ಕೊಲಂಬೊ: 2023ರ ಏಕದಿನ ಏಷ್ಯಾಕಪ್ (Asia Cup 2023) ಟೂರ್ನಿ ನಿರ್ಣಾಯಕ ಹಂತಕ್ಕೆ ತಲುಪಿದೆ. ಇಂದಿನ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಬಿಡುವು ನೀಡಿದ್ದು ತಡವಾಗಿದ್ದರಿಂದ ಓವರ್ ಕಡಿತಗೊಳಿಸಲಾಗಿದೆ.
ಮಳೆಯಿಂದ (Rain) ಮೈದಾನವನ್ನು ಒಣಗಿಸುವ ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಪಂದ್ಯವನ್ನು 45 ಓವರ್ಗಳಿಗೆ ಸೀಮಿತಗೊಳಿಸಲಾಗಿದೆ. ಇತ್ತಂಡಗಳಿಗೂ ತಲಾ 45 ಓವರ್ ನಿಗದಿಪಡಿಸಲಾಗಿದ್ದು, 9 ಓವರ್ಗೆ ಪವರ್ ಪ್ಲೇ ಮುಕ್ತಾಯವಾಗಲಿದೆ. ಮಳೆಯ ಕಾಟ ಮುಂದುವರಿದರೆ, ಮತ್ತಷ್ಟು ಓವರ್ ಕಡಿತಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತದೆ. ಒಂದು ವೇಳೆ ಪಂದ್ಯ ರದ್ದಾದರೆ ರನ್ರೇಟ್ ಮೇಲೆ ಫೈನಲ್ಗೆ ತಂಡವನ್ನ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಪಂದ್ಯ ರದ್ದಾದರೆ ಮುಂದೇನು?
ಒಂದು ವೇಳೆ ಮಳೆ ಕಾಟ ಮುಂದುವರಿದು ಪಂದ್ಯ ರದ್ದಾದ್ರೆ ಶ್ರೀಲಂಕಾ (SriLanka) ಫೈನಲ್ ಪ್ರವೇಶಿಸಲಿದೆ. ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ಸೂಪರ್-4 ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿತ್ತು. ಹೀಗಾಗಿ 2ನೇ ದಿನ ಆಟ ಮುಂದುವರಿದ ಪರಿಣಾಮ ಭಾರತ ಪಾಕ್ ವಿರುದ್ಧ 228 ರನ್ಗಳ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ. ಸೂಪರ್-4ನಲ್ಲಿ ಆಡಿದ ಎರಡು ಪಂದ್ಯಗಳನ್ನೂ ಗೆದ್ದಿರುವ ಭಾರತ 4 ಅಂಕದೊಂದಿಗೆ 2.690 ನೆಟ್ ರನ್ ರೇಟ್ನೊಂದಿಗೆ ಈಗಾಗಲೇ ಫೈನಲ್ ಪ್ರವೇಶ ಮಾಡಿದೆ. ಇದನ್ನೂ ಓದಿ: Asia Cup 2023ː ಬಿಗಿ ಬೌಲಿಂಗ್ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್ಗಳ ಭರ್ಜರಿ ಜಯ
ಶ್ರೀಲಂಕಾ ಎರಡು ಪಂದ್ಯಗಳಿಂದ 2 ಅಂಕ ಸಂಪಾದಿಸಿದೆ -0.200 ನೆಟ್ ರನ್ ರೇಟ್ ಹೊಂದಿದ್ದರೆ ಪಾಕಿಸ್ತಾನ 2 ಪಂದ್ಯಗಳಿಂದ 2 ಅಂಕ ಸಂಪಾದಿಸಿ -1.892 ನೆಟ್ ರನ್ ರೇಟ್ನೊಂದಿಗೆ 3ನೇ ಸ್ಥಾನ ಪಡೆದಿದೆ. ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಮಳೆಯಿಂದಾಗಿ ಪಂದ್ಯ ರದ್ದಾದರೆ, ಶ್ರೀಲಂಕಾ ತಂಡ ಸುಲಭವಾಗಿ ಫೈನಲ್ ಪ್ರವೇಶ ಮಾಡಲಿದೆ.
ಕೊಲಂಬೋ: ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup Cricket) ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾ (Srilanka) ನಡುವಿನ ಪಂದ್ಯಕ್ಕೂ ಮಳೆ (Rain) ಸುರಿಯುವ ಸಾಧ್ಯತೆಯಿದೆ. ಒಂದು ವೇಳೆ ಮಳೆ ಸುರಿದು ಪಂದ್ಯ ರದ್ದಾದ್ರೆ ಶ್ರೀಲಂಕಾ ಫೈನಲ್ ಪ್ರವೇಶಲಿದೆ.
ಹೌದು. ಈ ಮೊದಲು ಭಾರತ (India) ಮತ್ತು ಪಾಕಿಸ್ತಾನದ ಸೂಪರ್ 4 ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿತ್ತು. ಹೀಗಾಗಿ ಎರಡನೇ ದಿನ ಆಟ ಮುಂದುವರಿದ ಪರಿಣಾಮ ಭಾರತ ಪಾಕ್ ವಿರುದ್ಧ 228 ರನ್ಗಳ ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ನಿಗದಿಯಾಗಿಲ್ಲ.
ಮೀಸಲು ದಿನ ನಿಗದಿಯಾಗದ ಕಾರಣ ನೆಟ್ ರನ್ರೇಟ್ ಆಧಾರದಲ್ಲಿ ಶ್ರೀಲಂಕಾ ಫೈನಲ್ ಪ್ರವೇಶಿಸಲಿದೆ. ಏಷ್ಯಾ ಕಪ್ ಫೈನಲ್ನಲ್ಲಿ ಇಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನ ಆಡಿಲ್ಲ. ಇಂದು ಒಂದು ವೇಳೆ ಪಾಕ್ ಜಯಗಳಿಸಿದರೆ ಸೆ.17ರಭಾನುವಾರ ಕೊಲಂಬೋದಲ್ಲಿ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೇವಲ 10 ರನ್ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್ಮ್ಯಾನ್
ನೆಟ್ ರನ್ ರೇಟ್ ಎಷ್ಟಿದೆ?
ಆಡಿದ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ 4 ಅಂಕದೊಂದಿಗೆ 2.690 ನೆಟ್ ರನ್ ರೇಟ್ನೊಂದಿಗೆ ಈಗಾಗಲೇ ಫೈನಲ್ ಪ್ರವೇಶ ಮಾಡಿದೆ. ಶ್ರೀಲಂಕಾ ಎರಡು ಪಂದ್ಯಗಳಿಂದ 2 ಅಂಕ ಸಂಪಾದಿಸಿದೆ -0.200 ನೆಟ್ ರನ್ ರೇಟ್ ಹೊಂದಿದ್ದರೆ ಪಾಕಿಸ್ತಾನ 2 ಪಂದ್ಯಗಳಿಂದ 2 ಅಂಕ ಸಂಪಾದಿಸಿ -1.892 ನೆಟ್ ರನ್ ರೇಟ್ನೊಂದಿಗೆ ಮೂರನೇ ಸ್ಥಾನ ಪಡೆದಿದೆ.
ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಶ್ರೀಲಂಕಾ ಸುಲಭವಾಗಿ ಫೈನಲ್ ಪ್ರವೇಶ ಮಾಡಲಿದೆ. ಆಡಿರುವ ಎರಡು ಪಂದ್ಯಗಳನ್ನು ಸೋತಿರುವ ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ.
