Tag: Special Economic Package

  • ಇನ್ಮುಂದೆ ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಇಲ್ಲ- ಬಿಎಸ್‍ವೈ

    ಇನ್ಮುಂದೆ ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಇಲ್ಲ- ಬಿಎಸ್‍ವೈ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಇನ್ನುಮುಂದೆ ಯಾವುದೇ ಸಮುದಾಯಕ್ಕೆ ಕೊರೊನಾ ಪರಿಹಾರ ಘೋಷಣೆ ಮಾಡಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಸಮುದಾಯಗಳಿಗೆ ಪರಿಹಾರ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಹಣ ತಲುಪಿಸಲು ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ನನ್ನ ಶಕ್ತಿ ಮೀರಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಹೀಗಾಗಿ ಇನ್ನುಮುಂದೆ ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದರು.

    ದೇವಸ್ಥಾನಗಳನ್ನು ತೆರೆಯಲು ಅನುಮತಿ ಕೊಟ್ಟಿದ್ದೇವೆ. ಇದರೊಂದಿಗೆ ಮಸೀದಿ, ಚರ್ಚ್ ಗಳಿಗೂ ಅವಕಾಶ ಕೊಡಲಾಗುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಅನುಮತಿ ಸಿಗಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಕೆಲವು ನಿಬಂಧನೆಗಳನ್ನು ಅಳವಡಿಸಲು ಸಲಹೆ ಕೊಟ್ಟಿದ್ದಾರೆ. ಅದನ್ನು ಅನುಸರಿಸಲಾಗುತ್ತದೆ ಎಂದು ಹೇಳಿದರು.

    ನಾವು ಕೋವಿಡ್-19 ಜತೆ ಬದುಕಬೇಕಾಗಿದೆ. ಸಾಕಷ್ಟು ಸಮಸ್ಯೆಗಳಿವೆ, ಹೊರಗಿನ ರಾಜ್ಯಗಳಿಂದ ಜನ ಬರುತ್ತಿದ್ದಾರೆ. ಅವರೆಲ್ಲರಿಗೂ ಉಳಿಯಲು ವ್ಯವಸ್ಥೆ ಮಾಡಬೇಕಿದೆ. ಅವರ ವಸತಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆಯೂ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಗಮನ ಸೆಳೆಯಲಾಗಿದೆ ಎಂದರು.

    ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಅವರು ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಹಿನ್ನೆಲೆ ವಿಧಾನಸೌಧದಲ್ಲಿ ಇರುವ ನೆಹರೂ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

  • ಪ್ರಧಾನಿ ಮೋದಿ ಬಳಿ ವಿಶೇಷ ಪ್ಯಾಕೇಜ್‍ಗೆ ಪ್ರಸ್ತಾಪಿಸದ ಸಿಎಂ ಬಿಎಸ್‍ವೈ

    ಪ್ರಧಾನಿ ಮೋದಿ ಬಳಿ ವಿಶೇಷ ಪ್ಯಾಕೇಜ್‍ಗೆ ಪ್ರಸ್ತಾಪಿಸದ ಸಿಎಂ ಬಿಎಸ್‍ವೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮ್ಯಾರಥಾನ್ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು, ಈ ವೇಳೆ ತಮಿಳುನಾಡು ಸಿಎಂ ಸೇರಿದಂತೆ ಹಲವು ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಧಾನಿಗಳ ಎದುರು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವ ಪ್ರಸ್ತಾಪ ಮಾಡಿಲ್ಲ ಎಂಬ ಮಾಹಿತಿ ಲಭಿಸಿದೆ.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾತ್ರಿ 7 ಗಂಟೆ ಸುಮಾರಿಗೆ 20 ನಿಮಿಷ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸಿದ್ದು, ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆ ಕೊಟ್ಟಿದ್ದಾರೆ. ಮೇ ಅಂತ್ಯದವರೆಗೆ ಈಗಿರುವ ಲಾಕ್‍ಡೌನ್ ಮುಂದುವರಿಯವುದು. ಬೆಂಗಳೂರಿಗೆ ರೈಲು, ವಿಮಾನಯಾನ ಸೇವೆ ಸದ್ಯ ಆರಂಭ ಮಾಡದಿರುವುದು. ರೆಡ್, ಗ್ರೀನ್, ಆರೆಂಜ್ ಝೋನ್ ಬದಲಾಗಿ ಕಂಟೈನ್ಮೆಂಟ್ ಝೋನ್ ಮಾತ್ರ ಮುಂದುವರಿಸುವ ವಿಶೇಷ ಸಲಹೆಗಳನ್ನು ನೀಡಿದ್ದಾರೆ. ಆದರೆ ಈ ವೇಳೆ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವ ಪ್ರಸ್ತಾಪ ಮಾಡಿಲ್ಲ.

