Tag: Skandagiri Hill

  • ನಂದಿಗಿರಿಧಾಮದ ಪಕ್ಕದ ಸ್ಕಂದಗಿರಿ ಬೆಟ್ಟಕ್ಕೆ ಕಿಡಿಗೇಡಿಗಳಿಂದ ಬೆಂಕಿ

    ನಂದಿಗಿರಿಧಾಮದ ಪಕ್ಕದ ಸ್ಕಂದಗಿರಿ ಬೆಟ್ಟಕ್ಕೆ ಕಿಡಿಗೇಡಿಗಳಿಂದ ಬೆಂಕಿ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ ಪಕ್ಕದ ಸ್ಕಂದಗಿರಿ ಬೆಟ್ಟದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಬೆಟ್ಟವನ್ನ ಆವರಿಸುತ್ತಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಸ್ಕಂದಗಿರಿ ಬೆಟ್ಟದ ತಪ್ಪಲಿನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು ಸದ್ಯ ಇಡೀ ಬೆಟ್ಟವನ್ನ ಆವರಿಸುತ್ತಿದೆ. ಅಂದಹಾಗೆ ಸ್ಕಂದಗಿರಿ ಟ್ರೆಕ್ಕಿಂಗ್ ಪ್ರಿಯರ ಹಾಟ್ ಫೇವರಿಟ್ ತಾಣವಾಗಿದ್ದು, ವಿಕೇಂಡ್ ಬಂದರೆ ಸಾಕು ಬೆಂಗಳೂರಿನ ಟೆಕ್ಕಿಗಳ ದಂಡೇ ಬೆಟ್ಟಕ್ಕೆ ಹರಿದುಬರುತ್ತೆ.

    ಇಂತಹ ಸ್ಕಂದಗಿರಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಸಂಪೂರ್ಣ ಬೆಟ್ಟವನ್ನ ಆವರಿಸುವ ಆತಂಕ ತಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ತಪ್ಪಲಿನಿಂದ ಮೇಲ್ಭಾಗಕ್ಕೆ ಬೆಂಕಿ ಆವರಿಸುತ್ತಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ಕಳೆದ ಎರಡು ಮೂರು ದಿನಗಳ ಹಿಂದೆ ಸಹ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದು ಕಿಡಿಗೇಡಿಗಳ ಕೃತ್ಯ ಇರಬೇಕು ಅಂತ ಅರಣ್ಯ ಇಲಾಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೇಸಿಗೆಯ ಆರಂಭದಲ್ಲೇ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಅರಣ್ಯ ಇಲಾಖೆಯವರಿಗೆ ತಲೆನೋವಾಗಿ ಪರಿಣಮಿಸಿದೆ.

  • ಸ್ಕಂದಗಿರಿಗೆ ಚಾರಣಿಗರ ದಂಡು- ಟಿಕೆಟ್ ಜೊತೆ ಮೂಲಭೂತ ಸೌಕರ್ಯವಿಲ್ಲದೆ ಪರದಾಟ

    ಸ್ಕಂದಗಿರಿಗೆ ಚಾರಣಿಗರ ದಂಡು- ಟಿಕೆಟ್ ಜೊತೆ ಮೂಲಭೂತ ಸೌಕರ್ಯವಿಲ್ಲದೆ ಪರದಾಟ

    ಚಿಕ್ಕಬಳ್ಳಾಪುರ: ಭೂಮಿ ಮೇಲಿನ ಸ್ವರ್ಗತಾಣ, ಪ್ರವಾಸಿಗರ ಪಾಲಿನ ಹಾಟ್ ಫೇವರಿಟ್ ತಾಣ ಚಿಕ್ಕಬಳ್ಳಾಪುರ ತಾಲೂಕಿನ ಸ್ಕಂದಗಿರಿ ಬೆಟ್ಟಕ್ಕೆ ಚಾರಣಿಗರ ದಂಡೇ ಹರಿದು ಬಂದಿದೆ. ಮುಂಜಾನೆ 3-4 ಗಂಟೆಗೆ ಸಾವಿರಾರು ಮಂದಿ ಚಾರಣಿಗರು ಸ್ಕಂದಗಿರಿ ಬೆಟ್ಟಕ್ಕೆ ಲಗ್ಗೆಯಿಟ್ಟಿದ್ದು, ವೀಕೆಂಡ್ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಚಾರಣಿಗರ ಆಗಮನ ಹಿನ್ನೆಲೆ ಟಿಕೆಟ್ ಪಡೆಯಲು ಪ್ರವಾಸಿಗರು ಪರದಾಡುವಂತಾಗಿದೆ.

    ಸ್ಕಂದಗಿರಿ ಬೆಟ್ಟದ ಟ್ರೆಕ್ಕಿಂಗ್ ಎಂದು ತಲಾ ಚಾರಣಿಗನಿಗೆ 250 ರೂಪಾಯಿ ಶುಲ್ಕವನ್ನ ಸರ್ಕಾರ ನಿಗದಿಪಡಿಸಿದೆ. ಆದರೆ ಟಿಕೆಟ್ ಬುಕ್ ಮಾಡಲು ಕೇವಲ ‘ಮೈ ಏಕೋ ಟ್ರಿಪ್’ ಅನ್ನೋ ವೆಬ್ ಸೈಟ್ ಮೂಲಕ ಆನ್‍ಲೈನ್ ನಲ್ಲಿ ಅಷ್ಟೇ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಸ್ಕಂದಗಿರಿ ಟ್ರೆಕ್ಕಿಂಗ್ ಗೆ ಆಗಮಿಸಿರುವ ಚಾರಣಿಗರು ಒಮ್ಮಲೆ ಸಾವಿರಾರು ಮಂದಿ ಬಂದಾಗ ಪರದಾಟ ಪಡಬೇಕಾಗುತ್ತಿದೆ. ಇದನ್ನೂ ಓದಿ: ದಾರಿ ಕಾಣದೆ ಪರದಾಡಿದ್ರು- ಪೊಲೀಸರಿಗೆ ಕರೆ ಮಾಡಿ ಕಾಪಾಡಿ ಅಂದ್ರು ಯುವಕ- ಯುವತಿಯರು..!

    ಆಫ್‍ಲೈನ್ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಸಹ ಟಿಕೆಟ್ ಬುಕ್ ಮಾಡಿಕೊಳ್ಳುತ್ತಾರೆ. ಕೇವಲ ಪುಸ್ತಕದಲ್ಲಿ ಹೆಸರು ನಮೂದಿಸಿಕೊಂಡು ದುಡ್ಡು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ದುಡ್ಡು ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರಿಂದ ದೂರುಗಳು ಕೇಳಿಬಂದಿವೆ. ಮತ್ತೊಂದೆಡೆ ಸೂರ್ಯೋದಯದ ಸವಿ ಸವಿಯೋಕೆ ದುರ್ಗಮ ಹಾದಿಯ ಬೆಟ್ಟದಲ್ಲಿ ಸಾಗುವ ಚಾರಣಿಗರ ತಂಡಗಳಿಗೆ ಗೈಡ್ ವ್ಯವಸ್ಥೆ ಕಲ್ಪಿಸಬೇಕೆಂಬ ಆದೇಶ ಇದೆ. ಆದರೆ ಚಾರಣಿಗರ ಜೊತೆ ಯಾವುದೇ ಗೈಡ್ ಗಳನ್ನೂ ಸಹ ಕಳುಹಿಸುತ್ತಿಲ್ಲ.

    ಮತ್ತೊಂದೆಡೆ ಭೂಲೋಕದ ಸ್ವರ್ಗ ತಾಣದಲ್ಲಿ ಯಾಮಾರಿದರೆ ಚಾರಣಿಗರು ನರಕಕ್ಕೆ ಜಾರುತ್ತಾರೆ. ಕನಿಷ್ಟ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಸಹ ಇಲ್ಲದಂತಹ ಪರಿಸ್ಥಿತಿ ಇದೆ. ಯಾವುದೇ ಸುರಕ್ಷತಾ ಕ್ರಮಗಳನ್ನ ಸಹ ಸರ್ಕಾರ ಕೈಗೊಂಡಿಲ್ಲ. ಹೀಗಾಗಿ ಅಪ್ಪಿ ತಪ್ಪಿ ಯಾರಿಗಾದರೂ ಅನಾರೋಗ್ಯಕ್ಕೀಡಾದರೆ ಅಥವಾ ಸುಸ್ತಾಗಿ ಆಯತಪ್ಪಿ ಬಿದ್ದರು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವೇ ಇಲ್ಲದಂತ ದುಸ್ಥಿತಿ ಎದುರಾಗಿದೆ. ಹೀಗಾಗಿ ಟಿಕೆಟ್ ಬುಕ್ಕಿಂಗ್ ಅಂತ ಆನ್‍ಲೈನ್ ವ್ಯವಸ್ಥೆ ಜೊತೆ ಆಫ್ ಲೈನ್ ಟಿಕೆಟ್ ಬುಕ್ಕಿಂಗ್ ಕೌಂಟರ್ ಮಾಡಬೇಕು. ಅಷ್ಟೇ ಅಲ್ಲದೇ ಮೂಲಭೂತ ಸೌಲಭ್ಯಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ ಅಂತ ಚಾರಣಿಗರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾರಿ ಕಾಣದೆ ಪರದಾಡಿದ್ರು- ಪೊಲೀಸರಿಗೆ ಕರೆ ಮಾಡಿ ಕಾಪಾಡಿ ಅಂದ್ರು ಯುವಕ- ಯುವತಿಯರು..!

