Tag: sea plane

  • PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್‌ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?

    PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್‌ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?

    – ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸೀ ಪ್ಲೇನ್ ಹಾರಾಟ

    ಪ್ರವಾಸೋದ್ಯಮ ಉತ್ತೇಜಿಸಲು ಮತ್ತು ಪ್ರಯಾಣಿಕರಿಗೆ ವಿಶೇಷ ಪ್ರಯಾಣದ ಅನುಭವದ ಜೊತೆಗೆ ಇನ್ನಿತರ ತುರ್ತು ಸಾರಿಗೆ ಸೇವೆಗಳ ಉದ್ದೇಶ ಹೊಂದಿರುವ ‘ಸೀ ಪ್ಲೇನ್ ಯೋಜನೆ’ (Sea Plane) ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕೇರಳದಲ್ಲಿ ಜಲ ವಿಮಾನ ಸೇವೆಯನ್ನು ಆರಂಭಿಸಲಾಗಿದೆ. ಈ ವಿಶೇಷ ವಿಮಾನದಲ್ಲಿ ಹಾರಾಟ ನಡೆಸಿ ಪ್ರಯಾಣಿಕರು ಖುಷಿಪಟ್ಟಿದ್ದಾರೆ. ನಿಜಕ್ಕೂ ಜನರಿಗೆ ಇದೊಂದು ವಿಶೇಷ ಪ್ರಯಾಣದ ಅನುಭವ ಒದಗಿಸುತ್ತದೆ.

    ಆರ್‌ಸಿಎಸ್-ಉಡಾನ್ ಯೋಜನೆಯಡಿಯಲ್ಲಿ ಪ್ರಾದೇಶಿಕ ವಾಯು ಸಂಪರ್ಕ ಹೆಚ್ಚಿಸಿ, ಜಲ-ಆಧಾರಿತ ವಾಯುಯಾನದ ಮೂಲಕ ಪ್ರವಾಸೋದ್ಯಮ ಉತ್ತೇಜಿಸಲು ಕೇಂದ್ರ ಸರ್ಕಾರ ಭಾರತದಲ್ಲಿ ಸೀ ಪ್ಲೇನ್ ಯೋಜನೆ ಜಾರಿಗೆ ತಂದಿತು. 2020ರಲ್ಲಿ ಗುಜರಾತ್‌ನ ನರ್ಮದಾ ಜಿಲ್ಲೆಯ ಸಬರಮತಿ ನದಿಯಲ್ಲಿ ಮೊದಲನೇ ಸೀ ಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಕೇರಳದಲ್ಲೂ ಈಗ ಯೋಜನೆಯನ್ನು ಯಶಸ್ವಿಯಾಗಿ ಪರಿಚಯಿಸಲಾಗಿದೆ.

    ಏನಿದು ಸೀ ಪ್ಲೇನ್? ಇದರ ವಿಶೇಷತೆ ಏನು? ಪ್ರಯಾಣಿಕರಿಗೆ ಇದರಿಂದಾಗುವ ಅನುಕೂಲಗಳೇನು? ಕೇರಳದಂತೆಯೇ ಕರ್ನಾಟಕದಲ್ಲೂ ಯೋಜನೆ ಶೀಘ್ರ ಜಾರಿಯಾಗುತ್ತಾ ಎಂಬ ಅನೇಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ಕೇರಳದಲ್ಲಿ ಸೀ ಪ್ಲೇನ್ ಟೇಕಾಫ್!
    ಕೇರಳದ ಮಹತ್ವಾಕಾಂಕ್ಷೆಯ ಸೀ ಪ್ಲೇನ್ (ಜಲ ವಿಮಾನ) ಯೋಜನೆಯು ಟೇಕಾಫ್ ಆಗಿದೆ. ಮೊದಲ ಸೀಪ್ಲೇನ್ ನ.10 ರಂದು ಮಧ್ಯಾಹ್ನ 2:30ಕ್ಕೆ ಕೊಚ್ಚಿಯ ಬೋಲ್ಗಟ್ಟಿ ಹಿನ್ನೀರಿನಲ್ಲಿ ಇಳಿಯಿತು. ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಅವರು ನ.11 ಬೆಳಗ್ಗೆ 9:30 ಕ್ಕೆ ಬೋಲ್ಗಟ್ಟಿಯಿಂದ ಮುನ್ನಾರ್ ಬಳಿಯ ಮಟ್ಟುಪೆಟ್ಟಿ ಜಲಾಶಯಕ್ಕೆ ಪ್ರಾಯೋಗಿಕ ಸೀ ಪ್ಲೇನ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು.

