Tag: Somanna

  • ನೂರಕ್ಕೆ ನೂರರಷ್ಟು ಕೆಲಸ ಮಾಡಿಲ್ಲ – ಮೆಡಿಕಲ್ ಕಾಲೇಜ್ ವೈದ್ಯರ ವಿರುದ್ಧ ಸೋಮಣ್ಣ ಗರಂ

    ನೂರಕ್ಕೆ ನೂರರಷ್ಟು ಕೆಲಸ ಮಾಡಿಲ್ಲ – ಮೆಡಿಕಲ್ ಕಾಲೇಜ್ ವೈದ್ಯರ ವಿರುದ್ಧ ಸೋಮಣ್ಣ ಗರಂ

    ಮಡಿಕೇರಿ: ನೂರಕ್ಕೆ ನೂರರಷ್ಟು ಮೆಡಿಕಲ್ ಕಾಲೇಜಿನ ವೈದ್ಯರು ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರು ಸಾಯುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಗರಂ ಆಗಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಇದು ನಡೆಯಿತು.

    ಮಡಿಕೇರಿ ನಗರದ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಹಾಗೂ ಸಾವು ನೋವು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ಡೀನ್ ಮತ್ತು ಸಿಬ್ಬಂದಿ ಜೊತೆ ಸೋಮಣ್ಣ ಸಭೆ ನಡೆಸಿದರು.

    ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದ ಸೋಮಣ್ಣ ಕೋವಿಡ್ ಕೇರ್ ಸೆಂಟರ್, ಅಸ್ಪತ್ರೆಗಳ ಪರಿಶೀಲನೆ ಹಾಗೂ ಅರೋಗ್ಯ ಇಲಾಖೆ ಕೆಲಸವನ್ನು ಗಮನಿಸಿ ಮಾಹಿತಿಯನ್ನು ಸಂಗ್ರಹಿಸಿ ಸಭೆಗೆ ಆಗಮಿಸಿದ್ದರು. ಈ ವೇಳೆ, ನೂರರಕ್ಕೆ ನೂರರಷ್ಟು ಮೆಡಿಕಲ್ ಕಾಲೇಜಿನ ವೈದ್ಯರು ಕೆಲಸ ಮಾಡಿಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ಸುಮ್ಮನಿರುವುದಿಲ್ಲ ಎಂದು ಹೇಳಿ ಗರಂ ಆದರು.

    ಕೊಡಗು ಜಿಲ್ಲೆಯಲ್ಲಿ ಇರುವ ಜನಸಂಖ್ಯೆ ಅತ್ಯಂತ ಕಡಿಮೆ ಇದೆ. ದಿನನಿತ್ಯ 10 ರಿಂದ 12 ಸಾವುಗಳು ಸಂಭವಿಸುತ್ತಿದೆ. ಇದರಿಂದ ನಮಗೆ ದಿಗಿಲು ಬಡಿದಂತೆ ಅಗುತ್ತಿದೆ. ಸಾವು ನೋವುಗಳ ಸಂಖ್ಯೆ ಕಡಿಮೆ ಮಾಡಲು ಹಗಲು ಇರುಳು ಶ್ರಮಪಡಬೇಕು ಎಂದು ಸೋಮಣ್ಣ ಸೂಚಿಸಿದರು.

    ಸಚಿವರ ಸಭೆಗೆ ನಾಲ್ಕು ಮಂದಿ ವೈದ್ಯರು ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸುತ್ತಾರೆ ಎಂದು ಗೊತ್ತಿದ್ದರೂ ವಿಚಾರವನ್ನು ಹಗುರವಾಗಿ ತೆಗೆದುಕೊಂಡ ಈ ವೈದ್ಯರಿಗೆ ನೋಟಿಸ್ ನೀಡಬೇಕು. ಮೆಡಿಕಲ್ ಕಾಲೇಜಿನ ಡೀನ್ ಕಾರ್ಯಪ್ಪ ಅವರ ಕಾರ್ಯವೈಖರಿಗೆ ಇದರಲ್ಲೇ ಗೊತ್ತಾಗುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

  • ಇದು ವಿಜಯೇಂದ್ರ, ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು: ಸೋಮಣ್ಣ

    ಇದು ವಿಜಯೇಂದ್ರ, ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು: ಸೋಮಣ್ಣ

    ಬೆಂಗಳೂರು: ಇದು ವಿಜಯೇಂದ್ರ, ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿ ಮಾಡಿಕೊಂಡು ಹೋಗ್ತೀವಿ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸ್ಕಿಯಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ 200 ಓಟ್ ನಲ್ಲಿ ಸೋತಿದ್ದರು. ಯಡಿಯೂರಪ್ಪ ಆಡಳಿತ ಮೆಚ್ಚಿ ಪ್ರತಾಪ್ ಗೌಡ ಪಾಟೀಲ್ ಅವರು ಬಿಜೆಪಿಗೆ ಬಂದ್ರು. ಕೆಲವೊಂದು ಸಾರಿ ಒಳ್ಳೆ ಕೆಲಸ ಮಾಡಿದ್ರು ಸೋಲ್ತಾರೆ. ನಾನು 2009ರಲ್ಲಿ ಸೋತಿದ್ದೆ. ಸೋಲು-ಗೆಲುವು ಒಟ್ಟಾಗಿ ಸ್ವೀಕಾರ ಮಾಡಬೇಕು ಎಂದರು.

    ಬಿಜೆಪಿ ಅವರು ಸೋಲಿಗೆ ಕಾರಣ ಅನ್ನೋ ಪ್ರತಾಪ್ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾಕೆ ಹಾಗೆ ಮಾತಾಡಿದ್ರು ಗೊತ್ತಿಲ್ಲ. ಅವರ ಜೊತೆ ಮಾತಾಡ್ತೀನಿ. ಇದು ವಿಜಯೇಂದ್ರ ಅಥವಾ ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿ ಮಾಡಿಕೊಂಡು ಹೋಗ್ತೀವಿ ಎಂದು ತಿಳಿಸಿದರು.

