Tag: snake

  • ಅಂಗಿಯಲ್ಲಿ ಸೇರಿದ್ದ ಹಾವನ್ನು ಅಜ್ಜನಿಗೆ ಗೊತ್ತಾಗದಂತೆ ಹೊರ ತೆಗೆದ ಉರಗ ತಜ್ಞ: ವಿಡಿಯೋ ನೋಡಿ

    ಅಂಗಿಯಲ್ಲಿ ಸೇರಿದ್ದ ಹಾವನ್ನು ಅಜ್ಜನಿಗೆ ಗೊತ್ತಾಗದಂತೆ ಹೊರ ತೆಗೆದ ಉರಗ ತಜ್ಞ: ವಿಡಿಯೋ ನೋಡಿ

    ಮುಂಬೈ: ವೃದ್ಧರೊಬ್ಬರ ಅಂಗಿಯೊಳಗೆ ಸೇರಿದ್ದ ವಿಷಪೂರಿತ ಹಾವನ್ನು ಆತನಿಗೆ ಗೊತ್ತಾಗದಂತೆ ಹೊರ ತೆಗೆದು, ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    ಅಹ್ಮದ್‍ನಗರದ ಸರ್ಕಾರಿ ಆಸ್ಪತ್ರೆಗೆ ಅನಾರೋಗ್ಯ ಪೀಡಿತ ವೃದ್ಧರೊಬ್ಬರು ಬಂದಿದ್ದರು. ಆದರೆ ಚಿಕಿತ್ಸೆ ವಿಳಂಬವಾಗಿದ್ದರಿಂದ ಆಸ್ಪತ್ರೆಯ ಒಂದು ಕಂಬದ ಬಳಿ ಮಲಗಿದ್ದರು. ಈ ವೇಳೆ ವಿಷಪೂರಿತ ಹಾವೊಂದು ಮೆಲ್ಲಗೆ ನುಸುಳಿ ಅಜ್ಜನ ಅಂಗಿಯೊಳಗೆ ತೂರಿಕೊಂಡುಬಿಟ್ಟಿತ್ತು. ಅಜ್ಜನ ಬೆನ್ನಲ್ಲಿ ತಣ್ಣಗೆ ಮಲಗಿತ್ತು.

    ಅಜ್ಜನ ಅಂಗಿಯೊಳಗೆ ಹಾವು ಇರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಕೂಡಲೇ ಉರಗ ತಜ್ಞರೊಬ್ಬರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಆಗಮಿಸಿದ ಉರಗ ತಜ್ಞ, ನಿಧಾನವಾಗಿ ಅಜ್ಜನ ಅಂಗಿಯಲ್ಲಿ ಕೈ ಹಾಕಿ ಹಾವನ್ನು ಹೊರತೆಗೆದಿದ್ದಾರೆ. ಈ ಮೂಲಕ ಅಜ್ಜನ ಪ್ರಾಣ ರಕ್ಷಿಸಿದ್ದಾನೆ.

    ಈ ಕುರಿತು ಮಾತನಾಡಿರುವ ಉರಗ ತಜ್ಞ, ಇದಕ್ಕೆ ಹಿಂದಿಯಲ್ಲಿ ಹರೆ ಸಾಂಪ್ (ಹಸಿರು ಹಾವು) ಎಂದು ಕರೆಯುತ್ತಾರೆ. ಇದು ವಿಷಪೂರಿತ ಹಾವಾಗಿದ್ದು ಯಾರಾದರೂ ತೊಂದರೆ ಕೊಟ್ಟರೆ ಮಾತ್ರ ಕಚ್ಚುತ್ತದೆ. ಹೀಗಾಗಿ ವೃದ್ಧನ ಅಂಗಿ ಪ್ರವೇಶ ಮಾಡಿದರೂ ಕಚ್ಚಿಲ್ಲ. ಒಂದು ವೇಳೆ ಅವರು ಯಾವುದಾರೂ ಕಡೆಗೆ ಹೊರಳಿ, ಅದಕ್ಕೆ ನೋವು ಉಂಟು ಮಾಡಿದ್ದರೆ ಕಚ್ಚುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ.

    https://youtu.be/RO0NVNGdmSI

  • ಶೂ ಒಳಗೆ ಸೈಲೆಂಟಾಗಿ ಕೂತ ಪುಟಾಣಿ ನಾಗ!

    ಶೂ ಒಳಗೆ ಸೈಲೆಂಟಾಗಿ ಕೂತ ಪುಟಾಣಿ ನಾಗ!

