Tag: snake

  • ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು

    ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು

    ಬಾಗಲಕೋಟೆ: ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಹಿಡಿದಿದ್ದ ಉರಗ ರಕ್ಷರೊಬ್ಬರು ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸಮೀಪ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.

    30 ವರ್ಷ ಪ್ರಾಯದ ಸದಾಶಿವ ನಿಂಗಪ್ಪ ಕರಣಿ ಸಾವನ್ನಪ್ಪಿದ ದುರ್ದೈವಿ. ಬುಧವಾರ ರಾತ್ರಿ ಗ್ರಾಮದಲ್ಲಿ ಹಾವು ಕಾಣಿಸಿಕೊಂಡಿತ್ತು, ನಂತರ ವಿಷಯ ತಿಳಿದ ಸದಾಶಿವ ಕರಣಿ, ಅಲ್ಲಿಗೆ ತೆರಳಿ ಹಾವನ್ನು ಹಿಡಿದಿದ್ದರು. ಹಾವನ್ನು ಹಿಡಿಯುವ ವೇಳೆ ಸದಾಶಿವ ಅವರಿಗೆ ಕಚ್ಚಿತ್ತು. ಬಳಿಕ ಸದಾಶಿವ ಅವರು ಮನೆಯಲ್ಲಿಯೇ ಗಿಡಮೂಲಿಕೆಗಳ ಔಷಧಿ ತೆಗೆದುಕೊಂಡಿದ್ದರು. ಆದರೆ ನಿನ್ನೆ ತಡರಾತ್ರಿ ಹಾವಿನ ವಿಷ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

    ಸದಾಶಿವ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕೆಲಸದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದ್ದರು. ಸದಾಶಿವ ಅವರ ತಂದೆಯೂ ಹಾವು ಹಿಡಿಯುದರಲ್ಲಿ ನಿಸ್ಸಿಮರಾಗಿದ್ದರು. ಹೀಗಾಗಿ ತಂದೆಯಂತೆ ಮಗ ಸದಾಶಿವ ಅವರು ಕೂಡ ಊರಿಗೆ, ಕೆಲ ಮನೆಗಳಿಗೆ ಆಗಮಿಸುತ್ತಿದ್ದ ನಾನಾ ರೀತಿಯ ಹಾವುಗಳನ್ನು ಹಿಡಿಯುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸ್ ಠಾಣೆಗೆ ಬಂದು ಸೆಲ್‍ನಲ್ಲಿ ಕುಳಿತ ಹಾವು ಸೆರೆ

    ಪೊಲೀಸ್ ಠಾಣೆಗೆ ಬಂದು ಸೆಲ್‍ನಲ್ಲಿ ಕುಳಿತ ಹಾವು ಸೆರೆ

    ಗದಗ: ವಿಷಕಾರಿ ಹಾವೊಂದು ಠಾಣೆಯನ್ನು ಒಳಪ್ರವೇಶಿಸಿ ಆರೋಪಿಗಳನ್ನು ಇರಿಸುವ ಸೆಲ್‍ನಲ್ಲಿ ಅವಿತು ಕೂತ ಘಟನೆ ನಗರದ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಠಾಣೆಯಲ್ಲಿ ಆರೋಪಿಗಳನ್ನು ಇರಿಸುವ ಸೆಲ್ ಪಕ್ಕದಲ್ಲಿ ‘ಹುರುಪಂಜರ್’ ಎಂಬ ಜಾತಿಯ ವಿಷಕಾರಿ ಹಾವು ಕಂಡಿದೆ. ಇದನ್ನು ಪೇದೆಯೊಬ್ಬರು ನೋಡಿ ಗಾಬರಿಗೊಂಡಿದ್ದಾರೆ. ಕೂಡಲೇ ಸ್ನೇಕ್ ರೆಹಮಾನ್ ಗೆ ಕರೆ ಮಾಡಿದ್ದಾರೆ. ಸ್ನೇಕ್ ರೆಹಮಾನ್ ಹಾಗೂ ಮಗ ತೌಶೀಫ್ ಇಬ್ಬರು ಕಾರ್ಯಚರಣೆ ನಡೆಸಿ ಹಾವನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇದನ್ನೂ ಓದಿ: ಸಚಿವೆ, ಶಾಸಕರ ಸಭೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ – 1 ಗಂಟೆಯಲ್ಲಿ 4 ಬಾರಿ ಕೈಕೊಟ್ಟ ಕರೆಂಟ್