    ಯಡಿಯೂರಪ್ಪ ಕೂಡಾ ಎರಡು ದಿನ ಪ್ರಚಾರ ಮಾಡಿದ್ರು. ಜನ ಬದಲಾವಣೆ ಬೇಕು ಅಂತ ಹೀಗೆ ಮಾಡಿರಬಹುದು. ಮುಂದೆ ತಪ್ಪು ತಿದ್ದುಪಡಿ ಮಾಡಿಕೊಳ್ತೀವಿ. ಸೋಲು-ಗೆಲುವು ಸಹಜ. ಪಾರ್ಟಿ ಕೆಲಸ ಎಲ್ಲರೂ ಮಾಡಿದ್ದಾರೆ. ಜವಾಬ್ದಾರಿ ನಿಭಾಯಿಸಿದ್ದೇವೆ. ಸೋತಾಗ ವಿಜಯೇಂದ್ರ ಸೋಲು ಅನ್ನೋದು ಸರಿಯಲ್ಲ ಎಂದು ಹೇಳಿದರು.

    ಬಸವ ಕಲ್ಯಾಣದಲ್ಲಿ ನಾವು ಟೀಂ ವರ್ಕ್ ಮಾಡಿದ್ದೇವೆ. ಟೀಂ ವರ್ಕ್ ಮಾಡಿದ್ದಕ್ಕೆ ಗೆಲುವು ಆಯ್ತು. ಭಿನ್ನಾಭಿಪ್ರಾಯ ಸರಿ ಮಾಡಿ ಟೀಂ ವರ್ಕ್ ಮಾಡಿ ಗೆದ್ದೆವು. ಕಟೀಲು ಎರಡು ಬಾರಿ ಪ್ರಚಾರ ಮಾಡಿದ್ರು. ನಾನು, ಸವದಿ, ಬೊಮ್ಮಾಯಿ 3 ಜನ 6 ಜಿಲ್ಲಾ ಪಂಚಾಯ್ತಿ ಆಯ್ಕೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ವಿ. ನಾನು ಚುನಾವಣೆಗೆ ಇಳಿದ್ರೆ ಹಿಂದೆ ತಿರುಗಿ ನೋಡೊಲ್ಲ. ಯಾರು ನಿರೀಕ್ಷೆ ಮಾಡದ ಗೆಲುವನ್ನು ನಾವು ಗೆದ್ದಿದ್ದೇವೆ. ಯಡಿಯೂರಪ್ಪ, ಮೋದಿ ಅವ್ರ ಮೇಲೆ ಭರವಸೆ ಇಟ್ಟು ಜನ ಮತ ಕೊಟ್ಟಿದ್ದಾರೆ. ನಮ್ಮ ಅಭ್ಯರ್ಥಿ ಆಕ್ಟೀವ್ ಆಗಿದ್ದಾರೆ. ಟೀಂ ವರ್ಕ್ ಮಾಡಿದ್ರೆ ಗೆಲುವು ಶತಸಿದ್ಧ ಅಂತ ಈ ಕ್ಷೇತ್ರದ ಗೆಲುವಿಂದ ಗೊತ್ತಾಗಿದೆ ಎಂದು ನುಡಿದರು.

    ನಾನು ಸತ್ಯ ಮಾತಾಡ್ತೀನಿ. ನಾನು ಎಕೆ 47 ಇದ್ದ ಹಾಗೇ. ಇರೋದನ್ನ ಹೇಳ್ತೀನಿ. ಮಸ್ಕಿಯಲ್ಲಿ ಏನ್ ಆಗಿದೆ ಗೊತ್ತಿಲ್ಲ. ನಾನು ಅ ಕಡೆ ಹೋಗಿಲ್ಲ. ಎಲ್ಲವನ್ನು ವಿಜಯೇಂದ್ರ ಮೇಲೆ ಹಾಕೋದು ಸರಿಯಲ್ಲ. ಕೆಲವರಲ್ಲಿ ದೌರ್ಬಲ್ಯ ಇದೆ. ಅದನ್ನ ಸರಿ ಮಾಡಿಕೊಂಡು ಹೋಗಬೇಕು. ನನಗೂ ಕೆಲ ದೌರ್ಬಲ್ಯ ಇರುತ್ತೆ. ಅದನ್ನ ಸರಿ ಮಾಡಿಕೊಳ್ಳಬೇಕು.

    ಕೊರೊನಾ ಕಾರ್ಯವೈಖರಿಯಲ್ಲಿ ನಾವು ಎಡವಿಲ್ಲ. ಆದರೆ ಹೆಚ್ಚು ಕೇಸ್ ಆಗಿರೋದ್ರೀಂದ ಸ್ವಲ್ಪ ಹಿನ್ನಡೆ ಆಗಿದೆ. ಉಪ ಚುನಾವಣೆ ಮೇಲೆ ಕೊರೊನಾ ನಿರ್ವಹಣೆಯೂ ಸ್ವಲ್ಪ ಪರಿಣಾಮ ಬೀರಿದೆ. ಜನರ ಕಷ್ಟಕ್ಕೆ ಶೇ.100 ಸಹಕಾರ ಕೊಡಲು ಆಗಿಲ್ಲ. ಹೀಗಾಗಿ ಇದು ನಮಗೆ ಹಿನ್ನಡೆ ಆಗಿದೆ. ಇದನ್ನ ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳೊ ಕೆಲಸ ಮಾಡ್ತೀವಿ ಎಂದು ತಿಳಿಸಿದರು.

