Tag: sharath madivala

  • ಕಾನತ್ತೂರಿಗೆ ಭೇಟಿ ನೀಡಿದ್ದು ನಿಜ, ಪ್ರಾರ್ಥನೆ ಏನನ್ನೋದು ನನಗೆ ಬಿಟ್ಟಿದ್ದು- ರಮಾನಾಥ ರೈ ಸ್ಪಷ್ಟನೆ

    ಕಾನತ್ತೂರಿಗೆ ಭೇಟಿ ನೀಡಿದ್ದು ನಿಜ, ಪ್ರಾರ್ಥನೆ ಏನನ್ನೋದು ನನಗೆ ಬಿಟ್ಟಿದ್ದು- ರಮಾನಾಥ ರೈ ಸ್ಪಷ್ಟನೆ

    ಮಂಗಳೂರು: ಕಾನತ್ತೂರು ದೈವಸ್ಥಾನಕ್ಕೆ ಭೇಟಿ ನೀಡಿ ದೂರು ನೀಡಿರುವ ಕುರಿತು ಮಾಜಿ ಸಚಿವ ರಮಾನಾಥ ರೈ ಸ್ಪಷ್ಟನೆ ನಿಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು ನಾನು ಕಾನತ್ತೂರಿಗೆ ಭೇಟಿ ನೀಡಿದ್ದೇನೆ. ನಾನೊಬ್ಬ ಪರಿಪೂರ್ಣ ಆಸ್ತಿಕವಾದಿ. ದೈವ ದೇವರುಗಳ ಮೇಲೆ ಅಚಲ ನಂಬಿಕೆ ಹೊಂದಿದ್ದೇನೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕಾನತ್ತೂರಿನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನನ್ನ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದ್ದಾರೆ, ಅದಕ್ಕಾಗಿ ಪ್ರಾರ್ಥಿಸಿದ್ದೇನೆ. ಏನು ಪ್ರಾರ್ಥನೆ ಅನ್ನೋದು ನನಗೆ ಬಿಟ್ಟಿದ್ದು. ಆರೋಪಿಗಳ ಪತ್ತೆಯಾಗಿದೆ, ಆದ್ರೂ ಆರೋಪ ಮಾಡಿರುವುದು ಯಾವ ನ್ಯಾಯ ಅಂತ ಪ್ರಶ್ನಿಸಿದ್ದಾರೆ.

    ತಮ್ಮ ಮೇಲಿನ ಅಪಪ್ರಚಾರವನ್ನು ಖಂಡಿಸಿ ರೈ ನ್ಯಾಯ ದೇಗುಲದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿತ್ತು. ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಗಳಲ್ಲಿ ಬಿ. ರಮಾನಾಥ ರೈ ಮೇಲೆ ಆರೋಪವೂ ಕೂಡಾ ಕೇಳಿಬಂದಿತ್ತು. ಅಲ್ಲದೇ ಈ ವಿಚಾರ ಮತಗಳ ಧೃವೀಕರಣಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆಗಳಿಂದ ಮನನೊಂದ ಮಾಜಿ ಸಚಿವ ರಮಾನಾಥ ರೈ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೂರು ಸಲ್ಲಿಸಿದ್ದರು ಎಂದು ವರದಿಯಾಗಿತ್ತು.

    ಶರತ್ ಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಅಪಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ನನಗೆ ಮಾನಸಿಕವಾಗಿ ತೀವ್ರ ನೋವುಂಟಾಗಿದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ. ಸುಮ್ಮನೇ ನನ್ನ ಮೇಲೆ ಆರೋಪ ಮಾಡಿದವರನ್ನು ಕರೆದು ವಿಚಾರಣೆ ನಡೆಸಿ ಎಂದು ದೇವಸ್ಥಾನದ ಸನ್ನಿಧಿಯಲ್ಲಿ ವಿನಂತಿ ಮಾಡಿಕೊಂಡಿದ್ದರು ಎಂಬುದಾಗಿ ತಿಳಿದುಬಂದಿತ್ತು.

  • ಅಶ್ರಫ್ ಸಾಯ್ಸಿದ್ದು ಬಿಜೆಪಿ, ಶರತ್ ಕೊಂದಿದ್ದು ಪಿಎಫ್‍ಐ: ಮತ್ತೆ ಬೆಂಕಿ ಹಚ್ಚಿದ ರೈ

    ಅಶ್ರಫ್ ಸಾಯ್ಸಿದ್ದು ಬಿಜೆಪಿ, ಶರತ್ ಕೊಂದಿದ್ದು ಪಿಎಫ್‍ಐ: ಮತ್ತೆ ಬೆಂಕಿ ಹಚ್ಚಿದ ರೈ

    ಬೆಂಗಳೂರು: ರಾಜ್ಯದಲ್ಲಿ ಜನರ ಹತ್ಯೆಗಳನ್ನು ಮಾಡುವುದು ಎರಡೇ ಪಕ್ಷಗಳು ಅಂತ ಹೇಳುವ ಮೂಲಕ ತಣ್ಣಗಾಗಿರೋ ಕರಾವಳಿಯಲ್ಲಿ ಮತ್ತೆ ಬೆಂಕಿ ಹಚ್ಚುವ ಕೆಲಸಕ್ಕೆ ಅರಣ್ಯ ಸಚಿವ ರಮಾನಾಥ ರೈ ಕೈ ಹಾಕಿದ್ದಾರೆ.

    ಎಸ್‍ಡಿಪಿಐ-ಪಿಎಫ್‍ಐ ಮತ್ತು ಬಿಜೆಪಿ ಕೊಲೆಯ ರಾಜಕಾರಣ ಮಾಡುತ್ತಿದೆ. ಅಶ್ರಫ್‍ನನ್ನು ಬಿಜೆಪಿಯೇ ಕೊಲೆ ಮಾಡಿದೆ. ಅದಕ್ಕೆ ಶರತ್‍ನನ್ನು ಎಸ್‍ಡಿಪಿಐ-ಪಿಎಫ್‍ಐ ಕೊಲೆ ಮಾಡಿದೆ ಅಂತ ಹೇಳಿದ್ದಾರೆ.

    ಈ ಎರಡು ಮತೀಯ ಶಕ್ತಿಗಳು ಕೊಲೆ ರಾಜಕಾರಣ ಮಾಡುತ್ತಿವೆ. ಈ ಮಧ್ಯೆ ನನ್ನ ಬಳಿ ರಾಜೀನಾಮೆ ಕೇಳ್ತಿದ್ದಾರೆ ಅಂತ ಅವರು ಹೇಳಿದರು.

    ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    ಇದನ್ನೂ ಓದಿ: ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

  • ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ: ಮೂವರ ಬಂಧನ

    ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ: ಮೂವರ ಬಂಧನ

    ಮಂಗಳೂರು: ರಾಜ್ಯದಲ್ಲೇ ಭಾರೀ ಸಂಚಲನ ಸೃಷ್ಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಶಫೀ, ಷರೀಫ್, ಖಲಂದರ್ ಎಂಬುವುದಾಗಿ ಗುರುತಿಸಲಾಗಿದ್ದು, ಇವರ ಬಗ್ಗೆ ಪೂರ್ಣ ಮಾಹಿತಿ ತಿಳಿದುಬಂದಿಲ್ಲ.

    ಏನಿದು ಪ್ರಕರಣ?: ಕಳೆದ ಜುಲೈ 4 ರಂದು ರಾತ್ರಿ ಬಂಟ್ವಾಳ ತಾಲೂಕಿನ ಬಿಸಿರೋಡ್ ಬಳಿ ತನ್ನ ಲಾಂಡ್ರಿಯ ಬಾಗಿಲು ಹಾಕಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಶರತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಜುಲೈ 7 ರಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ಆ ಬಳಿಕ ರಾಜ್ಯಾದ್ಯಂತ ಸಾಕಷ್ಟು ಹೋರಾಟಗಳು ನಡೆದಿತ್ತು.

    ಆ ಬಳಿಕ ಪೊಲೀಸರು ಸುಮಾರು 7 ತನಿಖಾ ತಂಡಗಳನ್ನು ರಚಿಸಿ ಬೇರೆ ಬೇರೆ ಕಡೆಗಳಲ್ಲಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದರು. ಅಲ್ಲದೇ ಪೊಲೀಸರಿಗೆ ಆರೋಪಿಗಳನ್ನು ಪತ್ತೆಹಚ್ಚುವುದು ಸವಾಲಾಗಿತ್ತು. ಘಟನೆ ಬಳಿಕ ಮಂಗಳೂರು, ಬಂಟ್ವಾಳ, ಬಿಸಿರೋಡಿನಲ್ಲಿ ಹಲವು ದಿನ 144 ಸೆಕ್ಷನ್ ಜಾರಿಯಾಗಿತ್ತು. ಸದ್ಯ ಇದೀಗ ಮೂವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    https://www.youtube.com/watch?v=o40hIeKFh8E

     

  • ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

    ಮೃತ ಶರತ್ ಮಡಿವಾಳ ಮನೆಗೆ ಸಚಿವ ರಮಾನಾಥ ರೈ ಭೇಟಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ಮನೆಗೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿದ್ದಾರೆ.

    ಘಟನೆ ನಡೆದು ಒಂಬತ್ತು ದಿನಗಳ ಬಳಿಕ ರೈ ಬಂಟ್ವಾಳದ ಸಜಿಪದಲ್ಲಿರುವ ಶರತ್ ಮನೆಗೆ ಭೇಟಿ ನೀಡಿ ಶರತ್ ತಂದೆ ತನಿಯಪ್ಪ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಭೇಟಿ ವೇಳೆ ಸ್ಥಳೀಯರಿಗೆ ಮಾತ್ರ ರೈ ಬೆಂಬಲಿಗರು ಸೂಚನೆ ನೀಡಿದ್ದು, ಮಾಧ್ಯಮದವರ ಪ್ರವೇಶವನ್ನು ನಿರಾಕರಿಸಿದ್ದಾರೆ. ಅಲ್ಲದೇ ಯಾರೂ ಕೂಡ ಫೊಟೋ ಕ್ಲಿಕ್ಕಿಸದಂತೆ ಸೂಚಿಸಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    20 ವರ್ಷ ರಮಾನಾಥ ರೈ ಬಟ್ಟೆ ಒಗೆದು ಇಸ್ತ್ರಿ ಮಾಡಿಕೊಟ್ಟಿದ್ರೂ ಇಂದು ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಶರತ್ ತಂದೆ ತನಿಯಪ್ಪ ಮಡಿವಾಳ ಮಾಧ್ಯಮದ ಮುಂದೆ ಕಣ್ಣೀರಿಟ್ಟ ಬಳಿಕ ಇದೀಗ ಯಾರಿಗೂ ಮಾಹಿತಿ ನೀಡದೆ ರೈ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ತನಿಖೆ ಮಾಡಿ ಆರೋಪಿಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದಾರೆ.

    ಮಾಧ್ಯಮಗಳಲ್ಲಿ ಸುದ್ದಿಪ್ರಸಾರವಾಗಿ ಒಂದು ಗಂಟೆಯೊಳಗೆ ಶರತ್ ಮನೆಗೆ ಭೇಟಿ ಮಾಡಿದ ಫೋಟೋವನ್ನು ರೈ ಆಪ್ತ ಕಾರ್ಯದರ್ಶಿ ರಿಲೀಸ್ ಮಾಡಿದ್ದಾರೆ.

    ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    https://www.youtube.com/watch?v=L5WjxAOQ_VE

  • ಈಶ್ವರಪ್ಪ, ಕರಂದ್ಲಾಜೆ ಬಳಸಿದ ಪದ ನನ್ನ ಬಾಯಿಂದ ಬರಲ್ಲ: ಸಿಎಂ

    ಈಶ್ವರಪ್ಪ, ಕರಂದ್ಲಾಜೆ ಬಳಸಿದ ಪದ ನನ್ನ ಬಾಯಿಂದ ಬರಲ್ಲ: ಸಿಎಂ

    ಕಲಬುರಗಿ: ಉಡುಪಿ, ಚಿಕ್ಕಮಗಳೂರು ಸಂಸಂದೆ ಶೋಭಾ ಕರಂದ್ಲಾಜೆ ಹಾಗೂ ಈಶ್ವರಪ್ಪ ಬಳಸಿದ ಪದ ನನ್ನ ಬಾಯಿಂದ ಬರಲ್ಲ ಅಂತ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದ ಡಿಆರ್ ಪೊಲೀಸ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶೋಭಾ ಕರಂದ್ಲಾಜೆ ಮತ್ತು ಈಶ್ವರಪ್ಪರಿಂದ ಷಂಡ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಷಂಡರೋ ಗಂಡಸರೋ ಅದು ನನಗೇನು ಗೊತ್ತು? ನಾನೇನು ನೋಡಿದೆನಾ? ಅಂತ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯವ್ರೇನು ಷಂಡರಾ?- ಸರ್ಕಾರದ ವಿರುದ್ಧ ಶೋಭಾ ಕೆಂಡಾಮಂಡಲ

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸರು ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಅವರ ಸಂಘಟನೆಗಳು ಸುಮ್ಮನಿದ್ದರೆ ಶಾಂತಿ ನೆಲೆಸುತ್ತದೆ. ಇದೀಗ ಜಲ್ಲೆಯಲ್ಲಿ 144 ಸೆಕ್ಷನ್ ಜಾರಿಯಿದ್ದರೂ ಸಹ ಯಾಕೆ ಅಲ್ಲಿ ಹೋಗಿದ್ದರು. ಯಾವುದೇ ಸಂಘಟನೆಯಿರಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಿ ಅಂತ ಸಿಎಂ ಹೇಳಿದ್ದಾರೆ.

    ಸಂಸದೆ ಶೋಭಾ ಕರಂದ್ಲಾಜೆ ಬಳಸಿದ ಷಂಡ ಎಂಬ ಪದ ನನ್ನ ಬಾಯಿಂದ ಬರಲ್ಲ. ಇದು ಬಿಜೆಪಿ, ಆರ್‍ಎಸ್‍ಎಸ್ ಸಂಸ್ಕೃತಿಯನ್ನ ಬಿಂಬಿಸುತ್ತೆ ಅಂತ ಸಿಎಂ ಟಾಂಗ್ ನೀಡಿದ್ದಾರೆ.

    ಇದನ್ನೂ ಓದಿ: ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ: ಈಶ್ವರಪ್ಪ

  • ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್

    ಮಂಗಳೂರು: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಇಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಭೇಟಿ ನೀಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿರುವ ಶರತ್ ಮನೆಗೆ ಭೇಟಿ ನೀಡಿದ ಡಿವಿಎಸ್ ಶರತ್ ತಂದೆ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಮಗನ ಸಾವನ್ನು ನೆನೆದು ಡಿವಿಎಸ್ ಮುಂದೆ ಶರತ್ ತಂದೆ ತನಿಯಪ್ಪ ಕಣ್ಣೀರು ಹಾಕಿದ್ರು. ಡಿವಿಎಸ್‍ಗೆ ಶಾಸಕ ಸುನೀಲ್ ಕುಮಾರ್, ಎಂಎಲ್‍ಸಿ ಗಣೇಶ್ ಕಾರ್ಣಿಕ್ ಸಾಥ್ ನೀಡಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್, ಶರತ್ ಒಬ್ಬ ಅಮಾಯಕ ಯುವಕ. ಒಂದು ಕಪ್ಪುಚುಕ್ಕೆ ಇಲ್ಲದವನ ಕೊಲೆಯಾಯ್ತು. ಇಂತಹ ನೂರು ಶರತ್ ಹುಟ್ಟಿ ಬರ್ತಾರೆ. ಆಡಳಿತ ಸೂತ್ರ ಹಿಡಿದವರೇ ಇದರ ಹಿಂದೆಯಿದ್ದಾರೆ. ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.

