Tag: Shramik Train

  • ಹಸಿವಿನಿಂದ ಸಾವನ್ನಪ್ಪಿದ ಕಾರ್ಮಿಕ ಮಹಿಳೆಯನ್ನು ಎಬ್ಬಿಸಲು ಪುಟ್ಟ ಕಂದನ ಪರದಾಟ

    ಹಸಿವಿನಿಂದ ಸಾವನ್ನಪ್ಪಿದ ಕಾರ್ಮಿಕ ಮಹಿಳೆಯನ್ನು ಎಬ್ಬಿಸಲು ಪುಟ್ಟ ಕಂದನ ಪರದಾಟ

    -ಮನಕಲಕುವ ವೈರಲ್ ವಿಡಿಯೋ

    ಪಾಟ್ನಾ: ಪ್ರವಾಸಿ ಕಾರ್ಮಿಕರು ಲಾಕ್‍ಡೌನ್ ಕಾರಣದಿಂದ ಕೆಲಸವಿಲ್ಲದೇ ಸ್ವ-ಸ್ಥಳಗಳಿಗೆ ಮರಳುವ ಸಂದರ್ಭದಲ್ಲಿ ವಿವಿಧ ಕಾರಣಗಳಿಂದ ಸಾವನ್ನಪ್ಪುವ ಪ್ರಕರಣಗಳು ಮುಂದುವರಿದಿದೆ. ಆಹಾರ, ವಸತಿ ಹಾಗೂ ಅನಾರೋಗ್ಯದ ಕಾರಣದಿಂದ ಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗಿವೆ. ಇಂತಹ ಸಾಲಿನಲ್ಲೇ ನಿಲ್ಲುವ ಮನಕಲಕುವ ದೃಶ್ಯ ಬಿಹಾರದ ಮುಜಾಫರ್ ನಗರದ ರೈಲ್ವೇ ನಿಲ್ದಾಣವೊಂದರಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದ ಸಿಲುಕಿದ ನರಳುತ್ತಿರುವ ಪ್ರವಾಸಿ ಕಾರ್ಮಿಕರ ದೈನಂದಿನ ವರದಿಗಳಲ್ಲಿ ಈ ದುರಂತ ಘಟನೆ ಒಂದಾಗಿದೆ. ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಕಂದಮ್ಮ, ಸಾವನ್ನಪ್ಪಿರುವ ತನ್ನ ಅಮ್ಮನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಮಹಿಳೆ ಶಮ್ರಿಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕುಸಿದು ಸಾವನ್ನಪ್ಪಿದ್ದು, ಆಕೆಯ ಮೃತದೇಹವನ್ನು ಮುಜಾಫರ್ ನಗರದ ರೈಲ್ವೇ ನಿಲ್ದಾಣವೊಂದರಲ್ಲಿ ಬಟ್ಟೆಯಿಂದ ಸುತ್ತಿ ಇಡಲಾಗಿತ್ತು.

    23 ವರ್ಷದ ಬಿಹಾರ ಮೂಲದ ಕಾರ್ಮಿಕರ ಮಹಿಳೆ ಗುಜರಾತ್‍ನ ಅಲಹಾಬಾದ್‍ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಳು. ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಸಮಸ್ಯೆ ಎದುರಿಸಿದ್ದ ಮಹಿಳೆ ಅನಾರೋಗ್ಯದ ಸಮಸ್ಯೆಗೆ ಗುರಿಯಾಗಿದ್ದಳು. ಇದೇ ಸಂದರ್ಭದಲ್ಲಿ ಸರ್ಕಾರ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಆರಂಭಿಸಿದ್ದ ಕಾರಣ ತನ್ನ ಸ್ವ-ಸ್ಥಳಕ್ಕೆ ತೆರಳಲು ನಿರ್ಧರಿಸಿದ್ದ ಮಹಿಳೆ ಮೇ 24 ರಂದು ರೈಲಿನಲ್ಲಿ ಸಹೋದರಿ ಹಾಗೂ ಇತರರೊಂದಿಗೆ ಮುಜಾಫರ್ ನಗರಕ್ಕೆ ಹೊರಟ್ಟಿದ್ದಳು. ಆದರೆ ರೈಲಿನ ಪ್ರಯಾಣದ ಸಂದರ್ಭದಲ್ಲೂ ಆಹಾರ ಸಿಗದೆ ಮತ್ತಷ್ಟು ಬಳಲಿದ್ದ ಮಹಿಳೆ ಮುಜಾಫರ್ ನಗರಕ್ಕೆ ಆಗಮಿಸುವ ಮುನ್ನವೇ ರೈಲಿನಲ್ಲೇ ಕುಸಿದು ಸಾವನ್ನಪ್ಪಿದ್ದಳು.

    ಆಕೆಯ ಸಂಬಂಧಿಗಳು ರೈಲ್ವೇ ನಿಲ್ದಾಣದಲ್ಲಿ ದೇಹವನ್ನ ಬಟ್ಟೆಯಲ್ಲಿ ಸುತ್ತಿ ಇಟ್ಟಿದ್ದರು. ಆದರೆ ತನ್ನ ಅಮ್ಮ ಸಾವನ್ನಪ್ಪಿರುವ ಅರಿವಿಲ್ಲದ ಪುಟ್ಟ ಕಂದಮ್ಮ ಬಟ್ಟೆಯೊಂದಿಗೆ ಆಡುತ್ತಾ ಅಮ್ಮನನ್ನು ಎಬ್ಬಿಸುವ ಪ್ರಯತ್ನ ನಡೆಸಿತ್ತು. ಘಟನೆ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ರೈಲ್ವೆ ಇಲಾಖೆ, ಮೃತ ಮಹಿಳೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಈಗಾಗಲೇ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಸುಳ್ಳು ಮಾಹಿತಿಯನ್ನು ಹಬ್ಬಿಸಬೇಡಿ ಎಂದು ತಿಳಿಸಿದೆ. ಹಸಿವು, ರಣ ಬೀಸಿಲು ಹಾಗೂ ಡಿಹೈಡ್ರೇಷನ್ ಕಾರಣದಿಂದ ಮಹಿಳೆ ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ ಮನವಿ

    ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ ಮನವಿ

    ಕೋಲ್ಕತಾ: ಅಂಫಾನ್ ಚಂಡಮಾರುತದ ಪರಿಹಾರ ಕಾರ್ಯಗಳ ಹಿನ್ನೆಲೆ ಮೇ 26ವರೆಗೂ ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅಂಫಾನ್ ಚಂಡಮಾರುತದಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ಜಿಲ್ಲಾಡಳಿತ ಪರಿಹಾರ ಮತ್ತು ಪುನರ್ವಸತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಶ್ರಮಿಕ್ ರೈಲು ಕಾರ್ಯಾಚರಣೆಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಮೇ 26ರವರೆಗೆ ಪಶ್ಚಿಮ ಬಂಗಾಳಕ್ಕೆ ಯಾವುದೇ ರೈಲುಗಳನ್ನು ಕಳುಹಿಸದಂತೆ ಮನವಿ ಮಾಡಿದ್ದಾರೆ.

    ಅಂಫಾನ್ ಚಂಡಮಾರುತದಿಂದಾಗಿ ಕನಿಷ್ಠ 86 ಜನರು ಸಾವನ್ನಪ್ಪಿದ್ದಾರೆ. ಭೀಕರ ಹವಾಮಾನ ದುರಂತದಿಂದ ಸಾಮಾನ್ಯ ಜೀವನ ಪುನಃಸ್ಥಾಪಿಸಲು ಪರದಾಡುತ್ತಿದ್ದಾರೆ.

    ಕೊರೊನಾ ವೈರಸ್ ಲಾಕ್‍ಡೌನ್ ಮಧ್ಯೆ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಸ್ಥಳಾಂತರದ ವೇಳೆ ಶ್ರಮಿಕ್ ರೈಲುಗಳ ಆಗಮನಕ್ಕೆ ಸಿಎಂ ಮಮತಾ ಬ್ಯಾನರ್ಜಿ ವಿರೋಧಿಸಿದ್ದರು. ಇದು ಗೃಹ ಸಚಿವ ಅಮಿತ್ ಶಾ ಹಾಗೂ ಮಮತಾ ಬ್ಯಾನರ್ಜಿ ನಡುವೆ ರಾಜಕೀಯ ಗುದ್ದಾಟಕ್ಕೂ ಕಾರಣವಾಗಿತ್ತು. ಬಳಿಕ ರೈಲುಗಳು ರಾಜ್ಯ ತಲುಪಲು ರಾಜ್ಯ ಸರ್ಕಾರದ ಒಪ್ಪಿಗೆ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

