Tag: smoke bomb

  • Security breach in Lok Sabha:  ಮನೋರಂಜನ್ ನಿವಾಸದಲ್ಲಿ ದೆಹಲಿ ಪೊಲೀಸರು ಶೋಧ

    Security breach in Lok Sabha:  ಮನೋರಂಜನ್ ನಿವಾಸದಲ್ಲಿ ದೆಹಲಿ ಪೊಲೀಸರು ಶೋಧ

    ಮೈಸೂರು: ದೆಹಲಿಯ ಸಂಸತ್ (Parliament) ಭವನದ ಕಲಾಪದ ವೇಳೆ ಸ್ಮೋಕ್ ಬಾಂಬ್ (Smoke Bomb) ಹಾಕಿದ್ದ ಆರೋಪಿ ಮನೋರಂಜನ್‍ನ ಮೈಸೂರಿನ ನಿವಾಸಕ್ಕೆ ಇಂದು ದೆಹಲಿಯ ಪೊಲೀಸರು ಎಂಟ್ರಿ ಕೊಟ್ಟಿದ್ರು. ಓರ್ವ ಮಹಿಳಾ ಪೊಲೀಸ್ ಸೇರಿದಂತೆ ಇಬ್ಬರು ಅಧಿಕಾರಿಗಳ ತಂಡ ಮನೋರಂಜನ್ ನಿವಾಸದಲ್ಲಿ ತಪಾಸಣೆ ಮಾಡಿದ್ರು.

    ಮನೆಯಿಂದ ಹೊರಗೆ ಹೋಗಿದ್ದ ಮನೋರಂಜನ್ (Manoranjan) ತಂದೆ ದೇವರಾಜೇಗೌಡ ಮಧ್ಯಾಹ್ನದ ವೇಳೆಗೆ ಮನೆಗೆ ಬಂದ್ರು. ಈ ಮೊದಲೇ ಮನೋರಂಜನ್ ರೂಂ ಸೀಜ್ ಮಾಡಿದ್ದ ಪೊಲೀಸರು, ಕೊಠಡಿ ತೆರೆದು ಇಂಚಿಂಚು ಪರಿಶೀಲನೆ ಮಾಡಿದ್ರು. ಮನೋರಂಜನ್ ಪೋಷಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸ್ರು, ತಂದೆ ತಾಯಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ರು. ಇದನ್ನೂ ಓದಿ: ಲೋಕಸಭೆಯಿಂದ ಮತ್ತೆ 31 ಸಂಸದರು ಅಮಾನತು

    ಸಾಗರ್ ಶರ್ಮ ನಿಮಗೆ ಪರಿಚಯ ಇದ್ದಾನಾ. ಎಷ್ಟು ದಿನಗಳ ಹಿಂದೆ ಸಾಗರ್ ಶರ್ಮ ಬಂದಿದ್ದ. ಸಾಗರ್ ಒಬ್ಬನೇ ಬಂದಿದ್ನಾ, ನಿಮ್ಮ ಮಗ ಎಂಜಿನಿಯರಿಂಗ್ ಯಾಕಾಗಿ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ ಮಾಡದ ಮೇಲೆ ಅವನಿಗೆ ಹಣ ಎಲ್ಲಿಂದ ಬರುತ್ತಿತ್ತು. ಮನೆಯಲ್ಲಿ ಯಾವ ರೀತಿ ಇರ್ತಾ ಇದ್ದ, ಅವನ ಹವ್ಯಾಸ ಏನು?. ಯಾರ ಜೊತೆಯಲ್ಲಾದ್ರೂ ಸಂಪರ್ಕ ಇತ್ತಾ ಅಂತಾ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.  ಇದನ್ನೂ ಓದಿ: ಮೈಸೂರು ಬಿಟ್ಟು ಹೊರಗಡೆ ತೆರಳಬೇಡಿ: ಮನೋರಂಜನ್‌ ಕುಟುಂಬಕ್ಕೆ ಗುಪ್ತಚರ ಇಲಾಖೆ ಸೂಚನೆ

    ಒಟ್ಟಿನಲ್ಲಿ ಒಂದಷ್ಟು ಮಹತ್ವದ ಮಾಹಿತಿಯನ್ನ ಸಂಗ್ರಹಿಸಿರೋ ಪೊಲೀಸ್ರು, ಮನೋರಂಜನ್ ರೂಂ ನಲ್ಲಿ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಪಾಪಿ ಪುತ್ರನ ಕಿತಾಪತಿಗೆ ಮನೋರಂಜನ್ ಪೋಷಕರು ಪೊಲೀಸ್ ವಿಚಾರಣೆಯಿಂದ ದಂಗಾಗಿ ಹೋಗಿದ್ದಾರೆ.

  • ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

    ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

    ನವದೆಹಲಿ: ಸಂಸತ್ (Parliament) ಭವನದಲ್ಲಿ ವೀಕ್ಷಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ 6ನೇ ಆರೋಪಿ ಮಹೇಶ್ ಕುಮಾವತ್ (Mahesh Kumawat) ಅನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಪ್ರಕರಣದಲ್ಲಿ ಮಾಸ್ಟರ್‌ಮೈಂಡ್ ಆಗಿರುವ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳವಲ್ಲಿ ಮಹೇಶ್ ಕುಮಾವತ್ ಸಹಾಯ ಮಾಡಿದ ಆರೋಪದ ಮೇರೆಗೆ ಆತನನ್ನು ಇಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 13ರಂದು ದೆಹಲಿಯ ಸಂಸತ್ ಭವನದಲ್ಲಿ ನಡೆದ ಘಟನೆಯನ್ನು ಮರುಸೃಷ್ಟಿಸಲು ಪೊಲೀಸರು ಸಂಸತ್ತಿನ ಅನುಮತಿಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೆಳತಿ ಕಾಲಿನ ಮೇಲೆ ಕಾರು ಹರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ!

    ಪ್ರಕರಣದ ಪ್ರಮುಖ ಪಾತ್ರಧಾರಿ ಪಶ್ಚಿಮ ಬಂಗಾಳ ಮೂಲದ ಲಲಿತ್ ಝಾನನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದು, ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸುವ ಸಂಚು ರೂಪಿಸಲು ಎಲ್ಲಾ ಆರೋಪಿಗಳು ಹಲವು ಬಾರಿ ಭೇಟಿಯಾಗಿದ್ದರು ಎಂದು ಸ್ವತಃ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಕ್ರೀಡಾ ವಿದ್ಯಾರ್ಥಿಯೊಂದಿಗೆ ಕಾರಿನಲ್ಲಿ ಸೆಕ್ಸ್‌ – ಶಿಕ್ಷಕಿಯನ್ನ ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ತಾಯಿ

    ಅಲ್ಲದೇ ಆರೋಪಿಯು ಯಾವುದೇ ಶತ್ರು ದೇಶ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಗಂಡ-ಹೆಂಡತಿ ಹನಿಟ್ರ್ಯಾಪ್; ಕೋಟ್ಯಧಿಪತಿ ಉದ್ಯಮಿಗೆ ವಂಚನೆ – 6 ಮಂದಿ ಬಂಧನ

    ಪ್ರಕರಣದಲ್ಲಿ ವಿವಿಧ ರಾಜ್ಯಗಳ 6 ಮಂದಿ ಆರೋಪಿಗಳು ಭಾಗಿಯಾಗಿದ್ದು, ಇಬ್ಬರು ಸಂಸತ್‌ನ ಒಳಗಡೆ ಸ್ಮೋಕ್ ಬಾಂಬ್ ಸಿಡಿಸಿದರೆ ಇನ್ನಿಬ್ಬರು ಸಂಸತ್ ಭವನದ ಹೊರಗಡೆ ಸ್ಮೋಕ್ ಬಾಂಬ್ ಸಿಡಿಸಿ ಘೋಷಣೆ ಕೂಗಿದ್ದರು. ಇನ್ನೋರ್ವ ಆರೋಪಿ ಸ್ಮೋಕ್ ಬಾಂಬ್ ದಾಳಿಯ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಪರಾರಿಯಾಗಿದ್ದ. ಇದೀಗ ಆರೋಪಿಗಳ ಪೈಕಿ ಎಲ್ಲರನ್ನೂ ಬಂಧಿಸಿದ್ದು, ಘಟನೆಯ ಹಿಂದಿನ ಉದ್ದೇಶವನ್ನು ಅರಿಯುವ ಸಲುವಾಗಿ ತೀವ್ರ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

  • ಪ್ರತಾಪ್ ಸಿಂಹ ಭಯೋತ್ಪಾದಕ – ಮೈಸೂರು ಮಹಾರಾಜ ವೃತ್ತ ಬಳಿ ಫ್ಲೆಕ್ಸ್

    ಪ್ರತಾಪ್ ಸಿಂಹ ಭಯೋತ್ಪಾದಕ – ಮೈಸೂರು ಮಹಾರಾಜ ವೃತ್ತ ಬಳಿ ಫ್ಲೆಕ್ಸ್

    ಮೈಸೂರು: ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ (Smoke Bomb) ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿಕೊರರಿಗೆ ಪಾಸ್ ನೀಡಿದ್ದಕ್ಕೆ ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ ಮೈಸೂರಿನಲ್ಲಿ (Mysuru) ವಿವಾದಿತ ಫ್ಲೆಕ್ಸ್ (Flex) ಅಳವಡಿಸಲಾಗಿದೆ.

    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮೈಸೂರಿನ ಮಹಾರಾಜ ವೃತ್ತದ ಬಳಿ ಫ್ಲೆಕ್ಸ್ ಅಳವಡಿಸಿದ್ದು, ಪ್ರತಾಪ್ ಸಿಂಹ ದೇಶದ್ರೋಹಿ ಎಂದು ಬರೆಯಲಾಗಿದೆ. ಫ್ಲೆಕ್ಸ್‌ನಲ್ಲಿ ಬಾಂಬ್ ಹಾಗೂ ಪಾಸ್ ಹಿಡಿದು ನಿಂತಿರುವ ರೀತಿಯ ತಿರುಚಿದ ಫೋಟೋವನ್ನು ಅಳವಡಿಸಲಾಗಿದೆ.

    ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ ನಡೆಸಲಾಗುತ್ತಿದೆ. ಸಂಸತ್ ಭವನಕ್ಕೆ ದುಷ್ಕರ್ಮಿಗಳಿಗೆ ನುಗ್ಗಲು ಪಾಸ್ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಪ್ರತಿಭಟಸಿದೆ. ಇದನ್ನೂ ಓದಿ: ಸಂಸತ್‌ ಸ್ಮೋಕ್‌ ಬಾಂಬ್‌ ಕೇಸ್‌ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ

    ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಸಿಬ್ಬಂದಿ ಪ್ರತಾಪ್ ಸಿಂಹ ವಿವಾದಿತ ಫ್ಲೆಕ್ಸ್ ಅನ್ನು ತೆರವುಗೊಳಿಸಲು ಮುಂದಾಗಿದೆ. ಈ ವೇಳೆ ಹಿಂದುಳಿದ ಜಾಗೃತ ವೇದಿಕೆ ಸದಸ್ಯರು ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

  • ನನ್ನ ಮಗ ಕ್ರಾಂತಿಕಾರಿ ಪುಸ್ತಕಗಳಿಂದ ಪ್ರಭಾವಿತನಾಗಿದ್ದ, ಸಮಾಜ ಸೇವೆ ಮಾಡುವ ಹಂಬಲವಿತ್ತು – ಮನೋರಂಜನ್‌ ತಂದೆ ಬೇಸರ

    ನನ್ನ ಮಗ ಕ್ರಾಂತಿಕಾರಿ ಪುಸ್ತಕಗಳಿಂದ ಪ್ರಭಾವಿತನಾಗಿದ್ದ, ಸಮಾಜ ಸೇವೆ ಮಾಡುವ ಹಂಬಲವಿತ್ತು – ಮನೋರಂಜನ್‌ ತಂದೆ ಬೇಸರ

    – ಮನೋರಂಜನ್‌ ಮನೆಯಲ್ಲಿ ಕ್ರಾಂತಿಕಾರಿಗಳ ಸಾವಿರಾರು ಪುಸ್ತಕಗಳು ಪತ್ತೆ
    – ಬಿಡುವಿನ ವೇಳೆ ಮಕ್ಕಳಿಗೆ ಕರಾಟೆ ಹೇಳಿಕೊಡ್ತಿದ್ದ ಆರೋಪಿ

    ನವದೆಹಲಿ/ಮೈಸೂರು: ಸಂಸತ್ತಿಗೆ (Lok Sabha) ನುಗ್ಗಿದ ಆರೋಪಿ ಮನೋರಂಜನ್‌ ವಾಸವಿದ್ದ ಮೈಸೂರಿನ ವಿಜಯನಗರ (Mysuru Vijayanagara) ನಿವಾಸಕ್ಕೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳೊಂದಿಗೆ ನಗರದ ಹಿರಿಯ ಪೊಲೀಸ್‌ (Mysuru Police) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪೋಷಕರೊಂದಿಗೂ ಮಾತನಾಡಿ ಕೆಲ ಮಾಹಿತಿ ಕಲೆಹಾಕಿದ್ದಾರೆ.

    ಆರೋಪಿ ಮನೋರಂಜನ್‌ (Manoranjan) ಕ್ರಾಂತಿಕಾರಿ ನಾಯಕರ ಜೀವನ ಚರಿತ್ರೆಗಳಿಂದ ಪ್ರಭಾವಿತನಾಗಿದ್ದ, ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿ, ಬಳಿಕ ಬೆಂಗಳೂರಿನ ಕಾಲೇಜೊಂದರಲ್ಲಿ BA ಪದವಿ ಪಡೆದಿದ್ದ.

    ಎಂಜಿನಿಯರಿಂಗ್‌ ಮುಗಿಸಿ 9 ವರ್ಷ ಕಳೆದರೂ ಯಾವುದೇ ಉದ್ಯೋಗಕ್ಕೆ ಪ್ರಯತ್ನಿಸದೇ ದೇಶದ ವಿವಿಧೆಡೆಗಳಲ್ಲಿ ಸುತ್ತಾಡುತ್ತಿದ್ದ ಮನೋರಂಜನ್‌ ಕರಾಟೆಪಟುವಾಗಿದ್ದು, ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಿದ್ದ. ಪೋಷಕರಿಗೂ ಮಗ ಏನು ಮಾಡುತ್ತಿದ್ದಾನೆ ಅನ್ನುವ ಮಾಹಿತಿ ಇರಲಿಲ್ಲ. ಪೋಷಕರು ಉದ್ಯೋಗ ಮಾಡುವಂತೆ ಒತ್ತಾಯಿಸುತ್ತಿದ್ದರು. ಕೊನೇ ಪಕ್ಷ ಊರಿನಲ್ಲಿರುವ ಜಮೀನು ನೋಡಿಕೊಳ್ಳುವಂತೆ ಹೇಳಿದ್ದರು. ಅದ್ಯಾವುದು ಪ್ರಯೋಜನವಾಗದಿದ್ದಾಗ ಮಗನ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದರು. ಈಗ ಮಗನ ಕೃತ್ಯದಿಂದ ಆಘಾತಕ್ಕೆ ಒಳಗಾಗಿದ್ದು, ತಪ್ಪು ಮಾಡಿದ್ದಲ್ಲಿ ತಕ್ಕ ಶಿಕ್ಷೆಯಾಗಲಿ ಎಂದು ಮನೋರಂಜನ್‌ ತಂದೆ ದೇವರಾಜೇಗೌಡ ಹೇಳಿದ್ದಾರೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

