Tag: Sharanagowda Kandakura

  • BSY ಆಡಿಯೋ ಪ್ರಕರಣ: ತನಿಖಾ ವರದಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಅಂದ್ರು ಕಂದಕೂರು

    BSY ಆಡಿಯೋ ಪ್ರಕರಣ: ತನಿಖಾ ವರದಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಅಂದ್ರು ಕಂದಕೂರು

    – ವಿಚಾರಣೆಗೆ ಹಾಜರಾದ ಶರಣಗೌಡ ಕಂದಕೂರು ಅಸಮಧಾನ

    ರಾಯಚೂರು: ಜಿಲ್ಲೆಯ ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಆಪರೇಷನ್ ಕಮಲ ಆಡಿಯೋ ಪ್ರಕರಣ ಹಿನ್ನೆಲೆ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ದೂರುದಾರ ಶರಣಗೌಡರನ್ನ ಇಂದು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಮಾತನಾಡಿರುವ ಶರಣೇಗೌಡ ನನಗೆ ನೂರಕ್ಕೆ ನೂರು ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಆದ್ರೂ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸವಿದೆ ಅಂತ ಹೇಳಿದ್ದಾರೆ.

    ಜನಪ್ರತಿನಿಧಿಗಳ ಕೋರ್ಟ್ ನಿಂದ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆ ಮಾಡಬೇಕೆಂದು ಆದೇಶ ಬಂದ ಹಿನ್ನೆಲೆ ತನಿಖಾ ಅಧಿಕಾರಿಯಾಗಿ ರಾಯಚೂರು ಡಿವೈಎಸ್ ಪಿ ಯವರನ್ನ ನೇಮಕ ಮಾಡಿದ್ದಾರೆ. ಡಿವೈಎಸ್ ಪಿ ಶಿವನಗೌಡ ಪಾಟೀಲ್ ನೋಟಿಸ್ ನೀಡಿ ನಮಗೆ ಬರಲು ಹೇಳಿದ್ರು, ಇದರಿಂದಾಗಿ ಇಂದು ವಿಚಾರಣೆ ಬಂದಿದ್ದೇನೆ. ನಾವು ಮಾಡಿರುವ ಆಡಿಯೋ ಹಾಗೂ ನಮ್ಮ ಹೇಳಿಕೆಗಳು ಪಡೆದುಕೊಂಡಿದ್ದಾರೆ. ಒಬ್ಬ ಡಿವೈಎಸ್ ಪಿ ಸಿಎಂ ವಿರುದ್ಧ ಯಾವ ರೀತಿ ತನಿಖೆ ಮಾಡಲು ಆಗುತ್ತೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕಾಗಿತ್ತು ಅಂತ ಶರಣಗೌಡ ಹೇಳಿದ್ದಾರೆ.

    ರಾಜೀನಾಮೆ ನೀಡದೆ ತನಿಖೆ ನಡೆಯುತ್ತಿರುವುದರಿಂದ ಮುಂದೆ ಏನಾಗುತ್ತೆ ಎಂಬುವುದು ನಮಗೆ ಗೊತ್ತು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿ ರಿಪೋರ್ಟ್ ಹಾಕಬಹುದು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲರ ಜೊತೆಗೆ ಈಗಾಗಲೇ ಮಾತುಕತೆ ಆಗಿದೆ. ಈ ತನಿಖಾ ವರದಿಯಲ್ಲಿ ನನಗೆ ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಸತ್ಯಕ್ಕೆ ನ್ಯಾಯ ಸಿಗದೇ ಇದ್ದಾಗ ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಥವಾ ಇಡಿ ಇದೆ. ಆಡಿಯೋದಲ್ಲಿ ಎಲ್ಲವೂ ಇದ್ದು, ನ್ಯಾಯ ಸಿಗದೇ ಇದ್ದರೆ ಕಾನೂನು ಹೋರಾಟ ಮುಂದುವರಿಸುವುದಾಗಿ ಜೆಡಿಎಸ್ ಮುಖಂಡ ಶರಣಗೌಡ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಅಸ್ತಿತ್ವ ನನ್ನ ಕೈಲಿದೆ: ಶರಣಗೌಡ

  • ಬಿಎಸ್‍ವೈ ಅಸ್ತಿತ್ವ ನನ್ನ ಕೈಲಿದೆ: ಶರಣಗೌಡ

    ಬಿಎಸ್‍ವೈ ಅಸ್ತಿತ್ವ ನನ್ನ ಕೈಲಿದೆ: ಶರಣಗೌಡ

    -ಸಿಎಂ ವಿರುದ್ಧ ಬಿಜೆಪಿಯಲ್ಲಿಯೇ ಷಡ್ಯಂತ್ರ

    ಯಾದಗಿರಿ: ಸಿಎಂ ಬಿ.ಎಸ್.ಯಡಿಯೂರಪ್ಪನವರ ಅಸ್ತಿತ್ವ ನನ್ನ ಕೈಯಲ್ಲಿದೆ. ಆಪರೇಷನ್ ಕಮಲದ ಆಡಿಯೋ ಪ್ರಕರಣವನ್ನು ರೀ ಓಪನ್ ಮಾಡುವಂತೆ ಬಿಜೆಪಿಯ ಹಿರಿಯ ನಾಯಕರು ನನಗೆ ಸೂಚನೆ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಹೊಸ ಬಾಂಬ್ ಸಿಡಿಸಿದ್ದಾರೆ.

    ಇಂದು ಯಾದಗಿರಿಯಲ್ಲಿ ಕುಮಾರಸ್ವಾಮಿ ಸರ್ಕಾರ ನೀಡಿದ್ದ ಅನುದಾನ ಹಿಂಪಡೆದ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ಶರಣಗೌಡ ಕಂದಕೂರ, ಸಿಎಂ ವಿರುದ್ಧವೇ ಕೆಲ ಬಿಜೆಪಿ ನಾಯಕರು ಷಡ್ಯಂತ್ರ ರಚಿಸುತ್ತಿದ್ದಾರೆ. ನನ್ನ ಮೂಲಕ ಸಿಎಂಗೆ ಖೆಡ್ಡಾ ತೋಡಿದ್ದು, ಹಾಗಾಗಿ ಬಿಎಸ್‍ವೈ ಅಸ್ತಿತ್ವ ನನ್ನ ಕೈಯಲಿದೆ ಎಂದು ಗುಡುಗಿದರು.

    ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ನೀಡಿದ್ದ ಅನುದಾನ ಬಿಜೆಪಿ ಸರ್ಕಾರ ಹಿಂಪಡೆಯುವ ಮೂಲಕ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ. ಆಡಳಿತ ಪಕ್ಷದ ಶಾಸಕರಿರುವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವುದು ಸಹಜ. ಆದ್ರೆ ಈ ಹಿಂದೆ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಬಾರದು. ಪ್ರದೇಶಾಭಿವೃದ್ಧಿ ನಿಧಿಗೆ ನೀಡಿದ್ದ 4.50 ಕೋಟಿ ರೂ. ಪಿಡಬ್ಲೂಡಿ ಹಾಗೂ ಖಾಸಾಮಠಕ್ಕೆ ನೀಡಿದ್ದ ಅನುದಾನವನ್ನೂ ಹಿಂಪಡೆಯಲಾಗಿದೆ. ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಮಾಡಿದ್ದೇನೆ ಎಂಬ ಉದ್ದೇಶದಿಂದ ಸಿಎಂ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್‍ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್

    ಕ್ಷೇತ್ರಕ್ಕೆ ನೀಡಲಾಗುವ ಅನುದಾನವನ್ನು ಕಡಿತಗೊಳಿಸಿದ್ರೆ ನಾವು ಶರಣಾಗುತ್ತೇವೆ ಎಂದು ಸಿಎಂ ತಿಳಿದುಕೊಂಡಿರಬಹುದು. ಕಂದಕೂರ ರಕ್ತದಲ್ಲೇ ಶರಣಾಗತಿ ಎಂಬ ಪದವೇ ಇಲ್ಲ. ಒಂದು ಮಠಕ್ಕೆ ಅನುದಾನ ನೀಡದಿದ್ದರೆ, ಭಿಕ್ಷೆ ನೀಡಿ ಅಭಿವೃದ್ಧಿ ಮಾಡುತ್ತೇನೆ. ಈ ಪ್ರತಿಭಟನೆ ಕೇವಲ ಟ್ರೈಲರ್, ಹೀಗೆ ಮುಂದುವರಿದ್ರೆ ಸಿನಿಮಾ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಯಾರು ಈ ಶರಣಗೌಡ ಕಂದಕೂರ?
    ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರನೇ ಶರಣಗೌಡ ಕಂದಕೂರು. ಫೆಬ್ರವರಿಯಲ್ಲಿ ಶಾಸಕ ನಾಗನಗೌಡರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪನವರು ಶರಣಗೌಡ ಸಂಪರ್ಕಿಸಿದ್ದರು ಎನ್ನಲಾದ ಆಡಿಯೋವನ್ನು ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದರು. ಆಡಿಯೋದಲ್ಲಿ 50 ಕೋಟಿ ರೂ. ಆಫರ್ ಮತ್ತು ಚುನಾವಣೆಯಲ್ಲಿ ಬೆಂಬಲದದ ಜೊತೆ ಮಂತ್ರಿ ಸ್ಥಾನ ನೀಡಲಾಗುವುದು ಎಂಬ ಧ್ವನಿ ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ತಂದೆಯವರು ಅನರ್ಹರಾದರೆ ಏನು ಎಂದು ಕೇಳಿದ್ದಕ್ಕೆ ಅದಕ್ಕೆ ಏನು ತಲೆ ಕೆಡಿಸಿಕೊಳ್ಳಬೇಡ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿ ರೂ. ನೀಡಿ ಬುಕ್ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಕೋರ್ಟ್ ನಲ್ಲಿ ಏನಾದರೆ ಆದರೆ ಎಂದು ಕೇಳಿದ್ದಕ್ಕೆ ಅದಕ್ಕೆಲ್ಲ ಹೆದರುವ ಅಗತ್ಯವಿಲ್ಲ. ಅಮಿತ್ ಶಾ, ಮೋದಿ ಇದ್ದಾರೆ. ಸುಪ್ರೀಂ ಕೋರ್ಟ್ ಜಡ್ಜ್ ಗಳನ್ನು ಬುಕ್ ಮಾಡಿದ್ದಾರೆ ಎಂದು ಅಡಿಯೋದಲ್ಲಿ ಹೇಳಲಾಗಿತ್ತು. ಅಂದು ಹೆಚ್.ಡಿ.ಕುಮಾರಸ್ವಾಮಿ ಅವರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಶರಣಗೌಡ ಕಂದಕೂರ ಉಪಸ್ಥಿತರಿದ್ದರು.