    ಹಾವನ್ನು ಹಿಡಿಯುವ ವೇಳೆ ಸುಮಾರು ಅರ್ಧ ಗಂಟೆ ಸಿಗದೇ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದೆ. ಅರ್ಧ ಗಂಟೆಗಳ ನಂತರ ಕೊನೆಗೂ ಸೆಲ್‍ನಲ್ಲಿ ಸ್ನೇಕ್ ಸೆರೆ ಸಿಕ್ಕಿದೆ. ಹಾವು ಸಿಕ್ಕ ನಂತರ ಪೊಲೀಸ್ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸುಮಾರು 5 ಸಅಡಿ ಉದ್ದವಿದ್ದ ಹಾವು ಪೊಲೀಸರಲ್ಲಿ ಆತಂಕ ಮೂಡಿಸಿತ್ತು. ನಂತರ ಸ್ನೇಕ್ ರೆಹಮಾನ್ ಅವರು ಹಿಡಿದು ಸುರಕ್ಷಿತವಾಗಿ ನಾರಾಯಣಪುರ ರಸ್ತೆಯ ಗದ್ದಿಹಳ್ಳದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

  • ಕೊರೊನಾದಿಂದ ದೂರವಿರಲು ಹಾವು ತಿಂದ

    ಕೊರೊನಾದಿಂದ ದೂರವಿರಲು ಹಾವು ತಿಂದ

    ಚೆನ್ನೈ: ಕೊರೊನಾ ಸೋಂಕು ತಾಗಬಾರದು ಎಂಬ ಉದ್ದೇಶದಿಂದ ಹಾವೊಂದನ್ನು ತಿಂದ ತಮಿಳುನಾಡಿನ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ತಿರುನೆಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲ್ ಹಾವು ತಿಂದಿದ್ದಾನೆ. ತಾನು ಹಾವು ತಿನ್ನುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಹಾವು ತಿನ್ನುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಪರಿಸದ ಪ್ರೇಮಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಡಿವೇಲ್‍ನನ್ನು ಬಂಧಿಸಿದ್ದು, 7500 ರೂಪಾಯಿ ದಂಡವನ್ನು ಹಾಕಿದ್ದಾರೆ.

    ತನ್ನ ಗದ್ದೆಯಲ್ಲಿ ಸಿಕ್ಕ ಹಾವನ್ನು ಹಿಡಿದಿದ್ದಾನೆ. ಹಾವನ್ನು ಕೊಂದು ನಂತರ ಅದನ್ನು ತಿಂದಿದ್ದಾನೆ. ಕೊರೊನಾ ವೈರಸ್‍ನಿಂದ ದೂರವಿರಲು ಸರಿಸೃಪಗಳ ಭಕ್ಷಣೆ ಉತ್ತಮ ಎಂದು ವಡಿವೇಲ್ ವೀಡಿಯೋದಲ್ಲಿ ಹೇಳಿದ್ದಾನೆ.

  • ಹಾವಿನ ಕಡಿತಕ್ಕೆ ಉಪ್ಪಿನಂಗಡಿಯ ಸ್ನೇಕ್ ಮುಸ್ತಾ ಬಲಿ

    ಹಾವಿನ ಕಡಿತಕ್ಕೆ ಉಪ್ಪಿನಂಗಡಿಯ ಸ್ನೇಕ್ ಮುಸ್ತಾ ಬಲಿ

    – ಪ್ರಾಣ ಬಿಡುವ ಮುನ್ನ ಮೃತದೇಹದಫೋಟೋ ವಾಟ್ಸಪ್ ಸ್ಟೇಟಸ್

    ಮಂಗಳೂರು: ಹಾವು ಹಿಡಿದು ರಕ್ಷಣೆ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿ ಸ್ನೇಕ್ ಮುಸ್ತ ಹಾವು ಹಿಡಿಯುವ ವೇಳೆ ಹಾವು ಕಡಿತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಎಂ.ಆರ್. ಮುಸ್ತಾಫ ಸಾವನ್ನಪಿರುವ ವ್ಯಕ್ತಿಯಾಗಿದ್ದಾರೆ. ಇವರು ಉಪ್ಪಿನಂಗಡಿಯ 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಹೊಸ ಕಾಲನಿ ನಿವಾಸಿಯಾಗಿದ್ದಾರೆ. ಎಂ.ಆರ್. ಮುಸ್ತಾಫ ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದು, ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು.

     

    ಸ್ಥಳೀಯವಾಗಿ ಸ್ನೇಕ್ ಮುಸ್ತಾ ಎಂದೇ ಖ್ಯಾತಿಯಾಗಿದ್ದ ಮುಸ್ತಾಫರವರಿಗೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂತೆಂದು ಕರೆ ಬಂದಿತ್ತು. ಅದನ್ನು ಹಿಡಿದು ರಕ್ಷಿಸಲು ಅಲ್ಲಿಗೆ ತೆರಳಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಇವರ ಕೈಗೆ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದೊಯ್ಯುವ ವೇಳೆ ಹಾದಿ ಮಧ್ಯೆ ಇವರು ಮೃತಪಟ್ಟಿದ್ದಾರೆ.

    ಹಾವು ಹಿಡಿಯುವುದರಲ್ಲಿ ನಿಪುಣತೆಯನ್ನು ಹೊಂದಿದ್ದ ಇವರು ಸುಮಾರು ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದು, ಇದಕ್ಕಾಗಿ ಹಲವು ಸಂಘ- ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುಸ್ತಾಫ ಸಾವನ್ನಪ್ಪುವ ಕೆಲವೇ ಗಂಟೆಗಳ ಮೊದಲು ತನ್ನ ವಾಟ್ಸಪ್ ಸ್ಟೇಟಸ್‍ನಲ್ಲಿ ಮೃತದೇಹದ ಫೋಟೋcವೊಂದನ್ನು ಹಾಕಿ ಖಂಡಿತವಾಗಿಯೂ ತಾವು ಮರಣ ಹೊಂದುವಿರಿ ಮತ್ತು ಅವರೂ ಮರಣ ಹೊಂದುವರು ಎಂದು ಫೋಸ್ಟ್ ಮಾಡಿದ್ದು ಇದೀಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

  • ಹೆಬ್ಬಾವನ್ನೇ ನುಂಗಿದ ಕಾಳಿಂಗ ಸರ್ಪ – ಬೆಳ್ತಂಗಡಿಯಲ್ಲೊಂದು ಅಪರೂಪದ ಅಚ್ಚರಿ

    ಹೆಬ್ಬಾವನ್ನೇ ನುಂಗಿದ ಕಾಳಿಂಗ ಸರ್ಪ – ಬೆಳ್ತಂಗಡಿಯಲ್ಲೊಂದು ಅಪರೂಪದ ಅಚ್ಚರಿ

    ಮಂಗಳೂರು: ಬೃಹತ್ ಗಾತ್ರದ ಹೆಬ್ಬಾವನ್ನೇ ಕಾಳಿಂಗ ಸರ್ಪವೊಂದು ನುಂಗಿದ ಅಪರೂಪದ ಹಾಗೂ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

    ಬೆಳ್ತಂಗಡಿಯ ಸೋಮಂತಡ್ಕ ಎಂಬಲ್ಲಿನ ಮನೆಯೊಂದರ ತೋಟದಲ್ಲಿ ಎರಡು ದಿನದಿಂದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಇದ್ದಲ್ಲೇ ಇತ್ತು. ಇದನ್ನು ಗಮನಿಸಿದ ಮನೆಯವರು ಬೆಳ್ತಂಗಡಿಯ ಉರಗ ತಜ್ಞ ಸ್ನೇಕ್ ಅಶೋಕ್‍ಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದರು. ಈ ವೇಳೆ ಕಾಳಿಂಗ ಸರ್ಪವನ್ನು ಗಮನಿಸಿದ ಉರಗ ತಜ್ಞ ಅಶೋಕ್ ಕಾಳಿಂಗ ಸರ್ಪದ ಹೊಟ್ಟೆಯಲ್ಲಿ ಏನೋ ಇದೆ ಎಂದು ಅದನ್ನು ಹೊರ ತೆಗೆಯಲು ಯತ್ನಿಸಿದರು.

    ಈ ವೇಳೆ ಕಾಳಿಂಗ ಸರ್ಪದ ಹೊಟ್ಟೆಯಿಂದ ಬೃಹತ್ ಆಕಾರದ ಹೆಬ್ಬಾವನ್ನೇ ಹೊರತೆಗೆಯಲಾಗಿದೆ. ಎರಡು ದಿನದ ಮೊದಲೇ ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಿರುವುದರಿಂದ ಹೆಬ್ಬಾವು ಕಾಳಿಂಗ ಸರ್ಪದ ಹೊಟ್ಟೆಯೊಳಗೇ ಉಸಿರುಗಟ್ಟಿ ಮೃತಪಟ್ಟಿದೆ. ಇದೀಗ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    ಹೆಬ್ಬಾವು ಹಾವು, ನಾಯಿ, ಬೆಕ್ಕು, ಕೋಳಿ, ಮೊಲ ಸೇರಿದಂತೆ ಇತರೆ ಪ್ರಾಣಿ ಪಕ್ಷಿಗಳನ್ನು ನುಂಗುತ್ತಿತ್ತು. ಆದರೆ ಇಲ್ಲಿ ಮಾತ್ರ ಹೆಬ್ಬಾವನ್ನೇ ಕಾಳಿಂಗ ಸರ್ಪ ನುಂಗಿ ಅಚ್ಚರಿ ಮೂಡಿಸಿದೆ.

  • ಹಾವಿನ ವಿಷ ಮಾರಾಟ- 1 ಕೋಟಿ ಬೆಲೆಯ ವಿಷದೊಂದಿಗೆ 6 ಮಂದಿ ಅರೆಸ್ಟ್

    ಹಾವಿನ ವಿಷ ಮಾರಾಟ- 1 ಕೋಟಿ ಬೆಲೆಯ ವಿಷದೊಂದಿಗೆ 6 ಮಂದಿ ಅರೆಸ್ಟ್

    ಭುವನೇಶ್ವರ: ಹಾವಿನ ವಿಷವನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಗುಂಪನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

    ಹಾವಿನ ವಿಷವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಗುಂಪನ್ನು ಪತ್ತೆ ಹಚ್ಚಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒರ್ವ ಮಹಿಳೆ ಸೇರಿದಂತೆ 6 ಮಂದಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

    1 ಲೀಟರ್ ಹಾವಿನ ವಿಷ ವಶಪಡಿಸಿಕೊಳ್ಳಲಾಗಿದೆ. ಈ ವಿಷವನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಹಾವಿನ ವಿಷಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಅರಣ್ಯ ಇಲಾಖೆ ಡಿಎಫ್‍ಒ ಅಶೋಕ್ ಮಿಶ್ರಾ ಹೇಳಿದ್ದಾರೆ.

    ಬಂಧಿತ ಆರೋಪಿಗಳು 1 ಲೀಟರ್ ಹಾವಿನ ವಿಷವನ್ನು ತೆಗೆಲು 200 ನಾಗರಹಾವುಗಳನ್ನು ಬಳಕೆ ಮಾಡಿದ್ದಾರೆ. 1972ರ ವನ್ಯಜೀನಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಲಾಗಿದ್ದು, ನಾಳೆ ಕೋರ್ಟಿಗೆ ಆರೋಪಿಗಳನ್ನು ಹಾಜರು ಪಡಿಸುತ್ತೇವೆ ಎಂದು ಅಶೋಕ್ ಮಿಶ್ರಾ ಹೇಳಿದ್ದಾರೆ.

  • ಹಾವು ಸತ್ತ ಪೈಪಿನಿಂದಲೇ ಕುಡಿಯೋ ನೀರು ಪೂರೈಕೆ – ಗ್ರಾ.ಪಂ ವಿರುದ್ಧ ಆಕ್ರೋಶ

    ಹಾವು ಸತ್ತ ಪೈಪಿನಿಂದಲೇ ಕುಡಿಯೋ ನೀರು ಪೂರೈಕೆ – ಗ್ರಾ.ಪಂ ವಿರುದ್ಧ ಆಕ್ರೋಶ

    ಚಿಕ್ಕಮಗಳೂರು: ನೀರಿನ ಪೈಪಿಗೆ ಹಾವುಗಳು ಸಿಕ್ಕಿ ಸಾವನ್ನಪ್ಪಿದ್ದರೂ ಅದೇ ಪೈಪಿನಿಂದ ಕುಡಿಯೋಕೆ ನೀರನ್ನ ಪೂರೈಸ್ತಿರೋ ಗ್ರಾಮ ಪಂಚಾಯ್ತಿ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೋನುಗೂಡು ಗ್ರಾಮಕ್ಕೆ ಕುಡಿಯೋ ನೀರಿಗಾಗಿ ಹಳ್ಳಕ್ಕೆ ಮೋಟರ್ ಇಟ್ಟಿದ್ದಾರೆ. ತಿಂಗಳಿಗೊಂದು ಹಾವುಗಳು ಮೋಟರ್ ನ ಕೆಲ ಭಾಗಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಈ ನೀರನ್ನ ಕುಡಿದು ಊರಿನ ಜನ ನಾನಾ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

    ನೀರಿನ ಸಂಪರ್ಕವಿರೋ ಪೈಪಿಗೆ ಹಾವುಗಳು ಸಿಕ್ಕಿ ಸಾವನ್ನಪ್ಪುತ್ತಿವೆ. ಹಳ್ಳ ಕ್ಲೀನ್ ಮಾಡಿ ಇದಕ್ಕೊಂದು ಶಾಶ್ವತ ಪರಿಹಾರ ಮಾಡಿ ಎಂದು ಪಂಚಾಯ್ತಿ ಗಮನಕ್ಕೆ ತಂದರೂ ಅಧಿಕಾರಿಗಳು ಹಾಗೂ ಸದಸ್ಯರು ಯಾವುದೇ ಕ್ರಮ ಕೈಗೊಳ್ಳದೆ ಕುಡಿಯಲು ಅದೇ ನೀರನ್ನ ಪೂರೈಸುತ್ತಿದ್ದಾರೆಂದು ಸ್ಥಳೀಯರು ಹಾಗೂ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಗ್ರಾಮ ಪಂಚಾಯ್ತಿಯ ಬೇಜಾವಾಬ್ದಾರಿ ಕಂಡ ಸ್ಥಳೀಯರು ಮೋಟರ್ ಇರೋ ಜಾಗಕ್ಕೆ ಹೋಗಿ ಪೈಪನ್ನ ಮೇಲೆತ್ತಿ ಕಬ್ಬಿಣದ ತಂತಿ ಹಾಗೂ ಕಟಿಂಗ್ ಪ್ಲೇರ್ನಿಂದ ಸತ್ತು ಪೀಸ್, ಪೀಸ್ ಆಗಿರೋ ಹಾವನ್ನ ಪೈಪಿನಿಂದ ಬಿಡಿಸಿದ್ದಾರೆ. ಸ್ಥಳೀಯರೇ ಕುಡಿಯೋ ನೀರಿನ ಮೂಲವನ್ನ ಶುಚಿ ಮಾಡಿ ಅದನ್ನ ವೀಡಿಯೋ ಮಾಡಿಕೊಂಡು ಗ್ರಾಮ ಪಂಚಾಯ್ತಿ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ರೈತ ಸಾವು

    ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿ ರೈತ ಸಾವು

    ಹಾವೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ರೈತ ಸಾವನ್ನಪ್ಪಿರುವ ದುರ್ಘಟನೆ ಹಾವೇರಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ರೈತನನ್ನು 45 ವರ್ಷದ ಹಾಲಪ್ಪ ಕಲ್ಯಾಣಪ್ಪ ಬಂಕಾಪುರ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಜಮೀನಿನಲ್ಲಿ ಮೆಕ್ಕೆಜೋಳದ ಮೇವು ತೆಗೆಯುತ್ತಿದ್ದ ವೇಳೆ ಹಾವು ಕಚ್ಚಿದೆ. ಹಾವು ಕಚ್ಚಿದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಚಿಕಿತ್ಸೆ ಫಲಕಾರಿಯಾಗದೆ ಹಾಲಪ್ಪ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸ್ ಜೀಪ್ ಏರಿದ ನಾಗರಾಜನ ರಕ್ಷಣೆ

    ಪೊಲೀಸ್ ಜೀಪ್ ಏರಿದ ನಾಗರಾಜನ ರಕ್ಷಣೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವೃತ್ತನೀರಿಕ್ಷಕ ಎಂ.ಬಿ.ನವೀನ್ ಕುಮಾರ್ ಪೊಲೀಸ್ ಜೀಪಿನಲ್ಲಿ ಪತ್ತೆಯಾಗಿರುವ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

    ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಕರ್ತವ್ಯ ನಿಮಿತ್ತ ಹೊರ ಹೋಗಿ ಠಾಣೆಗೆ ವಾಪಾಸ್ಸಾಗುತ್ತಿದ್ದಾಗ ಬಸವಭವನದ ಬಳಿ ಬೈಕ್ ಸವಾರರೊಬ್ಬರು ಪೊಲೀಸ್ ಜೀಪಿನಲ್ಲಿ ಹಾವು ಇರೋದನ್ನ ಕಂಡಿದ್ದಾರೆ. ಕೂಡಲೇ ಪೊಲೀಸ್ ಜೀಪ್ ತಡೆದು ಸರ್ಕಲ್ ಇನ್ಸ್‍ಪೆಕ್ಟರ್‍ಗೆ ಮಾಹಿತಿ ನೀಡಿ ವಾಹನ ನಿಲ್ಲಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗರಕ್ಷಕ ಟೂಲ್ಸ್ ಬಾಕ್ಸ್ ಸೇರಿದ್ದ ಹಾವನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಸೆರೆ ಸಿಕ್ಕ ಹಾವಿನ ಹೆಸರು ರಾಮಬಾಣದ ಹಾವು ಅಂತ ಕರೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾವು ಎಲ್ಲಿ ಯಾವಾಗ ಪೊಲೀಸ್ ಜೀಪ್ ಏರಿತೋ ಏನೋ ಆದರೆ ಅದೃಷ್ಟವಶಾತ್ ಹಾವಿನಿಂದ ಪೊಲೀಸರಿಗೆ ಯಾವುದೇ ತೊಂದರೆಯಾಗಿಲ್ಲ.

  • ನಾಗರಾಜನಿಂದ ಕಲ್ಸಂಕ ಜಂಕ್ಷನ್ ಬ್ಲಾಕ್- ರಸ್ತೆ ದಾಟಿಸಲು ಟ್ರಾಫಿಕ್ ಪೊಲೀಸರ ಸಹಕಾರ

    ನಾಗರಾಜನಿಂದ ಕಲ್ಸಂಕ ಜಂಕ್ಷನ್ ಬ್ಲಾಕ್- ರಸ್ತೆ ದಾಟಿಸಲು ಟ್ರಾಫಿಕ್ ಪೊಲೀಸರ ಸಹಕಾರ

    ಉಡುಪಿ: ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಇಂದು ಏಕಾಏಕಿ ಟ್ರಾಫಿಕ್ ಜಾಮ್ ಆಯ್ತು. ಜಂಕ್ಷನ್ ನಲ್ಲಿ ಮೂರು ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಇದ್ದರೂ ಜಾಮ್ ಕ್ಲಿಯರ್ ಮಾಡಲು ಸಾಧ್ಯವಾಗಿಲ್ಲ. ಯಾಕಂದರೆ ನಾಗರಾಜ ರೋಡ್ ಕ್ರಾಸಿಂಗ್ ಮಾಡುತ್ತಿದ್ದ.

    ಉಡುಪಿಯ ಕಲ್ಸಂಕ ಜಂಕ್ಷನ್ ಗೆ ನಾಗರಹಾವು ಬಂದಿತ್ತು. ಅಂಬಾಗಿಲು ರಸ್ತೆ ಕಡೆಯಿಂದ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಹೋಗುವ ಕಡೆ ನಾಗರಹಾವು ನಿಧಾನಕ್ಕೆ ಚಲಿಸುತ್ತಿತ್ತು. ಸಿಮೆಂಟ್ ರಸ್ತೆಯಾದ್ದರಿಂದ ವೇಗವಾಗಿ ರಸ್ತೆದಾಟಲು ನಾಗರಹಾವಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯರು, ವಾಹನ ಸವಾರರು, ಪೊಲೀಸರು ರಸ್ತೆದಾಟಲು ಅವಕಾಶ ಮಾಡಿಕೊಟ್ಟರು.

    ಯಾವುದೇ ವಾಹನಗಳು ಅಡ್ಡ ಚಲಿಸದಂತೆ ನಾಗರಹಾವಿಗೆ ತಬ್ಬಿಬ್ಬಾಗದಂತೆ ನೋಡಿಕೊಂಡರು. ಕೆಲವು ಎಡಬಿಡಂಗಿ ದ್ವಿಚಕ್ರವಾಹನ ಸವಾರರು ಹಾವು ದಾಟುವ ಮೊದಲೇ ರಸ್ತೆದಾಟಲು ಪ್ರಯತ್ನಿಸಿದರೂ ಪೊಲೀಸರು ಅಡ್ಡಗಟ್ಟಿ ನಾಗರಹಾವನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದರು.

    ನಾನು ಸಂಜೆ ಮನೆಗೆ ಹೋಗುತ್ತಿದ್ದ ವೇಳೆ ಕಲ್ಸಂಕ ಜಂಕ್ಷನ್ ಬಳಿ ವಿಪರೀತ ಟ್ರಾಫಿಕ್ ಜಾಮ್ ಇತ್ತು. ಟ್ರಾಫಿಕ್ ಪೊಲೀಸರು ಇದ್ದರೂ ಯಾವ ರಸ್ತೆಗಳನ್ನು ಕ್ಲಿಯರ್ ಮಾಡಿಕೊಡುತ್ತಿರಲಿಲ್ಲ. ಆಶ್ಚರ್ಯಗೊಂಡು ಮುಂದೆ ಬಂದು ನೋಡಿದಾಗ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ಪೊಲೀಸರ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಯಾವುದೇ ಗಡಿಬಿಡಿಯಿಲ್ಲದೆ ನಾಗರಹಾವು ರಸ್ತೆ ದಾಟಿತು ಎಂದು ಪ್ರತ್ಯಕ್ಷದರ್ಶಿ ಮಂಜುನಾಥ್ ಶೇಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.