Tag: space

  • ನನ್ನ ಬಾಹ್ಯಾಕಾಶ ಯಾತ್ರೆಯೂ ಇಡೀ ದೇಶದ ಧ್ಯೇಯವಾಗಿತ್ತು – ಧನ್ಯವಾದ ತಿಳಿಸಿದ ಶುಭಾಂಶು ಶುಕ್ಲಾ

    ನನ್ನ ಬಾಹ್ಯಾಕಾಶ ಯಾತ್ರೆಯೂ ಇಡೀ ದೇಶದ ಧ್ಯೇಯವಾಗಿತ್ತು – ಧನ್ಯವಾದ ತಿಳಿಸಿದ ಶುಭಾಂಶು ಶುಕ್ಲಾ

    ನವದೆಹಲಿ: ನಮ್ಮ ನೆಲದಿಂದಲೇ ಒಬ್ಬರು, ನಾವೇ ತಯಾರಿಸಿದ ಕ್ಯಾಪ್ಸೂಲ್‌ನಲ್ಲಿ ಕುಳಿತು, ನಮ್ಮದೇ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಹಂತ ಸಮೀಪದಲ್ಲಿದೆ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ (Shubanshu Shukla) ಹೇಳಿದ್ದಾರೆ.ಇದನ್ನೂ ಓದಿ: ಅಡಿಕೆ ಬೆಳೆ GST ವ್ಯಾಪ್ತಿಯಿಂದ ಹೊರಗಿಡಿ, ಹಳದಿ ಎಲೆ ರೋಗ ಬಿದ್ದ ಭೂಮಿಗೆ ಪರಿಹಾರ ನೀಡಿ – ರಾಜ್ಯ ಸಂಸದರ ನಿಯೋಗ ಮನವಿ

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಯೋಜನೆಗಳ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದಾರೆ. ಆಕ್ಸಿಯಮ್-4 ಯೋಜನೆಯೂ ಭಾರತ ಕೈಗೊಳ್ಳುತ್ತಿರುವ ಗಗನಯಾನ ಯೋಜನೆಗೆ ನೆರವಾಗಿದೆ. ಕಳೆದ ಒಂದು ವರ್ಷದಿಂದ ಬಾಹ್ಯಾಕಾಶ ಯಾನಕ್ಕಾಗಿ ಸಾಕಷ್ಟು ತರಬೇತಿ ಪಡೆದಿದ್ದೇನೆ ಎಂದರು. ನನ್ನ ಬಾಹ್ಯಾಕಾಶ ಯಾತ್ರೆಯೂ ಇಡೀ ದೇಶದ ಧ್ಯೇಯವಾಗಿತ್ತು. ಬಾಹ್ಯಾಕಾಶದಲ್ಲಿನ ಅನುಭವವು ನೆಲದ ಮೇಲೆ ಕಲಿಯುವುದಕ್ಕಿಂತಲೂ ಬಹಳ ಭಿನ್ನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಬಾಹ್ಯಾಕಾಶದ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ಭಾರತ ಸರ್ಕಾರ, ಇಸ್ರೋ, ಹಾಗೂ ಸಂಶೋಧಕರಿಗೆ ಧನ್ಯವಾದ. ಇದೇ ವೇಳೆ ಭಾರತದಲ್ಲಿ ಬೆಳೆಯುತ್ತಿರುವ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಎತ್ತಿ ತೋರಿಸಿದರು. ಆಕ್ಸಿಯಮ್-4 ಕಾರ್ಯಾಚರಣೆಯ ಒಳನೋಟಗಳನ್ನು ದೇಶದ ಜನತೆ ಮುಂದೆ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶ ಹೊತ್ತೊಯ್ಯುತ್ತಿದ್ದ ಪಾರಿವಾಳ ಸೆರೆ

  • ನಾಳೆ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್

    ನಾಳೆ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್

    ವಾಷಿಂಗ್ಟನ್: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ (Sunita Williams) ಮತ್ತು ಬುಜ್ ವಿಲ್ಮೋರ್ (Butch Wilmore) ಅವರು ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ 5.57ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27) ಭೂಮಿಗೆ ತಲುಪಲಿದ್ದಾರೆ ಎಂದು ನಾಸಾ ತಿಳಿಸಿದೆ.

    ನಮ್ಮ ಗಗನಯಾನಿಗಳನ್ನು ಯಶಸ್ವಿಯಾಗಿ ಕರೆತರುವ ಕೆಲಸ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರಂಭವಾಗಿದೆ. ಫ್ಲೋರಿಡಾದ ಕಡಲ ತೀರಕ್ಕೆ ಬರುವ ನಿರೀಕ್ಷೆಯಿದೆ. ನಾಸಾ ಮತ್ತು ಸ್ಪೇಸ್ ಎಕ್ಸ್ (SpaceX) ಜಂಟಿ ಪ್ರಯತ್ನದ ಮೂಲಕ ವಾಪಸ್ ಕರೆ ತರುವ ಕಾರ್ಯಚರಣೆ ಇದಾಗಿದೆ ಎಂದು ನಾಸಾ ತಿಳಿಸಿದೆ. ಇದನ್ನೂ ಓದಿ: 400ಕ್ಕೂ ಹೆಚ್ಚು ಕರಡಿಗಳ ವಾಸಸ್ಥಾನವಾಗಿರುವ ದರೋಜಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ

    ಸುನಿತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರಲು ಸ್ಪೇಸ್‌ಎಕ್ಸ್‌ನಲ್ಲಿ ಫಾಲ್ಕನ್ 9 ರಾಕೆಟ್ ಅನ್ನು ಮಾ. 15ರಂದು ಉಡಾವಣೆ ಮಾಡಲಾಗಿತ್ತು. ಭಾನುವಾರ (ಮಾ. 16)ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್‌ಎಕ್ಸ್ ತಲುಪಿದ್ದು, ಸುನಿತಾ ವಿಲಿಯಮ್ಸ್ ಹಾಗೂ ಬುಜ್‌ರನ್ನು ಭೂಮಿಗೆ ವಾಪಾಸ್ ಕರೆತರುವ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ವಿದೇಶಕ್ಕೆ ಪ್ರಯಾಣಿಸುವಾಗ ವಿಮಾನದಲ್ಲಿ ಎಷ್ಟು ಚಿನ್ನ, ನಗದು ಕೊಂಡೊಯ್ಯಬಹುದು? ಭಾರತದ ಕಸ್ಟಮ್ಸ್ ನಿಯಮಗಳೇನು?

    ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶ ತಲುಪಿದ್ದರು. ಆದರೆ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಇವರಿಬ್ಬರೂ ಬಾಹ್ಯಾಕಾಶದಲ್ಲಿ 284 ದಿನಗಳನ್ನು ಕಳೆದಿದ್ದಾರೆ.

  • ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಬಟ್ಟೆ ತೊಳೆಯುತ್ತಾರಾ? – ಬಟ್ಟೆ ಕೊಳೆಯಾದ್ರೆ ಏನ್‌ ಮಾಡ್ತಾರೆ?

    ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಬಟ್ಟೆ ತೊಳೆಯುತ್ತಾರಾ? – ಬಟ್ಟೆ ಕೊಳೆಯಾದ್ರೆ ಏನ್‌ ಮಾಡ್ತಾರೆ?

    ಭಾರತ ಮೂಲದ ಅಮೆರಿಕ ಗಗನಯಾನಿ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಹೊತ್ತಲ್ಲೇ, ಬಾಹ್ಯಾಕಾಶದ ಬಗ್ಗೆ ಹಲವಾರು ಪ್ರಶ್ನೆಗಳು ಕೇಳಿಬರುತ್ತಿವೆ. ಕಳೆದ 9 ತಿಂಗಳಿಂದ ಗಗನಯಾತ್ರಿ ಸುನಿತಾ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಅಲ್ಲಿ ಅವರ ದಿನಚರಿ ಹೇಗಿರುತ್ತೆ? ಆರೋಗ್ಯ ಕಾಪಾಡಿಕೊಳ್ಳಲು ಏನೇನು ಕ್ರಮ ಅನುಸರಿಸುತ್ತಾರೆ? ಈಗ ಅವರು ಹೇಗಿದ್ದಾರೆ ಎಂಬುದು ಎಲ್ಲರ ಸದ್ಯದ ಕುತೂಹಲದ ಪ್ರಶ್ನೆಗಳು. ಕೆಲವು ದಿನಗಳ ಮಟ್ಟಿಗೆ ಸಂಶೋಧನೆಗೆಂದು ತೆರಳುವ ಗಗನಯಾತ್ರಿಗಳು, ಈ ರೀತಿ ದೀರ್ಘ ಸಮಯದ ವರೆಗೆ ಬಾಹ್ಯಾಕಾಶದಲ್ಲಿ ತಗಲಾಕಿಕೊಂಡರೆ ಹೇಗಿರುತ್ತೆ ಪರಿಸ್ಥಿತಿ?

