Tag: Simha Roopini

  • ‘ಸಿಂಹರೂಪಿಣಿ’ ದಿವ್ಯಾನುಭೂತಿ : ನಟ ವಿಜಯ್ ಚೆಂಡೂರ್

    ‘ಸಿಂಹರೂಪಿಣಿ’ ದಿವ್ಯಾನುಭೂತಿ : ನಟ ವಿಜಯ್ ಚೆಂಡೂರ್

    ಕೆ.ಎಂ ನಂಜುಂಡೇಶ್ವರ ನಿರ್ಮಾಣ ಮತ್ತು ಕಿನ್ನಾಳ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸಿಂಹರೂಪಿಣಿ’ ಚಿತ್ರ ಈ ವಾರ ಅಂದರೆ, ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಭಕ್ತಿಪ್ರಧಾನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಮರ್ಶಿಯಲ್ ಧಾಟಿಯಲ್ಲಿ, ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂತೆ ನಿರ್ದೇಶಕರು ರೂಪಿಸಿದ್ದಾರಂತೆ. ಬಹುದೊಡ್ಡ ತಾರಾಗಣ ಹೊಂದಿರುವ ಸಿಂಹರೂಪಿಣಿಯ ಸಮ್ಮುಖದಲ್ಲಿ ಘಟಾನುಘಟಿ ನಟ ನಟಿಯರು ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟ ವಿಜಯ್ ಚೆಂಡೂರ್ ಪಾಲಿಗೂ ಒಂದೊಳ್ಳೆ ಪಾತ್ರವೇ ಒಲಿದು ಬಂದಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ತಮಗಾಗಿದ್ದ ರೋಮಾಂಚಕ ಅನುಭೂತಿಯೊಂದನ್ನು ವಿಜಯ್ ಚೆಂಡೂರ್ ತೆರೆದಿಟ್ಟಿದ್ದಾರೆ.

    ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯ್ ಚೆಂಡೂರ್, ಆ ನಂತರದಲ್ಲಿ ನಟನಾಗಿ ನೆಲೆ ಕಂಡುಕೊಂಡವರು. ಅದರಲ್ಲೂ ವಿಶೇಷವಾಗಿ ಹಾರರ್ ಸಿನಿಮಾಗಳ ಮೂಲಕವೇ ಅವರಿಗೆ ಹಂತ ಹಂತವಾಗಿ ವಿಜಯವೆಂಬುದು ಕೈ ಹಿಡಿಯುತ್ತಾ ಬಂದಿದೆ. ಹೀಗೆ ಹಾರರ್ ಮೂವಿಗಳ ಮೂಲಕ ಸದ್ದು ಮಾಡುತ್ತಾ ಬಂದಿರುವ ವಿಜಯ್ ಅವರಿಗೆ ಪರಿಚಿತರು `ನಿಮಗೆ ದೆವ್ವ ಕೈಹಿಡಿದಿದೆ’ ಅಂತ ಕಿಚಾಯಿಸುತ್ತಾರಂತೆ. ಆದರೆ, ಇದೀಗ ಸಿಂಹರೂಪಿಣಿಯ ಭೂಮಿಕೆಯಲ್ಲಿ ಮಾರಮ್ಮ ದೇವಿ ಕೈಹಿಡಿದು ಪೊರೆಯುತ್ತಾಳೆಂಬ ಗಾಢ ನಂಬಿಕೆ ವಿಜಯ್ ಚೆಂಡೂರ್ ಅವರದ್ದು.