    ಸೀ ಪ್ಲೇನ್ ಎಂದರೇನು?
    ನೀರಿನ ಮೇಲಿನಿಂದಲೇ ಹಾರಾಟ ನಡೆಸುವ ಮತ್ತು ನೀರಿನ ಮೇಲೆಯೇ ಇಳಿಯುವ ವಿಮಾನ ಸಾರಿಗೆ ವ್ಯವಸ್ಥೆಯೇ ಸೀ ಪ್ಲೇನ್.

    ವಿಶೇಷತೆ ಏನು?
    ಇದೊಂದು ಉಭಯಚರ ವಿಮಾನ. ಭೂಮಿ ಮತ್ತು ನೀರು ಎರಡರಲ್ಲೂ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯ ಹೊಂದಿದೆ.

    ಉದ್ಘಾಟನೆಯಾಗಿದ್ದೆಲ್ಲಿ?
    ಕೇರಳ ರಾಜ್ಯದಲ್ಲಿ ಜಲ ವಿಮಾನಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಯಿತು.

    ಎಷ್ಟು ಜನ ಪ್ರಯಾಣಿಸಬಹುದು?
    ವಿಮಾನದಲ್ಲಿ ಒಮ್ಮೆ 9 ಮಂದಿ ಪ್ರಯಾಣಿಸಬಹುದು.

    ಕೊಚ್ಚಿಯಿಂದ ಮನ್ನಾರ್‌ಗೆ ಕೇವಲ 25 ನಿಮಿಷ?
    * ಕೇವಲ 25 ನಿಮಿಷಗಳಲ್ಲಿ ಕೊಚ್ಚಿಯಿಂದ ಮನ್ನಾರ್‌ಗೆ ಪ್ರಯಾಣಿಸಬಹುದು. (ರಸ್ತೆಯ ಮೂಲಕ ಮನ್ನಾರ್ ತಲುಪಲು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 3 ಗಂಟೆಗಳು ಮತ್ತು ಎರ್ನಾಕುಲಂ ರೈಲು ನಿಲ್ದಾಣದಿಂದ 3.5 ಗಂಟೆಗಳು ತೆಗೆದುಕೊಳ್ಳುತ್ತದೆ)
    * ವೈದ್ಯಕೀಯ ಸಾರಿಗೆ, ತುರ್ತು ಸ್ಥಳಾಂತರಿಸುವಿಕೆ, ವಿಐಪಿ ಟ್ರಾವೆಲ್ಸ್ ವಲಯಗಳನ್ನು ಉತ್ತೇಜಿಸುತ್ತದೆ.

    ರಮಣೀಯ ಸ್ಥಳಗಳ ವೀಕ್ಷಣೆ
    ಜಲ ವಿಮಾನಗಳು ದೊಡ್ಡ ಕಿಟಕಿಗಳ ಮೂಲಕ ಬೆರಗುಗೊಳಿಸುವ ವೈಮಾನಿಕ ವೀಕ್ಷಣೆಯ ಪ್ರಯೋಜನವನ್ನು ನೀಡುತ್ತವೆ. ಪ್ರಯಾಣಿಕರಿಗೆ ಕೇರಳದ ರಮಣೀಯ ಭೂದೃಶ್ಯಗಳು, ವಿಶೇಷವಾಗಿ ಪಶ್ಚಿಮ ಘಟ್ಟಗಳು ಮತ್ತು ಮುನ್ನಾರ್‌ಗಳ ಮೇಲೆ ಅನನ್ಯ ಅನುಭವವನ್ನು ನೀಡುತ್ತದೆ.