    ಅಣ್ಣಮ್ಮ ತಾಯಿಯಲ್ಲಿ ನಾನು ಬೇಡಿ ಕೊಳ್ತೀನಿ. ಈ ಸಂಕಷ್ಟ ವನ್ನ ನಿಭಾಯಿಸಬೇಕು. ಭಗವಂತನ ಆಶೀರ್ವಾದ ಇರದೆ ಇದನ್ನ ಸಾಧನೆ ಮಾಡಲು ಸಾಧ್ಯವಿಲ್ಲ. ನಾವು ಪ್ರಯತ್ನಗಳು ಮಾಡ್ತಿದ್ದೇನೆ. ಭಗವಂತ ಆಶೀರ್ವಾದ ಮಾಡಬೇಕು. ಇಲ್ಲದೆ ಹೋದ್ರೆ ಕಷ್ಟ ಆಗುತ್ತೆ. ನಾವು ಮಾಡೋ ಕೆಲಸ ಮಾಡ್ತಿದ್ದೇವೆ. ಆದ್ರು ಕಡಿಮೆ ಆಗ್ತಿಲ್ಲ. ದೇವರ ಅನುಗ್ರಹ ನಮಗೆ ಬೇಕಿದೆ. ಖಾಸಗಿ ಆಸ್ಪತ್ರೆಗಳ ನಡೆ ಕರುಳಿ ಕಿತ್ತುಹೋಗುತ್ತೆ. ಜೀವನ ಕಟ್ಟುಕೊಳ್ಳಲು ಜನ ಬೆಂಗಳೂರಿಗೆ ಬಂದಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಕೆಲಸ ಸರ್ಕಾರ ಮಾಡ್ತಿದೆ. ಕೊರೊನಾ ನಿಯಂತ್ರಣಕ್ಕೆ ದೇವರೇ ಕಾಪಾಡಬೇಕು. ಸರ್ಕಾರದ ಸಾಧ್ಯವಾದಷ್ಟು ಕೆಲಸ ಮಾಡ್ತಿದೆ. ಆದ್ರು ಕೊರೊನಾ ನಿಯಂತ್ರಣ ಆಗಿಲ್ಲ. ದೇವರ ಅನುಗ್ರಹ ಇದ್ದರೇನೆ ಇದನ್ನ ನಿಯಂತ್ರಣ ಮಾಡಲು ಸಾಧ್ಯ ಎಂದು ಸೋಮಣ್ಣ ಹೇಳಿದರು.

  • ಅವನು ದಡ್ಡನಲ್ಲ, ಕಿಲಾಡಿ – ಜಮೀರ್‌ನನ್ನು ಹಾಡಿಹೊಗಳಿದ ಸೋಮಣ್ಣ

    ಅವನು ದಡ್ಡನಲ್ಲ, ಕಿಲಾಡಿ – ಜಮೀರ್‌ನನ್ನು ಹಾಡಿಹೊಗಳಿದ ಸೋಮಣ್ಣ

    – ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ

    ಬೆಂಗಳೂರು: ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ವಾರ್ಡ್‍ನಲ್ಲಿ ಈದ್ಗಾ ಮೈದಾನ ಕಾಂಪೌಂಡ್ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮಣ್ಣ, ಈ ಕಾಂಪೌಂಡ್ ಅನ್ನು ಆರು ತಿಂಗಳಿನಲ್ಲಿ ಕಟ್ಟಿಕೊಡುತ್ತೇನೆ. ಎಲ್ಲ ಜಾತಿ ಧರ್ಮಗಳಲ್ಲೂ ಒಳ್ಳೆಯವರು ಇರುತ್ತಾರೆ, ಕೆಟ್ಟವರು ಇರುತ್ತಾರೆ. ದೇವರು ಇದ್ದಾನೆ ಅಂದರೆ ಅಲ್ಲಿ ದೆವ್ವ-ಸೈತಾನ್‍ಗಳು ಇದ್ದೇ ಇರುತ್ತವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರನ್ನು ಹಾಡಿಹೊಗಳಿದ ಸೋಮಣ್ಣ, ಈ ಕಾರ್ಯಕ್ರಮಕ್ಕೆ ನಾನು ಜಮೀರ್ ನನ್ನು ಕರೆದುಕೊಂಡು ಬರಬೇಕು ಎಂದುಕೊಂಡಿದ್ದೆ. ಆದರೆ ಅವನು ಬರಲಿಲ್ಲ. ಅವನು ನನ್ನ ಆತ್ಮೀಯ, ಅವನು ದಡ್ಡ ಅಲ್ಲ, ಕಿಲಾಡಿ ಎಂದು ಹಾಡಿ ಹೊಗಳಿದರು. ಜಮೀರ್ ಕೇವಲ ಮುಸಲ್ಮಾರ ಎಂಎಲ್‍ಎ ಅಲ್ಲ, ಎಲ್ಲಾ ವರ್ಗದವರ ಎಂಎಲ್‍ಎ ಎಂದು ಹೇಳಿದರು.

    ನನಗೆ ಜಮೀರ್ ಸಿಗಲಿಲ್ಲ. ಅವನನ್ನು ಹಿಡಿದುಕೊಂಡು ಬರೋಣ ಅಂದುಕೊಂಡೆ. ಇಲ್ಲಿ ಬಂದು ನಮ್ಮ ಕೆಲಸದ ಬಗ್ಗೆ ಮಾತಾಡು, ಏನೇನೋ ಹೇಳಿಬಿಟ್ಟು ಬೆಂಕಿ ಇಟ್ಟು ಓಡಿ ಹೋಗಬೇಡ ಎಂದು ಅವನಿಗೆ ಹೇಳೋಣ ಅಂದುಕೊಂಡಿದ್ದೆ ಎಂದು ಸೋಮಣ್ಣ ಹಾಸ್ಯ ಚಟಾಕಿ ಹಾಕಿದರು.

  • ನನ್ನ ಶ್ರೀಮತಿ ಬಿಟ್ಟು ನನಗೆ ಸಂಜನಾ, ರಾಗಿಣಿ ಗೊತ್ತಿಲ್ಲ: ವಿ. ಸೋಮಣ್ಣ

    ನನ್ನ ಶ್ರೀಮತಿ ಬಿಟ್ಟು ನನಗೆ ಸಂಜನಾ, ರಾಗಿಣಿ ಗೊತ್ತಿಲ್ಲ: ವಿ. ಸೋಮಣ್ಣ

    ಬೆಂಗಳೂರು: ನನಗೆ ನನ್ನ ಶ್ರೀಮತಿ ಬಿಟ್ಟು ಬೇರೆ ಯಾರೂ ಗೊತ್ತಿಲ್ಲ. ಸಂಜನಾ ರಾಗಿಣಿ ಯಾರೂ ಗೊತ್ತಿಲ್ಲ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

    ವಸತಿ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಂಜನಾ, ರಾಗಿಣಿ ನನಗೆ ಗೊತ್ತಿಲ್ಲ. ನಮ್ಮ ಶ್ರೀಮತಿ ಬಿಟ್ಟು ಯಾರೂ ಗೊತ್ತಿಲ್ಲ. ನಾನು ಆ ವಿಚಾರದಲ್ಲಿ ಎಲ್ ಬೋರ್ಡ್, ಜಿರೋ ಎಂದು ಹೇಳಿದರು.

    ಡ್ರಗ್ಸ್ ಕೇಸ್ ವಿಚಾರದಲ್ಲಿ ಜಮೀರ್ ಖಾನ್ ಇರೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾನೂನಿಗಿಂತ ಯಾರು ದೊಡ್ಡವರು. ಕಾನೂನು ಪ್ರಕಾರ ತನಿಖೆ ನಡೆಯುತ್ತೆ. ಯಾರೇ ಇದ್ದರೂ ಕ್ರಮ ಆಗಲಿ. ನನಗೆ ಯಾವ ಫಿಲ್ಮ್ ಹಿರೋಯಿನ್ ಯಾರೂ ಗೊತ್ತಿಲ್ಲ. ನಾನು ಬಂಧನ ಚಿತ್ರ ನೋಡಿದ್ದು ಕೊನೆ ಎಂದು ತಿಳಿಸಿದರು.

    ಇಂತಹ ತಪ್ಪು ಯಾರೇ ಮಾಡಿದ್ರು ಹಲ್ಕಟ್ ಗಳು. ಸಿಎಂ ಕೂಡ ಈಗಾಗಲೇ ಯಾರೇ ಇದ್ದರೂ ಕ್ರಮ ತಗೋತೀವಿ ಅಂತ ಹೇಳಿದ್ದಾರೆ. ಯಾರೇ ಇದ್ದರು ಕ್ರಮ ನಮ್ಮ ಸರ್ಕಾರ ತೆಗೆದುಕೊಳ್ಳುತ್ತೆ ಎಂದು ಭರವಸೆ ನಿಡಿದರು.

    ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಳೆ ವಿಚಾರದ ಬಗ್ಗೆ ಮಾತನಾಡಿದ ಅವರು, ಬೆಳಗ್ಗೆಯಿಂದ ಕ್ಷೇತ್ರದಲ್ಲಿ ಸಂಚಾರ ಮಾಡಿ ಪರಿಸ್ಥಿತಿ ಅವಲೋಕನ ಮಾಡಿದ್ದೇನೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ನನ್ನ ಕೆಲಸ ನಾನು ಮಾಡಿದ್ದೇನೆ. ಬೇರೆ ಅವರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

  • ಸೋಮಣ್ಣರಿಗೆ ಚಾಮರಾಜನಗರ ಉಸ್ತುವಾರಿ ವಹಿಸಿ- ‘ಕೈ’ ಮುಖಂಡರ ಆಗ್ರಹ

    ಸೋಮಣ್ಣರಿಗೆ ಚಾಮರಾಜನಗರ ಉಸ್ತುವಾರಿ ವಹಿಸಿ- ‘ಕೈ’ ಮುಖಂಡರ ಆಗ್ರಹ

    ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ, ರಾಜಕೀಯ ಮಾಡೋದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ಎಂದು ಮಾಜಿ ಸಚಿವ ಚಾಮರಾಜನಗರ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ವಾಗ್ದಾಳಿ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಮಾಡೋದಾದರೆ ನಿಮ್ಮ ಪಕ್ಷದ ಕಚೇರಿಯಲ್ಲಿ ಮಾಡಿ, ಸುಮ್ಮನೆ ಯಾಕೆ ಉಸ್ತುವಾರಿ ಸಚಿವರಾಗಿದ್ದೀರಿ. ನೀವು ಹೇಳಿದ್ದು ಇಲ್ಲಿಯವರೆಗೆ ಏನಾದರೂ ನಡೆದಿದೆಯಾ ಎಂದು ಅವರು ಪ್ರಶ್ನಿಸಿದರು. ಅಲ್ಲದೆ ಕೋವಿಡ್ ಗಾಗಿ 3 ಕೋಟಿ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದೀರಿ. ಗಣಿ ಭೂ ವಿಜ್ಷಾನ ಅನುದಾನವನ್ನು ಬಳಕೆ ಮಾಡಿಕೊಂಡಿದ್ದೀರಿ. ಆದರೆ ಏನೂ ಕೆಲಸ ಆಗಿಲ್ಲ ಎಂದು ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ.

     

    ಇದೇ ವೇಳೆ ಮಾಜಿ ನಗರಸಭಾ ಅಧ್ಯಕ್ಷ ಕಾಂಗ್ರೆಸ್ ಹಿರಿಯ ಮುಖಂಡ ನಂಜುಂಡಸ್ವಾಮಿ ಮಾತನಾಡಿ, ಸಚಿವ ಸುರೇಶ್ ಕುಮಾರ್ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರನ್ನು ಕೂಡಲೇ ಉಸ್ತುವಾರಿಯಿಂದ ಬದಲಾಯಿಸಿ ವಿ.ಸೋಮಣ್ಣ ಅವರನ್ನು ನೇಮಿಸಿ ಎಂದು ಆಗ್ರಹಿಸಿದರು.

    ಆ್ಯಕ್ಟೀವ್ ಆಗಿರೋರಿಗೆ ಚಾಮರಾಜನಗರ ಉಸ್ತುವಾರಿ ಕೊಡಿ, ಸುರೇಶ್ ಕುಮಾರ್ ಅವರನ್ನೇ ಮುಂದುವರಿಸಿದರೆ ಅವರು ಜಿಲ್ಲೆಗೆ ಬಂದಾಗ ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸೋಮಣ್ಣ ಉಸ್ತುವಾರಿ ಸಚಿವರಾಗಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗ್ತಾ ಇದ್ದವು ಎಂದು ಅವರು ಸಚಿವ ಸೋಮಣ್ಣ ಪರ ಬ್ಯಾಟಿಂಗ್ ಮಾಡಿದ್ದಾರೆ.

  • ಕೊಡಗಿನಲ್ಲಿ ವಾರದ 4 ದಿನಗಳು ಮಾತ್ರ ಅಂಗಡಿಗಳು ಓಪನ್

    ಕೊಡಗಿನಲ್ಲಿ ವಾರದ 4 ದಿನಗಳು ಮಾತ್ರ ಅಂಗಡಿಗಳು ಓಪನ್

    ಮಡಿಕೇರಿ: ಜಿಲ್ಲೆಯಲ್ಲಿ ಬೆಳಗ್ಗೆ 6 ರಿಂದ 4 ಗಂಟೆವರೆಗೆ ಅಗತ್ಯ ವಸ್ತುಗಳನ್ನು ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೊವೀಡ್-19 ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಸೋಮಣ್ಣ, ಜಿಲ್ಲೆ ಕೊರೊನಾ ವಿಷಯದಲ್ಲಿ ಹಸಿರು ವಲಯದಲ್ಲಿ ಇರುವುದರಿಂದ ವಾರದಲ್ಲಿ 4 ದಿನಗಳು ಅಂದರೆ ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 6 ರಿಂದ 4 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ತಿಳಿಸಿದರು.

    ಸಂತೆ, ಜಾತ್ರೆ, ಪ್ರವಾಸಿ ತಾಣಗಳು, ಚರ್ಚ್, ಮಸೀದಿ, ಪ್ರಾರ್ಥನಾ ಮಂದಿರಗಳು ಹಾಗೆಯೇ ಮದ್ಯ ಸೇರಿದಂತೆ ತಂಬಾಕು ಉತ್ಪನ್ನಗಳು ಎಂದಿನಂತೆ ಸಂಪೂರ್ಣ ಬಂದ್ ಆಗಿರಲಿವೆ. ಹೋಟೆಲ್‍ಗಳಲ್ಲಿ ಕೇವಲ ಪಾರ್ಸೆಲ್ ವ್ಯವಸ್ಥೆ ಇರಲಿದೆ. ಜಿಲ್ಲಾಡಳಿತ, ಶಾಸಕರು ಹಾಗೂ ಜನಪ್ರತಿನಿಧಿಗಳ ದೂರ ದೃಷ್ಟಿ ಚಿಂತನೆ, ಮುಂದಾಲೋಚನೆಯಿಂದ ಜಿಲ್ಲೆಯಲ್ಲಿ ಪ್ರಾರಂಭವಾದ ಒಂದು ಕೊರೊನಾ ಪ್ರಕರಣವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೋಮಣ್ಣ ಹೇಳಿದರು.

    ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡದಲ್ಲಿ ಅಂಗಡಿ ಮತ್ತು ಕೈಗಾರಿಕೆಗೆ ಅನುಮತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಬಿಡಲಾಗಿದೆ.

    ಇದೇ ವೇಳೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೆಲವೇ ದಿನಗಳಲ್ಲಿ ಮಳೆ ಪ್ರಾರಂಭವಾಗಲಿದೆ. ನದಿಗಳಲ್ಲಿ ಹೂಳು ತುಂಬಿದೆ. ಕಳೆದೆರಡು ವರ್ಷಗಳಿಂದ ಸುರಿದ ಮಳೆಯಿಂದ ಕುಶಾಲನಗರ ಭಾಗದಲ್ಲಿ ತೀರ ಸಂಕಷ್ಟ ಎದುರಿಸುವಂತಾಗಿತ್ತು. ಆದ್ದರಿಂದ ಸಚಿವರು ಹೊಲ, ಗದ್ದೆಗಳಲ್ಲಿ ತುಂಬಿರುವ ಮರಳನ್ನು ತೆಗೆಯಲು ಆದೇಶ ನೀಡಬೇಕು. ಕೆಲವರು ಮನೆಗಳಿಗೆ ಜೆಲ್ಲಿ, ಎಂ.ಸ್ಯಾಂಡ್ ತೆಗೆಯಲು ಅನುಮತಿ ಕೊಡುತ್ತಿಲ್ಲ ಎಂದರು.

    ಮಳೆಗಾಲ ಸಮೀಪದಲ್ಲಿದೆ. ಸರ್ಕಾರವೇ ಅಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟಿರುವುದರಿಂದ ಮನೆಗಳ ನಿರ್ಮಾಣಕ್ಕೆ ಸಮಸ್ಯೆ ಕೊಡಬೇಡಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗೆ ಸಚಿವ ಸೊಮಣ್ಣ ತಾಕೀತು ಮಾಡಿದರು.

    ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಹಲವು ಕಾಮಗಾರಿಗಳನ್ನು ಮೈಸೂರಿನವರಿಗೆ ಕೊಡಲಾಗಿದೆ. ಕುಟ್ಟ-ಮಾಕುಟ್ಟ ರಸ್ತೆ ಕೆಲಸವನ್ನು ಮಳೆಗಾಲಕ್ಕೂ ಮೊದಲೇ ಪೂರ್ಣಗೊಳಿಸಬೇಕು. ಕೋ ಆಪರೇಟಿವ್ ಸೊಸೈಟಿಗಳಲ್ಲಿ ಸರ್ಕಾರ 1 ಲಕ್ಷದವರಗೆ ಸಾಲ ಮನ್ನಾ ಮಾಡಿದೆ. ಆದರೆ ಈ ಯೋಜನೆ ಜಿಲ್ಲೆಯಲ್ಲಿ ಹಲವರಿಗೆ ತಲುಪಿಲ್ಲ. ಹಲವೆಡೆ ಉತ್ತಮ ಬಾಳೆ ಬೆಳೆ ಬೆಳೆದಿದ್ದು, ಇದರ ಮಾರಾಟಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

    ಸಂಪಾಜೆ ಚೆಕ್‍ಪೋಸ್ಟ್ ಬಳಿ ಕಾಸರಗೋಡು ಭಾಗದಿಂದ ಜಿಲ್ಲೆಯ ಒಳಗೆ ಬರುತ್ತಿದ್ದಾರೆ. ಚೆಕ್‍ಪೋಸ್ಟ್ ಒಳಗೆ ಬರುವ ಮೊದಲು ಗುರುತಿನ ಚೀಟಿ ನೋಡಿ. ಹೊರ ಜಿಲ್ಲೆಗಳಿಂದ ಹಂದಿ ಹಾಗೂ ಮೀನುಗಳನ್ನು ತರಿಸಿಕೊಳ್ಳುವುದು ಬೇಡ. ಈಗಾಗಲೇ ಮಂಗಳೂರಿನಿಂದ ಮೀನುಗಳು ಬರುತ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಶಾಸಕ ಬೋಪಯ್ಯ ಹೇಳಿದರು.

    ಅಗತ್ಯ ವಸ್ತುಗಳನ್ನು ಮಾತ್ರ ಚೆಕ್‍ಪೋಸ್ಟ್ ಮೂಲಕ ಬರುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ತರಬೇಕಾದರೆ ಆರೋಗ್ಯ ತಪಾಸಣೆ ದೃಢೀಕರಣ ಪತ್ರ ಪರಿಶೀಲಿಸಲು ಕಷ್ಟ ಆಗುತ್ತದೆ ಎಂದು ಎಸ್‍ಪಿ ಸುಮನ್ ಡಿ.ಪನ್ನೇಕರ್ ತಿಳಿಸಿದರು. ಇದೊಂದು ಸೂಕ್ಷ್ಮ ವಿಚಾರ. ಕೆಲವು ನಿಬಂಧನೆಗಳಿಗೆ ನಾವೂ ಒಳಪಡಬೇಕಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸಹಕರಿಸಬೇಕು. ಎಂದರು.

  • 50 ಲಕ್ಷ ದೇಣಿಗೆ ನೀಡಿದ ಸುತ್ತೂರು ಮಠ

    50 ಲಕ್ಷ ದೇಣಿಗೆ ನೀಡಿದ ಸುತ್ತೂರು ಮಠ

    – ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸೋಮಣ್ಣ ಭೇಟಿ

    ಮೈಸೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ಮೈಸೂರಿನ ಶ್ರೀ ಸುತ್ತೂರು ಮಠ ಸ್ಪಂದಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದೆ.

    ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇವತ್ತು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ರೂ.ಗಳ ದೇಣಿಗೆಯನ್ನು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳು ಸಚಿವರಿಗೆ ನೀಡಿದರು. ಸಂಸದರಾದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜೆ.ಎಸ್.ಎಸ್. ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.

    ಮೈಸೂರು ಭಾಗದಲ್ಲಿ ಕೊರೊನಾ ಭೀತಿ ಹೆಚ್ಚಾಗಲು ಕಾರಣವಾಗಿರುವ ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸಚಿವ ವಿ. ಸೋಮಣ್ಣ ಇಂದು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಖಾನೆ ಲಾಕ್‍ಡೌನ್ ಆಗಿರುವುದನ್ನು ಸಚಿವರು ವೀಕ್ಷಿಸಿದರು.

    ಕಾರ್ಖಾನೆಯಲ್ಲಿ 15 ಜನ ಸೆಕ್ಯೂರಿಟಿ ಗಾರ್ಡ್ ಗಳು ಮಾತ್ರ ಇದ್ದು, ಅವರನ್ನು ಇಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಬೇಕಾದ ಊಟ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರು ಸಚಿವರಿಗೆ ಮಾಹಿತಿ ನೀಡಿದರು.

     

  • ಇದೇ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ: ಸಿಎಂ

    ಇದೇ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ: ಸಿಎಂ

    ಹಾಸನ/ಮೈಸೂರು: ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ ಹೇಳಿದ್ದಾರೆ.

    ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸಪ್ತಮಾತೃಕೆ ದೇವಾಲಯದ ರಾಜಗೋಪುರ ಉದ್ಘಾಟನೆ ಮಾಡಲು ಸಿಎಂ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದರು. ಜೊತೆಗೆ ಈ ಬಾರಿ ಬಜೆಟ್‍ನಲ್ಲಿ ಕೃಷಿ ಕಾರ್ಮಿಕರು, ರೈತರು, ಮಹಿಳೆಯರಿಗೆ ಅನುಕೂಲವಾಗುವ ಬಜೆಟ್ ಮಂಡಿಸೋದಾಗಿ ತಿಳಿಸಿದರು.

    ದಾವೋಸ್‍ಗೆ ಹೋಗಿ ಬಂದ ಮೇಲೆ 40ಕ್ಕೂ ಹೆಚ್ಚು ಜನ ಕೈಗಾರಿಕೋದ್ಯಮಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿನಂತಿಸಿದ್ದೇನೆ. ಬಹಳ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಲು ಭರವಸೆ ನೀಡಿದ್ದಾರೆ. ಕೃಷಿಕರಿಗೆ ಸಂಬಂಧಿಸಿದಂತೆ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸಂಬಂಧಿಸಿದಂತೆ ದಾವೋಸ್ ಪ್ರವಾಸ ಅನುಕೂಲ ಆಗಲಿದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಬೇರೆಯವರು ಸಿಎಂ ಆದಾಗ ಅನಾವೃಷ್ಟಿಯಾಗಿತ್ತು. ಆದರೆ ಯಡಿಯೂರಪ್ಪರವರು ಸಿಎಂ ಆದಾಗ ಅತಿವೃಷ್ಟಿಯಾಗಿದೆ. ಯಡಿಯೂರಪ್ಪರವರು ಮೂರು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ. ಯುವಕರು ನಾಚಿಸುವಂತೆ 24 ಗಂಟೆಗಳ ಕಾಲ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ ಎಂದು ಬಿಎಸ್‍ವೈ ಗುಣಗಾನ ಮಾಡಿದರು.

  • ‘ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ’ – ಎಸ್‍ಪಿ ವಿರುದ್ಧ ಸೋಮಣ್ಣ ಗರಂ

    ‘ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ’ – ಎಸ್‍ಪಿ ವಿರುದ್ಧ ಸೋಮಣ್ಣ ಗರಂ

    ತುಮಕೂರು: ಸಿದ್ದಗಂಗಾ ಮಠದ ಒಳಗೆ ಸಚಿವ ಸೋಮಣ್ಣ ಕಾರನ್ನು ಬಿಟ್ಟಿದ್ದಕ್ಕೆ ರಾಮನಗರ ಎಸ್‍ಪಿ ಅನೂಪ್ ಶೆಟ್ಟಿ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ತಿಳಿದು ಸೋಮಣ್ಣ ಅವರು ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ ಎಂದು ಎಸ್‍ಪಿ ವಿರುದ್ಧ ಗರಂ ಆಗಿದ್ದಾರೆ.

    ಮಠದಿಂದ ಹೊರಬರುವ ವೇಳೆ ಎಸ್‍ಪಿ ಅನೂಪ್ ಶೆಟ್ಟಿ ತಮ್ಮ ಕಾರನ್ನು ಒಳ ಬಿಟ್ಟಿದ್ದಕ್ಕೆ ಸಿಬ್ಬಂದಿಗೆ ಬೈದಿರುವ ಬಗ್ಗೆ ಸೋಮಣ್ಣ ಅವರು ಪ್ರತಿಕ್ರಿಯಿಸಿದರು. ನಿಮ್ಮ ಕಾರು ಬಿಟ್ಟಿದ್ದಕ್ಕೆ ಎಸ್‍ಪಿ ಅವರು ಬೈಯ್ಯುತ್ತಿದ್ದಾರೆ ಎಂದು ಹೇಳಿದಾಗ, “ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ” ಎಂದು ಕಿಡಿಕಾರಿದರು. ಇದನ್ನೂ ಓದಿ: ‘ ಬಿಡ್ಬಾರ್ದು ಅಂದ್ರೆ ಬಿಡ್ಬಾರ್ದು, ಗೊತ್ತಾಗಲ್ವಾ ನಿಮ್ಗೆ’ -ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಗರಂ

    “ನಮ್ಮವರದ್ದೇ ಸ್ವಲ್ಪ ಜಾಸ್ತಿ, ಎಸ್‍ಪಿ ಅವರಿಗೆ ಮನವರಿಕೆ ಮಾಡ್ತೀನಿ. ಎಲ್ಲಿ ಹೋದರು ಅವರು? ಅವರೊಂದಿಗೆ ಮಾತನಾಡುತ್ತೇನೆ. ನೀವು ಬೇಜಾರಾಗಬೇಡಿ” ಎಂದು ಹೇಳಿ ಸೋಮಣ್ಣ ಅವರು ಕಾರಿನಲ್ಲಿ ಮಠದಿಂದ ತೆರಳಿದರು.

    ಸಚಿವ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದಕ್ಕೆ ಪೊಲೀಸರ ಸಿಬ್ಬಂದಿ ಮೇಲೆ ಎಸ್‍ಪಿ ಅನೂಪ್ ಶೆಟ್ಟಿ ರೇಗಾಡಿದ್ದಾರೆ. ಮಠದ ಎರಡನೇ ಗೇಟ್‍ನಲ್ಲಿ ಎಸ್‍ಪಿ ಅವರು ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ. “ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್‍ಗೆ ಬರಲ್ಲ. ಒಂದು ಬೋರ್ಡ್ ಮೀಟಿಂಗ್‍ಗೆ ಬರೋ ಯೋಗ್ಯತೆ ಇಲ್ಲ ನಿಮಗೆ. ಟೈಮ್ ಪಾಸ್ ಮಡೋಕೆ ಬರುತ್ತೀರಾ” ಇಲ್ಲಿ ಎಂದು ಬೈದಿದ್ದಾರೆ.

    “ಮೂರು ದಿನದಿಂದ ಏನು ಕಸ ಗುಡಿಸುತ್ತೀದ್ದೇವಾ ನಾವು ಇಲ್ಲಿ. ಅಯೋಗ್ಯ…. ಇನ್‍ಚಾರ್ಜ್ ಯಾಕೆ ಹಾಕಿದ್ದಾರೆ? ಎಸ್‍ಪಿ ಯಾಕೆ ಹಾಕಿದ್ದಾರೆ? ಅರ್ಥ ಮಾಡಿಕೊಳ್ಳಿ ನಿಮ್ಮ ಯೊಗ್ಯತೆ ಇದ್ದರೆ. ನಮ್ಮನ್ಯಾಕೆ ಕರೆಸುತ್ತೀರಾ. ನಮಗೆ ಮಾಡೋಕೆ ಕೆಲಸವಿಲ್ವಾ? 10 ಸಲ ಹೇಳಿದ್ದೇನೆ ಗಾಡಿ ಬಿಡಬೇಡಿ ಅಂತ. ಬಿಡಬಾರದು ಅಂದರೆ ಬಿಡಬಾರದು, ಗೊತ್ತಾಗಲ್ವಾ ನಿಮಗೆ? ಯಾವ ಗಾಡಿ ಬರುತ್ತೆ ಒಳಗೆ” ಎಂದು ಪ್ರಶ್ನಿಸಿ ಸಚಿವ ಸೋಮಣ್ಣ ಅವರ ಕಾರು ಮಠದ ಒಳಗೆ ಬಿಟ್ಟ ಸಿಬ್ಬಂದಿಗೆ ಎಸ್‍ಪಿ ಅನೂಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.  ಇದನ್ನೂ ಓದಿ: ರೈತರ ಖಾತೆಗೆ 12 ಸಾವಿರ – ಬೆಂಗಳೂರು ಬದಲು ತುಮಕೂರಿನಲ್ಲೇ ಕಾರ್ಯಕ್ರಮ ಯಾಕೆ?

    ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಳೆದ ಮೂರು ದಿನಗಳಿಂದ ವಿಶೇಷ ಭದ್ರತಾ ಪಡೆ(ಎಸ್‍ಪಿಜಿ) ಟೀಂ ಮೊಕ್ಕಾಂ ಹೂಡಿದೆ. ಸಮಾವೇಶ ನಡೆಯುವ ಕಾಲೇಜು ಆವರಣದ ಸಂಪೂರ್ಣ ಉಸ್ತುವಾರಿ ಎಸ್‍ಪಿಜಿ ನೋಡಿಕೊಳ್ಳುತ್ತಿದೆ. ವೇದಿಕೆ, ಸಮಾವೇಶದ ಗಣ್ಯರು, ಆಸನದ ವ್ಯವಸ್ಥೆ, ಮೋದಿ ಅವರ ಜೊತೆ ಯಾರು ವೇದಿಕೆ ಮೇಲೆ ಕುಳಿತುಕೊಳ್ಳಬೇಕು ಅಂತ ಎಸ್‍ಪಿಜಿ ನಿರ್ಧಾರ ಮಾಡುತ್ತದೆ.