ಲಾಹೋರ್: ಏಷ್ಯಾ ಕಪ್ ಕ್ರಿಕೆಟ್ (Asia Cup Cricket) ಸೂಪರ್ 4 ಪ್ರವೇಶಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ (Afghanistan) ವಿರೋಚಿತ ಸೋಲನ್ನು ಅನುಭವಿಸಿದ್ದು, ಶ್ರೀಲಂಕಾ (Sri Lanka) 2 ರನ್ಗಳ ಜಯ ಸಾಧಿಸುವ ಮೂಲಕ ಸೂಪರ್ 4 ಪ್ರವೇಶ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು. ಈ ಮೊತ್ತ ಸವಾಲಿನ ಮೊತ್ತವಾಗಿದ್ದರೂ ಅಫ್ಘಾನಿಸ್ತಾನಕ್ಕೆ ಮತ್ತೊಂದು ಸವಾಲು ಇತ್ತು.
ಬಾಂಗ್ಲಾದೇಶದ (Bangladesh) ವಿರುದ್ಧ ಪಂದ್ಯ ಸೋತಿದ್ದರಿಂದ ನೆಟ್ ರನ್ ರೇಟ್ ಬಹಳ ಕಡಿಮೆ ಇತ್ತು. ಹೀಗಾಗಿ 37 ಓವರ್ನಲ್ಲಿ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ಇತ್ತು. ಈ ಕಾರಣಕ್ಕೆ ಕೊನೆಯವರೆಗೆ ಹೋರಾಡಿದ ಅಫ್ಘಾನಿಸ್ತಾನ 37.4 ಓವರ್ಗಳಲ್ಲಿ 289 ರನ್ಗಳಿಸಿ ಆಲೌಟ್ ಆಗಿ ಟೂರ್ನಿಯಿಂದ ಹೊರ ಬಿತ್ತು.
ಆರಂಭದಲ್ಲೇ ಅಫ್ಘಾನಿಸ್ತಾನ ವಿಕೆಟ್ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 59 ರನ್(66 ಎಸೆತ, 3 ಬೌಂಡರಿ, 1 ಸಿಕ್ಸರ್) ರಹ್ಮತ್ ಶಾ 45 ರನ್ (40 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ಚೇತರಿಕೆ ನೀಡಿದರು. ಇದನ್ನೂ ಓದಿ: ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ
ನಂತರ ಬಂದ ಮೊಹಮ್ಮದ್ ನಬಿ ಬಿರುಸಿನ ಬ್ಯಾಟ್ ಬೀಸಿದರು. ಕೇವಲ 32 ಎಸೆತಗಳಲ್ಲಿ 65 ರನ್(6 ಬೌಂಡರಿ, 5 ಸಿಕ್ಸರ್ ) ಸಿಡಿಸಿ ಪಂದ್ಯವನ್ನು ರೋಚಕ ಘಟ್ಟದತ್ತ ತಂದು ನಿಲ್ಲಿಸಿದರು. ಕೊನೆಯಲ್ಲಿ ನಜಿಬುಲ್ಲಾ ಮತ್ತು ರಷೀದ್ ಖಾನ್ ಗೆಲುವಿನ ದಡದತ್ತ ತಂದಿದ್ದರು. ಇವರಿಬ್ಬರು 23 ಎಸೆತಗಳಲ್ಲಿ 39 ರನ್ ಜೊತೆಯಾಟವಾಡಿದರು. ಇನ್ನೇನು ಅಫ್ಘಾನ್ಗೆ ಗೆಲುವು ಸಿಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾಗ ನಜಿಬುಲ್ಲಾ 23 ರನ್( 15 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಹೀಗಿದ್ದರೂ ರಶೀದ್ ಖಾನ್ ಇನ್ನೊಂದು ಕಡೆಯಲ್ಲಿ ನಿಂತು ಅಬ್ಬರಿಸುತ್ತಿದ್ದರು. ಆದರೆ 37.1ನೇ ಓವರಿಗೆ ಮುಜೀಬ್ ಮತ್ತು 37.4ನೇ ಎಸೆತಕ್ಕೆ ಫಾರೂಕಿ ಔಟಾಗುವುದರೊಂದಿಗೆ ಅಫ್ಘಾನಿಸ್ತಾನ ಏಷ್ಯಾ ಕಪ್ನಿಂದ ನಿರ್ಗಮಿಸಿತು.
ರಶೀದ್ ಖಾನ್ ಔಟಾಗದೇ 27 ರನ್(16 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದರು. ರಶೀದ್ ಖಾನ್ ನಾನ್ ಸ್ಟ್ರೈಕ್ನಲ್ಲಿ ಇದ್ದ ಕಾರಣ 37ನೇ ಓವರ್ನಲ್ಲಿ ಸ್ಟ್ರೈಕ್ ಸಿಕ್ಕಿರಲಿಲ್ಲ. 37ನೇ ಓವರ್ನಲ್ಲಿ ಪಂದ್ಯ ಮುಗಿಸದೇ ಇದ್ದರೂ 37.4 ಓವರ್ನಲ್ಲಿ ಸಿಕ್ಸ್ ಚಚ್ಚಿ 295 ರನ್ ಗಳಿಸಿದ್ದರೆ ಅಫ್ಘಾನಿಸ್ತಾನ ಸೂಪರ್ 4 ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಧನಂಜಯ ಡಿಸಿಲ್ವಾ ಬಿಗಿಯಾದ ಬೌಲಿಂಗ್ನಿಂದಾಗಿ ಲಂಕಾ 2 ರನ್ಗಳ ಜಯ ಸಾಧಿಸುವುದರೊಂದಿಗೆ ಸೂಪರ್ 4 ಪ್ರವೇಶಿಸಿದೆ.
ಇದಕ್ಕೂ ಮೊದಲು ಬ್ಯಾಟ್ ಬೀಸಿದ ಲಂಕಾ ಪರವಾಗಿ ಕುಸಾಲ್ ಮೆಂಡಿಸ್ 92 ರನ್( 84 ಎಸೆತ, 6 ಬೌಂಡರಿ, 3 ಸಿಕ್ಸರ್), ಪಾತುಮ್ ನಿಸ್ಸಾಂಕ 41 ರನ್, ಮಹೇಶ್ ತೀಕ್ಷಣ 28 ರನ್, ದುನಿತ್ ವೆಲ್ಲಲಾಗೆ 36 ರನ್ ಹೊಡೆದರು.
ಅಫ್ಘಾನಿಸ್ತಾನ ಸೋತರೂ ಕ್ರಿಕೆಟ್ ಇತಿಹಾಸದಲ್ಲಿ ರೋಚಕ ಹೋರಾಟ ನಡೆಸಿದ ಪಂದ್ಯಗಳ ಸಾಲಿಗೆ ಈ ಪಂದ್ಯ ಸೇರ್ಪಡೆಯಾಗಿದೆ. ಕ್ರಿಕೆಟ್ ಅಭಿಮಾನಿಗಳು ಅಫ್ಘಾನ್ ಆಟಗಾರರ ಕೆಚ್ಚೆದೆಯ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪಲ್ಲೆಕೆಲೆ: ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಅಜೇಯ ಅರ್ಧಶತಕದ ಆಟದಿಂದ ಏಷ್ಯಾ ಕಪ್ ಕ್ರಿಕೆಟ್ (Asia Cup Cricket) ಟೂರ್ನಿಯಲ್ಲಿ ನೇಪಾಳ (Nepal) ವಿರುದ್ಧ ಟೀಂ ಇಂಡಿಯಾ (Team India) 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಸೂಪರ್ 4 ಪ್ರವೇಶಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ನೇಪಾಳ 48.2 ಓವರ್ನಲ್ಲಿ 230 ರನ್ಗಳಿಗೆ ಆಲೌಟ್ ಆಯ್ತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ 2.1 ಓವರ್ಗಳಲ್ಲಿ 17 ರನ್ ಗಳಿಸಿದ್ದಾಗ ಜೋರಾಗಿ ಮಳೆ (Rain) ಸುರಿಯಿತು.