    ಅಂಥಾ ನಂಬಿಕೆಗೆ ಕಾರಣವಿದೆ. ವಿಜಯ್ ಚೆಂಡೂರ್ ಈ ಸಿನಿಮಾದಲ್ಲಿ ದೇವಿಯ ಆರಾಧಕನಾಗಿ ಕಾಣಿಸಿಕೊಂಡಿದ್ದಾರೆ. ಅದು ಸಿನಿಮಾದ ಆತ್ಮದಂಥಾ ಪಾತ್ರವೂ ಹೌದು. ಗ್ರಾಮವೊಂದರ ಜನರೆಲ್ಲ ತಮ್ಮ ಕಷ್ಟ ಕಾರ್ಪಣ್ಯಗಳನ್ನು, ಬೇಡಿಕೆಗಳನ್ನು ಮಾರಮ್ಮದೇವಿಯ ಮಡಿಲಿಗೆ ಹಾಕಿ ನಿರಾಳವಾಗುತ್ತಾರೆ. ಅಂಥಾದ್ದನ್ನೆಲ್ಲ ದೇವಿಗೆ ದಾಟಿಸುವ ವಾಹಕವಾಗಿ ಆರಾಧಕರಿರುತ್ತಾರೆ. ಅಂಥಾ ಪಾತ್ರವನ್ನಿಲ್ಲಿ ವಿಜಯ್ ಚೆಂಡೂರ್ ನಿಭಾಯಿಸಿದ್ದಾರೆ. ಇದರ ಜೊತೆ ಜೊತೆಗೇ ನಾಯಕನೊಂದಿಗೆ ಸದಾ ಸಾಥ್ ಕೊಡುತ್ತಾ, ಆತನ ಬೆನ್ನೆಲುಬಾಗಿ ನಿಲ್ಲುವ ಮತ್ತೊಂದು ಬಗೆಯ ಚಹರೆಯೂ ಆ ಪಾತ್ರಕ್ಕಿದೆಯಂತೆ.

    ಇದು ಹೇಳಿಕೇಳಿ ಭಕ್ತಿಪ್ರಧಾನ ಚಿತ್ರ. ಆಳವಾದ ನಂಬಿಕೆ, ಭಕ್ತಿ ಭಾವವಿಲ್ಲದೆ ಇಂಥಾ ಚಿತ್ರವನ್ನು ರೂಪಿಸಲು ಸಾಧ್ಯವಿಲ್ಲ ಎಂಬುದನ್ನು ಸಿಂಹರೂಪಿಣಿಯೇ ವಿಜಯ್ ಅವರಿಗೆ ಮನದಟ್ಟು ಮಾಡಿಸಿದ್ದಾಳಂತೆ. ಅಪಾರ ದೈವ ಭಕ್ತಿ ಹೊಂದಿರೋ ನಿರ್ಮಾಪಕರು ಮತ್ತು ನಿರ್ದೇಶಕರ ಶ್ರದ್ಧೆ ಅವರಲ್ಲೊಂದು ಬೆರಗು ಮೂಡಿಸಿತ್ತಂತೆ. ಈ ಪಾತ್ರವನ್ನು ನಿರ್ವಹಿಸುವ ಮುನ್ನ ವಿಜಯ್ ಚೆಂಡೂರ್ ದೇವಿಯ ಮುಂದೆ ನಿಂತು ಅರಿಕೆ ಮಾಡಿಕೊಂಡಿದ್ದರಂತೆ. ನಿರ್ದೇಶಕರ ಇಷಾರೆಯ ಮೇರೆಗೆ ವಿಜಯ್ ಸಂಕಲ್ಪ ಮಾಡುತ್ತಲೇ ದೇವಿಯ ಕಡೆಯಿಂದ ಪಾಸಿಟಿವ್ ಸೂಚನೆ ಸಿಕ್ಕಿತ್ತಂತೆ. ಅದನ್ನು ಕಂಡು ಅಕ್ಷರಶಃ ರೋಮಾಂಚಿತರಾಗಿದ್ದ ವಿಜಯ್ ಚೆಂಡೂರ್, ತಮ್ಮ ಭಾಗದ ಚಿತ್ರೀಕರಣವನ್ನು ಅಂಥಾದ್ದೇ ಅನುಭೂತಿಯೊಂದಿಗೆ, ಭಕ್ತಿ ಭಾವಗಳೊಂದಿಗೆ ಮಾಡಿ ಮುಗಿಸಿದ್ದಾರಂತೆ.

