Tag: Software Employee

  • ಜಗಳವಿಲ್ಲ, ಆರ್ಥಿಕ ಸಮಸ್ಯೆಯೂ ಇಲ್ಲ- ಅಪಾರ್ಟ್‌ಮೆಂಟ್‌ನಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ

    ಜಗಳವಿಲ್ಲ, ಆರ್ಥಿಕ ಸಮಸ್ಯೆಯೂ ಇಲ್ಲ- ಅಪಾರ್ಟ್‌ಮೆಂಟ್‌ನಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ

    – ಪತಿ, ಇಬ್ಬರು ಮಕ್ಕಳನ್ನ ಬಿಟ್ಟು ಸೂಸೈಡ್

    ಹೈದರಾಬಾದ್: ಮಹಿಳಾ ಸಾಫ್ಟ್‌ವೇರ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಹೈದರಾಬಾದ್‍ನ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ರಮ್ಯಾಕೃಷ್ಣ ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‌ವೇರ್ ಉದ್ಯೋಗಿ. ಜಿಲ್ಲೆಯ ಲಕ್ಷ್ಮಿ ನರಸಿಂಹ ಸ್ವಾಮಿ ಕಾಲೋನಿಯಲ್ಲಿರುವ ಸಾಮ್ರಾಟ್ ಅಪಾರ್ಟ್‌ಮೆಂಟ್‌ನಲ್ಲಿ ರಮ್ಯಾಕೃಷ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ರಮ್ಯಾಕೃಷ್ಣ ಐದು ವರ್ಷಗಳ ಹಿಂದೆ ಗೋಪಿ ಎಂಬವರು ಜೊತೆ ಮದುವೆಯಾಗಿದ್ದರು. ಈ ದಂಪತಿಗೆ ಅವಳಿ ಮಕ್ಕಳಿದ್ದಾರೆ. ಆಕೆಯ ಪತಿ ಗೋಪಿ ಕೂಡ ಸಾಫ್ಟ್‌ವೇರ್ ಉದ್ಯೋಗಿ. ಆದರೆ ಈಗ ರಮ್ಯಾಕೃಷ್ಣರ ಆತ್ಮಹತ್ಯೆಯಿಂದ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ರಮ್ಯಾಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದ ರೂಮಿನಲ್ಲಿ ಡೆತ್‍ನೋಟ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಮ್ಯಾರ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯಕ್ಕೆ ನಾವು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಮಗೆ ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲ ಹಾಗೂ ಕುಟುಂಬದಲ್ಲೂ ಜಗಳಗಳಿಲ್ಲ ಎಂದು ರಮ್ಯಾಕೃಷ್ಣ ಪತಿ ಗೋಪಿ ಹೇಳಿದ್ದಾರೆ. ಆದರೆ ರಮ್ಯಾಕೃಷ್ಣ ಪೋಷಕರು ಗೋಪಿ ನಮ್ಮ ಮಗಳ ಜೊತೆ ಯಾವಾಗಲೂ ಜಗಳ ಮಾಡುತ್ತಿದ್ದನು ಎಂದು ಆರೋಪಿಸಿದ್ದಾರೆ. ಆಕೆಯ ಆತ್ಮಹತ್ಯೆಗೆ ಜಗಳ ಕಾರಣವೇ? ಅಥವಾ ಬೇರೆ ಯಾವುದಾದರೂ ಸಮಸ್ಯೆಗಳಿವೆಯೇ? ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ!

    ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ!

    ಬೆಂಗಳೂರು: ಪತಿಯ ಕಿರುಕುಳ ತಾಳಲಾರದೇ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜೆ.ಪಿ ನಗರದಲ್ಲಿ ನಡೆದಿದೆ.

    ಸುಪ್ರಿತಾ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಸುಪ್ರಿತಾ ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ ನಗರದ 14ನೇ ಕ್ರಾಸ್ ನಲ್ಲಿರುವ ತನ್ನ ಮನೆಯಲ್ಲಿ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಶರಣಾಗಿದ್ದಾಳೆ.

    ಸುಪ್ರಿತಾ, ಅಕ್ಷಯ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೆ ಇಬ್ಬರಿಗೂ ಕೈ ತುಂಬ ಸಂಬಳ ಬರುತ್ತಿತ್ತು. ಕಳೆದ ತಿಂಗಳಷ್ಟೇ ಸುಪ್ರಿತಾ ಹಾಗೂ ಅಕ್ಷಯ್ ಅದ್ಧೂರಿಯಾಗಿ ತಮ್ಮ ಮಗುವಿನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಆದರೆ ಅದೇನಾಯ್ತೋ ಏನೋ ಪತಿ- ಪತ್ನಿ ಇಬ್ಬರ ಸಂಸಾರದಲ್ಲಿ ಬಿರುಕು ಮೂಡಿದೆ.

    ಪತಿ ಅಕ್ಷಯ್ ಇತ್ತೀಚೆಗೆ ತನ್ನ ಪತ್ನಿಗೆ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಅಲ್ಲದೆ ಮನೆಗೆ ಸ್ನೇಹಿತರನ್ನು ಕರೆದುಕೊಂಡು ಬರೋದು ಮತ್ತೆ ಕೆಲಸಕ್ಕೆ ಎಂದು ಹೊರಗೆ ಹೋದರೆ ರಾತ್ರಿಯಾದರೂ ಮನೆಗೆ ಬರುತ್ತಿರಲಿಲ್ಲ. ಅಲ್ಲದೆ ಸುಪ್ರಿತಾ ಏನೇ ಮಾಡಿದರು ಅಕ್ಷಯ್ ಆಕೆಯನ್ನು ಹೀಯಾಳಿಸುತ್ತಿದ್ದನು. ಇದನ್ನು ಸಹಿಸಿಕೊಂಡಿದ್ದ ಸುಪ್ರಿತಾ ತನ್ನ ಕಷ್ಟವನ್ನು ಅಜ್ಜಿಯ ಬಳಿ ಹೇಳಿಕೊಂಡಿದ್ದಳು ಎಂದು ಅವರ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಜೆ.ಪಿ ನಗರ ಪೊಲೀಸರು ಸುಪ್ರಿತಾ ಪತಿ ಅಕ್ಷಯ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.