    -ಬೆಳಗ್ಗೆ ಬಾಗಿಲು ತೆರೆದವರಿಗೆ ದರ್ಶನ ಕೊಟ್ಟ ಹಾವು

    ಬೆಂಗಳೂರು: ಮನೆ ಹೊರಗಡೆ ಇರಿಸಲಾಗಿದ್ದ ಶೂ ಒಳಗೆ ಸೈಲೆಂಟಾಗಿ ಕೂತಿದ್ದ ಪುಟಾಣಿ ಹಾವಿನ ಮರಿಗಳನ್ನು ಕಂಡು ಮನೆಮಂದಿಯಲ್ಲ ಗಾಬರಿಗೊಂಡಿದ್ದಾರೆ.

    ಶೂ ಧರಿಸುವಾಗ ಎಚ್ಚರವಹಿಸಿ ಯಾಕೆಂದರೆ ಯಾವ ಹುತ್ತದಲ್ಲಿ ಯಾವ ಹಾವಿರತ್ತೋ ಎಂಬ ಮಾತಿನಂತೆ ಈಗ ಯಾವ ಶೂನಲ್ಲಿ ಯಾವ ಹಾವಿರತ್ತೋ ಎನ್ನುವ ಸ್ಥಿತಿ ಬಂದಿದೆ. ಹೌದು. ಬೆಂಗಳೂರಿನ ವಿದ್ಯಾರಣ್ಯಪುರದ ಮನೆಯೊಂದರಲ್ಲಿ ಶೂನೊಳಗೆ ಹಾವಿನ ಮರಿ ಸೇರಿಕೊಂಡ ಘಟನೆ ನಡೆದಿದೆ. ಮನೆಯಲ್ಲಿದ್ದ ಶೂ ಹಾಗೂ ಚಪ್ಪಲಿ ರಾಶಿಯಲ್ಲಿದ್ದ ಶೂ ಒಳಗೆ ಹಾವಿನ ಮರಿಯೊಂದು ಸೇರಿಕೊಂಡಿದ್ದು, ಚಪ್ಪಲಿ ರಾಶಿಯಲ್ಲಿ ಎನೋ ಸದ್ದಾಗುತ್ತಿದೆ ಎಂದು ಮನೆಮಂದಿ ಹತ್ತಿರ ಹೋಗಿ ನೋಡಿದಾಗ ಹಾವಿನ ಮರಿ ಪತ್ತೆಯಾಗಿದೆ.

     

    ಹಾವನ್ನು ಕಂಡು ಗಾಬರಿಯಾಗಿ ಮನೆಯವರು ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಉರಗ ತಜ್ಞ ರಾಜೇಶ್ ಅವರು ಹಾವನ್ನು ಶೂ ಇಂದ ಹೊರತೆಗೆದು ರಕ್ಷಿಸಿದ್ದಾರೆ.

    ಇನ್ನೊಂದೆಡೆ, ಪುಟ್ಟ ನಾಗರಾಜ ದೊಮ್ಮಲೂರಿನಲ್ಲಿ ಇರುವ ಮನೆಯೊಂದರ ಬಾಗಿಲಿನಿ ಮುಂದೆ ಸೈಲೆಂಟಾಗಿ ಕೂತಿತ್ತು. ಬೆಳಗ್ಗೆ ಮನೆಮಂದಿ ಬಾಗಿಲು ತೆಗೆಯುತ್ತಿದ್ದಂತೆ ಹಾವಿನ ಮರಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಉರಗ ತಜ್ಞ ಜಯರಾಜ್ ಹಾವನ್ನು ಸೆರೆಹಿಡಿದು ರಕ್ಷಿಸಿ ಮನೆಮಂದಿಯ ಆತಂಕ ದೂರ ಮಾಡಿದ್ದಾರೆ.

    https://www.youtube.com/watch?v=uAMKmcXmC-U

  • ತುಮಕೂರು, ಚಾಮರಾಜನಗರದಲ್ಲಿ ಕೆರೆ ಹಾವನ್ನು ನುಂಗಿದ ನಾಗ!

    ತುಮಕೂರು, ಚಾಮರಾಜನಗರದಲ್ಲಿ ಕೆರೆ ಹಾವನ್ನು ನುಂಗಿದ ನಾಗ!

    ತುಮಕೂರು/ಚಾಮರಾಜನಗರ: ನಾಗರಹಾವೊಂದು ಕೆರೆ ಹಾವನ್ನು ನುಂಗಿದ ಘಟನೆ ತುಮಕೂರಿನ ರಂಗಾಪುರದಲ್ಲಿ ನಡೆದಿದೆ.