    ಸಮಾವೇಶಕ್ಕೆ ಸಂಪೂರ್ಣವಾಗಿ ಕಪ್ಪು ವಸ್ತ್ರ ನಿಷೇಧ ಮಾಡಲಾಗಿದೆ. ಪೊಲೀಸರನ್ನು ಕೂಡಾ ಎಸ್‍ಪಿಜಿ ತಪಾಸಣೆ ಮಾಡಿ ಸಮಾವೇಶದ ಜಾಗಕ್ಕೆ ಬಿಡಲಾಗುತ್ತಿದೆ. ಸ್ಥಳೀಯ ಪೊಲೀಸರು ಕೇವಲ ಹೊರಗಿನ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಉಳಿದ ಸಂಪೂರ್ಣ ಭದ್ರತೆ ಎಸ್‍ಪಿಜಿ ನೋಡಿಕೊಳ್ಳುತ್ತಿದೆ.

  • ‘ ಬಿಡ್ಬಾರ್ದು ಅಂದ್ರೆ  ಬಿಡ್ಬಾರ್ದು, ಗೊತ್ತಾಗಲ್ವಾ ನಿಮ್ಗೆ’ -ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಗರಂ

    ‘ ಬಿಡ್ಬಾರ್ದು ಅಂದ್ರೆ ಬಿಡ್ಬಾರ್ದು, ಗೊತ್ತಾಗಲ್ವಾ ನಿಮ್ಗೆ’ -ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಗರಂ

    ತುಮಕೂರು: ಸಿದ್ದಗಂಗಾ ಮಠದೊಳಗೆ ವಸತಿ ಸಚಿವ ಸೋಮಣ್ಣ ಅವರ ಕಾರನ್ನು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಅನೂಪ್ ಶೆಟ್ಟಿ ಗರಂ ಆಗಿದ್ದಾರೆ.

    ಸಚಿವ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದಕ್ಕೆ ಪೊಲೀಸರ ಸಿಬ್ಬಂದಿ ಮೇಲೆ ಎಸ್‍ಪಿ ರೇಗಾಡಿದ್ದಾರೆ. ಮಠದ ಎರಡನೇ ಗೇಟ್‍ನಲ್ಲಿ ಎಸ್‍ಪಿ ಅವರು ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ.”ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್‍ಗೆ ಬರಲ್ಲ. ಒಂದು ಬೋರ್ಡ್ ಮೀಟಿಂಗ್‍ಗೆ ಬರೋ ಯೋಗ್ಯತೆ ಇಲ್ಲ ನಿಮಗೆ. ಟೈಮ್ ಪಾಸ್ ಮಡೋಕೆ ಬರುತ್ತೀರಾ ಇಲ್ಲಿ” ಎಂದು ಬೈದಿದ್ದಾರೆ. ಇದನ್ನೂ ಓದಿ: ರೈತರ ಖಾತೆಗೆ 12 ಸಾವಿರ – ಬೆಂಗಳೂರು ಬದಲು ತುಮಕೂರಿನಲ್ಲೇ ಕಾರ್ಯಕ್ರಮ ಯಾಕೆ?

    “ಮೂರು ದಿನದಿಂದ ಏನು ಕಸ ಗುಡಿಸುತ್ತೀದ್ದೇವಾ ನಾವು ಇಲ್ಲಿ. ಅಯೋಗ್ಯ…. ಇನ್‍ಚಾರ್ಜ್ ಯಾಕೆ ಹಾಕಿದ್ದಾರೆ? ಎಸ್‍ಪಿ ಯಾಕೆ ಹಾಕಿದ್ದಾರೆ? ಅರ್ಥ ಮಾಡಿಕೊಳ್ಳಿ ನಿಮ್ಮ ಯೊಗ್ಯತೆ ಇದ್ದರೆ. ನಮ್ಮನ್ಯಾಕೆ ಕರೆಸುತ್ತೀರಾ. ನಮಗೆ ಮಾಡೋಕೆ ಕೆಲಸವಿಲ್ವಾ? 10 ಸಲ ಹೇಳಿದ್ದೇನೆ ಗಾಡಿ ಬಿಡಬೇಡಿ ಅಂತ. ಬಿಡಬಾರದು ಅಂದರೆ ಬಿಡಬಾರದು, ಗೊತ್ತಾಗಲ್ವಾ ನಿಮಗೆ? ಯಾವ ಗಾಡಿ ಬರುತ್ತೆ ಒಳಗೆ” ಎಂದು ಪ್ರಶ್ನಿಸಿ ಸಚಿವ ಸೋಮಣ್ಣ ಅವರ ಕಾರು ಮಠದ ಒಳಗೆ ಬಿಟ್ಟ ಸಿಬ್ಬಂದಿಗೆ ಎಸ್‍ಪಿ ಅನೂಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಕಿಸಾನ್ ಸಮ್ಮಾನ್ ನಾಲ್ಕನೇ ಹಂತದ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಜೊತೆಗೆ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ನಗರದ ಜೂನಿಯರ್ ಕಾಲೇಜು ಮೈದಾನ ಹಾಗೂ ಸಿದ್ದಗಂಗಾ ಮಠದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಸ್ವಾಗತಕ್ಕೆ ಅಣಿಯಾಗಿದೆ. ಭದ್ರತೆಯ ಹಿನ್ನೆಲೆಯಲ್ಲಿ ಮಠದ ಒಳಗೆ ಯಾವುದೇ ವಾಹನಗಳನ್ನು ಬಿಡಬೇಡಿ ಎಂದು ಸಿಬ್ಬಂದಿಗೆ ಎಸ್‍ಪಿ ಸೂಚಿಸಿದ್ದರು. ಆದರೆ ಅವರ ಸೂಚನೆ ಮೀರಿ ಸಿಬ್ಬಂದಿ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದ್ದಕ್ಕೆ ಎಸ್‍ಪಿ ಅನೂಪ್ ಶೆಟ್ಟಿ ಗರಂ ಆಗಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.