Tag: skin

  • ಕಾಡುಕುರಿ ಚರ್ಮ ಮಾರಾಟ ಯತ್ನ – ಆರೋಪಿ ಸೆರೆ

    ಕಾಡುಕುರಿ ಚರ್ಮ ಮಾರಾಟ ಯತ್ನ – ಆರೋಪಿ ಸೆರೆ

    ಮಡಿಕೇರಿ: ಕಾಡುಕುರಿಗಳನ್ನು ಬೇಟೆಯಾಡಿ ಅದರ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಡುಗು ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕದನೂರು ನಿವಾಸಿ ಕೆ.ಎಂ ಜೋಯಪ್ಪ (37) ಬಂಧಿತ ಆರೋಪಿಯಾಗಿದ್ದು, ಈತ ಕಾಡುಕುರಿಗಳನ್ನು ಬೇಟೆಯಾಡಿ ಹಿಡಿದು ಬಳಿಕ ಅದರ ಚರ್ಮವನ್ನು ಮಾರಾಟ ಮಾಡುತ್ತಿದ್ದ.

    ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಸಂಚಾರಿ ದಳದ ಪೊಲೀಸರು, ಜೋಯಪ್ಪನಿಂದ 2 ಕುರಿಯ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದನ್ನೂ ಓದಿ: ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ

    ಮಡಿಕೇರಿಯ ಕಗ್ಗೋಡು ಜಂಕ್ಷನ್ ಬಳಿ ನಡೆದ ಕಾರ್ಯಾಚರಣೆಯು ಅರಣ್ಯ ಸಂಚಾರಿ ದಳದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ನಡೆಯಿತು. ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು ಸವಿ, ಹೆಡ್ ಕಾನ್‍ಸ್ಟೆಬಲ್ ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಹಾಗೂ ಚಾಲಕ ಮೋಹನ್ ಪಾಲ್ಗೊಂಡಿದ್ದರು.

  • ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ

    ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ

    ಚಿತ್ರದುರ್ಗ: ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ತಿಳಿಸಿದ್ದಾರೆ.

    ಕರ್ನಾಟಕ ಕಿವಿ, ಮೂಗು ಆಸ್ಪತ್ರೆಯಲ್ಲಿ ಕೋವಿಡ್-19ಗೆ ಚಿಕಿತ್ಸೆ ಪಡೆದಿದ್ದ ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ 50 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಗುಣಮುಖರಾದ ಒಂದು ತಿಂಗಳ ಬಳಿಕ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಪ್ರತಿದಿನ ಮಾಸ್ಕ್ ಧರಿಸಿ ಗಾಯವಾಗಿರುವ ಪರಿಣಾಮ, ಅವರ ಕಿವಿ ಭಾಗದಲ್ಲಿ ಬ್ಲಾಕ್ ಫಂಗಸ್ ಸೋಂಕು ಪತ್ತೆಯಾಗಿದೆ. ಆ ವ್ಯಕ್ತಿ ಹೆಚ್ಚು ಸ್ಟಿರಾಯ್ಡ್ ಬಳಸಿರುವುದರಿಂದ ಬ್ಲಾಕ್ ಫಂಗಸ್ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.

    ಚರ್ಮದಲ್ಲಿ ಪತ್ತೆಯಾಗಿರುವ ಈ ಬ್ಲಾಕ್ ಫಂಗಸ್ ಹೆಚ್ಚು ಮಧುಮೇಹವಿರುವ ರೋಗಿಗಳಲ್ಲಿ ಪತ್ತೆಯಾಗಲಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಈ ಸೋಂಕಿಗೆ ಸರ್ಜರಿ ಮೂಲಕ ಗುಣ ಮಾಡಲು ಸಿದ್ಧತೆಗಳಾಗಿವೆ. ಬ್ಲಾಕ್ ಫಂಗಸ್ ಆಗಿರುವ ಜಾಗವನ್ನು ಸಂಪೂರ್ಣ ಸರ್ಜರಿ ಮೂಲಕ ತೆಗೆದು ಹಾಕಲಾಗುತ್ತದೆ. ಬಳಿಕ ಬೇರೆಡೆಯ ಚರ್ಮವನ್ನು ಆ ಜಾಗಕ್ಕೆ ಹಾಕಿ ಸರ್ಜರಿ ಮಾಡುವ ಮೂಲಕ ಬ್ಲಾಕ್ ಫಂಗಸ್ ಸೋಂಕನ್ನು ಗುಣಪಡಿಸುವ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಇದನ್ನು ಓದಿ: ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ವಾರ್ಡ್ ಬಾಯ್ ಅರೆಸ್ಟ್