    ದಾರಿ ಕಾಣದೆ ಪರದಾಡಿದ್ರು- ಪೊಲೀಸರಿಗೆ ಕರೆ ಮಾಡಿ ಕಾಪಾಡಿ ಅಂದ್ರು ಯುವಕ- ಯುವತಿಯರು..!

    ಚಿಕ್ಕಬಳ್ಳಾಪುರ: ಮುಂಜಾನೆಯ ಮಬ್ಬುಗತ್ತಲಲ್ಲಿ ಚಿಕ್ಕಬಳ್ಳಾಪುರದ ಚಾರಣಿಗರ ಪಾಲಿನ ಸ್ವರ್ಗ ಅಂತಲೇ ಪ್ರಸಿದ್ಧ ಪಡೆದಿರುವ ಸ್ಕಂದಗಿರಿ ಬೆಟ್ಟ ಹತ್ತಿದ ಯುವಕ-ಯುವತಿಯರ ತಂಡ ದಾರಿ ಕಾಣದೆ ಬೆಟ್ಟದ ಮಧ್ಯೆ ಪರದಾಡಿದ ಘಟನೆ ನಡೆದಿದೆ.

    ಬೆಂಗಳೂರು ಮೂಲದ ಯುವಕರಾದ ದರ್ಶಿತ್, ರಾಜೇಶ್, ಬಿನಯ್, ಹಾಗೂ ಯುವತಿಯರಾದ ಶಾಶ್ವತಿ, ಶ್ವೇತ ಹಾಗೂ ಸಿಲ್ಕಿ ಎಂಬವರು ಮುಂಜಾನೆ 4 ಗಂಟೆ ಸುಮಾರಿಗೆ ಸ್ಕಂದಗಿರಿ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದಾರೆ. ಅಸಲಿಗೆ ಸ್ಕಂದಗಿರಿ ಬೆಟ್ಟದ ಚಾರಣಕ್ಕೆ ಅಂತ ಸರ್ಕಾರವೇ ತಲಾ 250 ರೂಪಾಯಿ ದರ ನಿಗದಿ ಮಾಡಿದ್ದು, ಗೈಡ್ ಗಳ ಮೂಲಕ ಚಾರಣಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಈ ಆರು ಮಂದಿ ಯುವಕ-ಯುವತಿಯರು ಟಿಕೆಟ್ ಖರೀದಿ ಮಾಡದೆ ಅಕ್ರಮವಾಗಿ ಅಡ್ಡದಾರಿ ಹಿಡಿದು ಚಾರಣಕ್ಕೆ ತೆರಳಿದ್ದಾರೆ.

    ಹೀಗಾಗಿ ಬೆಟ್ಟದ ತುತ್ತ ತುದಿ ತಲಪುವ ಮಾರ್ಗ ತಿಳಿಯದ ಆರು ಮಂದಿ ಯುವಕ-ಯುವತಿಯರು ಆಗೋ ಹಿಗೋ ಕಷ್ಟಪಟ್ಟು ಅರ್ಧ ಬೆಟ್ಟ ಏರಿದ್ದಾರೆ. ಆದರೆ ಮಬ್ಬುಗತ್ತಲಲ್ಲಿ ಬೆಟ್ಟ ಹತ್ತಿದ್ದ ಯುವಕ ಯುವತಿಯರಿಗೆ ಮುಂದೆ ಬೆಟ್ಟ ಏರಲಾಗದೆ ಮಧ್ಯೆ ಸಿಲುಕಿ ಪರದಾಡಿದ್ದಾರೆ. ಕೊನೆಗೆ ಬೆಳಗಾಗುವರೆಗೂ ಅಲ್ಲೆ ಇದ್ದರು. ಆದರೆ ಬೆಳಕಾದ ಮೇಲೆಯೂ ಬೆಟ್ಟದಿಂದ ಕೆಳಗಿಳಿಯುವುದಕ್ಕೆ ದಾರಿ ಕಾಣದ ಯುವಕ-ಯುವತಿಯರು ಪರದಾಡಿದ್ದಾರೆ.

    ಇಂದು ಸುಮಾರು 2 ಗಂಟೆ ಅಲ್ಲೇ ಕಾಲ ಕಳೆದು ಕೊನೆಗೆ ವಿಧಿಯಿಲ್ಲದೆ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಈ ವೇಳೆ ಪೋಲಿಸರು ಉರಗತಜ್ಞ ಹಾಗೂ ವನ್ಯ ಜೀವಿ ಸಂರಕ್ಷಕ ಪ್ರಥ್ವಿರಾಜ್ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಆಗ ಪ್ರಥ್ವಿರಾಜ್ ಗೆ ಯುವಕ ದರ್ಶಿತ್ ಕರೆ ಮಾಡಿ ತಮ್ಮನ್ನ ರಕ್ಷಣೆ ಮಾಡುವಂತೆ ಮೊರೆಯಿಟ್ಟಿದ್ದಾನೆ. ಮಾಹಿತಿ ಅರಿತ ಪ್ರಥ್ವಿರಾಜ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಯುವಕ-ಯುವತಿಯರ ರಕ್ಷಣೆಗೆ ಮುಂದಾಗಿದ್ದಾರೆ.

    ಮೊಬೈಲ್ ಮೂಲಕ ಯುವಕ-ಯುವತಿಯರಿದ್ದ ಸ್ಥಳದ ಮಾಹಿತಿ ತಿಳಿದುಕೊಂಡು ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಪ್ರಥ್ವಿರಾಜ್ ಎರಡು ಗಂಟೆಗೂ ಹೆಚ್ಚು ಕಾಲ ಬೆಟ್ಟದಲ್ಲಿ ಅಲೆದಾಡಿ ಯುವಕ-ಯುವತಿಯರನ್ನ ಪತ್ತೆ ಹಚ್ಚಿದ್ದಾರೆ. ಕೊನೆಗೆ ಸಿಕ್ಕ ಯುವಕ ಯುವತಿಯರನ್ನ ಹರಸಾಹಸ ಪಟ್ಟು ಕೆಳಗೆ ಕರೆ ತಂದಿದ್ದಾರೆ. ಸದ್ಯ ಆರು ಮಂದಿ ಯುವಕ-ಯುವತಿಯರನ್ನ ಚಿಕ್ಕಬಳ್ಳಾಪುರ ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದು, ಯುವಕ-ಯುವತಿಯರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ತಲಾ 2000 ರೂ. ದಂಡ ವಿಧಿಸಲು ಮುಂದಾಗಿದ್ದಾರೆ.

    ಅಂದ ಹಾಗೆ ಅರಣ್ಯ ಪ್ರದೇಶವೂ ಆಗಿರುವ ಸ್ಕಂದಗಿರಿಯನ್ನ ಅಕ್ರಮವಾಗಿ ಪ್ರವೇಶ ಮಾಡಿದರೆ 2 ವರ್ಷ ಜೈಲು ಅಥವಾ 2000 ದಂಡ ವಿಧಿಸಬಹುದಾಗಿದೆ. ಇಲ್ಲವಾದಲ್ಲಿ ಎರಡು ಸಹ ವಿಧಿಸಬಹುದಾಗಿದೆ. ಆದರೆ ಈ ರೀತಿ ಅದೆಷ್ಟೋ ಮಂದಿ ಅಡ್ಡದಾರಿ ಹಿಡಿದು ಫಜೀತಿ ಪಟ್ಟ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಹೀಗಾಗಿ ಅಡ್ಡದಾರಿ ಹಿಡಿದು ಟ್ರೆಕ್ಕಿಂಗ್ ಮಾಡುವ ಮುನ್ನ ಎಚ್ಚರವಿರಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv