ತಿರುವನಂತಪುರ: ಕೇಕ್ ಪೀಸ್ ಕದ್ದ ಅಂತ ಆರೋಪಿಸಿ 14 ವರ್ಷದ ಬಾಲಕನಿಗೆ ಅಂಗಡಿ ಮಾಲೀಕನೊಬ್ಬ ಹಿಗ್ಗಾಮುಗ್ಗವಾಗಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ.
ಈ ಘಟನೆ ಕೇರಳದ ಕೊಲ್ಲಂನ ಕೊಟ್ಟಾರಕ್ಕರ ಎಂಬಲ್ಲಿ ಗುರುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಥಳಿತಕ್ಕೊಳಗಾದ ಬಾಲಕನನ್ನು ಅರ್ಜುನ್(ಹೆಸರು ಬದಲಾಯಿಸಲಾಗಿದೆ) ಎಂದುದು ಗುರುತಿಸಲಾಗಿದೆ.
ಏನಿದು ಘಟನೆ?: ಕುಲಕ್ಕಡ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರೋ ಅರ್ಜುನ್ ಮತ್ತು ಆತನ ಗೆಳೆಯರು ತಂಪು ಪಾನೀಯ ಕುಡಿಯಲೆಂದು ಶಾಲೆಯ ಹತ್ತಿರವಿರೋ ಶಶಿಧರನ್ ಎಂಬಾತನ ಅಂಗಡಿಗೆ ಸಂಜೆ ಸುಮಾರು 4.30ರ ವೇಳೆ ಬಂದಿದ್ದರುನೀ ವೇಳೆ ಬಾಲಕ ಕೇಕ್ ಕದ್ದ ಅಂತ ಅಂಗಡಿ ಮಾಲೀಕ ಬಲಕನನ್ನು ಥಳಿಸಿದ್ದಾನೆ. ಸದ್ಯ ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಕುರಿತು ಅರ್ಜುನ್ ತಾಯಿ ಸಾವಿತ್ರಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ತಾಯಿ ಕರೆ ಮಾಡಿ ಅರ್ಜುನ್ ಶಾಲೆಯಿಂದ ಇನ್ನೂ ಬಂದಿಲ್ಲ. ಅಲ್ಲದೇ ಅಂಗಡಿ ಮಾಲೀಕ ಅರ್ಜುನ್ ಜೊತೆ ಅಮಾನುಷವಾಗಿ ನಡೆದುಕೊಂಡಿರುವ ಬಗ್ಗೆ ಆತನ ಗೆಳೆಯರು ಹೇಳಿರುವುದಾಗಿ ತಿಳಿಸಿದ್ರು. ಇದರಿಂದ ಗಾಬರಿಗೊಂಡ ನಾನು ಕೂಡಲೇ ಸ್ಥಳೀಯ ಅಂಗಡಿಗಳಿಗೆ ತೆರಳಿ ಹುಡುಕಾಡಿದೆ. ಆದ್ರೆ ಅರ್ಜುನ್ ಎಲ್ಲೂ ಕಾಣಿಸಿಲ್ಲ. ತಕ್ಷಣವೇ ಮಗನನ್ನು ವಿಚಾರಿಸಿಕೊಂಡು ಬರಲೆಂದು ಅಲ್ಲಿಂದ ಶಾಲೆಗೆ ತೆರಳಿದೆ. ಸುಮಾರು 1 ಗಂಟೆಗೂ ಅಧಿಕ ಸಮಯ ಅರ್ಜುನ್ ಅಂಗಡಿಯಲ್ಲಿರುವುದನ್ನು ಗಮನಿಸಿದ್ದ ಶಿಕ್ಷಕಿ ಮತ್ತು ನಾನು ಅರ್ಜುನ್ ನನ್ನು ಕರೆದು ಮಾತನಾಡಿಸಿದಾಗ ಈ ವಿಚಾರ ಬೆಳಕಿಗೆ ಬಂತು ಅಂದ್ರು.

ಅರ್ಜುನ್ ಕೈ ತಾಗಿ ಅಂಗಡಿಯಲ್ಲಿ ಕೇಕ್ ಪೀಸ್ ಒಂದು ಕೆಳಗೆ ಬಿದ್ದಿದೆ. ಅಂತೆಯೇ ಆತನ ಗೆಳೆಯರು ತಂಪು ಪಾನೀಯ ಕುಡಿದು ಅಲ್ಲಿಂದ ತೆರಳಿದ್ದಾರೆ. ಗೆಳೆಯರು ಹಿಂದಿರುಗುತ್ತಿದ್ದಾರೆ ಅಂತ ತಿಳಿದ ಅರ್ಜುನ್ ಕೆಳಗೆ ಬಿದ್ದ ಕೇಕ್ ಪೀಸ್ ಅನ್ನು ಕೌಂಟರ್ ಮೇಲಿಟ್ಟು ಅಲ್ಲಿಂದ ಗೆಳೆಯರ ಹಿಂದೆ ಓಡಿದ್ದಾನೆ. ತನ್ನ ಮಗ ಓಡಿದ್ದನ್ನು ಗಮನಿಸಿದ ಅಂಗಡಿ ಮಾಲೀಕ ಆತನನ್ನು ಮತ್ತೆ ಹಿಂದಕ್ಕೆ ಕರೆದು ಮನಬಂದಂತೆ ಥಳಿಸಿದ್ದಾನೆ. ಪರಿಣಾಮ ಮಗನ ಎರಡೂ ಕಿವಿಗಳಲ್ಲೂ ರಕ್ತ ಬರುತ್ತಿರುವುದನ್ನು ಕಂಡು ದಂಗಾದೆ. ಅಲ್ಲದೇ ಅರ್ಜುನ್ ಕುತ್ತಿಗೆಯ ಸುತ್ತ ಗಾಯದ ಬರೆಗಳಿದ್ದು, ತಲೆಗೆ ಕೂಡ ಗಾಯಗಳಾಗಿತ್ತು. ಆತನ ಬ್ಯಾಗನ್ನು ಕೂಡ ಅಂಗಡಿಯವನು ಬಿಸಾಡಿದ್ದಾನೆ. ಅಲ್ಲದೇ ಆತನ ಶರ್ಟ್ ಕಾಲರ್ ಹಿಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ಅಂಗಡಿ ಮಾಲೀಕ ಶಶಿಧರನನ್ನು ಶುಕ್ರವಾರ ಬಂಧಿಸಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 341, 323 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಆರೋಪಿ ಅದೇ ದಿನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ ಎಂಬುದಾಗಿ ವರದಿಯಾಗಿದೆ.