂಡಕ್ಕೆ ಮರಳಿದ್ದಾರೆ. ಈ ವರ್ಷ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರಿಗೆ ಕೊಂಚ ಬ್ರೇಕ್ ನೀಡಲಾಗಿದ್ದು, ಎಂದಿನಂತೆ ನಾಯಕ ಕೊಹ್ಲಿ ಜನವರಿ 5 ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ 3 ಟಿ-20 ಸರಣಿ ಮತ್ತು ಜನವರಿ 14 ರಿಂದ ಆರಂಭವಾಗುವ ಆಸ್ಟ್ರೇಲಿಯಾದ ವಿರುದ್ಧದ 3 ಏಕದಿನ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.

    ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯು ನವದೆಹಲಿಯಲ್ಲಿ ಈ ಎರಡು ಸರಣಿಗೆ ಆಟಗಾರರನ್ನು ಆಯ್ಕೆ ಮಾಡಿದೆ. ಸಭೆಯ ನಂತರ ಮಾತನಾಡಿದ ಎಂಎಸ್‍ಕೆ ಪ್ರಸಾದ್ ರಿಷಭ್ ಪಂತ್ ಅವರಿಗೆ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಸುಧಾರಿಸಲು ಒಳ್ಳೆಯ ವಿಕೆಟ್ ಕೀಪಿಂಗ್ ಕೋಚ್ ಅನ್ನು ನೇಮಕ ಮಾಡಲಾಗುತ್ತದೆ. ಅವರು ಕೀಪಿಂಗ್ ಅಲ್ಲಿ ಸ್ವಲ್ಪ ಸುಧಾರಿಸಬೇಕಿದೆ ಹಾಗಾಗಿ ತಜ್ಞ ತರಬೇತುದಾರನನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿದರು.

    ಶ್ರೀಲಂಕಾ ಟಿ-20 ಸರಣಿ:
    ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಿವಂ ದುಬೆ, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.

    ಆಸ್ಟ್ರೇಲಿಯಾ ಏಕದಿನ ಸರಣಿ:
    ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದಾರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಜಸ್ಪ್ರಿತ್ ಬುಮ್ರಾ.

  • ವಿಶ್ವಕಪ್ ಫೈನಲಿನಲ್ಲಿ ಶತಕ ವಂಚಿತನಾಗಲು ಧೋನಿಯೇ ಕಾರಣ: ಸತ್ಯ ಬಿಚ್ಚಿಟ್ಟ ಗಂಭೀರ್

    ವಿಶ್ವಕಪ್ ಫೈನಲಿನಲ್ಲಿ ಶತಕ ವಂಚಿತನಾಗಲು ಧೋನಿಯೇ ಕಾರಣ: ಸತ್ಯ ಬಿಚ್ಚಿಟ್ಟ ಗಂಭೀರ್

    ನವದೆಹಲಿ: ನಾನು 2011ರ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶತಕ ವಂಚಿತನಾಗಲು ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಆರೋಪಿಸಿದ್ದಾರೆ.

    ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2011ರ ಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ ಬರೋಬ್ಬರಿ 28 ವರ್ಷದ ನಂತರ ವಿಶ್ವಕಪ್ ಅನ್ನು ಎತ್ತಿಹಿಡಿದಿತ್ತು. ಈ ಪಂದ್ಯದಲ್ಲಿ ಕೇವಲ ಮೂರು ರನ್‍ಗಳಿಂದ ಶತಕ ವಂಚಿತರಾಗಿದ್ದ ಗೌತಮ್ ಗಂಭೀರ್ ಅವರು, ನಾನು ಶತಕ ವಂಚಿತನಾಗಲು ಅಂದಿನ ನಾಯಕ ಎಂ.ಎಸ್ ಧೋನಿ ಅವರು ಕಾರಣ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಗಂಭೀರ್ ಅವರು, ನಾನು ಎಲ್ಲೇ ಹೋದರೂ ಯುವಕರು ಆ ದಿನ ನೀವು ಯಾಕೆ ಶತಕ ಹೊಡೆದಿಲ್ಲ ಎಂದು ಪ್ರಶ್ನಿಸುತ್ತಾರೆ. ನನಗೂ ಯಾವಗಲೂ ಅನ್ನಿಸುತ್ತದೆ. ಆ ಶತಕ ಸಿಡಿಸಿದ್ದರೆ ನನ್ನ ಕ್ರಿಕೆಟ್ ಜೀವನ ಇನ್ನೂ ಚೆನ್ನಾಗಿ ಇರುತಿತ್ತು. ಆದರೆ ನನ್ನ ವೈಯಕ್ತಿಕ ಸ್ಕೋರ್ ಅನ್ನು ಹಚ್ಚಿಸಿಕೊಳ್ಳುವ ಬರದಲ್ಲೇ ನಾನು ಅವತ್ತು ಶತಕ ವಂಚಿತನಾದೆ ಎಂದು ಹೇಳಿದ್ದಾರೆ.