    ನಾಗರ ಹಾವೊಂದು ಕೆರೆ ಹಾವನ್ನು ಬೆನ್ನತ್ತಿದ್ದು, ಇದರಿಂದ ಬೆದರಿದ ಕೆರೆ ಹಾವು ಈರುಳ್ಳಿ ಅಂಗಡಿಗೆ ನುಗ್ಗಿದೆ. ಈ ವೇಳೆ ನಾಗರಹಾವು ಕೆರೆ ಹಾವನ್ನು ಸೆಣಸಿ ಅದನ್ನು ನುಂಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ರಕ್ಷಕ ದಿಲೀಪ್, ನಾಗರಹಾವನ್ನು ಹಿಡಿದು ನಾಮದ ಚಿಲುಮೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಕೆರೆ ಹಾವು ಹಾಗೂ ನಾಗರ ಹಾವನ್ನು ನೋಡಿ ಸ್ಥಳೀಯರು ಗಾಬರಿಗೊಂಡಿದ್ದರು.

    ಇತ್ತ ಚಾಮರಾಜನಗರ ಸಮೀಪ ತಾಳವಾಡಿಯ ಕಲ್ಮಂಡಿಪುರದಲ್ಲೂ ಕೂಡ ನಾಗರಹಾವೊಂದು ಕೆರೆ ಹಾವನ್ನು ನುಂಗಿತ್ತು. ರಸ್ತೆ ಬದಿಯಲ್ಲಿ ಮಲಗಿದ್ದ ನಾಗರಹಾವು ಹಸಿವು ತಾಳಲಾರದೆ ಅಲ್ಲಿಯೇ ಇದ್ದ ಕೆರೆ ಹಾವನ್ನು ನುಂಗಿದೆ. ನಾಗರಹಾವು ಕೆರೆ ಹಾವನ್ನು ನುಂಗಲು ಸಾಕಷ್ಟು ಸಮಯ ತೆಗೆದು ಕೊಂಡಿದ್ದು ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಹಾವುಗಳು ಕಪ್ಪೆ ಅಥವಾ ಇಲಿಯನ್ನು ನುಂಗುವುದು ಸಾಮಾನ್ಯ. ಆದರೆ ಇಲ್ಲಿ ಹಾವು-ಹಾವನ್ನೇ ನುಂಗಿರುವುದು ಆಶ್ಚರ್ಯ ಮೂಡಿಸಿದೆ.

    https://www.youtube.com/watch?v=O52eQlt43G0

  • ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಆಸ್ಟಿನ್: ಸೂಪರ್ ಮಾರ್ಕೆಟ್‍ವೊಂದರ ಶಾಪಿಂಗ್ ಕಾರ್ಟ್‍ನಲ್ಲಿ ಪತ್ತೆಯಾಗಿದ್ದ ಹಾವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಅಮೆರಿಕದ ಟೆಕ್ಸಾಸ್‍ನ ವಾಲ್‍ಮಾರ್ಟ್ ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದೆ. ಸೂಪರ್ ಮಾರ್ಕೆಟ್‍ನ ಶಾಪಿಂಗ್ ಕಾರ್ಟ್ ಇಡುವ ಸ್ಥಳದಲ್ಲಿ ಈ ಹಾವು ಪತ್ತೆಯಾಗಿತ್ತು. ಎರಡು ಕಾರ್ಟ್‍ಗಳ ನಡುವೆ ಸಿಲುಕಿಕೊಂಡಿದ್ದ ಹಾವನ್ನು ನೋಡಿ ಸಿಬ್ಬಂದಿ ಮೊದಲು ಭಯಗೊಂಡು ಕೂಗಾಡಿದ್ದಾರೆ. ಆಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಹಾವನ್ನು ನೋಡಿ ಗಾಬರಿಯಾಗಿದ್ದಾರೆ. ಈ ವೇಳೆ ಅಲ್ಲೆ ಇದ್ದ ಉರಗ ತಜ್ಞರೊಬ್ಬರು ಸುರಕ್ಷಿತವಾಗಿ ಹಾವನ್ನು ಸೆರೆಹಿಡಿದು ರಕ್ಷಿಸಿದ್ದಾರೆ.

    ಈ ಬಗ್ಗೆ ಯುಎಸ್‍ನ ಈಶಾನ್ಯ ಪೊಲೀಸ್ ಇಲಾಖೆ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಬರೆದು ಹಾವಿನ ಫೋಟೋವನ್ನು ಹಾಕಿ ಅಪ್ಲೋಡ್ ಮಾಡಿದೆ. ಶನಿವಾರದಂದು ಇಲಾಖೆ ಹಾವಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವರೆಗೆ ಈ ಪೋಸ್ಟ್ ಅನ್ನು ಸಾವಿರಾರು ಮಂದಿ ಶೇರ್ ಹಾಗೂ ಲೈಕ್ ಮಾಡಿದ್ದಾರೆ.

    ಈ ಬಗ್ಗೆ ಪೊಲೀಸರು ಮಾತನಾಡಿ, ಸ್ಥಳದಲ್ಲಿ ತುಂಬಾ ಮಳೆ ಬಂದ ಕಾರಣಕ್ಕೆ ಅದರಿಂದ ರಕ್ಷಣೆಗಾಗಿ ಹಾವು ಸೂಪರ್ ಮಾರ್ಕೆಟ್ ಒಳಗೆ ಬಂದಿದೆ. ಈ ವೇಳೆ ಶಾಪಿಂಗ್ ಕಾರ್ಟ್‍ನಲ್ಲಿ ಸೇರಿಕೊಂಡಿರಬಹುದು ಎಂದು ಊಹಿಸಿದ್ದಾರೆ.

    ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2017ರಲ್ಲಿ ಮಹಿಳೆಯೊಬ್ಬರು ಸೂಪರ್ ಮಾರ್ಕೆಟ್‍ನಲ್ಲಿ ಫ್ರೀಜ್ಡ್ ನಲ್ಲಿ ಇರಿಸಿದ್ದ ಮೊಸರು ತೆಗೆದುಕೊಳ್ಳುವ ವೇಳೆ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು.

    https://www.facebook.com/NortheastPD/posts/1024911421052498

  • ಕಪ್ಪೆ ಕಚ್ಚಿಕೊಂಡು ಮರ ಏರಿದ ಹಾವು – ವಿಡಿಯೋ ನೋಡಿ

    ಕಪ್ಪೆ ಕಚ್ಚಿಕೊಂಡು ಮರ ಏರಿದ ಹಾವು – ವಿಡಿಯೋ ನೋಡಿ

    ಚಿಕ್ಕಮಗಳೂರು: ಹಾವು ಕಪ್ಪೆಗಳನ್ನ ತಿಂದು ಬದುಕುದು ಸಾಮಾನ್ಯ. ಆದರೆ ಕಪ್ಪೆಯನ್ನು ಕಚ್ಚಿಕೊಂಡು ಮರ ಹತ್ತುವ ದೃಶ್ಯ ನೋಡಲು ಸಿಗುವುದು ಪ್ರಕೃತಿಯಲ್ಲಿ ತುಂಬಾ ವಿರಳ. ಅಂತಹ ಅಪರೂಪದ ಘಟನೆಗೆ ಕಾಫಿನಾಡು ಸಾಕ್ಷಿಯಾಗಿದೆ.

    ಶೃಂಗೇರಿ ತಾಲೂಕಿನ ಸಸಿಮನೆ ಗ್ರಾಮದ ಶಿವಶಂಕರ್ ಎಂಬವರು ಅಂತಹ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಹಳ್ಳೀಲಿ ಮನೆ ಅಕ್ಕ-ಪಕ್ಕ, ಹಿಂದೆ-ಮುಂದೆ ಹಾವುಗಳು ಬರುವುದು ಮಾಮೂಲಿ. ಹಳ್ಳಿಗರು ಅವುಗಳನ್ನು ಏನೂ ಮಾಡುವುದಿಲ್ಲ. ಬರುತ್ತವೆ, ಹೋಗುತ್ತವೆ ಎಂದು ಸುಮ್ಮನಾಗುತ್ತಾರೆ. ಮನೆಯೊಳಗೆ ಬಂದರೆ ಅಷ್ಟೇ ಹಿಡಿದು ಬೇರೆ ಕಡೆಗೆ ಬಿಡುತ್ತಾರೆ.

    ಶಿವಶಂಕರ್ ಅವರ ಮನೆ ಸಮೀಪದ ತೋಟದಲ್ಲಿ ಈ ಹಿಂದೆ ಕೆರೆಹಾವು ಕಾಣಸಿಕೊಂಡಿತ್ತು. ಅದು ಯಾರಿಗೂ ಏನನ್ನೂ ಮಾಡಲ್ಲ, ತನ್ನ ಪಾಡಿ ಹೋಗುತ್ತೆ ಎಂದು ಸುಮ್ಮನಾಗಿದ್ದರು. ಆದರೆ ಬಹಳ ಹೊತ್ತು ಅಲ್ಲಿಯೇ ಕುಳಿತ್ತಿದ್ದ ಹಾವು ಕಪ್ಪೆಯನ್ನು ಕಚ್ಚಿದೆ. ಬಳಿಕ ಪಕ್ಕದಲ್ಲಿದ್ದ ಮರವನ್ನು ಹತ್ತಲು ಯತ್ನಿಸಿದೆ. ಇದೇ ವೇಳೆ, ಮನೆಯ ಹಿಂದೆ ಬಂದ ಮಕ್ಕಳು ಇದನ್ನು ನೋಡಿ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಹಾವಿಗಿಂತ ಕಪ್ಪೆಯೇ ದೊಡ್ಡದಾಗಿದ್ದು, ಹಾವು ಅದನ್ನು ನುಂಗಲೂ ಆಗದೇ ಸ್ವಲ್ಪ ಹೊತ್ತು ಪರದಾಡಿತು. ಕಪ್ಪೆಯೂ ತಪ್ಪಿಸಿಕೊಳ್ಳಲು ಎಲ್ಲಾ ವಿಫಲ ಪ್ರಯತ್ನ ನಡೆಸಿ ಕೊನೆಗೆ ಹಾವಿಗೆ ಶರಣಾಗಿದೆ. ಆದರೆ ಹಾವು ಕಪ್ಪೆಯನ್ನು ಕಚ್ಚಿಕೊಂಡು ಮರ ಹತ್ತಲು ಯತ್ನಿಸುತ್ತಿರುವ ದೃಶ್ಯ ಮಾತ್ರ ವೀಕ್ಷಕರಲ್ಲಿ ಆಶ್ಚರ್ಯ ಮೂಡಿಸುತ್ತಿದೆ.

  • ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

    ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

    ವಾಷಿಂಗ್ಟನ್: ಒಂದು ಹಾವು ಹಾಗೂ ಅಳಿಲಿನ ಮಧ್ಯೆ ಮುಖಾಮುಖಿಯಾದರೆ ಏನಾಗುತ್ತೆ? ಸಾಮಾನ್ಯವಾಗಿ ಅಳಿಲು ಇಹಲೋಕ ತ್ಯಜಿಸುತ್ತೆ. ಆದರೆ ಯುಎಸ್‍ಎನಲ್ಲಿ ಒಂದು ಅಚ್ಚರಿ ನಡೆದಿದೆ. ಇಲ್ಲಿ ಅಳಿಲೊಂದು ಹಾವನ್ನು ತಿಂದು ಸದ್ಯ ಸಖತ್ ಸುದ್ದಿಯಲ್ಲಿದೆ.

    ಹೌದು. ಹೀಗೆ ಹಾವೊಂದನ್ನು ಅಳಿಲು ಹಿಡುದು ತಿನ್ನುತ್ತಿರುವ ಫೋಟೋವೊಂದನ್ನು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವಿಸ್ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಹಾಗೆಯೇ ಈ ಫೋಟೋವನ್ನು ಗಡಾಲ್ಪೆ ಶಿಖರದ ನ್ಯಾಷನಲ್ ಪಾರ್ಕ್ ನಲ್ಲಿ ಸೆರೆ ಹಿಡಿದಿದ್ದು ಅಲ್ಲಿನ ಅಳಿಲುಗಳು ಸಾಧಾರಣವಾಗಿ ಸಸ್ಯವನ್ನೇ ಸೇವಿಸುತ್ತವೆ. ಹಣ್ಣು, ಒಣ ಹಣ್ಣು ಇತ್ಯಾದಿ ಹೀಗೆ. ಆದರೆ, ಹಕ್ಕಿಯ ಮೊಟ್ಟೆ, ಹಲ್ಲಿ ಹಾಗೂ ಹಾವನ್ನು ಕೂಡ ಅಳಿಲುಗಳು ತಿನ್ನುತ್ತವೆ ಎಂಬುದು ಗೊತ್ತಾ? ಅಷ್ಟೇ ಅಲ್ಲದೆ ಈ ಫೊಟೋವನ್ನು ಕ್ಲಿಕ್ಕಿಸಿದ ಕೆಲ ಸಮಯದಲ್ಲೇ ಅಳಿಲು ಹಾವನ್ನು ಇಡಿಯಾಗಿ ತಿಂದು, ಕೊನೆಯದಾಗಿ ಎರಡು ಇಂಚಷ್ಟೇ ಉಳಿಸಿತ್ತು ಎಂದು ಫೋಟೋಗೆ ಕ್ಯಾಪ್ಷನ್ ಕೂಡ ಬರೆಯಲಾಗಿದೆ.