  • ಬಾಳೆಹಣ್ಣಿನ ಸಿಪ್ಪೆಯಿಂದ ಆಗುವ ಆರೋಗ್ಯಕರ ಅನುಕೂಲ

    ಬಾಳೆಹಣ್ಣಿನ ಸಿಪ್ಪೆಯಿಂದ ಆಗುವ ಆರೋಗ್ಯಕರ ಅನುಕೂಲ

    -ಮೊಡವೆ ನಿವಾರಣೆ, ಫಳಫಳ ಹಲ್ಲುಗಳಿಗಾಗಿ ಮದ್ದು ಬಾಳೆ ಸಿಪ್ಪೆ

    ಸಾಮಾನ್ಯವಾಗಿ ನಾವು ಬಳಸಿದ ಪ್ರತಿಯೊಂದು ವಸ್ತುವೂ ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಉಪಯೋಗಕ್ಕೆ ಬರುತ್ತವೆ. ಅದರಲ್ಲೂ ನಾವು ಬಳಸುವ ಹಣ್ಣುಗಳಂತೂ ತುಂಬಾ ಉಪಯೋಗಕ್ಕೆ ಬರುತ್ತವೆ. ಆದರೆ ಅದರಿಂದ ಆಗುವ ಅನುಕೂಲಗಳನ್ನು ತಿಳಿಯದೆ ನಾವು ಉಪಯೋಗವಾಗುವ ವಸ್ತು ಅಥವಾ ಹಣ್ಣುಗಳನ್ನು ಬಿಸಾಕುತ್ತೇವೆ. ಅದೇ ರೀತಿ ಎಲ್ಲರೂ ಮನೆಯಲ್ಲಿ ಬಾಳೆ ಹಣ್ಣು ಇದ್ದೆ ಇರುತ್ತದೆ. ಊಟ ಆದ ಮೇಲೆ ತಿಂದು ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಬಾಳೆಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ. ಇದನ್ನು ಕೆಲವೊಂದು ಅಧ್ಯಯನಗಳು ಹೇಳುತ್ತವೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರವಾಗಿದೆ.

    ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇರುತ್ತದೆ. ಅಷ್ಟೇ ಅಲ್ಲದೇ ಮೆಗ್ನಿಷಿಯಂ, ಪೊಟ್ಯಾಶಿಯಂ, ನಾರಿನಾಂಶ ಮತ್ತು ಪ್ರೋಟಿನ್ ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ಆದ್ದರಿಂದ ಬಾಳೆ ಹಣ್ಣಿನ ಸಿಪ್ಪೆಯಿಂದ ಏನೆಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

    1. ಹೊಳೆಯುವ ಹಲ್ಲುಗಳಿಗಾಗಿ: ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಎರಡರಿಂದ ಮೂರು ನಿಮಿಷದ ತನಕ ಹಲ್ಲುಗಳ ಮೇಲೆ ಉಜ್ಜಿ. ಆಮೇಲೆ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ನಿಮ್ಮ ಹಲ್ಲುಗಳನ್ನು ತೊಳೆಯಿರಿ. ಇದರಿಂದ ನಿಮ್ಮ ಹಲ್ಲುಗಳಿಗೆ ಫಳ ಫಳ ಎನ್ನುವ ಹೊಳಪು ದೊರೆಯುತ್ತದೆ.

    2. ಮೊಡವೆಯ ಸಮಸ್ಯೆ ಪರಿಹಾರ: ಸಾಮಾನ್ಯವಾಗಿ ಯುವತಿ ಮತ್ತು ಯುವಕರಿಗೆ ಮೊಡವೆಗಳ ಸಮಸ್ಯೆ ಇರುತ್ತದೆ. ಹೀಗಾಗಿ ಮೊಡವೆಗಳು ಉಂಟಾದಾಗ ಬಾಳೆಹಣ್ಣಿನ ಸಿಪ್ಪೆಯ ಚಿಕ್ಕ ತುಂಡನ್ನು ತೆಗೆದುಕೊಂಡು ನಿಮ್ಮ ಮುಖದಲ್ಲಿ ಮೊಡವೆ ಇರುವ ಜಾಗದ ಮೇಲೆ ಸ್ವಲ್ಪ ಹೊತ್ತು ನಿಧಾನವಾಗಿ ಮಸಾಜ್ ಮಾಡಿ. ಅದನ್ನು ಹಾಗೆಯೇ 10 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಆಮೇಲೆ ಶುದ್ಧವಾದ ನೀರಿನಿಂದ ಮುಖವನ್ನು ತೊಳೆಯಿರಿ. ಒಂದು ವಾರ ಹೀಗೆ ಮಾಡುತ್ತಿದ್ದರೆ ಮುಖದಲ್ಲಿರುವ ಮೊಡವೆ ನಿಧಾನಕ್ಕೆ ಹೋಗುತ್ತವೆ.