    ಇದೇ ವೇಳೆ ಡಿವಿಎಸ್ ತುಪ್ಪ ಸುರಿಯುತ್ತಾರೆಂಬ ರಮಾನಾಥ ರೈ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಯಾರು ಯಾರಿಗೆ ತುಪ್ಪ ಸುರಿಯುತ್ತಾರೆ ನೋಡೋಣ. ತುಪ್ಪ ಯಾರಿಗೆ ಸುರಿಯುತ್ತಾರೆ ಅಂತ ಗೊತ್ತಾಗುತ್ತದೆ ಎಂದು ರೈ ವಿರುದ್ಧ ಕಿಡಿಕಾರಿದ್ರು.

  • ಶರತ್ ಸಾವಿನ ಬಳಿಕ ಸಹಜಸ್ಥಿತಿಯತ್ತ ಮರಳುತ್ತಿರುವಾಗಲೇ ಮಂಗಳೂರಿನಲ್ಲಿ ಮತ್ತೊಂದು ಹಲ್ಲೆ!

    ಶರತ್ ಸಾವಿನ ಬಳಿಕ ಸಹಜಸ್ಥಿತಿಯತ್ತ ಮರಳುತ್ತಿರುವಾಗಲೇ ಮಂಗಳೂರಿನಲ್ಲಿ ಮತ್ತೊಂದು ಹಲ್ಲೆ!

    ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ಬಳಿಕ ಉದ್ವಿಗ್ನಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಹಜಸ್ಥಿತಿಯತ್ತ ಮರಳುತ್ತಿರುವಾಗಲೇ ಮತ್ತೊಂದು ಹಲ್ಲೆ ನಡೆದಿದೆ.

    ಮಂಗಳೂರು ಎಡಪದವು ಬಳಿ ಅಬೂಬಕರ್ ಸಿದ್ದಿಕ್(35) ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

    ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    ಸೋಮವಾರ ರಾತ್ರಿ ಕ್ವಾರಿ ಕೆಲಸ ಮುಗಿಸಿ ಅಬೂಬಕರ್ ಸಿದ್ದಿಕ್ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಎಡಪದವು ವಿವೇಕಾನಂದ ಶಾಲೆ ಬಳಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಸಿದ್ದಿಕ್ ತಲೆ, ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಂಗಳೂರಿನಲ್ಲಿ ನಡೆದ ಕೋಮುಗಲಭೆಯ ನಿಯಂತ್ರಣಕ್ಕೆ ಬಾರದಿದ್ದಕ್ಕೆ ಸೋಮವಾರ ಮಧ್ಯಾಹ್ನವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೇ ಶಾಂತಿ ಕದಡುವ ಕೆಲಸ ಮಾಡಿದ್ರೂ ಯಾವುದೇ ಮುಲಾಜಿಲ್ಲದೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಅಂತ ಹೇಳಿದ್ದರು. ಇದಾದ ಕೆಲವೇ ಗಂಟೆಗಳ ಬಳಿಕ ಮಂಗಳೂರಿನಲ್ಲಿ ಮತ್ತೊಂದು ಹಲ್ಲೆ ನಡೆದಿದೆ.

    ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

    ಮಂಗಳೂರು: ಉಸ್ತುವಾರಿ ಸಚಿವ ರಮಾನಾಥ ರೈ ಬಟ್ಟೆ ಒಗೆದವ ನಾನು. ಅವರ ಅಂಗಿ ಪ್ಯಾಂಟ್ 20 ವರ್ಷ ಒಗೆದಿದ್ದೇನೆ. ದಿನಂಪ್ರತಿ ಇಸ್ತ್ರಿ ಮಾಡಿಕೊಟ್ಟಿದ್ದೇನೆ. ಆದ್ರೆ ಇದೀಗ ಘಟನೆಯಾಗಿ 8 ದಿನ ಆಗ್ತಾ ಬಂದಿದೆ. ಆದ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಸಜಿಪದಲ್ಲಿ ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡ ಶರತ್ ತಂದೆ ತನಿಯಪ್ಪ, ರೈ ಚಿಕ್ಕಂದಿನಿಂದ ನಮ್ಮ ಅಂಗಡಿ ಬಳಿ ಓಡಾಡುತ್ತಿದ್ದರು. ಅಂದು ಸೇವಾ ಮನೋಭಾವನೆ ನನ್ನಲ್ಲಿತ್ತು. ಹೀಗಾಗಿ ಅವರ ಬಟ್ಟೆ ಒಗೆದು, ಇಸ್ತ್ರೀ ಮಾಡಿ ಕೊಟ್ಟಿದ್ದೆ. ಆದ್ರೆ ಇವತ್ತಿಗೆ ಇದನ್ನೆಲ್ಲಾ ಮರೆತ್ರು. ನಾನು ಕಾಂಗ್ರೆಸ್-ಬಿಜೆಪಿ, ಹಿಂದೂ-ಮುಸ್ಲಿಮರೆಂದು ಭೇದ-ಭಾವ ಮಾಡಿಲ್ಲ. ನನ್ನ ಕುಟುಂಬದ ಮೇಲೆ ಅವರಿಗೆ ಯಾಕೆ ಕೋಪ ತಾತ್ಸಾರ ಅಂತ ಶರತ್ ತಂದೆ ಕಣ್ಣೀರು ಹಾಕಿದ್ರು.

    ನನ್ನ ಚಿತೆಗೆ ಶರತ್ ಬೆಂಕಿಯಿಡಬೇಕಿತ್ತು. ಕೊಂದ ದುಷ್ಕರ್ಮಿಗಳು ಭೂಮಿ ಮೇಲೆ ಶಾಶ್ವತವಲ್ಲ. ದೇವರೇ ಅವರನ್ನ ನೋಡಿಕೊಳ್ಳಲಿ. ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೇನೆ. ನನ್ನ ಕುಟುಂಬಕ್ಕೆ ಗತಿಯಿಲ್ಲದಂತಾಗಿದೆ. ದೇವರೇ ನಮ್ಮ ಸಂಸಾರ ನೋಡಿಕೊಳ್ಳಲಿ ಅಂತ ಶರತ್ ತಂದೆ ತನಿಯಪ್ಪ ಹೇಳಿದರು.

    ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮನೆಯಲ್ಲಿ ಸದ್ಗತಿಯ ಕಾರ್ಯ ನಡೆಯಲಿದ್ದು, ಜುಲೈ 20ಕ್ಕೆ ವೈಕುಂಠ ಸಮಾರಾಧನೆ ನಡೆಯಲಿದೆ. ಬಂಟ್ವಾಳ ನಂದಾವರ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

  • ಸಿದ್ದರಾಮಯ್ಯಗೆ ಡಿವಿಎಸ್ ಪುತ್ರ ಶೋಕದ ಪ್ರಶ್ನೆ

    ಸಿದ್ದರಾಮಯ್ಯಗೆ ಡಿವಿಎಸ್ ಪುತ್ರ ಶೋಕದ ಪ್ರಶ್ನೆ

    – ಇಂದು ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

    ಬೆಂಗಳೂರು: ಕರಾವಳಿಯಲ್ಲಿ ನಡೆದಿರೋ ಕೋಮು ಗಲಭೆ ಸಂಬಂಧ ರಾಜಕೀಯ ಪಕ್ಷಗಳ ನಡುವೆ ಕಚ್ಚಾಟ ನಿಂತಿಲ್ಲ. ಈಗ ತಮ್ಮ ಮತ್ತು ಸಿದ್ದರಾಮಯ್ಯರ ಪುತ್ರ ಶೋಕವನ್ನೇ ಮುಂದಿಟ್ಟುಕೊಂಡು ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ

    ಬಂಟ್ವಾಳದಲ್ಲಿ ನಡೆದಿರೋ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಡಿವಿಎಸ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

    ನಾವು-ನೀವು ಸಮಾನ ದುಃಖಿಗಳೆಂದು ಒಂದು ಸಂದರ್ಭದಲ್ಲಿ ಹೇಳಿದ್ದೆ. ಮೃತಪಟ್ಟ ಶರತ್ ತಂದೆ ಸ್ಥಾನದಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ. ಶರತ್‍ಗೆ ನ್ಯಾಯ ದೊರಕಿಸಿ. ಶರತ್ ತಂದೆಯ ಮುಖವನ್ನು ನೆನೆಸಿಕೊಂಡರೆ ಸಂಕಟವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಏನೂ ಅನ್ನಿಸುತ್ತಿಲ್ಲವಾದರೆ ಅದನ್ನು ಯೋಜಿತ ಕೃತ್ಯವೆಂದು ತಿಳಿಯಲಾ ಎಂದು ಪ್ರಶ್ನೆ ಹಾಕಿದ್ದಾರೆ.

    ಈ ನಡುವೆ ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಗಳ ಜೊತೆ ಇಂದು ಸಭೆ ನಡೆಸಲಿದ್ದಾರೆ. ಕಳೆದ ಒಂದೂವರೆ ತಿಂಗಳಿಂದಲೂ ಮಂಗಳೂರು, ಉಡುಪಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಅನ್ಯಧರ್ಮಗಳ ನಡುವೆ ಮಾರಾಮಾರಿ ನಡೆಯುತ್ತಲೇ ಇದೆ. ನಿಷೇಧಾಜ್ಞೆ ಜಾರಿ ಮಾಡಿದ್ರೂ ಕೂಡ ಮೊನ್ನೆ ಮೊನ್ನೆಯಷ್ಟೇ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಕೊಲೆ ನಡೆಯಿತು. ಬಳಿಕ ಶವಯಾತ್ರೆಯಲ್ಲಿ ಕಲ್ಲು ತೂರಾಟ, ಮತ್ತದೇ ಚಾಕು ಇರಿತ ನಡೆಯುತ್ತಲೇ ಇದೆ. ಇದ್ರಿಂದ ಬೇಸತ್ತಿರೋ ಸಿಎಂ ಖಡಕ್ ಚರ್ಚೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 10 ರಿಂದ 12:30ರ ವರೆಗೂ ಸಭೆ ನಡೆಸಿ ಬಳಿಕ 12:30 ಕ್ಕೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಲಿದ್ದಾರೆ.

  • ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

    ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

    ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಬಳಿಕ ದಕ್ಷಿಣಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕಲ್ಲು ತೂರಾಟದ ನಡುವೆಯೇ ಶನಿವಾರ ಶರತ್ ಅಂತಿಮಯಾತ್ರೆ ಕೂಡಾ ನಡೆಯಿತು. ಇತ್ತ ಪ್ರಕ್ಷುಬ್ಧಗೊಂಡಿರುವ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಮತ್ತೊಂದು ಕೊಲೆ ಯತ್ನ ನಡೆದಿದೆ.

    ಮಂಗಳೂರು ಹೊರವಲಯದ ಕುತ್ತಾರು ರಾಣಿಪುರದಲ್ಲಿ ಯುವಕನ ಮೇಲೆ ತಲವಾರಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಂಬ್ಲಮೊಗರು ನಿವಾಸಿಯಾಗಿರುವ ಚಿರಂಜೀವಿ ಮೇಲೆ ನಿನ್ನೆ ಬೈಕಿನಲ್ಲಿ ಚಲಿಸುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಏಕಾಏಕಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬಜರಂಗದಳದ ಕಾರ್ಯಕರ್ತ ಚಿರಂಜೀವಿ ಸದ್ಯ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಜೊತೆಗೆ ಹೋರಾಡುತ್ತಿದ್ದಾರೆ.

    ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಪ್ರಕರಣ ಭೇಧಿಸುವ ಮುನ್ನವೇ ಇದೀಗ ಮತ್ತೊಂದು ಪ್ರಕರಣ ನಡೆದಿರುವುದು ಪೊಲೀಸರ ತಲೆನೋವು ಜಾಸ್ತಿಮಾಡಿದೆ.

    https://www.youtube.com/watch?v=o40hIeKFh8E

    https://www.youtube.com/watch?v=1DwTIz6sVmQ

    https://www.youtube.com/watch?v=bHr6olvlgmU