Tag: snake

  • ಹಾವುಕಚ್ಚಿತ್ತೆಂದು ರೊಚ್ಚಿಗೆದ್ದು ಹಾವನ್ನು ಕಚ್ಚಿ ಕೊಂದು ಮಸಣ ಸೇರಿದ!

    ಹಾವುಕಚ್ಚಿತ್ತೆಂದು ರೊಚ್ಚಿಗೆದ್ದು ಹಾವನ್ನು ಕಚ್ಚಿ ಕೊಂದು ಮಸಣ ಸೇರಿದ!

    ವಡೋದರಾ: ಸಾಮಾನ್ಯವಾಗಿ ಹಾವು ಮನುಷ್ಯರಿಗೆ ಕಚ್ಚಿರೋದನ್ನ ಕೇಳಿರುತ್ತೀರ. ಆದರೆ ಗುಜರಾತ್‍ನಲ್ಲಿ 60 ವರ್ಷದ ವೃದ್ಧರೊಬ್ಬರು ತಮಗೆ ಹಾವು ಕಚ್ಚಿತೆಂದು ಸಿಟ್ಟಿಗೆದ್ದು ಹಾವನ್ನು ಕಚ್ಚಿ ಕೊಂದು ತಾವು ಮೃತಪಟ್ಟಿದ್ದಾರೆ.

    ಹೌದು. ವಿಚಿತ್ರ ಎನಿಸಿದರು ಇದು ಸತ್ಯ. ಗುಜರಾತ್‍ನ ಅಜನ್ವಾ ಗ್ರಾಮದಲ್ಲಿ ಶನಿವಾರ ಇಂತಹದೊಂದು ಘಟನೆ ನಡೆದಿದೆ. ಅಜನ್ವಾ ಗ್ರಾಮದ ನಿವಾಸಿಯಾದ ಪರ್ವತ್ ಬಾಲಾ ಬಾರಿಯಾ(60) ಇಂತಹ ವಿಚಿತ್ರ ಕೆಲಸಕ್ಕೆ ಕೈ ಹಾಕಿದ್ದರು. ಎಂದಿನಂತೆ ಶನಿವಾರದಂದು ಪರ್ವತ್ ಬಾಲಾ ತಮ್ಮ ಗದ್ದೆಯಲ್ಲಿ ನಿಂತು ಲಾರಿಗಳಿಗೆ ಮೆಕ್ಕೆ ಜೋಳವನ್ನು ಲೋಡ್ ಮಾಡಿಸುತ್ತಿದ್ದರು. ಈ ವೇಳೆ ಸ್ಥಳದಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ತಕ್ಷಣ ಕೆಲಸ ಮಾಡುತ್ತಿದ್ದವರೆಲ್ಲ ಹಾವನ್ನು ಕಂಡು ಓಡಿಹೋಗಿದ್ದಾರೆ.

    ಆದರೆ ಪರ್ವತ್ ಬಾಲಾ ಮಾತ್ರ ಸ್ಥಳದಲ್ಲೇ ನಿಂತಿದ್ದರು. ಆಗ ಹಾವು ಅವರ ಕಾಲಿಗೆ ಕಚ್ಚಿದೆ. ಈ ವೇಳೆ ತನ್ನ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ, ತನಗೆ ಈ ಹಾವು ಕಚ್ಚಿದೆ ಎಂದು ಕೋಪಗೊಂಡ ಅವರು ಹಾವನ್ನು ಹಿಡಿದು ವಾಪಸ್ ಅದಕ್ಕೆ ಕಚ್ಚಿ ಸಾಯಿಸಿದ್ದಾರೆ.