    3. ಆರೋಗ್ಯಕರವಾದ ಚರ್ಮಕ್ಕೆ: ಒಂದು ತಾಜಾವಾದ ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಒಂದು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ. ನಂತರ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ. ಐದು ನಿಮಿಷ ಬಿಟ್ಟು, ನೀರಿನಿಂದ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ದಿನ ಹೀಗೆ ಮಾಡಿ. ಇದು ನಿಮ್ಮ ಮುಖದ ನೆರಿಗೆಯನ್ನು ಕಡಿಮೆ ಮಾಡುವುದಲ್ಲದೇ, ಕಾಂತಿಯನ್ನು ಹೆಚ್ಚಿಸುತ್ತದೆ.

    4. ಚರ್ಮದ ಗಂಟು ನಿವಾರಣೆ: ನಿಮಗೆ ಚರ್ಮದ ಗಂಟಿನಿಂದ ಯಾವುದೇ ಸಮಸ್ಯೆಯಾಗುತ್ತಾ ಇದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಇದನ್ನು ನಿವಾರಣೆ ಮಾಡಬಹುದು. ಭಾದಿತ ಜಾಗದಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಳ್ಳಿ ಮತ್ತು ಇದು ಬೇಗನೆ ನಿವಾರಣೆಯಾಗುವುದು. ಬಾಳೆಹಣ್ಣಿನಲ್ಲಿ ನೋವುನಿವಾರಕ ಗುಣಗಳು ಇವೆ. ಹೀಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ನೋಯುತ್ತಿರುವ ಮಚ್ಚೆಗೆ ಉಜ್ಜಿದರೆ ನೋವು ಕಡಿಮೆಯಾಗುವುದು.

    5. ಕಪ್ಪುಕಲೆ ನಿವಾರಣೆ: ಒಂದು ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರು ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಒಂದು ಚಮಚ ಜೇನುತುಪ್ಪು, ಅರ್ಧಚಮಚ ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಕಲೆ ರಹಿತ ಮುಖ ನಿಮ್ಮದಾಗುತ್ತದೆ.

    6. ತ್ವಚೆಗಾಗಿ: ಒಂದು ಬಾಳೆಹಣ್ಣಿನ ಸಿಪ್ಪೆ ಮತ್ತು ಮೂರು ಚಮಚ ಲಿಂಬೆ ರಸವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಕಳೆದ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಚರ್ಮದಲ್ಲಿ ಬದಲಾವಣೆ ಬರಲು ನೀವು ಇದನ್ನು ದಿನನಿತ್ಯ ಬಳಸಿಕೊಳ್ಳಬಹುದು.

    7. ಎಣ್ಣೆಯುಕ್ತ ಚರ್ಮಕ್ಕೆ: ಕೆಲವರಿಗೆ ಚರ್ಮವು ಎಣ್ಣೆಯಾಗಿರುತ್ತದೆ. ಅವರು ಮಿಕ್ಸಿಯಲ್ಲಿ ಬಾಳೆಹಣ್ಣಿನ ಸಿಪ್ಪೆ ರುಬ್ಬಿಕೊಳ್ಳಿ. ನಂತರ ರುಬ್ಬಿಕೊಂಡಿರುವ ಬಾಳೆಹಣ್ಣಿನ ಸಿಪ್ಪೆಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ. ಇದು ತುಂಬಾ ಒಣಗಿದಂತೆ ಇರುತ್ತದೆ. ಆಗ ಇದಕ್ಕೆ ನಿಮಗೆ ಬೇಕಾದಷ್ಟು ನೀರು ಹಾಕಿಕೊಳ್ಳಿ. ಇದನ್ನು ಮುಖ ಹಾಗೂ ಚರ್ಮಕ್ಕೆ ಹಚ್ಚಿಕೊಳ್ಳಿ. ತಣ್ಣೀರಿನಿಂದ ತೊಳೆಯಿರಿ. ಇದರಿಂದ ಎಣ್ಣೆಯುಕ್ತ ಚರ್ಮ ನಿವಾರಣೆಯಾಗುತ್ತದೆ.