     

    ಸ್ವತಃ ದೈವಭಕ್ತರಾಗಿರುವ ವಿಜಯ್ ಚೆಂಡೂರ್ ಪಾಲಿಗಿದು ಭಿನ್ನ ಅನುಭವ. ಭಕ್ತಿ ಪ್ರಧಾನವಾದ ಚಿತ್ರವನ್ನು ನಿರ್ದೇಶಕ ಕಿನ್ನಾಳ್ ರಾಜ್ ಕಮರ್ಶಿಯಲ್ ಚೌಕಟ್ಟಿಗೆ ಒಗ್ಗಿಸಿದ ರೀತಿ ಅವರಲ್ಲೊಂದು ಬೆರಗು ಮೂಡಿಸಿದೆ. ಇಂಥಾ ಕಥನವನ್ನು ಎಲ್ಲರಿಗೂ ಹಿಡಿಸುವಂತೆ ರೂಪಿಸೋದು ನಿಜಕ್ಕೂ ಸವಾಲಿನ ಸಂಗತಿ. ಬರೀ ಭಕ್ತಿಪ್ರಧಾನ ಚೌಕಟ್ಟಿನಲ್ಲಿದ್ದರೆ ಒಂದು ವರ್ಗಕ್ಕೆ ಮಾತ್ರ ಹಿಡಿಸಬಹುದು. ಕಮರ್ಶಿಯಲ್ ಟಚ್ ಕೊಡಲು ಹೋದರೆ ಭಕ್ತಿ ಭಾವಗಳಿಗೆ ಅಪಮಾನವಾಗಬಹುದು. ಇವೆರಡನ್ನೂ ಸೂಕ್ಷ್ಮವಾಗಿ ಬ್ಲೆಂಡ್ ಮಾಡುವುದು ಅಸಲೀ ಕಸುಬುದಾರಿಕೆ. ಅದನ್ನು ಕಿನ್ನಾಳ್ ರಾಜ್ ಯಶಸ್ವಿಯಾಗಿ ಮಾಡಿದ್ದಾರೆಂಬ ನಂಬಿಕೆ ವಿಜಯ್ ಚೆಂಡೂರ್ ಅವರಲ್ಲಿದೆ. ನಿರ್ಮಾಪಕ ನಂಜುಂಡೇಶ್ವರ ಅವರ ಅಪಾರ ಭಕ್ತಿ ಈ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂಬ ಭಾವ ಹೊಂದಿರುವ ವಿಜಯ್ ಪಾಲಿಗೆ ಓರ್ವ ನಟನಾಗಿ ಇದು ಮಹತ್ವದ ಮೈಲಿಗಲ್ಲು.