    ಮನೋರಂಜನ್‌ ಸ್ವಾಮಿ ವಿವೇಕಾನಂದ ಅವರ ಪುಸ್ತಕ ಸೇರಿದಂತೆ ಮಹಾನ್‌ ಕ್ರಾಂತಿಕಾರಿ ನಾಯಕರ (Revolutionary Leaders) ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದಾನೆ. ಪುಸ್ತಕಗಳಿಗೆ ಸಾವಿರಾರು ರೂ. ಖರ್ಚು ಮಾಡುತ್ತಿದ್ದ. 40 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಮನೆಯಲ್ಲಿವೆ. ನನ್ನ ಮಗನಿಗೆ ಸಮಾಜ ಸೇವೆ ಮಾಡಬೇಕೆಂಬ ಹಂಬಲವಿತ್ತು. ಒಂದು ವೇಳೆ ಅವನು ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ ಎಂದಿದ್ದಾರೆ ದೇವರಾಜೇಗೌಡ. ಇದನ್ನೂ ಓದಿ: ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು

    ಮನೋರಂಜನ್‌, ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಮಲ್ಲಾಪುರ ಗ್ರಾಮದ ದೇವರಾಜೇಗೌಡ ಮತ್ತು ಶೈಲಜಾ ದಂಪತಿಯ ಪುತ್ರ. ಈತನಿಗೆ ಸಹೋದರಿಯೂ ಇದ್ದಾರೆ. ದೇವರಾಜೇಗೌಡ ಕೃಷಿಕರಾಗಿದ್ದು, ಮಲ್ಲಾಪುರದಲ್ಲಿ 20 ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಮೈಸೂರು ನಗರಕ್ಕೆ ಬಂದು ನೆಲೆಸಿದ್ದರು. ವಿಜಯನಗರದ 2ನೇ ಹಂತದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆಗಾಗ್ಗೆ ಊರಿಗೆ ಹೋಗಿ ವ್ಯವಸಾಯ ನೋಡಿಕೊಳ್ಳುತ್ತಿದ್ದಾರೆ ಎಂದು ವಿಚಾರಣೆ ಬಳಿಕ ಅಧಿಕಾರಿಗಳಿಂದ ತಿಳಿದುಬಂದಿದೆ.

    ಕ್ರಾಂತಿಕಾರಿ ನಾಯಕರ ಪುಸ್ತಕಗಳು ಪತ್ತೆ: ಮನೋರಂಜನ್‌ ಕೊಠಡಿಯನ್ನು ಪರಿಶೀಲಿಸಿದಾಗ ಕ್ರಾಂತಿಕಾರಿ ನಾಯಕರ ಜೀವನ ಚರಿತ್ರೆ, ಹೋರಾಟಗಳ ಪುಸ್ತಕಗಳು ಪತ್ತೆಯಾಗಿವೆ. ಈ ಬಗ್ಗೆ ನೆರೆಯ ನಿವಾಸಿಗಳು ಮತ್ತು ಮನೋರಂಜನ್‌ ಸ್ನೇಹಿತರನ್ನೂ ಅಧಿಕಾರಿಗಳು ಮಾತನಾಡಿಸಿ ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ.

    ಇಲ್ಲಿನ ಉಪಪೊಲೀಸ್‌ ಆಯುಕ್ತ ಗಜೇಂದ್ರ ಪ್ರಸಾದ್‌ ಅವರೂ ಸಹ ಮನೋರಂಜನ್‌ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ವಿಜಯನಗರ ಠಾಣೆ ಪೊಲೀಸರೊಂದಿಗೆ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಹೈಕೋರ್ಟ್‌ ಅನುಮತಿ

  • ವಿಶ್ವಗುರು ಆಡಳಿತ ವೈಫಲ್ಯವನ್ನು ಇಡೀ ವಿಶ್ವವೇ ನೋಡಿದೆ: ಬಿಕೆ ಹರಿಪ್ರಸಾದ್

    ವಿಶ್ವಗುರು ಆಡಳಿತ ವೈಫಲ್ಯವನ್ನು ಇಡೀ ವಿಶ್ವವೇ ನೋಡಿದೆ: ಬಿಕೆ ಹರಿಪ್ರಸಾದ್

    ಬೆಳಗಾವಿ: ಸಂಸತ್ (Parliament) ಭವನದಲ್ಲಿ ನಡೆದ ಭದ್ರತಾ ವೈಫಲ್ಯದ (Security Breach) ಹೊಣೆಯನ್ನು ವಿಶ್ವಗುರು ಪ್ರಧಾನಿ ಮೋದಿ (Narendra Modi) ಹೊರಬೇಕಾಗುತ್ತದೆ ಎಂದು ಕಾಂಗ್ರೆಸ್ (Congress) ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ.