    ಮಟ್ಟುಪೆಟ್ಟಿ, ಮಲಂಪುಳ, ವೆಂಬನಾಡು, ಅಷ್ಟಮುಡಿಕ್ಕಯಲ್, ಚಂದ್ರಗಿರಿಪುಳ ಮತ್ತು ಕೋವಲಂ ಸೇರಿದಂತೆ ರಾಜ್ಯದಾದ್ಯಂತ ಪ್ರಮುಖ ಜಲಮೂಲಗಳು ಮತ್ತು ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ಸೀ ಪ್ಲೇನ್ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ.

    ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದರೆ ಪ್ರವಾಸ ಕಂಪನಿಗಳು ಮನ್ನಾರ್ ಮತ್ತು ಹತ್ತಿರದ ಪ್ರದೇಶಗಳಿಗೆ ಹೆಚ್ಚಿನ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಕರೆತರುತ್ತವೆ. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆಗಾಗಿ ರೋಗಿಗಳನ್ನು ಸಾಗಿಸಬಹುದು. ಕಾಂತಲ್ಲೂರು ಮತ್ತು ಮರಯೂರಿನಲ್ಲಿರುವ ಸಮೀಪದ ಕುಗ್ರಾಮಗಳ ಜನರಿಗೆ ಇದು ಪ್ರಯೋಜನವನ್ನು ನೀಡುತ್ತದೆ.

    ಟಿಕೆಟ್ ದರ ಎಷ್ಟು?
    ಕೊಚ್ಚಿ-ಮುನ್ನಾರ್ ಸೀ ಪ್ಲೇನ್ ಟಿಕೆಟ್ ಶುಲ್ಕವನ್ನು ಅಧಿಕಾರಿಗಳು ಇನ್ನೂ ಘೋಷಿಸಿಲ್ಲ. ಏಕೆಂದರೆ, ಇದು ಪ್ರಾಯೋಗಿಕ ಹಂತದಲ್ಲಿದೆ. ಆದಾಗ್ಯೂ, ಈ ಹಿಂದೆ ಉಡಾನ್ ಯೋಜನೆಯಡಿಯಲ್ಲಿ ಈಗ ನಿಷ್ಕ್ರಿಯವಾಗಿರುವ ಗುರುಗ್ರಾಮ್‌ನಿಂದ ಸ್ಟ್ಯಾಚ್ಯು ಆಫ್ ಲಿಬರ್ಟಿ ಸೇವೆಗಳಿಗೆ ವಿಧಿಸಲಾದ ಶುಲ್ಕಗಳನ್ನು ಪರಿಗಣಿಸಿದರೆ, ಒಂದು ಮಾರ್ಗದ ದರಗಳು 1,500 ರೂ. ರಿಂದ 5,000 ರೂ. ವರೆಗೆ ವಿಧಿಸುವ ಸಾಧ್ಯತೆ ಇದೆ.

    ಯಾವ ಸಮಯದಲ್ಲಿ ಹಾರಾಟ?
    ಜಲ ವಿಮಾನಗಳು ಸಾಮಾನ್ಯವಾಗಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಹಗಲಿನ ಸಮಯದಲ್ಲಿ ಮಾತ್ರ ಹಾರಾಟ ನಡೆಸುತ್ತವೆ. ವಿಮಾನ ಹಾರಾಟ ನಡೆಸುವ ಮಾರ್ಗದಲ್ಲಿ ಹೆಚ್ಚಿನ ಭಾಗ ಅರಣ್ಯದಿಂದ ಕೂಡಿರುತ್ತದೆ. ಹೀಗಾಗಿ, ರಾತ್ರಿ ಸಮಯದ ಹಾರಾಟ ದುರ್ಗಮವಾಗಿರುತ್ತದೆ.

    ಲಗೇಜ್ ಸಾಗಿಸಬಹುದೇ?
    ಸೀ ಪ್ಲೇನ್‌ಗಳಲ್ಲಿ 25 ಕೆಜಿ ತೂಕದ ವರೆಗಿನ ಲಗೇಜ್‌ಗಳಿಗೆ ಅನುಮತಿ ಇರುತ್ತದೆ. 20 ಚೆಕ್-ಇನ್ ಬ್ಯಾಗೇಜ್ ಮತ್ತು 5 ಕೆಜಿ ಕ್ಯಾಬಿನ್ ಬ್ಯಾಗೇಜ್ ಸಾಗಿಸಬಹುದು.

    ಸೀ ಪ್ಲೇನ್‌ಗಳಿಂದ ಆನೆಗಳ ಸಂಚಾರಕ್ಕೆ ಅಡ್ಡಿ?
    ಸೀ ಪ್ಲೇನ್ ಶಬ್ದದಿಂದ ಮಟ್ಟುಪೆಟ್ಟಿಯಲ್ಲಿ ಆನೆಗಳ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹತ್ತು ಕಾಡಾನೆಗಳಿವೆ. ನೀರು ಕುಡಿಯಲು ಮಟ್ಟುಪೆಟ್ಟಿ ಅಣೆಕಟ್ಟು ಮತ್ತು ಸಮೀಪದ ಪ್ರದೇಶಗಳಿಗೆ ಆಗಾಗ್ಗೆ ಬರುತ್ತಾರೆ. ಸೀ ಪ್ಲೇನ್ ಪ್ರೊಪೆಲ್ಲರ್‌ನ ವಿಝಿಂಗ್ ಶಬ್ದವು ಆನೆಗಳನ್ನು ಹೆದರಿಸಬಹುದು. ಹಾಗಾಗಿ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕೆಎಸ್‌ಇಬಿ, ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಟ್ಟುಪೆಟ್ಟಿ ಜಲಾಶಯಕ್ಕೆ ಸೀಪ್ಲೇನ್ ಇಳಿಸುವ ಕ್ರಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಇಡುಕ್ಕಿ ಅಣೆಕಟ್ಟಿನಲ್ಲಿ ಇಳಿಯಲು ಯೋಜಿಸಲಾಗಿದ್ದ ಸೀ ಪ್ಲೇನ್ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ನಂತರ ಮಟ್ಟುಪೆಟ್ಟಿಗೆ ಸ್ಥಳಾಂತರಿಸಲಾಯಿತು.

    ಕರ್ನಾಟಕಕ್ಕೂ ಬರುತ್ತಾ ಸೀ ಪ್ಲೇನ್?
    ರಾಜ್ಯದಲ್ಲೂ ಜಲ ವಿಮಾನ ಪ್ರಾಯೋಗಿಕ ಹಾರಾಟ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ‌ ಎನ್ನಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಸ್ಥಳ ನಿಗದಿಪಡಿಸಲಾಗಿದೆ. 12 ಪ್ರವಾಸಿಗರನ್ನು ಹೊತ್ತು ಸೀ ಪ್ಲೇನ್ ಕೆಆರ್‌ಎಸ್ ಹಿನ್ನೀರಿನಲ್ಲಿ ಹಾರಾಟ ನಡೆಸುವ ಸಾಧ್ಯತೆ ಇದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಸಾರಿಗೆ ಕೇಂದ್ರವಾಗಿ ಬಳಸಲಿವೆ ಎಂಬ ಮಾಹಿತಿ ಇದೆ.

  • ಉಡುಪಿಯ ಹೆಜಮಾಡಿ ನಡಿಕುದ್ರುವಿನಲ್ಲಿ ‘ಸೀ ಪ್ಲೇನ್’ ಅನ್ವೇಷಣೆ

    ಉಡುಪಿಯ ಹೆಜಮಾಡಿ ನಡಿಕುದ್ರುವಿನಲ್ಲಿ ‘ಸೀ ಪ್ಲೇನ್’ ಅನ್ವೇಷಣೆ

    – ಏನು ಸೀ ಪ್ಲೇನ್ ವಿಶೇಷತೆ?

    ಉಡುಪಿ: ನಮ್ಮಲ್ಲಿ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರದ ಚರ್ಚೆ ಜೊರಾಗಿ ನಡೆಯುತ್ತಿದೆ. ಇದೇ ಕಲ್ಪನೆಯಲ್ಲಿ ಉಡುಪಿಯ ಯುವಕರು ಸೀ ಪ್ಲೇನ್ ಸಿದ್ಧ ಮಾಡಿದ್ದಾರೆ. ಒಬ್ಬ ವ್ಯಕ್ತಿ ಕುಳಿತು ನೀರಲ್ಲಿ ತೇಲುವ ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀ ಪ್ಲೇನ್ ನ ಯಶಸ್ವಿ ಹಾರಾಟ ಕೂಡಾ ನಡೆದಿದ್ದು, ರಾಜ್ಯ, ಕೇಂದ್ರ ಸರ್ಕಾರದ ಸಹಾಯಕ್ಕೆ ಉತ್ಸಾಹಿ ಎಂಟು ಯುವಕರು ಕಾಯುತ್ತಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಭಾರತದ ಮೊದಲ ಸೀ ಪ್ಲೈನ್ ಉದ್ಘಾಟಿಸಿದ್ದರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಮೈಕ್ರೋಲೈಟ್ ಸೀ ಪ್ಲೈನ್ ಯಶಸ್ವಿಯಾಗಿ ಹಾರಾಟ ನಡೆಸಿದೆ.

    ವಿಮಾನ ತಯಾರಿಸುವ ಕನಸು:
    ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಈ ಅನ್ವೇಷಣೆಯ ಮಾಸ್ಟರ್ ಮೈಂಡ್. ಏರ್ ಮಾಡೆಲಿಂಗ್, ಎನ್ ಸಿಸಿ ಇನ್ ಸ್ಟ್ರಕ್ಟರ್ ಆಗಿರುವ ಪುಷ್ಪರಾಜ್ 15 ವರ್ಷಗಳ ಕಾಲ ಪರಿಶ್ರಮ ಪಟ್ಟು ಮೈಕ್ರೋಲೈಟ್ ಸೀ ಪ್ಲೇನ್ ಸಿದ್ಧಪಡಿಸಿದ್ದಾರೆ. ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ”ಧೃತಿ” ಅನ್ನೋ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ವಿಮಾನ ರೆಡಿ ಮಾಡಿದ್ದಾರೆ. ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ರೆಡಿಯಾಗಿದ್ದು, ಏರೋನಾಟಿಕಲ್ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಕ್ಲಾಸ್ ಕೊಡುವ ಜೊತೆ ಜೊತೆಗೆ ಮುಂದೆ ಏಳು ಜನ ಹಾರುವ ತಾಕತ್ತಿನ ವಿಮಾನ ತಯಾರು ಮಾಡುವ ಕನಸು ಇಟ್ಟುಕೊಂಡಿದ್ದಾರೆ.

    ರಿಮೋಟ್ ಕಂಟ್ರೋಲ್ ವಿಮಾನ, ಏರೋನಾಟಿಕಲ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮಾಡಿಕೊಡುವ ಪುಷ್ಪರಾಜ್ 190 ಕೆಜಿ ಭಾರ ಹೊತ್ತೊಯ್ಯುವ ವಿಮಾನ ತಯಾರಿಸಿದ್ದಾರೆ. ಏರ್ ಕ್ರಾಫ್ಟ್ ಗ್ರೇಡ್ ಅಲುಮೀನಿಯಂ, ಸ್ಟೀಲ್ ನಿಂತ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲೋತ್, 33 ಎಚ್ ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್, 53 ಇಂಚ್‍ನ ಮರದ ಪ್ರೊಫೆಲ್ಲರ್, ಬಳಸಿ ವಿಮಾನ ತಯಾರಿಸಿದ್ದಾರೆ. ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ಈ ವಿಮಾನ ವೇಗವಾಗಿ ಓಡಿ ಆಗಸದಲ್ಲಿ ಹಾರುತ್ತದೆ.

    ಈ ವಿಮಾನಕ್ಕೆ ಸುಮಾರು ಏಳು ಲಕ್ಷ ರುಪಾಯಿ ಖರ್ಚಾಗಿದೆ. ಮನೆಯ ತೋಟದಲ್ಲೇ ವಿದ್ಯಾರ್ಥಿಗಳ ಜೊತೆಗೂಡಿ ಮೈಕ್ರೋ ಲೈಟ್ ಸೀ ಪ್ಲೈನ್ ರೆಡಿಯಾಗಿದೆ. ಗೆಳೆಯರ ಸಂಬಂಧಿಕರೆ ಸಹಾಯಧನ ನೀಡಿ ಈ ವೆಚ್ಚ ಭರಿಸಿದ್ದಾರೆ. ಈ ನಡುವೆ ಈ ಟೀಂ ನಮ್ಮನ್ನಾಳುವ ಸರ್ಕಾರಗಳಿಗೊಂದು ಮನವಿ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಡಿಕುದ್ರುವಿನಲ್ಲಿ ಒಂದು ವರ್ಕ್ ಶಾಪ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಈ ಶೋಧನೆಗೆ, ಯುವಕರ ತಂಡದ ಸಾಧನೆಗೆ ಬೆನ್ನೆಲುವಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಟೂಲ್ಸ್ ಗಳಿಗೆ ಸಹಾಯಧನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

    ಪ್ರವಾಸೋದ್ಯಮ, ನೆರೆ ಸಂದರ್ಭ ಸಾರ್ವಜನಿಕ ರಕ್ಷಣೆ, ದೇಶದ ರಕ್ಷಣೆಗೆ ಸೀ ಪ್ಲೈನ್ ಬಳಕೆಯಾಗಲಿದೆ. ಇಷ್ಟೆಲ್ಲಾ ಮಾಡಬೇಕಾದರೆ ಸರಕಾರ ಆರ್ಥಿಕ ಶಕ್ತಿ ನೀಡಿದರೆ ಆತ್ಮ ನಿರ್ಭರದ ಕನಸಿಗೆ ಒಂದು ಅರ್ಥ ಬರುತ್ತದೆ. ಇಂಡಿಯಾದಲ್ಲೇ ನೀರಿಂದ ನೀರಿಗೆ ಹಾರುವ ವಿಮಾನ ಯಶಸ್ವಿಯಾಗಿ ಸಿದ್ಧವಾಗುತ್ತದೆ.

  • ದೇಶದ ಇತಿಹಾಸದಲ್ಲೇ ಫಸ್ಟ್ ಟೈಂ- ಸಬರ್ ಮತಿ ನದಿಯಿಂದ ಸೀ ಪ್ಲೇನ್ ಮೂಲಕ ಹೊರಟ ಮೋದಿ

    ದೇಶದ ಇತಿಹಾಸದಲ್ಲೇ ಫಸ್ಟ್ ಟೈಂ- ಸಬರ್ ಮತಿ ನದಿಯಿಂದ ಸೀ ಪ್ಲೇನ್ ಮೂಲಕ ಹೊರಟ ಮೋದಿ

    ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಪ್ರಚಾರ ಕಣ ರಂಗೇರಿದೆ. ರೊಡ್‍ಶೋಗೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪ್ರಚಾರಕ್ಕಾಗಿ ನೂತನ ಅಸ್ತ್ರ ಪ್ರಯೋಗಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೀ ಪ್ಲೇನ್ ಬಳಸಲಾಗಿದೆ. ಸೀ ಪ್ಲೇನ್ ಮೂಲಕ ಸಬರ್‍ಮತಿ ನದಿಯಿಂದ 180 ಕಿ.ಮೀ ದೂರದಲ್ಲಿರುವ ಧಾರೋಯ್ ಡ್ಯಾಮ್‍ಗೆ ಮೋದಿ ತೆರಳಿದ್ದಾರೆ.

    ನದಿಯಿಂದ ವಿಮಾನ ಟೇಕ್ ಆಫ್ ಆಗಿದ್ದು, ಅಂಬಾಜಿ ಮಾತೆ ದೇಗುಲಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಮತ್ತೆ ಅದೇ ಮಾರ್ಗವಾಗಿ ಅಹಮದಾಬಾದ್‍ಗೆ ಹಿಂದಿರುಗಲಿದ್ದಾರೆ. ವಿಶೇಷ ಸೀ ಪ್ಲೇನ್ ಪ್ರಧಾನಿ ಮೋದಿಯನ್ನು ಹೊತ್ತು ನದಿಯ ಮೇಲೆ ತೇಲುತ್ತಾ ಸಾಗಿತು.

    ಈ ಸಣ್ಣ ವಿಮಾನ 9 ರಿಂದ 15 ಜನರನ್ನ ಹೊತ್ತೊಯ್ಯಬಹುದಾದ ಸಾಮಥ್ರ್ಯ ಹೊಂದಿದೆ. ಟೇಕ್ ಆಫ್ ಹಾಗೂ ಲ್ಯಾಂಡಿಂಗ್‍ಗಾಗಿ ಈ ವಿಮಾನಕ್ಕೆ ಕೇವಲ 300 ಮೀಟರ್‍ನಷ್ಟು ಉದ್ದದ ರನ್‍ವೇ ಇದ್ದರೆ ಸಾಕು. ಈ ವಿಮಾನದಲ್ಲಿ ಫ್ಲೋಟ್‍ಗಳು ಇದ್ದು ನೀರಿನ ಮೇಲೆ ಲ್ಯಾಂಡ್ ಆಗಲು ನೆರವಾಗುತ್ತದೆ.

    ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ನಾಗರೀಕ ವಿಮಾನಯಾನ ಸಚಿವರಾದ ಅಶೋಕ್ ಗಜಪತಿರಾಜು ಇನ್ನಿತರ ಅಧಿಕಾರಿಗಳೊಂದಿಗೆ ಸೇರಿ ವಿಮಾನದ ಪ್ರಾತ್ಯಕ್ಷಿಕೆ ನಡೆಸಿದ್ದರು.

    ಸೋಮವಾರವಷ್ಟೇ ಪ್ರಧಾನಿ ಮೋದಿ ಸೀ ಪ್ಲೇನ್‍ನಲ್ಲಿ ಪ್ರಯಾಣಿಸುವ ಬಗ್ಗೆ ಟ್ವೀಟ್ ಮಾಡಿದ್ದರು. ವಿಮಾನ, ರಸ್ತೆ ಮತ್ತು ರೈಲ್ವೆ ಸಂಪರ್ಕಗಳ ಜೊತೆ ನಮ್ಮ ಸರ್ಕಾರ ಜಲಮಾರ್ಗಗಳ ಬಳಕೆಗೆ ಶ್ರಮ ವಹಿಸುತ್ತಿದೆ. ಇದು 125 ಕೋಟಿ ಭಾರತೀಯರಿಗಾಗಿ ಎಂದು ಮೋದಿ ಟ್ವೀಟ್‍ನಲ್ಲಿ ಹೇಳಿದ್ದರು.

    ಅಹಮದಾಬಾದ್‍ನಲ್ಲಿ ಇಂದು ನಡೆಯಬೇಕಿದ್ದ ಮೋದಿ ರೋಡ್ ಶೋಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸೀ ಪ್ಲೇನ್ ಮೂಲಕ ಮೋದಿ ಪ್ರಯಾಣಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಗಮನ ಸೆಳೆಯುವುದು ಉದ್ದೇಶವಾಗಿದೆ.

    ಪ್ರಧಾನಿ ಮೋದಿ ಹಾಗೂ ನೂತನವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಇಂದು ಅಹಮದಾಬಾದ್‍ನಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಿದ್ದರು. ಅದ್ರೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗುಜರಾತ್ ಪೊಲೀಸ್ ರೋಡ್ ಶೋ ಗೆ ಅನುಮತಿ ನಿರಾಕರಿಸಿತ್ತು.

    https://twitter.com/ANI/status/940463701030723590