  • ಈ ಕಾಲಘಟ್ಟದ ಅಪರೂಪದ ಚಿತ್ರ ‘ಸಿಂಹರೂಪಿಣಿ’ ಎಂದ ನೀನಾಸಂ ಅಶ್ವಥ್

    ಈ ಕಾಲಘಟ್ಟದ ಅಪರೂಪದ ಚಿತ್ರ ‘ಸಿಂಹರೂಪಿಣಿ’ ಎಂದ ನೀನಾಸಂ ಅಶ್ವಥ್

    ಕಿನ್ನಾಳ್ ರಾಜ್ ನಿರ್ದೇಶನದ `ಸಿಂಹರೂಪಿಣಿ’ (Simha Roopini )ಚಿತ್ರ ಈ ವಾರ ಅಂದರೆ, ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ನೂರೈವತ್ತಕ್ಕೂ ಹೆಚ್ಚು ಕಲಾವಿದರ ಬೃಹತ್ ತಾರಾಗಣವಿದೆ. ಮನೋರಂಜನೆಯೂ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಈ ಸಿನಿಮಾ ಮಾರಮ್ಮದೇವಿಯ ಕಥಾನಕವನ್ನೊಳಗೊಂಡಿದೆ. ಈ ಸಿನಿಮಾದ ಮಹತ್ವದ ಪಾತ್ರವೊಂದನ್ನು ನೀನಾಸಂ ಅಶ್ವಥ್ (Ninasam Aswath) ನಿರ್ವಹಿಸಿದ್ದಾರೆ. ಬೇರೆ ಬಗೆಯ ಸಿನಿಮಾಗಳ ಜೊತೆ ಜೊತೆಗೇ, ಇತರೇ ಸ್ವರೂಪಗಳ ಕಥೆಗಳೂ ದೃಶ್ಯರೂಪ ಧರಿಸಬೇಕು ಎಂಬ ಮನಃಸ್ಥಿತಿ ಹೊಂದಿರುವವರು ಅಶ್ವಥ್. ಇದರಿಂದಾಗಿಯೇ ಖುಷಿಯಿಂದ ಈ ಸಿನಿಮಾ ಪಾತ್ರವನ್ನು ಆವಾಹಿಸಿಕೊಂಡಿರುವ ಅವರ ಅಶ್ವಥ್ ಪಾಲಿಗೆ ಇದೊಂದು ಭಿನ್ನ ಬಗೆಯ ಚಿತ್ರ.

    ಇಲ್ಲಿ ಮಾರಮ್ಮ ದೇವಿಯ ತಂದೆಯ ಪಾತ್ರದಲ್ಲಿ ನೀನಾಸಂ ಅಶ್ವಥ್ ನಟಿಸಿದ್ದಾರೆ. ಎರಡು ಶೇಡುಗಳನ್ನು ಹೊಂದಿರುವ ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ತೃಪ್ತಿ ಅದರಲ್ಲಿದೆ. ಗ್ರಾಮೀಣ ಪ್ರತಿಭೆ ಕಿನ್ನಾಳ್ ರಾಜ್ ಅವರ ಸಮರ್ಪಣಾ ಮನೋಭಾವ, ಸಿನಿಮಾದೊಂದಿಗೆ ಸಹಯಾನ ಮಾಡುವ ಮನಃಸ್ಥಿತಿಯ ನಿರ್ಮಾಪಕ ಕೆ.ಎಂ ನಂಜುಂಡೇಶ್ವರ ಅವರ ಸಿನಿಮಾ ಪ್ರೇಮದ ಬಗ್ಗೆ ಮೆಚ್ಚುಗೆ ಮೂಡಿಸಿಕೊಂಡಿರುವ ಅಶ್ವಥ್ ಈ ಸಿನಿಮಾವನ್ನು ಕನ್ನಡ ಚಿತ್ರರಂಗದ ಹೊಸಾ ಹರಿವಿನ ಭಾಗವಾಗಿ ಪರಿಗಣಿಸಿದ್ದಾರೆ. ಬರೀ ಹೊಡಿ ಬಡಿ ಚಿತ್ರಗಳ ಭರಾಟೆಯ ನಡುವೆ ತಂಗಾಳಿ ತೀಡಿದಂತೆ ಇಂಥಾ ಅಚ್ಚುಕಟ್ಟಾದ ಸಿನಿಮಾಗಳು ರೂಪುಗೊಳ್ಳಬೇಕೆಂಬ ಆಶಯದೊಂದಿಗೇ ಅಶ್ವಥ್ ಈ ಚಿತ್ರದ ಭಾಗವಾಗಿದ್ದಾರಂತೆ.