    ಸುವರ್ಣ ಸೌಧದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಿನ್ನೆ ಮನೋರಂಜನ್ ದೇಶಕ್ಕೆ ಮನರಂಜನೆ ಕೊಟ್ಟಿದ್ದಾನೆ. ವಿಶ್ವಗುರು ನರೇಂದ್ರ ಮೋದಿಯವರನ್ನು ದೇವರು ಎಂದು ಮನೋರಂಜನ್ ಪರಿಗಣಿಸುತ್ತಿದ್ದರು ಎಂದು ಅವರ ತಂದೆ ಹೇಳಿದ್ದಾರೆ. ಫೇಕ್ ಅಂಧಭಕ್ತರು ಯಾವ ರೀತಿ ಇರುತ್ತಾರೆ ಎಂದು ನಿನ್ನೆ ಸಾಬೀತು ಮಾಡಿದ್ದಾರೆ. ರಾಷ್ಟ್ರದ ಪ್ರಖ್ಯಾತಿಗೆ ಕಪ್ಪು ಬಣ್ಣ ಬಳಿದಿದ್ದಾರೆ. ವಿಶ್ವಗುರು ಆಡಳಿತ ವೈಫಲ್ಯವನ್ನು ಇಡೀ ವಿಶ್ವವೇ ನೋಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಶಿಸ್ತಿನ ವರ್ತನೆ – ಲೋಕಸಭೆಯ 14 ಸಂಸದರು ಸಸ್ಪೆಂಡ್‌

    ಡಿಸೆಂಬರ್ 13ರಂದು ಯೋಧರು, ಪೊಲೀಸರು ಪಾರ್ಲಿಮೆಂಟ್ ರಕ್ಷಣೆ ಮಾಡಿದ ದಿನ. ಇವರೆಲ್ಲ ಅಂತಹ ದಿನವನ್ನು ಹುಡುಕುತ್ತಾರೆ. ಡಿಸೆಂಬರ್ 6, ಬುದ್ದ ಹುಟ್ಟಿದ ದಿನವನ್ನೇ ಇವರು ಹುಡುಕುತ್ತಾರೆ. ಮನೋರಂಜನ್ ಹಿನ್ನೆಲೆಯನ್ನು ಕರ್ನಾಟಕ ರಾಜ್ಯದ ಪೊಲೀಸರು ಸಂಪೂರ್ಣ ತನಿಖೆ ಮಾಡಬೇಕು. ಕೆಲವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಎರಡನೇ ಬಾರಿ ಈ ರೀತಿಯ ಘಟನೆ ನಡೆಯುತ್ತಿದೆ. 75 ವರ್ಷಗಳಲ್ಲಿ ನಾವು ಪಾಸ್ ಕೊಟ್ಟಿದ್ದೇವೆ. ಅವರೆಲ್ಲರೂ ಹೀಗೆ ಮಾಡಿದ್ದಾರಾ? ಯಾಕೆಂದರೆ ವಿಶ್ವಗುರು ಆಗಾಗ ಸಂಶೋಧನೆ ಮಾಡಿ ಅಂಧಭಕ್ತರಿಗೆ ಪಾಠ ಮಾಡುತ್ತಾ ಇರುತ್ತಾರೆ. ಮೋರಿಯಲ್ಲಿ ಪೈಪ್ ಹಾಕಿ ಗ್ಯಾಸ್ ಕಂಡುಹಿಡಿದಿದ್ದು ಇದೇ ವಿಶ್ವಗುರು. ಅದರ ಮೂಲಕ ಗ್ಯಾಸ್ ಪ್ರಯೋಗ ಮಾಡಲು ಬಂದಿದ್ದರಾ ಎಂದು ನೋಡಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ರಾಜ್ಯಸಭೆಯಿಂದ ಅಮಾನತು

  • ಸಂಸತ್ತಿನಲ್ಲಿ ಭದ್ರತಾ ಲೋಪ – 8 ಲೋಕಸಭಾ ಸಿಬ್ಬಂದಿಯ ಅಮಾನತು

    ಸಂಸತ್ತಿನಲ್ಲಿ ಭದ್ರತಾ ಲೋಪ – 8 ಲೋಕಸಭಾ ಸಿಬ್ಬಂದಿಯ ಅಮಾನತು

    ನವದೆಹಲಿ: ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಜಿಗಿದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣದ ಕುರಿತು ಭದ್ರತಾ ಲೋಪಕ್ಕೆ (Security Breach) ಸಂಬಂಧಿಸಿದಂತೆ ಕನಿಷ್ಠ ಎಂಟು ಲೋಕಸಭಾ ಸಿಬ್ಬಂದಿಯನ್ನು (Lok Sabha Personnel) ಅಮಾನತುಗೊಳಿಸಲಾಗಿದೆ.

    ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಸೇರಿದಂತೆ ಒಟ್ಟು ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ (Parliament) ಭವನದಲ್ಲಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಪಾಸ್ ಪಡೆದು ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಸಂದರ್ಶಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಇನ್ನಿಬ್ಬರು ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಐವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೋರ್ವ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರಿದಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು

    ಬಂಧಿತ ಆರೋಪಿಗಳನ್ನು ಸಾಗರ್ ಶರ್ಮಾ, ಮನೋರಂಜನ್, ನೀಲಂ ಆಜಾದ್, ವಿಕ್ಕಿ ಶರ್ಮಾ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೋರ್ವ ಆರೋಪಿ ಲಲಿತ್ ಝಾ ನೀಲಂ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಸ್ಮೋಕ್ ಬಾಂಬ್ ಸಿಡಿಸಿದ ವೀಡಿಯೊಗಳನ್ನು ಚಿತ್ರೀಕರಿಸಿದ್ದು, ಮೊಬೈಲ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೋರ್ವ ಆರೋಪಿಯಾಗಿರುವ ವಿಕ್ಕಿ ಶರ್ಮಾ ಎಲ್ಲಾ ಆರೋಪಿಗಳಿಗೆ ಗುರ್ಗೋನ್‌ನಲ್ಲಿರುವ ತನ್ನ ಮನೆಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

    ಘಟನೆಯ ಬಳಿಕ ಸಂಸತ್ತಿನ ಒಳಗೆ ಸಂಸದರು ಸ್ಮೋಕ್ ಬಾಂಬ್ ದಾಳಿ ಮಾಡಿದ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಇನ್ನು ಈ ಎಲ್ಲಾ ಆರೋಪಿಗಳು ವಿವಿಧ ರಾಜ್ಯದವರಾಗಿದ್ದು, ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಎಂಬ ಹೆಸರಿನ ಗ್ರೂಪ್‌ನಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಅಲ್ಲದೇ ಒಂದೂವರೆ ವರ್ಷದ ಹಿಂದೆಯೇ ಮೈಸೂರಿನಲ್ಲಿ ಭೇಟಿಯಾಗಿ ಕೃತ್ಯದ ಬಗ್ಗೆ ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಅಲಹಾಬಾದ್ ವಿವಿ ಹಾಸ್ಟೆಲ್ ಕೊಠಡಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟಗೊಂಡು ವಿದ್ಯಾರ್ಥಿಗೆ ಗಾಯ

  • ಸಂಸತ್ ಭವನದಲ್ಲಿ ಸ್ಮೋಕ್ ದಾಳಿ – ‘ಕೈ’ ಕಾರ್ಯಕರ್ತರಿಂದ ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ

    ಸಂಸತ್ ಭವನದಲ್ಲಿ ಸ್ಮೋಕ್ ದಾಳಿ – ‘ಕೈ’ ಕಾರ್ಯಕರ್ತರಿಂದ ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ

    ಬೆಂಗಳೂರು: ಸಂಸತ್ (Parliament) ಭವನದಲ್ಲಿ ಸ್ಮೋಕ್ ದಾಳಿ (Smoke Bomb) ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಸಂಸದ ಪ್ರತಾಪ್ ಸಿಂಹ (Prathap Simha) ವಿರುದ್ಧ ಕಾಂಗ್ರೆಸ್ (Congress) ಕಾರ್ಯಕರ್ತರು (Activist) ಪ್ರತಿಭಟನೆ (Protest) ನಡೆಸಿದ್ದಾರೆ.

    ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಪ್ರತಾಪ್ ಸಿಂಹ ಹಾಗೂ ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು, ಅಲ್ಲಿಯವರೆಗೂ ಅಮಾನತು ಮಾಡಬೇಕು: ಯತೀಂದ್ರ ಸಿದ್ದರಾಮಯ್ಯ

    ಬಂಧನಕ್ಕೆ ಆಗ್ರಹಿಸಿ ಕಾರ್ಯಕರ್ತರು ಪ್ರತಾಪ್ ಸಿಂಹ ಫೋಟೋಗೆ ಬೆಂಕಿ ಹಚ್ಚಿದ್ದು, ಅವರ ಪ್ಲೇ ಕಾರ್ಡ್‌ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಕೂಡಲೇ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಯಾವಾಗ ಏನಾಗಬಹುದು ಊಹೆ ಮಾಡಲು ಸಾಧ್ಯವಿಲ್ಲ, ನಮಗೆ ಎಚ್ಚರಿಕೆ ಗಂಟೆ: ಯುಟಿ ಖಾದರ್‌

  • ಪ್ರತಾಪ್ ಸಿಂಹರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು, ಅಲ್ಲಿಯವರೆಗೂ ಅಮಾನತು ಮಾಡಬೇಕು: ಯತೀಂದ್ರ ಸಿದ್ದರಾಮಯ್ಯ

    ಪ್ರತಾಪ್ ಸಿಂಹರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು, ಅಲ್ಲಿಯವರೆಗೂ ಅಮಾನತು ಮಾಡಬೇಕು: ಯತೀಂದ್ರ ಸಿದ್ದರಾಮಯ್ಯ

    ಮೈಸೂರು: ಸಂಸತ್‌ನಲ್ಲಿ (Parliament) ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ವ್ಯಕ್ತಿಗಳಿಗೂ ಪ್ರತಾಪ್ ಸಿಂಹರಿಗೂ (Prathap Simha) ಪರಿಚಯವಿರುತ್ತೆ. ಕೂಡಲೇ ಅವರನ್ನು ತನಿಖೆಗೆ ಒಳಪಡಿಸಬೇಕು. ಅಲ್ಲಿಯವರೆಗೂ ಪ್ರತಾಪ್ ಸಿಂಹ ಅವರನ್ನು ಅಮಾನತು ಮಾಡಬೇಕು ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಒತ್ತಾಯಿಸಿದ್ದಾರೆ.

    ಪಾರ್ಲಿಮೆಂಟ್ ಮೇಲೆ ದುಷ್ಕರ್ಮಿಗಳ ಅಟ್ಯಾಕ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಸತ್ ಮೇಲೆ ನಡೆದಿರುವ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸಂಸತ್‌ನಲ್ಲಿ ಭದ್ರತಾ ಲೋಪ ಆಗಿದೆ. ಈ ಘಟನೆ ಹಿಂದೆ ಬೇರೆಯ ಹುನ್ನಾರ ಇದೆ. ಸಂಸತ್ ಮೇಲೆ ದಾಳಿ ಮಾಡಿದವರಲ್ಲಿ ಓರ್ವ ಮೈಸೂರಿನವನು. ಸಂಸತ್ ಒಳಗೆ ನುಗ್ಗಿರುವವರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಹೋಗಿದ್ದಾರೆ ಎಂದರು. ಇದನ್ನೂ ಓದಿ: ಯಾವಾಗ ಏನಾಗಬಹುದು ಊಹೆ ಮಾಡಲು ಸಾಧ್ಯವಿಲ್ಲ, ನಮಗೆ ಎಚ್ಚರಿಕೆ ಗಂಟೆ: ಯುಟಿ ಖಾದರ್‌

    ನಾವು ಸಹ ವಿಧಾನಸಭಾ ಅಧಿವೇಶನ ವೀಕ್ಷಣೆಗೆ ಪಾಸ್ ನೀಡುತ್ತೇವೆ. ಪಾಸ್ ನೀಡುವ ವೇಳೆ ಸಂಪೂರ್ಣವಾಗಿ ಪರಿಶೀಲಿಸಿ ನಂತರ ಪಾಸ್ ನೀಡುತ್ತೇವೆ. ಈ ಘಟನೆಗೆ ಪ್ರತಾಪ್ ಸಿಂಹ ಅವರನ್ನೇ ನೇರಹೊಣೆ ಮಾಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು

  • ಯಾವಾಗ ಏನಾಗಬಹುದು ಊಹೆ ಮಾಡಲು ಸಾಧ್ಯವಿಲ್ಲ, ನಮಗೆ ಎಚ್ಚರಿಕೆ ಗಂಟೆ: ಯುಟಿ ಖಾದರ್‌

    ಯಾವಾಗ ಏನಾಗಬಹುದು ಊಹೆ ಮಾಡಲು ಸಾಧ್ಯವಿಲ್ಲ, ನಮಗೆ ಎಚ್ಚರಿಕೆ ಗಂಟೆ: ಯುಟಿ ಖಾದರ್‌

    ಬೆಳಗಾವಿ: ಸಂಸತ್ ಸ್ಮೋಕ್‌ ಬಾಂಬ್ (Smoke Bomb) ಪ್ರಕರಣ ನಮಗೆ ಎಚ್ಚರಿಕೆ ಗಂಟೆ ಎಂದು ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್‌ (UT Khader) ಹೇಳಿದ್ದಾರೆ.

    ಯಾವಾಗ ಏನಾಗಬಹುದು ಎಂದು ಊಹೆ ಮಾಡಲು ಸಾಧ್ಯವಿಲ್ಲ. ಜನಸಾಮಾನ್ಯರು ಸಹಕಾರ ಕೊಡಬೇಕು. ಜನರಿಗೆ ಪಾಸ್ (Pass) ಕೊಡುವಾಗ ಅವರ ನೈಜತೆ ನೋಡಿಕೊಂಡು ಪಾಸ್ ಕೊಡಲು‌ ಸೂಚಿಸಲಾಗಿದೆ ಎಂದರು.  ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

    ವಿದ್ಯಾರ್ಥಿಗಳಿಗೆ, ಸತ್ಪ್ರಜೆಗಳಿಗೆ ತೊಂದರೆ ಆಗದಂತೆ ಪಾಸ್ ವಿತರಣೆಗೆ ಸೂಚಿಸಲಾಗಿದೆ. ಹೆಚ್ಚು ತಪಾಸಣೆ ಮೂಲಕ ಸುವರ್ಣಸೌಧಕ್ಕೆ (Suvarna Soudha) ಪ್ರವೇಶ ನೀಡಲಾಗಿದೆ. ಜನ ಸಾಮಾನ್ಯರು ಸಹಕರಿಸಬೇಕು ಎಂದು ಹೇಳಿದರು.  ಇದನ್ನೂ ಓದಿ: 45 ನಿಮಿಷಗಳ ಪಾಸ್‌ ಪಡೆದು 2 ಗಂಟೆ ಗ್ಯಾಲರಿಯಲ್ಲಿ ಕುಳಿತಿದ್ರು!

    ಸಂಸತ್‌ ಮೇಲೆ ದಾಳಿ ನಡೆದ ಬೆನ್ನಲ್ಲೇ ಸುವರ್ಣಸೌಧದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದ್ದು ಪಾಸ್ ವಿತರಣೆ ವ್ಯವಸ್ಥೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.

  • ಸಂಸತ್‌ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು

    ಸಂಸತ್‌ನಲ್ಲಿ ಸ್ಮೋಕ್ ಬಾಂಬ್- ಆರೋಪಿಗಳ ಮೇಲೆ ಯುಎಪಿಎ ಅಡಿ ಕೇಸ್ ದಾಖಲು

    ನವದೆಹಲಿ: ಸಂಸತ್‌ನಲ್ಲಿ (Parliament) ಬುಧವಾರ ನಡೆದ ಭದ್ರತಾ ಉಲ್ಲಂಘನೆಗೆ (Security Breach) ಸಂಬಂಧಿಸಿಂತೆ ಒಟ್ಟು 5 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಲೋಕಸಭೆಯಲ್ಲಿ (Lok Sabha) ನಡೆದ ಸ್ಮೋಕ್ ಬಾಂಬ್ ಪ್ರಕರಣದಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದು, ಮೈಸೂರಿನ ನಿವಾಸಿ ಮನೋರಂಜನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಮೈಸೂರಿನ ವಿಜಯನಗರ ನಿವಾಸಿ ಎಂಜಿನಿಯರಿಂಗ್ ಪದವೀಧರ ಮನೋರಂಜನ್, ಲಕ್ನೋದ ಸಾಗರ್ ಶರ್ಮಾ, ಹರಿಯಾಣದ ಹಿಸಾರ್‌ನ ನೀಲಂ, ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂಧೆ ಹಾಗೂ ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಶೋಧ ಮುಂದುವರೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆದೇಶಿಸಿದ್ದಾರೆ. ಇದನ್ನೂ ಓದಿ: ಅಲಹಾಬಾದ್ ವಿವಿ ಹಾಸ್ಟೆಲ್ ಕೊಠಡಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟಗೊಂಡು ವಿದ್ಯಾರ್ಥಿಗೆ ಗಾಯ

    ಘಟನೆಯಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಸಂಸತ್‌ನ ಒಳಗೆ ಹಳದಿ ಸ್ಮೋಕ್ ಬಾಂಬ್ ಸಿಡಿಸಿದರೆ ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಶಿಂಧೆ ಕೆಂಪು ಮತ್ತು ಹಳದಿ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ವಿಶಾಲ್ ಮತ್ತು ಲಲಿತ್ ಝಾ ಗುರ್ಗಾಂವ್ ಮೂಲದವರು. ಲಲಿತ್ ಝಾ ತಮ್ಮ ಮೊಬೈಲ್‌ನಲ್ಲಿ ಘಟನೆಯ ದೃಶ್ಯಾವಳಿಗಳನ್ನು ಸೆರೆಹಿಡಿದು ಮೊಬೈಲ್ ಜೊತೆಗೆ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ವಿಶಾಲ್ ಇತರೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: 45 ನಿಮಿಷಗಳ ಪಾಸ್‌ ಪಡೆದು 2 ಗಂಟೆ ಗ್ಯಾಲರಿಯಲ್ಲಿ ಕುಳಿತಿದ್ರು!

    ದೆಹಲಿ ಪೊಲೀಸರ ಈವರೆಗಿನ ತನಿಖೆಯಲ್ಲಿ ಎಲ್ಲಾ ಆರೋಪಿಗಳು ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಎಂಬ ಗ್ರೂಪ್‌ನಲ್ಲಿ ಸಂಪರ್ಕ ಹೊಂದಿದ್ದು, ಒಂದೂವರೆ ವರ್ಷಗಳ ಹಿಂದೆಯೇ ಮೈಸೂರಿನಲ್ಲಿ ಭೇಟಿಯಾಗಿ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಖಾತೆ ಇಲ್ಲ – ಮನೋರಂಜನ್ ಬೆಂಗಳೂರು ನೆಟ್‌ವರ್ಕ್ ಯಾವುದು?

    ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗದಂತಹ ಸಮಸ್ಯೆಯಿಂದ ನಾವು ಬೇಸತ್ತಿದ್ದೇವೆ. ಈ ಕಾರಣಕ್ಕೆ ಕೃತ್ಯವನ್ನು ನಡೆಸಿದ್ದೇವೆ ಎಂದು ಆರೋಪಿ ಅಮೋಲ್ ಶಿಂಧೆ ವಿಚಾರಣಾ ಸಮಯದಲ್ಲಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಇನ್ನೋರ್ವ ಆರೋಪಿ ಮಹಿಳೆ ನೀಲಂ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಭಾರತ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ನಾವು ನಮ್ಮ ಹಕ್ಕುಗಳಿಗೆ ಧ್ವನಿ ಎತ್ತಿದಾಗ ನಮ್ಮನ್ನು ಜೈಲಿಗೆ ಹಾಕುತ್ತಾರೆ. ಹೀಗೆ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಯಾವುದೇ ಸಂಸ್ಥೆಗೆ ಸೇರಿಲ್ಲ. ನಾವು ನಿರುದ್ಯೋಗಿಗಳು ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!