    8. ತೂಕ ಇಳಿಕೆ: ಬಾಳೆಹಣ್ಣಿನ ಸಿಪ್ಪೆಯನ್ನು ತೂಕ ಕಳೆದುಕೊಳ್ಳಲು ಬಳಸಬಹುದು. ಪ್ರತಿ ದಿನ ಎರಡು ಬಾಳೆಹಣ್ಣುಗಳನ್ನು ಮಧ್ಯಾಹ್ನದ ಊಟದ ವೇಳೆ ಸೇವಿಸಿ. ಇದರ ಸಿಪ್ಪೆಗಳನ್ನು ಪ್ರತ್ಯೇಕವಾಗಿ ಸೇವಿಸಿ. ರಾತ್ರಿ ವೇಳೆ ಊಟ ಮಾಡಬೇಡಿ. ಯಾಕೆಂದರೆ ಬಾಳೆಹಣ್ಣಿನ ಸಿಪ್ಪೆಯು ಸರಿಯಾಗಿ ಕರಗಬೇಕು. ಅಧ್ಯಯನಗಳ ಪ್ರಕಾರ ಈ ಆಹಾರ ಕ್ರಮದಿಂದ ಸುಮಾರು 2.5 ಕೆಜಿಯಷ್ಟು ತೂಕ ಕಳೆದುಕೊಳ್ಳಬಹುದು.

    9. ಕೀಟಗಳ ಕಡಿತಕ್ಕೆ: ಯಾವುದೇ ಕೀಟಗಳು ಕಚ್ಚಿದರೆ ಆ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಳ್ಳಿ. ಇದರಿಂದ ತುರಿಕೆ ಮತ್ತು ನೋವುಗಳು ತಕ್ಷಣ ನಿವಾರಣೆಯಾಗುತ್ತದೆ.

    10. ಕಣ್ಣಿನ ರಕ್ಷಣೆ: ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಸುತ್ತ ಲೇಪಿಸುವುದರಿಂದ ಯು.ವಿ.ಕಿರಣಗಳಿಂದ ರಕ್ಷಣೆ ಪಡೆಯಬಹುದು. ಹೀಗೆ ಮಾಡುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಬಿಡಿ, ನಂತರ ಹಚ್ಚಿ. ಹೀಗೆ ಮಾಡುವುದರಿಂದ ಕಣ್ಣಿನ ಪೊರೆ ಬರದಂತೆ ಸಹ ತಡೆಯಬಹುದು.

    11. ಹೊಳಪಿಗಾಗಿ: ಶೂ, ಚರ್ಮದ ಉತ್ಪನ್ನ ಮತ್ತು ಬೆಳ್ಳಿಯ ವಸ್ತುಗಳಿಗೆ ತಕ್ಷಣ ಹೊಳಪು ನೀಡಲು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಬಹುದು. ಇದಕ್ಕಾಗಿ ಸಿಪ್ಪೆಯನ್ನು ಅವುಗಳ ಮೇಲೆ ಉಜ್ಜಿದರೆ ಹೊಳಪು ಬರುತ್ತದೆ.

  • ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

    ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

    ಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ.

    ಕೈ, ಕಾಲಿನ ತೇವಾಂಶ ಕಡಿಮೆಯಾಗಿ ಒರಟು ಒರಟಾಗಿ ಕಾಣೋದು. ಕೂದಲು ಒಣಗಿದಂತೆ ಅನ್ನಿಸುವುದು, ತುಟಿ ಒಡೆಯುವುದು ಸರ್ವೆ ಸಾಮಾನ್ಯ. ಇದಕ್ಕಾಗಿ ಚರ್ಮದ ಆರೈಕೆ ಮಾಡಲೇಬೇಕು. ಇನ್ನು ಬೆಳಗ್ಗೆ ಬೇಗನೇ ಎದ್ದು ಕೆಲಸಕ್ಕೆ ಹೋಗುವವರನ್ನು ಹೆಚ್ಚಾಗಿ ಈ ಡ್ರೈ ಸ್ಕಿನ್ ಸಮಸ್ಯೆ ಬಾಧಿಸುತ್ತದೆ. ಡ್ರೈ ಸ್ಕಿನ್ ಸಮಸ್ಯೆಯಿಂದ ಮುಕ್ತಿ ಹೊಂದಲು ಮಾರುಕಟ್ಟೆಯಲ್ಲಿ ಹಲವು ಕಾಸ್ಮೆಟಿಕ್ಸ್, ಕೋಲ್ಡ್ ಕ್ರೀಮ್, ಲೋಷನ್, ಸೋಪ್‍ಗಳು ಲಗ್ಗೆ ಇಟ್ಟಿವೆ. ಅವೆಲ್ಲಾವನ್ನು ಒಮ್ಮೆ ಟ್ರೈ ಮಾಡಿ ಎಫೆಕ್ಟ್ ಕಾಣದಾದರೆ ಅದಕ್ಕೂ ಬೇಸರ. ಈಗ ಆ ಬೇಸರ ಬೇಡ, ನಾವು ಕೊಡೋ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಈ ವಿಂಟರ್ ಅನ್ನು ಎಂಜಾಯ್ ಮಾಡಿ.

    ಸುಲಭ ವಿಧಾನಗಳು:
    * ಅರಿಶಿಣ ಪುಡಿ ಮತ್ತು ಹಾಲನ್ನು ಮಿಕ್ಸ್ ಮಾಡಿ ಮುಖಕ್ಕೆ, ಕೈ-ಕಾಲಿಗೆ ಹಚ್ಚಿಕೊಂಡು ತಣ್ಣೀರಿನಲ್ಲಿ ತೊಳೆಯಿರಿ. ಇದು ನಿಮ್ಮ ಚರ್ಮ ಸೌಂದರ್ಯವನ್ನು ಮರಳಿಸುತ್ತದೆ.
    * ಎಣ್ಣೆ ಚರ್ಮದವರು ಕಡಲೆಹಿಟ್ಟು ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡಿ. ನಾಲ್ಕೈದು ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದರಿಂದ ಚರ್ಮ ಸಡಿಲಗೊಂಡು ಕಾಂತಿಯುಕ್ತವಾಗುತ್ತದೆ.
    * ಹಾಲಿನ ಕೆನೆಗೆ ಸ್ವಲ್ಪ ಅರಿಶಿಣವನ್ನು ಮಿಕ್ಸ್ ಮಾಡಿ ಮುಖ, ಕೈ ಕಾಲಿಗೆ ಹಚ್ಚಿಕೊಂಡು ಬಳಿಕ ಸ್ವಲ್ಪ ಹೊತ್ತಿನ ಬಳಿಕ ಮುಖ ತೊಳೆಯಿರಿ. ಹೀಗೆ ಮಾಡುವದರಿಂದ ಚರ್ಮ ಒಣಗಿದಂತೆ ಕಾಣಲ್ಲ.
    * ಚರ್ಮದ ಬಳಿಕ ತುಟಿಗಳು ಈ ಕಾಲದಲ್ಲಿ ಹೆಚ್ಚಾಗಿ ಒಡೆಯುವುದು ಒರಟಾಗುವುದು ಕಾಮನ್. ಅದಕ್ಕೆ ಯಾವಾಗಲೂ ಲಿಪ್ ಬಾಮ್ ಇಟ್ಟುಕೊಂಡಿರಿ. ರಾತ್ರಿ ವೇಳೆ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ಆಯಿಲ್ ಇರಲ್ಲಿ ಯಾವುದು ನಿಮಗೆ ಉಪಯುಕ್ತವೂ ಅದನ್ನು ತುಟಿಗೆ ಹಚ್ಚಿ ಮಲಗಿ. ಇದು ಯಾವುದು ಬೇಡ ಅನ್ನುವರು ಹಾಲಿನ ಕೆನೆಯನ್ನು ಸಹ ಬಳಸಬಹುದು.

    * ಚಳಿಗಾಲದಲ್ಲಿ ಸ್ನಾನಕ್ಕೆ ಆದಷ್ಟು ಕಡಲೆಹಿಟ್ಟು ಬಳಸಿದರೆ ಉತ್ತಮ. ಸೋಪ್ ಬಳಕೆ ಕಡಿಮೆ ಮಾಡಿ.
    * ಚಳಿಗಾಲದಲ್ಲಿ ಪಾದದ ಬಿರುಕು ಸರ್ವೇ ಸಾಮಾನ್ಯ. ರಾತ್ರಿ ಮಲಗುವಾಗ, ಹೊರಗೆ ಹೋಗುವಾಗ ಕಾಲಿಗೆ ಸಾಕ್ಸ್ ಧರಿಸಿ ಹೆಚ್ಚಿನ ಬಿರುಕು ಇದ್ದರೆ ಕ್ರ್ಯಾಕ್ ಹೀಲ್ ಹಚ್ಚಿಕೊಂಡು ಮಲಗಿ.
    * ಹೆಚ್ಚು ಚಳಿ ಕೂದಲ ಸಮಸ್ಯೆ ಫಿಕ್ಸ್. ಇದಕ್ಕಾಗಿ ಅಟ್ ಲೀಸ್ಟ್ ವಾರಕ್ಕೊಮ್ಮೆಯಾದರೂ ತಲೆಗೆ ತುಸು ಬಿಸಿ ಇರುವ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಮಸಾಜ್ ಮಾಡಿ ಸ್ನಾನ ಮಾಡಿದ್ರೆ ಗುಡ್. ಹೀಗೆ ಮಾಡುವದರಿಂದ ಸ್ಟ್ರೆಸ್ (ಮಾನಸಿಕ ಅಥವಾ ಕೆಲಸದ ಒತ್ತಡ) ಕಡಿಮೆ ಆಗುತ್ತದೆ.

    * ಬೆಳಗಿನ ಜಾವ ಅಥವಾ ಸಂಜೆ ಚಳಿಗಾಲದಲ್ಲಿ ಹೊರಗೆ ಹೋಗಲು ಅಬ್ಬಾ ಚಳಿ ಅಂತ ಮನೆಯಲ್ಲಿರುವ ಕೆಲವರು ಇಷ್ಟಪಡುತ್ತಾರೆ. ಹೊರಗೆ ಹೋಗುವಂತಿದ್ದರೆ ತುಂಬು (ಉದ್ದ) ತೋಳಿನ ಬಟ್ಟೆ ಧರಿಸಿ. ನಿಮ್ಮ ಪರಿಸರದಲ್ಲಿ ತಣ್ಣನೆಯ ಗಾಳಿಯಿದ್ದರೆ ಕಿವಿಗೆ ಹತ್ತಿ ಇಟ್ಟುಕೊಳ್ಳಿ. ಕೆಲಸದ ನಿಮಿತ್ತ ಹೊರ ಹೋದಾಗ ಹಿಂದಿರುಗುವ ಸಮಯ ಬದಲಾಗಬಹುದು. ಹಾಗಾಗಿ ಮುಂಜಾಗ್ರತೆಗಾಗಿ ಅಥವಾ ಪ್ರಯಾಣ ಮಾಡುವಾಗ ಸ್ವೆಟರ್, ಸಾಕ್ಸ್, ಸ್ಕಾರ್ಫ್ ಜೊತೆ ಇಟ್ಟುಕೊಳ್ಳುವುದು ಉತ್ತಮ.

    ಈ ಮನೆಮದ್ದುಗಳನ್ನೆಲ್ಲಾ ಯಾರು ಟ್ರೈ ಮಾಡೋರು. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಕಾಸ್ಮೆಟಿಕ್, ಕೋಲ್ಡ್ ಕ್ರೀಮ್, ಲೋಷನ್ ಬಂದಿದೆ ಎಂದು ಅಂಗಡಿಗಳಿಗೆ ಲಗ್ಗೆ ಇಡುವ ಮುನ್ನ ಎಚ್ಚರ. ನಿಮ್ಮ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವವರು ಹೆಚ್ಚಾಗಿ ಇರುತ್ತಾರೆ. ಹಾಗಾಗಿ ಬ್ರ್ಯಾಂಡೆಡ್, ಹೆಸರುವಾಸಿ ಆಗಿರುವ ಉತ್ಪನ್ನ(ಪ್ರಾಡಕ್ಟ್)ಗಳನ್ನೇ ಖರೀದಿಸಿ. ಕಡಿಮೆ ಬೆಲೆಗೆ ಸಿಕ್ತು ಎಂದು ಯಾವುದೋ ಪ್ರಾಡಕ್ಟ್ ಖರೀದಿಸಿ ಬಳಸಿದರೆ ಮುಂದೆ ಹೆಚ್ಚಿನ ದಂಡ ತೆರಬೇಕಾದಿತು ಎಚ್ಚರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಸರಿನಲ್ಲಿ ಅಡಗಿದೆ ನಿಮ್ಮ ಅಂದ!

    ಮೊಸರಿನಲ್ಲಿ ಅಡಗಿದೆ ನಿಮ್ಮ ಅಂದ!

    ಪ್ರತಿಯೊಬ್ಬರಿಗೂ ತಮ್ಮ ತ್ವಚೆಯನ್ನು ಸದಾ ಕಾಪಾಡಿಕೊಳ್ಳಬೇಕು ಅಂದುಕೊಳ್ಳುತ್ತಾರೆ. ಕೆಲವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುತ್ತಾರೆ. ಕೆಲವರು ತಮಗೆ ಗೊತ್ತಿರುವ ಟಿಪ್ಸ್ ಬಳಸಿ ತ್ವಚೆಯನ್ನು ಕಾಪಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರ ತ್ವಚೆಯೂ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಆಗಾಗ ನಾವು ಕೂಡ ನಮ್ಮ ತ್ವಚೆಗೆ ಆರೈಕೆ ಮಾಡಿಕೊಳ್ಳಬೇಕು.

    ಮೊಸರು ತ್ವಚೆಗೆ ಒಳ್ಳೆಯ ಔಷಧಿಯಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಮೊಸರು ಇರುತ್ತದೆ. ಮೊಸರಿಯಲ್ಲಿರುವ ಅಂಶದಿಂದ ನಮ್ಮ ಆರೋಗ್ಯ ಮತ್ತು ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ತ್ವಚೆಯ ಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್‍ಗಳು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವ ಅಂಶ ಅದರಲ್ಲಿದೆ.

     

    ಸುಂದರ ಮೊಗಕ್ಕೆ ಮೊಸರೆ ಮದ್ದು:
    * ಎರಡು ಚಮಚ ಮೊಸರಿಗೆ ಚಿಟಿಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಬಳಿಕ ಅದನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 15 ನಿಮಿಷ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ ವಾರಕ್ಕೆ 2-3 ಬಾರಿ ಮಾಡಿದರೆ ಮುಖದಲ್ಲಿನ ಧೂಳು ಮತ್ತು ಕೊಳೆ ನಿವಾರಣೆಯಾಗುತ್ತದೆ.

    * ಒಂದು ಚಮಚ ಮೊಸರನ್ನು ಮುಖಕ್ಕೆ ಹಚ್ಚಿ, ಮಸಾಜ್ ಮಾಡಿಕೊಳ್ಳಿ ಬಳಿಕ ಅರ್ಧ ಗಂಟೆ ನಂತರ ಮುಖವನ್ನು ತೊಳೆದರೆ ಕಪ್ಪುಕಲೆ ಮಾಯವಾಗಿ ಮುಖ ಸುಂದರವಾಗಿ ಕಾಣುತ್ತದೆ.

    * ಎರಡು ಚಮಚ ಮೊಸರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ, ಮುಖಕ್ಕೆ ಹಚ್ಚಿ. ಬಳಿಕ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದರಿಂದ ಒಣಚರ್ಮ ನಿವಾರಣೆಯಾಗುತ್ತದೆ.

    * ಮೊಸರು ಅರ್ಧ ಕಪ್, 3 ಚಮಚ ತುರಿದ ಸೌತೆಕಾಯಿಯನ್ನು ಡಾರ್ಕ್ ಸರ್ಕಲ್ ಹಾಗೂ ಟ್ಯಾನ್ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. 15 ನಿಮಿಷದ ನಂತರ ತಣ್ಣಗಿರುವ ನೀರಿನಿಂದ ತೊಳೆಯಬೇಕು. ಈ ರೀತಿ ವಾರಕ್ಕೆ 2 ಬಾರಿ ಮಾಡುವುದರಿಂದ ಟ್ಯಾನ್ ಮತ್ತು ಚರ್ಮದ ಕಪ್ಪು ಕಡಿಮೆಯಾಗುತ್ತದೆ.

    * ಒಂದು ಚಮಚ ಕಡಲೆ ಹಿಟ್ಟಿಗೆ 2 ಚಮಚ ಮೊಸರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಬಳಿಕ ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಬೇಕು. ಇದು ಜಿಡ್ಡಿನ ಮತ್ತ ಸೂಕ್ಷ್ಮ ತ್ವಚೆಗೆ ಸೂಕ್ತವಾಗಿದೆ. ಜೊತೆಗೆ ತಾಜಾ ಕಾಂತಿಯನ್ನು ನೀಡುತ್ತದೆ.

    * ಮೊಸರು ಕೂದಲಿನ ನೈಸರ್ಗಿಕ ಪೋಷಣೆ ನೀಡುತ್ತದೆ. ಆದ್ದರಿಂದ ಮೊಸರನ್ನು ಕೂದಲಿನ ಬುಡಕ್ಕೆ ಮಸಾಜ್ ಮಾಡುವುದರಿಂದ ಕೂದಲಿನ ಹೊಳಪು ಹೆಚ್ಚುತ್ತದೆ.

    * 2 ಚಮಚ ಮೊಸರಿಗೆ 1 ಚಮಚ ಅರಶಿಣವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ, ಬಳಿಕ ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

    * ಮೆಹಂದಿ ಪುಡಿಗೆ ಮೊಸರು ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

    * ಬೇಯಿಸಿದ ಆಲೂಗಡ್ಡೆ, 2 ಚಮಚ ಮೊಸರು ಮತ್ತು ಸ್ವಲ್ಪ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿ, ನಿಮ್ಮ ಮುಖವನ್ನು ತೊಳೆದುಕೊಂಡ ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ನಂತರ 20 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

    * ನಿಂಬೆ ಸಿಪ್ಪೆ, ಕಿತ್ತಳೆ ಸಿಪ್ಪೆ ಒಣಗಿಸಿ, ಪುಡಿಮಾಡಿ ಮೊಸರಿನಲ್ಲಿ ಕಲಸಿ, ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮುಖದ ಮೇಲಿನ ಕಲೆ ಕಡಿಮೆಯಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣದ ಆಸೆಯೇ ಇಲ್ಲ, ರೋಗಿಗಳ ಸೇವೆ ಎಲ್ಲ – 5 ರೂ.ಗೆ ಟ್ರೀಟ್‍ಮೆಂಟ್ ಕೊಡ್ತಾರೆ ಮಂಡ್ಯದ ಡಾಕ್ಟರ್

    ಹಣದ ಆಸೆಯೇ ಇಲ್ಲ, ರೋಗಿಗಳ ಸೇವೆ ಎಲ್ಲ – 5 ರೂ.ಗೆ ಟ್ರೀಟ್‍ಮೆಂಟ್ ಕೊಡ್ತಾರೆ ಮಂಡ್ಯದ ಡಾಕ್ಟರ್

    ಮಂಡ್ಯ: ರಾಜ್ಯಾದ್ಯಂತ ವೈದ್ಯರು ಮುಷ್ಕರ ಮಾಡುತ್ತಿದ್ದರೆ, ಮಂಡ್ಯದ ಡಾಕ್ಟರ್ ಶಂಕರೇಗೌಡ ಮಾತ್ರ ತಮ್ಮ ಪಾಡಿಗೆ ತಾವು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾಗಿ ಹತ್ತಾರು ವರ್ಷಗಳಿಂದ ನಿರಂತರವಾಗಿ ಬಡ ಜನರಿಗೆ ಅನುಕೂಲವಾಗುವಂತೆ ಸೇವೆ ಸಲ್ಲಿಸುತ್ತಿರುವ ಶಂಕರೇಗೌಡರು 5 ರೂಪಾಯಿ ಡಾಕ್ಟರ್ ಎಂದೇ ಚಿರಪರಿಚಿತರು. ಇವರು ಸ್ವಗ್ರಾಮ ಶಿವಳ್ಳಿಯಲ್ಲಿ ಉಚಿತವಾಗಿ ರೋಗಿಗಳನ್ನು ಪರೀಕ್ಷೆ ಮಾಡ್ತಾರೆ. ಮಂಡ್ಯದ ತಮ್ಮ ಕ್ಲೀನಿಕ್‍ನಲ್ಲಿ ಮಾತ್ರ ಪ್ರತಿಯೊಬ್ಬರಿಗೆ 5 ರೂಪಾಯಿ ಪಡೆಯುತ್ತಾರೆ.

    ಮಂಡ್ಯದ ತಮ್ಮ ಕ್ಲಿನಿಕ್ ನಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ರಮೇಶ್ ಕುಮಾರ್ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು ತರಲು ಮುಂದಾಗಿರೋದು ಒಳ್ಳೆಯದೇ ಆಗಿದೆ. ರಮೇಶ್ ಕುಮಾರ್ ಅವರು ಬಡ ಜನರ ಮೇಲೆ ಕಾಳಜಿ ತೋರಿಸುತ್ತಿರುವುದು ನನಗೆ ಸಂತೋಷವುಂಟು ಮಾಡಿದೆ ಅಂತ ಖಾಸಗಿ ವೈದ್ಯರ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಮುಷ್ಕರ ಒಂದು ಲಾಬಿ. ಮುಷ್ಕರದಲ್ಲಿ ಪಾಲ್ಗೊಳ್ಳಲು ನನಗೆ ಇಷ್ಟವಿಲ್ಲ. ಅಲ್ಲದೆ ಸರ್ಕಾರ ಈ ರೀತಿ ಕಾಯ್ದೆಯನ್ನ ಈ ಹಿಂದೆಯೇ ಮಾಡಬೇಕಿತ್ತು. ಆದ್ರೆ ಈಗ ತಿದ್ದುಪಡಿ ಮಾಡಲು ಹೊರಟಿರೋದು ಪ್ರತಿಭಟನೆಗೆ ಕಾರಣವಾಗಿದೆ. ನೂರಕ್ಕೆ ಎಪ್ಪತ್ತು ಭಾಗ ಜನರು ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿ ಇಲ್ಲದಿರುವುದೇ ಕಾರಣ ಅಂದ್ರು.

    ಖಾಸಗಿ ವೈದ್ಯರು ಮುಷ್ಕರ ಶುರುಮಾಡಿದಾಗಿನಿಂದ್ಲೂ, 5 ರೂ ಶಂಕರೇಗೌಡ್ರು ಮಾತ್ರ ಒಂದು ದಿನವು ರಜೆ ಮಾಡದೇ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿಗಾಗಿ ಇವರ ಸೇವೆಗೆ ಮಂಡ್ಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.