    ಆ ಪಂದ್ಯದ ವೇಳೆ ನನಗೆ ನಾನು 97 ರನ್ ಹೊಡೆದಿದ್ದೇನೆ ಎಂಬ ಅರಿವೇ ಇರಲಿಲ್ಲ. ಕೇವಲ ನನ್ನ ಗುರಿ ಶ್ರೀಲಂಕಾ ನೀಡಿದ 275 ರನ್‍ಗಳನ್ನು ಬೆನ್ನಟ್ಟವುದು ಆಗಿತ್ತು. ಆದರೆ ಆ ಓವರಿನ ಮಧ್ಯದಲ್ಲಿ ನನ್ನ ಬಳಿಗೆ ಬಂದ ಧೋನಿ ಅವರು, ನೀನು ಈಗ 97 ರನ್ ಹೊಡೆದಿದ್ದಿ. ಇನ್ನು ಮೂರು ರನ್ ಹೊಡೆದರೆ ಶತಕ ಆಗುತ್ತದೆ ಎಂದು ಹೇಳಿ ನನ್ನ ಗಮನಕ್ಕೆ ತಂದರು. ಆಗ ನನಗೆ ನನ್ನ ವೈಯಕ್ತಿಕ ಸ್ಕೋರ್ ಮೇಲೆ ಗಮನ ಹೆಚ್ಚಾಯ್ತು. ಆದ್ದರಿಂದ ನಾನು ಅಂದು ಔಟ್ ಆದೆ. ಧೋನಿ ಅವರು ಅದನ್ನು ನೆನಪಿಸದೆ ಇದ್ದರೆ ಅವತ್ತು ನಾನು ಶತಕ ಸಿಡಿಸುತ್ತಿದ್ದೆ ಎಂದು ನೆನಪಿಸಿಕೊಂಡರು.

    2011 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 275 ರನ್‍ಗಳ ಮೊತ್ತವನ್ನು ಬೆನ್ನಟ್ಟಲು ಹೋಗಿ ಅಲ್ಪ ಮೊತ್ತಕ್ಕೆ ಮೊದಲ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿದ್ದ ಭಾರತವನ್ನು ಗೌತಮ್ ಗಂಭೀರ್ ಅವರ ತಾಳ್ಮೆಯ ಆಟವಾಡಿ 3 ರನ್ ಗಳಿಂದ ಶತಕದಿಂದ ವಂಚಿತರಾದರು. ಲಂಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ್ದ ಗೌತಮ್ 97 ರನ್(122 ಎಸೆತ, 9 ಬೌಂಡರಿ) ಹೊಡೆದು ಔಟಾದರು. ಶತಕಕ್ಕೆ ಮೂರು ರನ್‍ಗಳ ಅವಶ್ಯಕತೆ ಇದ್ದಾಗ ಥಿಸರಾ ಪೆರೆರಾ ಅವರಿಗೆ ಬೌಲ್ಡ್ ಆಗಿದ್ದರು.

    2011 ಏಪ್ರಿಲ್ 2 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 275 ರನ್ ಗಳ ಗುರಿ ಹೊಂದಿತ್ತು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಮಾಲಿಂಗ ಅವರ ಬೌಲಿಂಗ್ ಗೆ ಬೇಗ ಔಟಾದರು. ಈ ವೇಳೆ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಜೋಡಿಯಾಗಿ 83 ರನ್ ಗಳ ಕೊಡುಗೆ ನೀಡಿದ್ದರು. ಆದರೆ 22ನೇ ಓವರ್ ಬಳಿಕ ಶ್ರೀಲಂಕಾ ತಂಡ ಮೇಲುಗೈ ಸಾಧಿಸುತ್ತಿತ್ತು. ಈ ವೇಳೆ ವಿರಾಟ್ ಕೊಹ್ಲಿ ಔಟಾಗುತ್ತಿದಂತೆ ಧೋನಿ ಬ್ಯಾಟಿಂಗ್ ಇಳಿದಿದ್ದರು.

    ಈ ವೇಳೆ ಗಂಭೀರ್ ಜೊತೆ ಉತ್ತಮ ಶತಕದ ಜೊತೆಯಾಟವಾಡಿದ ಧೋನಿ 4 ವಿಕೆಟಿಗೆ 109 ರನ್ ಗಳ ಜೊತೆಯಾಟವಾಡಿದರು. ಈ ಬಳಿಕ ಜೊತೆಯಾದ ಯುವರಾಜ್ ಸಿಂಗ್ ಮತ್ತು ಧೋನಿ ಮುರಿಯದ 5ನೇ ವಿಕೆಟಿಗೆ 54 ರನ್ ಜೊತೆಯಾಟವಾಡಿ 48.2 ಓವರ್ ಗಳಲ್ಲಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಧೋನಿ 79 ಎಸೆತಗಳಲ್ಲಿ 91 ರನ್ (8 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಗೆ ಸಿಕ್ಸರ್ ಸಿಡಿಸಿ ಭಾರತಕ್ಕೆ ಕಪ್ ಗೆದ್ದುಕೊಟ್ಟಿದ್ದರು.

  • ದಕ್ಷಿಣ ಏಷ್ಯಾದಲ್ಲೇ ಮೊದಲು- ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ

    ದಕ್ಷಿಣ ಏಷ್ಯಾದಲ್ಲೇ ಮೊದಲು- ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ

    ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಮ್ಯಾಚ್ ಫಿಕ್ಸಿಂಗ್ ವಿರುದ್ಧ ಕಠಿಣ ನಿಯಮಗಳನ್ನು ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಕಳ್ಳಾಟ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧದ ಅಡಿ ಪರಿಗಣಿಸುವ ಕಾಯ್ದೆಗೆ ಶ್ರೀಲಂಕಾ ಸಂಸತ್ ಅನುಮೋದನೆ ನೀಡಿದೆ.

    ಕಳೆದ ಕೆಲ ವರ್ಷಗಳಿಂದ ಮ್ಯಾಚ್ ಫಿಕ್ಸಿಂಗ್ ಹಾಗೂ ಕ್ರೀಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಸಂಕಷ್ಟ ಎದುರಿಸಿದ್ದ ಶ್ರೀಲಂಕಾ ಕ್ರಿಕೆಟ್ ಬೋರ್ಡ್, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಯಮಗಳ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿತ್ತು. ಸದ್ಯ ಈ ಪ್ರಸ್ತಾವನೆಗಳನ್ನು ಸ್ವೀಕರಿಸಿರುವ ಸರ್ಕಾರ ಪಾರ್ಲಿಮೆಂಟ್‍ನಲ್ಲಿ ಮಸೂದೆಗೆ ಅನುಮೋದನೆ ನೀಡಿದೆ.

    ಹೊಸ ಕಾಯ್ದೆಯ ಅನ್ವಯ ಕ್ರೀಡಾ ಕಳ್ಳಾಟ, ಭ್ರಷ್ಟಾಚಾರ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿ ತನಿಖೆ ನಡೆಸುವುದು ಹಾಗೂ ಇಂತಹ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ನೀಡಲಾಗಿದೆ.

    ಶ್ರೀಲಂಕಾ ಕ್ರೀಡಾ ಸಚಿವ ಹರಿನ್ ಫರ್ನಾಂಡೋ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಿದರು. ಈ ಕಾಯ್ದೆಗೆ ಸಚಿವ, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಬೆಂಬಲ ನೀಡಿದ್ದರು. ಈ ಕಾಯ್ದೆಯನ್ನು ಜಾರಿ ಮಾಡಲು ಕ್ರೀಡಾ ಸಚಿವಾಲಯ ಐಸಿಸಿಯೊಂದಿಗೆ ಮಾತುಕತೆ ನಡೆಸಿತ್ತು. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಮಾತ್ರವಲ್ಲದೇ ಈ ಇದಕ್ಕೆ ನೆರವು ನೀಡುವ ವ್ಯಕ್ತಿಗಳಿಗೂ ಶಿಕ್ಷೆ ನೀಡಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡದ ಈಗಿನ ಆಟಗಾರರು ಮಾತ್ರವಲ್ಲದೇ ಮಾಜಿ ಆಟಗಾರರಿಗೂ ಈ ಕಾಯ್ದೆ ಅನ್ವಯವಾಗುತ್ತದೆ.

  • ಹುಟ್ಟು ಹಬ್ಬದಂದೇ ಟಿ-20ಯಲ್ಲಿ ಮೊದಲ ಶತಕ ಸಿಡಿಸಿದ ವಾರ್ನರ್

    ಹುಟ್ಟು ಹಬ್ಬದಂದೇ ಟಿ-20ಯಲ್ಲಿ ಮೊದಲ ಶತಕ ಸಿಡಿಸಿದ ವಾರ್ನರ್

    ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಮ್ಮ ಹುಟ್ಟು ಹಬ್ಬದಂದೇ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ್ದಾರೆ.

    ಅಡಿಲೇಡ್‍ನಲ್ಲಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಮಿಂಚಿದ್ದಾರೆ. ವಾರ್ನರ್ ಶ್ರೀಲಂಕಾ ವಿರುದ್ಧದ ಮೂರು ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿದರು. ಇನ್ನಿಂಗ್ಸ್ 56 ಎಸೆತಗಳನ್ನು ಎದುರಿಸಿದ ವಾರ್ನರ್ ಔಟಾಗದೆ 10 ಬೌಂಡರಿ, ನಾಲ್ಕು ಸಿಕ್ಸರ್ ಸೇರಿ 100 ಸಿಡಿಸಿದರು. ಇದನ್ನೂ ಓದಿ: ಟಿ-20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಲಂಕಾ ಬೌಲರ್

    ಬಾಲ್ ಟ್ಯಾಂಪರಿಂಗ್‍ನಿಂದ ನಿಷೇಧಕ್ಕೆ ಗುರಿಯಾಗಿದ್ದ ವಾರ್ನರ್ 20 ತಿಂಗಳ ನಂತರ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟಿ-20 ಪಂದ್ಯ ಆಡಿದರು. ಮೊದಲ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡಿ, ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. 2018ರ ಫೆಬ್ರವರಿ 21ರಂದು ನಡೆದ ಹಿಂದಿನ ಪಂದ್ಯದಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಅಂತರರಾಷ್ಟ್ರೀಯ ಟಿ-20 ಯಲ್ಲಿ ಇದು ವಾರ್ನರ್ ಅವರ ಮೊದಲ ಶತಕ. ಪ್ರಾಸಂಗಿಕವಾಗಿ ವಾರ್ನರ್ ತಮ್ಮ 33ನೇ ಹುಟ್ಟುಹಬ್ಬದಂದೆ ತಮ್ಮ ಮೊದಲ ಶತಕ ಸಿಡಿಸಿದರು. ಇದನ್ನೂ ಓದಿ: ಹಜಾರೆ ಟ್ರೋಫಿಯಲ್ಲಿ ಆರ್.ಅಶ್ವಿನ್ ಎಡವಟ್ಟು- ಮ್ಯಾಚ್ ರೆಫ್ರಿಯಿಂದ ದಂಡ

    ವಾರ್ನರ್ ಅವರ ಶತಕದ ಸಹಾಯದಿಂದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್‍ವೆಲ್ 28 ಎಸೆತಗಳಲ್ಲಿ 62 ರನ್ ಮತ್ತು ನಾಯಕ ಆರನ್ ಫಿಂಚ್ 36 ಎಸೆತಗಳಲ್ಲಿ 64 ರನ್ ಗಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀಲಂಕಾ ತಂಡವು 20 ಓವರ್‍ಗಳಲ್ಲಿ ಒಂಬತ್ತು ವಿಕೆಟ್‍ಗೆ 99 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ದಾಸುನ್ ಸನಾಕಾ 17 ರನ್ ಮತ್ತು ಕುಶಾಲ್ ಪೆರೆರಾ 16 ರನ್ ಗಳಿಸಿದರು. ಲೆಗ್ ಸ್ಪಿನ್ನರ್ ಆಡಮ್ ಜಂಪಾ ಆಸ್ಟ್ರೇಲಿಯಾ ಪರ ಮೂರು ವಿಕೆಟ್ ಪಡೆದರು.

    ಆಸ್ಟ್ರೇಲಿಯಾ ಪರ ಟಿ-20 ಯಲ್ಲಿ ಶತಕ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಡೇವಿಡ್ ವಾರ್ನರ್ ಪಾತ್ರರಾದರು. ಇದಕ್ಕೂ ಮೊದಲು, ಗ್ಲೆನ್ ಮ್ಯಾಕ್ಸ್‌ವೆಲ್ 3 ಶತಕಗಳು, ಆರನ್ ಫಿಂಚ್ 2 ಶತಕಗಳು ಮತ್ತು ಶೇನ್ ವ್ಯಾಟ್ಸನ್ ಒಂದು ಶತಕ ಸಿಡಿಸಿದ್ದಾರೆ. ಫಿಂಚ್ ಜೊತೆ ಪವರ್‌ಪ್ಲೇನಲ್ಲಿ ವಾರ್ನರ್ 57 ರನ್ ಗಳಿಸಿದರು. ಇಬ್ಬರೂ ಮೊದಲ ವಿಕೆಟ್‍ಗೆ 122 ರನ್‍ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರ ನಂತರ ಮ್ಯಾಕ್ಸ್‍ವೆಲ್ ಮತ್ತು ವಾರ್ನರ್ ಎರಡನೇ ವಿಕೆಟ್‍ಗೆ 107 ರನ್‍ಗಳ ಜೊತೆಯಾಟ ಆಡಿದರು.

    ವಾರ್ನರ್ ಕಳೆದ ವರ್ಷ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್‍ನಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ವಾರ್ನರ್ ಹಾಗೂ ಸ್ಟೀವ್ ಸ್ಮಿತ್‍ಗೆ ಒಂದು ವರ್ಷ ಹಾಗೂ ಕ್ಯಾಮರೂನ್ ಬೆನ್‍ಕ್ರಾಫ್ಟ್ ಮೇಲೆ 10 ತಿಂಗಳ ನಿಷೇಧ ಹೇರಲಾಗಿತ್ತು. ಜೊತೆಗೆ ಬೆನ್‍ಕ್ರಾಫ್ಟ್ ಗೆ ಶಿಕ್ಷೆ ವಿಧಿಸಲಾಗಿತ್ತು. ವಾರ್ನರ್ 2019ರ ವಿಶ್ವಕಪ್ ಟೂರ್ನಿ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದರು. ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್ 647 ರನ್ ದಾಖಲಿಸಿದ್ದರು. ಅದರ ನಂತರ ಅವರು ಆಶಸ್ ಸರಣಿಯಲ್ಲಿ ಫ್ಲಾಪ್ ಆಗಿದ್ದರು. ಐದು ಪಂದ್ಯಗಳಲ್ಲಿ ಕೇವಲ 95 ರನ್ ಗಳಿಸಿದ್ದರು.

  • ಟಿ-20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಲಂಕಾ ಬೌಲರ್

    ಟಿ-20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಲಂಕಾ ಬೌಲರ್

    ಸಿಡ್ನಿ: ಶ್ರೀಲಂಕಾದ ವೇಗದ ಬೌಲರ್ ಕಸುನ್ ರಾಜಿತಾ ಅವರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡುವ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಅವರ ಶತಕದ ಸಹಾಯದಿಂದ ಒಟ್ಟು 233 ರನ್ ಗಳಿಸಿತು. ಈ ಇನ್ನಿಂಗ್ಸ್ ನಲ್ಲಿ ಲಂಕಾ ಬೌಲರ್ ಗಳ ಬೆವರಿಳಿಸಿದ ಆಸ್ಟ್ರೇಲಿಯಾ ದಾಂಡಿಗರು, ಕಸುನ್ ರಾಜಿತಾ ಅವರಿಗೆ ಒಟ್ಟು 4 ಓವರ್ ಗಳಲ್ಲಿ ಬರೋಬ್ಬರಿ 75 ರನ್ ಚಚ್ಚಿದರು.

    ಕಸುನ್ ರಾಜಿತಾ ಅವರು ಮಾಡಿದ ನಾಲ್ಕು ಓವರ್ ಗಳನ್ನು ಸರಿಯಾಗಿ ಉಪಯೋಗಿಸಿಕೊಂಡ ಆಸ್ಟ್ರೇಲಿಯಾ ಬ್ಯಾಟ್ಸ್ ಮ್ಯಾನ್‍ಗಳು, ರಾಜಿತಾ ಅವರು ಎಸೆದ 24 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಮೇತ ಒಟ್ಟು 75 ರನ್ ಬಾರಿಸಿದರು. ಇದಕ್ಕು ಮುನ್ನಾ ಟರ್ಕಿ ಬೌಲರ್ ತುನಾಹನ್ ತಹರ್ ಅವರು ಒಂದು ಟಿ-20 ಪಂದ್ಯದಲ್ಲಿ 70 ರನ್ ನೀಡಿ ದುಬಾರಿ ಬೌಲರ್ ಆಗಿದ್ದರು. ಆದರೆ ಈಗ ಈ ದಾಖಲೆಯನ್ನು ರಾಜಿತಾ ಅವರು ತಳ್ಳಿ ಹಾಕಿದ್ದಾರೆ.

    ಇಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ 56 ಎಸೆತದಲ್ಲಿ 100 (10 ಬೌಂಡರಿ 4 ಸಿಕ್ಸರ್ ), ನಾಯಕ ಆರೋನ್ ಪಿಂಚ್ 36 ಎಸೆತದಲ್ಲಿ 66 (8 ಬೌಂಡರಿ, 3 ಸಿಕ್ಸರ್) ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 28 ಎಸೆತದಲ್ಲಿ 62 (7 ಬೌಂಡರಿ, 3 ಸಿಕ್ಸರ್) ಸಹಾಯದಿಂದ ಎರಡು ವಿಕೆಟ್ ನಷ್ಟಕ್ಕೆ 233 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು.

    ಈ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲರಾದ ಲಂಕಾ ಬ್ಯಾಟ್ಸ್ ಮ್ಯಾನ್‍ಗಳು ಆಡಮ್ ಜಂಪಾ ಮತ್ತು ಮಿಚಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 99 ರನ್‍ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ 134 ರನ್‍ಗಳ ಬೃಹತ್ ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಶತಕ ಸಿಡಿಸಿ ಮಿಂಚಿದ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

  • ಮೈದಾನದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

    ಮೈದಾನದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

    ಕ್ಯಾನ್ಬೆರಾ: ಆಸ್ಟ್ರೇಲಿಯಾದ ಓವಲ್ ಕ್ರಿಕೆಟ್ ಮೈದಾನದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಅಭ್ಯಾಸದ ಪಂದ್ಯದ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಕ್ರಿಕೆಟ್ ಆಟಗಾರರಿಗೆ ನೀರು ಹಾಗೂ ಪಾನೀಯ ವಿತರಿಸುವ ಮೂಲಕ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ್ದಾರೆ.

    ಆಸ್ಟ್ರೇಲಿಯಾ ಪ್ರಧಾನಿಗಳ ಇಲೆವನ್ ತಂಡ ಹಾಗೂ ಶ್ರೀಲಂಕಾ ನಡುವಿನ ಅಭ್ಯಾಸದ ಪಂದ್ಯದ ಸಂದರ್ಭದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕಾರ್ಯನಿರ್ವಹಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

    ಮಾರಿಸನ್ ಪ್ರಧಾನಿಯಾಗಿದ್ದರೂ ಸಹ ತನ್ನ ತಂಡದ ಆಟಗಾರರಿಗೆ ನೀರು ಹಾಗೂ ಪಾನೀಯವನ್ನು ಹೊತ್ತೊಯ್ದಿದ್ದು ಕಂಡು ಬಂತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಪ್ರಧಾನಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

    ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‍ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ ಕೇವಲ 130 ರನ್ ಗಳಿಸಲು ಶಕ್ತವಾಯಿತು. ಆರಂಭಿಕ ಆಟಗಾರ ಹ್ಯಾರಿ ನೀಲ್ಸನ್ 50 ಎಸೆತಗಳಲ್ಲಿ 79 ರನ್ ಗಳಿಸಿದರು. ಆದರೆ ವಿಕೆಟ್‍ಗಳು ಬೇಗನೇ ಉರುಳಿದ್ದರಿಂದ 9 ವಿಕೆಟ್‍ಗಳನ್ನು ಕಳೆದುಕೊಂಡಿತು. ಕೊನೆಗೆ 19.5 ಓವರ್ ನಲ್ಲಿ 132 ರನ್ ಗಳಿಸಿ ಗೆಲುವು ದಾಖಲಿಸಿತು.

  • ಒಂದ್ಕಡೆ ಜನರಿಲ್ಲ, ಇನ್ನೊಂದ್ಕಡೆ ಸ್ಟೇಡಿಯಂನಲ್ಲಿ ಲೈಟೇ ಇಲ್ಲ- ನಗೆಪಾಟಲಿಗೀಡಾದ ಪಾಕ್

    ಒಂದ್ಕಡೆ ಜನರಿಲ್ಲ, ಇನ್ನೊಂದ್ಕಡೆ ಸ್ಟೇಡಿಯಂನಲ್ಲಿ ಲೈಟೇ ಇಲ್ಲ- ನಗೆಪಾಟಲಿಗೀಡಾದ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯಲ್ಲಿ 10 ವರ್ಷದ ಬಳಿಕ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಒಂದೆಡೆ ಪಂದ್ಯ ವೀಕ್ಷಣೆಗೆ ಜನರಿರಲಿಲ್ಲ, ಇನ್ನೊಂದೆಡೆ ಕ್ರೀಡಾಂಗಣದಲ್ಲಿದ್ದ ಲೈಟ್ಸ್ ಗಳು ಕೂಡ ಕೈಕೊಟ್ಟ ಕಾರಣ ಪಾಕಿಸ್ತಾನ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

    ಹೌದು, ಭದ್ರತಾ ಕಳವಳದ ನಡುವೆ ಕ್ರಿಕೆಟ್ ಆಯೋಜಿಸುವ ಮೂಲಕ ವಿಶ್ವಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಪಾಕಿಸ್ತಾನ ಹೊರಟಿದೆ. ಆದರೆ ಪಾಕಿಸ್ತಾನದ ಮೊದಲ ಪ್ರಯತ್ನಕ್ಕೆ ಭಾರೀ ಹಿನ್ನಡೆ ಎದುರಾಗಿದೆ. ಕರಾಚಿಯಲ್ಲಿ ಸೋಮವಾರ ನಡೆದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯವನ್ನು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜನರಿಲ್ಲದೆ ಸ್ಟೇಡಿಯಂ ಬಿಕೋ ಎನ್ನುತ್ತಿತ್ತು. ಅಷ್ಟೇ ಅಲ್ಲದೆ ಹೊನಲು ಬೆಳಕಿನ ಪಂದ್ಯದ ನಡುವೆ ಎರಡನೇ ಬಾರಿ ಕ್ರೀಡಾಂಗಣದ ಫ್ಲಡ್‍ಲೈಟ್ಸ್ ಆಫ್ ಆಗಿ ಪಂದ್ಯಕ್ಕೆ ಅಡಚಣೆ ಉಂಟಾಯಿತು.

    ಈ ಕಾರಣಗಳಿಗೆ ಈಗ ಪಾಕಿಸ್ತಾನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಬಹುವರ್ಷದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಪಾಕಿಸ್ತಾನದ ಮೇಲೆ ಅಲ್ಲಿನ ಪ್ರಜೆಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಪಾಕಿಸ್ತಾನ ಚೆನ್ನಾಗಿ ಪಂದ್ಯ ನಡೆಸಿ ಯಶಸ್ವಿಯಾಗಿ ಟೀಕೆಗಳಿಗೆ ಬ್ರೇಕ್ ಹಾಕುತ್ತೆ ಎಂದುಕೊಂಡಿದ್ದರು. ಆದರೆ ಕ್ರೀಡಾಂಗಣ ನಿರ್ವಹಣಾ ಮಂಡಳಿ ನಿರ್ಲಕ್ಷ್ಯ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಲಕ್ಷ್ಯ ಹಾಗೂ ಸರಿಯಾಗಿ ವಿದ್ಯುತ್ ಪಾವತಿಸದ ಕಾರಣಕ್ಕೆ ಈ ಲೈಟ್ಸ್ ಗಳು ಆಫ್ ಆಗಿದೆ. ಸರಿಯಾಗಿ ಕೆಲಸ ಮಾಡದೇ ದೇಶದ ಮರ್ಯಾದೆ ಕಳೆಯುತ್ತಿದ್ದೀರ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ.

    ಹಾಗೆಯೇ ಪಂದ್ಯದ ಮಧ್ಯೆ ಫ್ಲಡ್‍ಲೈಟ್ಸ್ ಕೈಕೊಟ್ಟ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಪಾಕಿಸ್ತಾನವನ್ನು ಟ್ರೋಲ್ ಆಗುತ್ತಿದೆ. ಬೇರೆ ದೇಶದ ಆಂತರಿಕ ವಿಚಾರದಲ್ಲಿ ಮೂಗುತೂರಿಸುವ ಬದಲು ನಿಮ್ಮ ದೇಶದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಿ ಎಂದು ನೆಟ್ಟಿಗರು ಪಾಕಿಸ್ತಾನವನ್ನು ಗೇಲಿ ಮಾಡುತ್ತಿದ್ದಾರೆ. ಮೊದಲು ವಿದ್ಯುತ್ ಬಿಲ್ ಕಟ್ಟಿ ಆಮೇಲೆ ಪಂದ್ಯ ಆಯೋಜಿಸಿ ಎಂದು ಟೀಕಿಸುತ್ತಿದ್ದಾರೆ. ನೀವು ಓಡಿಐ ಆಯೋಜಿಸಿಲ್ಲ, ಗಲ್ಲಿ ಕ್ರಿಕೆಟ್ ಆಡಿಸುತ್ತಿದ್ದೀರ ಎಂದು ಕಾಲೆಳೆದಿದ್ದಾರೆ.

    ಹಾಗೆಯೇ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಶ್ರೀಲಂಕಾ ನಿರ್ಧರಿಸಿ, ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಿಗೆ ಹೊಸ ನಾಯಕರುಗಳನ್ನೇ ಹೆಸರಿಸಿತ್ತು. ಜೊತೆಗೆ ಮೈದಾನಕ್ಕೆ ತೆರಳುವಾಗ, ಆಟಗಾರರು ತಂಗುವ ಹೋಟೆಲ್ ಕೊಠಡಿ ಸೇರಿದಂತೆ ಕರಾಚಿ ನಗರದ್ಯಾಂತ ಶ್ರೀಲಂಕಾ ತಂಡಕ್ಕೆ ಬಿಗಿ ಭದ್ರತೆಯನ್ನು ನೀಡಲಾಗುತ್ತಿದೆ.

    ಈ ಮೊದಲು ಕರಾಚಿಯಲ್ಲಿ ನಡೆಯಬೇಕಾಗಿದ್ದ ಪ್ರಥಮ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. 2009ರಲ್ಲಿ ಲಾಹೋರ್ ನಲ್ಲಿ ಶ್ರೀಲಂಕಾದ ಬಸ್ ಮೇಲೆ ದಾಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಕರಾಚಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.

    ಸದ್ಯ ಸೋಮವಾರದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ 67 ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಪಾಕಿಸ್ತಾನ 305 ರನ್ ಗಳಿಸಿದ್ದರೆ, ಶ್ರೀಲಂಕಾ 238 ರನ್‍ಗೆ  ಸರ್ವಪತನಗೊಂಡು ಸೋಲನ್ನು ಒಪ್ಪಿಕೊಂಡಿತು.

    ಹೀಗಾಗಿ ಶ್ರೀಲಂಕಾ ಪಂದ್ಯದಲ್ಲಿ ಸೋಲಲು ಕ್ರೀಡಾಂಗಣದ ಲೈಟ್ಸ್ ಆಫ್ ಆಗಿ ಅಡಚಣೆಯಾಗಿದ್ದೇ ಕಾರಣ. ಇಲ್ಲದಿದ್ದರೆ ಶೆಹನ್ ಜಯಸೂರ್ಯ 96 ರನ್‍ಗಳ ಬದಲು ಶತಕ ಬಾರಿಸುತ್ತಿದ್ದರು ಎಂದು ಶ್ರೀಲಂಕಾ ಅಭಿಮಾನಿಗಳು ಪಾಕ್ ವಿರುದ್ಧ ಕಿಡಿಕಾರಿದ್ದಾರೆ.