  • 200 ಹೆಚ್ಚುವರಿ ಶ್ರಮಿಕ್ ರೈಲು ಓಡಿಸಲು ಮುಂದಾದ ಕೇಂದ್ರ

    200 ಹೆಚ್ಚುವರಿ ಶ್ರಮಿಕ್ ರೈಲು ಓಡಿಸಲು ಮುಂದಾದ ಕೇಂದ್ರ

    – ಕೆಲವೇ ದಿನಗಳಲ್ಲಿ ಅನ್‍ಲೈನ್ ಬುಕಿಂಗ್ ಆರಂಭ
    – ಯಾವುದೇ ನಿಲ್ದಾಣದಲ್ಲಿ ಟಿಕೆಟ್ ನೀಡಲ್ಲ

    ನವದೆಹಲಿ: ಈಗಾಗಲೇ 1,600 ರೈಲುಗಳ ಮೂಲಕ 21 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಲಾಗಿದೆ. ಇದೀಗ ಜೂನ್ 1ರಿಂದ ಹೆಚ್ಚುವರಿಯಾಗಿ 200 ನಾನ್ ಎಸಿ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಈ ಕುರಿತು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದ್ದು, ಶ್ರಮಿಕ್ ರೈಲುಗಳನ್ನು ಮುಂದುವರಿಸಲು ಭಾರತೀಯ ರೇಲ್ವೆ ನಿರ್ಧರಿಸಿದೆ. ಈಗಾಗಲೇ 1,600 ರೈಲುಗಳು ಮೂಲಕ 21.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲಾಗಿದೆ. ಇದೀಗ ಹೊಸದಾಗಿ 200 ರೈಲುಗಳ ಸಂಚಾರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ.

    ಅಲ್ಲದೆ ಎಲ್ಲ ರಾಜ್ಯ ಸರ್ಕಾರಗಳಿಗೂ ಈ ಕುರಿತು ಸೂಚನೆ ನೀಡಿದ್ದು, ಆಯಾ ರಾಜ್ಯಗಳಲ್ಲಿ ಪ್ರಮುಖ ರೈಲ್ವೆ ನಿಲ್ದಾಣಗಳ ಹತ್ತಿರವಿರುವ ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಕೋರಿದೆ. ಇಂತಹವರ ಪಟ್ಟಿ ನೀಡಿದಲ್ಲಿ ವಿವಿಧ ಸ್ಥಳದ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದೆ.

    ಜೂನ್ 1ರಿಂದ ಹೆಚ್ಚುವರಿ 200 ಶ್ರಮಿಕ್ ರೈಲುಗಳು ಸಂಚರಿಸಲಿದ್ದು, ಆನ್‍ಲೈನ್‍ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಸಧ್ಯದಲ್ಲೇ ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

    ಕಾರ್ಮಿಕರು ಆತುರ ಪಡದೆ ಸಾವಧಾನವಾಗಿ ತಾವು ಇರುವ ಸ್ಥಳದಲ್ಲೇ ಕಾಯಬೇಕು. ನಿಮ್ಮ ಊರುಗಳಿಗೆ ತಲುಪಿಸಲು ಈಗಾಗಲೇ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರಗಳ ಸಹಾಯದೊಂದಿಗೆ ನಿಮ್ಮ ಊರುಗಳಿಗೆ ತಲುಪಿಸಲಾಗುವುದು. ಅಲ್ಲದೆ ಈ 200 ಹೊಸ ರೈಲುಗಳ ಸಂಚಾರದ ಮಾರ್ಗ ಹಾಗೂ ವೇಳಾಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಆನ್‍ಲೈನ್ ಬುಕಿಂಗ್ ಸಹ ಆರಂಭವಾಗಲಿದೆ. ಎಲ್ಲ ಬೋಗಿಗಳು ನಾನ್ ಎಸಿ ಆಗಿರಲಿದ್ದು, ಟಿಕೆಟ್‍ಗಳನ್ನು ಯಾವುದೇ ಕಾರಣಕ್ಕೂ ಯಾವುದೇ ರೈಲು ನಿಲ್ದಾಣದಲ್ಲಿ ನೀಡುವುದಿಲ್ಲ. ಟಿಕೆಟ್ ಪಡೆಯಕಲು ಯಾವುದೇ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳಬಾರದು ಎಂದು ರೈಲ್ವೆ ಸಚಿವಾಲಯ ಮನವಿ ಮಾಡಿದೆ.