    ಬಳಿಕ ಪರ್ವತ್ ಬಾಲಾರನ್ನು ಲುನಾವಡಾ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗೆ ಗೋಧ್ರಾದ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ ಈ ಸಂಬಂಧ ಅಜನ್ವಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಹಾವು ಕಚ್ಚಿ ರೈತ ಮಹಿಳೆ ಸಾವು

    ಹಾವು ಕಚ್ಚಿ ರೈತ ಮಹಿಳೆ ಸಾವು

    ಮಂಡ್ಯ: ಜಮೀನಿಗೆ ನೀರು ಹಾಯಿಸುವಾಗ ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.

    ಮೃತ ದುರ್ದೈವಿ ಮಹಿಳೆಯನ್ನು 50 ವರ್ಷದ ಸಾವಿತ್ರಮ್ಮ ಎಂದು ಗುರುತಿಸಲಾಗಿದೆ. ಇವರು ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ನಿವಾಸಿಯಾಗಿದ್ದಾರೆ.

    ಸಾವಿತ್ರಮ್ಮ ಇಂದು ಬೆಳಗ್ಗಿನ ಜಾವ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳೆಗೆ ನೀರು ಹಾಯಿಸಲು ಗದ್ದೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಹಾವು ಕಚ್ಚಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ ಕೊಡಿಸಿದ ಪೊಲೀಸ್ ಪೇದೆ – ವಿಡಿಯೋ ನೋಡಿ

    ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ ಕೊಡಿಸಿದ ಪೊಲೀಸ್ ಪೇದೆ – ವಿಡಿಯೋ ನೋಡಿ

    ಮೈಸೂರು: ಗಾಯಗೊಂಡಿದ್ದ ನಾಗರಹಾವನ್ನು ಪೊಲೀಸ್ ಪೇದೆಯೊಬ್ಬರು ರಕ್ಷಿಸಿ ಚಿಕಿತ್ಸೆ ಕೊಡಿಸಿದ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸ್ ಪೇದೆಯ ಉರಗ ಪ್ರೇಮ ಎಲ್ಲರ ಮನ ಗೆದ್ದಿದೆ.

    ಮೈಸೂರಿನ ಲಲಿತಾದ್ರಿಪುರದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಕಟ್ಟಡವೊಂದರ ಕಾಮಗಾರಿ ನಡೆಯುತ್ತಿದ್ದ ವೇಳೆ ನಾಗರಹಾವೊಂದು ಗಾಯಗೊಂಡಿತ್ತು. ಇದನ್ನು ಕಂಡ ಪೊಲೀಸ್ ಪೇದೆ ಕೆಂಪರಾಜು ಹಾವನ್ನು ರಕ್ಷಿಸಿದ್ದಾರೆ. ಬಳಿಕ ಅದಕ್ಕೆ ನೀರನ್ನು ಕುಡಿಸಿ ಮೈಸೂರಿನ ಧನ್ವಂತರಿ ರಸ್ತೆಯಲ್ಲಿರೋ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

    ಗಾಯಗೊಂಡ ಹಾವಿಗೆ ಪಶು ಆಸ್ಪತ್ರೆಯಲ್ಲಿ ಅನಾಸ್ತೇಶಿಯಾ ಕೊಟ್ಟು ವೈದ್ಯ ಯಶ್ವಂತ್ ಹಾಗೂ ವೈದ್ಯ ತಿಮ್ಮೇಗೌಡ ಚಿಕಿತ್ಸೆ ನೀಡಿದ್ದಾರೆ. ನಾಗರಹಾವು ಚೇತರಿಸಿಕೊಂಡ ಬಳಿಕ ಪೊಲೀಸ್ ಪೇದೆ ತಾವೇ ಖುದ್ದಾಗಿ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

    https://www.youtube.com/watch?v=SFh3fBH6e0I

  • ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಕ್ಯಾನ್ಬೆರಾ: ಸಾಮಾನ್ಯವಾಗಿ ಎರಡು ಕಣ್ಣಿನ ಹಾವನ್ನ ನೋಡಿರುತ್ತೀರಾ. ಅದ್ರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೂರು ಕಣ್ಣಿನ ಹಾವೊಂದು ಸಖತ್ ಸದ್ದು ಮಾಡುತ್ತಿದೆ.