    https://www.facebook.com/nationalparkservice/photos/a.10151984491216389/10156047373616389

    ಹಫಿಂಗ್ಟನ್ ಪೋಸ್ಟ್ ಪ್ರಕಾರ, ಈ ಫೋಟೋ ಹತ್ತು ವರ್ಷದಷ್ಟು ಹಳೆಯದು. ಉದ್ಯಾನದ ರೇಂಜರ್ ವಿಲಿಯಂ ಲೆಗೆಟ್ 2009ರಲ್ಲಿ ಈ ಸೆರೆ ಹಿಡಿದ ಫೋಟೋವನ್ನು ಸೆರೆಹಿಡಿದಿದ್ದರು. ಆದರೆ ಮೇ 10ರಂದು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಹಾವನ್ನು ನೋಡಿದ ಮೇಲೆ ಸ್ವರಕ್ಷಣೆಗೆ ಹೀಗೆ ಮಾಡಿದೆ ಎಂದು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವೀಸ್ ಹೇಳಿದೆ.

    ಇಲ್ಲಿಯರೆಗೆ ಈ ಫೋಟೋವನ್ನು ಸುಮಾರು 3 ಸಾವಿರಕ್ಕೂ ಅಧಿಕ ಬಾರಿ ಷೇರ್ ಮಾಡಿದ್ದು, 7 ಸಾವಿರಕ್ಕೂ ಅಧೀಕ ಮಂದಿ ರಿಯಾಕ್ಟ್ ಮಾಡಿದ್ದಾರೆ. ತುಂಬಾ ಹಳೆಯ ಫೋಟೋವಾಗಿದ್ದರೂ ಈಗ ಇದು ನೆಟ್ಟಿಗರನ್ನು ಅಚ್ಚರಿಗೊಳಿಸುತ್ತಿದೆ.

  • ಮಿರಿಂಡಾ ಕುಡಿದು ದಾರಿ ಕಾಣದೆ ರಸ್ತೆಯಲ್ಲೇ ಹೊರಳಾಡಿದ ಹಾವು!

    ಮಿರಿಂಡಾ ಕುಡಿದು ದಾರಿ ಕಾಣದೆ ರಸ್ತೆಯಲ್ಲೇ ಹೊರಳಾಡಿದ ಹಾವು!

    ಚಿಕ್ಕಮಗಳೂರು: ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿದ್ದ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿ ಹಾಕಿಕೊಂಡು ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ.

    ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆಹಾಕಿದ ಕೆರೆಹಾವು ತಲೆಯನ್ನ ಹೊರತೆಗೆಯಲಾಗದೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಹೋರಾಟ ನಡೆಸಿದೆ. ಆದರೆ ಹಾವಿಗೆ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಬಿದ್ದು, ಹೊರಳಾಡಿ ಏನೇ ಹರಸಾಹಸ ಪಟ್ಟರೂ, ಹಾವಿಗೆ ತಲೆಯನ್ನ ಬಾಟಲಿನಿಂದ ತೆಗೆಯಲು ಸಾಧ್ಯವಾಗಿಲ್ಲ.

    ಇದೇ ವೇಳೆ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಹಾವನ್ನ ಕಂಡು ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನ ಬಾಟಲಿಯಿಂದ ಹೊರತೆಗೆದಿದ್ದಾರೆ. ಶ್ರೀದೇವ್ ಅವರ ಪತ್ನಿ ಉದ್ದವಾದ ಕೋಲಿನಿಂದ ಹಾವಿನ ತಲೆ ಮೇಲಿದ್ದ ಬಾಟಲಿಗೆ ಒತ್ತಿ ಹಿಡಿದಿದ್ದಾರೆ. ಇದೇ ವೇಳೆ ಶ್ರೀದೇವ್ ಹಾವಿನ ಬಾಲ ಹಿಡಿದು ಎಳೆದಿದ್ದು, ಈ ಮೂಲಕ ಬಾಟಲಿಯಿಂದ ಹಾವನ್ನು ರಕ್ಷಿಸಿದ್ದಾರೆ.