ಮಳೆ ನಿಂತ ಮೇಲೆ ಭಾರತಕ್ಕೆ ಡಕ್ವರ್ಥ್ಲೂಯಿಸ್ ನಿಯಮದ ಅನ್ವಯ 23 ಓವರ್ಗಳಲ್ಲಿ 145 ರನ್ ಗುರಿ ನೀಡಲಾಯಿತು. ಸುಲಭದ ಗುರಿಯನ್ನು ಬೆನ್ನತ್ತಿದ ಭಾರತ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (Rohith Sharma) ಮತ್ತು ಶುಭಮನ್ ಗಿಲ್ (Shubman Gill) ಶತಕದ ಜೊತೆಯಾಟವಾಡಿದ ಪರಿಣಾಮ 20.1 ಓವರ್ನಲ್ಲಿ 147 ನ್ ಹೊಡೆದು ಜಯಗಳಿಸಿತು. ರೋಹಿತ್ ಶರ್ಮಾ ಔಟಾಗದೇ 74 ರನ್(59 ಎಸೆತ, 6 ಬೌಂಡರಿ, 5 ಸಿಕ್ಸರ್), ಶುಭಮನ್ ಗಿಲ್ ಔಟಾಗದೇ 67 ರನ್(62 ಎಸೆತ, 8 ಬೌಂಡರಿ, 1 ಸಿಕ್ಸ್) ಹೊಡೆದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ನೇಪಾಳ ಪರ ಆರಂಭಿಕ ಆಟಗಾರರಾದ ಕುಶಾಲ್ ಭುರ್ಟೆಲ್ 38 ರನ್(25 ಎಸೆತ, 3 ಬೌಂಡರಿ, 2 ಸಿಕ್ಸ್), ಅಸೀಫ್ ಶೇಕ್ 58 ರನ್(97 ಎಸೆತ, 8 ಬೌಂಡರಿ) ಹೊಡೆದರೆ ಸೋಂಪಾಲ್ ಕಾಮಿ 48 ರನ್( 56 ಎಸೆತ, 1 ಬೌಂಡರಿ, 2 ಸಿಕ್ಸರ್) ಚಚ್ಚಿ ಔಟಾದರು. ಇದನ್ನೂ ಓದಿ: ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ
ಮೊಹಮ್ಮದ್ ಸಿರಾಜ್ ಮತ್ತು ಜಡೇಜಾ ತಲಾ 3 ವಿಕೆಟ್ ಕಿತ್ತರೆ, ಶಮಿ, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.
ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಸೂಪರ್ 4 ಹಂತವನ್ನು ಪ್ರವೇಶಿಸಿದೆ. ಎರಡೂ ಪಂದ್ಯವನ್ನು ಸೋತ ನೇಪಾಳ ಟೂರ್ನಿಯಿಂದ ಹೊರ ಬಿದ್ದಿದೆ.
ಬಿ ಗುಂಪಿನಲ್ಲಿ ಎರಡು ಪಂದ್ಯಗಳಿಂದ ಬಾಂಗ್ಲಾದೇಶ 2 ಅಂಕ ಸಂಪಾದಿಸಿದ್ದರೆ ಶ್ರೀಲಂಕಾ 1 ಪಂದ್ಯದಿಂದ 2 ಅಂಕ ಸಂಪಾದಿಸಿದೆ. ಅಫ್ಘಾನಿಸ್ತಾನ ತಾನು ಆಡಿದ ಒಂದು ಪಂದ್ಯವನ್ನು ಸೋತಿದೆ.
ಡಬ್ಲಿನ್: ಐರ್ಲೆಂಡ್ (Ireland) ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ (Team India) 33 ರನ್ಗಳಿಂದ ಜಯಗಳಿಸುವ ಮೂಲಕ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.
ಗೆಲ್ಲಲು 186 ರನ್ಗಳ ಗುರಿಯನ್ನು ಪಡೆದ ಐರ್ಲೆಂಡ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ತಮ್ಮ ಮೊದಲ ನಾಯಕತ್ವದಲ್ಲಿ ಬುಮ್ರಾ ವಿದೇಶಿ ನೆಲದಲ್ಲಿ ಸರಣಿ ಗೆದ್ದಿದ್ದಾರೆ.
ಐರ್ಲೆಂಡ್ 63 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಾಗ ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 5ನೇ ವಿಕೆಟಿಗೆ ಆಂಡಿ ಬಾಲ್ಬಿರ್ನಿ ಮತ್ತು ಜಾರ್ಜ್ ಡಾಕ್ರೆಲ್ 30 ಎಸೆತಗಳಲ್ಲಿ 52 ರನ್ ಜೊತೆಯಾಟವಾಡಿ ಬಿಸಿ ಮುಟ್ಟಿಸಿದರು.
ತಂಡದ ಮೊತ್ತ 115 ರನ್ ಆಗಿದ್ದಾಗ ಜಾರ್ಜ್ ಡಾಕ್ರೆಲ್ ಎರಡನೇ ರನ್ ಓಡಲು ಯತ್ನಿಸಿದಾಗ ರನೌಟ್ ಆದರು. ಜಾರ್ಜ್ ಡಾಕ್ರೆಲ್ 13 ರನ್ ಗಳಿಸಿ ಔಟಾದರು. ಕೇವಲ 39 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಆಂಡಿ ಬಾಲ್ಬಿರ್ನಿ 72 ರನ್ (51 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ಔಟಾದರು. ಇವರಿಬ್ಬರು ಔಟಾದ ಬೆನ್ನಲ್ಲೇ ತಂಡದ ರನ್ ವೇಗ ಇಳಿಕೆಯಾಯಿತು. ಬುಮ್ರಾ, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರೆ ಅರ್ಶ್ದೀಪ್ ಸಿಂಗ್ 1 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 34 ರನ್ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟಿಗೆ ಸಂಜು ಸ್ಯಾಮ್ಸನ್ (Sanju Samson) ಮತ್ತು ಋತ್ರಾಜ್ ಗಾಯಕ್ವಾಡ್ (Ruturaj Gaikwad ) 49 ಎಸೆತಗಳಿಗೆ 71 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಸ್ಯಾಮ್ಸನ್ 40 ರನ್ (26 ಎಸೆತ, 5 ಬೌಂಡರಿ, 1 ಸಿಕ್ಸರ್), ಗಾಯಕ್ವಾಡ್ 58 ರನ್ (43 ಎಸೆತ, 6 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು. ನಂತರ ಶಿವಂ ದುಬೆ ಮತ್ತು ರಿಂಕು ಸಿಂಗ್ (Rinku Singh) 5ನೇ ವಿಕೆಟಿಗೆ 28 ಎಸೆತಗಳಲ್ಲಿ 55 ರನ್ ಜೊತೆಯಾಟವಾಡಿದರು. ರಿಂಕು ಸಿಂಗ್ 38 ರನ್ (21 ಎಸೆತ, 2 ಬೌಂಡರಿ, 3 ಸಿಕ್ಸರ್) ಶಿವಂ ದುಬೆ ಔಟಾಗದೇ 22 ರನ್(16 ಎಸೆತ, 2 ಸಿಕ್ಸರ್) ಹೊಡೆದರು.
ಬೆಳಗಾವಿ: ಬಡ್ಡಿಗೆ ಸಾಲ ಪಡೆದು ಜರ್ಮನಿಯಲ್ಲಿ (Germany) ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ (World Dwarf Games) ಭಾಗವಹಿಸಿದ್ದ ಬೆಳಗಾವಿಯ (Belagavi) ಯುವತಿ ಮೂರು ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ.
ಹೌದು. ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಯುವತಿ ಮಂಜುಳಾ ಶಿವಾನಂದ ಗೊರಗುದ್ದಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಸಾಧನೆ ಮಾಡಿ ತೋರಿಸಿದ್ದಾರೆ. ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಚಕ್ರ ಎಸೆತದಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಹಾಗೂ ಜಾವೆಲಿನ್ ಥ್ರೋದಲ್ಲಿ (Javelin Throw) 3ನೇ ಸ್ಥಾನ ಪಡೆದು ಕಂಚಿನ ಪದಕ ಬಾಚಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್
ಜುಲೈ 28ರಿಂದ ಆಗಸ್ಟ್ 4ರ ವರೆಗೆ ಆಯೋಜನೆಗೊಂಡಿದ್ದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿರುವ ಮಂಜುಳಾ ಅವರು ಮೂರು ದಿನಗಳಲ್ಲಿ ಪದಕಗಳೊಂದಿಗೆ ತವರಿಗೆ ಮರಳಲಿದ್ದಾರೆ. ಸುಮಾರು 2.5 ಲಕ್ಷ ರೂ. ಹಣ ಹೊಂದಿಸಿ ದೂರದ ಜರ್ಮನಿಗೆ ಹೋಗಿದ್ದ ಮಂಜುಳಾ ಪದಕ ಗೆಲ್ಲುವ ತನ್ನ ಕನಸು-ನನಸು ಮಾಡಿಕೊಳ್ಳುವ ಮೂಲಕ ವಿದೇಶದಲ್ಲೂ ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್ ಬ್ಯಾಟರ್ ನಿವೃತ್ತಿ ಘೋಷಣೆ
ಈ ಬಗ್ಗೆ ವೀಡಿಯೋದಲ್ಲಿ ಹೇಳಿಕೆ ನೀಡಿರುವ ಮಂಜುಳಾ, ವಿದೇಶಿ ನೆಲದಲ್ಲಿ ಮೂರು ಪದಕ ಗೆದ್ದಿರುವುದು ತುಂಬಾ ಖುಷಿ ಕೊಟ್ಟಿದೆ. ಈ ಪದಕಗಳನ್ನ ಭಾರತ ದೇಶಕ್ಕೆ ಮತ್ತು ನನ್ನ ತಾಯಿಗೆ ಅರ್ಪಿಸುತ್ತೇನೆ. ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹುಮ್ಮಸ್ಸು ನನಗೆ ಬಂದಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಸಾಧಿಸುವ ಛಲವೊಂದಿದ್ದರೆ ಏನೂ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಮಂಜುಳಾ ಉದಾಹರಣೆಯಾಗಿದ್ದಾರೆ.
ಫ್ರಾನ್ಸ್ ಖ್ಯಾತ ಫುಟ್ಬಾಲ್ ಆಟಗಾರ ಕಿಲಿಯಾನ್ ಎಂಬಾಪೆಗೆ (Kylian Mbappe) ಇತ್ತೀಚೆಗೆ ಸೌದಿ ಅರೇಬಿಯಾದ (Saudi Arabia) ಫುಟ್ಬಾಲ್ ಕ್ಲಬ್ ಒಂದು 332 ಮಿಲಿಯನ್ ಡಾಲರ್ ಅಂದರೆ ಅಂದಾಜು 2,720 ಕೋಟಿ ರೂ. ಸಂಭಾವನೆ ನೀಡಲು ಮುಂದಾಗಿತ್ತು. ಇಷ್ಟೊಂದು ಮೊತ್ತ ಮೂರು, ನಾಲ್ಕು ವರ್ಷಕ್ಕೆ ಅಲ್ಲ. ಕೇವಲ ಒಂದು ಸೀಸನ್ಗೆ ಮಾತ್ರ. ಈ ದಾಖಲೆಯ ಡೀಲ್ ವಿಷಯ ವಿಶ್ವಾದ್ಯಂತ ಸುದ್ದಿಯಾಯಿತು. ಆದರೆ ಎಂಬಾಪೆ ಇಲ್ಲಿಯವರೆಗೆ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಮುಂದೆ ಸಹಿ ಹಾಕುತ್ತಾರೋ ಗೊತ್ತಿಲ್ಲ. ಡೀಲ್ಗಿಂತಲೂ ಮುಖ್ಯವಾಗಿ ಸೌದಿ ಇಷ್ಟೊಂದು ಹಣವನ್ನು ಎಂಬಾಪೆಗೆ ನೀಡಲು ಮುಂದಾಗಿದ್ದು ಯಾಕೆ ಎಂದು ಓದುಗರಾದ ನೀವು ಕೇಳಬಹುದು. ಈ ಪ್ರಶ್ನೆಗೆ ಉತ್ತರ ಸೇರಿದಂತೆ ಕ್ರೀಡೆಗೆ ಇಷ್ಟೊಂದು ಹಣವನ್ನು ಸೌದಿ ಹೂಡಿಕೆ ಮಾಡುತ್ತಿರುವುದು ಯಾಕೆ? ಯಾವ ರೀತಿ ಹೂಡಿಕೆ ಮಾಡುತ್ತಿದೆ? ಹೂಡಿಕೆ ಮಾಡಿದ್ದರಿಂದ ಸೌದಿಗೆ ಏನು ಲಾಭವಾಗಿದೆ? ಮತ್ತು ಭಾರತಕ್ಕೆ ಏನು ಸಂದೇಶ ಈ ವಿಷಯಗಳ ಬಗ್ಗೆ ಕಿರು ವಿವರ ಇಲ್ಲಿದೆ.
ಸೌದಿ ಶ್ರೀಮಂತ ದೇಶವಾಗಿದ್ದು ಹೇಗೆ?
ಕಚ್ಚಾ ತೈಲ ಉತ್ಪಾದನೆಯೇ ಸೌದಿಯ ಆರ್ಥಿಕ ಶಕ್ತಿ. ವಿಶ್ವದಲ್ಲೇ ಅತಿ ಹೆಚ್ಚು ತೈಲ (Crude Oil) ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ವಿಶ್ವದ ತೈಲ ನಿಕ್ಷೇಪಗಳು ಪೈಕಿ ವೆನೆಜುವೆಲಾ ಮೊದಲ ಸ್ಥಾನದಲ್ಲಿ ಇದ್ದರೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ಒಪೆಕ್ ರಾಷ್ಟ್ರಗಳು ಅಂದರೆ ತೈಲ ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿಯೇ ಲೀಡರ್. ಯಾಕೆಂದರೆ ಸೌದಿ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಉತ್ಪಾದನೆ ಮಾಡುತ್ತಿದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನ ಅಂದರೆ ಜಿಡಿಪಿಯಲ್ಲಿ ಕಚ್ಚಾ ತೈಲದ ಪಾಲು 39%.
ತೈಲದ ಆದಾಯದಿಂದ ಶ್ರೀಮಂತ ದೇಶವಾಗಿ ಹೊರಹೊಮ್ಮಿದರೂ ಸೌದಿ ಅರೇಬಿಯಾ ಈಗ ಸಂಕಷ್ಟದಲ್ಲಿ ಸಿಲುಕಿದೆ. ಸಂಕಷ್ಟಕ್ಕೆ ಸಿಲುಕಲು ಮುಖ್ಯ ಕಾರಣ ಯಾವುದು ಎಂದರೆ ಅದು ತೈಲ ಬೆಲೆ. ಒಪೆಕ್ ರಾಷ್ಟ್ರಗಳು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆಯನ್ನು 80-90 ಡಾಲರ್ ಬೆಲೆಯಲ್ಲೇ ಸ್ಥಿರವಾಗಿಸಲು ಪ್ರಯತ್ನಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಹಿಂದೆ 2008ರಲ್ಲಿ ಆರ್ಥಿಕ ಹಿಂಜರಿತವಾದಾಗ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಕೋವಿಡ್ ಸಮಯದಲ್ಲಿ ಭಾರೀ ಇಳಿಕೆಯಾಗಿತ್ತು. ನಂತರ ರಷ್ಯಾ ಉಕ್ರೇನ್ (Russia-Ukraine) ಯುದ್ಧದ ಸಮಯದಲ್ಲಿ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಆದರೆ ಈಗ ತೈಲ ಬೆಲೆ ಕಡಿಮೆ ಆಗುತ್ತಿದೆ. ತೈಲ ಬೆಲೆ ಕಡಿಮೆಯಾದರೆ ತೈಲ ಆಮದು ಮಾಡುವ ಭಾರತಕ್ಕೆ ಲಾಭ. ಆದರೆ ಸೌದಿಗೆ ಸಮಸ್ಯೆ ಆಗುತ್ತದೆ. ಯಾಕೆಂದರೆ ಅವರ ಜಿಡಿಪಿಯಲ್ಲಿ ತೈಲದ ಪಾಲು 39%. ತೈಲದ ಪಾಲು 39% ಇದ್ದರೂ ಇದು ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಕಡಿಮೆ ಆಗುತ್ತಿದೆ. ಎಷ್ಟು ಕಡಿಮೆ ಆಗುತ್ತಿದೆ ಎಂದರೆ 2011 ರಲ್ಲಿ ಇದು 45.2% ಇದ್ದರೆ 2016ರಲ್ಲಿ ಇದು 43.7% ಇಳಿಕೆಯಾಗಿತ್ತು. 2021 ರಲ್ಲಿ ಇದು 38.8%ಗೆ ಇಳಿಕೆಯಾಗಿದೆ.
ತೈಲದ ಬೇಡಿಕೆ ಕಡಿಮೆ ಯಾಕೆ ಆಗುತ್ತಿದೆ ಎನ್ನುವುದಕ್ಕೂ ಕಾರಣವಿದೆ. ವಿಶ್ವದ ಹಲವು ದೇಶಗಳು ಈಗ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಹಾಕಿಕೊಂಡಿದೆ. ಜರ್ಮನಿ 2045, ದಕ್ಷಿಣ ಕೊರಿಯಾ 2050, ಅಮೆರಿಕ 2050, ಚೀನಾ 2060, ಮುಖ್ಯವಾಗಿ ಭಾರತ 2070ಕ್ಕೆ ಗುರಿಯನ್ನು ಹಾಕಿಕೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡುವ ದೇಶಗಳಾದ ಭಾರತ, ಚೀನಾ, ಅಮೆರಿಕ ಈಗಾಗಲೇ ಈ ಗುರಿಯನ್ನು ತಲುಪಲು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಕೆಲಸ ಆರಂಭಿಸಿದೆ. ಇದು ತೈಲ ಉತ್ಪಾದನೆ ಮಾಡುವ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಈಗ ಸೌದಿ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.
ಇಲ್ಲಿಯವರೆಗೆ ಎಷ್ಟು ಹೂಡಿಕೆ ಮಾಡಿದೆ?
ಕಚ್ಚಾ ತೈಲವನ್ನು ನಂಬಿದರೆ ಭವಿಷ್ಯದಲ್ಲಿ ನಮಗೆ ಭವಿಷ್ಯವಿಲ್ಲ ಎಂಬುದನ್ನು ಈಗಲೇ ಅರಿತ ಸೌದಿ ಕ್ರೀಡೆಗೆ ಈಗ ಭಾರೀ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದೆ. ಮೊದಲಿನಿಂದಲೂ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದ ಸೌದಿ ಈಗ ಯಾರು ನಿರೀಕ್ಷೆ ಮಾಡದ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಅರಲ್ಲೂ 2018 ರಿಂದ ಬಹಳ ಆಕ್ರಮಣಕಾರಿಯಾಗಿ ಹೂಡಿಕೆ ಮಾಡಲು ಆರಂಭಿಸಿದೆ.
ಫೆಬ್ರವರಿ 2020: ಮೊದಲ ಬಾರಿಗೆ ರಿಯಾದ್ನಲ್ಲಿ ಸೌದಿ ಕಪ್ ಹೆಸರಿನಲ್ಲಿ ಕುದುರೆ ರೇಸ್ ಆರಂಭವಾಗಿದೆ. ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಬರೋಬ್ಬರಿ 20 ಮಿಲಿಯನ್ ಡಾಲರ್. ಇದು ಸಾರ್ವಕಾಲಿಕ ದಾಖಲೆಯ ಬಹುಮಾನ. ಅತಿ ಹೆಚ್ಚು ಸಂಭಾವನೆ ಪಡೆಯುವ ಕುದುರೆ ರೇಸ್ ಇದಾಗಿದೆ.
ಜನವರಿ 2021 : ಪ್ರವಾಸೋದ್ಯಮವೇ ಸೌದಿಯ ಮುಖ್ಯ ಆದಾಯಗಳಲ್ಲಿ ಒಂದು. ಈ ಕಾರಣಕ್ಕೆ 3 ವರ್ಷಗಳ ಕಾಲ ಸೌದಿ ಪ್ರವಾಸೋದ್ಯಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲು ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಜೊತೆ 25 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಅಕ್ಟೋಬರ್ 2021 : ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ 400 ಮಿಲಿಯನ್ ಡಾಲರ್ಗೆ ಇಂಗ್ಲೆಂಡಿನ ಪ್ರಸಿದ್ಧ ನ್ಯೂ ಕಾಸಲ್ ಯುನೈಟೆಡ್ ಫುಟ್ಬಾಲ್ ತಂಡವನ್ನು ಖರೀದಿಸಿದೆ.
ಡಿಸೆಂಬರ್ 2021: ಸೌದಿ ಅರೇಬಿಯಾದ ಮೊದಲ ಫಾರ್ಮುಲಾ 1 ಕಾರ್ ರೇಸ್ ಜೆಡ್ಡಾದಲ್ಲಿ ನಡೆಯಿತು. ಸೌದಿ ಅರೇಬಿಯಾದ ರಾಷ್ಟ್ರೀಯ ತೈಲ ಕಂಪನಿ ಸೌದಿ ಅರಾಮ್ಕೋ ಇದರ ಮುಖ್ಯ ಪ್ರಾಯೋಜಕತ್ವ ವಹಿಸಿತ್ತು. ಈಗ ಇದು ಸೌದಿ ಗ್ರಾಂಡ್ ಪ್ರಿಕ್ಸ್ ಎಂದೇ ಪ್ರಸಿದ್ಧಿ ಪಡಿದಿದೆ.
ಜುಲೈ 2022: ಫಾರ್ಮುಲಾ 1 ಆಯೋಜನೆ ಮಾಡುತ್ತಿರುವ ಸೌದಿ ಒಂದು ಫ್ರಾಂಚೈಸಿಯನ್ನೇ ಖರೀದಿಸಿದೆ. ಫಾರ್ಮುಲಾ 1 ಫ್ರಾಂಚೈಸಿಯಾಗಿರುವ ಆಸ್ಟನ್ ಮಾರ್ಟಿನ್ ನಿಂದ 17% ಪಾಲನ್ನು ಸೌದಿಯ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ ಖರೀದಿಸಿದೆ.
ಡಿಸೆಂಬರ್ 2022: ಜಾಗತಿಕ ಫುಟ್ಬಾಲ್ ಸೂಪರ್ಸ್ಟಾರ್, ಪೋರ್ಚುಗಲ್ನ ಕ್ರಿಸ್ಟಿಯನ್ ರೊನಾಲ್ಡೋ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದು ಸೌದಿಯ ಅಲ್-ನಾಸ್ರ್ ತಂಡವನ್ನು ಸೇರಿದ್ದಾರೆ. ಈ ಡೀಲ್ ಎಷ್ಟು ಗೊತ್ತೆ ಬರೋಬ್ಬರಿ 600 ಮಿಲಿಯನ್ ಡಾಲರ್. ರೂಪಾಯಿಯಲ್ಲಿ ಹೇಳುವುದಾದರೆ ಅಂದಾಜು 1,800 ಕೋಟಿ ರೂ. ಇದು ಕ್ರೀಡಾ ಇತಿಹಾಸದಲ್ಲಿ ದಾಖಲೆ ಬರೆದಿದ್ದು ಅತಿ ದೊಡ್ಡ ಡೀಲ್ ಎನಿಸಿಕೊಂಡಿದೆ. ಇದನ್ನೂ ಓದಿ: ಭೂಮಿಗೆ ಅಪ್ಪಳಿಸಿದ ‘ಫೈರ್ಬಾಲ್’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?
ಜೂನ್ 2023: ಅರ್ಜೆಂಟೀನಾ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಬರೋಬ್ಬರಿ 4,100 ಕೋಟಿ ರೂ. ನೀಡಲು ಸೌದಿಯ ಆಲ್-ಹಿಲಾಲ್ ಮುಂದೆ ಬಂದಿತ್ತು. ಆದರೆ ಮೆಸ್ಸಿಯೂ ಈ ಆಫರ್ ತಿರಸ್ಕರಿಸಿದ್ದರು.
ಏಪ್ರಿಲ್, 2023: WWE, ಕುದುರೆ ರೇಸ್, ಫಾರ್ಮುಲಾ 1, ಫುಟ್ಬಾಲ್ ಮೇಲೆ ಕೋಟಿಗಟ್ಟಲೇ ಹಣವನ್ನು ಸುರಿದಿರುವ ಸೌದಿ ಕ್ರಿಕೆಟ್ ಮೇಲೂ ಕಣ್ಣು ಹಾಕಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆರಂಭಿಸಲು ಮುಂದಾಗಿತ್ತು. ಈ ಸಂಬಂಧ ಭಾರತದ ಬಿಸಿಸಿಐ ಜೊತೆಯೂ ಮಾತುಕತೆ ನಡೆಸಿತ್ತು. ಭಾರತ ಮತ್ತು ಪಾಕಿಸ್ತಾನ ಆಟಗಾರರನ್ನು ಸೇರಿಸಿ ಲೀಗ್ ಮಾಡಿದರೆ ಸೂಪರ್ ಹಿಟ್ ಆಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿತ್ತು. ಆದರೆ ಬಿಸಿಸಿಐ ಭಾರತದ ಆಟಗಾರರನ್ನು ಈ ಲೀಗ್ಗೆ ಕಳುಹಿಸಲು ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಸದ್ಯ ಸೌದಿಯ ಈ ಒಂದು ಕನಸು ಈಗಲೂ ಕನಸಾಗಿಯೇ ಉಳಿದಿದೆ.
ಕ್ರೀಡೆಯ ಮೇಲೆ ಹೂಡಿಕೆ ಹೇಗೆ?
ಸೌದಿಯ ಕ್ಲಬ್ಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಭಾರತದಲ್ಲಿ ನಡೆಯುವ ಐಪಿಎಲ್ ಬಗ್ಗೆ ತಿಳಿದುಕೊಳ್ಳೋಣ. ಐಪಿಎಲ್ ಫ್ರಾಂಚೈಸಿಯಲ್ಲಿ ಸರ್ಕಾರದ ಪಾಲು ಇರುವುದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ , ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಎಲ್ಲಾ ತಂಡಗಳ ಮಾಲೀಕತ್ವ ಇರುವುದು ಖಾಸಗಿ ವ್ಯಕ್ತಿಗಳ ಕೈಗಳಲ್ಲಿ. ಆದರೆ ಸೌದಿಯಲ್ಲಿ ಹೀಗಿಲ್ಲ. ಉದಾಹರಣೆಗೆ ಎಂಬಾಪೆಗೆ 2,720 ಕೋಟಿ ರೂ ಡೀಲ್ಗೆ ಮುಂದಾಗಿದ್ದ ಅಲ್-ಹಿಲಾಲ್ ಕ್ಲಬ್ನಲ್ಲಿ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ 75% ಷೇರನ್ನು ಹೊಂದಿದರೆ ಉಳಿದವರ ಪಾಲು 25% ಅಷ್ಟೇ. ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?
ಈ ಫಂಡ್ ಅನ್ನು ಸ್ಥಾಪಿಸಿದವರು ಯಾರು ಅಂದರೆ ಸೌದಿಯ ಹಿಂದಿನ ರಾಜ ಫೈಸಲ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್. ಸೌದಿ ಅರೇಬಿಯಾ ಸರ್ಕಾರದ ಪರವಾಗಿ ಹಣವನ್ನು ಹೂಡಿಕೆ ಮಾಡುವ ಉದ್ದೇಶದಿಂದ 1971ರಲ್ಲಿ ಈ ಫಂಡ್ ಸ್ಥಾಪಿಸಲಾಗಿದೆ. ರಾಷ್ಟ್ರದ ಆರ್ಥಿಕತೆಗೆ ಪೂರಕವಾಗುವ ಯೋಜನೆಗಳಿಗೆ ಹಣಕಾಸಿನ ಬೆಂಬಲವನ್ನು ಈ ನಿಧಿ ಒದಗಿಸುತ್ತದೆ. ಸದ್ಯ ಒಟ್ಟು 700 ಶತಕೋಟಿ ಡಾಲರ್ ಅಂದಾಜು ಆಸ್ತಿಯನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ಸಾರ್ವಭೌಮ ಸಂಪತ್ತಿನ ನಿಧಿಗಳಲ್ಲಿ ಇದು ಒಂದಾಗಿದೆ. ಈಗ ನಿಧಿಯ ಸಂಪೂರ್ಣ ನಿಯಂತ್ರಣವನ್ನು ಸೌದಿ ರಾಜಮೊಹಮ್ಮದ್ ಬಿನ್ ಸಲ್ಮಾನ್ ಹೊಂದಿದ್ದಾರೆ.
ಸೌದಿಗೆ ಏನು ಲಾಭ?
ಎಲ್ಲರಿಗೂ ಸರ್ಕಾರಿ ಕೆಲಸ ನೀಡುವುದು ಸರ್ಕಾರದ ಕೆಲಸವಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶ ನೀಡುವುದು ಸರ್ಕಾರದ ಕೆಲಸ. ಈ ಕಾರಣಕ್ಕೆ ತೈಲವನ್ನು ಹೊರತು ಪಡಿಸಿ ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಸರ್ಕಾರ ವಿಷನ್ 2030 ರೂಪಿಸಿದ್ದು ಇದರ ಭಾಗವಾಗಿ ಸೌದಿ ಕ್ರೀಡೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದಾಗಿ ದೇಶದಲ್ಲಿ ಉದ್ಯೋಗ, ಪ್ರವಾಸೋದ್ಯಮವನ್ನು ಉತ್ತೇಜನ ಸಿಗುತ್ತದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನಕ್ಕೆ (GDP) ಕ್ರೀಡೆಗಳ ಕೊಡುಗೆಯು 2016 ಮತ್ತು 2019 ರ ನಡುವೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ವರ್ಷಪೂರ್ತಿ ಒಂದೊಂದು ದೊಡ್ಡ ಕ್ರೀಡಾಕೂಟವನ್ನು ಆಯೋಜನೆ ಮಾಡಿದರೆ ಲಕ್ಷಾಂತರ ಮಂದಿ ವಿದೇಶಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಕೇವಲ ಒಂದು ದಿನಕ್ಕೆ ಮಾತ್ರ ವಿದೇಶಿಗರು ಬರುವುದಿಲ್ಲ. ಪ್ರವಾಸ ಮಾಡಲೆಂದೇ ಬರುತ್ತಾರೆ. ಇದರಿಂದಾಗಿ ವಿಮಾನ ಕ್ಷೇತ್ರಕ್ಕೆ ಮಾತ್ರವಲ್ಲದೇ ಟೂರಿಸಂ ಅಭಿವೃದ್ಧಿಯಾಗುತ್ತದೆ. ಹೋಟೆಲ್, ಟ್ಯಾಕ್ಸಿ, ಹೀಗೆ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುತ್ತದೆ. ಹಣದ ವ್ಯವಹಾರ ಹೆಚ್ಚಾದರೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತದೆ.
ಭಾರತಕ್ಕೆ ಏನು ಸಂದೇಶ?
ಸೌದಿಯಂತೆ ಭಾರತವೂ ಕ್ರೀಡೆಯ ಮೇಲೆ ಹೂಡಿಕೆ ಮಾಡಬಹುದು. ಸದ್ಯ ಕ್ರಿಕೆಟ್ ಒಂದೇ ಭಾರತದಲ್ಲಿ ಫೇಮಸ್ ಆಗಿದೆ. ಆದರೆ ಕ್ರಿಕೆಟಿನಷ್ಟೇ ಫುಟ್ಬಾಲ್ ಮತ್ತು ಇತರ ಕ್ರೀಡೆಗಳಿಗೆ ಅಭಿಮಾನಿಗಳು ಇದ್ದಾರೆ. ಇತರ ಕ್ರೀಡೆಗಳಿಗೆ ಪ್ರೋತ್ಸಾಹದ ಕೊರತೆ ಕಾಣುತ್ತಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ವಿದೇಶಿ ಆಟಗಾರರು ಭಾರತಕ್ಕೆ ಬರಬಹುದು. ಹೇಗೆ ಸೌದಿ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುವ ಟೂರಿಸಂ ಅಭಿವೃದ್ಧಿ ಮಾಡುತ್ತದೋ ಅದೇ ರೀತಿ ಭಾರತದಲ್ಲೂ ರಾಜ್ಯಗಳು ಉತ್ತೇಜನ ನೀಡಿದರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಯುರೋಪ್ ದೇಶಗಗಳು ಬಿಡಿ ನಮ್ಮ ಸಮೀಪದ ಶ್ರೀಲಂಕಾ, ಥಾಯ್ಲೆಂಡ್ಗೆ ಪ್ರವಾಸೋದ್ಯಮವೇ ಅವರ ಆದಾಯದ ಮೂಲ. ಕ್ರೀಡೆಯ ಜೊತೆ ಪ್ರವಾಸಿ ಸ್ಥಳಗಳನ್ನು ನಾವು ಅಭಿವೃದ್ಧೀ ಮಾಡಿದರೆ ಹೋಟೆಲ್, ಟ್ಯಾಕ್ಸಿ, ಮೆಟ್ರೋ, ಅಂಗಡಿಗಳಿಗೆ ಆದಾಯ ಬರುತ್ತದೆ. ಜನರಿಗೆ ಉದ್ಯೋಗ ಸಿಗುತ್ತದೆ. ಎಲ್ಲದರ ಪರಿಣಾಮ ಸರ್ಕಾರದ ಬೊಕ್ಕಸ ತುಂಬುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಷನ್ ಪ್ಲ್ಯಾನ್ ಮಾಡಿ ಕೆಲಸ ಮಾಡಬೇಕಿದೆ.
ಕೋಲಾರ: ಸೌದಿ ಅರೇಬಿಯಾದಲ್ಲಿ (Saudi Arabia) ನಡೆದ ಸ್ನೂಕರ್ ವಿಶ್ವಚಾಂಪಿಯನ್ಶಿಪ್ (Snooker Championship 2023) ಟೂರ್ನಿಯಲ್ಲಿ ಕೋಲಾರದ ಕೆಜಿಎಫ್ ಯುವತಿ ಕೀರ್ತನಾ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಹಿಂದೆ ವಿಶ್ವಚಾಂಪಿಯನ್ ಟೂರ್ನಿಯಲ್ಲಿ ಕಂಚು, ಬೆಳ್ಳಿ ಗೆದ್ದು ಸಾಧನೆ ಮಾಡಿದ್ದ ಕೀರ್ತನಾ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಹೌದು. ಕೋಲಾರದ (Kolar) ಜಿಲ್ಲೆಯ ಯುವಸಮೂಹಕ್ಕೆ ಸಾಧನೆಯ ಮೆಟ್ಟಿಲು ಕಠಿಣವಾದರೂ ಛಲವಿದೆ ಬಿಡದೇ ಸಾಧಿಸುವ ಮನಸ್ಸಿದೆ ಅನ್ನೋದಕ್ಕೆ ಕೀರ್ತನಾ ಉದಾಹರಣೆಯಾಗಿದ್ದಾರೆ. ಅಂಡರ್ 16 ನಲ್ಲಿ ಬೆಳ್ಳಿ, ಅಂಡರ್ 18 ನಲ್ಲಿ ಕಂಚು ಗೆದ್ದಿದ್ದ ಕೀರ್ತನಾ ಇದೀಗ ಅಂಡರ್ 21 ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿ ನಿವಾಸಿ ಪಾಂಡಿಯನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿ ಕೀರ್ತನಾ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಕೆಜಿಎಫ್ನ ಮಹಾವೀರ್ ಜೈನ್ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಕೀರ್ತಿನಾ ಸದ್ದಿಲ್ಲದೇ ಸ್ನೂಕರ್ ಕ್ರೀಡೆಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಸಾಗಿದ್ದಾಳೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್ನಲ್ಲೂ ಕಳಪೆ ಅಂಪೈರಿಂಗ್ ವಿವಾದ – ಆಟಗಾರರ ನಡುವೆ ಟಾಕ್ ಫೈಟ್
ಈಕೆಯ ತಂದೆ ಪಾಂಡಿಯನ್ ಕೆಜಿಎಫ್ ನಲ್ಲಿರುವ ಬಿಇಎಂಎಲ್ ಕ್ಲಬ್ನಲ್ಲಿ ನಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಜಯಲಕ್ಷ್ಮಿ ಗೃಹಿಣಿಯಾಗಿದ್ದಾರೆ. ತನ್ನ ತಂದೆಯಿಂದಲೇ ಪ್ರೇರಣೆ ಪಡೆದ ಕೀರ್ತನಾ ಸ್ನೂಕರ್ನ ಕ್ಯೂ ಕೈಗೆತ್ತಿಕೊಂಡಿದ್ದಳು. ಬಿಡುವಿನ ವೇಳೆಯಲ್ಲಿ ಕೆಜಿಎಫ್ ನಗರದ ಬಿಇಎಂಎಲ್ ಕ್ಲಬ್ ನಲ್ಲಿರುವ ಬಿಲಿಯರ್ಡ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದರು. 13ನೇ ವಯಸ್ಸಿಗೆ ಬಾಲ್ ಹೊಡೆಯಲಾರಂಭಿಸಿದ ಹುಡುಗಿ ಈಗ ಚಿನ್ನಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಹೆಚ್ಚು ಪದಕಗಳನ್ನ ಬಾಚಿಕೊಂಡಿದ್ದಾರೆ.
2017ರಲ್ಲಿ ಚೀನಾದಲ್ಲಿ ನಡೆದ ಅಂಡರ್ 19 ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2018ರಲ್ಲಿ ರಷ್ಯಾದಲ್ಲಿ ಬೆಳ್ಳಿ ಪದಕ ಹಾಗೂ ಚಿನ್ನದ ಪದಕ, 2022 ರಲ್ಲಿ ರೋಮಾನಿಯಾದಲ್ಲಿ ಕಂಚು ಗೆದ್ದು, ಇದೀಗ ಅಂಡರ್ 21 ನಲ್ಲಿ ಸೌದಿ ಅರೇಬಿಯಾದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮುಂದೆ ಪ್ರೊಫೆಷನಲ್ಸ್ ಕ್ಲಬ್ಗಳಲ್ಲಿ ಭಾಗವಹಿಸಬೇಕು, ಇನ್ನಷ್ಟು ಪದಕಗಳನ್ನು ಗೆಲ್ಲಬೇಕು ಎಂಬುದು ಈಕೆಯ ಗುರಿಯಾಗಿದೆ. ಇದನ್ನೂ ಓದಿ: ಇಸ್ಲಾಂ ಧರ್ಮ ಹೇಳಿದಂತೆ ಬದುಕುತ್ತೇನೆ – ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ ಪಾಕ್ ಆಟಗಾರ್ತಿ
ಲಂಡನ್: ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship Final) ಪಂದ್ಯದಲ್ಲಿ ಕೀಪರ್ ಕೆಎಸ್ ಭರತ್ (KS Bharat) ಹಿಡಿದ ಕ್ಯಾಚ್ ಟೀಂ ಇಂಡಿಯಾದ (Team India) ಅಭಿಮಾನಿಗಳ ಮನಗೆದ್ದಿದೆ.