    ಸಿಂಹರೂಪಿಣಿ ಎಂಬುದೇ ಸ್ತ್ರೀ ಶಕ್ತಿಯ ಸಂಕೇತ. ಅದು ಹೆಣ್ತನದ ಘನತೆ, ಗೌರವದ ರೂಪಕವೂ ಹೌದು. ಪ್ರಸ್ತುತ ಸಮಾಜಕ್ಕೆ ಹೆಣ್ಣಿನ ಅಸಲೀ ಶಕ್ತಿಯ ಅರಿವು ಮೂಡಿಸುವ ಇಂಥಾ ಸದಭಿರುಚಿಯ ಚಿತ್ರದ ಅವಶ್ಯಕತೆ ಇದೆ ಅನ್ನೊದು ಅಶ್ವಥ್ ಅವರ ಅಭಿಪ್ರಾಯ. ಇದೊಂದು ಭಿನ್ನ ಬಗೆಯ ಚಿತ್ರವಾದ್ದರಿಂದ, ತಮ್ಮ ಪಾತ್ರದ ಬಗ್ಗೆ ಅಡಿಗಡಿಗೆ ಅಶ್ವಥ್ ನಿರ್ದೇಶಕರ ಬಳಿ ಪ್ರಶ್ನೆ ಮಾಡುತ್ತಿದ್ದರಂತೆ. ಪದೇ ಪದೆ ಸಣ್ಣ ಸಣ್ಣ ವಿಚಾರಗಳನ್ನೂ ಕೆದಕುತ್ತಾ, ಎಲ್ಲ ಸ್ಪಷ್ಟವಾದ ನಂತರವೇ ಕ್ಯಾಮೆರಾ ಮುಂದೆ ನಿಂತಿದ್ದರಂತೆ. ಇದೆಲ್ಲವೂ ಚಿತ್ರ ತಂಡದ ಪಾಲಿಗೆ ಹೊಸಾ ಅನುಭವ ನೀಡಿತ್ತು. ಆದರೆ ಒಟ್ಟಾರೆಯಾಗಿ ಆ ಪಾತ್ರ ತೆರೆ ಮೂಡಿಬಂದ ರೀತಿ ಕಂಡು ನಿರ್ದೇಶಕ ಕಿನ್ನಾಳ್ ರಾಜ್ ಸೇರಿದಂತೆ ಇಡೀ ಚಿತ್ರತಂಡ ಖುಷಿ ಪಟ್ಟಿತ್ತಂತೆ. ಈ ಬಗ್ಗೆ ವೇದಿಕೆಯಲ್ಲಿಯೇ ನಿರ್ದೇಶಕರು ಮೆಚ್ಚುಗೆಯ ಮಾತಾಡಿದ್ದರಂತೆ. ಪ್ರಶ್ನೆಗಳ ಮೂಲಕವೇ ಹೊಳಪುಗಟ್ಟಿಕೊಂಡ ಈ ಪಾತ್ರ ಪ್ರೇಕ್ಷಕರ ಮುಂದೆ ತೆರೆದುಕೊಂಡಿದೆ.

     

    ಇದುವರೆಗೂ ಹತ್ತತ್ತಿರ ಮುನ್ನೂರು ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿರುವವರು ನೀನಾಸಂ ಅಶ್ವಥ್. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ನೋಡಿದರೆ, ಪಾತ್ರಗಳಲ್ಲಿ ವೈವಿಧ್ಯತೆ ಎದ್ದು ಕಾಣಿಸುತ್ತದೆ. ಸದಾ ಹೊಸತನದ ಪಾತ್ರಗಳನ್ನೇ ಬಯಸುವ ಅಶ್ವಥ್ ಪಾಲಿಗೆ ಮಾರಮ್ಮ ದೇವಿಯ ಈ ಕಥಾನಕದಲ್ಲಿ, ದೇವಿಯ ತಂದೆಯ ಪಾತ್ರದಲ್ಲಿ ನಟಿಸೋ ಅವಕಾಶ ಒದಗಿ ಬಂದಿದೆ. ಇದುವರೆಗೂ ನಿರ್ವಹಿಸಿರುವ ವೈವಿಧ್ಯಮಯ ಪಾತ್ರಗಳಲ್ಲಿ, ಸಿಂಹರೂಪಿಣಿ ಚಿತ್ರದ ಪಾತ್ರವೂ ಸೇರಿಕೊಳ್ಳಲಿದೆ ಎಂಬ ನಂಬಿಕೆ, ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಹೊಸಾ ಅನುಭೂತಿ ನೀಡುತ್ತದೆಂಬ ಭರವಸೆ ಅವರಲ್ಲಿದೆ.

  • ನೆಲದ ಘಮಲಿನ ಚಿತ್ರ ‘ಸಿಂಹರೂಪಿಣಿ’ : ನಿರ್ಮಾಪಕ ನಂಜುಂಡೇಶ್ವರ

    ನೆಲದ ಘಮಲಿನ ಚಿತ್ರ ‘ಸಿಂಹರೂಪಿಣಿ’ : ನಿರ್ಮಾಪಕ ನಂಜುಂಡೇಶ್ವರ

    ದ್ಯ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ಲಿನ ಗಾಳಿ ಬಲವಾಗಿ ಬೀಸುತ್ತಿರುವಾಗ, ವಿಶಿಷ್ಟ ರೀತಿಯ ಪ್ರಯತ್ನವಾಗಿ, ಪ್ಯಾನ್ ಇಂಡಿಯಾ ಕಲಾವಿದರನ್ನು ಬಳಸಿಕೊಂಡು ರೂಪಿಸಲ್ಪಟ್ಟಿರುವ ಚಿತ್ರ `ಸಿಂಹರೂಪಿಣಿ’ (Simha Roopini). ಅಕ್ಟೋಬರ್ ೧೭ರಂದು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿರುವವರು ಕೆ.ಎಂ ನಂಜುಂಡೇಶ್ವರ (Nanjundeshwar). ವಿಶೇಷವೆಂದರೆ, ಈ ಚಿತ್ರಕ್ಕೆ ಕಥೆಯನ್ನೂ ಅವರೇ ಒದಗಿಸಿದ್ದಾರೆ. ಸಾಮಾನ್ಯವಾಗಿ, ಸಿನಿಮಾ ನಿರ್ಮಾಣ ಎಂಬುದು ಬ್ಯುಸಿನೆಸ್ ಅಂತಲೇ ಭಾವಿಸಲಾಗುತ್ತದೆ. ಆದರೆ, ಸಿಂಹರೂಪಿಣಿ ನಿರ್ಮಾಣದ ಹಿಂದಿರೋದು ಅಕ್ಷರಶಃ ಭಕ್ತಿ ಎಂಬ ಶಕ್ತಿ. ಈ ಕುರಿತಾದ ಒಂದಷ್ಟು ಮಾಹಿತಿಗಳನ್ನು ಖುದ್ದು ಅವರೇ ತೆರೆದಿಟ್ಟಿದ್ದಾರೆ.

    ದೊಡ್ಡ ಬಳ್ಳಾಪುರದ ಕಲ್ಲುದೇವನಹಳ್ಳಿಯವರು ಕೆ.ಎಂ ನಂಜುಂಡೇಶ್ವರ. ಬದುಕು ಅರಸಿ ಬೆಂಗಳೂರಿಗೆ ಬಂದು ನೆಲೆಗೊಂಡು ಮೂರು ದಶಕಗಳು ಕಳೆದಿವೆ. ಮೆಡಿಕಲ್ ಅಡ್ಮಿನಿಸ್ಟ್ರೇಷನ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಂಜುಂಡೇಶ್ವರ ಅವರ ಪಾಲಿಗೆ ಮಾರಮ್ಮದೇವಿ ಆರಾಧ್ಯ ದೇವತೆ. ಅವರ ಬದುಕನ್ನು ಒಂದಷ್ಟು ಸಂಕಷ್ಟಗಳಿಂದ ಪಾರುಮಾಡಿದ ಮಾರಮ್ಮದೇವಿಯ ಆರಾಧಕರಾಗಿಯೂ ಅವರು ಮುಂದುವರೆದು ಬಂದಿದ್ದಾರೆ. ಅವರ ಪಾಲಿಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಬಹು ವರ್ಷಗಳ ಕನಸಾಗಿತ್ತು. ಕಡೆಗೂ ಅದಕ್ಕೊಂದು ಸರಿಕಟ್ಟಾದ ವಾತಾವರಣ ನಿರ್ಮಾಣವಾದ ಘಟ್ಟದಲ್ಲಿ ತನ್ನ ಬದುಕು ಬದಲಿಸಿದ ಮಾರಮ್ಮ ದೇವಿಯ ಕುರಿತಾದ ಸಿನಿಮಾ ನಿರ್ಮಾಣ ಮಾಡಬೇಕೆಂದು ನಂಜುಂಡೇಶ್ವರ ತೀರ್ಮಾನಿಸಿದ್ದರಂತೆ. ಇದಕ್ಕೆ ದೇವಿಯ ಕಡೆಯಿಂದಲೂ ಸಕಾರಾತ್ಮಕ ವಾಗ್ದಾನ ಸಿಗುವ ಮೂಲಕ ಸಿಂಹರೂಪಿಣಿ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು.

    ಆ ನಂತರದಲ್ಲಿ ನಿರ್ದೇಶನಕ್ಕೆ ಕಿನ್ನಾಳ್ ರಾಜ್ ವರಿಂದ ಮೊದಲ್ಗೊಂಡು ಎಲ್ಲ ಆಯ್ಕೆಗಳಿಗೂ ಮಾರಮ್ಮದೇವಿಯ ವಾಗ್ದಾನದ ಮೊರೆ ಹೋಗಲಾಗಿದೆ. ದೇವಿಯ ಆಣತಿಯೊಂದಿಗೇ ಪ್ರತೀ ಹೆಜ್ಜೆಯನ್ನಿಟ್ಟಿರುವ ಧನ್ಯತಾ ಭಾವವೊಂದು ನಿರ್ಮಾಪಕ ನಂಜುಂಡೇಶ್ವರರಲ್ಲಿದೆ. ಈಗೊಂದು ಮೂವತ್ತು ವರ್ಷಗಳ ಹಿಂದೆ ಹಳ್ಳಿ ವಾತಾವರಣವೇ ಬೇರೆಯದ್ದಿತ್ತು. ಇಂಥಾ ದೇವರು, ದೇವಿಯರ ಮಹಾತ್ಮೆಗಳ ಬಗ್ಗೆ ಹಿರೀಕರು ಒಂದಷ್ಟು ಕಥೆಗಳನ್ನು ಹೇಳುತ್ತಿದ್ದರು. ಆ ಮೂಲಕ ನೆಲಮೂಲದ ಕಥಾನಕಗಳು ಹೊಸ ತಲೆಮಾರಿಗೆ ದಾಟಿಕೊಳ್ಳುತ್ತಿದ್ದವು. ಈವತ್ತಿಗೂ ನಮ್ಮ ನಡುವಲ್ಲಿರುವ ನಂಬಿಕೆಗಳು ಹಾಗೆ ಹಿರಿಯರಿಂದ ದಾಟಿಕೊಂಡವುಗಳೇ. ಆದರೀಗ, ಅಂಥಾ ಕಥೆಗಳನ್ನು ಹೇಳುವವರೂ ಇಲ್ಲ. ಕೇಳಲು ಪುರಸೊತ್ತಿರುವವರೂ ಇಲ್ಲ. ಈ ಕೊರತೆ ನೀಗಿಸುತ್ತಲೇ, ನೆಲದ ನಂಟಿನ ಮಾರಮ್ಮದೇವಿಯ ಕಥೆಯನ್ನು ಅಜರಾಮರವಾಗಿಸುವ ಸದುದ್ದೇಶದೊಂದಿಗೆ ಸಿಂಹರೂಪಿಣಿ ಚಿತ್ರವನ್ನು ನಿರ್ಮಾಣ ಮಾಡಿದ್ದಾಗಿ ನಂಜುಂಡೇಶ್ವರ ಹೇಳಿಕೊಳ್ಳುತ್ತಾರೆ.

    ಈ ಸಿನಿಮಾದಲ್ಲಿ ಯಾವುದನ್ನೂ ಅತಿಶಯವೆಂಬಂತೆ ಹೇಳಲಾಗಿಲ್ಲ. ಯಾವ ದೃಷ್ಯಗಳೂ ಡ್ರಾಮಾ ಸ್ವರೂಪ ಪಡೆಯದಂತೆ, ಅತ್ಯಂತ ನೈಜವಾಗಿ ಚಿತ್ರೀಕರಿಸಲಾಗಿದೆಯಂತೆ. ವಿಶೇಷವೆಂದರೆ, ನೈಜ ಘಟನೆಗಳನ್ನೇ ಒಟ್ಟು ಸೇರಿಸಿ, ಅದನ್ನು ಕಮರ್ಶಿಯಲ್ ಹಾದಿಯಲ್ಲಿ ನಿರೂಪಿಸಲಾಗಿದೆಯಂತೆ. ಇದರ ಚಿತ್ರೀಕರಣದ ಹಂತದಲ್ಲಿ ಪ್ರತಿಯೊಬ್ಬರಿಗೂ ರೋಮಾಂಚಕ ಅನುಭವಗಳಾಗಿವೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಂತೂ ಹಲವರಿಗೆ ಶಕ್ತಿಯ ಆವಾಹನೆಯಾದಂತಾಗಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತಂತೆ. ಆ ಹಂತದಲ್ಲಿ ನಡೆದ ಘಟನಾವಳಿಗಳನ್ನು ಮೂರು ಕ್ಯಾಮೆರಾಗಳಲ್ಲಿ ಶೂಟ್ ಮಾಡಿಕೊಂಡು ಅದನ್ನು ಹಾಗೆಯೇ ತೋರಿಸಲಾಗಿದೆ. ಅದರ ಮೂಲಕ ರೋಮಾಂಚನವೊಂದು ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳಲಿದೆ. ಅದನ್ನು ಸ್ವೀಕರಿಸುವ ಬಗೆ ಪ್ರೇಕ್ಷಕರಿಗೆ ಬಿಟ್ಟಿದ್ದೆನ್ನುವ ಅಭಿಪ್ರಾಯ ನಂಜುಂಡೇಶ್ವರರದ್ದು.

     

    ಇದು ಪ್ಯಾನಿಂಡಿಯಾ ಭರಾಟೆಯ ಕಾಲ. ಇಂಥಾ ಹೊತ್ತಿನಲ್ಲಿ ದೇವಿಯ ಮೇಲೆ ನಂಬಿಕೆ ಇಟ್ಟು, ಅಪ್ಪಣೆಯೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಧನ್ಯತಾ ಭಾವ ನಂಜುಂಡೇಶ್ವರ ಅವರಲ್ಲಿದೆ. ಓರ್ವ ನಿರ್ಮಾಪಕನಾಗಿ ಪ್ರತಿಯೊಂದರಲ್ಲಿಯೂ ಭಾಗಿಯಾಗಿ, ಒಟ್ಟಾರೆ ಚಿತ್ರವನ್ನು ರೂಪಿಸಿದ  ತೃಪ್ತಿ ಅವರಲ್ಲಿದೆ. ಇದು ಭಕ್ತಿಯಿಂದ ಚಿತ್ರೀಕರಿಸಿರುವ ಸಿನಿಮಾ. ಎಲ್ಲ ವರ್ಗದವರಿಗೂ ಇಷ್ಟವಾಗಬಲ್ಲಂತೆ ಮೂಡಿ ಬಂದಿದೆ. ಬಹು ದಿನಗಳ ನಂತರ ಕುಟುಂಬ ಸಮೇತರಾಗಿ ನೋಡಿ ಮುದಗೊಳ್ಳಬಹುದಾದ ಚಿತ್ರ ಸಿಂಹರೂಪಿಣಿ. ಈ ಸಿನಿಮಾ ನೋಡುವ ಸರ್ವರಿಗೂ ದೇವಿಯ ಕೃಪಾಶೀರ್ವಾದ ಸಿಗುವಂತಾಗಲಿ ಎಂಬ ಸದಾಶಯ ನಂಜುಂಡೇಶ್ವರ ಅವರದ್ದು. ಈ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಿದೆ.