Tag: shaman

  • ಉಪ್ಪಿ ಅಪ್ಪಟ ಅಭಿಮಾನಿಯ ಆಸಿಂಕೋಜಿಲ್ಲ!

    ಉಪ್ಪಿ ಅಪ್ಪಟ ಅಭಿಮಾನಿಯ ಆಸಿಂಕೋಜಿಲ್ಲ!

    ಹೊಸ ವರ್ಷದ ಹೊಸ್ತಿಲಾಚೆಗೂ ಕನ್ನಡ ಚಿತ್ರರಂಗಕ್ಕೆ ಹೊಸತನದ ಗಂಧ ಗಾಳಿ ಅನೂಚಾನವಾಗಿ ಹಬ್ಬಿಕೊಂಡಿದೆ. ಕನ್ನಡ ಚಿತ್ರರಂಗದ ಘನತೆಯನ್ನು ಪರಭಾಷಾ ಚಿತ್ರರಂಗದ ಮಂದಿಯೂ ಕಣ್ಣರಳಿಸಿ ನೋಡಬೇಕೆಂಬ ಮನಸ್ಥಿತಿ ಇದೆಯಲ್ಲಾ? ಅಂಥಾದ್ದರ ಭೂಮಿಕೆಯಲ್ಲಿ ಎಳಿಕೊಂಡ ಸಿನಿಮಾಗಳು ಪ್ರೇಕ್ಷಕರಲ್ಲೊಂದು ಬೆರಗು ಮೂಡಿಸುವಷ್ಟು ಶಕ್ತವಾಗಿರುತ್ತವೆಂಬ ನಂಬಿಕೆ ಬಲವಾಗಿದೆ. ಅದನ್ನು ಈ ವರ್ಷಾರಂಭದಲ್ಲಿಯೇ ನಿಜವಾಗಿಸುವಂತಿರೋ ‘ಆಸಿಂಕೋಜಿಲ್ಲ’ ಎಂಬ ಚಿತ್ರ ಈ ವಾರ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ.

    ಹೆಸರಲ್ಲಿಯೇ ಅದೆಂಥಾದ್ದೋ ನಿಗೂಢ, ಆಕರ್ಷಣೆಯನ್ನು ಬಚ್ಚಿಕೊಂಡಿರೋ ಆಸಿಂಕೋಜಿಲ್ಲ ಶಮನ್ ನಿರ್ದೇಶನದ ಚೊಚ್ಚಲ ಚಿತ್ರ. ವಿಶೇಷವೆಂದರೆ ಅವರು ರಿಯಲ್ ಸ್ಟಾರ್ ಉಪೇಂದ್ರರ ಅಪ್ಪಟ ಅಭಿಮಾನಿ. ಉಪ್ಪಿ ಅಂದರೇನೇ ಹೊಸತನ ಎಂಬಂಥಾ ಭಾವನೆ ಇದೆ. ಈ ಕಾರಣದಿಂದಲೇ ಹೊಸದಾಗಿ ಎಂಟ್ರಿ ಕೊಡುವ ಅದೆಷ್ಟೋ ಯುವ ನಿರ್ದೇಶಕರ ಪಾಲಿಗೆ ಉಪೇಂದ್ರ ಎವರ್ ಗ್ರೀನ್ ರೋಲ್ ಮಾಡೆಲ್ ಬಹುಶಃ ಶಮನ್ ನಿರ್ದೇಶನದ ವಿಚಾರದಲ್ಲಿ ಉಪ್ಪಿಯನ್ನೇ ಆರಾಧಿಸದೇ ಹೋಗಿದ್ದರೆ ಒಂದು ಹೊಸ ಬಗೆಯ ಕಥೆಯೊಂದಿಗೆ ಆಸಿಂಕೋಜಿಲ್ಲ ಎಂಬ ಕಥೆ ರೂಪುಗೊಳ್ಳುವುದು ಸಾಧ್ಯವೇ ಇರುತ್ತಿರಲಿಲ್ಲ.

    ಬೆಂಗಳೂರಿನವರೇ ಆದ ಶಮನ್‍ಗೆ ಉಪ್ಪಿಯ ಗುಂಗು ಹತ್ತಿಕೊಂಡಿದ್ದು ಶಾಲಾ ಕಾಲೇಜು ದಿನಗಳಲ್ಲಿಯೇ. ಉಪೇಂದ್ರ ಕಾರಣದಿಂದಲೇ ಎಲ್ಲವನ್ನೂ ಭಿನ್ನ ದೃಷ್ಟಿಕೋನದಿಂದ ನೋಡುವ ಕಲೆ ಸಿದ್ಧಿಸಿಕೊಂಡಿದ್ದ ಶಮನ್ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷಾ ಚಿತ್ರರಂಗದ ಮಂದಿಯೂ ಬೆಕ್ಕಸ ಬೆರಗಾಗುವಂತಿರಬೇಕೆಂಬ ಹಂಬಲದೊಂದಿಗೇ ಈ ಕಥೆಯನ್ನು ಸಿದ್ಧಪಡಿಸಿದ್ದರಂತೆ. ಹಾಗಂತ ಪ್ರಯೋಗಾತ್ಮಕ ವಿಚಾರಗಳನ್ನು ಕೈಗೆತ್ತಿಕೊಂಡು ಕೆಲ ವರ್ಗದ ಪ್ರೇಕ್ಷಕರಿಗೆ ಮಾತ್ರವೇ ಆಸಿಂಕೋಜಿಲ್ಲ ಚಿತ್ರವನ್ನು ಸೀಮಿತಗೊಳಿಸುವ ಇರಾದೆಯೂ ಅವರಿಗಿರಲಿಲ್ಲ. ಈ ದೆಸೆಯಿಂದ ಎಲ್ಲ ವರ್ಗ, ವಯೋಮಾನದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಹೂರಣದೊಂದಿಗೆ ಈ ಸಿನಿಮಾವನ್ನು ಅಣಿಗೊಳಿಸಿದ್ದಾರಂತೆ.

    ಸೋಮಶೇಖರ ರೆಡ್ಡಿ ನಿರ್ಮಾಣ ಮಾಡಿರುವ ಆಸಿಂಕೋಜಿಲ್ಲ ಎಂಬ ಪದವೇ ಎಲ್ಲರೂ ತಲೆ ಕೆದರಿಕೊಂಡು ಅರ್ಥ ಹುಡುಕುವಂತೆ ಮಾಡಿದೆ. ತೀರಾ ಗೂಗಲ್ಲಿನಲ್ಲಿ ಹುಡುಕಿದರೂ ಈ ಚಿತ್ರದ ವಿವರಗಳು ಮಾತ್ರವೇ ಸಿಗುತ್ತವೆ. ಹಾಗಾದರೆ ಈ ಪದದ ಅರ್ಥವೇನು? ಕಥಾ ಹಂದರವೆಂಥಾದ್ದೆಂಬ ಪ್ರಶ್ನೆಗಳು ಪ್ರೇಕ್ಷಕರ ವಲಯದಲ್ಲಿ ಮಿಜಿಗುಡಲಾರಂಭಿಸಿವೆ. ಅದೆಲ್ಲವನ್ನೂ ಗೌಪ್ಯವಾಗಿಡುವ ಮೂಲಕ ಚಿತ್ರತಂಡ ಕುತೂಹಲವನ್ನು ಮತ್ತಷ್ಟು ತೀವ್ರವಾಗಿಸಿದೆ. ಈ ವಾರವೇ ಅಂಥಾ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಆ ಉತ್ತರ ಅತ್ಯಾಕರ್ಷಕವಾಗಿರಲಿದೆ ಎಂಬ ಭರವಸೆಯನ್ನಂತೂ ಚಿತ್ರತಂಡ ಆತ್ಮವಿಶ್ವಾಸದಿಂದಲೇ ಕೊಡುತ್ತಿದೆ.

  • ‘ಆಸಿಂಕೋಜಿಲ್ಲ’ ಶೀರ್ಷಿಕೆ ಟ್ರೈಲರ್ ಅನಾವರಣ

    ‘ಆಸಿಂಕೋಜಿಲ್ಲ’ ಶೀರ್ಷಿಕೆ ಟ್ರೈಲರ್ ಅನಾವರಣ

    ಬೆಂಗಳೂರು: ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತರುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಇಲ್ಲೊಂದು ಚಿತ್ರತಂಡ ಈಗಾಗಲೇ ತನ್ನ ಚಿತ್ರೀಕರಣವನ್ನೆಲ್ಲಾ ಮುಗಿಸಿಕೊಂಡ ನಂತರ ಶೀರ್ಷಿಕೆಯನ್ನು ಅನಾವರಣ ಮಾಡಿದೆ. ಜೊತೆಗೆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಕೂಡ ಬಿಡುಗಡೆ ಮಾಡಿದೆ. ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದ ಈ 3 ಕಾರ್ಯಕ್ರಮಗಳಲ್ಲಿ ಸದಸ್ಯರೆಲ್ಲರೂ ಭಾಗವಹಿಸಿದ್ದರು. ಶಮನ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹೆಸರು `ಆಸಿಂಕೋಜಿಲ್ಲ’. ನಿರ್ಮಾಪಕ ಭಾಮ ಹರೀಶ್ ಈ ಚಿತ್ರದ ಟೈಟಲ್ ಅನಾವರಣಗೊಳಿಸಿದರು. ಅಲ್ಲದೆ ನಟ ಸುಮಂತ್ ಶೈಲೇಂದ್ರ ಈ ಚಿತ್ರದ ಟ್ರೈಲರ್ ಗೆ ಚಾಲನೆ ನೀಡಿದರು. ಮಂಜುನಾಥ್ ಕೆ.ಸಿ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ.

    ಈ ಸಂದರ್ಭದಲ್ಲಿ ನಿರ್ದೇಶಕ ಶಮನ್ ಮಾತನಾಡುತ್ತಾ ಈ ಚಿತ್ರವನ್ನು ಡಿಫರೆಂಟಾಗಿ ಟ್ರೈ ಮಾಡಿದ್ದೇವೆ. ವಿಜ್ಞಾನಿಯೊಬ್ಬ ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಯೋಚಿಸಿ ಕಾಡಿಗೆ ಹೋಗಿ ಹೊಸ ಸಾಹಸವನ್ನು ಮಾಡುತ್ತಾನೆ. ಆ ಪ್ರಕ್ರಿಯೆಗೆ ಆತ ಕೊಡುವ ಹೆಸರೇ `ಆಸಿಂಕೋಜಿಲ್ಲ’. ಈ ಸಂದರ್ಭದಲ್ಲಿ ಆತನ ಜೊತೆಗೆ ಇನ್ನೂ ನಾಲ್ಕು ಜನ ವಿಶೇಷ ವ್ಯಕ್ತಿಗಳು ಸೇರಿಕೊಳ್ಳುತ್ತಾರೆ. ಕಾಡಿನಲ್ಲಿ ಅವರಿಗೆ ಎದುರಾದ ಸಮಸ್ಯೆ ಏನು? ಅದರಿಂದ ಅವರು ಹೇಗೆ ಹೊರಬಂದರು? ಎಂಬುದನ್ನು ಆಸಿಂಕೋಜಿಲ್ಲ ಹೇಳುತ್ತದೆ. ಬೆಂಗಳೂರು, ಶಿವಮೊಗ್ಗ, ಮೈಸೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು. ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅಮೋಘವರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೋಮಶೇಖರ್ ಶೆಟ್ಟಿ ಈ ಚಿತ್ರಕ್ಕೆ ಬಂಡಾವಳ ಹೂಡಿ ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ಹೊನ್ನಾವಳ್ಳಿ ಕೃಷ್ಣ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಸೋಮಶೇಖರ ಶೆಟ್ಟಿ ಮಾತನಾಡುತ್ತಾ ಈ ಚಿತ್ರದ ಕಥೆ ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ಚಿತ್ರದಲ್ಲಿ ಕೆಲಸ ಮಾಡಿದವರೆಲ್ಲ ಹೊಸಬರಾದರು ಹೊಸದಾಗಿ ಪ್ರಯತ್ನ ಮಾಡಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

    ವಿಷ್ಣು ತೇಜ, ಪ್ರಶಾಂತ್, ತಾರಕ್ ಸೋನಮ್ ರಾಯ್, ಭಾನು ಪ್ರಿಯ ಶೆಟ್ಟಿ, ಮೇಘಶ್ರೀ ಹಾಗೂ ರಕ್ಷಿಕ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ ವಿಷ್ಣು ತೇಜ ಮಾತನಾಡಿ ಈ ಹಿಂದೆ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದೆ ಇದು ನನ್ನ 2ನೇ ಚಿತ್ರ ಎಂದರೆ ಮತ್ತೊಬ್ಬ ನಟ ಪ್ರಶಾಂತ್ ಮಾತನಾಡಿ ಮುಂಗೋಪಿ ಯುವಕನ ಪಾತ್ರ ಸಿಸ್ಟಂನಲ್ಲಿ ಬದಲಾವಣೆ ತರಲು ಹೋಗಿ ಏನೇನೆಲ್ಲಾ ಮಾಡುತ್ತಾನೆ ಅನ್ನೋದೆ ನನ್ನ ಪಾತ್ರ ಎಂದು ಹೇಳಿಕೊಂಡರು. ನಂತರ ನಟಿಯರಾದ ರಕ್ಷಿಕ, ಭಾನುಪ್ರಿಯ ಶೆಟ್ಟಿ ಹಾಗೂ ಸೋನಮ್ ರಾಯ್ ಕೂಡ ತಮ್ಮ ತಮ್ಮ ಪಾತ್ರಗಳ ಬಗ್ಗೆ ಚುಟುಕಾಗಿ ಹೇಳಿಕೊಂಡರು.