    ಮೇ 08ರಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ನೇತೃತ್ವದ ಪ್ರತಿಪಕ್ಷ ನಿಯೋಗ, ಲಾಕ್‍ಡೌನ್‍ನಿಂದ ರಾಜ್ಯದಲ್ಲಿ ಜನತೆ ಎದುರಿಸುತ್ತಿರುವ ಸಂಕಷ್ಟ ನಿವಾರಿಸಲು 50 ಸಾವಿರ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಕೇಂದ್ರವನ್ನು ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದ್ದರು.

    ಉಳಿದಂತೆ ಮೇ 17ರ ನಂತರ ಲಾಕ್‍ಡೌನ್ ವಿಸ್ತರಿಸಬೇಕಾ? ಅಥವಾ ಸಡಿಲ ಮಾಡಬೇಕಾ? ಎಂಬ ಬಗ್ಗೆ ಸಿಎಂ ಬಿಎಸ್‍ವೈ ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳು ತಮ್ಮ ಸಲಹೆಗಳನ್ನು ಪ್ರಧಾನಿಗಳಿಗೆ ನೀಡಿದರು. ಎಲ್ಲಾ ಸಿಎಂಗಳೊಂದಿಗೆ ಪ್ರತ್ಯೇಕವಾಗಿ ಪ್ರಧಾನಿಗಳು ಚರ್ಚೆ ನಡೆಸಿದ ಕಾರಣ ಹಲವು ಸಲಹೆಗಳನ್ನು ಮುಖ್ಯಮಂತ್ರಿಗಳು ಪ್ರಧಾನಿಗಳ ಮುಂದಿಟ್ಟರು. ಇದೇ ವೇಳೆ ತಮಿಳುನಾಡು ಸಿಎಂ ಕೋವಿಡ್-19 ವಿರುದ್ಧ ಹೋರಾಟಲು ರಾಜ್ಯಕ್ಕೆ 2 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಜಿಎಸ್‍ಟಿ ಪರಿಹಾರ ಬಾಕಿ ಉಳಿಸಿಕೊಂಡಿರುವ ಹಣ ಹಾಗೂ 2020-21ರ ಅವಧಿಯಲ್ಲಿ ಅನುಮತಿಸಲಾಗಿರುವ ಸಾಲಕ್ಕಿಂತ ಶೇ.33 ರಷ್ಟು ಹೆಚ್ಚುವರಿ ಸಾಲ ನೀಡುವಂತೆ ಮನವಿ ಮಾಡಿದ್ದರು.

    ಇತ್ತ ಕೊರೊನಾದಿಂದಾಗಿ ಕುಂಠಿತಗೊಂಡಿರುವ ದೇಶದ ಆರ್ಥಿಕತೆಯ ಬಲವರ್ಧನೆಗೆ ಕೇಂದ್ರ ಸರ್ಕಾರ ಸಾಧ್ಯ ಇರೋ ಎಲ್ಲಾ ದಾರಿಗಳ ಶೋಧದಲ್ಲಿದೆ. ಮೋದಿ ಜೊತೆಗಿನ ಇವತ್ತಿನ ಸಭೆಯಲ್ಲಿ ಮುಖ್ಯಮಂತ್ರಿಗಳ ಸ್ಪೆಷಲ್ ಪ್ಯಾಕೇಜ್ ಮನವಿಯ ಬೆನ್ನಲ್ಲೇ ನಿತನ್ ಗಡ್ಕರಿ ಅವರು ಇನ್ನೊಂದೆರಡು ದಿನಗಳಲ್ಲಿ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡೋದಾಗಿ ಸುಳಿವು ನೀಡಿದ್ದಾರೆ. ಇನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕೇಂದ್ರ ಸರ್ಕಾರಿ ನೌಕರರ ವೇತನ ಕಡಿತ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.