    ಗಗನಯಾತ್ರಿಗಳು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಇರಬೇಕಾದ ಪರಿಸ್ಥಿತಿ ಬಂದರೆ, ಅಲ್ಲಿ ಅವರು ತಿನ್ನುತ್ತಾರೆ, ಮಲಗುತ್ತಾರೆ, ಕೆಲಸ ಮಾಡುತ್ತಾರೆ, ವ್ಯಾಯಾಮ ಮಾಡುತ್ತಾರೆ ಮತ್ತು ಆಟಗಳನ್ನೂ ಆಡುತ್ತಾರೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಭೂಮಿಯಿಂದ ಹೊರಡುವಾಗಲೇ ಮಾಡಿಕೊಂಡಿರುತ್ತಾರೆ. ಆದರೆ ಕುತೂಹಲಕಾರಿ ಪ್ರಶ್ನೆಯೊಂದು ಹುಟ್ಟುಕೊಂಡಿದೆ. ಅವರು ಬಾಹ್ಯಾಕಾಶದಲ್ಲಿ ತಮ್ಮ ಬಟ್ಟೆಗಳನ್ನು ತೊಳೆಯುತ್ತಾರೆಯೇ? ಈ ಪ್ರಶ್ನೆಗೆ ಉತ್ತರ ಸರಳವಾಗಿದ್ದರೂ, ಅದರ ಹಿಂದಿನ ಕೌತುಕಗಳು ಎಲ್ಲರನ್ನೂ ಬೆರಗುಗೊಳಿಸುವಂತಿವೆ.

    ಮೊದಲೆಲ್ಲ ಬಾಹ್ಯಾಕಾಶ ಕಾರ್ಯಾಚರಣೆಗಳು ಕೆಲವೇ ದಿನಗಳ ಕಾಲ ನಡೆಯುತ್ತಿದ್ದವು. ಆದ್ದರಿಂದ ಗಗನಯಾತ್ರಿಗಳು ಬಟ್ಟೆಗಳನ್ನು ತೊಳೆಯುವ ಬಗ್ಗೆ ಚಿಂತಿಸದೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಕಾರ್ಯಾಚರಣೆಗಳು ಮೂರರಿಂದ ಎಂಟು ತಿಂಗಳ ವರೆಗೆ ವಿಸ್ತರಿಸಿರುವುದರಿಂದ ಲಾಂಡ್ರಿ ಸೌಲಭ್ಯಗಳಿಲ್ಲದೆ ಅವರು ಹೇಗೆ ನಿಭಾಯಿಸುತ್ತಾರೆ?

    ಬಾಹ್ಯಾಕಾಶದಲ್ಲಿ ಬಟ್ಟೆಗಳನ್ನು ತೊಳೆಯಬಹುದೇ?
    ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಬಟ್ಟೆಗಳನ್ನು ತೊಳೆಯಲು ಸಾಧ್ಯವಿಲ್ಲ. ತಮ್ಮ ಸಂಪೂರ್ಣ ಕಾರ್ಯಾಚರಣೆಗೆ ಸಾಕಷ್ಟು ಬಟ್ಟೆಗಳನ್ನು ಭೂಮಿಯಿಂದಲೇ ಕೊಂಡೊಯ್ಯುವುದು ಸರಳವಾದ ಪರಿಹಾರ ಮಾರ್ಗ. ಬಾಹ್ಯಾಕಾಶದ ಜಾಗದಲ್ಲಿ ನೀರು ಸಿಗಲ್ಲ. ಗಗನಯಾತ್ರಿಗಳು ಕುಡಿಯಲು ಬಳಸುವ ಪ್ರತಿಯೊಂದು ಹನಿ ನೀರನ್ನೂ ಮರುಬಳಕೆ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ ಅಲ್ಲಿ ಬಟ್ಟೆ ತೊಳೆಯುವುದು ಹೇಗೆ ಸಾಧ್ಯ?

    ಒಂದು ಬಟ್ಟೆಯನ್ನು ಎಷ್ಟು ಸಮಯ ಧರಿಸಬಹುದು?
    ಬಾಹ್ಯಾಕಾಶದಲ್ಲಿ ಒಂದು ಬಟ್ಟೆಯನ್ನು ಹಲವು ದಿನಗಳು ಅಥವಾ ಒಂದು ವಾರದ ವರೆಗೆ ಧರಿಸಬಹುದು. ಭೂಮಿಯಂತೆ ಬಾಹ್ಯಾಕಾಶದಲ್ಲಿ ಧೂಳು ಇರುವುದಿಲ್ಲ. ಆದ್ದರಿಂದ ಬಟ್ಟೆಗಳು ಬಹುಬೇಗ ಕೊಳೆ ಆಗುವುದಿಲ್ಲ. ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಐಎಸ್‌ಎಸ್) ನಿಯಂತ್ರಿತ ತಾಪಮಾನವನ್ನು ಸಹ ನಿರ್ವಹಿಸುತ್ತದೆ. ಆದ್ದರಿಂದ ಆಗಾಗ್ಗೆ ಬಟ್ಟೆ ಬದಲಾಯಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ.

    ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಬೆವರುತ್ತಾರಾ?
    ಬಾಹ್ಯಾಕಾಶದಲ್ಲಿ ಗುರುತ್ವಾರ್ಷಣೆ ಬಲ ಇರಲ್ಲ ಎಂಬುದು ನಿಮಗೆಲ್ಲ ತಿಳಿದೇ ಇದೆ. ಗಗನಯಾತ್ರಿಗಳು ಮೈಕ್ರೊಗ್ರಾವಿಟಿಯಲ್ಲಿ ನಿತ್ಯದ ಚಟುವಟಿಕೆಯಲ್ಲಿ ಹೆಚ್ಚು ಶ್ರಮವಹಿಸುವ ಅಗತ್ಯವಿರುವುದಿಲ್ಲ. ಹೀಗಾಗಿ, ಅವರು ಬೆವರುವ ಸಾಧ್ಯತೆ ತುಂಬಾ ಕಡಿಮೆ. ಆದರೆ, ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚಿನ ವ್ಯಾಯಾಮ ಮಾಡಬೇಕಾಗುತ್ತದೆ. ಈ ತೀವ್ರವಾದ ದೈಹಿಕ ಚಟುವಟಿಕೆಯು ಅವರನ್ನು ಹೆಚ್ಚು ಬೆವರುವಂತೆ ಮಾಡುತ್ತದೆ. ಪರಿಣಾಮ ಅವರ ಬಟ್ಟೆಗಳು ಕೊಳೆಯಾಗುತ್ತವೆ.

    ಬಳಸಿದ ಬಟ್ಟೆಗಳ ಕಥೆಯೇನು?
    ಗಗನಯಾತ್ರಿಗಳು ಬಳಸುವ ಬಟ್ಟೆಗಳನ್ನು ಕೊಳಕಾಯಿತು ಎಂದರೆ, ಅಲ್ಲಿಗೆ ಅವುಗಳ ಕಥೆ ಮುಗಿಯಿತು ಎಂದೇ ಅರ್ಥ. ಅವುಗಳನ್ನು ಮರುಬಳಕೆ ಮಾಡುವಂತಿಲ್ಲ. ಬಟ್ಟೆಗಳನ್ನು ತೊಳೆಯಬೇಕು ಎಂದರೆ ಭೂಮಿಗೆ ವಾಪಸ್ ತರಬೇಕಾಗುತ್ತದೆ. ಗಗನಯಾತ್ರಿಗಳು ಕಾರ್ಯಾಚರಣೆ ಮುಗಿಸಿ ವಾಪಸ್ ಆಗುವಾಗ ಸರಕು ವಾಹನಗಳಲ್ಲಿ ಬಟ್ಟೆಗಳನ್ನೂ ಪ್ಯಾಕ್ ಮಾಡಿ ತರಲಾಗುತ್ತದೆ. ಬಾಹ್ಯಾಕಾಶದಲ್ಲಿ ತ್ಯಾಜ್ಯ ಉಂಟಾಗುವಂತೆ ಮಾಡಬಾರದು ಎಂಬುದು ಇದರ ಉದ್ದೇಶ. ಭೂಮಿಗೆ ಹಿಂತಿರುಗಿ ತಂದ ಮೇಲೆ ಅವುಗಳನ್ನು ಸುಡಲಾಗುತ್ತದೆ.

    ಬಾಹ್ಯಾಕಾಶದಲ್ಲೂ ಬಟ್ಟೆ ತೊಳೆಯಲು ನಡೆದಿದ್ಯಾ ಸಂಶೋಧನೆ?
    ಭವಿಷ್ಯದಲ್ಲಿ ಮಂಗಳ ಗ್ರಹದ ಮೇಲೆ ಹಲವಾರು ಕಾರ್ಯಾಚರಣೆಗಳನ್ನು ನಡೆಸಲು ವಿಜ್ಞಾನಿಗಳು ಯೋಜಿಸಿದ್ದಾರೆ. ಹೆಚ್ಚಿನ ಪ್ರಮಾಣದ ಬಟ್ಟೆಗಳನ್ನು ಒಯ್ಯುವುದು ಬಾಹ್ಯಾಕಾಶ ನೌಕೆಗೆ ಅನಗತ್ಯ ಭಾರವನ್ನು ಸೇರಿಸಿದಂತೆಯೇ ಅರ್ಥ. ಆದ್ದರಿಂದ, ಹೆಚ್ಚಿನ ಪ್ರಮಾಣದ ನೀರನ್ನು ಬಳಸದೇ ಬಾಹ್ಯಾಕಾಶದಲ್ಲಿ ಪರಿಣಾಮಕಾರಿಯಾಗಿ ಬಟ್ಟೆಗಳನ್ನು ತೊಳೆಯುವ ಮಾರ್ಗ ಕಂಡುಕೊಳ್ಳಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

    2023ರಲ್ಲಿ ‘ಟೈಡ್ ಇನ್ಫಿನಿಟಿ’ ಎಂಬ ವಿಶೇಷ ಡಿಟರ್ಜೆಂಟ್ ಅನ್ನು ಅಭಿವೃದ್ಧಿಪಡಿಸಲಾಯಿತು. ಸಾಮಾನ್ಯ ಪ್ರಮಾಣಕ್ಕಿಂತ ಅರ್ಧ ನೀರಿನಿಂದ ಬಟ್ಟೆಗಳನ್ನು ತೊಳೆಯಲು ಇದನ್ನು ವಿನ್ಯಾಸಗೊಳಿಸಲಾಯಿತು. ಆದರೆ, ನಾಸಾ ಇದನ್ನು ಇನ್ನೂ ಜಾರಿಗೆ ತಂದಿಲ್ಲ. ಅಷ್ಟೇ ಅಲ್ಲ, ಸಂಶೋಧಕರು ‘ವಾಷರ್-ಡ್ರೈಯರ್’ ಸಂಯೋಜನೆಯ ಮೇಲೆ ರಿಸರ್ಚ್ ಮಾಡುತ್ತಿದ್ದಾರೆ. ಅದು ಚಂದ್ರ ಮತ್ತು ಮಂಗಳದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಭೂಮಿಯ ಮೇಲಿನ ಶುಷ್ಕ ಪ್ರದೇಶಗಳಲ್ಲಿ ಸಹ ಪ್ರಯೋಜನಕಾರಿಯಾಗಿದೆ.

    ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಯಾವಾಗ?
    ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಮಾರ್ಚ್ ತಿಂಗಳಲ್ಲಿ ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ. 2024ರ ಜೂ.5 ರಂದು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಸುನಿತಾ ಮತ್ತು ವಿಲ್ಮೋರ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ (ಐಎಸ್‌ಎಸ್) ಪ್ರಯಾಣ ಬೆಳೆಸಿದ್ದರು. 8 ದಿನಗಳ ಕಾರ್ಯಾಚರಣೆ ಅದಾಗಿತ್ತು. ಎಂಟು ದಿನಗಳ ಬಳಿಕ ಅವರು ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದ ಅವರು ಹಿಂತಿರುಗಲು ಸಾಧ್ಯವಾಗಿಲ್ಲ.

    ಈ ಹಿಂದೆಯೇ ಏಪ್ರಿಲ್‌ನಲ್ಲಿ ಇಬ್ಬರನ್ನೂ ಕರೆತರುವುದಾಗಿ ನಾಸಾ ತಿಳಿಸಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಇಬ್ಬರೂ ಗಗನಯಾತ್ರಿಗಳನ್ನು ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ಕ್ಯಾಪ್ಲ್ಯುಯಲ್‌ನಲ್ಲಿ ವಾಪಸ್ ಭೂಮಿಗೆ ಕರೆತರಲು ನಾಸಾ ಸಿದ್ಧತೆ ನಡೆಸಿದೆ. ಕಳೆದ 8 ತಿಂಗಳಿಂದ ಇಬ್ಬರೂ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಈ ಹಿಂದೆ ಅಲ್ಲಿಂದಲೇ ಬಿಡುಗಡೆ ಮಾಡಿದ ವೀಡಿಯೋಗಳಲ್ಲಿ, ‘ನಾವು ಆರೋಗ್ಯವಾಗಿದ್ದೇವೆ’ ಸ್ಪಷ್ಟಪಡಿಸಿದ್ದಾರೆ.

  • ಇಸ್ರೋ ಸಾಧನೆ – ಡಾಕಿಂಗ್‌ ಪ್ರಕ್ರಿಯೆ ಹೇಗೆ ನಡೆಯಿತು? ಪ್ರಯೋಜನ ಏನು?

    ಇಸ್ರೋ ಸಾಧನೆ – ಡಾಕಿಂಗ್‌ ಪ್ರಕ್ರಿಯೆ ಹೇಗೆ ನಡೆಯಿತು? ಪ್ರಯೋಜನ ಏನು?

    ನವದೆಹಲಿ: ಹೊಸ ವರ್ಷದ ಆರಂಭದಲ್ಲಿಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಇತಿಹಾಸ ಸೃಷ್ಟಿಸಿದೆ. ಸ್ಪೇಡೆಕ್ಸ್ (SpaDEx)ಮಿಷನ್ ಭಾಗವಾಗಿ ಡಿಸೆಂಬರ್ 30ರಂದು ಭೂಕಕ್ಷೆಗೆ ಕಳಿಸಿದ್ದ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಅಂತರಿಕ್ಷದಲ್ಲಿ ಅನುಸಂಧಾನ ಮಾಡಿದೆ. ಈ ಮೂಲಕ ಡಾಕಿಂಗ್ (Docking) ಘನತೆ ಸಾಧಿಸಿದ ಜಗತ್ತಿನ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಅಮೆರಿಕಾ, ಚೀನಾ, ರಷ್ಯಾ ಸಾಲಿಗೆ ಭಾರತವೂ ಸೇರಿಕೊಂಡಿದೆ.

    ಡಿ.30 ರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಿತ್ತು. ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (PSLV) ರಾಕೆಟ್ ಈ ಪ್ರಯೋಗದ ಭಾಗವಾಗಿದ್ದ ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು.

     

    ಭೂಮಿಯಿಂದ 475 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಸಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಪ್ರಯೋಗ ಮುಂದೂಡಿಕೆಯಾಗಿತ್ತು. ತನ್ನ ನಾಲ್ಕನೇ ಪ್ರಯತ್ನದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲಿಗೆ ಎರಡು ಉಪಗ್ರಹಗಳನ್ನು 15 ಮೀಟರ್ ಸನಿಹಕ್ಕೆ ತರಲಾಯಿತು. ನಂತರ ಅಂತರವನ್ನು 3 ಮೀಟರ್‌ಗೆ ಕುಗ್ಗಿಸಲಾಯಿತು. ಅಲ್ಲಿಯೇ ಡಾಕಿಂಗ್ ಪ್ರಕ್ರಿಯೆ ಮೂಲಕ ಎರಡನ್ನು ಯಶಸ್ವಿಯಾಗಿ ಅನುಸಂಧಾನ ಮಾಡಲಾಯಿತು.

    ಈ ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ಸಂಭ್ರಮಿಸಿದರು. ಇದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸಿದ ತಜ್ಞರಿಗೆ, ಕೋಟಿ ಕೋಟಿ ಭಾರತೀಯರಿಗೆ ಇಸ್ರೋ ಅಭಿನಂದನೆ ತಿಳಿಸಿತು. ರಾಷ್ಟ್ರಪತಿ, ಮೋದಿ ಸೇರಿ ಗಣ್ಯರು ಇಸ್ರೋ ಸಾಧನೆಯ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

    ಡಾಕಿಂಗ್ ಪ್ರಕ್ರಿಯೆ ಹೇಗೆ ನಡೆಯಿತು?
    20 ಕಿ.ಮೀ ಅಂತರದಲ್ಲಿ ಗಂಟೆಗೆ 28 ಸಾವಿರ ಕಿ.ಮೀ ವೇಗದಲ್ಲಿ 2 ಉಪಗ್ರಹಗಳು ಸುತ್ತುತ್ತಿದ್ದವು. ಮೊದಲಿಗೆ `ಟಾರ್ಗೆಟ್’ ವೇಗವನ್ನು ಕುಗ್ಗಿಸಲಾಯಿತು. ಹಂತಹಂತವಾಗಿ `ಚೇಸರ್’ ಸನಿಹಕ್ಕೆ ತರಲಾಯಿತು. `ಚೇಸರ್’ ಕೂಡ ಟಾರ್ಗೆಟ್ ವೇಗಕ್ಕೆ ಅನುಗುಣವಾಗಿ ತನ್ನ ವೇಗವನ್ನು ನಿಯಂತ್ರಿಸಿಕೊಳ್ಳುತ್ತಿತ್ತು.

    ಮೊದಲಿಗೆ 1.5ಕಿ.ಮೀ., 500ಮೀ., 15 ಮೀ., 3 ಮೀ., ಹೀಗೆ ಹಂತ ಹಂತವಾಗಿ ಎರಡನ್ನು ಸನಿಹಕ್ಕೆ ತರಲಾಯಿತು. ಅಂತರ 3 ಮೀ. ಇರುವಾಗ ಡಾಕಿಂಗ್ ಪ್ರಕ್ರಿಯೆ ಆರಂಭವಾಯಿತು. ಒಂದರ ಯಾಂತ್ರಿಕ ಹಸ್ತಗಳು ಇನ್ನೊಂದನ್ನು ಹಿಡಿದವು.

    ಟಾರ್ಗೆಟ್ ಡಾಕಿಂಗ್ ವ್ಯವಸ್ಥೆ ಪ್ರವೇಶ ಮಾಡಿದ ಚೇಸರ್ ವ್ಯವಸ್ಥೆ ಎರಡೂ ಪೋರ್ಟ್‌ಗಳು ಯಶಸ್ವಿಯಾಗಿ ಅನುಸಂಧಾನಗೊಂಡವು. ಡಾಕಿಂಗ್ ಪ್ರಕಿಯೆ ಮುಗಿದ ಬೆನ್ನಲ್ಲೇ ಒಂದೇ ವ್ಯವಸ್ಥೆಯಾಗಿ 2 ಉಪಗ್ರಹಗಳು ಮಾರ್ಪಟ್ಟವು.

    ಪ್ರಯೋಜನ ಏನು?
    ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ.

    ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು. ಡಾಕಿಂಗ್ ಪ್ರಕ್ರಿಯೆಯ ಯಶಸ್ಸು ಇದರ ಮೊದಲ ಹೆಜ್ಜೆ ಆಗಿದೆ. ಕಕ್ಷೆಯಲ್ಲಿ ಉಪಗ್ರಹ ರಿಪೇರಿ, ಇಂಧನ ಭರ್ತಿಗೂ ಇದು ಅನುಕೂಲಕರ.

  • ಇಸ್ರೋ ಐತಿಹಾಸಿಕ ಸಾಧನೆ| ಡಾಕಿಂಗ್‌ ಸಾಹಸ ಯಶಸ್ವಿ – ಸಾಧನೆಗೈದ ವಿಶ್ವದ 4ನೇ ದೇಶ ಭಾರತ

    ಇಸ್ರೋ ಐತಿಹಾಸಿಕ ಸಾಧನೆ| ಡಾಕಿಂಗ್‌ ಸಾಹಸ ಯಶಸ್ವಿ – ಸಾಧನೆಗೈದ ವಿಶ್ವದ 4ನೇ ದೇಶ ಭಾರತ

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ಐತಿಹಾಸಿಕ ಸಾಧನೆ ಮಾಡಿದೆ. ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್‌ (Docking) ಪ್ರಯೋಗ ಯಶಸ್ವಿಯಾಗಿದ್ದು ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

    ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿತ್ತು.

    ಡಿ.30 ರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಿತ್ತು. ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (PSLV) ರಾಕೆಟ್ ಈ ಪ್ರಯೋಗದ ಭಾಗವಾಗಿದ್ದ ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು.

    ಭೂಮಿಯಿಂದ 475 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಸಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಪ್ರಯೋಗ ಮುಂದೂಡಿಕೆಯಾಗಿತ್ತು. ತನ್ನ ನಾಲ್ಕನೇ ಪ್ರಯತ್ನದಲ್ಲಿ  ಇಸ್ರೋ  ಡಾಕಿಂಗ್‌ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ಏನಿದು ಪ್ರಯೋಗ?
    ಈ ಎರಡು ಉಪಗ್ರಹಗಳು ತನ್ನಲ್ಲಿರುವ ಸೆನ್ಸರ್‌, ವ್ಯವಸ್ಥೆಯನ್ನು ಬಳಸಿ ಒಂದಕ್ಕೊಂದು ಜೋಡಣೆ ಆಗುವಂತೆ ಮಾಡುವುದು. ನಂತರ ಪರಸ್ಪರ ಬೇರೆಯಾಗುವಂತೆ ಮಾಡಲು ಇಸ್ರೋ ಈ ಪ್ರಯೋಗ ನಡೆಸಿತ್ತು. ಈ ಕಾರಣಕ್ಕೆ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (Spadex ) ಎಂಬ ಹೆಸರನ್ನು ಇಡಲಾಗಿತ್ತು. ತಲಾ 220 ಕೆಜಿ ತೂಗುವ ಸ್ಪೇಡೆಕ್ಸ್‌ 1 ಮತ್ತು ಸ್ಪೇಡೆಕ್ಸ್‌ 2 ನೌಕೆಗಳನ್ನು ಪರಸ್ಪರ ಕೇವಲ  ಪರಸ್ಪರ 15 ಮೀಟರ್‌ ಅಂತರಕ್ಕೆ ಆರಂಭದಲ್ಲಿ ತರಲಾಗಿತ್ತು. ನಂತರ  3 ಮೀಟರ್‌ ಸನಿಹಕ್ಕೆ ತಂದ ಬಳಿಕ ಈ ಡಾಕಿಂಗ್‌ ಪ್ರಕ್ರಿಯೆ ಆರಂಭಿಸಿತ್ತು.

    ಇಸ್ರೋ ಜ.7 ಮತ್ತು 8 ರಂದು ಪ್ರಯೋಗ ಮಾಡಲು ಮುಂದಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಪ್ರಯೋಗವನ್ನು ಮುಂದೂಡಿತ್ತು. ಜ.12 ರಂದು ಪ್ರಯೋಗ ಆರಂಭಿಸಿತ್ತು.

    ಯಾಕೆ ಇಷ್ಟೊಂದು ಮಹತ್ವ?
    ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು.

  • ಸುನೀತಾ ವಿಲಿಯಮ್ಸ್‌ ಇನ್ನೂ 6 ತಿಂಗಳು ಭೂಮಿಗೆ ಬರಲ್ಲ – ಅಲ್ಲಿವರೆಗೂ ಗಗನಯಾನಿಗಳಿಗೆ ಆಹಾರ ವ್ಯವಸ್ಥೆ ಹೇಗೆ?

    ಸುನೀತಾ ವಿಲಿಯಮ್ಸ್‌ ಇನ್ನೂ 6 ತಿಂಗಳು ಭೂಮಿಗೆ ಬರಲ್ಲ – ಅಲ್ಲಿವರೆಗೂ ಗಗನಯಾನಿಗಳಿಗೆ ಆಹಾರ ವ್ಯವಸ್ಥೆ ಹೇಗೆ?

    ವಾಷಿಂಗ್ಟನ್‌: ಕಳೆದ ಜೂನ್‌ 5ರಂದು ಬಾಹ್ಯಾಕಾಶಕ್ಕೆ (Space) ತೆರಳಿದ್ದ ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಂದು ವಾರದ ಅವಧಿಗೆಂದು ಹೋದ ಅವರು ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

    ಸದ್ಯ ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿಕೊಂಡಿದ್ದಾರೆ. ಈ ಇಬ್ಬರು ಗಗನಯಾತ್ರಿಗಳು ಮುಂದಿನ ವರ್ಷ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ. ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ-9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೇ ಹಿಂತಿರುಗುತ್ತಾರೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ.

    ಆಹಾರ ವ್ಯವಸ್ಥೆ ಹೇಗೆ?
    ಸದ್ಯ ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿರುವ ಗಗನ ಯಾನಿಗಳಿಗೆ ಆಹಾರ ಪೂರೈಕೆ ಹೇಗೆ ಸಾಧ್ಯ ಎನ್ನುವುದರ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ. ಇದಕ್ಕೆ ನಾಸಾ ಮಾಸ್ಟರ್‌ ಪ್ಲ್ಯಾನ್‌ ಸಹ ಮಾಡಿಕೊಂಡಿದೆ. ಹೌದು. ಮಾನವ ಸಹಿತ ನೌಕೆಯ ಉಡ್ಡಯನ ಸಾಧ್ಯವಾಗದೇ ಇದ್ದರೂ, ಸರಕು ಸಾಗಾಣೆಗೆ ಇರುವ ನೌಕೆಗಳು ಬಾಹ್ಯಾಕಾಶ ಕೇಂದ್ರಕ್ಕೆ ಆಗಾಗ್ಗೆ ಹೋಗಿಬರುತ್ತವೆ. ಅದರ ಮೂಲಕವೇ ಸುನೀತಾ ಹಾಗೂ ವಿಲ್ಮೋರ್‌ ಅವರಿಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲು ನಾಸಾ ನಿರ್ಧರಿಸಿದೆ.

    ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕಳೆದ ಜೂನ್‌ 5ರಂದು ಆರಂಭಿಸಿದ್ದರು. ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು 1 ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. ಇವರು ಯಾವಾಗ ಬರುತ್ತಾರೆ ಎಂಬುದರ ಕುರಿತು ನಾಸಾ ಈಗ ಮಾಹಿತಿ ನೀಡಿದೆ.

  • ಆದಿತ್ಯ-L1 ಮಿಷನ್‌ ಸಕ್ಸಸ್‌; ನಿಗದಿತ ಕಕ್ಷೆ ತಲುಪಿದ ನೌಕೆ – ISRO ಸಾಧನೆಗೆ ಮೋದಿ ಮೆಚ್ಚುಗೆ

    ಆದಿತ್ಯ-L1 ಮಿಷನ್‌ ಸಕ್ಸಸ್‌; ನಿಗದಿತ ಕಕ್ಷೆ ತಲುಪಿದ ನೌಕೆ – ISRO ಸಾಧನೆಗೆ ಮೋದಿ ಮೆಚ್ಚುಗೆ

    ಬೆಂಗಳೂರು: 110 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೋ ಆದಿತ್ಯ ಎಲ್1 (Aditya-L1) ನೌಕೆಯು ‌15 ಲಕ್ಷ ಕಿಮೀ ಕ್ರಮಿಸಿ ಅಂತಿಮ ಕಕ್ಷೆ ತಲುಪಿದೆ. ಈ ಮೂಲಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

    ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್‌ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ (Space) ನೌಕೆಯನ್ನು ಕಳುಹಿಸಿತ್ತು. ಶನಿವಾರ ಬೆಳಗ್ಗಿನಿಂದಲೇ ಹಾಲೋ ಆರ್ಬಿಟ್ ಅಳವಡಿಕೆಯ ಕಾರ್ಯವನ್ನು ಮುಂದುವರಿಸಿ ಲಗ್ರೇಂಜ್‌ ಪಾಯಿಂಟ್-1 ರಲ್ಲಿ ಇರಿಸಲು ಪ್ರಾರಂಭಿಸಿತ್ತು. ಅಂದುಕೊಂಡಂತೆ ಆದಿತ್ಯ ಎಲ್‌-1 ನೌಕೆಯು ನಿಗದಿತ ಕಕ್ಷೆ ತಲುಪಿದ್ದು, ದೊಡ್ಡ ಯಶಸ್ಸು ತಂದುಕೊಟ್ಟಿದೆ. 2023ರ ಚಂದ್ರಯಾನ-3 ಯಶಸ್ವಿ ಬಳಿಕ ಇಸ್ರೋ (ISRO) ಸ್ಥಾಪಿಸಿದ ಮಹತ್ವದ ಮೈಲುಗಲ್ಲು ಇದಾಗಿದೆ.

    ಇನ್ಮುಂದೆ ಆದಿತ್ಯ L1 ನೌಕೆಯು ನಿಗದಿತ ಕಕ್ಷೆಯಲ್ಲಿ ನಿಂತು ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಅಧ್ಯಯನ ನಡೆಸಲಿದೆ.

    ಇಸ್ರೋದ ಮಹತ್ವದ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತ ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ಸಾಕ್ಷಾತ್ಕಾರದಲ್ಲಿ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ದೇಶದ ಜನತೆಯೊಂದಿಗೆ ಸೇರಿ ಶ್ಲಾಘಿಸುತ್ತೇನೆ. ಜೊತೆಗೆ ಮಾನವ ಪ್ರಯೋಜನಗಳಿಗಾಗಿ ವಿಜ್ಞಾನದ ಅನ್ವೇಷಣೆಗಳನ್ನು ಮುಂದುವರಿಸುತ್ತೇವೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಸೂರ್ಯನತ್ತ ಜಿಗಿದವರು ಯಾರ‍್ಯಾರು?
    1960ರಲ್ಲಿ ಅಮೆರಿಕ ನಾಸಾ ಕೈಗೊಂಡಿದ್ದ ಪಯೋನಿರ್‌-5 ಮೊಟ್ಟ ಮೊಲದ ಸೂರ್ಯನ ಅನ್ವೇಷಣೆಯಾಗಿತ್ತು. ಈವರೆಗೆ ಒಟ್ಟು 14 ಬಾರಿ ಸೂರ್ಯನ ಅನ್ವೇಷಣೆಗಳನ್ನ ಕೈಗೊಂಡಿದೆ. ಅಮೆರಿಕ, ಜರ್ಮನಿ ಹಾಗೂ ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಸೇರಿ ಒಟ್ಟು 22 ಬಾರಿ ಸೂರ್ಯನ ಕಾರ್ಯಾಚರಣೆ ನಡೆದಿದೆ

    ಯಾವುದು ಹೇಗೆ ಕಾರ್ಯ ನಿರ್ವಹಿಸುತ್ತವೆ?
    * ವಿಸಿಬಲ್ ಎಮಿಷನ್ ಲೈನ್ ಕರೊನಾಗ್ರಾಫ್ (VELC):
    ಈ ಪೇಲೋಡ್ ಸೂರ್ಯನ ವಾತಾವರಣದ ಅತ್ಯಂತ ಹೊರಪದರವಾದ ಕರೊನಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ.

    * ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT):
    ಈ ಪೇಲೋಡ್ ಸೂರ್ಯನ ವಾತಾವರಣದ ಒಂದು ಪದರವಾದ ಕ್ರೋಮೊಸ್ಪಿಯರ್ ಚಿತ್ರಗಳನ್ನ ತೆಗೆಯಲಿದೆ. ಈ ಕ್ರೋಮೊಸ್ಪಿಯರ್ ಎನ್ನುವುದು ಸೂರ್ಯನ ವಾತಾವರಣದಲ್ಲಿ ಫೋಟೊಸ್ಪಿಯ‌ರ್‌ ಮೇಲಿರುತ್ತದೆ.

    * ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪಿರಿಮೆಂಟ್‌ (ASPEX):
    ಈ ಪೇಲೋಡ್ ಸೋಲಾರ್‌ ವಿಂಡ್, ಅಂದರೆ ಚಾರ್ಜ್‌ ಹೊಂದಿರುವ ಕಣಗಳ ಚಲನೆಯನ್ನ ಅಳೆಯಲು ಬಳಕೆಯಾಗುತ್ತದೆ.

    * ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ (PAPA):
    ಈ ಪೇಲೋಡ್‌ ಸೂರ್ಯನ ಸುತ್ತಲೂ ಇರುವ ಪ್ಲಾಸ್ಮಾ ಅಥವಾ ಚಾರ್ಜ್ ಹೊಂದಿರುವ ಅನಿಲವನ್ನ ಅಳೆಯಲು ನೆರವಾಗುತ್ತದೆ.

    * ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟೋಮೀಟ‌ರ್‌ (SOLEXS):
    ಸೂರ್ಯನಿಂದ ಹೊರಬರುವ ಉತ್ಕೃಷ್ಟ ಶಕ್ತಿಯ ಎಕ್ಸ್-ರೇಗಳನ್ನು ಅಳೆಯುವ ಪೇಲೋಡ್ ಇದು.

    * ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್ ರೇ ಸೆಕ್ಟೋಮೀಟರ್ (HEL1OS):
    ಈ ಪೇಲೋಡ್ ಸೂರ್ಯನಿಂದ ಹೊರಬರುವ ಹೈ ಎನರ್ಜಿ ಎಕ್ಸ್ ರೇ ಹೊರಸೂಸುವಿಕೆಯನ್ನು ಅಳೆಯುತ್ತದೆ.

    * ಮ್ಯಾಗ್ನೆಟೊಮೀಟರ್:
    ಸೂರ್ಯನ ಮತ್ತು ಸುತ್ತಮುತ್ತಲಿನ ಕಾಂತಕ್ಷೇತ್ರವನ್ನು ಅಳೆಯುವ ಪೇಲೋಡ್ ಇದು.

  • ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು? 

    ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು? 

    ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ISRO) ಇತ್ತೀಚೆಗಷ್ಟೇ ಚಂದ್ರಯಾನ-3 (Chandrayaan-3) ಯಶಸ್ವಿ ಕಂಡು, ಇದೀಗ ಸೂರ್ಯಯಾನ ಯಶಸ್ಸಿನ ನಿರೀಕ್ಷೆಯಲ್ಲಿದೆ. ನಾವು ಗಗನಯಾತ್ರೆ ಎಂದಾಕ್ಷಣ ಸಾಮಾನ್ಯರ ಮನಸ್ಸಿನಲ್ಲಿ ಏನೋ ಒಂದು ಕೌತುಕ, ಮನಸ್ಸಿನಲ್ಲಿ ತಮ್ಮದೇ ಕಲ್ಪನೆ. ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲಿ (Space) ಹಕ್ಕಿಯಂತೆ ಹಾರಾಡುವ ಅದ್ಭುತವೇ ಸರಿ. ಆದ್ರೆ ಬಾಹ್ಯಾಕಾಶದಲ್ಲಿ ಹಕ್ಕಿಗಳಂತೆ ಹಾರಾಡಿ ಮತ್ತು ಮನುಷ್ಯ ಸಹಜ ಜೀವನಕ್ಕೆ ತೆರೆದುಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆಂದೇ ಸೂಕ್ತ ಮಾರ್ಪಾಡುಗಳನ್ನ ಮಾಡಿಕೊಳ್ಳಬೇಕಾಗುತ್ತೆ. 

    ಹೌದು. ಬಾಹ್ಯಾಕಾಶ ಪ್ರಯಾಣ ಕೈಗೊಂಡ ಬಳಿಕ, ಗಗನಯಾತ್ರಿಗಳು ಬಾಹ್ಯಾಕಾಶದ ಕನಿಷ್ಠ ಗುರುತ್ವಾಕರ್ಷಣೆಯ (Gravity) ಕಾರಣದಿಂದ ಒಂದಷ್ಟು ಆರೋಗ್ಯ ಸಂಬಂಧಿ ವಿಚಾರಗಳು (Health Issues) ಹಾಗೂ ಶಾರೀರಿಕ ಬದಲಾವಣೆಗಳನ್ನ ಎದುರಿಸುವ ಸಾಧ್ಯತೆಗಳಿವೆ. ಅದರಲ್ಲಿನ ಕೆಲವು ಪರಿಸ್ಥಿತಿಗಳನ್ನ ನಾವಿಲ್ಲಿ ಕಾಣಬಹುದು. 

    ಮೂಳೆಗಳು ಬಲಹೀನವಾಗುತ್ತವೆ:

    ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ ದೀರ್ಘಕಾಲದ ತನಕ ಕನಿಷ್ಠ ಗುರುತ್ವಾಕರ್ಷಣೆಗೆ ಒಳಗಾಗುವುದು ಸ್ನಾಯು ಕ್ಷೀಣತೆಯ ಸಮಸ್ಯೆ ಉಂಟುಮಾಡಬಲ್ಲದು. ಅಂದರೆ, ಕಡಿಮೆ ದೈಹಿಕ ಚಟುವಟಿಕೆಗಳ ಕಾರಣದಿಂದ ಸ್ನಾಯುಗಳ ಅಂಗಾಂಶಗಳು ಕ್ರಮೇಣ ಕಡಿಮೆಯಾಗಿ, ಶಕ್ತಿ ಕಳೆದುಕೊಳ್ಳುತ್ತವೆ. 

    ಗಗನಯಾತ್ರಿಗಳು (Astronauts) ಸಾಮಾನ್ಯವಾಗಿ ಈ ಸಮಸ್ಯೆಯನ್ನ ಎದುರಿಸಿ, ಭೂಮಿಗೆ ಮರಳಿದ ಬಳಿಕ, ಸ್ನಾಯು ಭಾರ ಮತ್ತು ಶಕ್ತಿಯನ್ನ ಮರಳಿ ಪಡೆಯಲು ದೈಹಿಕ ಪುನರ್ವಸತಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸ್ನಾಯು ಕ್ಷೀಣತೆಯ ಕಾರಣದಿಂದ, ದುರ್ಬಲತೆ ಮತ್ತು ಚಲನಹೀನತೆ ಉಂಟಾಗಬಹುದು. ಇದನ್ನ ಎದುರಿಸಲು, ಗಗನಯಾತ್ರಿಗಳು ದೈಹಿಕ ಚಿಕಿತ್ಸೆ, ಶಕ್ತಿ ತರಬೇತಿ ಹಾಗೂ ನಿರಂತರ ವ್ಯಾಯಾಮ ನಡೆಸುತ್ತಾರೆ. ಅದರೊಂದಿಗೆ ಮೂಳೆಯ ಸಾಂದ್ರತೆ ಕಳೆದುಕೊಳ್ಳುವುದು ಬಾಹ್ಯಾಕಾಶದಲ್ಲಿ ಇನ್ನೊಂದು ಕಳವಳಕಾರಿ ವಿಚಾರ. ಇದರಿಂದಾಗಿ ಮೂಳೆಗಳು ಬಲಹೀನವಾಗುತ್ತವೆ. ಗಗನಯಾತ್ರಿಗಳು ಇದನ್ನ ಎದುರಿಸಲು ನಿಯಮಿತ ವ್ಯಾಯಾಮ, ಉತ್ತಮ ಪೋಷಕಾಂಶಗಳ ಸೇವನೆಯಂತಹ ಕ್ರಮಗಳನ್ನ ಕೈಗೊಳ್ಳುತ್ತಾರೆ.

    ಹೃದಯ ಬಡಿತ ಹೆಚ್ಚಾಗುತ್ತೆ, ತಲೆ ಸುತ್ತು ಜಾಸ್ತಿಯಾಗುತ್ತೆ:

    ಬಾಹ್ಯಾಕಾಶ ಪ್ರಯಾಣ ಗಗನಯಾತ್ರಿಗಳಲ್ಲಿ ಆರ್ಥೋಸ್ಟಾಟಿಕ್ ಇಂಟಾಲರೆನ್ಸ್ (ಮಾನಸಿಕ ಅಸಹಿಷ್ಣುತೆ) ಸೇರಿದಂತೆ, ಹೃದಯದ ರಕ್ತನಾಳದ ಬದಲಾವಣೆಗಳನ್ನ ತರಬಲ್ಲದು. ಇದರ ಪರಿಣಾಮವಾಗಿ ಅವರಲ್ಲಿ ಕುಳಿತಲ್ಲಿಂದ ಅಥವಾ ಮಲಗಿದಲ್ಲಿಂದ ಎದ್ದು ನಿಲ್ಲುವಾಗ ತಲೆಸುತ್ತು, ಮೂರ್ಛೆ ಹೋಗುವುದು ಅಥವಾ ಹೃದಯ ಬಡಿತ ಪ್ರಮಾಣ ಹೆಚ್ಚಳ ಕಂಡುಬರಬಹುದು. ಈ ಪರಿಸ್ಥಿತಿ ರಕ್ತದೊತ್ತಡದ ನಿಯಂತ್ರಣದಲ್ಲಿನ ಬದಲಾವಣೆ ಹಾಗೂ ಸ್ವಯಂಚಾಲಿತ ನರಮಂಡಲದ ಕಾರ್ಯಾಚರಣೆಯ ಕಾರಣದಿಂದ ಉಂಟಾಗಬಹುದು. ಇದರ ಚಿಕಿತ್ಸೆ ಸಾಮಾನ್ಯವಾಗಿ ಜೀವನಶೈಲಿಯಲ್ಲಿನ ಬದಲಾವಣೆ, ಹೆಚ್ಚಿನ ದ್ರವ ಆಹಾರ ಮತ್ತು ಉಪ್ಪಿನ ಸೇವನೆ, ಸಂಕೋಚನ ವಸ್ತ್ರಗಳನ್ನು ಧರಿಸುವುದು (ದೇಹಕ್ಕೆ ಆರಾಮದಾಯಕ ಹಾಗೂ ಸುರಕ್ಷಿತ ಅನ್ನಿಸುವ ಉಡುಪುಗಳು) ಮತ್ತು ಕೆಲವು ಸಂದರ್ಭಗಳಲ್ಲಿ ಸುಗಮವಾಗಿ ಎದ್ದು ನಿಲ್ಲುವಂತಾಗಲು ಔಷಧೀಯ ಕ್ರಮಗಳನ್ನೂ ಒಳಗೊಂಡಿರುತ್ತದೆ.

    ದೃಷ್ಟಿಯ ಬದಲಾವಣೆಗಳು: 

    ಕೆಲವು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಣ್ಣಿನ ಸಮಸ್ಯೆಗಳನ್ನೂ ಎದುರಿಸುತ್ತಾರೆ. ಉದಾಹರಣೆಗೆ ಕಣ್ಣುಗಳಲ್ಲಿ ದ್ರವದ ಬದಲಾವಣೆಗಳು ದೃಷ್ಟಿಯನ್ನು ದುರ್ಬಲಗೊಳಿಸಬಹುದು. ಈ ಸ್ಥಿತಿಯನ್ನು ಸ್ಪೇಸ್ ಫ್ಲೈಟ್-ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ (ಎಸ್ಎಎನ್ಎಸ್) ಎಂದು ಕರೆಯಲಾಗುತ್ತದೆ. 

    ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವಿದೆ: 

    ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಅಧಿಕ ಮಟ್ಟದ ಕಾಸ್ಮಿಕ್ ವಿಕಿರಣಕ್ಕೆ ಒಡ್ಡಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ, ಕಾಲಾನಂತರದಲ್ಲಿ ಕ್ಯಾನ್ಸರ್ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯವು ಹೆಚ್ಚಾಗಿರುತ್ತದೆ. 

    ಮಾನಸಿಕ ಪರಿಣಾಮಗಳೇನು? 

    ಬಾಹ್ಯಾಕಾಶ ಯಾತ್ರೆಯು ಏಕಾಂತತೆ, ಬಂಧನದ ಭಾವ ಮೂಡಿಸುತ್ತದೆ ಮತ್ತು ಇದರಿಂದ ಉಂಟಾಗುವ ಒತ್ತಡವು ಮನಸ್ಥಿತಿಯಲ್ಲಿ ಬದಲಾವಣೆ ಉಂಟುಮಾಡಿ, ಆತಂಕ ಮತ್ತು ಖಿನ್ನತೆಯಂತಹ ಕೆಲವು ಮಾನಸಿಕ ಸಮಸ್ಯೆಗಳನ್ನ ತಂದೊಡ್ಡಬಹುದು.

    ರೋಗನಿರೋಧಕ ಶಕ್ತಿ ಕುಗ್ಗಿಸುತ್ತೆ: 

    ಬಾಹ್ಯಾಕಾಶ ಯಾನವು ರೋಗನಿರೋಧಕ ವ್ಯವಸ್ಥೆಯನ್ನು ಬಹುತೇಕ ದುರ್ಬಲಗೊಳಿಸಿ, ಗಗನಯಾತ್ರಿಗಳನ್ನು ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿಸುತ್ತದೆ.

    ವೆಸ್ಟಿಬ್ಯುಲರ್ ಸಮಸ್ಯೆಗಳು:

    ಒಳಗಿವಿಯ ಸಮತೋಲನ ವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು ಬಾಹ್ಯಾಕಾಶ ಯಾನದ ಸಮಯದಲ್ಲಿ ಮತ್ತು ಆಮೇಲೂ ದಿಕ್ಕು ತಪ್ಪಿಸುವಿಕೆ ಮತ್ತು ಚಲನೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.

    ಈ ಎಲ್ಲ ಆರೋಗ್ಯ ಸಮಸ್ಯೆಗಳನ್ನ ನಿಯಂತ್ರಿಸಲು, ಗಗನಯಾತ್ರಿಗಳು ತಮ್ಮ ಕಾರ್ಯಾಚರಣೆಗೆ ಪೂರ್ವದಲ್ಲಿ ಹಾಗೂ ಪೂರ್ಣಗೊಂಡ ಮೇಲೆ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ. ಜೊತೆಗೆ ಸೂಕ್ಷ್ಮ ಗುರುತ್ವಾಕರ್ಷಣೆಯ ನಕಾರಾತ್ಮಕ ಪರಿಣಾಮಗಳನ್ನ ಕಡಿಮೆ ಮಾಡಲು ತಮ್ಮ ಕಾರ್ಯಗಳ ಸಮಯದಲ್ಲೂ ಅವರು ವ್ಯಾಯಾಮ ಮತ್ತು ಪುನರ್ವಸತಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಅಲ್ಲದೇ, ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದ ಈ ಆರೋಗ್ಯ ಸವಾಲುಗಳನ್ನ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ಪರಿಹರಿಸಲು ಅನೇಕ ಸಂಶೋಧನೆಗಳು ಪ್ರಗತಿಯಲ್ಲಿವೆ.

    ಮಾಹಿತಿ: ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
    – ಮೋಹನ ಬನ್ನಿಕುಪ್ಪೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

    Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ

    ನವದೆಹಲಿ: ಭಾರತದ (India) ಮಹತ್ವಾಕಾಂಕ್ಷೆಯ ಆದಿತ್ಯ-ಎಲ್1 (Aditya -L1) ನೌಕೆ ಬಾಹ್ಯಾಕಾಶದಿಂದ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರವನ್ನು ಇಸ್ರೋ (ISRO) ಹಂಚಿಕೊಂಡಿದೆ.

    ಆದಿತ್ಯ-ಎಲ್1 ಉದ್ದೇಶಿತ ಕಕ್ಷೆಯನ್ನು ತಲುಪಿದ ನಂತರ ದಿನಕ್ಕೆ 1,440 ಚಿತ್ರಗಳನ್ನು ಕಳುಹಿಸುವ ನಿರೀಕ್ಷೆಯಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆದಿತ್ಯ-ಎಲ್1 ತೆರೆಯಲಿದೆ. ಈ ಮೂಲಕ ಹೆಚ್ಚು ಆಕರ್ಷಕ ಚಿತ್ರಗಳು ಮತ್ತು ಮೌಲ್ಯಯುತ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Aditya L1: ಎರಡನೇ ಕಕ್ಷೆ ಯಶಸ್ವಿಯಾಗಿ ಪ್ರವೇಶಿಸಿದ ಆದಿತ್ಯ ನೌಕೆ

    ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಆದಿತ್ಯ-ಎಲ್1ನ್ನು ಉಡಾವಣೆ ಮಾಡಲಾಯಿತು. ಇದು ಭಾರತದ ಮೊದಲ ಸೂರ್ಯನ ಅಧ್ಯಯನದ ಮಿಷನ್ ಆಗಿದೆ. ಇದು ಭೂಮಿಯ ಎರಡು ಸುತ್ತು ಸುತ್ತಿ ಮುಗಿಸಿದೆ. ಮುಂಬರುವ ದಿನಗಳಲ್ಲಿ ಭೂಮಿಯ ಕಕ್ಷೆಯಿಂದ ತನ್ನ ಗುರಿಯಾದ ಸೂರ್ಯನೆಡೆಗೆ ಸಾಗಲಿದೆ. ಸುಮಾರು 15,00,000 ಕಿಲೋಮೀಟರ್ ದೂರದಲ್ಲಿ ಇರಲಿದ್ದು ಅಲ್ಲಿಂದಲೇ ಸೂರ್ಯನನ್ನು ಅಧ್ಯಯನ ನಡೆಸಲಿದೆ.

    ಆದಿತ್ಯ ಎಲ್-1 ಸೂರ್ಯನ ವರ್ಣಗೋಳ ಮತ್ತು ಕರೋನಾ ಸೇರಿದಂತೆ ವಿವಿಧ ಅಂಶಗಳ ಅಧ್ಯಯನಕ್ಕೆ ವಿನ್ಯಾಸಗೊಳಿಸಲಾದ ಏಳು ಪೆಲೋಡ್‍ಗಳನ್ನು ಒಯ್ಯುತ್ತಿದೆ. ಸೌರ ಸ್ಫೋಟ ಮತ್ತು ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವದ ಬಗ್ಗೆ ಮಾಹಿತಿ ಕಲೆ ಹಾಕಲಿದೆ. ಈ ಮಿಷನ್ ನೇರವಾಗಿ ನೈಜ ಸಮಯದಲ್ಲಿ ಡೇಟಾವನ್ನು ಒದಗಿಸುವ ಶಕ್ತಿಹೊಂದಿದೆ. ಇದನ್ನೂ ಓದಿ: Aditya L1: ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ನೌಕೆ – ಸೂರ್ಯನತ್ತ ಮತ್ತೊಂದು ಹೆಜ್ಜೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?

    Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?

    ನವದೆಹಲಿ: ಬಾಹ್ಯಾಕಾಶ (Space) ವಲಯದಲ್ಲಿ ಭಾರತ (India) ಹೊಸ ಮೈಲುಗಲ್ಲು ಸಾಧಿಸಲು ಹೊರಟಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಚಂದ್ರಯಾನ-3 (Chandrayaan-3) ಮಾಡುವ ಮೂಲಕ ಇಡೀ ಜಗತ್ತು ಹುಬ್ಬೇರಿಸಿ ಭಾರತದತ್ತ ನೋಡುವಂತೆ ಇಸ್ರೋ (ISRO) ಮಾಡಿದೆ. ಮಂಗಳಯಾನದ ಬಳಿಕ ಚಂದ್ರನ (Moon) ಬೆನ್ನು ಬಿದ್ದಿರುವ ಭಾರತ ನಿರಂತರ ಪ್ರಯತ್ನಗಳ ಮೂಲಕ ಯಶಸ್ವಿಯಾಗುವ ಕಸರತ್ತು ನಡೆಸಿದೆ.

    ಭಾರತವೂ ಸೇರಿದಂತೆ ಬಹಳಷ್ಟು ಮುಂದುವರಿದ ದೇಶಗಳು ಬಾಹ್ಯಾಕಾಶ ವಲಯದಲ್ಲಿ ಹೊಸ ಸಾಧನೆ ಮಾಡಲು ನಿರಂತರ ಪ್ರಯತ್ನ ಮಾಡುತ್ತಿವೆ. ಸಾವಿರಾರು ಕೋಟಿ ಖರ್ಚು ಮಾಡುವ ವಿದೇಶಗಳಿಗೆ, ನೂರಾರು ಕೋಟಿ ಖರ್ಚು ಮಾಡುವ ಭಾರತಕ್ಕೆ ಬಾಹ್ಯಾಕಾಶಯಾನದಿಂದ ಲಾಭ ಏನು ಎನ್ನುವ ಪ್ರಶ್ನೆಯೂ ಸಹಜವಾಗಿ ಕೇಳಿ ಬರುತ್ತಿದೆ.

    ಬಾಹ್ಯಾಕಾಶ ಸಂಶೋಧನೆಯಿಂದ 2 ರೀತಿಯ ಲಾಭಗಳನ್ನು ನಿರೀಕ್ಷೆ ಮಾಡಬಹುದು. ಯಶಸ್ವಿ ಬಾಹ್ಯಾಕಾಶಯಾನಗಳಿಂದ ಜಾಗತಿಕ ಮಟ್ಟದಲ್ಲಿ ದೇಶದ ತಾಂತ್ರಿಕ ಶಕ್ತಿ ಪ್ರದರ್ಶನವಾಗಲಿದೆ. ಮುಂಬರುವ ದಿನಗಳಲ್ಲಿ ನಡೆಯುವ ಸಂಶೋಧನೆಗೆ ಪೂರಕ ದತ್ತಾಂಶ ಸಂಗ್ರಹವಾಗಲಿದೆ. ಖಗೋಳ ವಿಸ್ಮಯಗಳನ್ನು ಅರಿಯುವುದರ ಮೂಲಕ ಭೂಮಿಯ ಮೇಲೆ ಸಂಭವಿಸುವ ಭವಿಷ್ಯದ ಅಪಾಯಗಳನ್ನು ತಿಳಿಯಲು ಇದು ಸಹಕಾರಿಯಾಗಲಿದೆ.

    ಬಾಹ್ಯಾಕಾಶ ಸಂಶೋಧನೆಯ ಹಿಂದೆ ಆರ್ಥಿಕತೆಯ ನಿರೀಕ್ಷೆಯೂ ಹೊಂದಿದೆ. 2013 ರಿಂದ ಜಗತ್ತಿನಾದ್ಯಂತ 1791 ಬಾಹ್ಯಕಾಶ ತಂತ್ರಜ್ಞಾನ ಕಂಪನಿಗಳು 22 ಲಕ್ಷ ಕೋಟಿ ರೂ. (272 ಬಿಲಿಯನ್ ಡಾಲರ್) ಹೂಡಿಕೆ ಮಾಡಿವೆ. ಸ್ಪೇಸ್ ಫೌಂಡೇಶನ್ ಲೆಕ್ಕಚಾರದ ಪ್ರಕಾರ 2023ರ ದ್ವಿತೀಯಾರ್ಧದಲ್ಲಿ ಬಾಹ್ಯಾಕಾಶ ಆರ್ಥಿಕತೆ 45 ಲಕ್ಷ ಕೋಟಿ ರೂ.ಗೆ (546 ಬಿಲಿಯನ್ ಡಾಲರ್) ಹೆಚ್ಚಿರಲಿದೆ. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

    ಕಳೆದ 10 ವರ್ಷಗಳಲ್ಲಿ 91% ಈ ಕ್ಷೇತ್ರ ಅಭಿವೃದ್ಧಿ ಕಂಡಿದೆ. 1999 ರಿಂದ ಭಾರತವೂ ಸೇರಿ 34 ದೇಶಗಳು 381 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿವೆ. ಈ ಮೂಲಕ 279 ಮಿಲಿಯನ್ ಡಾಲರ್ ಆದಾಯಗಳಿಸಿವೆ. ಭಾರತೀಯ ಬಾಹ್ಯಾಕಾಶ ವಲಯವು ಸದ್ಯ 8 ಬಿಲಿಯನ್ ಡಾಲರ್ ಇದೆ. 2025ರ ವೇಳೆಗೆ 13 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ.

    ಭಾರತ ತನ್ನ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಈ ಪೈಕಿ ಒಂದಷ್ಟು ಹೆಚ್ಚಿನ ಪಾಲು ಪಡೆಯುವ ಅವಕಾಶಗಳಿದೆ. ಇದರಿಂದ ದೇಶದ ಆರ್ಥಿಕತೆ ಅಭಿವೃದ್ಧಿಯಾಗಲಿದೆ. ಇತರೆ ದೇಶಗಳ ಗಗನನೌಕೆಗಳನ್ನು ಬಾಹ್ಯಾಕಾಶಕ್ಕೆ ಹಾರಿಸುವ ಮೂಲಕ ಉದ್ಯಮವಾಗಿ ಪರಿವರ್ತಿಸಬಹುದು. ಭಾರತೀಯ ತಂತ್ರಜ್ಞಾನದ ಮೇಲೆ ನಂಬಿಕೆ ಹುಟ್ಟಲಿದ್ದು, ಆದ್ಯತೆಯೂ ಸಿಗಲಿದೆ. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]