ಆಸ್ಟ್ರೇಲಿಯಾ ಇನ್ನಿಂಗ್ಸ್ನ ಶಾರ್ದೂಲ್ ಠಾಕೂರ್ ಎಸೆದ 22ನೇ ಓವರಿನ 4 ಎಸೆತವನ್ನು ಡೇವಿಡ್ ವಾರ್ನರ್ ಬಲವಾಗಿ ಎಡಗಡೆಗೆ ಹೊಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟ್ಗೆ ಸವರಿ ಹಿಂದಕ್ಕೆ ಹೋಯಿತು. ಈ ವೇಳೆ ಭರತ್ ಜಿಗಿದು ಕ್ಯಾಚ್ ಹಿಡಿದರು. ಪರಿಣಾಮ 43 ರನ್(60 ಎಸೆತ, 8 ಬೌಂಡರಿ) ಗಳಿಸಿದ್ದ ಡೇವಿಡ್ ವಾರ್ನರ್ ಔಟಾಗಿ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡರೂ ದಿನದ ಅಂತ್ಯಕ್ಕೆ ಉತ್ತಮ ಮೊತ್ತ ಗಳಿಸಿದೆ. 85 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.
ಉಸ್ಮಾನ್ ಖವಾಜಾ ಸೊನ್ನೆ ಸುತ್ತಿದರೂ ಎರಡನೇ ವಿಕೆಟಿಗೆ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಾಬು ಶೇನ್ 108 ಎಸೆತಗಳಲ್ಲಿ 69 ರನ್ ಜೊತೆಯಾಟವಾಡಿದರು. ತಂಡದ ಮೊತ್ತ 71 ಆದಾಗ ಡೇವಿಡ್ ವಾರ್ನರ್ ಔಟಾದ ಬೆನ್ನಲ್ಲೇ 26 ರನ್ಗಳಿಸಿದ್ದ ಲಾಬು ಶೇನ್ ಔಟಾದರು. ಇದನ್ನೂ ಓದಿ: ಟೆಸ್ಟ್ ಚಾಂಪಿಯನ್ಶಿಪ್ – ಡ್ರಾದಲ್ಲಿ ಅಂತ್ಯಗೊಂಡರೆ, ಮಳೆ ಬಂದರೆ ಏನಾಗುತ್ತೆ?
3 ವಿಕೆಟ್ ನಷ್ಟಕ್ಕೆ 76 ರನ್ಗಳಿಸಿದ್ದಾಗ ಸ್ವೀವ್ ಸ್ಮಿತ್ ಮತ್ತು ಟ್ರಾವಿಸ್ ಹೇಡ್ ತಂಡಕ್ಕೆ ಆಸರೆಯಾದರು. ಟ್ರಾವಿಸ್ ಹೆಡ್ ಶತಕ ಹೊಡೆದರೆ ಸ್ಮಿತ್ ಶತಕ ಹೊಡೆಯುವತ್ತಾ ಮುನ್ನುಗ್ಗುತ್ತಿದ್ದಾರೆ.
ಅಂತಿಮವಾಗಿ ಅಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 85 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 327 ರನ್ ಹೊಡೆದಿದೆ. ಏಕದಿನ ಪಂದ್ಯದಂತೆ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ ಔಟಾಗದೇ 146 ರನ್ 156 ಎಸೆತ, 22 ಬೌಂಡರಿ, 1 ಸಿಕ್ಸರ್) ಸ್ವೀವ್ ಸ್ಮಿತ್ ಔಟಾಗದೇ 95 ರನ್(227 ಎಸೆತ, 14 ಬೌಂಡರಿ) ಹೊಡೆದಿದ್ದಾರೆ. ಇವರಿಬ್ಬರೂ ಮುರಿಯದ 4ನೇ ವಿಕೆಟಿಗೆ 370 ಎಸೆತಗಳಲ್ಲಿ 251 ರನ್ ಜೊತೆಯಾಟವಾಡಿದ್ದಾರೆ. ಭಾರತದ ಪರ ಶಮಿ, ಸಿರಾಜ್, ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ICC World Test Championship) ಬುಧವಾರದಿಂದ ಆರಂಭವಾಗಲಿದ್ದು ಲಂಡನ್ನ ಓವಲ್ನಲ್ಲಿ ಭಾರತ (India) ಮತ್ತು ಆಸ್ಟ್ರೇಲಿಯಾ (Australia) ಮಧ್ಯೆ ಸೆಣಸಾಟ ನಡೆಯಲಿದೆ.
ಒಂದು ವೇಳೆ ಪಂದ್ಯಕ್ಕೆ ಮಳೆ (Rain) ಅಡ್ಡಿ ಪಡಿಸಿದರೆ ಆರನೇ ದಿನವನ್ನು ಮೀಸಲಾಗಿ (Reserve Day) ಇಡಲಾಗಿದೆ. ಆರನೇ ದಿನವೂ ಫಲಿತಾಂಶ ಪ್ರಕಟವಾಗದೇ ಇದ್ದರೆ ಡ್ರಾದಲ್ಲಿ ಪಂದ್ಯ ಅಂತ್ಯ ಕಾಣಲಿದೆ.
ಡ್ರಾದಲ್ಲಿ (Draw) ಕೊನೆಯಾದರೆ ಟ್ರೋಫಿಯನ್ನು ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಹಂಚಿಕೊಳ್ಳುತ್ತವೆ. ಎರಡು ತಂಡಗಳು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ. ಪಂದ್ಯ ಟೈ ಆಗಿ ಅಂತ್ಯಗೊಂಡರೂ ಟ್ರೋಫಿಯನ್ನು ಎರಡೂ ತಂಡಗಳು ಹಂಚಿಕೊಳ್ಳುತ್ತವೆ.
ಬೇರೆ ಟೂರ್ನಿಗಳಲ್ಲಿ ಬೌಂಡರಿ ಲೆಕ್ಕಾಚಾರ, ಸೂಪರ್ ಓವರ್ ಅಥವಾ ಲೀಗ್ ಪಂದ್ಯಗಳ ಅಂಕಗಳ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ. ಆದರೆ WTC ಫೈನಲ್ನಲ್ಲಿ ಇವುಗಳನ್ನು ಪರಿಗಣಿಸುವುದಿಲ್ಲ
ಮಳೆಯು ಪಂದ್ಯವನ್ನು ಕೆಡಿಸಿದರೆ, ಹವಾಮಾನ ವೈಪರೀತ್ಯ ಅಥವಾ ಮಂದ ಬೆಳಕಿನಿಂದ ಪಂದ್ಯ ಬೇಗ ಮುಗಿದರೆ ಮಾತ್ರ ಮೀಸಲು ದಿನವನ್ನು ಬಳಕೆ ಮಾಡಲಾಗುತ್ತದೆ. ಮಳೆ ಇಡಿ ದಿನ ಅಥವಾ ಹಲವು ಗಂಟೆಗಳ ಕಾಲ ಸುರಿದು ಅಡ್ಡಿ ಮಾಡಿದರೆ ಮಾತ್ರ ಮೀಸಲು ದಿನಕ್ಕೆ ಪಂದ್ಯ ಹೋಗುತ್ತದೆ.