    ಹೌದು. ಸಹಜವಾಗಿ ಹಾವುಗಳೆಂದರೆ ಎರಡು ಕಣ್ಣು ಇರುತ್ತೆ. ಆದರೆ ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಮೂರು ಕಣ್ಣಿನ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋ ಸಖತ್ ವೈರಲ್ ಆಗಿದೆ. ಬುಧವಾರ ಈ ಬಗ್ಗೆ ಆಸ್ಟ್ರೇಲಿಯಾ ಉತ್ತರ ಭಾಗದ ಅರಣ್ಯ ಇಲಾಖೆ ತಮ್ಮ ಫೇಸ್‍ಬುಕ್ ಫೇಜ್‍ನಲ್ಲಿ ಮೂರು ಕಣ್ಣಿನ ಹಾವಿನ ಫೋಟೋ ಜೊತೆಗೆ ಅದರ ವಿಶೇಷತೆಯನ್ನು ಶೇರ್ ಮಾಡಿದೆ. ಈ ಮೂರು ಕಣ್ಣಿನ ಹಾವಿನ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಅರ್ನ್ ಹೆಮ್ ಹೆದ್ದಾರಿಯಲ್ಲಿ ಸಿಕ್ಕಿರುವ ಈ ಹಾವು ಕಾರ್ಪೆಟ್ ಪೈತಾನ್ ಪ್ರಜಾತಿಗೆ ಸೇರಿದ್ದು, ಇದಕ್ಕೆ `ಮಾಂಟಿ ಪೈತಾನ್’ ಎಂದು ಹೆಸರಿಡಲಾಗಿದೆ. ಮಾರ್ಚ್ ನಲ್ಲಿ ಈ ವಿಚಿತ್ರ ಹಾವು ಪತ್ತೆಯಾಗಿತ್ತು. ಆದ್ರೆ ಹುಟ್ಟಿದ ಕೇವಲ ಮೂರೇ ತಿಂಗಳಲ್ಲಿ ಅದು ಸತ್ತು ಹೋಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಆರೋಗ್ಯದ ಸಮಸ್ಯೆ ನಡುವೆಯೂ ಅದು ಮೂರು ತಿಂಗಳ ಕಾಲ ಬದುಕಿದ್ದೇ ಅಚ್ಚರಿಯ ಸಂಗತಿ. ಈ ಮೂರು ಕಣ್ಣಿನ ಹಾವು ಸುಮಾರು 40 ಸೆ.ಮಿ ಉದ್ದವಿತ್ತು ಎಂದಿದ್ದಾರೆ. ಹಾಗೆಯೇ ಈ ಹಾವಿನ ಎಕ್ಸ್-ರೆ ಮಾಡಿ ನೋಡಿದಾಗ ಹಾವಿಗೆ ಎರಡು ತಲೆಯಿಲ್ಲ ಎಂಬುದು ತಿಳಿದುಬಂದಿದೆ. ಆದ್ರೆ ಒಂದೇ ತಲೆಬುರುಡೆಯಲ್ಲಿ ಮೂರನೇ ಕಣ್ಣಿಗೆ ಜಾಗವಿದ್ದು, ಮೂರು ಕಣ್ಣು ಕೂಡ ಕಾರ್ಯ ನಿರ್ವಹಿಸುತ್ತಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

    https://www.facebook.com/ParksandWildlifeNT/posts/2284844224909161

  • ನಾಗರ ಹಾವು ಹಿಡಿದು ಆಡಿಸಿದ ಪ್ರಿಯಾಂಕ ಗಾಂಧಿ- ವಿಡಿಯೋ ನೋಡಿ

    ನಾಗರ ಹಾವು ಹಿಡಿದು ಆಡಿಸಿದ ಪ್ರಿಯಾಂಕ ಗಾಂಧಿ- ವಿಡಿಯೋ ನೋಡಿ

    ಲಕ್ನೋ: ಚುನಾವಣಾ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಉತ್ತರ ಪ್ರದೇಶ ಪೂರ್ವ ಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಹಾವು ಹಿಡಿದು ಎತ್ತಿ ಆಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಪ್ರಿಯಾಂಕ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‍ಬರೇಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ತಾಯಿ ಸೋನಿಯಾ ಗಾಂಧಿ ಪರ ಇಂದು ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಹಾವಾಡಿಗರನ್ನು ನೋಡಿದ ಅಲ್ಲಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಅನೇಕರು ತಮ್ಮ ಮೊಬೈಲ್ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಹಾವಾಡಿಗರ ಬಳಿ ಬಂದ ಪ್ರಿಯಾಂಕ ಅವರು ಕುರ್ಚಿ ಒಂದರ ಮೇಲೆ ಕುಳಿತ್ತಿದ್ದಾರೆ. ಅವರ ಕಾಲಿನ ಸಮೀಪದಲ್ಲಿಯೇ ನಾಗರ ಹಾವು ಇತ್ತು. ಅದನ್ನು ಎತ್ತಿ ಪಕ್ಕಕ್ಕೆ ಸರಿಸಿದರು. ಈ ವೇಳೆ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬರು ನಾವು ಮುಟ್ಟಬೇಡಿ, ಕಚ್ಚುತ್ತೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ ಅವರು, ಏನು ಮಾಡಲ್ಲ ಎಂದು ಪುನರುಚ್ಚರಿಸಿದರು.

    ನಾಗರ ಹಾವನ್ನು ಎತ್ತಿಕೊಂಡು ಬಾಕ್ಸ್‍ನಲ್ಲಿ ಹಾಕಿದರು. ಬಳಿಕ ಮತ್ತೊಂದು ಬಾಕ್ಸ್ ನಲ್ಲಿದ್ದ ಚಿಕ್ಕ ಹಾವನ್ನು ಎತ್ತಿಕೊಂಡು ಕೈಯಲ್ಲಿ ಹಿಡಿದರು. ಈ ವೇಳೆ ಹಾವಾಡಿಗರು ತಮ್ಮ ಸಮಸ್ಯೆಗಳನ್ನು ಪ್ರಿಯಾಂಕ ಗಾಂಧಿ ಅವರ ಬಳಿ ಹೇಳಿಕೊಂಡಿದ್ದಾರೆ.

    ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ 5 ಬಾರಿ ಶಾಸಕರಾಗಿದ್ದ ಅಜಯ್ ರಾಯ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಪ್ರಿಯಾಂಕ ಗಾಂಧಿ ಅವರು ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಹೋದರ ರಾಹುಲ್ ಗಾಂಧಿ, ರಾಯ್‍ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

  • ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ!

    ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ನಶೆಯಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಪಾಲಾದ ಘಟನೆ ನೆಲಮಂಗಲ ಪಟ್ಟಣದ ವಿಶ್ವೇಶ್ವರಪುರದಲ್ಲಿ ನಡೆದಿದೆ.

    ವಿಶ್ವೇಶ್ವರಪುರದ ನಿವಾಸಿ ಗೋವಿಂದರಾಜು(35) ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಪೇಂಟರ್ ಕೆಲಸ ಮಾಡುತ್ತಿದ್ದ ಗೋವಿಂದರಾಜು ಸೋಮವಾರ ರಾತ್ರಿ ಕುಡಿದು ಮನೆಗೆ ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ನಾಗರ ಹಾವನ್ನು ಹಿಡಿಯಲು ಮುಂದಾಗಿದ್ದಾನೆ. ಮೊದಲೇ ಕುಡಿದ ನಶೆಯಲ್ಲಿದ್ದ ಗೋವಿಂದರಾಜು ಹಾವನ್ನು ಹಿಡಿಯಲು ಹೋಗಿ ಅದರಿಂದ ಕಚ್ಚಿಸಿಕೊಂಡಿದ್ದಾನೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗೋವಿಂದರಾಜು ಮನೆಯ ಬೀರಿನ ಹಿಂದೆ ನಾಗರ ಹಾವೊಂದು ಅವಿತುಕೊಂಡಿತ್ತು. ಕುಡಿದು ಮನೆಗೆ ಬಂದಾಗ ಅವಿತಿದ್ದ ಹಾವನ್ನು ಹಿಡಿಯವ ಸಾಹಸಕ್ಕೆ ಗೋವಿಂದರಾಜು ಕೈಹಾಕಿ, ಕೈಬೆರಳಿಗೆ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನೆಲಮಂಗಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

    ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

    ಚೆನ್ನೈ: ನಾಯಿ ತನ್ನನ್ನು ಸಾಕಿದ ಮನೆಯವರಿಗೆ ಸದಾ ನಿಷ್ಠೆ, ಪ್ರಾಮಾಣಿಕವಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಮಿಳುನಾಡಿನ ತಂಜಾವೂರಿನಲ್ಲಿ ತನ್ನ ಮಾಲೀಕನ ಪ್ರಾಣ ಉಳಿಸಿ ನಾಯಿಯೊಂದು ಪ್ರಾಣ ಕಳೆದುಕೊಂಡಿದೆ.

    ಈ ಘಟನೆ ತಂಜಾವೂರ್ ಜಿಲ್ಲೆಯ ವೆಂಗರಯಾನಕುಡಿಕಾಡುನಲ್ಲಿ ಶನಿವಾರ ಮುಂಜಾನೆ ನಡೆದಿದೆ. ನಾಡು ರಸ್ತೆ ನಿವಾಸಿ ರೈತ ನಟರಾಜನ್ (50) ಅವರು ತಮ್ಮ ಸಾಕು ನಾಯಿ ಪಪ್ಪಿಯೊಂದಿಗೆ ಮುಂಜಾನೆ ತೋಟಕ್ಕೆ ವಾಕಿಂಗ್ ಹೋಗಿದ್ದಾರೆ.

    ನಾನು ನನ್ನ ಪಪ್ಪಿಯೊಂದಿಗೆ ವಾಕಿಂಗ್ ಮಾಡುತ್ತಿದ್ದಾಗ 5 ಅಡಿ ಉದ್ದದ ಹಾವು ನನ್ನ ಮುಂದೆ ಇತ್ತು. ಹಾವನ್ನು ನೋಡಿದ ನಾನು ಭಯದಿಂದ ನಿಂತುಕೊಂಡು ನಿಧಾನವಾಗಿ ಹಿಂದಕ್ಕೆ ಹಜ್ಜೆ ಹಾಕುತ್ತಿದ್ದೆ. ಆಗ ಅದು ನನಗೆ ಕಚ್ಚಲು ಮುಂದಾಯಿತು. ಅಷ್ಟರಲ್ಲಿ ನನ್ನ ಪಪ್ಪಿ ಹಾವಿನ ಮೇಲೆ ದಾಳಿ ಮಾಡಿ ಅದನ್ನು ಸಾಯಿಸಿತು. ಆದರೆ ದಾಳಿ ವೇಳೆ ಹಾವು ಕೂಡ ಪಪ್ಪಿ ಮೇಲೆ ಅನೇಕ ಬಾರಿ ಕಚ್ಚಿತ್ತು. ಇದರಿಂದ ಪಪ್ಪಿ ಅಸ್ವಸ್ಥಗೊಂಡಿತ್ತು. ತಕ್ಷಣ ಪಪ್ಪಿಯನ್ನು ಎತ್ತಿಕೊಂಡು ನಾನು ಚಿಕಿತ್ಸೆಗಾಗಿ ಮನೆ ಕಡೆ ಓಡಿ ಹೋದೆ. ಆದರೆ ವೈದ್ಯರು ಬರುವಷ್ಟರಲ್ಲಿ ಪಪ್ಪಿ ಮೃತಪಟ್ಟಿತ್ತು ಎಂದು ನಟರಾಜನ್ ಹೇಳಿ ಕಣ್ಣೀರಾಕಿದ್ದಾರೆ.

    ನಟರಾಜನ್ ಸುಮಾರು ನಾಲ್ಕು ವರ್ಷದಿಂದ ಈ ನಾಯಿಯನ್ನು ಸಾಕುತ್ತಿದ್ದು, ಪಪ್ಪಿ ಅವರ ಕುಟುಂಬದಲ್ಲಿ ಒಬ್ಬನಾಗಿತ್ತು. ನಟರಾಜನ್ ಪತ್ನಿ ಮತ್ತು ಇಬ್ಬರು ಮಕ್ಕಳು ಸಹ ನಾಯಿಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಎಲ್ಲೆ ಹೋದರು ಹಿಂಬಾಲಿಸಿಕೊಂಡು ಹೋಗುತ್ತಿತ್ತು.

  • ಹುತ್ತದ ಒಳಗೂ ಬಿಸಿ, ಹೊರಗೂ ಬಿಸಿ- ತಂಪಿಗಾಗಿ ಮನೆ, ದೇಗುಲಗಳತ್ತ ಹಾವುಗಳು

    ಹುತ್ತದ ಒಳಗೂ ಬಿಸಿ, ಹೊರಗೂ ಬಿಸಿ- ತಂಪಿಗಾಗಿ ಮನೆ, ದೇಗುಲಗಳತ್ತ ಹಾವುಗಳು

    – ಉರಗತಜ್ಞರಿಗೆ ಫುಲ್ ಡಿಮ್ಯಾಂಡ್

    ಚಿಕ್ಕಬಳ್ಳಾಪುರ: ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರು ಸೇರಿ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುತ್ತಿವೆ. ಮತ್ತೊಂದೆಡೆ ವಿಪರೀತ ಸೆಕೆ. ಮನುಷ್ಯರು ಫ್ಯಾನು, ಏಸಿಗಳ ಮೊರೆ ಹೋಗುತ್ತೇವೆ. ಆದ್ರೆ ಪ್ರಾಣಿಗಳು ತಂಪಾದ ಜಾಗವನ್ನು ಹುಡುಕಿಕೊಂಡು ಬರುತ್ತಿವೆ. ಹೀಗೆ ಹಾವುಗಳು ಇದೀಗ ಮನೆ, ದೇವಸ್ಥಾನಕ್ಕೆ ನುಗ್ಗುತ್ತಿವೆ.

    ಹೌದು. ಪ್ರಾಣಿ-ಪಕ್ಷಿಗಳು ಬಿಸಿಲ ಧಗೆ ತಡೆದುಕೊಳ್ಳಲು ಆಗದೆ ಎಲ್ಲಿ ನೀರು ಸಿಗುತ್ತೋ, ಎಲ್ಲಿ ತಂಪಾದ ವಾತಾವರಣ ಇದೆಯೋ ಅಲ್ಲಿಗೆ ಹೋಗುತ್ತಿವೆ. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಹಾವುಗಳ ಕಾಟ ಶುರುವಾಗಿದೆ. ಬಿಸಿಲ ಬೇಗೆ ತಡೆದುಕೊಳ್ಳಲು ಸಾಧ್ಯವಾಗದೇ ದೇಗುಲ, ಮನೆಗಳಿಗೆ ಹಾವುಗಳು ನುಗ್ಗುತ್ತಿವೆ. ಹೀಗೆ ನಾಗರ ಹಾವೊಂದು ಇಲ್ಲಿನ ಶ್ರೀನಿವಾಸ ಸಾಗರ ಬಳಿ ಇರೋ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಸೇರಿಕೊಂಡಿದೆ. ಇದನ್ನು ಕಂಡು ಅರ್ಚಕರು ಬೆಚ್ಚಿ ಬಿದ್ದಿದ್ದಾರೆ ಎಂದು ಉರಗ ತಜ್ಞ ಪೃಥ್ವಿರಾಜ್ ತಿಳಿಸಿದ್ದಾರೆ.

    ದೇವಸ್ಥಾನದ ಕಥೆ ಒಂದ್ಕಡೆಯಾದರೆ, ಚಿಕ್ಕಬಳ್ಳಾಪುರ ನಗರದ ವಿವಿಧೆಡೆ ಮನೆಗಳಲ್ಲಿ ಇದ್ದಕ್ಕಿದ್ದ ಹಾಗೆ ಹಾವುಗಳು ಪ್ರತ್ಯಕ್ಷವಾಗುತ್ತವೆ. ನೀರಿನ ಸಂಪು, ತೋಟದ ಮನೆ, ನೀರಿನ ಗೇಟ್ ವಾಲ್, ತಂಪಾದ ಸಸಿಗಳ ಮಧ್ಯೆ, ಮನೆ ಕಾಂಪೌಂಡ್ ಹೀಗೆ ಎಲ್ಲೆಂದರಲ್ಲಿ ಹಾವುಗಳು ಕಾಣ ಸಿಗುತ್ತಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದ್ದಾರೆ.

    ಒಟ್ಟಿನಲ್ಲಿ ಬಿಸಿಲಿನ ಝಳಕ್ಕೆ ಹುತ್ತ ಬಿಟ್ಟು ಹೊರ ಬರುತ್ತಿರುವ ಹಾವುಗಳು ಮನೆ ಸೇರಿಕೊಂಡು ಜನರನ್ನು ಭಯಬೀಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯಲ್ಲಿ ಹಾವುಗಳನ್ನು ಹಿಡಿಯೋ ಉರಗತಜ್ಞರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ ಎನ್ನಲಾಗಿದೆ.

  • ಎಟಿಎಂ ಸೇರಿಕೊಂಡ ನಾಗರಾಜ -ವಿಡಿಯೋ ನೋಡಿ

    ಎಟಿಎಂ ಸೇರಿಕೊಂಡ ನಾಗರಾಜ -ವಿಡಿಯೋ ನೋಡಿ

    ಚೆನ್ನೈ: ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇರಳದ ಕಣ್ಣೂರಿನ ಮತಗಟ್ಟೆಯೊಂದರ ವಿವಿ ಪ್ಯಾಟ್‍ನಲ್ಲಿ ಹಾವು ಸೇರಿಕೊಂಡಿತ್ತು. ತಮಿಳುನಾಡಿನ ಕೊಯಂಬತ್ತೂರಿನ ಥಾನಿರಪಂಡಾಲಾ ರಸ್ತೆಯ ಎಟಿಎಂ ಕೇಂದ್ರದಲ್ಲಿ ಹಾವು ಸೇರಿಕೊಂಡಿತ್ತು.

    ಜನರು ಹಣ ಪಡೆದುಕೊಳ್ಳಲು ಎಟಿಎಂ ಮುಂದೆ ನಿಂತಿದ್ದರು. ಈ ವೇಳೆ ಒಬ್ಬರಿಗೆ ಎಟಿಎಂ ಕೇಂದ್ರದಲ್ಲಿ ಹಾವು ಕಾಣಿಸಿಕೊಂಡಿದೆ. ಕೂಡಲೇ ಹೊರ ಬಂದ ವ್ಯಕ್ತಿ ಜನರಿಗೆ ವಿಷಯ ತಿಳಿಸಿದ್ದಾರೆ. ಕೊನೆಗೆ ಉರಗ ರಕ್ಷಕರಿಗೆ ಕರೆಸಿ ಹಾವನ್ನು ಸೆರೆಹಿಡಿಯಲಾಗಿದೆ. ಬೇಸಿಗೆ ಆಗಿದ್ದರಿಂದ ತಂಪು ಪ್ರದೇಶಗಳತ್ತ ಹಾವುಗಳು ಆಗಮಿಸುತ್ತೇವೆ. ಹೀಗೆ ಬಂದಾಗ ಅವುಗಳನ್ನು ಸಾಯಿಸದೇ ನಮಗೆ ಮಾಹಿತಿ ನೀಡಿ ಎಂದು ಉರಗ ತಜ್ಞರು ತಿಳಿಸಿದ್ದಾರೆ.

    ಹಾವು ಎಟಿಎಂ ಹಿಂದೆ ಮತ್ತು ಎಸಿ ಹತ್ತಿರ ಕುಳಿತಿತ್ತು. ಉರಗ ತಜ್ಞ ಹಾವನ್ನು ಸೆರೆಹಿಡಿಯುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಮಂಗಳವಾರ ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕಯಿ ನಿರ್ವಾಚನದ ಬೂತ್ ನಲ್ಲಿ ವಿವಿ ಪ್ಯಾಟ್ ತೆರೆಯುತ್ತಿದ್ದಂತೆ ಚಿಕ್ಕ ಹಾವು ಕಾಣಿಸಿಕೊಂಡಿತ್ತು. ಕೂಡಲೇ ಚುನಾವಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಾವನ್ನು ಓಡಿಸಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.

  • ವಿವಿ ಪ್ಯಾಟ್‍ನಲ್ಲಿ ಸೇರಿಕೊಂಡ ನಾಗ!

    ವಿವಿ ಪ್ಯಾಟ್‍ನಲ್ಲಿ ಸೇರಿಕೊಂಡ ನಾಗ!

    ತಿರುವನಂತಪುರಂ: ಹಾವುಗಳು ಚಿಕ್ಕ ಸ್ಥಳ ಸಿಕ್ಕರೂ ಸಾಕು ಸೇರಿಕೊಳ್ಳುತ್ತವೆ. ಬೈಕ್, ಕಾರ್ ಡಿಕ್ಕಿ, ಗ್ಯಾಸ್ ಸಿಲಿಂಡರ್ ಕೆಳಗೆ, ಶೂಗಳಲ್ಲಿ ಹೀಗೆ ಹಾವುಗಳು ಎಲ್ಲೆಂದರಲ್ಲಿ ಸೇರಿಕೊಳ್ಳುತ್ತವೆ. ಇದೀಗ ಕೇರಳದ ಕಣ್ಣೂರಿನ ಮತಗಟ್ಟೆಯ ವಿವಿ ಪ್ಯಾಟ್‍ನಲ್ಲಿ ಹಾವು ಸೇರಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು.

    ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕಯಿ ನಿರ್ವಾಚನದ ಬೂತ್ ನಲ್ಲಿ ಇಂದು ಬೆಳಗ್ಗೆ ವಿವಿ ಪ್ಯಾಟ್ ತೆರೆಯುತ್ತಿದ್ದಂತೆ ಚಿಕ್ಕ ಹಾವು ಕಾಣಿಸಿಕೊಂಡಿತ್ತು. ಕೂಡಲೇ ಚುನಾವಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಾವನ್ನು ಓಡಿಸಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಕನ್ನೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಪಿ.ಕೆ.ಶ್ರೀಮತಿ (ಸಿಪಿಐ+ಎಲ್‍ಡಿಎಫ್) ಮತ್ತು ಕೆ.ಸುರೇಂದ್ರನ್ (ಕಾಂಗ್ರೆಸ್+ಯುಡಿಎಫ್) ಸ್ಪರ್ಧೆ ಮಾಡಿದ್ದಾರೆ. ಕೇರಳದ ಎಲ್ಲ 20 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.