  • ಬಾಗಿಲಲ್ಲಿದ್ದ ಅಥಿತಿ ಕಂಡು ದಂಗಾದ ಮನೆಮಂದಿ!

    ಬಾಗಿಲಲ್ಲಿದ್ದ ಅಥಿತಿ ಕಂಡು ದಂಗಾದ ಮನೆಮಂದಿ!

    ಮೈಸೂರು: ಮನೆಯ ಬಾಗಿಲ ಮೇಲೆ ನೇತಾಡುತ್ತಿದ್ದ ನಾಗರಹಾವೊಂದನ್ನು ಕಂಡು ಮನೆಯವರೆನ್ನೆಲ್ಲ ಗಾಬರಿಗೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ.

    ಶ್ರೀರಾಂಪುರದ ನಿವಾಸಿ ನಾಗೇಂದ್ರ ಅವರ ಮನೆಯ ಬಾಗಿಲ ಮೇಲೆ ನಾಗರಹಾವು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಭಯಗೊಂಡ ಮನೆಯವರು ತಕ್ಷಣ ಮನೆಯಿಂದ ಹೊರ ಓಡಿಬಂದಿದ್ದಾರೆ. ಅಲ್ಲದೆ ಮನೆಯ ಬಾಗಿಲ ಮೇಲೆ ಆರಾಮಾಗಿ ಮಲಗಿದ್ದ ಹಾವಿನ ಬಗ್ಗೆ ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಇದನ್ನೂ ಓದಿ:ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!

    ತಕ್ಷಣ ಉರಗ ತಜ್ಞ ಕೆಂಪರಾಜು ಅವರು ಸ್ಥಳಕ್ಕೆ ಆಗಮಿಸಿ, ಸುಮಾರು ಎರಡೂವರೆ ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

  • ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

    ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

    ಚಿಕ್ಕಮಗಳೂರು: ಹಾವು ಕಪ್ಪೆ ನುಂಗಿ ಭಯದಿಂದ ಆ್ಯಕ್ಟೀವ್ ಹೊಂಡ ಸ್ಕೂಟಿಯೊಳಗೆ ಸೇರಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮನೆಯವರು ಹಾಗೂ ಉರಗ ತಜ್ಞನನ್ನ ಸತಾಯಿಸಿರುವ ಘಟನೆ ಚಿಕ್ಕಮಗಳೂರಿನ ಕಲ್ಯಾಣ ನಗರದ ಪುಷ್ಪಗಿರಿ ಲೇಔಟ್‍ನಲ್ಲಿ ನಡೆದಿದೆ.

    ಸಬ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರ ಪತ್ನಿ ತಮ್ಮ ಸ್ಕೂಟಿ ಮನೆ ಮುಂದೆ ನಿಲ್ಲಿಸಿದ್ದರು. ಸ್ಕೂಟಿ ನಿಲ್ಲಿಸಿದ ಪಕ್ಕದಲ್ಲಿದ್ದ ಮೂರು ಕಪ್ಪೆಗಳಲ್ಲಿ ಒಂದನ್ನ ಹಾವು ನುಂಗಿದೆ. ಹಾವು ಕಪ್ಪೆಯನ್ನ ನುಂಗುವುದನ್ನು ಮನೆಯವರು ನೋಡಿ ಕೂಗಿಕೊಂಡು ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಹಾವು ಸ್ಕೂಟಿಯ ಹೆಡ್‍ಲೈಟ್ ಸೇರಿದೆ.

    ತಕ್ಷಣ ಮನೆಯವರು ಉರಗ ತಜ್ಞ ನರೇಶ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಹರಸಾಹಸ ಪಟ್ಟರು  ಹಾವನ್ನ ತೆಗೆಯಲು ಸಾಧ್ಯವಾಗಲಿಲ್ಲ. ಸ್ಕೂಟಿಯ ಡೂಮ್ ಬಿಚ್ಚಲು ಮೆಕಾನಿಕ್‍ಗೆ ಕಾಲ್ ಮಾಡಿದ್ರೆ, ಆತ ಭಯ ಆಗುತ್ತೆ ಬಿಚ್ಚಲ್ಲ ಎಂದು ಬರಲಿಲ್ಲ.

    ಕೊನೆಗೆ ಸ್ನೇಕ್ ನರೇಶ್ ಸ್ಕೂಟಿಯನ್ನ ನಿರ್ಜನ ಪ್ರದೇಶಕ್ಕೆ ತಂದು ಮೋಟರ್ ಆನ್ ಮಾಡಿಕೊಂಡು ವೇಗವಾಗಿ ನೀರನ್ನ ಬಿಟ್ಟಿದ್ದಾರೆ. ಆಗ ಒಳಗಿದ್ದ ನಾಗರಹಾವು ಹೊರ ಬಂದಿದೆ. ತದನಂತರ ಹಾವನ್ನ ಸೆರೆ ಹಿಡಿದ ನರೇಶ್ ಹಾವನ್ನು ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

  • ಇಲಿ ಹಿಡಿಯಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡಿದ್ದ ಹಾವಿನ ರಕ್ಷಣೆ

    ಇಲಿ ಹಿಡಿಯಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡಿದ್ದ ಹಾವಿನ ರಕ್ಷಣೆ

    ಉಡುಪಿ: ಆಹಾರ ಅರಸುತ್ತಾ ಮನೆಯ ಟೆರೇಸ್ ಹತ್ತಿದ್ದ ಕೆರೆ ಹಾವೊಂದು ಗೇಟಿನ ಮೇಲೆ ಬಿದ್ದು ಹೊಟ್ಟೆ ಸೀಳಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

    ನಗರದ ಮಣಿಪಾಲದ ರಾಘವೇಂದ್ರ ನಾಯ್ಕ್ ಅವರ ಮನೆಗೆ ಇಲಿಯ ಬೆನ್ನತ್ತಿದ ಕೆರೆ ಹಾವು ಬಂದಿತ್ತು. ಇಲಿಯು ಮನೆಯ ಟೆರೇಸ್ ಏರಿ ಹಾರಿ ಹೋಗಿದೆ. ಇಲಿ ಬೆನ್ನಟ್ಟಿದ್ದ ಹಾವು ರಪ್ಪಂತ ಕೆಳಗೆ ಬಿದ್ದಿದೆ. ಗೇಟ್ ಮೇಲೆ ಬಿದ್ದ ಪರಿಣಾಮ ಹಾವಿನ ಹೊಟ್ಟೆ ಎರಡು ಕಡೆ ಸೀಳಿದೆ. ಚೂಪಾದ ರಾಡ್ ಹಾವಿನ ಹೊಟ್ಟೆಗೆ ಹೊಕ್ಕಿದೆ. ಹಾವು ಮೇಲೆ ಎದ್ದು ಬರದಂತಾಗಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಹಸಿದ ಗಂಡು ಕೆರೆ ಹಾವು ವಿಲ ವಿಲ ಒದ್ದಾಡಿತು. ಹಾವಿನ ನೋವು ಕಂಡ ಮನೆಯವರ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆ ಮಾಡಿದ್ದಾರೆ. ಗುರುರಾಜ್ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸ್ಟಿಕ್ ಹಿಡಿದು ಹಾವನ್ನು ರಕ್ಷಿಸುವ ಪ್ರಯತ್ನ ಶುರು ಮಾಡಿದರು. ನೋವಿನಿಂದ ಅರೆ ಜೀವವಾಗಿದ್ದ ಹಾವು ಗುರುರಾಜ್ ಅವರಿಗೆ ನಾಲ್ಕೈದು ಬಾರಿ ಕಚ್ಚಿದೆ. ಕೆರೆ ಹಾವಿನಲ್ಲಿ ವಿಷ ಇಲ್ಲದೆ ಇರುವುದರಿಂದ ಗುರುರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವನ್ನು ಮನೆಗೆ ತಂದಿರುವ ಗುರುರಾಜ್ ಮದ್ದು ಹಚ್ಚಿ ಆರೈಕೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್, ಬೇರೆ ವಿಷಪೂರಿತ ಹಾವಾಗಿದ್ದರೆ ರಕ್ಷಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯವಿತ್ತು. ಕೆರೆ ಹಾವಾಗಿದ್ದರಿಂದ ನೇರವಾಗಿ ಕೈಯಿಂದ ಹಿಡಿದೆ. ಚಿಕಿತ್ಸೆ ನಂತರ ಬಿಟ್ಟು ಬಿಡುತ್ತೇನೆ ಎಂದು ಹೇಳಿದರು.

    ಕೆರೆ ಹಾವೆಂಬ ತಾತ್ಸಾರ ತೋರದೆ, ಅದರ ರಕ್ಷಣೆಗೆ ಕಾಳಜಿ ತೋರಿದ ರಾಘವೇಂದ್ರ ನಾಯ್ಕ್ ಅವರ ಮನೆಮಂದಿಯ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.