    ಕಳೆದ 19 ದಿನಗಳಲ್ಲಿ 21.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಈಗಾಗಲೇ ಅವರ ಊರುಗಳಿಗೆ ತಲುಪಿಸಲಾಗಿದ್ದು, ಮೇ 19ರ ವರೆಗೆ ಒಟ್ಟು 1,600 ಶ್ರಮಿಕ್ ರೈಲುಗಳನ್ನು ಓಡಿಸಲಾಗಿದೆ.

  • ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್

    ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್

    ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಜೂನ್ 1ರಿಂದ ನಾನ್ ಎಸಿ ರೈಲು ಸಂಚಾರ ನಡೆಸಲು ನಿರ್ಧರಿಸಿದೆ.

    ಜೂನ್ 1ರಿಂದ ದೇಶಾದ್ಯಂತ 200 ನಾನ್ ಎಸಿ ರೈಲುಗಳು ಸಂಚಾರ ನಡೆಸಲಿವೆ. ನಿಗದಿಯ ವೇಳಾಪಟ್ಟಿಯಂತೆ ರೈಲುಗಳ ಓಡಾಟ ನಡೆಯಲಿದ್ದು, ಶೀಘ್ರದಲ್ಲಿಯೇ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಗೊಳ್ಳಲಿದೆ ಎಂದು ರೈಲ್ವೇ ಇಲಾಖೆ ಟ್ವಿಟ್ಟರ್ ನಲ್ಲಿ ತಿಳಿಸಿದೆ.

    ಮತ್ತೊಂದು ಟ್ವೀಟ್ ನಲ್ಲಿ, ಮುಂದಿನ ದಿನಗಳಲ್ಲಿಯೂ ಶ್ರಮಿಕ ರೈಲುಗಳು ಸಂಚಾರ ನಡೆಸಲಿವೆ. ಇದುವರೆಗೂ 1600 ರೈಲುಗಳ ಮೂಲಕ ಸುಮಾರು 21.5 ಲಕ್ಷ ಕಾರ್ಮಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಪ್ರವಾಸಿ ಕಾರ್ಮಿಕರಿಗೆ ಎರಡು ದಿನಗಳಲ್ಲಿ ಹೆಚ್ಚು ಶ್ರಮಿಕ ರೈಲುಗಳು ಸಂಚಾರ ನಡೆಸಲಿ ಎಂಬ ಮಾಹಿತಿಯನ್ನು ನೀಡಿದೆ.

    ಹೊಸ ಆದೇಶದ ಅನುಗುಣವಾಗಿ ಶ್ರಮಿಕ ವಿಶೇಷ ರೈಲುಗಳಿಗೆ ರಾಜ್ಯಗಳ ಅನುಮತಿ ಪಡೆಯುವಂತಿಲ್ಲ. ಪ್ರವಾಸಿ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದು ಭಾರತೀಯ ರೈಲ್ವೇ ವಕ್ತಾರ ರಾಜೇಶ್ ಬಾಜಪೇಯಿ ಹೇಳಿದ್ದಾರೆ.

  • ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    – ಶ್ರಮಿಕ್ ರೈಲು ಮೂಲಕ ಬಿಹಾರಿನತ್ತ 1,452 ವಲಸಿಗರು

    – ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟ ಜಿಲ್ಲಾಡಳಿತ

    – ಭಾವುಕರಾದ ವಲಸೆ ಕಾರ್ಮಿಕರು

    ಬಳ್ಳಾರಿ: ಶ್ರಮಿಕ್ ವಿಶೇಷ ರೈಲಿನ ಮೂಲಕ 1,452 ಜನ ಬಿಹಾರಿ ವಲಸೆ ಕಾರ್ಮಿಕರು ತಮ್ಮ ತವರಿನತ್ತ ತೆರಳಿದರು. ಸುರಕ್ಷಿತವಾಗಿ ಊರು ತಲುಪಿ ಮತ್ತೆ ಬಳ್ಳಾರಿಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್‍ಪಿ ಸಿ.ಕೆ.ಬಾಬಾ, ಜಿ.ಪಂ. ಸಿಇಒ ಕೆ.ನಿತೀಶ್ ಸೇರಿದಂತೆ ಅನೇಕರು ಶುಭಹಾರೈಸಿ ಬೀಳ್ಕೊಟ್ಟರು.

    ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಬಿಹಾರದ 1,452 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ವೈದ್ಯಕೀಯ ತಪಾಸಣೆ ನಡೆಸಿ, ಪ್ರಮಾಣ ಪತ್ರ ವಿತರಿಸಿ ಹಾಗೂ ಅಲ್ಲಿಯೇ 840 ರೂ.ಗಳ ಟಿಕೆಟ್ ನೀಡಿ ಬಸ್‍ಗಳ ಮೂಲಕ ರೈಲ್ವೆ ನಿಲ್ದಾಣಕ್ಕೆ ತಲುಪಿಸಲಾಯಿತು. ಅಲ್ಲದೆ ಅವರಿಗೆ ನೀಡಲಾದ ಟಿಕೆಟ್, ಹಿಂಬದಿ ಬರೆದಿದ್ದ ಸೀಟ್ ಸಂಖ್ಯೆ ಮತ್ತು ಬೋಗಿ ನೋಡಿಕೊಂಡು ವ್ಯವಸ್ಥಿತವಾಗಿ ಅವರಿಗೆ ಆಸನದ ವ್ಯವಸ್ಥೆ ಕಲ್ಪಿಸಿ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟರು.

    ಪ್ರಯಾಣದ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಉದುದ್ದೇಶದಿಂದ ಪ್ರತಿಯೊಬ್ಬರಿಗೂ ಎರಡು ಬ್ರೇಡ್ ಪ್ಯಾಕ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಬಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು.

    ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ವಲಸಿಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯವರು ಮಾಸ್ಕ್ ಗಳನ್ನು ವಿತರಿಸಿದರು. ಈ ಎಲ್ಲ ಆತಿಥ್ಯವನ್ನು ನೋಡಿದ ವಲಸೆ ಕಾರ್ಮಿಕರು ಭಾವುಕರಾಗಿ ಸಂತಸದಿಂದ ಸಿಬ್ಬಂದಿಯತ್ತ ಕೈ ಬೀಸಿದರು.

    ರೈಲು ನಿಲ್ದಾಣದಲ್ಲಿನ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಈ ರೈಲು ಬಿಹಾರದ ಸಹಸ್ರಾಗೆ ತೆರಳಲಿದ್ದು, 34 ಗಂಟೆಗಳ ಪ್ರಯಾಣದ ಅವಧಿಯಾಗಿರಲಿದೆ. ಮಾರ್ಗ ಮಧ್ಯೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿ ಕಳುಹಿಸಿಕೊಡಲಾಗಿದೆ ಎಂದರು.

    ಈಗ ಒಂದು ರೈಲು ಬಿಹಾರಕ್ಕೆ ತೆರಳುತ್ತಿದ್ದು, ಇನ್ನೂ ಹೆಚ್ಚಿನ ವಲಸಿಗರು ಬಿಹಾರಕ್ಕೆ ತೆರಳುವುದಾದರೆ ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ ಉತ್ತರ ಪ್ರದೇಶಕ್ಕೆ ಎರಡು ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 10ಕ್ಕೆ ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣದ ಮೂಲಕ ಉತ್ತರ ಪ್ರದೇಶದ ವಲಸಿಗರು ತೆರಳಲಿದ್ದಾರೆ. ಈಗಾಗಲೇ ಅವರೆಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಟಿಕೆಟ್ ಸಹ ನೀಡಲಾಗಿದೆ ಎಂದು ವಿವರಿಸಿದರು.