– ಹಿಂದೂ ಯುವಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ
ಮಂಗಳೂರು: ಸರಣಿ ಕೊಲೆಗಳಿಂದ ಕಂಗಾಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಸಾಮರಸ್ಯವಾದ ಪ್ರಸಂಗವೊಂದು ನಡೆದಿದೆ. ಹಿಂದೂ ಯುವಕನೊಬ್ಬ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಕಸ್ಮಿಕವಾಗಿ ನದಿಗೆ ಬಿದ್ದ ಕ್ರೇನ್ ಆಪರೇಟರ್ ಆಗಿರುವ ಮುಸ್ಲಿಂ ಯುವಕನನ್ನು ಹಿಂದೂ ಯುವಕನೊಬ್ಬ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರದಲ್ಲಿ ನಡೆದಿದೆ. ಜೆಸಿಬಿ ಆಪರೇಟರ್ನನ್ನು ಷರೀಫ್ ಎಂದು ಗುರುತಿಸಲಾಗಿದ್ದು, ಇವರನ್ನು ಸೋಮಶೇಖರ್ ಕಟ್ಟೆಮನೆ ರಕ್ಷಿಸಿದ್ದಾರೆ.

ಹರಿಹರದ ಪಲ್ಲತಡ್ಕ ಎಂಬಲ್ಲಿ ಭಾರೀ ಮಳೆಯಿಂದ ತೇಲಿ ಬಂದು ಸೇತುವೆ ಮೇಲೆ ಸಿಲುಕಿದ್ದ ಮರಗಳನ್ನು ಜೆಸಿಬಿ ಹಾಗೂ ಕ್ರೇನ್ ಮುಲಕ ತೆರವುಗೊಳಿಸಲಾಗುತ್ತಿತ್ತು. ಅಂತೆಯೇ ಕಡಬ ತಾಲೂಕಿನ ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಷರೀಫ್ ಕ್ರೇನ್ನಿಂದ ಕೆಳಗಿಳಿದು ಸೇತುವೆಯ ಮೇಲೆ ನಿಂತಿದ್ದರು. ಇದನ್ನೂ ಓದಿ: ನೋ ಪಾರ್ಕಿಂಗ್ ಹಾವಳಿ ತಪ್ಪಿಸಲು ವ್ಹೀಲಿಂಗ್ ಕ್ಲಾಂಪ್ ಮೊರೆ- ಸ್ಥಳದಲ್ಲೇ ದಂಡ ವಸೂಲಿಗೆ ಪ್ಲಾನ್!

ಜೆಸಿಬಿಯಿಂದ ಮೇಲಕ್ಕೆತ್ತಲಾದ ಮರದ ದಿಮ್ಮಿಗಳನ್ನು ಸಾಗಿಸುವ ಸಂದರ್ಭ ಆಕಸ್ಮಾತ್ತಾಗಿ ಮರದ ದಿಮ್ಮಿಯೊಂದು ಷರೀಫ್ ಗೆ ತಾಗಿದ್ದು, ಅವರು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದಾರೆ. ಹೀಗೆ ನದಿಗೆ ಬಿದ್ದ ಷರೀಫ್ ನೀರಿನ ರಭಸಕ್ಕೆ ಈಜಲು ಸಾಧ್ಯವಾಗದೆ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿ ಸೋಮಶೇಖರ್ ತಕ್ಷಣ ನದಿಗೆ ಹಾರಿ ಷರೀಫ್ ಅವರನ್ನು ಸುಮಾರು 5 ನಿಮಿಷಗಳ ಕಾಲ ಹಿಡಿದುಕೊಂಡು ನೀರಿನಲ್ಲಿ ನಿಂತರು. ನಂತರ ಹಗ್ಗ ಬಳಸಿ ಜೆಸಿಬಿ ಮುಖಾಂತರ ಅವರನ್ನು ಮೇಲಕ್ಕೆತ್ತಲಾಯಿತು.

ಸದ್ಯ ಸೋಮಶೇಖರ್ ಕ್ಟೆಮನೆ ಅವರ ಕಾರ್ಯಕ್ಕೆ ಜಿಲ್ಲೆಯಾದ್ಯಾಂತ ಭಾರೀ ಪ್ರಶಶಮಸೆ ವ್ಯಕ್ತವಾಗುತ್ತಿದೆ. ಸದ್ಯ ಶರೀಫ್ ನನ್ನು ರಕ್ಷಣೆ ಮಾಡುತ್ತೊರುವ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಸೋಮಶೇಖರ್ ಅವರ ಧೈರ್ಯ ಹಾಗೂ ಸಾಹಸವನ್ನು ಜನ ಕೊಂಡಾಡುತ್ತಿದ್ದಾರೆ.
